Updated News From Kaup
ಪಡುಬಿದ್ರಿ : ಕಡಲ್ಕೊರೆತ ; ಕೈರಂಪಣಿ ಗೋದಾಮು ಸಮುದ್ರ ಪಾಲು

Posted On: 07-07-2023 07:31PM
ಪಡುಬಿದ್ರಿ : ಮಳೆ ಅಬ್ಬರ ಕೊಂಚ ಕಡಿಮೆಯಾದರೂ ಕಡಲಾರ್ಭಟ ಇನ್ನೂ ನಿಂತಿಲ್ಲ. ಪಡುಬಿದ್ರಿಯ ಕಾಡಿಪಟ್ಣ ಮುಖ್ಯ ಬೀಚ್ ನಲ್ಲಿರುವ ಇಂಟರ್ಲಾಕ್ ಮತ್ತು ತೆಂಗಿನ ಮರಗಳು ಕಡಲ್ಕೊರೆತದ ಹಾವಳಿಗೆ ಸಿಲುಕಿವೆ.

ಇನ್ನೊಂದೆಡೆ ಕೈ ರಂಪಣಿ ಗೋದಾಮು ಕಡಲಲೆಗಳಿಗೆ ಸಿಲುಕಿ ನೆಲಸಮವಾಗಿದೆ. ಇನ್ನೂ ಮುಂದುವರಿದಂತೆ ಮೀನುಗಾರಿಕಾ ರಸ್ತೆಯು ಅಪಾಯದ ಅಂಚಿನಲ್ಲಿದೆ.
ಜುಲೈ 7 (ನಾಳೆ) : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

Posted On: 06-07-2023 08:55PM
ಉಡುಪಿ : ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟ ಬುಧವಾರ ಕೂಡ ಮುಂದುವರಿದಿದ್ದು, ಮುಂಜಾಗೃತ ಕ್ರಮವಾಗಿ ಜುಲೈ 7 (ಶುಕ್ರವಾರ) ರಂದು ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಸುತ್ತೋಲೆ ಪ್ರಕಟಿಸಿದೆ.
ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕೆರೆ, ನದಿ , ಸಮುದ್ರಗಳಿಗೆ ಮಕ್ಕಳು ತೆರಳದಂತೆ ಪಾಲಕರು ಎಚ್ಚರಿಕೆ ವಹಿಸಬೇಕು. ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೇಂದ್ರ ಸ್ಥಾನದಲ್ಲಿದ್ದು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈಗ ನೀಡಿದ ರಜೆಯನ್ನು ಶನಿವಾರ ಪೂರ್ಣ ದಿನ ಅಥವಾ ಭಾನುವಾರ ತರಗತಿಗಳನ್ನು ನಡೆಸಿ ಸರಿದೂಗಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕಾಪು : ತಾಲೂಕಿನ ಜಲಾವೃತಗೊಂಡ ಸ್ಥಳದಲ್ಲಿದ್ದ ಕುಟುಂಬಗಳ ಸ್ಥಳಾಂತರ

Posted On: 06-07-2023 08:43PM
ಕಾಪು : ತಾಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಕೆಲವೊಂದು ಪ್ರದೇಶಗಳು ಜಲಾವೃತಗೊಂಡಿದ್ದು ಈ ಭಾಗದಲ್ಲಿದ್ದ ಕುಟುಂಬಗಳನ್ನು ತಾಲೂಕು ಆಡಳಿತ, ಗ್ರಾಮ ಪಂಚಾಯತ್ ಗಳ ಮುತುವರ್ಜಿಯಿಂದ ಸ್ಥಳಾಂತರಗೊಳಿಸಲಾಗಿದೆ.

ಕೆಲವೆಡೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ಸಂಚಾರಕ್ಕೆ ತೊಡಕಾಗಿತ್ತು. ಕೆಲವೆಡೆ ರಸ್ತೆ ಸಂಚಾರ ನಿರ್ಬಂಧಿಸಲಾಗಿತ್ತು.

ಕಾಪು ತಾಲೂಕಿನ ಪಾಂಗಾಳ, ಉಳಿಯಾರಗೋಳಿ, ಮಲ್ಲಾರು, ಎಲ್ಲೂರು, ನಂದಿಕೂರು, ಪಾದೆಬೆಟ್ಟು, ಮಟ್ಟು, ತೆಂಕ, ಮಜೂರು, ಮೂಡಬೆಟ್ಟು, ಏಣಗುಡ್ಡೆ, ಬೆಳಪು, 92 ಹೇರೂರು, ನಡ್ಸಾಲು, ಬೆಳ್ಳೆ, ಕುರ್ಕಾಲು ಗ್ರಾಮಗಳ 64 ಕುಟುಂಬಗಳ ಒಟ್ಟು 258 ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಈ ಸಂದರ್ಭ ಕಾಪು ತಹಶೀಲ್ದಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತ್ ಆಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗೃಹ ರಕ್ಷಕ ದಳ ವಿಪತ್ತು ನಿರ್ವಹಣಾ ತಂಡ ಮತ್ತು ಕರಾವಳಿ ಪಡೆಯ ಸದಸ್ಯರುಗಳು, ಸ್ಥಳೀಯರು ಸಹಕರಿಸಿದ್ದರು.
ಕಾಪು : ಜಲಾವೃತವಾದ ಪ್ರದೇಶಗಳಿಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ

Posted On: 06-07-2023 07:52PM
ಕಾಪು : ಧಾರಾಕಾರ ಮಳೆಯಿಂದ ಕಟಪಾಡಿಯ ಮಟ್ಟು ಅಣೆಕಟ್ಟು ಸಂಪೂರ್ಣವಾಗಿ ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಈ ಪ್ರದೇಶಕ್ಕೆ ಮತ್ತು ತಾಲೂಕಿನ ಮಜೂರು ಬ್ರಹ್ಮ ಬೈದರ್ಕಳ ಗರಡಿ ಇಲ್ಲಿಗೆ ಹೋಗುವ ದಾರಿ ಹಾಗೂ ಗರಡಿಯು ಸಂಪೂರ್ಣ ಜಲಾವೃತಗೊಂಡಿದ್ದು ಅಪಾಯ ಮಟ್ಟದಲ್ಲಿದ್ದು ಇಲ್ಲಿಗೆ ಮಾಜಿ ಸಚಿವರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆರವರು ಇಂದು ಭೇಟಿ ನೀಡಿ ಸುತ್ತಮುತ್ತಲಿನ ಜನರಿಗೆ ಜಾಗೃತರಾಗಿರುವಂತೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದರು.

ಈ ಸಂದರ್ಭ ಮಾಜಿ ಸಚಿವರೊಂದಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಅಮೀರ್ ಕಾಪು, ಪ್ರಶಾಂತ್ ಜತ್ತನ್ನ, ಶರ್ಪುದ್ದೀನ್ ಶೇಖ್, ಸುನಿಲ್ ಬಂಗೇರ, ಆಶೋಕ್ ನಾಯರಿ, ರಾಹುಲ್, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ಕಾಪು : ಮೂಡುಬೆಳ್ಳೆಯಲ್ಲಿ ಟೀಂ ಭಗ್ವ ಯುವಕರ ತಂಡದ ಉದ್ಘಾಟನೆ

Posted On: 06-07-2023 07:14PM
ಕಾಪು : ಸಮಾಜದಲ್ಲಿರುವ ಅಶಕ್ತ ಕುಟುಂಬಕ್ಕೆ ನೆರವಾಗಲು, ಹಿಂದುತ್ವಕ್ಕೆ ಧಕ್ಕೆಯಾದಲ್ಲಿ ಪ್ರತಿಭಟಿಸಲು, ಸಮಾಜದಹಿತಕ್ಕಾಗಿ ಹಿಂದೂ ಸಮಾಜದ ಪರವಾಗಿ ಟೀಂ ಭಗ್ವ ಎಂಬ ಯುವಕರ ತಂಡವೊಂದು ರಚನೆಗೊಂಡಿದ್ದು ತಂಡದ ಉದ್ಘಾಟನೆಯನ್ನು ಜುಲೈ 5 ರಂದು ಮೂಡುಬೆಳ್ಳೆಯಲ್ಲಿ ಕಾಪು ಉದ್ಯಮಿ ಸುಧೀರ್ ಸೋನು ಹಾಗೂ ಸಂಘಟನೆಯ ಪ್ರಮುಖರಾದ ವಿಖ್ಯಾತ್ ಭಟ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಭಗ್ವ ತಂಡದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲ್ಯ ಯೋಗೀಶ್ ಶೆಟ್ಟಿ ಸ್ವಾಗತಿಸಿದರು. ಮೂಳೂರು ಶ್ರವಣ್ ದೇವಾಡಿಗ ವಂದಿಸಿದರು.
ಕಾಪು : ಅಮ್ಮನ ಆಲಯ ನಿರ್ಮಾಣ - ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಿತಿಯಿಂದ ಬೆಳ್ಳೆ ಗ್ರಾಮದ ಪ್ರಮುಖರ ಭೇಟಿ

Posted On: 05-07-2023 11:12PM
ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದ "ಅಮ್ಮನ ಆಲಯ ನಿರ್ಮಾಣದ" ಬಗ್ಗೆ ದೇವಳದ ಸಮಿತಿಯ ಪ್ರಮುಖರು ಜುಲೈ 5 ರಂದು ಬೆಳ್ಳೆ ಗ್ರಾಮದ ಪ್ರಮುಖರನ್ನು ಭೇಟಿಯಾಗಿ ಬೆಳ್ಳೆ ಗ್ರಾಮದಲ್ಲಿ ಸಭೆಯನ್ನು ಮಾಡಿ ಗ್ರಾಮ ಸಮಿತಿಯನ್ನು ರಚಿಸುವ ಬಗ್ಗೆ ಕಾರ್ಯಪ್ರವೃತರಾಗುವಂತೆ ತಿಳಿಸಿ ಜೀರ್ಣೋದ್ಧಾರದ ಮನವಿಯನ್ನು ನೀಡಲಾಯಿತು.
ಗ್ರಾಮದ ಪ್ರತಿ ಮನೆಯಿಂದಲೂ ಕನಿಷ್ಠ ಒಬ್ಬರಾದರೂ ಒಂಬತ್ತು ಶಿಲೆ ಅಥವಾ ಅದಕ್ಕಿಂತ ಹೆಚ್ಚಿನ ಶಿಲಾಸೇವೆಯನ್ನು ನೀಡುವ ಮೂಲಕ "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಗ್ರಾಮ ಸಮಿತಿಯ ಮುಖ್ಯ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ್ ಶೆಟ್ಟಿ ಕಲ್ಯಾ, ಬೆಳ್ಳೆ ಗ್ರಾಮದ ಪ್ರಮುಖರಾದ ಬೆಳ್ಳೆ ಶಿವಾಜಿ ಸುವರ್ಣ, ಹರೀಶ್ ಶೆಟ್ಟಿ ಕಕ್ರಮನೆ, ರಂಜಿನಿ ಹೆಗ್ಡೆ ಮತ್ತು ಸುಜಾತ ಸುವರ್ಣ ಉಪಸ್ಥಿತರಿದ್ದರು.
ಪಡುಬಿದ್ರಿ : ಅಂಬ್ಯುಲೆನ್ಸ್ ಡಿಕ್ಕಿ ; ಗಂಭೀರ ಗಾಯಗೊಂಡ ವ್ಯಕ್ತಿ

Posted On: 05-07-2023 10:48PM
ಪಡುಬಿದ್ರಿ : ಪೇಟೆಯ ಕಾರ್ಕಳ ಜಂಕ್ಷನ್ ಬಳಿ ಅಂಬ್ಯುಲೆನ್ಸ್ ವಾಹನವೊಂದು ರಾಜು ಪೂಜಾರಿ ಎಂಬುವವರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜುಲೈ 4ರಂದು ನಡೆದಿದೆ.
ತೆಂಕ ಎರ್ಮಾಳು ಗ್ರಾಮದ ನಿವಾಸಿಯಾದ ರಾಜು ಪೂಜಾರಿ ತೆಂಗಿನ ಮರದಿಂದ ಶೇಂದಿ ತೆಗೆಯುವ ಕೆಲಸ ಮಾಡಿಕೊಂಡಿದ್ದು, ಅವರು ಎಂದಿನಂತೆ ಶೇಂದಿಯನ್ನು ಪಡುಬಿದ್ರಿಯ ಮಾರ್ಕೆಟ್ ರಸ್ತೆಯಲ್ಲಿರುವ ಶೇಂದಿ ಅಂಗಡಿಗೆ ಮಾರಾಟ ಮಾಡಿ ವಾಪಾಸ್ಸು ಪಡುಬಿದ್ರಿ ಪೇಟೆಯಲ್ಲಿರುವ ಅಂಗಡಿಗೆ ಹೋಗಲು ಕಾರ್ಕಳ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ದಾಟಿ ಪೂರ್ವ ಅಂಚಿನ ಬಳಿ ತಲುಪಿದಾಗ ಅಂಬ್ಯುಲೆನ್ಸ್ ವಾಹನದ ಚಾಲಕ ಶಫೀಕ್ ಕೆರೂರಿ ಎಂಬಾತನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪರಿಣಾಮ ರಾಜು ಪೂಜಾರಿರವರು ರಸ್ತೆಗೆ ಬಿದ್ದಿದ್ದು ಅವರ ತಲೆಗೆ, ಕಣ್ಣಿನ ಬದಿ, ಕೈಗೆ ಪೆಟ್ಟಾಗಿದ್ದು, ಮೂಗಿನಲ್ಲಿ ರಕ್ತ ಬಂದಿರುತ್ತದೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು : ಆದ್ರಾ೯ ಮಳೆ ಆರ್ಭಟ ; ವಿವಿದೆಡೆ ಜಲಾವೃತ
.jpg)
Posted On: 05-07-2023 08:41PM
ಕಾಪು : ತಾಲೂಕಿನ ವಿವಿದೆಡೆ ಇಂದು ಸುರಿದ ಭಾರೀ ಮಳೆಗೆ ಹಲವು ಪ್ರದೇಶ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

ತಾಲೂಕಿನ ತೆಂಕಗ್ರಾಮದ ಗುಣವತಿ ಎಂಬವರ ವಾಸ್ತವ್ಯದ ಪಕ್ಕ ಮನೆಗೆ ಮರ ಬಿದ್ದು ಅಂದಾಜು 20,000 ನಷ್ಟ ಸಂಭವಿಸಿರುತ್ತದೆ. ಕಾಪು ಕೈಪುಂಜಾಲಿನ ಬಟತೋಟದ ಪ್ರದೇಶ, ಪಡುಬಿದ್ರಿಯ ಕೆಳಗಿನ ಪೇಟೆಯ ಯೂನಿಯನ್ ಬ್ಯಾಂಕ್ ಬಳಿ ತೋಡು - ರೋಡು ಒಂದಾಗಿ ಜನರು ನಡೆದಾಡಲು ಹರಸಾಹಸ ಪಟ್ಟರು. ಉಳಿದಂತೆ ಹಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆಯಿಂದ ಜಲಾವೃತವಾಗಿದೆ.


ಜುಲೈ 8 : ರಾಜ್ಯದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Posted On: 05-07-2023 06:33PM
ಉಡುಪಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಜತ ಮಹೋತ್ಸವ ಸಮಿತಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ರಾಜ್ಯದ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ -2023 ಕಾರ್ಯಕ್ರಮವನ್ನು ಜು.8ರಂದು ಮಧ್ಯಾಹ್ನ 2 ಗಂಟೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ.ಟಿಎಂಎ ಪೈ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾರ್ಯಕ್ರಮವನ್ನು ಕರ್ನಾಟಕದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿರುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಿರುವರು ಎಂದರು.
ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಡುಪಿ ಶಾಸಕ ಯಶ್ಪಾಲ್ ಎಸ್.ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮರಾವ್, ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಭಾಗವಹಿಸಲಿರುವರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಮಧ್ಯಾಹ್ನ 1.30ಕ್ಕೆ ಕಲಾ ಮಯಂ ತಂಡದಿಂದ ಜಾನಪದ ಹಾಡುಗಾರಿಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಪತ್ರಕರ್ತರ ಮಕ್ಕಳು, ಹೆತ್ತವರು, ಜಿಲ್ಲಾ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಸುಮಾರು 300 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜುಲೈ 8ರಂದು ಬೆಳಿಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯು ಉಡುಪಿ ಜಿಲ್ಲಾ ಸಂಘದ ಆತಿಥ್ಯದಲ್ಲಿ ಉಡುಪಿ ಐಎಂಎ ಭವನದಲ್ಲಿ ಜರಗಲಿದೆ ಎಂದು ಅವರು ಮಾಹಿತಿ ನೀಡಿದರು.
ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ, ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಉಪಸ್ಥಿತರಿದ್ದರು.
ಪಡುಬಿದ್ರಿ : ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ; ತುರ್ತು ಕ್ರಮಕ್ಕೆ ಸೂಚನೆ

Posted On: 05-07-2023 06:13PM
ಪಡುಬಿದ್ರಿ : ಕಡಲ್ಕೊರೆತದಿಂದ ತೀವ್ರ ಹಾನಿಗೊಳಗಾಗಿ, ಅಪಾಯದ ಅಂಚಿಗೆ ತಲುಪಿರುವ ಕಾಡಿಪಟ್ಣ ಪಡುಬಿದ್ರಿ ಬೀಚ್ ಗೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಬುಧವಾರ ಭೇಟಿ ನೀಡಿದರು.
ಈ ಸಂದರ್ಭ ಪರಿಶೀಲನೆ ನಡೆಸಿ, ಸಂಬಂಧ ಪಟ್ಟ ಇಲಾಖೆಯ ಅಭಿಯಂತರರಿಗೆ ಕರೆ ಮಾಡಿ ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ, ಅಶೋಕ್ ನಾಯರಿ, ರಾಹುಲ್ ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.