Updated News From Kaup

ಕಾಪು : ಶೀನ ದೇವಾಡಿಗ ನಿಧನ

Thumbnail
Posted On: 25 Jul 2022, 11:27 PM

ಕಾಪು : ಪರಿಸರದಲ್ಲಿ ಉತ್ತಮ ಕಾರ್ಯವೈಖರಿಯ ವ್ಯಕ್ತಿತ್ವದ ಶೀನ ದೇವಾಡಿಗ ಜುಲೈ 25ರಂದು ಹೃದಯಾಘಾತದಿಂದ ನಿಧನರಾದರು. ಉಡುಪಿ ಜಿಲ್ಲಾ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೊಗೀಶ್ ಶೆಟ್ಟಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಹೆದ್ದಾರಿ ಹೊಂಡ ಮುಚ್ಚದಿದ್ದಲ್ಲಿ ವಿನೂತನ ರೀತಿಯ ಪ್ರತಿಭಟನೆ - ೧೦ ದಿನಗಳ ಗಡುವು : ಕಾಪು ಬ್ಲಾಕ್ ಯುವ ಕಾಂಗ್ರೆಸ್

Thumbnail
Posted On: 25 Jul 2022, 10:31 PM

ಪಡುಬಿದ್ರಿ: ಉಡುಪಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಹೊಂಡಗಳು ಉಂಟಾಗಿರುವುದರಿಂದ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದೆ. ಹೆದ್ದಾರಿಯಲ್ಲಿ ಉಂಟಾಗಿರುವ ಈ ಹೊಂಡಗಳನ್ನು ಮುಚ್ಚಲು ೧೦ ದಿನಗಳ ಗಡುವು ನೀಡಲಾಗುವುದು. ಇಲ್ಲದಿದ್ದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ೬೬ ಹೆಜಮಾಡಿಯಿಂದ ಉದ್ಯಾವರದವರೆಗೆ ವಿನೂತನ ರೀತಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಎಚ್ಚರಿಸಿದೆ. ಈ ಮಳೆಗಾಲ ಆರಂಭದಿಂದ ಇದುವರೆಗೆ ಹಲವಾರು ಅಪಘಾತಗಳು ನಡೆದಿದ್ದು, ಹೆಚ್ಚಿನ ಅಪಘಾತಗಳು ಹೊಂಡ ತಪ್ಪಿಸಲು ಹೋಗಿ ನಡೆದಿದೆ. ಅಲ್ಲದೆ ಈ ಅಪಘಾತಗಳಲ್ಲಿ ಹೆಚ್ಚಿನ ಸಾವು ನೋವು ಉಂಟಾಗಿದೆ. ಮೂರು ಮೂರು ಕಡೆ ಟೋಲ್ ಪಾವತಿಸಿಯೂ ಹೊಂಡಗಳಿಗೆ ಮುಕ್ತಿ ನೀಡದೆ ಇರುವುದು ದುರಾದೃಷ್ಟ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರವು ಎಚ್ಚೆತ್ತು ಕೂಡಲೇ ಹೊಂಡಗಳನ್ನು ಮುಚ್ಚಿಸಿ ಅಮಾಯಕ ವಾಹನ ಸವಾರರ ಜೀವ ರಕ್ಷಿಸುವಂತೆ ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಆಗ್ರಹಿಸಿದ್ದಾರೆ.

ಪಡುಬಿದ್ರಿ : ಅನಧಿಕೃತ ಅಪಾಯಕಾರಿ ಗ್ಯಾಸ್ ಗೋಡೌನ್ ತೆರವಿಗೆ ಪ್ರತಿಭಟನೆ ; ತಹಶಿಲ್ದಾರರಿಂದ ತೆರವಿನ ಭರವಸೆ

Thumbnail
Posted On: 25 Jul 2022, 09:55 PM

ಪಡುಬಿದ್ರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದ ಗ್ರಾಮ ಶಾಖೆ ಪಡುಬಿದ್ರಿ ಇದರ ವತಿಯಿಂದ ಪಡುಬಿದ್ರಿಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಅಪಾಯಕಾರಿ ಗ್ಯಾಸ್ ಗೋಡೌನನ್ನು ತೆರವುಗೊಳಿಸಲು ಬ್ರಹತ್ ಪ್ರತಿಭಟನೆ ಹಾಗೂ ಧರಣಿ ಜುಲೈ 25ರಂದು ಜರುಗಿತು. ಪಡುಬಿದ್ರಿ ಪಾದೆಬೆಟ್ಟು ಗ್ರಾಮದಲ್ಲಿ ಪಂಚಾಯತ್ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿರುವ ಅಪಾಯಕಾರಿ ಗ್ಯಾಸ್ ಗೋಡೌನನ್ನು ತೆರವುಗೊಳಿಸಿ ದಲಿತ ಕುಟುಂಬಗಳನ್ನು ಹಾಗೂ ಪಾದೆಬೆಟ್ಟು ಗ್ರಾಮಸ್ಥರನ್ನು ಅಪಾಯದಿಂದ ರಕ್ಷಿಸುವಂತೆ ಒತ್ತಾಯಿಸಿ ಪಾದೆಬೆಟ್ಟು ಎಸ್.ಸಿ.ಕಾಲೊನಿಯಿಂದ ಪಡುಬಿದ್ರಿ ಪಂಚಾಯತ್ ತನಕ ಜಾಥಾ ಹೊರಟು ಪಂಚಾಯತ್ ವಠಾರದಲ್ಲಿ ಧರಣಿ ಕುಳಿತುಕೊಳ್ಳಲಾಯಿತು. ಸ್ಥಳಕ್ಕೆ ಕಾಪು ತಹಶಿಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣ, ಪಿಡಿಒ ಪಂಚಾಕ್ಷರಿ ಹಿರೆಮಠ್, ಪಡುಬಿದ್ರಿ ಗ್ರಾಮ ಪಂಚಾಯತಿ ಅಧ್ಯಕ್ಷ ರವಿಶೆಟ್ಟಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರು. ದ.ಸ.ಅಂ ಅಧ್ಯಕ್ಷರು ಮನವಿ ಕೊಟ್ಟು ಆದಷ್ಟು ಶೀಘ್ರವಾಗಿ ಅಲ್ಲಿಂದ ಗೋಡೌನನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಹಶಿಲ್ದಾರರು ಕಾನೂನು ಚೌಕಟ್ಟಿನೊಳಗೆ ಏನು ಮಾಡಲು ಸಾಧ್ಯವಿದೆ ಎಂದು ನೋಡಿ ಆದಷ್ಟು ಬೇಗ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು.

ಉಡುಪಿ ಜೆಡಿಎಸ್ ಸಾಂಸ್ಥಿಕ ಚುನಾವಣೆಯ ಪಟ್ಟಿ ಹಸ್ತಾಂತರ

Thumbnail
Posted On: 25 Jul 2022, 09:45 PM

ಉಡುಪಿ : ಜಿಲ್ಲೆಯ ಜೆಡಿಎಸ್ ಪಕ್ಷದ ಸಾಂಸ್ಥಿಕ ಚುನಾವಣೆಯ ಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಯಾದ ಎಂ.ಸಿ.ನೀರಾವರಿಯವರಿಗೆ ಇತ್ತೀಚೆಗೆ ಬೆಂಗಳೂರು, ರಾಜ್ಯ ಪಕ್ಷ ಕಚೇರಿಯಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಚುನಾವಣಾಧಿಕಾರಿಯಾದ ಜಯರಾಮ ಆಚಾರ್ಯ ರವರಿಂದ ಹಸ್ತಾಂತರಿಸಿದರು.

ಕಾಪು ಹರೀಶ್ ನಾಯಕ್ ಅವರಿಗೆ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯಿಂದ ಸನ್ಮಾನ

Thumbnail
Posted On: 25 Jul 2022, 09:31 PM

ಉಚ್ಚಿಲ : ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಆಶ್ರಯದಲ್ಲಿ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟನಾ ಕಾರ್ಯಕ್ರಮ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಂಕೀರ್ಣದ ಮಾಧವಮಂಗಳ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಈ ಕಾರ್ಯಕ್ರಮದ ಜವಾವ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾಪು ಹರೀಶ್ ನಾಯಕ್ ಅವರನ್ನು ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಭಾರತ ಸರಕಾರದ ನ್ಯಾಶನಲ್ ಬ್ಯಾಂಕ್‌ ಆಫ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ನ ಅಧ್ಯಕ್ಷರಾದ ಪದ್ಮಭೂಷಣ ಕೆ.ವಿ ಕಾಮತ್ ಬೆಳ್ಳಿಯ ಶಂಖದ ಗೌರವದೊಂದಿಗೆ ಸನ್ಮಾನಿಸಿದರು. ಈ ಸಂದರ್ಭ ಮುಂಬಯಿಯ ಖ್ಯಾತ ಸುಪ್ರೀಂ ಕೋರ್ಟ್‌ ವಕೀಲರಾದ ರವಿಚಂದ್ರ ಕಿಣಿ, ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈವೆಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಪಿ ರವೀಂದ್ರ ದಯಾನಂದ ಪೈ, ಉಡುಪಿಯ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್, ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಪ್ರೈವೆಟ್ ಲಿಮಿಟೆಡ್ ಮೈಸೂರು ಇದರ ಪಾಲುದಾರರಾದ ಗೋವಿಂದ ಜಗನ್ನಾಥ ಶೆಣೈ, ಅಮೇರಿಕದ ವಾಷಿಂಗ್‌ಟನ್ ಡಿಸಿಯ ಇಂಡಿಯನ್ ಸಿಎ ಎಸೋಸಿಯೇಷನ್ ನ ಸ್ಥಾಪಕಾಧ್ಯಕ್ಷರು, ಹಾಗೂ ವಿಶ್ವ ಬ್ಯಾಂಕ್ ನ ಕಾರ್ಯನಿರ್ವಾಹಕರಾಗಿರುವ ಸಿಎ ಗೋಕುಲ್‌ದಾಸ್ ಪೈ, ಮುಂಬಯಿ ನ್ಯಾಚುರಲ್ ಐಸ್‌ ಕ್ರೀಂನ ಆಡಳಿತ ನಿರ್ದೇಶಕರಾದ ರಘುನಂದನ್ ಎಸ್. ಕಾಮತ್, ಮುಂಬಯಿಯ ಎಮ್.ವಿ. ಕಿಣಿ ಲಾ-ಫರ್ಮ್ ನ ಸಂಸ್ಥಾಪಕರಾದ ಖ್ಯಾತ ಸುಪ್ರೀಂ ಕೋರ್ಟ್ ನ ವಕೀಲರಾದ ಮಣಿಪುರ ವಸಂತ ಕಿಣಿ, ಭಾರತ ಸರಕಾರದ ನ್ಯಾಶನಲ್ ಬ್ಯಾಂಕ್‌ ಆಫ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ನ ಅಧ್ಯಕ್ಷರಾದ ಪದ್ಮಭೂಷಣ ಕೆ.ವಿ ಕಾಮತ್, ಎಂ ವಿ ಕಿಣಿ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಇದರ ವಿಶ್ವಸ್ಥರಾದ ರತ್ನಾಕರ ಕಾಮತ್, ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಪಿ ರಾಮಚಂದ್ರ ಶೆಣೈ, ಕಾರ್ಗಿಲ್‌ ಹುತಾತ್ಮ ಲೆ|ಕ|ಶೌರ್ಯಚಕ್ರ ಪುರಸ್ಕೃತ ಅಜಿತ್ ವಿ ಭಂಡಾ‌ರ್ಕಾರ್‌ ರವರ ಧರ್ಮಪತ್ನಿ ಶಕುಂತಲಾ ಎ. ಭಂಡಾ‌ರ್ಕಾರ್‌, ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹಳೆ ಮಾರಿಗುಡಿಯ ಆಡಳಿತ ಮೊಕ್ತೇಸರರಾದ ಶ್ರೀ ಪ್ರಸಾದ ಶೆಣೈ, ರಾಯಚೂರಿನ ಹೆಸರಾಂತ ಲೆಕ್ಕ ಪರಿಶೋಧಕರಾದ ಉಪ್ಪುಂದ ರಾಮಚಂದ್ರ ಪ್ರಭು, ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷರಾದ ಜಿ. ಸತೀಶ್ ಹೆಗ್ಡೆ ಕೊಟ, ಸಿಎ ಎಸ್ ಎಸ್ ನಾಯಕ್, ವಿಜಯಕುಮಾರ್ ಶೆಣೈ, ಸಿಎ ಗೋಪಾಲಕೃಷ್ಣ ಭಟ್, ಮುರಳೀದರ ಜಿ ಶೆಣೈ, ಸಾಣೂರು ನರಸಿಂಹ ಕಾಮತ್, ಸಿಎ ಎಸ್ ಎಸ್ ನಾಯಕ್ ಉಪಸ್ಥಿತರಿದ್ದರು.

ಪಲಿಮಾರು : ಬಿಜೆಪಿ ವತಿಯಿಂದ ಆಟಿಡೊಂಜಿ ಕಮಲ ಕೂಟ

Thumbnail
Posted On: 25 Jul 2022, 12:18 AM

ಪಲಿಮಾರು : ಇಲ್ಲಿನ ಬಿಜೆಪಿ ಹಿಂದುಳಿದ ವರ್ಗ ಮೋರ್ಚ, ಪಲಿಮಾರು ಮತ್ತು ನಂದಿಕೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆಟಿಡೊಂಜಿ ಕಮಲ ಕೂಟ ಕಾರ್ಯಕ್ರಮ‌ ಪಲಿಮಾರಿನಲ್ಲಿ ನಡೆಯಿತು. ಕಾಪು ಮಂಡಲ ಹಿಂದುಳಿದ ವರ್ಗ ಮೋರ್ಚ ಅಧ್ಯಕ್ಷರಾದ ಸಂತೋಷ್ ಮೂಡುಬೆಳ್ಳೆ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಹಿಂದುಳಿದ ವರ್ಗ ಮೋರ್ಚ ಅಧ್ಯಕ್ಷರಾದ ನೆ ಲ ನರೇಂದ್ರ ಬಾಬು, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶ ನಾಯಕ್, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಮಹಿಳಾಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಜಿಲ್ಲಾ ಹಿಂದುಳಿದ ವರ್ಗ ಮೋರ್ಚ ಅಧ್ಯಕ್ಷರಾದ ಸುರೇಂದ್ರ ಪಣಿಯೂರು, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಪಲಿಮಾರು ಶಕ್ತಿಕೇಂದ್ರ ಪ್ರಮುಖರಾದ ಗಾಯತ್ರಿ ಪ್ರಭು, ಸೌಮ್ಯಲತಾ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚ ವಕ್ತಾರರಾದ ವಿಠ್ಠಲ ಪೂಜಾರಿ, ಕಾಪು ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಕಾಪು ಯುವಮೋರ್ಚ ಅಧ್ಯಕ್ಷರಾದ ಸಚಿನ್ ಸುವರ್ಣ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮತ್ತಿತರರು ಉಪಸ್ಥಿತರಿದ್ದರು. ‌ ರವಿ‌ ಕೋಟ್ಯಾನ್ ಉದ್ಯಾವರ ಹಾಗೂ ಕಾಪು ಮಂಡಲ ಹಿಂದುಳಿದ ವರ್ಗ ಮೋರ್ಚ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪಲಿಮಾರು ಕಾರ್ಯಕ್ರಮ ನಿರೂಪಿಸಿದರು. ಆಟಿ ವಿಶಿಷ್ಟತೆ ಹಾಗೂ ಪಕ್ಷದ ವಿಚಾರಗಳ ಬಗ್ಗೆ ಮಾತನಾಡಲಾಯಿತು. ಸುಮಾರು 45 ಜನ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು.

ಬಂಟಕಲ್ಲು : ದೇವಾಡಿಗರ ಸಂಘದಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Thumbnail
Posted On: 25 Jul 2022, 12:05 AM

ಕಾಪು : ದೇವಾಡಿಗರ ಸಂಘ 92 ಹೇರೂರು ಬಂಟಕಲ್ಲು ಇವರ ಆಶ್ರಯದಲ್ಲಿ ಇಂದು ಆಟಿಡೊಂಜಿ ದಿನ ಕಾರ್ಯಕ್ರಮ ಹೇರೂರು ಶಶಿಕಲಾ ದಿನೇಶ್ ದೇವಾಡಿಗರವರ ಮನೆಯಲ್ಲಿ ನಡೆಯಿತು. ಸಂಘದ ಸದಸ್ಯರಿಗೆ ವಿವಿಧ ಜಾನಪದ ಸ್ಪರ್ಧೆಗಳನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಸದಸ್ಯರು ಸಮಾಜ ಸೇವಕರು ಆಗಿರುವ ವಿಜಯ ಕೊಡವೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ತಿಂಗಳ ಮಹತ್ವ, ಆರೋಗ್ಯವಂತ ಆಹಾರದ ಬಗ್ಗೆ ಹಾಗೂ ಕಲ್ಮಾಡಿ ಶ್ರೀ ಬಗ್ಗುಪಂಜರ್ಲಿ ದೈವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹೇರೂರು ಗ್ರಾಮದ ದೇವಾಡಿಗ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಉಡುಪಿ ದೇವಾಡಿಗರ ಸಂಘದ ಮಾಜಿ ಅಧ್ಯಕ್ಷರಾದ ಗಣೇಶ್ ದೇವಾಡಿಗ ರವರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ವಿಶ್ವ ದೇವಾಡಿಗ ಮಹಾಮಂಡಲದ ಸದಸ್ಯರು, ಉಡುಪಿ ದೇವಾಡಿಗರ ಸಂಘದ ಸದಸ್ಯರು, ಹೇರೂರು ದೇವಾಡಿಗರ ಸಂಘದ ಗೌರವ ಅಧ್ಯಕ್ಷರಾದ ದೇಜು ಸೇರಿಗಾರ್, ಸಂಘದ ಅಧ್ಯಕ್ಷರಾದ ಶಂಕರ ದೇವಾಡಿಗ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಅನಿತಾ ದೇವಾಡಿಗ ಮತ್ತು ಚರಣ್ ದೇವಾಡಿಗರವರು ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರರಾದವರ ಪಟ್ಟಿಯನ್ನು ವಾಚಿಸಿದರು. ಕುಮಾರಿ ಅಭಿಜ್ಞಾರವರ ಪ್ರಾರ್ಥಿಸಿದರು. ಕಾರ್ಯದರ್ಶಿ ಉದಯ ದೇವಾಡಿಗರವರು ಸ್ವಾಗತಿಸಿದರು. ದಿನೇಶ್ ದೇವಾಡಿಗ ಮತ್ತು ಅಖಿಲ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಗೋಪಾಲ ದೇವಾಡಿಗ ರವರು ವಂದಿಸಿದರು. ಕಾರ್ಯಕ್ರಮದ ಬಳಿಕ‌ ಸಂಘದ ಸದಸ್ಯರು ತಯಾರಿಸಿದ ಸುಮಾರು‌ 30 ಬಗೆಯ ಆಟಿ ತಿಂಗಳ ವಿವಿಧ ತಿಂಡಿ ತಿನಸುಗಳನ್ನು ಆಗಮಿಸಿದ ಎಲ್ಲರಿಗೂ‌ ಉಣ ಬಡಿಸಲಾಯಿತು.

ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

Thumbnail
Posted On: 24 Jul 2022, 11:50 PM

ಕಾಪು : ಸಾಮಾಜಿಕ ಜಾಲತಾಣದ ಮೂಲಕ ಕರ್ನಾಟಕ ರಾಜ್ಯದಲ್ಲಿರುವ ಅನೇಕ ಜನರನ್ನು ಒಂದುಗೂಡಿಸಿ , ಅವರೆಲ್ಲರ ಸಹಕಾರದಿಂದ ಪ್ರಾರಂಭಗೊಂಡ ಅನಂತ ಇನ್ನಂಜೆಯವರ ನೇತೃತ್ವದ ಉಡುಪಿಯ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ಸಭಾಭವನದಲ್ಲಿ ರವಿವಾರ ಉಡುಪಿ ಹಾಗೂ ಕಾಪು ತಾಲ್ಲೂಕಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಇವರು ಮಾತನಾಡಿ , ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ಮೂಲಕ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ನಿರಂತರ ಸಮಾಜ ಸೇವಾ ಚಟುವಟಿಕೆಗಳು ನಡೆಯುತ್ತಿವೆ‌. ಉಡುಪಿ ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಪ್ರಯತ್ನಕ್ಕೂ ಚಾಲನೆ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದರು. ಟ್ರಸ್ಟ್ ನ ಅಧ್ಯಕ್ಷರಾದ ಅನಂತ ಇನ್ನಂಜೆ ಇವರು ಮಾತನಾಡಿ , ಸಮಾಜದಿಂದ ಕಷ್ಟಕಾಲದಲ್ಲಿ ಪಡೆದಿರುವ ಉತ್ತಮ ಸ್ಪಂದನೆಯನ್ನು ಸಮಾಜಕ್ಕೆ ಸಕಾಲದಲ್ಲಿ ಹಿಂದೆ ನೀಡಬೇಕು ಎನ್ನುವ ಮಾತಿನಂತೆ ಸಮಾಜದಲ್ಲಿ ಅಗತ್ಯವುಳ್ಳವರ ನೋವಿಗೆ ಸ್ಪಂದಿಸುವ ಉದ್ದೇಶದಿಂದ ಈ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ಕಾರ್ಯಾಚರಿಸುತ್ತಿದೆ.ಶಿಕ್ಷಣ ಆಹಾರ ಆರೋಗ್ಯ ಈ ಮೂರು ವಿಷಯದಲ್ಲಿ ಈ ಟ್ರಸ್ಟ್ ಕಾರ್ಯಾಚರಿಸುತ್ತಿದ್ದು ಸಾಮಾಜಿಕ ಜಾಲತಾಣದ ಸದ್ವಿನಿಯೋಗದಿಂದ ಹಲವಾರು ಜನರ ಸಹಕಾರದಿಂದ ಇಂತಹ ಮಹತ್ಕಾರ್ಯವು ಸಾಧ್ಯವಾಯಿತು ಎಂದರು. ಸಮಾಜ ಸೇವಕರು ಹಾಗೂ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಯಶ್ ಪಾಲ್ ಸುವರ್ಣ ಇವರು ತಮ್ಮ ಮಹಾಲಕ್ಷ್ಮಿ ಕೋಪರೇಟಿವ್ ಬ್ಯಾಂಕಿನಿಂದ ಪುರಸ್ಕೃತ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಂಕ್ ಎಕೌಂಟ್ ಹಾಗೂ ಎ.ಟಿ.ಎಮ್ ಕಾರ್ಡ್ ನ ಸೌಲಭ್ಯಗಳನ್ನು ಒದಗಿಸಿದರು. ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾದ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು , ಜೆ.ಡಿ.ಎಸ್ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಬಾಲಾಜಿ , ಶ್ರೀರಾಮ ಸೇನೆಯ ವಲಯಾಧ್ಯಕ್ಷರಾದ ಮೋಹನ್ ಭಟ್ ಮಣಿಪಾಲ ,ಸಮಾಜ ಸೇವಕರಾದ ಲೀಲಾಧರ ಶೆಟ್ಟಿ ಕಾಪು ಶುಭಾಶಂಸನೆಗೈದರು. ಎಸ್.ವಿ.ಹೆಚ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಪುಂಡರೀಕಾಕ್ಷ ಕೊಡಂಚ ಇವರು ಮಕ್ಕಳಿಗೆ ದ್ವಿತೀಯ ಪಿ.ಯು.ಸಿ ನಂತರ ಮತ್ತೇನು ಎನ್ನುವ ವಿಷಯದ ಬಗ್ಗೆ ಮಾರ್ಗದರ್ಶನವನ್ನು ನೀಡಿದರು. ಅನಿಲ್ ಆಚಾರ್ಯ ಓಂತಿಬೆಟ್ಟು ಇವರು ಸ್ವಾಗತಿಸಿ , ಎಮ್ ಶ್ರೀನಿವಾಸ್ ಭಟ್ ಉಡುಪಿ ಇವರು ಕಾರ್ಯಕ್ರಮ ನಿರ್ವಹಿಸಿದರು. ಅಮೃತಾ ಭಟ್ ಇವರು ವಂದಿಸಿದರು.

ಮಳೆಗಾಲದ ನೀರು ತುಂಬಿದ್ದ ಕಲ್ಲಿನ ಕ್ವಾರೆಯಲ್ಲಿ ಈಜಲು‌ ಹೋಗಿ‌ ಮೃತಪಟ್ಟ ಯುವಕ

Thumbnail
Posted On: 24 Jul 2022, 11:44 PM

ಮಂಗಳೂರು : ಕ್ರಿಕೆಟ್ ಆಟದ ಬಳಿಕ‌ ಕೆಂಪು ಕಲ್ಲಿನ ಕ್ವಾರೆಯಲ್ಲಿ ಮಳೆಗಾಲದ ನೀರು ತುಂಬಿದ ಹೊಂಡದಲ್ಲಿ ಈಜಲು ಹೋಗಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ‌ ಉಲೈಬೆಟ್ಟು ಕಾಯರಪದವು ಎಂಬಲ್ಲಿ‌ ನಡೆದಿದೆ. ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಲೈಬೆಟ್ಟು ಕಾಯರಪದವು ಎಂಬಲ್ಲಿ ಶಿಯಾಬ್ ಹಾಗೂ ಆತನ ಗೆಳೆಯರು ಕ್ರಿಕೆಟ್ ಆಟವಾಡಿ ನಂತರ ಅಲ್ಲಿಯೇ ಆಟದ ಮೈದಾನದ ಪಕ್ಕದ್ದಲ್ಲಿ ಕೆಂಪು ಕಲ್ಲಿನ ಕ್ವಾರೆ ಮಳೆಗಾಲದ ನೀರು ತುಂಬಿದ ಹೊಂಡದಲ್ಲಿ ಈಜಲು ಹೋಗಿ ಜೋಕಟ್ಟೆ ನಿವಾಸಿ ಶಿಯಾಬ್ (21) ಎಂಬ ಹುಡುಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡುಬಿದ್ರಿ : ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಜಂಟಿ ಆಶ್ರಯದಲ್ಲಿ ಆಟಿದ ಗಮ್ಮತ್ತ್

Thumbnail
Posted On: 24 Jul 2022, 11:36 PM

ಪಡುಬಿದ್ರಿ : ತುಳುನಾಡು ಕೃಷ್ಣದೇವರಾಯ ಅರಸರಾಗಿ, ಹಲವಾರು ಸಾಮಂತರಾಜರು ಆಳಿದ ಸ್ಥಳವಾಗಿದೆ. ತುಳು ನೆಲದಲ್ಲಿ ವಿಶೇಷತೆ, ಅದರದೇ ಆದ ಮಹಿಮೆ ಜಗತ್ತಿನಲ್ಲಿ ಸ್ಥಾನವನ್ನು ಪಡೆದಿದೆ. ಇಲ್ಲಿ ಬಂದು ಅಧ್ಯಯನ ನಡೆಸಿದ ಬ್ರಿಟಿಷರಿಗೆ ಇಲ್ಲಿನ ಜನಪದ ಸಂಸ್ಕೃತಿ ಅವರನ್ನು ಕುತೂಹಲಿಗರನ್ನಾಗಿಸಿದೆ. ಅವರು ದಾಖಲಿಸಿದ್ದು ಜನರಿಗೆ ತಿಳಿಯುವಂತಾಗಿದೆ. ಜಗತ್ತಿನ ಹಲವಾರು ಭಾಷೆಗಳಿಗೆ ಅವುಗಳದೇ ಆದ ಮಹತ್ವ, ವ್ಯಾಪ್ತಿಯಿದೆ. ಸರಕಾರದ ಮಟ್ಟದಲ್ಲಿ ಮಾನ್ಯತೆ ದೊರಕಿದೆ. ಆದರೆ ಎಲ್ಲ ಇದ್ದು ಏನೂ ಇಲ್ಲದಂತೆ ಇರುವ ಭಾಷೆಯಾಗಿ ತುಳುವಿದೆ. ಸ್ವತಂತ್ರ ಕ್ಯಾಲೆಂಡರ್, ಸ್ವತಂತ್ರ ಲಿಪಿ, ಅಷ್ಟಮಠಾಧಿಪತಿಗಳು ತುಳು ಲಿಪಿಯಲ್ಲಿಯೇ ಸಹಿ ಹಾಕುವ ರೂಢಿಯಿದೆ. ಅಸಂಖ್ಯಾತ ಶಿಲಾಶಾಸನಗಳು, ಅಸಂಖ್ಯಾತ ತಾಮ್ರ ಶಾಸನಗಳು ತುಳುವಲ್ಲಿ ಇದೆ. ವಿಶ್ವದಲ್ಲಿ ಎರಡುವರೆ ಕೋಟಿ ಜನಸಂಖ್ಯೆ ಇದ್ದರೂ ತುಳು ಅಧಿಕೃತ ಭಾಷೆ ಆಗಲಿಲ್ಲ. ನಾವು ನಮ್ಮ ಭಾಷೆಯನ್ನು ಮರೆಯದಿರಲು ನಮ್ಮ ಕಾರ್ಯಕ್ರಮ, ಮನೆ ಮನಗಳಲ್ಲಿ ತುಳು ಭಾಷೆಯ ಬಳಕೆ ಅನಿವಾರ್ಯ. ಅದರಲ್ಲೂ ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ ಒಂದಾದ ಆಟಿ ಆಚರಣೆಯು ನಮ್ಮಲ್ಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಕ್ಲಬ್ ಪಡುಬಿದ್ರಿ ಜಂಟಿ ಆಶ್ರಯದಲ್ಲಿ ಜರಗಿದ ಆಟಿದ ಗಮ್ಮತ್ತ್ ಕಾರ್ಯಕ್ರಮವನ್ನು ಕಲಶಕ್ಕೆ ಭತ್ತವನ್ನು ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೂಢನಂಬಿಕೆ, ರೂಢನಂಬಿಕೆಗಳು ಭಿನ್ನ. ಆಟಿದ ಆಚರಣೆಯ ಹಿನ್ನೆಲೆಯನ್ನು ತಿಳಿಯಬೇಕಾಗಿದೆ. ವೈಜ್ಞಾನಿಕ ಮಹತ್ವ ಮತ್ತು ಆರೋಗ್ಯಯುತ ಆಹಾರ ಪದಾರ್ಥಗಳನ್ನು ಬಳಸುವಲ್ಲಿ ಮಹತ್ವದ ಅಂಶಗಳನ್ನು ನಮಗೆ ತಿಳಿಸುತ್ತದೆ ಎಂದರು. ಈ ಸಂದರ್ಭ ಶಿಕ್ಷಣ ಕ್ಷೇತ್ರದ ಸಾಧಕಿ, ಶಿಕ್ಷಕಿ ವಂದನಾ ರೈ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅಕಾಡೆಮಿ ಸದಸ್ಯ ‌ಮಾಧವ ಭಂಡಾರಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನಾಗೇಶ್ ಕುಲಾಲ್, ಇನ್ನರ್ವೀಲ್ ಅಧ್ಯಕ್ಷೆ ವಿಮಲ ಸಾಲ್ಯಾನ್, ಕಾರ್ಯದರ್ಶಿ ಸುನಿತ ಭಕ್ತವತ್ಸಲ, ರೋಟರಿ ‌ಅಧ್ಯಕ್ಷೆ ಗೀತಾ ಅರುಣ್, ಕಾರ್ಯದರ್ಶಿ ಜ್ಯೋತಿ ಮೆನನ್, ಪುಷ್ಪಲತಾ, ಅನಿತಾ ಉಪಸ್ಥಿತರಿದ್ದರು. ಪಡುಬಿದ್ರಿ ರೋಟರಿ ‌ಕ್ಲಬ್ ನ ಸಂತೋಷ್ ಪಡುಬಿದ್ರಿ ‌ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು.