Updated News From Kaup

ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ : ಸ್ವಚ್ಛತಾ ಕಾರ್ಯಕ್ರಮ

Thumbnail
Posted On: 15 Aug 2022, 02:14 PM

ಕಟಪಾಡಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಛ ಭಾರತ ಶ್ರೇಷ್ಠ ಭಾರತ ಎಂಬ ಪರಿಕಲ್ಪನೆಯೊಂದಿಗೆ ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕ ಅಗ್ರಹಾರ ಕಟಪಾಡಿ ಇದರ ವತಿಯಿಂದ ಅಗ್ರಹಾರ ಶ್ರೀ ದುರ್ಗಾಪರಮೇಶ್ವರಿ ಶಾಲಾ ವಠಾರದಲ್ಲಿ ಆಗಸ್ಟ್ 13ರಂದು ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಹಿಂದೂ ಯುವಸೇನೆ ಶ್ರೀ ದುರ್ಗಾಪರಮೇಶ್ವರಿ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾವ್ಯವನ್ನು ಅನುಭವಿಸಿ ಬರೆದರೆ ಉತ್ತಮ ಕವನ ಬರುತ್ತೆ – ರೇಮಂಡ್ ಡಿ.ಕುನ್ಹ ತಾಕೊಡೆ

Thumbnail
Posted On: 15 Aug 2022, 12:56 PM

ಮಂಗಳೂರು : ಪ್ರೇರಣಾತ್ಮಕವಾಗಿ ಬರೆಯುವ ಸಾಹಿತಿಗಳು ನಡು ನಡುವೆ ವಿರಾಮ ತೆಗೆದು ಕೊಂಡು ಅಭ್ಯಸಿಸಿ ಬರೆಯುವ ಹವ್ಯಾಸ ಇಟ್ಟುಕೊಳ್ಳಬೇಕು. ಆ ಮೂಲಕ ಒಂದು ಸೃಜನಾತ್ಮಕ ಸಾಹಿತ್ಯ ರಚಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ರೇಮಂಡ್ ಡಿ.ಕುನ್ಹ ತಾಕೋಡೆ ಹೇಳಿದರು . ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಆಗಸ್ಟ್ 14ರಂದು ಮಂಗಳೂರಿನ ಕದ್ರಿ ಬಾಲಭವನದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ ಭಾರತಾಂಬೆಗೆ ಕನ್ನಡದಾರತಿ ಮತ್ತು ಸಾಧಕರಿಗೆ ಸನ್ಮಾನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗ ಸಂಘಟಕರು ಸಂಶೋಧಕರು ಮತ್ತು ಸಾಹಿತಿಗಳು ಈ ಮೂರು ವರ್ಗದವರಿಂದ ಸಾಹಿತ್ಯ ಸೇವೆ ನಡೀತಿದೆ. ಇದರಲ್ಲಿ ಸಾಹಿತಿಗಳು ಸಂಶೋಧನೆ ಮತ್ತು ಸಂಘಟನೆ ಮಾಡಿದ್ರೆ ಉತ್ತಮ ಸಾಹಿತ್ಯ ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಗಝಲ್ ಕವಿ ಹಾಗೂ ಮುಕ್ತಕ ಕವಿ ಎಂದೇ ಜನಪ್ರಿಯರಾದ ಡಾ. ಸುರೇಶ್ ನೆಗಳಗುಳಿ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗುಣಾಜೆ ರಾಮಚಂದ್ರ ಭಟ್ ಮಾತನಾಡಿ ಕವಿತೆ ಕಟ್ಟುತ್ತಾ ಹೋದಂತೆ ಅದು ಹುಟ್ಟುವುದು, ಕವನವನ್ನು ಮೊದಲ ಬಾರಿಗೆ ಓದಿದಾಗ ಎಲ್ಲಾ ಅರ್ಥವಾಗದೆ ಮರಳಿ ಓದಿಸಬೇಕು. ಹಾಗೆಂದು ಕವನಗಳು ಅರ್ಥ ಮಾಡಲು ತುಂಬಾ ಕಷ್ಟವಾಗಿರಲೂಬಾರದು. ಕವಿಗಳು ನಿರಂತರ ಅಧ್ಯಯನ ಮಾಡುತ್ತಿರಬೇಕು , ಶಬ್ಧ ಸಂಪತ್ತನ್ನು ಗಳಿಸಿ ಜೀವನಾನುಭವ ಹೊಂದಿರಬೇಕೆಂದು ಹೇಳಿದರು. ಕೆ ಎಸ್ ಎಸ್ ಎ ಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿ ಪ್ರಾಸ್ತಾವನೆಗೈದರು. ಎನ್ ಎಸ್ ಸಿ ಡಿ ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಹಾಗೂ ಕವಯತ್ರಿ ರೇಖಾ ಸುದೇಶ್ ರಾವ್ ಉಪಸ್ಥಿತರಿದ್ದರು. ರೇಶ್ಮಾ ಶೆಟ್ಟಿ ಗೋರೂರು ನಿರೂಪಿಸಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಯ ಸುಮಾರು 30 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗೀತ ಗಾಯನ ನಡೆಯಿತು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ : 75 ನೇ ಅಮೃತ ಮಹೋತ್ಸವದ ಸಂಭ್ರಮ

Thumbnail
Posted On: 15 Aug 2022, 12:45 PM

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 2022ರ ಆಗಸ್ಟ್ 15 ರಂದು 76ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದ 75 ನೇ ಅಮೃತ ಮಹೋತ್ಸವ ಪ್ರಯುಕ್ತ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು ಧ್ವಜಾರೋಹಣವನ್ನು ನೆರವೇರಿಸಿ, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯವೆಂದರೆ ಇದರ ಹಿಂದಿನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಕೋಟ್ಯಾಂತರ ಭಾರತೀಯರ ತ್ಯಾಗ-ಬಲಿದಾನ- ಹೋರಾಟದ ಕಥೆ ಇದೆ. ನಮ್ಮ ಯೋಧರ ತ್ಯಾಗಗಳನ್ನು ಸ್ಮರಿಸೋಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ನೆನೆಯೋಣ. ನವಸಮಾಜ ನಿರ್ಮಾಣ ಜೊತೆಗೆ ದೇಶಾಭಿವೃದ್ಧಿಗಾಗಿ ಇಂದು ಯುವಕರು ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಕಠಿಣ ಪರಿಶ್ರಮ ನೀಡಿ ದೇಶ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿ ಕಾರ್ಯಕ್ರಮದ ಮುಖ್ಯ ಉದ್ದೇಶವನ್ನು ಮತ್ತು ಪ್ರಾಮುಖ್ಯತೆಯನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ, ಕ್ವಾರ್ಟರ್ ಮಾಸ್ಟರ್ ಮೋಹಿತ್ ಎನ್ ಸಾಲಿಯಾನ್, ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್ ಪರೇಡ್ ನ ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿನ ಅಧೀಕ್ಷಕ್ಕಿ ಡೋರಿನ್ ಡಿಸಿಲ್ವಾ, ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀರಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ ಲೀಡರ್ ಗಳಾದ ಪ್ರಕಾಶ್, ಸಂಗೀತ ಪೂಜಾರಿ, ಎನ್ ಎಸ್ ಎಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿ ಕಾಲೇಜಿನ ಎಲ್ಲಾ ಭೋಧಕ ಹಾಗು ಭೋಧಕೆತರ ವೃಂದದವರು ಉಪಸ್ಥಿತರಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಪ್ರೇಮನಾಥ್ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದ ವಂದಿಸಿದರು. ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್‌ಕುಮಾರ್‌ ರವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ-ಸಂಯೋಜಿಸಿದರು.

ಕಟಪಾಡಿ : ರಥ ಕೊಡ್ಕೆ ಫ್ರೆಂಡ್ಸ್ ವತಿಯಿಂದ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Thumbnail
Posted On: 14 Aug 2022, 07:18 PM

ಕಟಪಾಡಿ : ರಥ ಕೊಡ್ಕೆ ಫ್ರೆಂಡ್ಸ್ ಕಟಪಾಡಿ ವತಿಯಿಂದ ಜಿ ಎಸ್ ಬಿ ಸಮಾಜದ ಎಸ್ ಎಸ್ ಎಲ್ ಸಿ ಸಾಧಕರಾದ ಸಂದೀಪ್ ಪೈ, ಸಾತ್ವಿಕ್ ಕಾಮತ್, ಅಮೇಯ ಶೆಣೈ, ವೈಭವಿ ಕಾಮತ್, ಪ್ರಥಮ್ ಕಾಮತ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ರಥ ಕೊಡ್ಕೆ ಫ್ರೆಂಡ್ಸ್ ನ ಏಕನಾಥ ಭಟ್, ಶ್ರೀನಿವಾಸ್ ಶೆಣೈ, ದಿವಾಕರ್ ಭಟ್, ವಿನೋದ್ ಕಾಮತ್, ಗಜಾನನ ಶೆಣೈ, ಶ್ರೀನಾಥ್ ಶೆಣೈ, ವೇದಾಂತ ಭಟ್, ಸುಧೀರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಬೆಳಪು : ಜಮಾ ಅತೆ ಇಸ್ಲಾಮಿ ಕಾಪು ವರ್ತುಲದ ವತಿಯಿಂದ ಉಚಿತ ಹಿಜಾಮ ಶಿಬಿರ

Thumbnail
Posted On: 14 Aug 2022, 06:11 PM

ಕಾಪು : ಸೃಷ್ಟಿಕರ್ತನು ಮಾನವನನ್ನು ಭೂಮಿಯ ಮೇಲೆ ತನ್ನ ಪ್ರತಿನಿಧಿಯಾಗಿ ಕಳುಹಿಸಿ , ಕೆಡುಕನ್ನು ಅಳಿಸಿ ಒಳಿತನ್ನು ಸ್ಥಾಪಿಸಲು ಆದೇಶಿಸಿ , ಸ್ವಸ್ಥ ಸುಂದರ , ಆರೋಗ್ಯಪೂರ್ಣ ಸಮಾಜ ನಿರ್ಮಿಸಿ ರೋಗ ರುಜಿನ ಪೀಡಿತರ ಸೇವೆಗೈಯ್ಯಲು ತಿಳಿಸಿರುವನು. ನಿಮ್ಮಲ್ಲಿರುವ ಸಂಪತ್ತನ್ನು ಸೃಷ್ಟಿಕರ್ತನ ಸಂಪ್ರೀತಿ ಗಳಿಸಲು ಬಡವರ ಉದ್ಧಾರಕ್ಕೆ ಬಳಸಿದರೆ ಅದು ದೇವ ಮಾರ್ಗದಲ್ಲಿ ಬಳಸಿದಂತೆ ಎಂದು ಅನ್ವರ್ ಅಲಿ ಕಾಪು ಹೇಳಿದರು. ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ ಜಮಾ ಅತೆ ಇಸ್ಲಾಮಿ ಕಾಪು ವರ್ತುಲದ ವತಿಯಿಂದ ಬೆಳಪು ಮಸ್ಜಿದ್ ಎ ತೈಬಾ ದಲ್ಲಿ ಉಚಿತ ಹಿಜಾಮ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಹಿಜಾಮ ಚಿಕಿತ್ಸೆ ನೀಡಲು ಬಂದಿರುವ ಆಯುಷ್ ಸರಕಾರಿ ಆಸ್ಪತ್ರೆ ಉಡುಪಿಯ ವೈದ್ಯಾಧಿಕಾರಿಯಾದ ಡಾಕ್ಟರ್ ರುಕ್ಸಾರ್ ಅಂಜುಮ್ ರವರು, ಈ ಚಿಕಿತ್ಸೆಯಿಂದ ಹಲವಾರು ಕಾಯಿಲೆಗಳು ಶಸ್ತ್ರ ಚಿಕಿತ್ಸೆ, ಮಾತ್ರೆ, ಔಷಧಿ ಸೇವಿಸದೆ ಗುಣ ಪಡಿಸಬಹುದಾಗಿದೆ ಹಾಗೂ ಇನ್ನೂ ಹಲವಾರು ಪ್ರಯೋಜನಗಳು ಇವೆ ಎಂದು ತಿಳಿಸಿದರು. 61 ಮಹಿಳೆಯರು 53 ಪುರುಷರು ಶಿಬಿರದಲ್ಲಿ ಹಿಜಾಮ ಚಿಕಿತ್ಸೆಯ ಪ್ರಯೋಜನ ಪಡೆದರು. ವೇದಿಕೆಯಲ್ಲಿ ರಫೀಕ್ ಖಾನ್, ಮುಸ್ತಾಕ್ ಇಬ್ರಾಹೀಮ್ ಉಪಸ್ಥಿತರಿದ್ದರು. ಮಸೀದಿಯ ಗುರುಗಳಾದ, ಮೌಲಾನಾ ಮುಹಮ್ಮದ್ ಫಾರೂಕ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭ ಆಯಿತು. ಶೇಹೆನಾಜ್ , ಬೀಬಿ ಬತುಲ್, ಸಕ್ಲೇನ್ ಪಾಷ , ಅಬ್ದುಲ್ ಅಹದ್, ಸರ್ಫರಾಜ್ ಸಹಕರಿಸಿದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತಿಸಿದರು. ಇಬ್ರಾಹೀಮ್ ಸಯೀದ್ ಉಮರಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕುದ್ರೋಳಿ : 18 ಗಂಟೆಗಳ ಶ್ರಮದಿಂದ ಧಾನ್ಯ, ತರಕಾರಿ, ಅಕ್ಕಿ ಇತ್ಯಾದಿ ವಸ್ತುಗಳಿಂದ ಮೂಡಿದ ತಿರಂಗ

Thumbnail
Posted On: 14 Aug 2022, 03:14 PM

ಮಂಗಳೂರು : ಸ್ವಾತಂತ್ರ್ಯದ 75ರ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಗುರುಬೆಳದಿಂಗಳು ಸೇವಾ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಳ ಮುಂಭಾಗ ಧಾನ್ಯ, ತರಕಾರಿ, ಅಕ್ಕಿ, ಕಳಶ, ಬಾಳೆ ಎಲೆ, ವೀಳ್ಯದೆಲೆ ಇತ್ಯಾದಿ ವಸ್ತುಗಳಿಂದ ಭಾರತದ ತ್ರಿವರ್ಣ ಧ್ವಜವನ್ನು ರಚಿಸಲಾಗಿದೆ. ಕಲಾವಿದ, ಛಾಯಾಗ್ರಾಹಕ ಪುನೀಕ್ ಶೆಟ್ಟಿ ನೇತೃತ್ವದಲ್ಲಿ 30 ಗುರುಬೆಳದಿಂಗಳು ಸದಸ್ಯರು ಹಾಗೂ ಕ್ಷೇತ್ರದ ಸಿಬ್ಬಂದಿ ವರ್ಗದ ಸಹಕಾರದಿಂದ 18 ಗಂಟೆಗಳ ನಿರಂತರ ಕಾರ್ಯದಿಂದ ಮೂಡಿದೆ. ಇದಕ್ಕಾಗಿ 900 ಕೆಜಿ ಧಾನ್ಯ, 100 ಕೆಜಿ ತರಕಾರಿ, 38 ಅಡಿ ವೃತ್ತ, 54 ಕಳಶ, 108 ಬಾಳೆ ಎಲೆ, 500 ವೀಳ್ಯದೆಲೆ, 100 ಕೆಜಿ ಬೆಳ್ತಿಗೆ ಅಕ್ಕಿ ಉಪಯೋಗಿಸಲಾಗಿದೆ.

ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ಕಾಪು ಟು ಪಡುಬಿದ್ರಿ : ದೇಶಕ್ಕಾಗಿ ಓಟ

Thumbnail
Posted On: 14 Aug 2022, 11:52 AM

ಪಡುಬಿದ್ರಿ : ಸ್ವಾತಂತ್ರ್ಯದ 75ರ ಅಮೃತ ಮಹೋತ್ಸವದ ಅಂಗವಾಗಿ ಕಾಪು ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ದೇಶಕ್ಕಾಗಿ ಓಟ ಕಾರ್ಯಕ್ರಮವು ಕಾಪು ರಾಷ್ಟ್ರೀಯ ಹೆದ್ದಾರಿ ಸಮೀಪದ ಸರಕಾರಿ ಶಾಲೆಯ ಸಮೀಪದಿಂದ ಪ್ರಾರಂಭಗೊಂಡು ಪಡುಬಿದ್ರಿ ಬೋಡ್೯ ಶಾಲಾ ಮೈದಾನದಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ಮಾತನಾಡಿದ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಅವಕಾಶವಿದೆ. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಸವಾಲನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಸತತ ಪರಿಶ್ರಮದಿಂದ ಮುಂದೆ ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವಂತಾಗಲಿ ಎಂದು ಭಾಗವಹಿಸಿದ ಸ್ಪಧಾರ್ಥಿಗಳಿಗೆ ಶುಭ ಹಾರೈಸಿದರು. ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ದೇಶವು ಯಾವ ರೀತಿ ಇರಬೇಕೆಂದು ಹಿರಿಯರು ನಿಶ್ಚಯಿಸಿದ್ದಾರೆ. ಪ್ರಧಾನಿಯವರ ಕರೆಯಂತೆ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಜನ ಸಂಭ್ರಮಿಸುತ್ತಿದ್ದಾರೆ. ದೇಶವನ್ನು ತುಂಡರಿಸಿದವರು ಮತ್ತು ರಾಷ್ಟ್ರ ಧ್ವಜದ ಬಣ್ಣವನ್ನೂ ತಿಳಿಯದವರು ಬಿಜೆಪಿಗೆ ಪಾಠ ಮಾಡುತ್ತಿದ್ದಾರೆ. ಮುಂದಿನ 25 ವರ್ಷ ಭಾರತದ ಅಮೃತಕಾಲ ಎಂದು ಪ್ರಧಾನಿಯವರ ಕರೆ ನೀಡಿದ್ದಾರೆ ಎಂದರು. ಸುಮಾರು 11 ಕಿ.ಮೀ ಜರಗಿದ ಓಟದಲ್ಲಿ ಹಿರಿಯ ವಿಭಾಗದಲ್ಲಿ ಪುರುಷರು, ಮಹಿಳೆಯರು, ಯುವಕ, ಯುವತಿಯರು ಪಾಲ್ಗೊಂಡಿದ್ದರು. ಯುವಕರ ವಿಭಾಗದಲ್ಲಿ ಪ್ರಥಮ ಅನಿಲ್ ಕೋಟ, ದ್ವಿತೀಯ ಸಚಿನ್, ತೃತೀಯ ಲಾರ ಫ್ರಾನ್ಸಿಸ್, ಚತುರ್ಥ ದಿನೇಶ್ ಉಡುಪಿ, ಪಂಚಮ ಸ್ಥಾನವನ್ನು ವಿಜಯಕುಮಾರ್ ನಗದು, ಪ್ರಶಸ್ತಿ ಪತ್ರದೊಂದಿಗೆ ಪಡೆದುಕೊಂಡರು. ಯುವತಿಯರ ವಿಭಾಗದಲ್ಲಿ ಪ್ರಥಮ ಗಾಯತ್ರಿ, ದ್ವಿತೀಯ ಜಸ್ಮಿತ ಕೊಡಂಕಿಲ, ತೃತೀಯ ಕಾವೇರಿ, ಚತುರ್ಥ ಪವಿತ್ರ, ಪಂಚಮ ಸ್ಥಾನವನ್ನು ಪ್ರಿಯಾಂಕ ನಗದು, ಪ್ರಶಸ್ತಿ ಪತ್ರದೊಂದಿಗೆ ಪಡೆದುಕೊಂಡರು. ಈ ಸಂದರ್ಭ ಶ್ರೀಶ ನಾಯಕ್, ನಯನ ಗಣೇಶ್, ಶಿಲ್ಪ ಸುವರ್ಣ, ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್ ಪಡುಬಿದ್ರಿ, ನೀತಾ ಗುರುರಾಜ್, ರವಿ ಶೆಟ್ಟಿ ಪಡುಬಿದ್ರಿ, ಯಶೋಧ, ಸಂತೋಷ್, ಸುರೇಂದ್ರ ಪಣಿಯೂರು, ಸುಮಂಗಳ ಮತ್ತಿತರರು ಉಪಸ್ಥಿತರಿದ್ದರು.

ಹೇರೂರು : ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ; ಧಾರ್ಮಿಕ ಸಭಾ ಕಾರ್ಯಕ್ರಮ

Thumbnail
Posted On: 14 Aug 2022, 10:28 AM

ಕಾಪು : ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ಮತ್ತು ಮಹಿಳಾ ಬಳಗ ಹೇರೂರು ಇವರ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಭಜನಾ ಮಂಡಳಿಯ ಮುಂಭಾಗದ ಇಂಟರ್ಲಾಕ್ ಉದ್ಘಾಟನೆಯನ್ನು ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರ್ಮಿಳ ಆಚಾರ್ಯ ಉದ್ಘಾಟಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ದಕ್ಷಿಣ ಕನ್ನಡ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ, ಸನಾತನ ಸಂಸ್ಥೆ ಉಡುಪಿಯ ವಿಜಯಣ್ಣ ಅತಿಥಿಗಳಾಗಿ ಭಾಗವಹಿಸಿದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ 85 ಶೇಕಡಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ ಪ್ರಿಯಾಂಕ ಆಚಾರ್ಯ ಹೇರೂರು ಇವರನ್ನು ಅಭಿನಂದಿಸಲಾಯಿತು. ಮಜೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಧುಸೂಧನ ಸಾಲ್ಯಾನ್, ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ದೇವಾಡಿಗ, ಮಹಿಳಾ ಬಳಗದ ಅಧ್ಯಕ್ಷರಾದ ಶಶಿಕಲಾ ದೇವಾಡಿಗ, ಮಜೂರು ಗ್ರಾಮ ಪಂಚಾಯತ್ ಸದಸ್ಯರಾದ ಮಂಜುಳಾ ಆಚಾರ್ಯ, ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂದೀಪ್ ರಾವ್, ಗಣೇಶ್ ಶೆಟ್ಟಿ, ಸದಸ್ಯರಾದ ಪ್ರಸಾದ್ ಶೆಟ್ಟಿ ಒಳ ದೂರು, ವಿಜಯ ಧೀರಜ್, ಜಿತೇಶ್ ಶೆಟ್ಟಿ, ಮಜೂರು ಗ್ರಾಮ ಪಂಚಾಯತ್ ಪಿಡಿಒ ವಿಲಾಸಿನಿ ಉಪಸ್ಥಿತರಿದ್ದರು. ಶ್ರೀ ಗುರು ರಾಘವೇಂದ್ರ ಮಹಿಳಾ ಬಳಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸುನಿತಾ ಸೇರಿ ಗಾರ್ ಮತ್ತು ಕುಮಾರಿ ಸುರಭಿ ಪ್ರಾರ್ಥಿಸಿದರು. ದಿನೇಶ್ ದೇವಾಡಿಗ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಉದಯ ದೇವಾಡಿಗ ಮತ್ತು ಸುಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಪ್ರಭು ವಂದಿಸಿದರು.

ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ

Thumbnail
Posted On: 13 Aug 2022, 10:25 PM

ಕಾಪು : ತಾಲೂಕಿನ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಒಂದು ಮಗುಚಿ ಬಿದ್ದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ಮರದ ತುಂಡುಗಳನ್ನು ಹೇರಿಕೊಂಡು ಸಾಗುತ್ತಿದ್ದ ಟೆಂಪೋ ಪಲ್ಟಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಪಡುಬಿದ್ರಿ : ಹಿಂದು ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ

Thumbnail
Posted On: 13 Aug 2022, 10:13 PM

ಪಡುಬಿದ್ರಿ : ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಶನಿವಾರ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು. ಪಡುಬಿದ್ರಿಯ ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರದಲ್ಲಿ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಪಂಜಿನ ಮೆರವಣಿಗೆಯು ಪಡುಬಿದ್ರಿ ಪೇಟೆಯಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮವನ್ನು ಹಿಂದು ಮುಖಂಡ ಗಣರಾಜ್ ಭಟ್ ಕೆದಿಲ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ತಾಯಿ ಭಾರತಿ ಘೋಷಣೆ, ಕೈಯಲ್ಲಿ ಪಂಜು ಅಖಂಡ ಭಾರತದ ಕಲ್ಪನೆಗೆ ನಾಂದಿ. ದೇಶಕ್ಕಾಗಿ ಶ್ರಮಿಸಿದ ಮಹನೀಯರ ಶ್ರಮ, ಬಲಿದಾನ ನಮ್ಮ ಜೀವನಕ್ಕೆ ನಾಂದಿ ಬುನಾದಿ ಎಂಬ ಸತ್ಯ ಸಂಗತಿಯನ್ನು ಅರಿವು ಮಾಡುವುದಕ್ಕೆ ಈ ಅಖಂಡ ಭಾರತ ಸಂಕಲ್ಪ ದಿನ. ಇಂದಿನ ಪಠ್ಯ ಪುಸ್ತಕದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬ್ರಿಟಿಷರಿಂದ ಬಂತೆಂದಿದೆ. ಆದರೆ ಈ ಸ್ವಾತಂತ್ರ್ಯ ಯಾರ ಸೊತ್ತು ಅಲ್ಲ. ಇದು ಬ್ರಿಟಿಷರ ಭಿಕ್ಷೆಯಲ್ಲ ನಮ್ಮವರ ರಕ್ತ ಹರಿಸಿ ಗಳಿಸಿದ ಸ್ವಾತಂತ್ರ್ಯ. ಸ್ವಾತಂತ್ರ್ಯವೆಂದರೆ ಬ್ರಿಟಿಷರೊಂದಿಗಿನ ಹೋರಾಟವೆಂದು ಪಠ್ಯ ಪುಸ್ತಕ ತೋರಿಸುತ್ತದೆ. ಸತ್ಯ ಸಂಗತಿಗಳನ್ನು ಮರೆಮಾಚಲಾಗಿದೆ. ಅದನ್ನು ಲೋಕಕ್ಕೆ ಸಾರ ಬೇಕಾಗಿದೆ. ಇದನ್ನೆಲ್ಲ ನೆನಪಿಸಲು ಅಖಂಡ ಭಾರತ ಸಂಕಲ್ಪ ಎಂದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾರಾಯಣ್ ರಾವ್ ಶಿವಾಲಯ, ಶಂಕರ್ ಕಂಚಿನಡ್ಕ, ರಿಕೇಶ್ ಕಡೆಕಾರು, ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರಸಾದ್ ಪಲಿಮಾರು ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.