Updated News From Kaup

ತುಳುಕೂಟ ಬೆಂಗಳೂರಿನ ವತಿಯಿಂದ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ

Thumbnail
Posted On: 28 Jul 2022, 06:04 PM

ಉಡುಪಿ : ತುಳುಕೂಟ ಬೆಂಗಳೂರಿನ ವತಿಯಿಂದ ಪ್ರತಿ ವರುಷ ಬೆಂಗಳೂರಿನಲ್ಲಿ ವಾಸವಾಗಿರುವ. ತುಳುನಾಡಿನ ಜನರಿಗೆ ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ಆಷಾಢ ಮಾಸದಲ್ಲಿ ಉಪಯೋಗಿಸುವ ಕಷಾಯ ಮತ್ತು ಮೆಂತೆ ಗಂಜಿ ವಿತರಣಾ ಕಾರ್ಯಕ್ರಮವು ಶೇಷಾದ್ರಿಪುರದಲ್ಲಿರುವ ಶ್ರೀ ರಾಘವೇಂದ್ರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ತಳುಕೂಟ ಬೆಂಗಳೂರಿನ ಅಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಉಪಾಧ್ಯಕ್ಷ ರಾದ ಅಜಿತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸುಂದರ್ ರಾಜ್ ರೈ, ಕೋಶಾಧಿಕಾರಿ ಮಾಳ ಹರ್ಷೇಂದ್ರ ಜೈನ್, ಜೊತೆ ಕಾರ್ಯದರ್ಶಿ ಗಣೇಶ್ ಗುಜಾರಾನ್, ಮಹಿಳಾ ಸಮಿತಿಯ ಉಪಾಧ್ಯಕ್ಷೆ ಸೇವಾಂತಿ ಶೆಟ್ಟಿ, ಸುವರ್ಣ ಮಹೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕೆ.ವಿ ರಾಜೇಂದ್ರ ಕುಮಾರ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಕಾಂತಿ ಶೆಟ್ಟಿ, ಉಮೇಶ್ ಕುಮಾರ್ ರೈ, ಸುಧಾ ಪುತ್ತೂರಾಯ, ಪ್ರದೀಪ್, ಮೆಂಡೋಷ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಬಂಟರ ಸಂಘ ಬೆಂಗಳೂರು, ತುಳುವೆರೆಂಕುಲು ಬೆಂಗಳೂರು, ತುಳುವೆರ ಚಾವಾಡಿ, ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಮತ್ತು ಬೆಂಗಳೂರಿನ ಇನ್ನಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತಿ ಇದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ವಿದ್ಯಾರ್ಥಿಗಳಿಗೆ 500 ಗಿಡ ವಿತರಣೆ

Thumbnail
Posted On: 28 Jul 2022, 05:53 PM

ಉಡುಪಿ : ವನಮಹೋತ್ಸವದಂತಹ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯದೆ, ನಾವು ನೆಡುವ ಪ್ರತಿ ಗಿಡವು ವೃದ್ಧಿಯಾಗುವಂತೆ ನೋಡಬೇಕು. ಪ್ರಕೃತಿಯಲ್ಲಿ ನಾವು ನೆಟ್ಟ ಗಿಡ ಮರವಾಗಿ ಬೆಳೆದಾಗ ಅದರಿಂದ ನಮಗೂ ನೆಮ್ಮದಿ ಸಿಗುತ್ತದೆ. ವನಮಹೋತ್ಸವದಂತಹ ಕಾರ್ಯಕ್ರಮಗಳು ಪವಿತ್ರ ಕಾರ್ಯಕ್ರಮವೆಂದು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ ಲೋಬೋ ತಿಳಿಸಿದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ನೇತೃತ್ವದಲ್ಲಿ ಉದ್ಯಾವರ ಗ್ರಾಮದ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ 500 ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಗಿಡ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂತ ಫ್ರಾನ್ಸಿಸ್ ಝೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ, ಕಾರ್ಯಕ್ರಮದ ಪ್ರಾಯೋಜಕರು ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಆಗಿರುವ ಯೋಗೀಶ್ ಕೋಟ್ಯಾನ್ ಮಾತನಾಡುತ್ತಾ, ತಾಪಮಾನ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಪರಿಸರವನ್ನು ಉಳಿಸಬಹುದು. ಮಾತ್ರವಲ್ಲದೆ ಕಾಲಕಾಲಕ್ಕೆ ಬೇಕಾದ ಗಾಳಿ ಮಳೆ ನಮಗೆ ದೊರಕುತ್ತದೆ. ವಿದ್ಯಾರ್ಥಿಗಳು ಇಂದು ಪಡಕೊಂಡ ಗಿಡಗಳನ್ನು ತಮ್ಮ ಮನೆಯ ಆವರಣದಲ್ಲಿ ಬೆಳೆಸಿ ಉತ್ತಮ ರೀತಿಯಲ್ಲಿ ಪೋಷಣೆ ಮಾಡಿ. ಮುಂದಿನ ದಿನಗಳಲ್ಲಿ ಒಳ್ಳೆಯ ಗಿಡ ಬೆಳೆಸಿದವರೆಗೆ ಪ್ರೋತ್ಸಾಹ ಧನ ನೀಡುತ್ತೇನೆ ಎಂದು ತಿಳಿಸಿದರು. ಸಂತ ಫ್ರಾನ್ಸಿಸ್ ಝೇವಿಯರ್ ಕನ್ನಡ ಪ್ರೌಢಶಾಲೆ, ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಸಂತ ಫ್ರಾನ್ಸಿಸ್ ಝೇವಿಯರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಈ ಸಂದರ್ಭದಲ್ಲಿ ಗಿಡ ವಿತರಣೆ ನಡೆಸಲಾಯಿತು. ವಿವಿಧ ಶಾಲಾ ಕಾಲೇಜುಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಮತ್ತು ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಗಿಡ ನೀಡುವುದರ ಮೂಲಕ ವಾಗಿ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಲಯ ಉಡುಪಿ ಇದರ ಅರಣ್ಯ ಪ್ರೇರಕರಾಗಿರುವ ಪ್ರತ್ಯಕ್ಷ್ ಕಾಮತ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಲಯನ್ಸ್ ಜಿಲ್ಲಾ ಡೈರೆಕ್ಟರಿ ಎಡಿಟರ್ ಸ್ವಪ್ನಾ ಸುರೇಶ್, ವಲಯ ಎರಡರ ವಲಯಾಧ್ಯಕ್ಷ ಜೋನ್ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷ ಪ್ರವೀಣ್ ಕರ್ವಾಲೋ, ಕ್ಯಾಬಿನೆಟ್ ಸದಸ್ಯ ಗೊಡ್ಫ್ರಿ ಡಿಸೋಜಾ, ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ವಿಜಯ ಕುಮಾರ್ ಉದ್ಯಾವರ, ಶಾಲಾ ಕಾಲೇಜು ಮುಖ್ಯೋಪಾಧ್ಯಾಯರು ಮತ್ತು ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರೆ, ಕೋಶಾಧಿಕಾರಿ ರೋಶನ್ ಕ್ರಾಸ್ತಾ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.

ಪ್ರವೀಣ್ ನೆಟ್ಟಾರು ಹತ್ಯೆ - ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳ ಖಂಡನೆ

Thumbnail
Posted On: 28 Jul 2022, 05:32 PM

ಕಾಪು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಭಾಗದಲ್ಲಿ ಪ್ರವೀಣ್ ನೆಟ್ಟಾರು ಎಂಬ ಯುವಕನ ಕೊಲೆಯಾಗಿದೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಕಳೆದ ಹಲವಾರು ವರ್ಷಗಳಿಂದ ತಮ್ಮ ನಾಯಕರ ಮಾತುಗಳನ್ನು ಕೇಳಿ ಉದ್ರೇಕಗೊಂಡು ಕೆಲವು ಯುವಕರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಯಾವುದೇ ರಾಜಕಾರಣಿಗಳ ಮಕ್ಕಳು ಅಥವಾ ಶ್ರೀಮಂತರ ಮಕ್ಕಳು ಸಾಯುತ್ತಿಲ್ಲ ಬದಲಾಗಿ ಹಿಂದುಳಿದ ವರ್ಗದ ಯುವಕರು, ಬಡವರ ಮನೆಯ ಮಕ್ಕಳು ಈ ಕೋಮುಗಲಭೆಯ ಕಾರಣದಿಂದಾಗಿ ಸಾಯುತ್ತಿದ್ದಾರೆ ಎಂದು ಉಡುಪಿ ಜಿಲ್ಲೆಯ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ಪ್ರಕಟನೆಯ ಮೂಲಕ ತಿಳಿಸಿದ್ದಾರೆ. ಬಿಜೆಪಿ ನಾಯಕರಿಗೆ ತಮ್ಮ ಕಾರ್ಯಕರ್ತರನ್ನೇ ರಕ್ಷಣೆ ಮಾಡಲಿಕ್ಕೆ ಆಗ್ತಾ ಇಲ್ಲ. ಇನ್ನು ನಮ್ಮ ರಾಜ್ಯದ ಜನ ಸಾಮಾನ್ಯರ ರಕ್ಷಣೆ ಇವರು ಹೇಗೆ ಮಾಡಲು ಸಾಧ್ಯ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ, ಬಿಜೆಪಿಯವರಿಗೆ ಅಧಿಕಾರ ಅನುಭವಿಸಲಿಕ್ಕೆ ಮಾತ್ರ ಗೊತ್ತಿದೆ, ಚಲಾಯಿಸಲು ಗೊತ್ತಿಲ್ಲ. ನಾನು ಎಲ್ಲಾ ಸಮುದಾಯದ ಯುವಕರಿಗೆ ಮನವಿಯನ್ನು ಮಾಡುತ್ತೇನೆ ನಿಮ್ಮ ನಿಮ್ಮ ನಾಯಕರ ಉದ್ರೇಕದ ಮಾತನ್ನು ಕೇಳಿ ನೀವು ಉದ್ರೇಕಗೊಂಡು ನಿಮ್ಮ ಜೀವವನ್ನು ಕಳೆದುಕೊಳ್ಳಬೇಡಿ, ಇನ್ನಷ್ಟು ವರ್ಷ ಬದುಕಿ ಬಾಳಬೇಕಾದ ಜೀವ ನಿಮ್ಮದು, ನಿಮ್ಮ ಜೀವನವನ್ನು ಕಟ್ಟಿಕೊಳ್ಳಿ ಎಂದು ಮನವಿಯನ್ನು ಮಾಡುತ್ತೇನೆ. ಕೊಲೆಯನ್ನು ಮಾಡಿದಂತಹ ಪಾತಕಿಗಳಿಗೆ ಉಗ್ರವಾಗಿ ಶಿಕ್ಷೆಯನ್ನು ನೀಡಬೇಕು, ಅವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಪಕ್ಷದ ಕಾರ್ಯಕರ್ತರಿಗೆ ರಕ್ಷಣೆಕೊಡದ ಬಿಜೆಪಿ ಯಾವ ಪುರುಷಾರ್ಥಕ್ಕೆ ಜನೋತ್ಸವ ಮಾಡುತ್ತೆ ? - ಕೃಷ್ಣಮೂರ್ತಿ ಆಚಾರ್ಯ

Thumbnail
Posted On: 28 Jul 2022, 05:18 PM

ಉಡುಪಿ: ಬೆಳ್ಳಾರೆಯ ಪ್ರವೀಣ್ ನೆಟ್ಟಾರೆ ಹತ್ಯೆ ಪ್ರಕರಣ ಖಂಡನೀಯ. ಕರ್ನಾಟಕದ ಜನತೆಗೆ ಹಾಗೂ ಸ್ವತಃ ತಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆನೇ ರಕ್ಷಣೆ ಕೊಡುವ ಸಾಮರ್ಥ್ಯ ಇಲ್ಲದ ಬಿಜೆಪಿ ಸರ್ಕಾರ ಯಾವ ಮುಖ ಇಟ್ಕೊಂಡು ಜನೋತ್ಸವ ಮಾಡುತ್ತೆ..? ಈ ಬಿಜೆಪಿ ಸರ್ಕಾರ ಬಂದ ನಂತರ ದಿನದಿಂದ ದಿನ ಹಿಂದೂ ಮುಸ್ಲಿಂ ಸಹೋದರರುಗಳ ಹತ್ಯೆ ಮತ್ತಷ್ಟು ನಿರಂತರವಾಗಿ ಜಾಸ್ತಿ ಆಗ್ತಾನೆ ಇದೆ. ಹತ್ಯೆಯಾದ ಕುಟುಂಬಗಳಿಗೆ ಇನ್ನೂ ಸರಿಯಾಗಿ ನ್ಯಾಯ ಸಿಕ್ಕಿಲ್ಲ ಹೀಗಿರುವಾಗ ಬಿಜೆಪಿ ಯಾವ ಮುಖದಲ್ಲಿ ಜನೋತ್ಸವ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿಯ ಆಚಾರ್ಯ ಪ್ರಶ್ನಿಸಿದ್ದಾರೆ. ಒಂದು ಕಡೆ ಬಿಜೆಪಿ ಸರ್ಕಾರ ಕಾಂಟ್ರ್ಯಾಕ್ಟರುಗಳಿಂದ 40% ಕಮಿಷನ್ ಭ್ರಷ್ಟಾಚಾರ ಮಾಡುತ್ತಿದೆ. ಮತ್ತೊಂದು ಕಡೆ ಜನರಿಗೆ ನಿರಂತರವಾಗಿ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ಏರಿಕೆ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಇಷ್ಟೆಲ್ಲ ಜನರಿಗೆ ತೊಂದರೆ ಕೊಟ್ಟು ಯಾವ ಮುಖ ಇಟ್ಟುಕೊಂಡು ಜನೋತ್ಸವ ಮಾಡುತ್ತಾರೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿಯೂ ಬಿಜೆಪಿ ಸರಕಾರ ವಿಫಲವಾಗಿದೆ, ಸರ್ಕಾರ ಬರಿ ಕಠಿಣ ಕ್ರಮ ಕಠಿಣ ಕ್ರಮ ಎನ್ನುತ್ತಾ ಬರಿ ಮಾತಿಗೆ ಮಾತ್ರ ಸೀಮಿತವಾಗಿದೆ ಹೊರತು ದುಷ್ಕರ್ಮಿಗಳ ದಾಳಿ ಮಾತ್ರ ಕಡಿಮೆ ಆಗಿಲ್ಲ. ಮುಂದುವರಿತಾನೆ ಇದೆ ಅಮಾಯಕರು ಮತ್ತಷ್ಟು ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಯಾವ ಮುಖ ಇಟ್ಕೊಂಡು ಜನೋತ್ಸವ ಮಾಡಲು ಹೊರಟಿದೆ. ಮೊದಲು ಅಮಾಯಕರ ಜನರ ರಕ್ಷಣೆಗೆ ಮುಂದಾಗಲಿ ದಿನಬಳಕೆ ವಸ್ತುಗಳ ನಿರಂತರ ಬೆಲೆ ಏರಿಕೆ ಕಡಿಮೆ ಮಾಡಲಿ ಜಿ ಎಸ್ ಟಿ ತೆರಿಗೆ ತಕ್ಷಣ ನಿಲ್ಲಿಸಿ. ಅದೇ ರೀತಿ ಪ್ರವೀಣ್ ನೆಟ್ಟಾರೆ ಕೊಲೆ ಖಂಡನೀಯ ಪ್ರಕರಣದ ಆರೋಪಿಗಳನ್ನು ಯಾವುದೇ ಜಾತಿ ಧರ್ಮ ಲೆಕ್ಕಿಸದೆ ತಕ್ಷಣ ಬಂಧಿಸಿ,ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕಾಗಿದೆ ಅದೇ ರೀತಿ ಇತ್ತೀಚೆಗೆ ಬೆಳ್ಳಾರೆ ಪರಿಸರದಲ್ಲಿ ಮಸೂದ್ ಕೊಲೆ ಸಂಭವಿಸಿದೆ ಇದು ಅತ್ಯಂತ ಖಂಡನೀಯ. ಚುನಾವಣೆ ಸಂದರ್ಭ ಹಿಂದು ಮುಸ್ಲಿಮರ ಹತ್ಯೆಯನ್ನು ಮುಂದೆ ಇಟ್ಟು ಕೊಂಡು ರಾಜಕೀಯ ಬೇಳೆ ಬೇಯಿಸುವುದು ಬಿಜೆಪಿಗೆ ಚಾಲಿಯಾಗಿ ಹೋಗಿದೆ. ಪ್ರಕರಣದ ಆರೋಪಿಗಳು ಯಾರೇ ಆದರೂ ಪಕ್ಷಾತೀತವಾಗಿ ಯಾವುದೇ ಜಾತಿ ಧರ್ಮ ನೋಡದೆ ಸೂಕ್ತ ತನಿಖೆ ನಡೆಸಿ ಅವರಿಗೆ ಶಿಕ್ಷೆ ಆಗಬೇಕು ಇಂತಹ ಘಟನೆಗಳು ಪದೇ ಪದೇ ಮುಂದೆ ಯಾವತ್ತೂ ಆಗದಂತೆ ಕ್ರಮ ವಹಿಸಬೇಕೆಂದು ಮಾಧ್ಯಮದ ಮೂಲಕ ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಉಡುಪಿ ವಿಧಾನ ಸಭಾ ಕ್ಷೇತ್ರ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.

ಪ್ರವೀಣ್ ಪೂಜಾರಿ ನೆಟ್ಟಾರು ಹತ್ಯೆ: ಯುವವಾಹಿನಿ ಕೇಂದ್ರ ಸಮಿತಿ ಖಂಡನೆ

Thumbnail
Posted On: 27 Jul 2022, 11:03 PM

ಮಂಗಳೂರು : ಯುವವಾಹಿನಿಯ ಸದಸ್ಯರಾಗಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜದ ಅಭ್ಯುದಯಕ್ಕೆ ದುಡಿಯುತ್ತಿದ್ದ ಪ್ರವೀಣ್ ಪೂಜಾರಿ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ವಿಷಾದನಿಯ ವಿಷಯ. ಯುವವಾಹಿನಿಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಸಮಾಜಕ್ಕಾಗಿ ಚಿಂತಿಸುತ್ತಿದ್ದ ಒಬ್ಬ ಪ್ರಾಮಾಣಿಕ ಸದಸ್ಯನನ್ನು ನಾವು ಕಳೆದು ಕೊಂಡಿದ್ದೇವೆ. ಪೊಲೀಸ್ ಇಲಾಖೆ ಹಂತಕರನ್ನು ಕೂಡಲೇ ಬಂಧಿಸಿ ಕಾನೂನುಕ್ರಮ ಜರಗಿಸುವಂತೆ ಸಂಘಟನೆಯು ಪೊಲೀಸ್ ಇಲಾಖೆಯನ್ನು ಈ ಹೇಳಿಕೆಯ ಮೂಲಕ ಆಗ್ರಹಿಸುತ್ತದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಉದಯ ಅಮೀನ್ ಮಟ್ಟು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಪು : ನಾಲ್ಕು ತಿಂಗಳ ಗ್ರಾ.ಪಂ. ಭತ್ಯೆಯನ್ನು ಸಂಕಷ್ಟದಲ್ಲಿರುವ ಗ್ರಾಮಸ್ಥನಿಗೆ ನೀಡಿ ಮಾನವೀಯತೆ ಮೆರೆದ ಫಹಿಮ್

Thumbnail
Posted On: 27 Jul 2022, 10:56 PM

ಬೆಳಪು : ಇಲ್ಲಿನ ನಿವಾಸಿಯಾದ ಗುರುರಾಜ್ ಆಚಾರ್ಯ ಹಲವಾರು ವರ್ಷಗಳಿಂದ ಇಲ್ಲಿನ ಜನತಾ ಕಾಲೋನಿ ಬಳಿಯ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದು ತನ್ನ ದಿನನಿತ್ಯ ಜೀವನ ನಡೆಸಲು ದನವನ್ನು ಸಾಕಿ ಹಾಲು ಮಾರಾಟ ಮಾಡಿ ಅದರಿಂದ ಬರುವ ಆದಾಯದಿಂದ ಕುಟುಂಬ ನಿರ್ವಹಿಸುತ್ತಿದ್ದಾರೆ. ಸುಮಾರು 65 ವಯಸ್ಸಿನ ಗುರುರಾಜ್ ಆಚಾರ್ಯರಿಗೆ ಸಹಾಯಕ್ಕಾಗಿ ಮಕ್ಕಳಿಲ್ಲ. ತನ್ನ ಆದಾಯದ ಮೂಲ ದನಗಳ ಗೊಬ್ಬರ ಹಾಕುವ ಗುಂಡಿ ಸರಿ ಇಲ್ಲದ ಕಾರಣ ಪಂಚಾಯತಿಗೆ ಮನವಿ ಮಾಡಲಾಗಿತ್ತಾದರೂ ಸರಿಯಾದ ಮನೆಯ ದಾಖಲೆಗಳು ಇರದ ಕಾರಣ ನಿರಾಕರಿಸಲಾಗಿತ್ತು. ಇವರ ಬಡತನದ ಜೀವನದ ಸ್ಥಿತಿಯನ್ನು ಅರಿತ ಎಸ್ಡಿಪಿಐ ಬೆಂಬಲಿತ ಬೆಳಪು ಗ್ರಾ.ಪಂ ಸದಸ್ಯ ಸಮಾಜ ಸೇವಕ ಫಹಿಮ್ ಬೆಳಪು ಪಂಚಾಯಿತಿಯಿಂದ ಬರುವ ತನ್ನ ನಾಲ್ಕು ತಿಂಗಳ ಭತ್ಯೆಯನ್ನು ತನ್ನ ವಾರ್ಡಿನ ನಿವಾಸಿ ಗುರುರಾಜ್ ಆಚಾರ್ಯ ಅವರಿಗೆ ಗೊಬ್ಬರ ಗುಂಡಿ  ದುರಸ್ತಿ ಮಾಡಲು ನೀಡಿದರು. ಇದೇ ಸಂದರ್ಭದಲ್ಲಿ ಎಸ್ಡಿಪಿಐ ಬೆಳಪು ಗ್ರಾಮ ಸಮಿತಿ ವತಿಯಿಂದ, ದಾನಿಗಳ ನೆರವಿನಿಂದ ಗೊಬ್ಬರ ಗುಂಡಿ ದುರಸ್ತಿ ಮಾಡಲು ಅಗತ್ಯ ಕಾಮಗಾರಿಯ ವಸ್ತುಗಳನ್ನು ನೀಡಲು ತೀರ್ಮಾನಿಸಲಾಯಿತು. ಜನಸೇವಕ ಫಹಿಮ್ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶವನ್ನು ಮಾದರಿಯಾಗಿರಿಸಿಕೊಂಡ ಫಹಿಮ್ ಬೆಳಪು ಇತ್ತೀಚಿಗೆ ಬೆಂಕಿ‌ ಅನಾಹುತದಲ್ಲಿ ತಾನೇ ರಕ್ಷಣಾ ಕಾರ್ಯಾಚರಣೆಗೆ ತೆರಳಿ ಅಲ್ಲಿ ನಡೆದ ಒಂದು ಅನಾಹುತದಲ್ಲಿ ತನ್ನ ಒಂದು ಕಣ್ಣನ್ನು ಕಳೆದುಕೊಂಡು, ಇನ್ನು ಸರಿಯಾಗಿ ಚೇತರಿಸಿಕೊಳ್ಳದೆ ಇರುವ ಈ ಸಂದರ್ಭದಲ್ಲಿ  ತನ್ನ ವಾರ್ಡಿನ ಜನರ ಕಷ್ಟಕ್ಕೆ ನೆರವಾಗುವ ಅವರ ಗುಣಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷರಾದ ಮೊಯಿನುದ್ದೀನ್ ಬೆಳಪು, ಗ್ರಾಮ ಸಮಿತಿ ಸದಸ್ಯರಾದ ಸಿದ್ದಿಕ್ ಬೆಳಪು , ಜಮೀರ್ ಬೆಳಪು , ಸಲೀಂ ಅಶ್ಪಾಕ್ ಉಪಸ್ಥಿತರಿದ್ದರು.

ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಹೋಬಳಿ ಮಟ್ಟದ ಖೋಖೋ ಪಂದ್ಯಾಟ

Thumbnail
Posted On: 27 Jul 2022, 05:23 PM

ಉಚ್ಚಿಲ : ಇಲ್ಲಿನ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಹೋಬಳಿ ಮಟ್ಟದ ಖೋಖೋ ಪಂದ್ಯಾಟ ನಡೆಯಿತು. ಹೋಬಳಿ ಮಟ್ಟದ ನಾಲ್ಕು ಶಾಲೆಗಳ ಎಂಟು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿತು. ಪಂದ್ಯಾಟವನ್ನು ಉಡುಪಿ ಟೌನ್ ಬ್ಯಾಂಕ್ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಖೋಖೋ ಪಂದ್ಯಾಟವು ಗ್ರಾಮೀಣ ಕ್ರೀಡೆಯಾಗಿದ್ದು, ವಿದ್ಯಾರ್ಥಿಗಳಿಂದ ಇಂತಹ ಹೆಚ್ಚಿನ ಕ್ರೀಡೆಗಳನ್ನು ಆಡಿಸುವ ಮೂಲಕ ನಮ್ಮ ನಾಡಿನ ಆಟಗಳನ್ನು ಉಳಿಸಬಹುದು ಎಂದರು. ಮುಖ್ಯ ಅತಿಥಿಯಾಗಿದ್ದ ಪ್ರೌಢಶಾಲಾ ಸಂಚಾಲಕ ಗಂಗಾಧರ ಸುವರ್ಣ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಗೆಲ್ಲುವ ಪ್ರಯತ್ನ ಮಾಡಿ ಎಂದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಸಂಚಾಲಕ ಮೋಹನ್‌ದಾಸ್ ಶೆಟ್ಟಿ, ಬಡಾ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ, ಗ್ರಾಮ ಪಂಚಾಯತ್ ಸದಸ್ಯೆ ಕಲಾವತಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಬಿಎಸ್ ಆಚಾರ್ಯ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸುರೇಶ್ ಕುಲಾಲ್ ನಿರೂಪಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.

ಅದಮಾರು : ಕಾರ್ಗಿಲ್ ವಿಜಯ ದಿವಸ ಆಚರಣೆ ಮತ್ತು ಯೋಧ ನಮನ ಕಾರ್ಯಕ್ರಮ

Thumbnail
Posted On: 27 Jul 2022, 05:10 PM

ಅದಮಾರು : ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಅದಮಾರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಅದಮಾರಿನ ವೀರಯೋಧ ಬಾಲಕೃಷ್ಣ ಟಿ. ಭಂಡಾರಿ ಮಾತನಾಡಿ ಕಾರ್ಗಿಲ್ ಯುದ್ಧವು ದೇಶದ ವೀರತ್ವದ ಸಂಕೇತ. ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ವೈರಿ ಪಡೆಗಳನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಪ್ರದೇಶವನ್ನು ಮರಳಿ ಪಡೆಯುವಲ್ಲಿ ಭಾರತ ಯಶಸ್ವಿಯಾಗಿತ್ತು. ಇಂದಿನ ಯುವಜನರಲ್ಲೂ ಸೈನ್ಯಕ್ಕೆ ಸೇರುವ ತುಡಿತ ಜಾಗೃತಗೊಳ್ಳಬೇಕಾಗಿದೆ. ಇದೊಂದು ದೇಶ ಸೇವೆಗೆ ಇರುವಂತಹ ಅವಕಾಶ. ಯುವಶಕ್ತಿ ಅಗ್ನಿಪಥ ದ ಮೂಲಕ ಅಗ್ನಿವೀರಾಗಬೇಕೆಂದು ಆಶಿಸಿದರು. ಯೋಧ ನಮನ ಮತ್ತು ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಎಂ. ರಾಮಕೃಷ್ಣ ಪೈ ಮಾತನಾಡಿ ಹಿಂದೆ ತಾವು NCC ಆಫೀಸರ್ ಆಗಿದ್ದಾಗ ಮಿಲಿಟರಿ ಶಿಸ್ತಿನ ಬಗ್ಗೆ ನೆನಪಿಸಿಕೊಂಡರು. ಸೈನ್ಯದಲ್ಲಿರುವ ಶಿಸ್ತು ಜೊತೆಗೆ ಅದರ‌ಲ್ಲಿರುವ ಅವಕಾಶಗಳನ್ನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸದುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ನಿವೃತ್ತ ಹಿಂದಿ ಉಪನ್ಯಾಸಕರಾದ ಏಕನಾಥ ಡೊಂಗ್ರೆ , ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಡಾ| ಜಯಶಂಕರ್ ಕಂಗಣ್ಣಾರು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕೀರ್ತಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ದೇವಿ ಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಆದಿತ್ಯ ವಂದಿಸಿದರು.

ಆಟಿ ಅಮಾವಾಸ್ಯೆ : ಆಟಿದ ಮರ್ದ್

Thumbnail
Posted On: 27 Jul 2022, 03:00 PM

ಆಟಿ ತಿಂಗಳ(ಕರ್ಕಾಟಕ ಮಾಸ) ಅಮಾವಾಸ್ಯೆಯಂದು "ಆಟಿದ ಮರ್ದ್' (ಹಾಳೆ ಮರದ ಕೆತ್ತೆಯಿಂದ ತಯಾರಿಸಿದ ಕಷಾಯ ಕುಡಿಯುವ - ಮೆತ್ತೆ ಗಂಜಿ ಊಟಮಾಡುವ) ಕುಡಿಯುವ ಸಂಪ್ರದಾಯ ಇವತ್ತಿಗೂ ಚಾಲ್ತಿಯಲ್ಲಿದೆ. ಆದರೆ ಇತ್ತೀಚೆಗೆ ಉತ್ಸಾಹಿ ಸಂಘಟನೆಗಳು , ಆಚರಣೆ - ಸಂಸ್ಕೃತಿ ಪ್ರೀತಿಯ ಮಂದಿ 'ಕಷಾಯ' ತಯಾರಿಸಿ ಮನೆ,ಮನೆಗಳಿಗೆ ಹಂಚುವ , ಆಮೂಲಕ 'ಆಟಿಯ ಮದ್ದು' ಕುಡಿಯುವ ಸಂಪ್ರದಾಯವೊಂದನ್ನು ನೆನಪಿಸುತ್ತಾ , ಆಚರಿಸುವಂತೆ  ಪ್ರೇರೇಪಿಸುವ ಕೆಲಸ ನಡೆಯುತ್ತಿದೆ ,ಇದು ಸಂತೋಷದ ಸಂಗತಿ. ಯಾವ ಮರದ ಕೆತ್ತೆ , ಯಾವ ಕ್ರಮದಲ್ಲಿ ಯಾವ ವೇಳೆಯಲ್ಲಿ ತೆಗೆಯಬೇಕು ಮತ್ತು ಕಷಾಯ ತಯಾರಿಯ ಕ್ರಮ ,ಕಷಾಯ ಕುಡಿಯುವವರಿಗೆ ತಿಳಿದರೆ ಈ ಸಂಪ್ರದಾಯ ಉಳಿಯಬಹುದು . ಮುಂದೊಂದು ದಿನ ಮೆಡಿಕಲ್ ಶಾಪ್ ಗಳಲ್ಲಿ' ಸಿದ್ಧ ಕಷಾಯ'  ದೊರೆಯುವ ದಿನವೂ ಬಂದೀತು. ಆಗ ಮಾತ್ರ ಈ ಸಂದರ್ಭದ ಆಚರಣೆಯಲ್ಲಿ ಪಾವಿತ್ರ್ಯ ಇಲ್ಲವಾಗಬಹುದು ಅಲ್ಲವೇ ?ಗದ್ದೆಗಳಲ್ಲಿ ಬೆಳೆಯುತ್ತಿರುವ ಬೆಳೆಯರಕ್ಷಣೆಗೆ ಕಾಸರ್ಕದ ಮರದ ಗೆಲ್ಲುಗಳನ್ನು ಕಡಿದು ಹಾಕುವ ಕ್ರಮವೂ ಇತ್ತು ಎಂಬುದು ಮರೆಯಾಗುತ್ತಿರುವ ವಿಷಯ.ಬೇಸಾಯ ಜೀವನಾಧಾರವಾಗಿದ್ದರೆ ಮಾತ್ರ ‌ ನಮ್ಮ ಆರೋಗ್ಯದೊಂದಿಗೆ ನಮ್ಮ ಬೆಳೆಯ ರಕ್ಷಣೆಯ ಕಾಳಜಿತಾನೇ ?   ಬಲಿಯೇಂದ್ರೆ ಸಂದಿ : "ಆಟಿದ ಅಮಾಸೆಗ್ ಆಳ್ ಕಡಪುಡುದು ಪಿನ್ಲ . ಸೋಣ ಸಂಕ್ರಾಂದಿಗ್ ಅಪ್ಪೆನ್ ಕಡಪುಡ್ದು ಕೊರ್ಲ . ಬೊಂತೆಲ್ದ  ಅಮಾಸೆಗ್ ಆಜಿ ದಿನತ ಬಲಿ , ಮೂಜಿ ದಿನತ  ಪೊಲಿ , ದೀಪೊಲಿದ ಪರ್ಬೊಗು ಈ ಬತ್ತ್ ದ್ ನಿನ್ನ ರಾಜ್ಯ ಬುಲೆ ಸಲೆ , ಬದ್ ಕ್ ಬಾಗ್ಯೊಲೆನ್ ತೂದು ಪೋಲಂದೆರ್ ಗೆ ನಾಲ್ ಕಯಿತ ನಾರಾಯಿಣ ದೇವೆರ್ ಗೆ." ಇದು ಪೊಳಲಿ ಶೀನಪ್ಪ ಹೆಗ್ಗಡೆ ಅವರು ಸಂಪಾದಿಸಿರುವ ' ತುಳುವಾಲ ಬಲಿಯೇಂದ್ರೆ' ಸಂಧಿಯ ಒಂದು ಒಂದು ಸನ್ನಿವೇಶ.     'ಬಲಿಯೇಂದ್ರೆ' ದೀಪಾವಳಿ (ಪರ್ಬ , ಕೊಡಿ ಪರ್ಬ , ತುಡರ ಪರ್ಬ) ಯ ಸಂದರ್ಭಕ್ಕೆ ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ, ಒಂದುಕಾಲದ ಪ್ರಜಾವತ್ಸಲನಾದ ಜನಪ್ರಿಯ ಅರಸ . ಪ್ರತಿವರ್ಷ ಆಗಮಿಸಿ ತನ್ನ ರಾಜ್ಯದ " ಬುಲೆ ಸಲೆ ಬದ್ಕ್ ಬಾಗ್ಯೊಲೆನ್ " (ಬೆಳೆಯ ಸಮೃದ್ದಿ , ಬದುಕು - ಭಾಗ್ಯ) ನೋಡಿ ಹೋಗುವ ಅವಕಾಶವನ್ನು ನಾಲ್ಕು ಕೈಯ ನಾರಾಯಣ ದೇವರಿಂದ ವರವಾಗಿ ಪಡೆದಿರುತ್ತಾನೆ.      ಸಂದಿ ಹೇಳುವಂತೆ ಬಲಿಯೇಂದ್ರೆ ನೇರವಾಗಿ 'ಬೊಂತೆಲ್'(ತುಲಾ ಮಾಸ) ತಿಂಗಳ ಅಮಾವಾಸ್ಯೆಯಂದು ಬರುವುದಲ್ಲ , ಬದಲಿಗೆ ಆಟಿ (ಕರ್ಕಾಟಕ ಮಾಸ) ಅಮಾವಾಸ್ಯೆಯಂದು ತನ್ನ ಆಳುಗಳನ್ನು ಕಳುಹಿಸಿ ತನ್ನ ರಾಜ್ಯದಲ್ಲಿ ಕೃಷಿ ಚಟುವಟಿಕೆ ಹೇಗೆ ಆರಂಭವಾಗಿದೆ ಎಂದು ತಿಳಿದುಕೊಳ್ಳುತ್ತಾನೆ (ಪಿನ್ಲ - ಪಿನ್ನೊನ್ಲ). ಆಟಿ ತಿಂಗಳ ಈ ಅಮಾವಾಸ್ಯೆಯಂದು ನಾವು 'ಆಟಿ ಮದ್ದು'  ಕುಡಿಯುತ್ತೇವೆ , ಬೆಳೆ ರಕ್ಷಣೆಗೂ ಕ್ರಮಕೈಗೊಳ್ಳುತ್ತೇವೆ.   "ಆಟಿ ಆಡೊಂದು ಪೋಪುಂಡು ಸೋಣ ಸೋಡೋಣ್ತ್ ಪೋಪುಂಡು" : ಇದೊಂದು ಜನಪದರಲ್ಲಿರುವ ಗಾದೆ. ಈ ತಿಳಿವಳಿಕೆ ಸಹಜವಾಗಿತ್ತು ,  ಆದರೆ ಈಗ ಮರೆತು ಹೋಗಿದೆ. ಕಾಲ ಬದಲಾಗಿದೆ . ಪ್ರಕೃತಿಯೊಂದಿಗಿನ ಸಹಬಾಳ್ವೆ ಅರ್ಥ ಕಳಕೊಂಡಿದೆ. ಮಳೆ ಆಧರಿಸಿ ಸಿದ್ದಗೊಂಡು ಲಾಗಾಯ್ತಿನಿಂದ ರೂಢಿಯಲ್ಲಿದ್ದ "ಕೃಷಿ ಸಂವಿಧಾನ"ಮರೆತು ಹೋಗಿದೆ , ಈ ಸಂಬಂಧದ ಸಾಂಸ್ಕೃತಿಕ ಆವರಣವೊಂದು  ಕಳಚಿ ಕೊಂಡಿದೆ . ಕೃಷಿ ಅವಲಂಬಿತ ಆಚರಣೆಗಳು ನೇಪಥ್ಯಕ್ಕೆ ಸರಿಯುತ್ತಿವೆ. ಕೃಷಿ - ಬೇಸಾಯದ ಅವಗಣನೆ , ಕೃಷಿ ಭೂಮಿಯ ಪರಿವರ್ತನೆ , ಕೃಷಿ ಲಾಭದಾಯಕವಾಗದೆ ಇರುವುದು , ಕೃಷಿ - ಬೇಸಾಯದಿಂದಲೇ ಸರ್ವ ಸಮೃದ್ದಿ ಎಂಬ ಚೆಂತನೆ - ಸ್ವೀಕಾರದ ನಂಬಿಕೆ ಹುಸಿಯಾಯಿತು . ಕೃಷಿ - ಬೇಸಾಯ ಅಪ್ರಸ್ತುತವಾಗುತ್ತಾ ಕೃಷಿ ಪ್ರಧಾನವಾಗಿ ರೂಪುಗೊಂಡ ಸಾಂಸ್ಕೃತಿಕ ಜೀವನಶೈಲಿ ಬದಲಾಯಿತು , ನಮ್ಮದ್ದಲ್ಲದ ಎಷ್ಟೋ ಆಚಾರ - ವಿಚಾರಗಳನ್ನು ಒಪ್ಪುವಂತಾಗುತ್ತದೆ.ಈ ಕಾರಣಗಳಿಂದ ಕೃಷಿ ಸಂಸ್ಕೃತಿಯಿಂದ ಪಡಿಮೂಡಿದ್ದ ಆಚರಣೆಗಳು ಅವಗಣಿಸಲ್ಪಟ್ಟುವು , ಒಂದು ಹಂತಕ್ಕೆ ಮರೆತೇ ಹೋಯಿತು . ಇಂತಹ ಸಾಂಸ್ಕೃತಿಕ ಮರೆವುಗೆ ಆಟಿ (ಕರ್ಕಾಟಕ ಮಾಸ), ಸೋಣ (ಸಿಂಹಮಾಸ) ತಿಂಗಳುಗಳ ಆಚರಣೆಗಳೂ ಸೇರಿಹೋದುವು. ಜಾಣ ಮರೆವು ?     ‌‌ ‌‌‌ ಬರಹ : ಕೆ.ಎಲ್.ಕುಂಡಂತಾಯ

ಬಂಟಕಲ್ಲು‌: ಶ್ರೀ ವಿಶ್ವಕರ್ಮ ಸಂಘ ಇದರ ಗಾಯತ್ರಿ ವೃಂದದ ಸದಸ್ಯರಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Thumbnail
Posted On: 26 Jul 2022, 11:20 PM

ಬಂಟಕಲ್ಲು : ಇಲ್ಲಿನ ಶ್ರೀ ವಿಶ್ವಕರ್ಮ ಸಂಘ ಇದರ ಗಾಯತ್ರಿ ವೃಂದದ ಸದಸ್ಯರಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಕಲಾವಿದೆ 12ನೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಿಂದ ಕರ್ನಾಟಕ ಯುವರತ್ನ ಪ್ರಶಸ್ತಿ ಹಾಗೂ ಕಲಾರತ್ನ ಪ್ರಶಸ್ತಿ ಪಡೆದ ಪಡುಬಿದ್ರೆ ರೂಪ ವಸುಂಧರಾ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಈ‌ ಸಂದರ್ಭ ಮಾತನಾಡಿದ ಅವರು ಪ್ರತಿಭೆ ಎಲ್ಲರಲ್ಲೂ ಇದೆ ಅದಕ್ಕೆ ಪ್ರೋತ್ಸಾಹ ಸಿಕ್ಕಿದರೆ ಅದು ಇನ್ನಷ್ಟು ಬೆಳಕಿಗೆ ಬರುತ್ತದೆ. ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವುದರೊಂದಿಗೆ ನಮ್ಮತನವನ್ನು ನಾವು ಉಳಿಸಿ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದ 7 ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಗಾಯತ್ರಿ ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ ಆಟಿಯ ತಿಂಡಿ ತಿನಸುಗಳು ಯುವ ಪೀಳಿಗೆಗೆ ಅಗತ್ಯವಾಗಿ ಬೇಕಾಗಿದೆ ಅದನ್ನು ಉಳಿಸಿ ಪರಿಚಯಿಸಬೇಕಾದೆ ಎಂದು ತಿಳಿಸಿದರು. ವಿಶ್ವಕರ್ಮ ಸಂಘದ ಅಧ್ಯಕ್ಷ ಮುರಳೀಧರ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗಣಪತಿ ಆಚಾರ್ಯ ಬಿಳಿಯಾರು, ಯುವಕ ಸೇವಾದಳದ ಅಧ್ಯಕ್ಷ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 41ಬಗೆಯ ತಿಂಡಿ ತಿನಸುಗಳನ್ನು ಉಣಬಡಿಸಲಾಯಿತು. ಗಾಯತ್ರಿ ವೃಂದದ ಸದಸ್ಯರು ಪ್ರಾರ್ಥಿಸಿದರು. ವಿದ್ಯಾ ಹರೀಶ್ ಆಚಾರ್ಯ ಮತ್ತು ವಸಂತಿ ಅಶೋಕ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.