Updated News From Kaup
ಕಟಪಾಡಿ ಕೋಟೆ ಜಾಮಿಯಾ ಮಸೀದಿ : ನೂತನ ಆಡಳಿತ ಸಮಿತಿ ಅಧಿಕಾರ ಸ್ವೀಕಾರ
Posted On: 07 Aug 2022, 06:09 AM
ಕಟಪಾಡಿ : ಇಲ್ಲಿನ ಕೋಟೆ ಜಾಮಿಯಾ ಮಸೀದಿ ಇದರ ನೂತನ ಅಧ್ಯಕ್ಷ ಬಿ.ಎಂ. ಮೊಹಿದ್ದೀನ್ ಎ.ಆರ್. ಮತ್ತು ಆಡಳಿತ ಸಮಿತಿಯ ಅಧಿಕಾರ ಸ್ವೀಕಾರ ಸಮಾರಂಭ ಶುಕ್ರವಾರ ನಡೆಯಿತು ಕಟಪಾಡಿ ಮಸೀದಿಯನ್ನು ಮಾದರಿಯನ್ನಾಗಿಸಲಿ ಎಂದು ಬಹು| ಅಸ್ಸಯೈದ್ ಜಾಫರ್ ಸಾದಿಕ್ ತಂಗಳ್ ಕುಂಬೊಳ್ ಆಶೀರ್ವಚನ ಸಂದೇಶ ನೀಡಿದರು. ಅಧಿಕಾರ ವಹಿಸಿಕೊಂಡ ನೂತನ ಅಧ್ಯಕ್ಷ ಬಿ.ಎಂ. ಮೊಹಿದ್ದೀನ್ ಎ.ಆರ್. ಮಾತನಾಡಿ, ವಕ್ಪ್ ಇಲಾಖೆಯ ಮೂರು ವರ್ಷದ ಆಡಳಿತದ ಬಳಿಕ ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಗೊಂಡಿದ್ದು, ಸಭಾಭವನ, ಹಾಸ್ಟೆಲ್ ನಿರ್ಮಾಣ, ಶಾಲೆ ತೆರೆಯುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಇರಾದೆಯನ್ನು ಹೊಂದಿದ್ದು ಸಮಸ್ತರ ಸಹಕಾರ ಯಾಚಿಸಿದರು. ಉಡುಪಿ ಜಿಲ್ಲಾ ವಕ್ ಸಲಹಾ ಸಮಿತಿ ಅಧ್ಯಕ್ಷ ಜನಾಬ್ ಸಿ.ಹೆಚ್. ಅಬ್ದುಲ್ ಮುತ್ತಲ್ಲಿ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬರಾದ ಹಾಜಿ ಮುಹಮ್ಮದ್ ಬಶೀರ್ ಮದನಿ ಹಿತವಚನ ಬೋಧಿಸಿದರು. ಆಡಳಿತಾಧಿಕಾರಿ ಸೈಯ್ಯದ್ ಸಫೀಯುಲ್ಲಾ ಅಧಿಕಾರ ಹಸ್ತಾಂತರಿಸಿದರು. ಅಧಿಕಾರಿ ಅಬೂಬಕರ್ ಎಂ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ವಕ್ ಸಲಹಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಸಲಹಾ ಸಮಿತಿ ಸದಸ್ಯ ಜುನೈದ್, ಸಿಬಂದಿ ಮುಜಾಹಿದ್ ಪಾಷ, ಮಸೀದಿಯ ಆಡಳಿತಾಧಿಕಾರಿ ಸೆಯ್ಯದ್ ಸಫೀಯುಲ್ಲಾ, ಉಪಾಧ್ಯಕ್ಷ ಜ|ಅಬ್ದುಲ್ ರಝಾಕ್ ವೈ.ಎಂ., ಕೋಶಾಧಿಕಾರಿ ಅಬ್ದುಲ್ ರಝಾಕ್ ಶಫಿ, ನೂತನ ಸದಸ್ಯರಾದ ಶೈಖ್ ಆಸಿಫ್, ಹಸೈನಾರ್ ಕೆ.ಪಿ.ಹೆಚ್., ಅಕ್ಬರ್ ಎ.ಆರ್., ಇಬ್ರಾಹೀಂ, ಸುಲೈಮಾನ್, ಶಾಹಿದ್, ಮೊಹಮ್ಮದ್ ವೇದಿಕೆಯಲ್ಲಿದ್ದರು. ಇಕ್ಬಾಲ್ ಎಸ್.ಕೆ ಸ್ವಾಗತಿಸಿದರು. ಇಸ್ಮಾಯಿಲ್ ಹುಸೈನ್ ಶಫಿ ಕಟಪಾಡಿ ನಿರೂಪಿಸಿದರು. ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್ ವಂದಿಸಿದರು.
ಮಂಡೇಡಿ ಶ್ರೀದೇವಿ ಭಜನಾ ಮಂಡಳಿ : ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ; ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ
Posted On: 06 Aug 2022, 10:22 PM
ಕಾಪು : ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯಲ್ಲಿ ಸಾರ್ವಜನಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ಆಗಸ್ಟ್ 8ರಂದು ಜರಗಿತು. ಪಾಂಗಾಳ ಮುರಳಿ ಭಟ್ ಅವರ ನೇತೃತ್ವದಲ್ಲಿ ಮಂಡೇಡಿ ಶ್ರೀದೇವಿ ಭಜನಾ ಮಂಡಳಿಯಲ್ಲಿ ಸಾರ್ವಜನಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮದ ಈ ಬಾರಿಯ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಂಡೇಡಿ ದೇರೆಕಾರ್ ಮನೆ ದಿ|ವಿಠಲ ಶೆಟ್ಟಿ ಸ್ಮರಣಾರ್ಥ ಅವರ ಮಗ ದಯಾನಂದ ವಿ ಶೆಟ್ಟಿಯವರು ಪ್ರೋತ್ಸಾಹ ಧನ ನೀಡಿದರು ಹಾಗು ಕುಂಜಿರಬೆಟ್ಟು ಶಶಿಧರ ಕೆ ಶೆಟ್ಟಿ ವಿದ್ಯಾರ್ಥಿಗಳಿಗೆ ಶಾಲು, ಸ್ಮರಣಿಕೆ ನೀಡಿ, ಕುಮಾರಿ ಸೃಷ್ಟಿ ಶಶಿಧರ ಶೆಟ್ಟಿ ಇವರಿಂದ ಅನ್ನಪ್ರಸಾದ ಸೇವೆ ಜರಗಿತು. ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ, ಕಾರ್ಯದರ್ಶಿ ಕೃಷ್ಣ ವಿ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಎನ್ ಶೆಟ್ಟಿ, ಜೀವನ್ ಪ್ರಕಾಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶಿವರಾಮ ಜೆ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ರಮೇಶ್ ಶೆಟ್ಟಿ, ಶೇಖರ ಶೆಟ್ಟಿ, ಸುಧಾಕರ್ ಶೆಟ್ಟಿ ಮತ್ತು ಮಂಡಳಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮುಂಡ್ಕೂರು : ಕುಲಾಲ ಸಂಘದ ಮಹಿಳಾ ಘಟಕ ವತಿಯಿಂದ 15ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ
Posted On: 05 Aug 2022, 11:19 PM
ಮುಂಡ್ಕೂರು : ಕುಲಾಲ ಸಂಘ (ರಿ.) ನಾನಿಲ್ತಾರ್ ಮುಲ್ಲಡ್ಕ ಮುಂಡ್ಕೂರು ಮಹಿಳಾ ಘಟಕ ವತಿಯಿಂದ 15ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಆಗಸ್ಟ್ 5ರಂದು ಕುಲಾಲ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಬಿಲ್ಲವರ ಸಹಾಯಕ ಸಂಘ ಕಾಪು : ವರಮಹಾಲಕ್ಷ್ಮಿ ಪೂಜೆ
Posted On: 05 Aug 2022, 10:56 PM
ಕಾಪು : ಇಲ್ಲಿನ ಬಿಲ್ಲವರ ಸಹಾಯಕ ಸಂಘದಲ್ಲಿ ವೈಭವದ ವರಮಹಾಲಕ್ಷ್ಮಿ ಪೂಜೆಯು ಕಟಪಾಡಿಯ ಚರಣ್ ಶಾಂತಿ ಪೌರೋಹಿತ್ಯದಲ್ಲಿ ಇಂದು ಜರಗಿತು. ಈ ಸಂದರ್ಭದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸಿ ಶ್ರೀ ವರ ಮಹಾಲಕ್ಷ್ಮಿಯ ಪ್ರಸಾದವನ್ನು ಸ್ವೀಕರಿಸಿದರು. ಬಿಲ್ಲವರ ಸಹಾಯಕ ಸಂಘ ಕಾಪು ಗೌರವಾಧ್ಯಕ್ಷರಾದ ಪ್ರಭಾಕರ ಪೂಜಾರಿ, ಅಧ್ಯಕ್ಷರಾದ ವಿಕ್ರಂ ಕಾಪು, ಮಹಿಳಾ ಮಂಡಳಿಯ ಅಧ್ಯಕ್ಷರಾದ ಆಶಾಶಂಕರ್, ಉಪಾಧ್ಯಕ್ಷೆ ಸರಿತ, ಶಶಿಧರ ಸುವರ್ಣ, ಯೋಗೀಶ್ ಕೋಟ್ಯಾನ್, ಉದಯ ಸನಿಲ್, ಅನಿಲ್ ಕುಮಾರ್, ಶೇಖರ್, ಸಕೇಂದ್ರ ಸುವರ್ಣ, ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಬಂಟಕಲ್ಲು : ಶ್ರೀ ಗಾಯತ್ರಿ ಬಳಗದ ಸದಸ್ಯರಿಂದ ವರ ಮಹಾಲಕ್ಷ್ಮಿ ಪೂಜೆ ; ಯಕ್ಷಗಾನ ತಾಳ ಮದ್ದಳೆ
Posted On: 05 Aug 2022, 10:41 PM
ಬಂಟಕಲ್ಲು : ಇಲ್ಲಿನ ಶ್ರೀ ವಿಶ್ವಕರ್ಮ ಸಂಘ (ರಿ) ಇದರ ಆಶ್ರಯದಲ್ಲಿ ಶ್ರೀ ಗಾಯತ್ರಿ ಬಳಗದ ಸದಸ್ಯರಿಂದ ವರ ಮಹಾಲಕ್ಷ್ಮಿ ಪೂಜೆ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ಮುರಳೀಧರ ಆಚಾರ್ಯ, ಯುವಕ ಸೇವಾದಳದ ಅಧ್ಯಕ್ಷ ಬಿಳಿಯಾರು ರಾಜೇಶ್ ಆಚಾರ್ಯ, ಗಾಯತ್ರಿ ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಮತ್ತು ಎಲ್ಲಾ ಪೂಜಾ ವ್ರತಾಧಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕ ಅನ್ನ ಪ್ರಸಾದದ ಬಳಿಕ ಬಡಾನಿಡಿಯೂರು ಕೇಶವ ರಾವ್ ಇವರ ನಿರ್ದೇಶನದಲ್ಲಿ ಮಹಿಳಾ ಬಳಗದ ಸದಸ್ಯರಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳ ಮದ್ದಳೆ ಜರಗಿತು.
ಪಡು ಕುತ್ಯಾರು : ಶ್ರೀ ದುರ್ಗಾ ಮಂದಿರದಲ್ಲಿ ವರಮಹಾಲಕ್ಷ್ಮಿ ಪೂಜೆ
Posted On: 05 Aug 2022, 09:19 PM
ಕಾಪು : ಇಲ್ಲಿನ ಪಡು ಕುತ್ಯಾರು,ಶ್ರೀ ದುರ್ಗಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯು ಪಡುಕುತ್ಯಾರು ಶ್ರೀಮದ್ ಆನೆಗುಂದಿ ಸಂಸ್ಥಾನದ ಶಿಷ್ಯವೃಂದದವರ ಪೌರೋಹಿತ್ಯದಲ್ಲಿ ಇಂದು ಜರಗಿತು. ಈ ಸಂದರ್ಭ ಶ್ರೀ ದುರ್ಗಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಆಚಾರ್ಯ, ಕಾರ್ಯಧ್ಯಕ್ಷರಾದ ಜಯರಾಮ ಆಚಾರ್ಯ, ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಮಾನಿಗಳು,ಭಾಗವಹಿಸಿ ಶ್ರೀ ವರ ಮಹಾಲಕ್ಷ್ಮಿಯ ಪ್ರಸಾದವನ್ನು ಸ್ವೀಕರಿಸಿದರು.
ಕಾಪು : ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸದ ಅಂಗವಾಗಿ ಕಾಲ್ನಡಿಗೆ ಜಾಥಾ
Posted On: 05 Aug 2022, 09:09 PM
ಕಾಪು : ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮಾಚರಣೆಯನ್ನು ವೈಭವಪೂರ್ಣವಾಗಿ ಆಚರಿಸುವ ಸಲುವಾಗಿ, ಸ್ವಾತಂತ್ರ್ಯ ಸಂಗ್ರಾಮದ ವೀರ-ಯೋಧರ ತ್ಯಾಗ, ಬಲಿದಾನ ಮತ್ತು ಶಾಂತಿ, ಸಾಮರಸ್ಯ ಹಾಗೂ ದೇಶಪ್ರೇಮದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಕಾಲ್ನಡಿಗೆ-ಜಾಥಾ ಹಮ್ಮಿಕೊಂಡಿದ್ದು ಈ ನಿಟ್ಟಿನಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಕಟಪಾಡಿ ಮಟ್ಟುನಿಂದ ಪ್ರಾರಂಭಗೊಂಡು, ಕಟಪಾಡಿ -ಸುಭಾಸ್ ನಗರ/ಕುರ್ಕಾಲು - ಶಂಕರಪುರ - ಬಂಟಕಲ್ಲು - ಪಾಂಬೂರು - ಪಂಜಿಮಾರ್ ಮೂಲಕ ಸಾಗಿ, ಶಿರ್ವ ಪೇಟೆಯಲ್ಲಿ ಸಮಾಪಣೆಗೊಂಡಿತು. ತದನಂತರ, ಶಿರ್ವ ಪೇಟೆಯಲ್ಲಿರುವ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಸಮಾರೋಪ ಸಭೆ ನಡೆಯಿತು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಭಯ ಚಂದ್ರ ಜೈನ್ ,ಮಯೂರ್ ಜಯಕುಮಾರ್ ,ಧ್ರುವ ನಾರಾಯಣ್, ಮಂಜುನಾಥ್ ಭಂಡಾರಿ, ನವೀನ್ ಚಂದ್ರ ಶೆಟ್ಟಿ, ಎಂ ಎ ಗಪೂರ್, ನವೀನ್ ಚಂದ್ರ ಸುವರ್ಣ, ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರೀಶ್ ನಾಯಕ್ ಕಾಪು ಮತ್ತಿತರರು ಉಪಸ್ಥಿತರಿದ್ದರು.
ವರಮಹಾಲಕ್ಷ್ಮಿ ವ್ರತ : "ಸೌಭಾಗ್ಯ"ದ ಅಧಿದೇವತೆಯ ಆರಾಧನೆ
Posted On: 04 Aug 2022, 08:52 PM
ಲಕ್ಷ್ಮೀ ಸಮುದ್ರ ಮಥನದಲ್ಲಿ ಹುಟ್ಟಿದಳು. ನಾರಾಯಣನನ್ನು ವರಿಸಿ ತಾನು ಮಹಾಲಕ್ಷ್ಮೀ ಯಾದಳು. ನಾರಾಯಣನು ಲಕ್ಷ್ಮೀನಾರಾಯಣನಾದ, ಶ್ರೀಮನ್ನಾರಾಯಣನಾದ. ಸ್ಥಿತಿಕರ್ತನಾಗಿ-ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಂದರೆ ಭಾಗ್ಯದ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ, ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ ಲಕ್ಷ್ಮೀ ಬಹುಮಾನ್ಯಳಾದಳು. ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ. ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು, ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ . ಆದಿನದಂದು ಲಕ್ಷ್ಮೀಯು ವರಗಳನ್ನು ಕೊಡುವವಳು ಅಥವಾ ಅನುಗ್ರಹಿಸುವವಳು ಎಂಬ ಅನುಸಂಧಾನದೊಂದಿಗೆ ವರಮಹಾಲಕ್ಷ್ಮೀಯನ್ನಾಗಿ ಪರಿಕಲ್ಪಸಿಕೊಂಡು ಆರಾಧಿಸುವುದು. ಕಟ್ಟು, ಕಟ್ಟಳೆ, ನಿಯಮ, ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ, ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ : "ವರಮಹಾಲಕ್ಷ್ಮೀವ್ರತ". ನಾರಾಯಣ - ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು. ಪರಶುರಾಮನಾದಾಗ ಈಕೆ ಭೂದೇವಿ. ರಾಮಾವತಾರದಲ್ಲಿ ಸೀತಾದೇವಿ. ಕೃಷ್ಣಾವತಾರದಲ್ಲಿ ರುಕ್ಮಿಣಿ. ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ. ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ. ಈ ಲಕ್ಷ್ಮೀ ಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ ತಿರುಪತಿ- ಶ್ರೀಪತಿ, ಭೂವೈಕುಂಠ. ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ ಶ್ರೀಸೂಕ್ತದ ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ, ಜೊತೆಯಲ್ಲೇ ಇರುವ ಶ್ರೀಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು, ರೂಪಗಳನ್ನು ವರ್ಣಿಸುತ್ತದೆ. ಲಕ್ಷ್ಮೀಯು ಚತುರ್ಭಾಹುವುಳ್ಳವಳು ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು. ಕೆಳಗಿನ ಕೈಗಳಿಂದ ವರದ ಮತ್ತು ಅಭಯ ಮುದ್ರೆಗಳನ್ನು ತೋರಿಸುತ್ತಿರುವವಳು. ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು. ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯಗಳನ್ನು ದಯಪಾಲಿಸುವವಳು. ಆದುದರಿಂದ ಜನಪ್ರಿಯಳು, ಅದೇ ತಾನೇ ಬಹುಮಾನ್ಯತೆ. ದೇವರುಗಳೆಷ್ಟು ? : ಭಾರತೀಯರಿಗೆ ದೇವರುಗಳು ಎಷ್ಟು? ನಂಬಿಕೆ, ಉಪಾಸನೆಗಳಲ್ಲಿ ಗೊಂದಲವಿಲ್ಲವೇ? ಹೀಗೆಂದು ವಿದೇಶಿಯೊಬ್ಬ ಕೇಳುತ್ತಾನೆ. ಹೌದಲ್ಲ....ನಮ್ಮ ದೇವತೆಗಳು, ದೇವರುಗಳನ್ನು ಲೆಕ್ಕ ಹಾಕಿದಾಗ ಅದು ಮೂವತ್ತಮೂರು ಕೋಟಿಗೂ ಹೆಚ್ಚು. ಆದರೆ ನಮಗೆ ಆರಾಧನೆಯಲ್ಲಿ ಗೊಂದಲವೇ ಇಲ್ಲ. ಒಂದೊಂದು ಉದ್ದೇಶಕ್ಕೆ, ಇಷ್ಟಾರ್ಥ ಸಿದ್ಧಿಗೆ ಒಂದೊಂದು ದೇವರು. ಮೊನ್ನೆ ನಾಗನನ್ನು ಪೂಜಿಸಿದೆವು, ಈಗ ಲಕ್ಷ್ಮೀಯನ್ನು ಆರಾಧಿಸುತ್ತೇವೆ, ಮುಂದೆ ಕೃಷ್ಣನನ್ನು ಬಳಿಕ ಗಣಪತಿಯನ್ನು, ನವದುರ್ಗೆಯರನ್ನು, ಬಲೀಂದ್ರನನ್ನು, ಶಿವನನ್ನು ಪೂಜಿಸುತ್ತೇವೆ. ವರ್ಷಪೂರ್ತಿ ಪೂಜೆ, ವ್ರತಗಳು ನಮ್ಮ ಶ್ರಮದ ಬದುಕಿನ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಸಾಗಿಬಂದಿವೆ. ತುಳುವರಿಗೆ ದೇವತೆ - ದೇವರುಗಳೊಂದಿಗೆ ಸಾವಿರಮಾನಿ ದೈವಗಳು, ನೂರೆಂಟು ಗಂಡಗಣಗಳನ್ನು ವಿಧಿಯಂತೆ ಪೂಜಿಸುವ ಸಹಜ ನಂಬಿಕೆ. ಇವುಗಳಲ್ಲದೆ ಕೃಷಿ ಸಂಸ್ಕೃತಿಯೊಂದಿಗೆ ಆಚರಿಸಲ್ಪಡುವ ಆಚರಣೆಗಳು. ಇತ್ತೀಚೆಗೆ ನಮ್ಮದಲ್ಲದ ಹತ್ತಾರು ಆರಾಧನೆಗಳು ಸೇರಿಕೊಂಡಿವೆ ಆದರೆ ಗೊಂದಲವಿಲ್ಲ, ಮನಃಪೂರ್ವಕವಾದ ಒಪ್ಪಿಗೆಗಳಿವೆ. ಇದು ಈ ದೇಶದ, ತುಳುನಾಡಿನ, ಮಣ್ಣಿನ ಆಸ್ತಿಕತೆ. ಇದು ನಮ್ಮ ಪರಂಪರೆಯಾಗಿ ವಂಶವಾಹಿನಿಯಲ್ಲಿದೆ. ಬಹುತೇಕ ಆರಾಧನೆ, ನಂಬಿಕೆಗಳೆಲ್ಲ ಏನನ್ನೊ ಪ್ರಾಪ್ತಿಸಿಕೊಳ್ಳಲೇ ಆಗಿದೆ. ಸಮೃದ್ಧಿಯನ್ನು ಬಯಸಿಯೇ ಇರುತ್ತದೆ. ಲಕ್ಷ್ಮೀ ಶಬ್ದದ ಅರ್ಥಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡಾಗ ನಾವು ಬದುಕಿನಲ್ಲಿ ಬಯಸುವುದು ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯಗಳನ್ನೇ ತಾನೆ? ಇದೇ ಲಕ್ಷ್ಮೀಯ ಆರಾಧನೆ. ಬರಹ : ಕೆ.ಎಲ್.ಕುಂಡಂತಾಯ
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ
Posted On: 03 Aug 2022, 09:48 PM
ಶಿರ್ವ : ಮಂಗಳೂರಿನ ಪ್ರತಿಷ್ಠಿತ ಗ್ಲೋಟಚ್ ಟೆಕ್ನಾಲಜೀಸ್ (ದಿಯಾ ಸಿಸ್ಟಮ್ ಸಂಸ್ಥೆ)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವೂ ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್, ಸ್ಟಾಟಿಸ್ಟಿಕ್ಸ್, ಎಲೆಕ್ಟ್ರಾನಿಕ್ಸ್), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ( ಸಿ.ಎಸ್),ಎಂಎಸ್ಸಿ, ಎಂಸಿಎ, ಬಿಇ,ಬಿಟೆಕ್ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಶಿರ್ವ ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗ,ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶ ವತಿಯಿಂದ ಆಗಸ್ಟ್ 03ರಂದು ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ನಡೆಯಿತು. ಇದು ಸ್ಪರ್ಧಾತ್ಮಕ ಯುಗ ಎಂದು ತಿಳಿದಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಗೆದ್ದವರು ಒಂದು ಸ್ಪೂರ್ತಿದಾತರಾದರೆ ಸೋತವರು ಅನುಭವಗಳ ಮೂಲಕ ಸವಾಲುಗಳನ್ನು ಎದುರಿಸಿ ಗೆಲ್ಲಬೇಕು ಹಾಗೆ ಶಿಕ್ಷಣದ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಕೌಶಲಗಳನ್ನು ಕಲಿತು ಉದ್ಯೋಗವನ್ನು ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಗ್ಲೋಟಚ್ ಟೆಕ್ನಾಲಜೀಸ್ ಮ್ಯಾನೇಜರ್ ಎಚ್.ಆರ್ ಶ್ರೀ ಎಬಿನೇಜರ್ ರಾಜಾರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ | ಹೆರಾಲ್ಡ್ ಐವನ್ ಮೋನಿಸ್ ರವರು ಇಂದಿನ ಕಾಲದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಳು ಲಭ್ಯವಿದ್ದು ಅದರ ಮಾಹಿತಿಯನ್ನು ಸೂಕ್ತವಾಗಿ ಪಡೆದು - ಸೂಕ್ತ ತಯಾರಿಕೆಯನ್ನು ಮಾಡಿಕೊಂಡು ಇಂತಹ ಕ್ಯಾಂಪಸ್ ಸಂದಶ೯ಗಳು ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆಯನ್ನು ಕ್ಲಪ್ತ ಸಮಯದಲ್ಲಿ ಒದಗಿಸಿ ಕೊಡುವ ಮೂಲಕ ವೃತ್ತಿ ಬದುಕಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಇದರ ಸದುಪಯೋಗವನ್ನು ಹೆಚ್ಚು ಅಭ್ಯರ್ಥಿಗಳು ಪಡೆದುಕೊಳ್ಳ ಬೇಕೆಂದು ಕಿವಿ ಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಗ್ಲೋಟಚ್ ಟೆಕ್ನಾಲಜೀಸ್ ಸಂಸ್ಥೆಯ ಸೀನಿಯರ್ ರೆಕ್ರೂಟ್ಮೆಂಟ್ ಟೀಮ್ ಏಂಜೆಲಾ ಅಲ್ವಾರೆಸ್, ಶ್ರದ್ಧ ರಾಯ್ಕರ್, ಟೆಕ್ನಿಕಲ್ ಇಂಟರ್ವ್ಯೂವರ್ ಸುರೇಶ್ ರೈ , ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಉಪನ್ಯಾಸಕಿ ದಿವ್ಯಶ್ರೀ ಬಿ, ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಅನುಪ್ ನಾಯಕ್, ಎಲ್ಲ ತೃತಿಯ ಬಿಸಿಎ ವಿದ್ಯಾರ್ಥಿಗಳು ಸಹಕರಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಪ್ಲೇಸ್ಮೆಂಟ್ ಸೆಲ್ಲಿನ ಸಂಯೋಜಕಿ ತನುಜ ಎನ್ ಸುವರ್ಣ ವಂದಿಸಿದರು.
ದಾಂಪತ್ಯದಲ್ಲಿ ಜೊತೆಯಾಗಿ ಸಾವಿನಲ್ಲೂ ಜೊತೆಯಾದ ದಂಪತಿ
Posted On: 03 Aug 2022, 07:43 PM
ಕಾಪು : ಮಾನವ ಜೀವನದಲ್ಲಿ ಸಾವು ನಿಶ್ಚಿತ. ಆದರೆ ತಮ್ಮ ಪ್ರೀತಿ ಪಾತ್ರರ ಜೊತೆಗೆ ಸಾವು ವಿರಳ. ಅಂತಹ ಘಟನೆ ಬೆಳಪುವಿನಲ್ಲಿ ನಡೆದಿದೆ. ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಜೊತೆಯಾದ ದಂಪತಿ. ಸಾವಿನಲ್ಲೂ ಜೊತೆಯಾದ ದಂಪತಿಯ ಮೃತದೇಹವನ್ನು ಮಕ್ಕಳು ಮತ್ತು ಕುಟುಂಬಸ್ಥರು ಜೊತೆ ಸೇರಿ ಸಾಮಾಜಿಕ ಕಾರ್ಯಕರ್ತ ಸೂರಿ ಶೆಟ್ಟಿ ನೇತೃತ್ವದಲ್ಲಿ ಬೆಳಪು ಧೂಮಪ್ಪ ಶೆಟ್ಟಿ ಮನೆ ಬಳಿಯ ಜಮೀನಿನಲ್ಲಿ ಸಿದ್ಧಪಡಿಸಿದ ಚಿತೆಯಲ್ಲಿ ಜೋಡಿಯಾಗಿಯೇ ಅಂತ್ಯಕ್ರಿಯೆ ನಡೆಸಲಾಯಿತು.
