Updated News From Kaup

ಸಿ ಎ ಫೌಂಡೇಶನ್ ಫಲಿತಾಂಶದಲ್ಲೂ ಮುಂಚೂಣಿಯಲ್ಲಿರುವ ಕ್ರಿಯೇಟಿವ್ ಪಿಯು ಕಾಲೇಜು

Thumbnail
Posted On: 30 Jul 2024, 06:43 PM

ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯವರು ನಡೆಸಿದ ಸಿ ಎ ಫೌಂಡೇಶನ್ ಫಲಿತಾಂಶವು 29 ಜುಲೈ 2024 ರಂದು ಪ್ರಕಟಗೊಂಡಿದ್ದು, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಕೆ.ವಿ ಮೌರ್ಯ, ಭಕ್ತಿ ಕಾಮತ್, ಸುಪ್ರೀತ್ ಎಸ್ ಹೆಗ್ಡೆ, ವಿನಯ್ ಪ್ರಶಾಂತ ಹಿರೇಮಠ, ಸಾನ್ವಿ ರಾವ್ ರವರು ಕ್ರಮವಾಗಿ 273, 253, 248, 238, 223 ಅಂಕಗಳನ್ನು ಗಳಿಸುವುದರ ಮೂಲಕ ಅರ್ಹತೆಯನ್ನು ಗಳಿಸಿಕೊಂಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು, ಪರೀಕ್ಷಾ ಸಂಯೋಜಕರಾದ ರಾಘವೇಂದ್ರ ಬಿ ರಾವ್ (ಅನು ಬೆಳ್ಳೆ) ರವರು ಶ್ಲಾಘಿಸಿದ್ದಾರೆ.

ಕಾಪು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬಾರದೆಂದು ಕಾಂಗ್ರೆಸ್ ನ ಸೋತ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ತಡೆ ಒಡ್ಡುತ್ತಿದ್ದಾರೆ : ಗುರ್ಮೆ ಸುರೇಶ್ ಶೆಟ್ಟಿ

Thumbnail
Posted On: 30 Jul 2024, 06:39 PM

ಕಾಪು : ವಿಧಾನಸಭಾ ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆ ಇವರು 2 ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು, ಜನಾದೇಶ ಇವರ ಪರವಾಗಿ ಇಲ್ಲದೇ ಇದ್ದು, 2 ಬಾರಿ ಸೋತು ಈ ಹತಾಶೆಯಿಂದ ಪ್ರಸ್ತುತ ಶಾಸಕನಾದ ನನ್ನ ಮೇಲೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು ಆಗುತ್ತಿಲ್ಲವೆಂದು ಸುಳ್ಳು ಆಪಾದನೆಯನ್ನು ಹೊರಿಸಿರುತ್ತಾರೆ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಇವರು ಪತ್ರಿಕಾಗೋಷ್ಟಿಯಲ್ಲಿ ಶಾಸಕನಾದ ನನ್ನ ಮೇಲೆ ವ್ಯವಹಾರಿಕರಣದ ಉದ್ದೇಶದಿಂದ ಕೆಲಸ ಮಾಡುತ್ತಿರುವರೆಂದು ಅಪಾದನೆಯನ್ನು ಮಾಡಿರುತ್ತಾರೆ. ಆದರೆ ನಾನು ಕಳೆದ 40 ವರ್ಷಗಳಿಂದ ನ್ಯಾಯೋಚಿತವಾಗಿ ವಿವಿಧ ಕಡೆಗಳಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದು, ಬಂದ ಆದಾಯದ ಸ್ವಲ್ಪ ಭಾಗವನ್ನು ಶಾಸಕನಾಗುವ ಪೂರ್ವದಿಂದಲೂ ಇಂದಿನವರೆಗೆ ಸಮಾಜದ ಕಟ್ಟ ಕಡೆಯ ನೊಂದ ವ್ಯಕ್ತಿಗಳ ಕಣ್ಣೀರು ಒರೆಸುವ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿರುವುದು ಸಾರ್ವಜನಿಕ ವೇದ್ಯವಾಗಿರುತ್ತದೆ. ಆದರೆ ಯಾವುದೇ ಆದಾಯ ಮೂಲಗಳಿಲ್ಲದೆ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ಸಂಪಾದಿಸಿರುವುದು ಯಾವ ವ್ಯವಹಾರದಿಂದ ಎಂಬುದು ಸೊರಕೆ ಅವರು ಸ್ಪಷ್ಟಪಡಿಸಬೇಕಿರುತ್ತದೆ? ವಿನಯ ಕುಮಾರ್ ಸೊರಕೆ ಇವರು ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಕಾಪು ಪುರಸಭಾ ವ್ಯಾಪ್ತಿಯ 500 ವಸತಿ ರಹಿತ ಕುಟುಂಬಗಳಿಗೆ ವಸತಿ ಸಮುಚ್ಚಯದ ಸೌಲಭ್ಯವನ್ನು ಒದಗಿಸುವುದಾಗಿ ಹಾಗೂ 100 ಕೋಟಿ ವಿಶೇಷ ಅನುದಾನವನ್ನು ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಒದಗಿಸಿರುವುದಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಸುಳ್ಳು ಭರವಸೆಯನ್ನು ನೀಡಿದ್ದು ಅದು ಇನ್ನು ಕಾರ್ಯಗತವಾಗದೇ ಇರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಸೊರಕೆಯವರು ಉತ್ತರಿಸಬೇಕು? ಕಾಪು ಪುರಸಭಾ ರಚನಾ ಸಂದರ್ಭದಲ್ಲಿ ಪೂರ್ವ ಯೋಜನೆ ಇಲ್ಲದೆ ಪುರಸಭೆಯನ್ನಾಗಿ ಘೋಷಿಸಿದ್ದರಿಂದ ಕಾಪು ಪುರಸಭಾ ವ್ಯಾಪ್ತಿಯ 5 ಕೀಮೀ ಒಳಗಿನ ಗ್ರಾಮಂತರ ಪ್ರದೇಶವನ್ನು ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಸೇರಿಸಿದ್ದರಿಂದ ಸಾರ್ವಜನಿಕರು ಅನುಭವಿಸುವ ಸಂಕಷ್ಟಗಳಿಗೆ ಸೊರಕೆಯವರು ನೇರ ಕಾರಣಿಭೂತರಾಗಿರುತ್ತಾರೆ. ಎಲ್ಲೂರು ಐ.ಟಿ.ಐ ಕಾಲೇಜಿಗೆ ನಿವೇಶನವನ್ನು ಕಾಲೇಜಿನ ಹೆಸರಿಗೆ ಮಂಜೂರು ಮಾಡದೇ 5 ಕೋಟಿ ಅನುದಾನವನ್ನು ಸೊರಕೆಯವರು ಬಿಡುಗಡೆಗೊಳಿಸಿರುವುದು ಯಾವ ಉದ್ದೇಶಕ್ಕೆ ? ಆದ್ದರಿಂದ ಈಗಿನ ಎಲ್ಲೂರು ಐ.ಟಿ.ಐ ಕಾಲೇಜಿನ ಪರಿಸ್ಥಿತಿಗೆ ಸೊರಕೆ ನೇರ ಕಾರಣರಾಗಿರುತ್ತಾರೆ. ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡಲ್ಕೊರೆತ ಭಾಧಿತ ಪ್ರದೇಶಗಳಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಹಣ ಮಂಜೂರು ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಸುಳ್ಳು ಭರವಸೆಯನ್ನು ನೀಡಿದ್ದಲ್ಲದೇ ಗುತ್ತಿಗೆದಾರರಿಗೆ ಶಿಫಾರಸ್ಸು ಪತ್ರವನ್ನು ನೀಡಿ ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದರೂ ಇಲ್ಲಿಯವರೆಗೆ ಕಡಲ್ಕೊರೆತ ತಡೆಗೋಡೆಗೆ ಹಣ ಮಂಜೂರು ಮಾಡಿರುವುದಿಲ್ಲ. ಅಲ್ಲದೇ ಹಿಂದಿನ ಸರ್ಕಾರದ ಅವಧಿಯಲ್ಲಿ ಕಡಲ್ಕೊರೆತ ಸಂರಕ್ಷಣೆಗೆ ಕಾಮಗಾರಿಯ ಪೂರ್ಣಗೊಳಿಸದ ಗುತ್ತಿಗೆದಾರಿಗೆ ಸರಕಾರ ಅನುದಾನ ಬಿಡುಗಡೆ ಮಾಡಿರುವುದೇ ಹೊರತು ಇದರಲ್ಲಿ ನನ್ನ ವ್ಯವಹಾರದ ಉದ್ದೇಶವಿರುವುದಿಲ್ಲ ಎಂಬವುದು ಸೊರಕೆಯವರ ಗಮನಕ್ಕೆ ಬಾರದಿರುವುದು ತೀರಾ ವಿಷಾದನೀಯ. ಇತ್ತೀಚೆಗೆ ನಡಿಪಟ್ಣದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು ಈ ಬಗ್ಗೆ ಮೀನುಗಾರಿಕಾ ಸಚಿವರಾದ ಮಾಂಕಾಳ್ ವೈದ್ಯರಲ್ಲಿ ಖುದ್ದು ಭೇಟಿ ಮಾಡಿ ಪ್ರಸ್ತಾಪಿಸಿದ ಮೇರೆಗೆ ನಡಿಪಟ್ಟ ಕಡಲಕೊರೆತ ಪ್ರದೇಶಕ್ಕೆ ಬೇಟಿ ನೀಡಿದ್ದು, ತುರ್ತು ಕಡಲ್ಕೊರೆತ ಸಂರಕ್ಷಣಾ ಕಾಮಗಾರಿಗೆ 1 ಕೋಟಿ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿರುತ್ತಾರೆ. ಸೊರಕೆ ಇವರು ಮೇಲ್ನೋಟದಲ್ಲಿ ಅಭಿವೃದ್ಧಿಯ ಕಡೆಗೆ ಶ್ರಮಿಸುತ್ತೇನೆಂದು ಸಾರ್ವಜನಿಕರಲ್ಲಿ ಬಿಂಬಿಸುತ್ತಾರೆ ಹೊರತು ಉದ್ದೇಶ ಪೂರ್ವಕವಾಗಿ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಒಂದು ವ್ಯವಸ್ಥಿತ ಷಡ್ಯಂತ್ರವಾಗಿರುತ್ತದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ಶಾಸಕರ ಹಕ್ಕು ಭಾದ್ಯತೆಗಳಿಗೆ ತಡೆಯೊಡ್ಡಿ, ತಮ್ಮ ಸರಕಾರವಿದೆಯೆಂದು ಅಧಿಕಾರಿಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ ಬೀರಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ತೊಂದರೆ ಉಂಟು ಮಾಡಿರುತ್ತಾರೆ. ಅಲ್ಲದೇ ಸರಕಾರಿ ನೌಕರರ ಹಾಗೂ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯಲ್ಲಿ ತನ್ನ ಶಿಫಾರಸ್ಸು ಪತ್ರವನ್ನು ಶಾಸಕನಾದ ನನ್ನ ಹಕ್ಕು ಭಾದ್ಯತೆಗೆ ವ್ಯತಿರಿಕ್ತವಾಗಿ ವರ್ಗಾವಣೆ ದಂಧೆಯನ್ನು ನಡೆಸಿರುತ್ತಾರೆ. ಕಾಪು ಕ್ಷೇತ್ರದ ಜನಪ್ರತಿನಿಧಿಯಾಗಿ ರಸ್ತೆಗಳ ಅಭಿವೃದ್ಧಿ, ಕಡಲ್ಕೊರೆತ ಭಾಧಿತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ರಚನೆ, ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ನದಿದಂಡೆ ಸಂರಕ್ಷಣೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಲೊಕೋಪಯೋಗಿ ರಸ್ತೆಗಳ ಅಭಿವೃದ್ಧಿ, ಪ.ಜಾತಿ ಮತ್ತು ಪ.ಪಂಗಡಗಳ ಕಾಲನಿಗಳಿಗೆ ಮೂಲಭೂತ ಸೌಕರ್ಯ ಮುಂತಾದವುಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಖುದ್ದು ಭೇಟಿಯಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಉದ್ದೇಶ ಪೂರ್ವಕವಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರು ಮಾಡದೇ ಇದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬಾರದೆಂದು ಕಾಂಗ್ರೆಸ್ ನ ಸೋತ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ ಅವರೆ ತಡೆ ಒಡ್ಡುತ್ತಿದ್ದಾರೆ. ಕೆಲವೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಹಿಂದಿನ ಬಾರಿ ಅನುದಾನ ಮಂಜೂರಾಗಿದ್ದರೂ ಪ್ರಸ್ತುತ ಬಿ.ಜೆ.ಪಿ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಅನುದಾನವನ್ನು ಬಜೆಟ್ ಕೊರತೆಯ ನೆಪವೊಡ್ಡಿ ತಡೆಹಿಡಿದಿರುವುದು ಅಭಿವೃದ್ಧಿಯ ಕೆಲಸಕ್ಕೆ ಹಿನ್ನಡೆ ಉಂಟಾಗಿರುತ್ತದೆ. ಸೊರಕೆ ಇವರು ಅಭಿವೃದ್ಧಿಯ ವಿಚಾರದಲ್ಲಿ ಇಚ್ಛಾಶಕ್ತಿಯ ಕೊರತೆ ಇರುವ ಬಗ್ಗೆ ಆಪಾದನೆ ಮಾಡಿರುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ಬಿ.ಜೆ.ಪಿ ಶಾಸಕರು ಇರುವ ಕಡೆಗಳಲ್ಲಿ ಉದ್ದೇಶಪೂರ್ವಕವಾಗಿ ಅಭಿವೃದ್ಧಿ ಚಟುವಟಿಕೆಗೆ ಅನುದಾನ ಬಿಡುಗಡೆ ಮಾಡದೇ ಇರುವುದು ವಿಷಾದನೀಯ ಸಂಗತಿ. ಹಿಂದಿನ ವರ್ಷದಲ್ಲಿ ಭಾರತ ಸರಕಾರದ ಕೇಲೋ ಇಂಡಿಯಾ ಯೋಜನೆಯಡಿಯಲ್ಲಿ ನನ್ನ ವಿಶೇಷ ಪ್ರಯತ್ನದಿಂದಾಗಿ ಕಾಪು ತಾಲೂಕು ಕ್ರೀಡಾಂಗಣದಲ್ಲಿ ಸಮಗ್ರ ಕ್ರೀಡಾ ಚಟುವಟಿಕೆಗಳಾದ ಪುಟ್ ಬಾಲ್ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಹಾಲ್, ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಬಗ್ಗೆ ರೂ.25.20 ಕೋಟಿ ಮಂಜೂರಾಗಿರುತ್ತದೆ. ಅಲ್ಲದೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಪ್ರಯತ್ನದಲ್ಲಿರುವುದು ನನ್ನ ಇಚ್ಚಾ ಶಕ್ತಿಯಿಂದಲೇ ಎನ್ನುವುದು ಸೊರಕೆಯವರು ಅರಿಯುವಂತಾಗಲಿ. ಅಲ್ಲದೆ ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನವನ್ನು ಗುರುತಿಸಿ ಹಂಚಿಕೆ ಮಾಡುವ ಜಿಲ್ಲಾಧಿಕಾರಿಯವರಿಗೆ ಹಾಗೂ ಸಂಬಂದಿಸಿದ ತಾಲೂಕು ವ್ಯಾಪ್ತಿಯ ತಹಶೀಲ್ದರಾರಿಗೆ ಸೂಚಿಸಿದ್ದು, ಅಲ್ಲದೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ನಿವೇದಿಸಿಕೊಂಡಿದ್ದು ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೆ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿರುವುದರಿಂದ ನಿವೇಶನ ಹಂಚಿಕೆ ವಿಳಂಬಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳಿಗೆ ಬಿ.ಜೆ.ಪಿ ಸರಕಾರ ಇದ್ದ ಸಂದರ್ಭದಲ್ಲಿ ಎ.ಬಿ.ಸಿ ಕೆಟಗರಿವಾರು ಅನುದಾನ ನೀಡುತ್ತಿದ್ದು, ಪ್ರಸ್ತುತ ತಡೆಹಿಡಿದು, ಸಂಪೂರ್ಣ ಹಾನಿಯಾದ ಮನೆಗಳಿಗೆ ಕೇವಲ 1.20 ಲಕ್ಷ ಭಾಗಶಃ ಹಾನಿಯಾದ ಮನೆಗಳಿಗೆ 6,500 ದಂತೆ ನೀಡುತ್ತಿದ್ದು, ಇದರಿಂದ ನೊಂದ ಕುಟುಂಬಗಳ ಸಮಸ್ಯೆ ಸೊರಕೆಯವರ ಗಮನಕ್ಕೆ ಬಂದಿಲ್ಲವೇ..? ಇದು ನನ್ನ ಕೊನೆಯ ಚುನಾವಣೆ ಎಂದು ಪ್ರತಿ ಬಾರಿ ಹೇಳುತ್ತಾ ಜನರನ್ನು ಭಾವನಾತ್ಮಕವಾಗಿ ವಂಚಿಸುತ್ತಾ ಮತ ಪಡೆಯಲು ವಿಫಲ ಪ್ರಯತ್ನ ಮಾಡಿ ಇನ್ನೂ ರಾಜಕೀಯದಲ್ಲಿ ಇರುವುದು ಸೊರಕೆಯವರ ಸುಳ್ಳಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ನಾನು ಶಾಸಕನಾದ ನಂತರ ಪಕ್ಷ, ಜಾತಿ, ಧರ್ಮ ಭೇದ ಮಾಡದೇ ಜನರ ಸಂಕಷ್ಟಗಳಿಗೆ ಸ್ಪಂಧಿಸುವುದು ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ನನ್ನ ಸಾರ್ವಜನಿಕ ಹಾಗೂ ರಾಜಕೀಯ ಜೀವನ ತೆರೆದ ಪುಸ್ತಕದಂತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನನ್ನಿಂದಾದ ಸಹಾಯ ಸರಕಾರದ ವತಿಯಿಂದಲೂ ಹಾಗೂ ವೈಯುಕ್ತಿಕ ನೆಲೆಯಲ್ಲಿ ಮಾಡುತ್ತ ಬಂದಿರುತ್ತೇನೆ. ಇದರಿಂದ ಸಹಿಸದೆ ಸುಳ್ಳನ್ನೆ ತನ್ನ ಮನೆ ದೇವರು ಮಾಡಿಕೊಂಡಿರುವ ವಿನಯ ಕುಮಾರ್ ಸೊರಕೆ ಇವರು ಹತಾಶ ಮನೋಭಾವದಿಂದ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಇಲ್ಲ ಸಲ್ಲದ ಆರೋಪ ಮಾಡಿರುವುದು ಹಿರಿಯವರಾದ ವಿನಯ್ ಕುಮಾರ್ ಸೊರಕೆ ಅವರಿಗೆ ಇದು ಶೋಭೆ ತರುವುದೇ..? ಈ ರೀತಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಕಾಲು ಹಾಕಿ ಪಕ್ಷತೀತಾವಾಗಿ ಅಭಿವೃದ್ಧಿ ಕೆಲಸಕ್ಕೆ ಕೈ ಜೋಡಿಸಿ ಇರುವ ಸ್ವಲ್ಪ ಮರ್ಯಾದೆಯನ್ನು ಉಳಿಸಿಕೊಂಡರೇ ಉತ್ತಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜನಾ ಜೆ. ಸುವರ್ಣ : ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆ

Thumbnail
Posted On: 29 Jul 2024, 10:39 PM

ಉಡುಪಿ : ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಸಂಜನಾ ಜೆ. ಸುವರ್ಣ ಇವರು ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಇವರು ಉಡುಪಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಇಲ್ಲಿನ ಗುರು ವಿದ್ವಾನ್ ಕೆ. ಭವಾನಿಶಂಕರ್ ಇವರ ಶಿಷ್ಯೆಯಾಗಿದ್ದು, ತೋನ್ಸೆ ಹೊನ್ನಪ್ಪ ಕುದ್ರುವಿನ ಸಾವಿತ್ರಿ ಹಾಗೂ ಅಂಬಲಪಾಡಿ ದಿ।ಜಯರಾಮ್ ಪೂಜಾರಿಯವರ ಸುಪುತ್ರಿ.

ರೋಟರಿ ಕ್ಲಬ್ ಉದ್ಯಾವರ : ಕೃಷಿ ಕಾಯಕ ಉತ್ತೇಜಿಸುವ ರೈತ ಮಿತ್ರ ಕಾರ್ಯಕ್ರಮ

Thumbnail
Posted On: 29 Jul 2024, 10:35 PM

ಉಡುಪಿ : ಗಾಳಿ, ಮಳೆ ಲೆಕ್ಕಿಸದೆ ಕೃಷಿ ಭೂಮಿಯಲ್ಲಿ ದುಡಿಯುತ್ತಿರುವ ರೈತರು ಮತ್ತು ಕೃಷಿಕರನ್ನು ಗುರುತಿಸಿ, ರೋಟರಿ ಕ್ಲಬ್ ಉದ್ಯಾವರದ ಸದಸ್ಯರು ಗದ್ದೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ ಉದ್ಯಾವರದಲ್ಲಿ ನಡೆಯಿತು. 'ರೈತ ಮಿತ್ರ' ಹೆಸರಿನ ಕಾರ್ಯಕ್ರಮದ ಮೂಲಕ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷರಾದ ರೋ. ಪ್ರಸಾದ್ ಶೆಟ್ಟಿರವರ ಕೃಷಿ ಭೂಮಿಯಲ್ಲಿ ರೈತರನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ 15 ಮಂದಿ ರೈತರನ್ನು ರೋಟರಿ ಕ್ಲಬ್ ಉದ್ಯಾವರದ ಅಧ್ಯಕ್ಷ ರೋ. ಜೀವನ್ ಡಿಸೋಜ ಹಾಗೂ ಸರ್ವ ಸದಸ್ಯರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಬಳಿಕ ರೈತರ ಕೆಲಸಗಳಿಗೆ ಕ್ಲಬ್ಬಿನ ಸದಸ್ಯರು ಸಾಥ್ ನೀಡಿದರು.

ಕಾಪು ಶ್ರೀ ಲಕ್ಷ್ಮಿಜನಾರ್ದನ ದೇವಳಕ್ಕೆ ಚಲನಚಿತ್ರ ನಟ ರಂಗಾಯಣ ರಘು ಭೇಟಿ

Thumbnail
Posted On: 29 Jul 2024, 10:21 PM

ಕಾಪು : ಇಲ್ಲಿನ ಶ್ರೀ ಲಕ್ಷ್ಮಿಜನಾರ್ದನ ದೇವಳಕ್ಕೆ ಕನ್ನಡ ಖ್ಯಾತ ಚಲನಚಿತ್ರ ನಟ ರಂಗಾಯಣ ರಘು ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ಪ್ರಮುಖರು, ಪ್ರಕಾಶ್ ಅಮ್ಮಣ್ಣಾಯ ಮತ್ತಿತರರು ಇದ್ದರು.

ಕಾಪು ಬಂಟರ ಸಂಘದ ಮಹಿಳಾ ಘಟಕದಿಂದ ಆಟಿಡೊಂಜಿ ದಿನ ಸಂಭ್ರಮ

Thumbnail
Posted On: 29 Jul 2024, 07:28 PM

ಕಾಪು : ಇಲ್ಲಿನ ಬಂಟರ ಸಂಘ (ರಿ.) ಇದರ ಆಶ್ರಯದಲ್ಲಿ ಕಾಪು ಬಂಟರ ಮಹಿಳಾ ಘಟಕದ ನೇತೃತ್ವದಲ್ಲಿ ಕಾಪು ಶ್ರೀ ಲಕ್ಷ್ಮೀ ಜರ್ನಾದನ ಸಭಾಂಗಣ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಯಮಿ ದಿವಾಕರ ಶೆಟ್ಟಿ ಮಲ್ಲಾರು, ಮಸ್ಕತ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಸ್ಕತ್‌ನಲ್ಲೂ ಕೂಡ ನಾವು ನಮ್ಮೂರಿನ ಸಂಸ್ಕೃತಿ, ಸಂಸ್ಕಾರದ ಆಟಿಯ ಕೂಟದಂತಹ ಹಲವಾರು ಕಾರ‍್ಯಕ್ರಮಗಳನ್ನು ಆಯೋಜಿಸಿ ಯಶಸ್ಸನ್ನು ಕಂಡಿದ್ದೇವೆ. ಕಾಪು ಬಂಟರ ಭವನ ನಿರ್ಮಾಣ ಮಾಡುವಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆಯನ್ನು ನೀಡಿದರು. ಕಾಪು ಕ್ಷೇತ್ರದ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ನಾವು ಪುರಾತನ ಕಾಲದ ಆಹಾರ ಪದ್ಧತಿ ಮತ್ತು ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿ ಆಟಿಡೊಂಜಿ ದಿನ ಕಾರ‍್ಯಕ್ರಮ ಏರ್ಪಡಿಸಿದರೆ ಹಿಂದಿನ ಕಾಲದ ಆಹಾರ ಪದ್ದತಿಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ನಮ್ಮ ಹಿರಿಯರು ನಮಗೆ ಕೊಟ್ಟ ಕೊಡುಗೆ ಏನೆಂದರೆ ದೈವಸ್ಥಾನ, ನಾಗ ಮೂಲಸ್ಥಾನ ಮುಂತಾದ ಆರಾಧನ ಕ್ರಮದಿಂದ ನಮ್ಮ ಮುಂದಿನ ಪೀಳಿಗೆಯು ಸುಗಮವಾಗಿ ನಡೆಯಲು ಸಾಧ್ಯವಿದೆ. ಹಿಂದಿನ ಕಾಲದಲ್ಲಿ ಬಡತನ ಇತ್ತು ಆದರೆ ಆ ಕಾಲದಲ್ಲಿ ಆಟಿ ತಿಂಗಳಲ್ಲಿ ಪರಿಸರದಲ್ಲಿ ಬೆಳೆಯುವ ಆಹಾರ ವಸ್ತುಗಳನ್ನು ಉಪಯೋಗಿಸಿ ನಮ್ಮ ಹಿರಿಯರು ಜೀವನವನ್ನು ಸಾಗಿಸುತ್ತಿದ್ದರು ಎಂದು ಹೇಳಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ರೇಡಿಯೋ ಜಾಕಿ ಆರ್ ಜೆ ನಯನಾ ಮಾತನಾಡಿ, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಬೇಕು, ಈಗಿನ ಮಕ್ಕಳು ಯಾವುದೇ ಕಾರ್ಯಕ್ರಮಕ್ಕೂ ಹೋಗುವುದಿಲ್ಲ ನಾವೇ ಅವರನ್ನು ಕರೆದುಕೊಂಡು ಹೋಗಬೇಕು. ತಾಯಂದಿರು ಮಕ್ಕಳಿಗೆ ಮನೆಯಲ್ಲಿಯೇ ನಮ್ಮ ಆಚಾರ ವಿಚಾರದ ಬಗ್ಗೆ ತಿಳಿಹೇಳಬೇಕು ಎಂದರು. ಉದ್ಯಮಿ ಉದಯ ಸುಂದರ್ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು. ವಿದ್ಯಾರ್ಥಿವೇತನ, ಗೌರವ, ಸನ್ಮಾನ : ರಾಧಾ ಸುಂದರ್ ಶೆಟ್ಟಿಯವರ ಸ್ಮರಣಾರ್ಥ ಸಾಯಿರಾಧ ಗ್ರೂಪ್ನ ಮನೋಹರ ಶೆಟ್ಟಿಯವರ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ೯೦% ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ದಿವಂಗತ ಡಾ. ಪ್ರಭಾಕರ್ ಶೆಟ್ಟಿಯವರ ಸ್ಮರಣಾರ್ಥ ಮಗನಾದ ಡಾ. ಪ್ರಶಾಂತ್ ಶೆಟ್ಟಿಯವರು ಎಸ್.ಎಸ್.ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗೆ ಬಂಗಾರದ ಪದಕವನ್ನು ನೀಡಿ ಗೌರವಿಸಿದರು. ನೀಟ್‌ನಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸಲಾಯಿತು. ಹಿರಿಯ ಕೃಷಿಕರಾದ ಜಯಲಕ್ಷ್ಮೀ ಆಳ್ವ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ. ವಾಸುದೇವ ಶೆಟ್ಟಿಯವರು ಮಾತನಾಡಿ ಬಂಟರ ಭವನ ನಿರ್ಮಾಣಕ್ಕಾಗಿ ಈಗಾಗಲೇ ಪೂರ್ವಭಾವಿ ಕೆಲಸ ಕಾರ್ಯಗಳು ಮುಗಿದಿದ್ದು ಯೋಜನೆಯ ರೂಪುರೇಷೆಗಳು ತಯಾರಾಗಿದ್ದು ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ನಿರ್ಮಾಣ ಕಾರ‍್ಯದಲ್ಲಿ ಮುಂದುವರಿಯಲಿದ್ದೇವೆ ಎಂದು ಹೆಳಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ರವಿರಾಜ್ ಶೆಟ್ಟಿ , ಬಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ರತ್ನಾಕರ್ ಹೆಗ್ಡೆ, ಜೊತೆ ಕೋಶಾಧಿಕಾರಿ ದಿವಾಕರ ಬಿ. ಶೆಟ್ಟಿ ಕಳತ್ತೂರು, ಬಂಟರ ಸಂಘದ ಯುವ ಘಟಕದ ಅಧ್ಯಕ್ಷರಾದ ರಘುರಾಮ ಶೆಟ್ಟಿ ಕೊಪ್ಪಲಂಗಡಿ, ದಿವಾಕರ ಡಿ.ಶೆಟ್ಟಿ , ಪ್ರಭಾತ್ ಶೆಟ್ಟಿ ಮೂಳೂರು, ಮಹಿಳಾ ಘಟಕದ ಸದಸ್ಯರು , ನಿರ್ದೆಶಕರುಗಳು, ಗ್ರಾಮಸ್ಥರು, ಅನೇಕ ಗಣ್ಯರು ಉಪಸ್ಥಿತರಿದ್ದರು. ೧೨ ಗ್ರಾಮಗಳಿಂದ ಮಹಿಳೆಯರು ವಿವಿಧ ಬಗೆಯ ಅಡುಗೆಯನ್ನು ತಯಾರಿಸಿ ತಂದಿದ್ದನ್ನು ಬಡಿಸಿದರು. ಮಹಿಳಾ ಘಟಕದ ಸಂಚಾಲಕಿ ಜಯಲಕ್ಷ್ಮೀ ಎಸ್.ಶೆಟ್ಟಿ ಸ್ವಾಗತಿಸಿದರು. ಕಾಪು ಬಂಟರ ಸಂಘದ ಕಾರ‍್ಯದರ್ಶಿ ಯೋಗಿಶ್ ವಿ.ಶೆಟ್ಟಿ ಪ್ರಸ್ತಾವನೆಗೈದರು. ಪ್ರತಿಮಾ ಆರ್. ಶೆಟ್ಟಿ ಮತ್ತು ಅನಿತಾ ಹೆಗ್ಡೆ ಕಾರ‍್ಯಕ್ರಮ ನಿರೂಪಿಸಿದರು. ಅರ್ಚನಾ ಶೆಟ್ಟಿ ವಂದಿಸಿದರು.

ಹೆಜಮಾಡಿ ಸ.ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ - ಶೂ, ಸಾಕ್ಸ್ ವಿತರಣೆ ; ಆರೋಗ್ಯ ಮಾಹಿತಿ ಕಾರ್ಯಕ್ರಮ

Thumbnail
Posted On: 29 Jul 2024, 06:58 PM

ಹೆಜಮಾಡಿ : ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹೆಜಮಾಡಿ ಇಲ್ಲಿ ಸರಕಾರದ ವತಿಯಿಂದ ನೀಡಲಾಗುವ ಶೂ,ಸಾಕ್ಸ್ ವಿತರಣಾ ಕಾರ್ಯಕ್ರಮ ಸೋಮವಾರ ಜರಗಿತು. ಶಿಕ್ಷಕರಿಂದ ಸಾಂಕ್ರಾಮಿಕ ರೋಗಗಳು, ಮಾದಕ ವಸ್ತುಗಳು ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಲಾಯಿತು. ಶಿಕ್ಷಕಿ ದೀಪಾ ಉಡುಪ ರವರು ಪರೀಕ್ಷಾ ಕ್ರಮಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸತೀಶ್ ನಾಯಕ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ಸಂಸ್ಥೆಯ ಹಳೆ ವಿದ್ಯಾರ್ಥಿ, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ಸುವರ್ಣ, ಪಂಚಾಯತ್ ಸದಸ್ಯ ಪಾಂಡುರಂಗ ಕರ್ಕೇರ, ಎಸ್ ಡಿ ಎಮ್ ಸಿಯ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಸಂಪಾವತಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಸಿದರು. ಶಿಕ್ಷಕಿಯರಾದ ಅನಿತಾ ಕಾರ್ಯಕ್ರಮ ನಿರೂಪಿಸಿ, ಸರೋಜಾ ಆಚಾರಿ ವಂದಿಸಿದರು.

ಕಾಪು : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ - ಕಾಪು ವಲಯದ ಕುಟುಂಬ ಸಮ್ಮಿಲನ ಕಾರ್ಯಕ್ರಮ

Thumbnail
Posted On: 29 Jul 2024, 06:47 PM

ಕಾಪು : ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ ಕಾಪು ವಲಯದ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮವು K1 ಹೋಟೆಲ್ ಕಾಪು ಇಲ್ಲಿ ಜರಗಿತು. ಕಾರ್ಯಕ್ರಮವನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ವೃತ್ತಿಯ ಒತ್ತಡದ ನಡುವೆ ಕುಟುಂಬ ಸಮ್ಮಿಲನದಂತಹ ಕಾರ್ಯಕ್ರಮಗಳು ಸದಸ್ಯರಿಗೆ ಅನಿವಾರ್ಯ. ಬಾಂಧವ್ಯವನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ ಎಂದರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ರಮೇಶ್ ಕಲಶ್ರೀ, ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್, ಕಾಪು ವಲಯದ ಉಪಾಧ್ಯಕ್ಷರುಗಳಾದ ಸಂತೋಷ್ ಕಾಪು, ಸತೀಶ್ ಎರ್ಮಾಳು, ವಲಯದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ಕೋಶಾಧಿಕಾರಿ ಕಿರಣ್ ಕಾಪು ಉಪಸ್ಥಿತರಿದ್ದರು. ಕಾಪು ವಲಯದ ಅಧ್ಯಕ್ಷರಾದ ಸಚಿನ್ ಉಚ್ಚಿಲ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಶ್ವತ್ ಪೂಜಾರಿ ನಿರೂಪಿಸಿದರು. ವಲಯದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ ವಂದಿಸಿದರು.

ಪಡುಬಿದ್ರಿ : ಕೃಷಿಗೆ ಒತ್ತು ನೀಡದ ಕಾರಣ ಕೃಷಿ ನಾಶದ ಅಂಚಿಗೆ ಸಾಗುತ್ತಿದೆ - ವಿನಯ ಕುಮಾರ್ ಸೊರಕೆ

Thumbnail
Posted On: 29 Jul 2024, 06:22 PM

ಪಡುಬಿದ್ರಿ : ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಇಂದಿನ ಜನಾಂಗ ಕೃಷಿಗೆ ಒತ್ತು ನೀಡದ ಕಾರಣ ಕೃಷಿ ನಾಶದ ಅಂಚಿಗೆ ಸಾಗುತ್ತಿದೆ. ಕೃಷಿಯಿಂದ ನಮ್ಮ ಹಿರಿಯರು ಆರೋಗ್ಯಕರ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಇಂದು ಅತೀ ವೇಗದ ಆಧುನಿಕ ಬದುಕಿಗೆ ಒಗ್ಗಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಇದರಿಂದ ಆರೋಗ್ಯಕರ ಭೂಮಿ ತಾಯಿಯ ಮಣ್ಣಿನಿಂದ ದೂರ ಸರಿಯುವಂತಾಗಿದೆ. ಸಂಬಂಧಗಳು ಕಳೆದು ಕೊಳ್ಳುವಂತಾಗಿದೆ. ಆದ್ದರಿಂದ ಯುವ ಪೀಳಿಗೆ ಕೃಷಿ ಬದುಕಿನತ್ತ ಒಲುವು ಮೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಕರ್ನಾಟಕದ ಸರಕಾರದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪಡುಬಿದ್ರಿ ಬ್ರಹ್ಮಸ್ಥಾನದ ಬಳಿಯ ಗದ್ದೆಯಲ್ಲಿ ನಡೆದ‌ ಆಟಿಡೊಂಜಿ ಕೆಸರ್ದ ಕಂಡದ ಗೊಬ್ಬುಲು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸನ್ಮಾನ/ಬಹುಮಾನ ವಿತರಣೆ : ದೃೆವ ನರ್ತಕ ಭಾಸ್ಕರ್ ಬಂಗೇರ, ಹಿರಿಯ ರಾಜಕೀಯ ಮುತ್ಸದ್ಧಿ ಸಂಜೀವಿ ಪೂಜಾರ್ತಿ, ಸೀಸನ್ ಬಾಲ್ ಕ್ರಿಕೆಟ್ ಪಟು ಅಂಕಿತ್ ಪೂಜಾರಿ, ಎಸ್ ಎಸ್ ಎಲ್ ಸಿಯಲ್ಲಿ ರಾಜ್ಯದಲ್ಲಿಯೇ 5 ನೇ ರ‍್ಯಾಂಕ್‌ ಪಡೆದ ಚಿನ್ಮಯಿ ಪೃೆ, ಆಶಾ ಕಾರ್ಯಕರ್ತೆ ರಜನಿ ದೇವಾಡಿಗ, ಬಿ.ಎಲ್.ಓ ಸುನೀತಾರವರನ್ನು ಸನ್ಮಾನಿಸಲಾಯಿತು. ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಹಗ್ಗ - ಜಗ್ಗಾಟ ಪುರುಷ ವಿಭಾಗದಲ್ಲಿ ಕೋಸ್ಚಲ್ ಎ ತಂಡ ಪ್ರಥಮ ಸ್ಥಾನವನ್ನು ಮತ್ತು ಕೋಸ್ಟಲ್ ಬಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಮಹಿಳಾ ವಿಭಾಗದಲ್ಲಿ ಕುಂಜಾರಮ್ಮ ಕುರ್ಕಾಲು ತಂಡ ಪ್ರಥಮ ಸ್ಥಾನವನ್ನು ಮತ್ತು ಖಡ್ಗೇಶ್ವರಿ ಪಡುಬಿದ್ರಿ ತಂಡ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿತು. ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ, ಮಾಜಿ ತಾ.ಪಂ.ಸದಸ್ಯ ನವೀನಚಂದ್ರ ಜೆ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ನವೀನ್ ಎನ್. ಶೆಟ್ಟಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಕಾಡಿಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ಕಾಪು ತಾಲೂಕು ಅಂಬೇಡ್ಕರ್ ಯುವ ಸೇನಾ ಸಮಿತಿ ಗೌ.ಅಧ್ಯಕ್ಷ ಪಿ.ಕೃಷ್ಣ ಬಂಗೇರ, ಸುಚರಿತ ಎಲ್ ಅಮೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಆಚಾರ್ಯ, ಹೆಜಮಾಡಿ ಗ್ರಾ.ಪಂ.ಸದಸ್ಯೆ ನಿರ್ಮಲಾ ಕೆ., ರೋಟರಿ ಅಧ್ಯಕ್ಷೆ ತಸ್ನೀನ್ ಅರಾ, ಪಡುಬಿದ್ರಿ ಗ್ರಾ.ಪಂ.ಸದಸ್ಯರಾದ ಜ್ಯೋತಿ ಮೆನನ್, ಗುಲಾಬಿ, ಮುಭೀನಾ ಬೇಗಮ್, ಮಹಮ್ಮದ್ ನಿಯಾಜ್, ಎಮ್ ಎಸ್ ಶಾಫಿ, ಸುನಂದಾ ಸಾಲ್ಯಾನ್, ಶೇಖರ್ ಸಾಲ್ಯಾನ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭ : ಮಾಜಿ ಸಚಿವ ವಿನಯ ಕುಮಾರ್ ಸೊರಕೆ , ವಕ್ಫ್ ಬೋರ್ಡ್ ಮಾಜಿ ಸದಸ್ಯ ಗುಲಾಂ ಅಹಮ್ಮದ್, ಸಾಮಾಜಿಕ ಹೋರಾಟಗಾರ ಶೇಖರ್ ಹೆಜ್ಮಾಡಿ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಲ್ಫಿ ಡಿ ಕೋಸ್ತಾ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಜಾನಪದ ವಿದ್ವಾಂಸ ಪಿ.ಕೆ ಸದಾನಂದ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ‌ ಅಧ್ಯಕ್ಷ ಶರ್ಫುದ್ದೀನ್ ಶೇಕ್, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ್ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಚರಿತಾ ಅಮೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಆಚಾರ್ಯ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕರ್ಕೇರ, ಸುರೇಶ್ ಎರ್ಮಾಳ್ ತೀರ್ಪುಗಾರರಾಗಿ ಸಹಕರಿಸಿದ್ದರು. ಗಣೇಶ್ ಕೋಟ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಜೇಶ್ ಶೇರಿಗಾರ್ ನಿರೂಪಿಸಿದರು. ಸಂತೋಷ್ ಪಡುಬಿದ್ರಿ ವಂದಿಸಿದರು.

ಪಡುಬಿದ್ರಿ : ನಡಿಪಟ್ಣದಲ್ಲಿ ಕಡಲಬ್ಬರಕ್ಕೆ ರಸ್ತೆ ಕುಸಿತ ; ಜುಲೈ 31 ರವರೆಗೆ ಬ್ಲೂ ಫ್ಲ್ಯಾಗ್ ಬೀಚ್ ಗೆ ನಿರ್ಬಂಧ

Thumbnail
Posted On: 29 Jul 2024, 07:13 AM

ಪಡುಬಿದ್ರಿ : ಕಡಲ್ಕೊರೆತ ಉಂಟಾಗುತ್ತಿರುವ ನಡಿಪಟ್ಣದ ಶ್ರೀ ವಿಷ್ಣು ಭಜನಾ ಮಂದಿರದ ಬಳಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂಫ್ಲ್ಯಾಗ್ ಬೀಚ್‌ಗೆ ತೆರಳುವ ಸಂಪರ್ಕ ರಸ್ತೆಯ ತಳ ಭಾಗಕ್ಕೆ ತೆರೆಗಳು ಅಪ್ಪಳಿಸಿ ರಸ್ತೆಯ ಒಂದು ಭಾಗ ಕುಸಿದಿದೆ. ಈ ಹಿನ್ನೆಲೆಯಲ್ಲಿ ಬೀಚ್‌ಗೆ ತೆರಳುವ ರಸ್ತೆಯನ್ನು ಬ್ಯಾರಿಕೇಡ್ ಇಟ್ಟು ಪ್ರವಾಸಿಗರು ಹೋಗದಂತೆ ನಿರ್ಬಂಧಿಸಲಾಗಿದೆ. ಜುಲೈ 31ವರೆಗೆ ಬ್ಲೂಫ್ಲ್ಯಾಗ್ ಬೀಚ್ ವೀಕ್ಷಣೆಗೆ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಆದೇಶ ಹೊರಡಿಸಿದೆ.