Updated News From Kaup

ಪಡುಬಿದ್ರಿ ರೋಟರಿ ಕ್ಲಬ್ 2025-26 ಸಾಲಿನಲ್ಲಿ ಬೆಳ್ಳಿ ಹಬ್ಬ ಸಂಭ್ರಮ - ಅಧ್ಯಕ್ಷರಾಗಿ ವೃೆ.ಸುಧೀರ್ ಕುಮಾರ್ ಆಯ್ಕೆ

Thumbnail
Posted On: 22 Jul 2024, 07:03 AM

ಪಡುಬಿದ್ರಿ : ರೋಟರಿ ಕ್ಲಬ್ 2025-26 ಸಾಲಿನಲ್ಲಿ 25 ರ ಸಂವತ್ಸರದ‌ ಆಚರಣೆಯಲ್ಲಿದ್ದು ಇದರ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ ವೃೆ.ಸುಧೀರ್ ಕುಮಾರ್ ಆಯ್ಕೆಗೊಂಡಿರುತ್ತಾರೆ. ಉಪಾಧ್ಯಕ್ಷರಾಗಿ ಮಾಧವ ಸುವರ್ಣ, ಕಾರ್ಯದರ್ಶಿಯಾಗಿ ರಮೀಜ್ ಹುಸೇನ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿ ಪಿ .ಕೃಷ್ಣ ಬಂಗೇರ, ಸಮಿತಿ ಸದಸ್ಯರಾಗಿ ವೆೃ .ಸುಕುಮಾರ್, ಗಣೇಶ್ ಅಚಾರ್ಯ ಉಚ್ಚಿಲ, ಅಬ್ದುಲ್ ಹಮೀದ್, ರಿಯಾಜ್ ಮುದರಂಗಡಿ, ಗಣೇಶ್ ಅಚಾರ್ಯ ಎರ್ಮಾಳ್, ಕೇಶವ ಸಾಲ್ಯಾನ್, ಮಹಮ್ಮದ್ ನಿಯಾಜ್, ಗೀತಾ ಅರುಣ್, ತಸ್ನೀನ್ ಅರಾ, ಜ್ಯೋತಿ ಮೆನನ್, ಸುನಿಲ್ ಕುಮಾರ್ ಆಯ್ಕೆಯಾಗಿರುತ್ತಾರೆ.

ಯುವವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು : ರಜತ ಸಂಭ್ರಮ - ವನಮಹೋತ್ಸವ ಕಾರ್ಯಕ್ರಮ

Thumbnail
Posted On: 22 Jul 2024, 06:53 AM

ಉಡುಪಿ : ಯುವವಿಚಾರ ವೇದಿಕೆ (ರಿ.) ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮದ ಎರಡನೇ ಕಾರ್ಯಕ್ರಮವಾದ ವನಮಹೋತ್ಸವವು ಜರಗಿತು. ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಇದರ ಮಾಲಕರು, ಜಯಂಟ್ಸ್ ಗ್ರೂಪ್ ನ ಸಂಚಾಲಕರಾಗಿರುವ ಮಧುಸೂಧನ್ ಹೇರೂರು ಇವರು ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹಸಿರೇ ಉಸಿರು ಅದಕ್ಕಾಗಿ ಗಿಡ ನೆಟ್ಟು ಪಾಲಿಸಿ ಪೋಷಿಸಿ ಹಾಗೂ ಸಂರಕ್ಷಿಸಿ, ಪ್ರತಿಯೊಂದು ಗಿಡಗಳಿಗೂ ದೈವೀಕ ಶಕ್ತಿ ಇದ್ದು ಗಿಡಗಳೊಂದಿಗೆ ನಾವಿದ್ದಾಗ ಮಾತ್ರ ಆಯಾ ಶಕ್ತಿಗಳ ಸಂಚಲನ ಸಾಧ್ಯ ಎಂದು ತಿಳಿಸಿದರು. ಭವಿಷ್ಯದ ಬದುಕಿಗೆ ವೃಕ್ಷ ಬೆಳೆಸುವ ಸಂಕಲ್ಪದೊಂದಿಗೆ ಗಿಡ ನೆಡುವ ಮತ್ತು ಗಿಡ ವಿತರಣಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಸಹಭಾಗಿತ್ವ ಬ್ರಹ್ಮಾವರದ ಸುವರ್ಣ ಎಂಟರ್ಪ್ರೈಸಸ್ ವಹಿಸಿದ್ದು, ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಹಾಗೂ ಉಪ್ಪೂರು ವ್ಯ. ಸೇ. ಸ. ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರ, ಜಯಕರ್ ಆಚಾರ್ ಮುಟ್ಟಿಕಲ್, ಸ್ಪಂದನ ವಿಶೇಷ ಚೇತನ ಸಂಸ್ಥೆಯ ಜನಾರ್ಧನ್ ಗಿಡ ನೆಟ್ಟು ಶುಭ ಹಾರೈಸಿದರು. ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಸುಬ್ರಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕುತ್ಯಾರು : ಕುತ್ಕುಲ್ ಬಳಿ ಕಾಲು ಸಂಕ ಇಲ್ಲದೆ ಗ್ರಾಮಸ್ಥರ ಪರದಾಟ

Thumbnail
Posted On: 21 Jul 2024, 07:14 PM

ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಕುಲ್ ಬಳಿ ಕಾಲು ಸಂಕ ಇಲ್ಲದೆ ಗ್ರಾಮಸ್ಥರಿಗೆ ಸಮಸ್ಯೆ ಆಗಿದ್ದು, ಈ ಬಗ್ಗೆ ಪಂಚಾಯತ್ ಗೆ ಮನವಿ ನೀಡಿದ್ದು ಈ ಬಗ್ಗೆ ಜನಪ್ರತಿನಿಧಿಗಳು ತುರ್ತು ಗಮನ ಹರಿಸಬೇಕಾಗಿ ಸಮಾಜ ಸೇವಕ ಅಲ್ವಿನ್ ಪ್ರಕಾಶ್ ಡಿಸೋಜ, ಕೇಂಜ ಕುತ್ಯಾರು ಪ್ರಕಟಣೆಯಲ್ಲಿ ತಿಳಿಸಿರುವರು.

ಪಡುಬಿದ್ರಿ : ಬಿಲ್ಲವ ಸಂಘದಲ್ಲಿ ಆಟಿದ ಲೇಸ್

Thumbnail
Posted On: 21 Jul 2024, 06:41 PM

ಪಡುಬಿದ್ರಿ : ತುಳುನಾಡಿನ ಪ್ರತಿ ಪದ್ದತಿಗೂ ಅದರದೇ ಮಹತ್ವವಿದೆ. ಹಿರಿಯರಿಂದ ಸಂಸ್ಕೃತಿ ಉಳಿದಿದ್ದು, ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಆಟಿಯ ತಿನಿಸುಗಳು ವಿಶೇಷವಾಗಿದ್ದು, ಈ ತಿಂಗಳಿನಲ್ಲಿ ಇದು ದೇಹಕ್ಕೆ ಅವಶ್ಯವಾಗಿದೆ. ಹೆತ್ತವರ ಜೊತೆಗೆ ಮಕ್ಕಳು ಇಂತಹ ಕಾರ್ಯಕ್ರಮಗಳಿಗೆ ಬಂದರೆ ಯಶಸ್ವಿಯಾದಂತೆ. ಆಟಿಯ ಪದ್ಧತಿಗಳನ್ನು ಮುಂದುವರೆಸೋಣ ಎಂದು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದ ಸಭಾಗ್ರಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಹಾಗೂ ಕಲ್ಪತರು ಮಹಿಳಾ ಸ್ವ ಸಹಾಯ ಗುಂಪಿನ ಆಶ್ರಯದಲ್ಲಿ ಜರಗಿದ ಆಟಿದ ಲೇಸ್ ಕಾರ್ಯಕ್ರಮವನ್ನು ಕಲಸಕ್ಕೆ ಭತ್ತ ತುಂಬುವ ಮೂಲಕ ಉದ್ಘಾಟಿಸಿ ‌ಮಾತನಾಡಿದರು. ಕವಯಿತ್ರಿ ಸುಗಂಧಿ ಶ್ಯಾಮ್ ಆಟಿ ತಿಂಗಳಿನ ಮಹತ್ವದ ಬಗೆಗಿನ ಕವನ ವಾಚಿಸಿದರು. ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿದ ಮಹಿಳೆಯರನ್ನು ಗುರುತಿಸಲಾಯಿತು. ವೇದಿಕೆಯಲ್ಲಿ ಕನ್ನಂಗಾರು ಬ್ರಹ್ಮ ಬೈದರ್ಕಳ ಗರಡಿ ಆಡಳಿತ ಸಮಿತಿಯ ಅಧ್ಯಕ್ಷರಾದ ಸೀನ ಪೂಜಾರಿ, ಪಡುಬಿದ್ರಿ ಪಂಚಾಯತ್ ಸದಸ್ಯರಾದ ಗಣೇಶ್ ಕೋಟ್ಯಾನ್, ಪಡುಬಿದ್ರಿ ಬಿಲ್ಲವ ಸಂಘದ ಕೋಶಾಧಿಕಾರಿ ಅಶೋಕ್ ಪೂಜಾರಿ ಪಾದೆಬೆಟ್ಟು, ವೈದ್ಯೆ ಡಾ.ಐಶ್ವರ್ಯ ಸಿ. ಅಂಚನ್, ಪಡುಬಿದ್ರಿ ಬಿಲ್ಲವ ಸಂಘದ ಅರ್ಚಕರಾದ ಚಂದ್ರಶೇಖರ ಶಾಂತಿ, ಬ್ರಹ್ಮಶ್ರೀ ನಾರಾಯಣಗುರು ಸೇವಾದಳದ ದಳಪತಿ ಸಂತೋಷ್ ನಂದಿಕೂರು, ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಆನಂದ್ ಉಪಸ್ಥಿತರಿದ್ದರು ಸುಜಾತ, ಪೂರ್ಣಿಮ ಪ್ರಾರ್ಥಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ‌ ಆನಂದ್ ಸ್ವಾಗತಿಸಿದರು. ಚಿತ್ರಾಕ್ಷಿ ಕೆ. ಕೋಟ್ಯಾನ್ ಆಟಿ ರಸಪ್ರಶ್ನೆ ನಡೆಸಿಕೊಟ್ಟರು. ಸುಚರಿತ ಎಲ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ತೇಜಾವತಿ ವಂದಿಸಿದರು. ಮಹಿಳೆಯರಿಂದ ಜಾನಪದ ನೃತ್ಯ, ಗಾಯನವು ಜರಗಿತು. ಆಟಿ‌ ವಿಶೇಷತೆಯ ಸುಮಾರು 20 ಬಗೆಯ ತಿನಿಸುಗಳನ್ನು ಉಣ ಬಡಿಸಲಾಯಿತು.

ಪಡುಬಿದ್ರಿ : ನಡಿಪಟ್ಣ ಕಡಲ್ಕೊರೆತ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಭೇಟಿ

Thumbnail
Posted On: 21 Jul 2024, 06:33 PM

ಪಡುಬಿದ್ರಿ : ಇಲ್ಲಿನ ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷೀ ಹೆಬ್ಬಾಳ್ಕರ್ ರವಿವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ 478 ಕೋಟಿಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯದ 3,100 ಕಿ.ಮೀ. ಕರಾವಳಿ ತೀರದಲ್ಲಿ ಉಡುಪಿ ಜಲ್ಲೆಯಲ್ಲಿಯೇ ಹೆಚ್ಚು ಭಾಗವಿದೆ. ಕಡಲ್ಕೊರೆತಕ್ಕೆ ತೀರದಲ್ಲಿ ಪ್ರಸ್ತುತ ಹಾಕಲಾಗುತ್ತಿರುವ ಕಲ್ಲುಗಳು ತಾತ್ಕಾಲಿಕ ಪರಿಹಾರವಾಗಿದ್ದು, ತಡೆಗೋಡೆ ನಿರ್ಮಾಣವೊಂದೇ ಶಾಶ್ವತ ಪರಿಹಾರ. ಮುಂಬಯಿ, ಗುಜರಾತ್ ಮಾದರಿಯ ತಡೆಗೋಡೆ ನಿರ್ಮಾಣವಾಗಬೇಕಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರ ಎರಡು ಸೇರಿ ಮಾಡಬೇಕಾಗಿದೆ. ಅನುದಾನದ ವಿಷಯದಲ್ಲಿ ಬೇರೊಬ್ಬರ ಮೇಲೆ ಆರೋಪ ಮಾಡಲ್ಲ. ನನ್ನ ಅವಧಿಯಲ್ಲಿಯೇ ಈ ಕಾರ್ಯ ಆಗಲು ಪ್ರಯತ್ನಿಸುತ್ತೇನೆ ಎಂದರು. ಈ ಸಂದರ್ಭ ಸ್ಥಳೀಯರು ಕಡಲ್ಕೊರೆತ ಸಮಸ್ಯೆ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು. ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಸಿಸ್ಟೆಂಟ್ ಕಮಿಷನರ್ ರಶ್ಮಿ, ಕಾಪು ತಹಶಿಲ್ದಾರ್ ಡಾ. ಪ್ರತಿಭ ಆರ್., ಕಾಪು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ' ಸಿಲ್ವ, ಇಲಾಖಾ ಆಧಿಕಾರಿಗಳು ಉಪಸ್ಥಿತರಿದ್ದರು.

ಉಚ್ಚಿಲ ರೋಟರಿ ಕ್ಲಬ್ ಪದಗ್ರಹಣ

Thumbnail
Posted On: 21 Jul 2024, 03:01 PM

ಉಚ್ಚಿಲ : ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ಮಾಡುವ ಸೇವೆ ದೊಡ್ಡದಾಗಬೇಕಂತಿಲ್ಲ ಸಣ್ಣದಾದರೂ ಸೇವೆಯೇ ಆಗಿದೆ. ನಾಯಕತ್ವದ ಜೊತೆಗೆ ಜವಾಬ್ದಾರಿಯ ಬಗೆಗೂ ತಿಳಿಯುವ ಕಾರ್ಯ ರೋಟರಿ ಸಂಸ್ಥೆಯಲ್ಲಿದೆ. ಹೆಚ್ಚಿನ ಸದಸ್ಯರು ಸೇರ್ಪಡೆಯಾಗುವ ಮೂಲಕ ಸಂಸ್ಥೆಯನ್ನು ಬಲಪಡಿಸಬೇಕು ಎಂದು ಝೋನ್ V ಆರ್.ಐ. ಜಿಲ್ಲೆ 3182 ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ಪಿಎಚ್ಎಫ್ ಸೂರ್ಯಕಾಂತ್ ಶೆಟ್ಟಿ ಹೇಳಿದರು‌. ಅವರು ಉಚ್ಚಿಲದಲ್ಲಿ ಜರಗಿದ ಉಚ್ಚಿಲ ರೋಟರಿ ಸಂಸ್ಥೆಯ 2024 -25ನೇ ಸಾಲಿನ ಪದಗ್ರಹಣ ಅಧಿಕಾರಿಯಾಗಿ ಪದಗ್ರಹಣ ನೆರವೇರಿಸಿ ಮಾತನಾಡಿದರು. ನೂತನ ಅಧ್ಯಕ್ಷರಾದ ಹಿಬದುಲ್ಲ ರಫೀಕ್ ಅಹಮ್ಮದ್ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಕುಂಡಂತಾಯ ಮತ್ತು ತಂಡದ ಪದಗ್ರಗಣ ನೆರವೇರಿತು. ಗೌರವ/ಸನ್ಮಾನ : ಉಚ್ಚಿಲ ವ್ಯಾಪ್ತಿಯ ಶಾಲೆಗಳ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸಮಥ್೯ ಆರ್ ಜೋಶಿ, ಶಹನ ಪಾತಿಮ, ಅಬ್ಶೀನ್ ಆಯೇಷ, ಶ್ರಿಷನ್ ಶೆಟ್ಟಿ, ಗಾಯತ್ರಿ ಪೈ, ಸಂಸ್ಥೆಗೆ ಸೇರ್ಪಡೆಗೊಂಡ ನೂತನ ಸದಸ್ಯರಾದ ನಗ್ಮ, ಶಿಮಾಝ್, ಚಂದ್ರಹಾಸ ಆಚಾರ್ಯರನ್ನು ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಶ್ರೀಮತಿ ಪಿ ಎಸ್ ಪುತ್ರಾಯರನ್ನು, ಮಾಜಿ ಸಹಾಯಕ ಗವರ್ನರ್ ಪಿ ಎಚ್ ಎಫ್ ಶೈಲೇಂದ್ರ ರಾವ್ ಕೆ., ಝೋನಲ್ ಲೆಫ್ಟಿನೆಂಟ್ ಚಂದ್ರ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾದ ಶೇಖಬ್ಬ, ಅಚ್ಯುತ ಶೆಣೈ, ನೂತನ ಅಧ್ಯಕ್ಷ, ಕಾರ್ಯದರ್ಶಿಯಾದ ಹಿಬದುಲ್ಲ ರಫೀಕ್ ಅಹಮ್ಮದ್ ಹಾಗೂ ಸತೀಶ್ ಕುಂಡಂತಾಯರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರೋಟರಿ ಸಹಾಯಕ ಗವರ್ನರ್ ಅನಿಲ್ ಡೇಸಾ, ಮಾಜಿ ಸಹಾಯಕ ಗವರ್ನರ್ ಪಿ ಎಚ್ ಎಫ್ ಶೈಲೇಂದ್ರ ರಾವ್ ಕೆ., ಝೋನಲ್ ಲೆಫ್ಟಿನೆಂಟ್ ಮೆಲ್ವಿನ್ ಡಿಸೋಜ, ಝೋನಲ್ ಲೆಫ್ಟಿನೆಂಟ್ ಚಂದ್ರ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾದ ಶೇಖಬ್ಬ, ನಿಕಟಪೂರ್ವ ಕಾರ್ಯದರ್ಶಿ ಅಚ್ಯುತ ಶೆಣೈ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಶೇಖಬ್ಬ ಸ್ವಾಗತಿಸಿದರು. ಅಚ್ಯುತ ಶೆಣೈ ವರದಿ ವಾಚಿಸಿದರು. ಸತೀಶ್ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಕುಂಡಂತಾಯ ವಂದಿಸಿದರು.

ಕನ್ನಡ ಶಾಲೆ ಬೆಳೆಸಿ- ಕಲೆ ಸಂಸ್ಕೃತಿ ಉಳಿಸಿ ಅಭಿಯಾನ : ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

Thumbnail
Posted On: 20 Jul 2024, 07:22 PM

ಉಡುಪಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ಬೆಳಕಿನ ಬಾಗಿಲು ಕನ್ನಡ ಶಾಲೆ~ಉಳಿಸಲು ಬೇಕು ಮಕ್ಕಳ ಲೀಲೆ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ಶಾಲೆ ಬೆಳೆಸಿ- ಕಲೆ ಸಂಸ್ಕೃತಿ ಉಳಿಸಿ ಅಭಿಯಾನದ ಬಿತ್ತಿಪತ್ರವನ್ನು ಉಡುಪಿ ಜನಪ್ರಿಯ ಶಾಸಕ ಯಶ್ ಪಾಲ್ ಸುವರ್ಣ ಅವರು ಉಡುಪಿಯ ಬೋರ್ಡ್ ಹೈಸ್ಕೂಲಿನ ಆವರಣದಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ ಕಸಾಪ ಉಡುಪಿ ತಾಲೂಕು ಘಟಕ ನಡೆಸುತ್ತಿರುವ ಅಭಿಯಾನ ಅತ್ಯಂತ ಮಹತ್ವದ್ದಾಗಿದೆ ಮತ್ತು ಶ್ಲಾಘನೀಯ ಕೆಲಸ ಎಂದರು. ಶಾಸಕರ ನೆಲೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು. ತಾಲೂಕು ಘಟಕದ ಮಾಜಿ ಅಧ್ಯಕ್ಷ ಡಾ. ಗಣನಾಥ್ ಎಕ್ಕಾರು ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ, ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜಿನಿ ವಸಂತ್ , ಮಾರುತಿ, ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಡಾ. ಎಲ್ಲಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಲೀಲಾ ಭಟ್ ಪ್ರಾಂಶುಪಾಲರು, ಸರಕಾರಿ ಪದವಿ ಪೂರ್ವ ಕಾಲೇಜು, ಕಿದಿಯೂರು ಹೋಟೆಲ್ ನ ಜಿತೇಶ್ ಕಿದಿಯೂರು, ಕಸಾಪ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸದಸ್ಯರಾದ ವಸಂತ್, ಈರಣ್ಣ ಕುರುವತ್ತಿ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಪಡುಬಿದ್ರಿ : ನಡಿಪಟ್ಣದಲ್ಲಿ ಕಡಲಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ಶೆಡ್

Thumbnail
Posted On: 20 Jul 2024, 02:00 PM

ಪಡುಬಿದ್ರಿ : ಇಲ್ಲಿನ ಕಡಲ ಕಿನಾರೆಯ ನಡಿಪಟ್ಣ ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚಿದ್ದು ಕೆಲವು ದಿನಗಳ ಹಿಂದೆ ಅಪಾಯದಂಚಿನಲ್ಲಿದ್ದ ಮೀನುಗಾರಿಕಾ ಶೆಡ್ ಕಡಲಬ್ಬರಕ್ಕೆ ಸಿಲುಕಿ, ಹಾನಿಯಾಗಿದೆ. ಮೀನುಗಾರಿಕಾ ರಸ್ತೆಗೂ ಹಾನಿಯಾಗುವ ಸಂಭವವಿದೆ. ಪಡುಬಿದ್ರಿಯ ಸುಮಾರು 50 ಕುಟುಂಬದ ಜೀವನವನ್ನು ಅವಲಂಬಿಸಿರುವ ನಾಡದೋಣಿ ಮಹೇಶ್ವರಿ ಡಿಸ್ಕೊ ಫಂಡ್ ನ ಮೀನುಗಾರಿಕೆಯ ಶೆಡ್ ಇದಾಗಿದೆ. ಮೀನುಗಾರಿಕಾ ರಸ್ತೆಗೂ ಅಪಾಯದ ಸಂಭವವಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಜುಲೈ 21: ಕುಲಾಲ ಸಂಘ ನಾನಿಲ್ತಾರು ವತಿಯಿಂದ ಆಟಿಡೊಂಜಿ ಕೂಟ

Thumbnail
Posted On: 19 Jul 2024, 08:30 PM

ಕಾರ್ಕಳ : ತಾಲೂಕಿನ ಮುಂಡ್ಕೂರು ಮುಲ್ಲಡ್ಕದ ಕುಲಾಲ ಸಂಘ (ರಿ.) ನಾನಿಲ್ತಾರು ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮವು ಕುಲಾಲ ಭವನ ನಾನಿಲ್ತಾರು ಇಲ್ಲಿ ಜುಲೈ 21, ಆದಿತ್ಯವಾರದಂದು ಜರಗಲಿದೆ ಎಂದು ಸಂಘದ ಅಧ್ಯಕ್ಷರಾದ ಜಯರಾಮ ಕುಲಾಲ್ ಅಗರಟ್ಟ ಪ್ರಕಟಣೆಯಲ್ಲಿ ತಿಳಿಸಿರುವರು.

ಡೆಂಗ್ಯು ಬಗ್ಗೆ ನಿರ್ಲಕ್ಷ್ಯ ಬೇಡ : ಉಡುಪಿ ಜಿಲ್ಲಾಧಿಕಾರಿ

Thumbnail
Posted On: 19 Jul 2024, 08:21 PM

ಉಡುಪಿ : ಡೆಂಗ್ಯೂ ಅತ್ಯಂತ ದೊಡ್ಡ ರೋಗವೇನಲ್ಲ. ಆದರೆ ಡೆಂಗ್ಯೂನ ಬಗ್ಗೆ ನಿರ್ಲಕ್ಷ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ನಮ್ಮ ಮನೆಯ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಸೊಳ್ಳೆಗಳ ಮೇಲೆ ವಿಶೇಷ ನಿಗಾ ವಹಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ. ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್, ರೋಟರಿ ಕ್ಲಬ್ ಉದ್ಯಾವರ ಮತ್ತು ಉದ್ಯಾವರ ಗ್ರಾಮ ಪಂಚಾಯತ್ ಇದರ ಜಂಟಿ ಆಶ್ರಯದಲ್ಲಿ ನಡೆದ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಪಿ ಜಿಲ್ಲಾಧಿಕಾರಿ ಮಾತನಾಡಿದರು. ಬೆಳಗ್ಗಿನ ಅವಧಿಯಲ್ಲಿ ಕಚ್ಚುವಂತಹ ಈ ಸೊಳ್ಳೆಗಳ ಮೂಲಕ ಡೆಂಗ್ಯೂ ಜ್ವರ ಹರಡುತ್ತಿದೆ. ಮನೆ ಪರಿಸರದಲ್ಲಿ ಚಿಪ್ಪು, ಚಹಾಲೋಟ ಸಹಿತ ವಿವಿಧ ಸ್ಥಳಗಳಲ್ಲಿ ನೀರು ನಿಂತರೆ ಇಂಥ ಸಮಸ್ಯೆಗಳು ಉದ್ಭವಿಸುತ್ತದೆ. ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ಬಯಸುವುದು ಅತ್ಯಗತ್ಯ. ಕಹಿಬೇವಿನ ಎಣ್ಣೆ ಹಚ್ಚುವುದರ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬಹುದು. ರಾಜ್ಯ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮೂಲಕ ವಿವಿಧ ಕಡೆಗಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಶುಕ್ರವಾರ ಇಲಾಖಾ ವತಿಯಿಂದ ಡ್ರೈ ಆಚರಿಸಲಾಗುತ್ತಿದ್ದು, ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ನೀಡಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಈಶ್ವರ್ ಗಡದ, ಜಿಲ್ಲಾ ರೋಗವಾಹಕ ಆಶ್ರುತ ರೋಗಗಳ ನಿರ್ವಹಣಾಧಿಕಾರಿ ಡಾ. ಪ್ರಶಾಂತ್ ಭಟ್, ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಪಿಡಿಒ ರಮೇಶ್, ಪಶುವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ, ಉಡುಪಿ ಜಿಲ್ಲಾ ಕೀಟಶಾಸ್ತ್ರಜ್ಞ ಮುಕ್ತ ಆಚಾರ್, ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಮೂಡಬೆಟ್ಟು ಆರೋಗ್ಯಧಿಕಾರಿ ಡಾ. ಶೈನಿ, ಲಯನ್ಸ್ ಇಂಟರ್ನ್ಯಾಷನಲ್ ಫೌಂಡೇಶನ್ ಜಿಲ್ಲಾ ಸಂಯೋಜನಾಧಿಕಾರಿ ಲಯನ್ ಹರಿಪ್ರಸಾದ್ ರೈ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್, ರೋಟರಿ ಕ್ಲಬ್ ಉದ್ಯಾವರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ಶೈನ್ ಅಧ್ಯಕ್ಷ ಲಯನ್ ರೊನಾಲ್ಡ್ ರೆಬೆಲ್ಲೊ ಸ್ವಾಗತಿಸಿದರೆ, ರೋಟರಿ ಕ್ಲಬ್ ಉದ್ಯಾವರ ಅಧ್ಯಕ್ಷ ರೋಟೇರಿಯನ್ ಜೀವನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.