Updated News From Kaup

ಅಯೋಧ್ಯೆಯಲ್ಲಿ ಶ್ರೀರಾಮ ದರ್ಶನ ಮಾಡಿ ಇಹಲೋಕ ತ್ಯಜಿಸಿದ ಆರ್‌ಎಸ್‌ಎಸ್‌ ಮುಖಂಡ ಪಾಂಡುರಂಗ ಶಾನುಭಾಗ್  

Posted On: 10-03-2024 08:34PM

ಅಯೋಧ್ಯೆ: ಆರ್‌ಎಸ್‌ಎಸ್‌ನ ಉಡುಪಿಯ ‌ ಹಿರಿಯ ಸಕ್ರಿಯ ಸದಸ್ಯ ಪಾಂಡುರಂಗ ಶಾನುಭಾಗರು ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಸಮೀಪದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇಂದು ಬೆಳಿಗ್ಗೆ ಶ್ರೀ ರಾಮನ ದರ್ಶನ‌ ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿ  ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ  ಸಂತೋಷದಿಂದ ತೆರಳಿದ್ದರು.

ಅಪರಾಹ್ನದ ಪಲ್ಲಕ್ಕಿಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ರಾಷ್ಟ್ರಭಕ್ತ ಪಾಂಡುರಂಗ ಶಾನುಭಾಗರಿಗೆ ಹೃದಯಾಘಾತವಾಗಿದೆ. ಸಮೀಪವರ್ತಿಗಳು ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಜೀವನ ಪರ್ಯಂತ ಹಿಂದು ಸಿದ್ಧಾಂತಕ್ಕಾಗಿ ದೈಹಿಕ ಅಂಧತ್ವವಿದ್ದರೂ, ಆರ್‌ಎಸ್‌ಎಸ್‌ನಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗರು ಅಪೂರ್ವ ಚಿಂತಕರೂ, ರಾಷ್ಟ್ರ ಭಕ್ತರೂ ಆಗಿದ್ದರು.

ಪಡುಬಿದ್ರಿ : ಶಿವಾಯ ಫೌಂಡೇಶನ್ ವತಿಯಿಂದ ಚಿಕಿತ್ಸೆಗೆ ನೆರವು

Posted On: 09-03-2024 02:09PM

ಪಡುಬಿದ್ರಿ : ಪದವಿ ಶಿಕ್ಷಣ ಪಡೆಯುತ್ತಿರುವ ಶಿರ್ವದ ಜಿಗಿಷಾ ದೇವಾಡಿಗ ಎಂಬ ಹೆಣ್ಣು ಮಗಳ ಬೋನ್ ಟ್ಯೂಮರ್ ಚಿಕಿತ್ಸೆಗಾಗಿ ಶಿವಾಯ ಫೌಂಡೇಶನ್ ವತಿಯಿಂದ, ಗಣಪತಿ ದೇವಸ್ಥಾನ ಪಡುಬಿದ್ರಿ ಇಲ್ಲಿ 45,000 ರೂಪಾಯಿಗಳ ಧನಸಹಾಯದ ಚೆಕ್ ಹಸ್ತಾಂತರಿಸಿ ಜಿಗಿಷಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಪಡುಬಿದ್ರಿ ಆಸ್ಪೆನ್ ಎಸ್ ಇ ಝಡ್ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷರಾದ ನವೀನಚಂದ್ರ ಶೆಟ್ಟಿ, ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಫಲಿಮಾರು, ಕಾರ್ಯಕಾರಿ ಸಮಿತಿ ಸದಸ್ಯರಾದ ರವಿ ಶೆಟ್ಟಿ ಶಾರದೆ, ಸದಸ್ಯರಾದ ಮಹೇಶ್ ದೇವಾಡಿಗ ಸ್ಮೈಲ್ ಫೋಟೊಗ್ರಫಿ ಮುಕ್ಕ ಮತ್ತು ಜಗನ್ನಾಥ್ ಶೆಟ್ಟಿ, ರಮಣಿ ಐಸ್ಕ್ರೀಂ ಪಡುಬಿದ್ರಿ ಮುಂತಾದವರು ಉಪಸ್ಥಿತರಿದ್ದರು.

ಉಚ್ಚಿಲ : ನಟೇಶ ನೃತ್ಯ ನಿಕೇತನ - ವಿಂಶತಿ ಸಂಭ್ರಮ ; ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

Posted On: 09-03-2024 07:44AM

ಉಚ್ಚಿಲ : ಭಾರತವು ಹಲವು ಸಂಸ್ಕೃತಿಗಳ ತವರು. ಬಹು ಬದುಕುಗಳ ಕಥನ ಎಂಬ ಮಾತಿನಂತೆ ವಿವಿಧ ಅಭಿವೃದ್ಧಿಯ ಜೊತೆಗೆ ಸಂಸ್ಕಾರಯುತ ಮಾನವ ಸಂಪನ್ಮೂಲ ದೇಶದ ಆಸ್ತಿ. ಪಾಶ್ಚಿಮಾತ್ಯದೆಡೆಗೆ ಮಕ್ಕಳು ವಾಲುತ್ತಿರುವ ಸಂದರ್ಭ ನಮ್ಮ ನೆಲದ ಸಂಸ್ಕೃತಿ, ಸಂಗೀತದ ಅಭಿರುಚಿ ಬೆಳೆಸುವುದು ಅನಿವಾರ್ಯ. ಐತಿಹಾಸಿಕ ಸಾಂಸ್ಕೃತಿಕ ನೃತ್ಯ ಪ್ರಾಕಾರವಾದ ಭರತನಾಟ್ಯವನ್ನು ನೂರಾರು ಮಕ್ಕಳಿಗೆ ಕಲಿಸಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕೀರ್ತಿ ನಟೇಶ ನೃತ್ಯ ನಿಕೇತನ ಸಂಸ್ಥೆಗಿದೆ. ವೃತ್ತಿ ಮತ್ತು ಲೌಕಿಕ ಬದುಕಿನಲ್ಲಿ ಲಯ ಕಂಡುಕೊಂಡ ಮಂಗಳ ಕಿಶೋರ್ ದೇವಾಡಿಗ ಅವರ ನಾಟ್ಯ ಕೇಂದ್ರದಿಂದ ಭರತನಾಟ್ಯದ ಕಲಿಕೆಯ ಜೊತೆಗೆ ಸಾಧಕರನ್ನು ಗುರುತಿಸುವ ಕಾಯಕ‌ ಮುಂದೆಯೂ ನಡೆಯಲಿ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಉಚ್ಚಿಲದಲ್ಲಿ ನಟೇಶ ನೃತ್ಯ ನಿಕೇತನ ಉಚ್ಚಿಲದ ವಿಂಶತಿ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಅರ್ಚಕರಾದ ಗೋವಿಂದ ರಾಜ್ ಭಟ್ ಉದ್ಘಾಟಿಸಿ, ಶುಭಹಾರೈಸಿದರು.

ಪ್ರಶಸ್ತಿ ಪ್ರದಾನ : ಪತ್ರಿಕಾರಂಗದಲ್ಲಿ ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಹರೀಶ್ ಹೆಜಮಾಡಿ, ಸಂಗೀತ ಕ್ಷೇತ್ರದಲ್ಲಿ ಶರತ್ ಉಚ್ಚಿಲ, ಭರತನಾಟ್ಯ ಕ್ಷೇತ್ರದಲ್ಲಿ ಡಾ| ರಶ್ಮಿ ಕಲ್ಕೂರ, ಯಕ್ಷಗಾನ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ವೈ.ಎಲ್.ವಿಶ್ವರೂಪ ಮಧ್ಯಸ್ಥ ನೀಲಾವರ, ಶಿಕ್ಷಣ ಕ್ಷೇತ್ರದಲ್ಲಿ ವನಿತಾ, ನಾಟ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಪ್ರಕಾಶ್ ಕಾರ್ಕಳರಿಗೆ ನಟೇಶ ಪ್ರಶಸ್ತಿಯನ್ನು ನೀಡಲಾಯಿತು. ಪ್ರಸಾದನ ಕ್ಷೇತ್ರದಲ್ಲಿ ರಮೇಶ್ ಉಡುಪಿ, ವೇಷಭೂಷಣ ಸಂಸ್ಥೆ ಕಲಾನಿಕೇತನ ಸುರತ್ಕಲ್ ಇದರ ಸ್ವರ್ಣ ಎಲ್ ಶೆಟ್ಟಿ ಇವರಿಗೆ ವರ್ಣಾರ್ಪಣ ಪ್ರಶಸ್ತಿ, ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ ಇವರಿಗೆ ನಾಟ್ಯ ಕಲಾಂಜಲಿ ಪ್ರಶಸ್ತಿಯನ್ನು ಅತಿಥಿಗಳ ಸಮ್ಮುಖ ಪ್ರದಾನಿಸಲಾಯಿತು.

ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಾಲೂಕು ತಹಶೀಲ್ದಾರ್ ಡಾ| ಪ್ರತಿಭ ಆರ್., ಉಚ್ಚಿಲ ಬಡಾ ಗ್ರಾ. ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ಉಚ್ಚಿಲ ಮಹಾಲಕ್ಷ್ಮಿ ದೇವಳದ ಅರ್ಚಕ ಕೆ.ವಿ.ರಾಘವೇಂದ್ರ ಉಪಾಧ್ಯಾಯ, ನಾದಶ್ರೀ ಸೊಸೈಟಿ ಕುಕ್ಕಿಕಟ್ಟೆ ಉಡುಪಿ ಇದರ ಅಧ್ಯಕ್ಷ ಶ್ರೀಧರ ದೇವಾಡಿಗ, ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ, ನೃತ್ಯ ಗುರು ಮಂಗಳ ಕಿಶೋರ್, ಸಂಚಾಲಕರಾದ ಪ್ರಕಾಶ್ ದೇವಾಡಿಗ, ಕಿಶೋರ್ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು.

ಭರತನಾಟ್ಯ ಕಲಾವಿದೆ ವಿದುಷಿ ವೀಣಾ ಎಂ ಸಾಮಗ ಅಧ್ಯಕ್ಷತೆ ವಹಿಸಿದ್ದರು. ಪಂಚಮಿ ಪ್ರಾರ್ಥಿಸಿದರು. ನೃತ್ಯ ಗುರು ಮಂಗಳ ಕಿಶೋರ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.

ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿ ಸುಜಲ ಎಸ್ ಸುವರ್ಣ ಆಯ್ಕೆ

Posted On: 09-03-2024 07:31AM

ಉಡುಪಿ : ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿ ಸುಜಲ ಎಸ್ ಸುವರ್ಣ ಇವರು ಆಯ್ಕೆಯಾಗಿರುತ್ತಾರೆ.

ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುತ್ತಾರೆ.

ಬಂಗಾರದ ಕನಸು ನನಸು ಮಾಡಲಿದೆ ಸಾಯಿ ಗೋಲ್ಡ್ ಸ್ಕೀಮ್

Posted On: 09-03-2024 07:01AM

ಕಟಪಾಡಿ : ಇಲ್ಲಿನ ಸಾಯಿ ಗೋಲ್ಡ್ ‌ಸಂಸ್ಥೆಯು ಕಂತಿನ ಮೂಲಕ ಹಣ ಪಾವತಿಸುವ ಜೊತೆಗೆ ಒಂದಷ್ಟು ‌ಹೊಸ ಯೋಜನೆಗಳನ್ನು ಚಿನ್ನ ಪ್ರಿಯರಿಗಾಗಿ‌ ತಂದಿದ್ದಾರೆ.

ಏಪ್ರಿಲ್ 15 ಕ್ಕೆ ಮೊದಲ ಕಂತು ಪ್ರಾರಂಭವಾಗಲಿದ್ದು, ಪ್ರತಿ ಸದಸ್ಯರು ಪ್ರತಿ ತಿಂಗಳು ರೂ. 1000/-ದಂತೆ 20 ಕಂತು ಪಾವತಿಸತಕ್ಕದ್ದು. ಸದಸ್ಯರು ಪ್ರತಿ ತಿಂಗಳು 13ನೇ ತಾರೀಕಿಗಿಂತ ಮುಂಚೆ ಕಂತನ್ನು ಪಾವತಿಸಬೇಕು. ತಪ್ಪಿದರೆ ನಿಮ್ಮ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ. ಪ್ರತಿ ತಿಂಗಳ 15ನೇ ತಾರೀಕಿನಂದು ಸಂಜೆ 5.30 ಗಂಟೆಗೆ ಸರಿಯಾಗಿ ಹಾಜರಿದ್ದ ಸದಸ್ಯರ ಸಮ್ಮುಖ ಹಾಗೂ ನಮ್ಮ ಕಾಪು ಯುಟ್ಯೂಬ್ ನೇರ ಪ್ರಸಾರದಲ್ಲಿ ಡಾ. ನಡೆಸಲಾಗುವುದು. ಪ್ರತಿ ತಿಂಗಳು ಡ್ರಾ ಫಲಿತಾಂಶವನ್ನು ಸದಸ್ಯರಿಗೆ ವಾಟ್ಸಾಪ್ ಮೂಲಕ ತಿಳಿಸಲಾಗುವುದು. ಅರ್ಧದಲ್ಲಿ ಕಂತು ಕಟ್ಟದೆ ಇದ್ದರೆ, ಯಾವುದೇ ಚಿನ್ನವನ್ನು ನೀಡಲಾಗುವುದಿಲ್ಲ. (ಅಂತಹ ಸದಸ್ಯರು ಕೊನೆಯಲ್ಲಿ ಪೂರ್ತಿ ಹಣವನ್ನು ಪಾವತಿಸಿ ಚಿನ್ನವನ್ನು ಪಡೆದುಕೊಳ್ಳಬಹುದು.)

ಬಹುಮಾನ ವಿಜೇತರು ಮುಂದಿನ ಕಂತಿನಿಂದ ಹಣ ಕಟ್ಟುವಂತಿಲ್ಲ. ಯಾವ ಕಾರಣಕ್ಕೂ ಚಿನ್ನದ ಬದಲಾಗಿ ಹಣ ಕೊಡಲಾಗುವುದಿಲ್ಲ. ಕೊನೆಗೆ ಉಳಿದ ಸದಸ್ಯರ ಆಯ್ಕೆಯ ಚಿನ್ನವನ್ನು 30 ದಿವಸದ ಒಳಗೆ ಪಡೆದು ಕೊಳ್ಳತಕ್ಕದು. 916 ಹಾಲ್‌ಮಾರ್ಕಿನ ಚಿನ್ನವಾಗಿರುತ್ತದೆ ಹಾಗೂ ಚಿನ್ನದ ಜಿ.ಎಸ್.ಟಿ. ಮತ್ತು ಮಜೂರಿಯನ್ನು ಸದಸ್ಯರೇ ಭರಿಸತಕ್ಕದ್ದು. ಕರಪತ್ರದಲ್ಲಿ ತೋರಿಸುವ ಚಿನ್ನಾಭರಣದ ಚಿತ್ರಗಳು ವಿವರಣೆಯ ಉದ್ದೇಶಕ್ಕೆ ಮಾತ್ರ. ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು‌ ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ.

ವಿಳಾಸ : ಪರ್ಸನಲ್ ಕಾಂಪ್ಲೆಕ್ಸ್ , ಏಣಗುಡ್ಡೆ, ಕಟಪಾಡಿ, ಉಡುಪಿ ಜಿಲ್ಲೆ -574 105. ಸಂಪರ್ಕ ಸಂಖ್ಯೆ : 9036001528, 9036001529, 8748999424, 9916278269

ಮುಲ್ಕಿ : ಸಿ.ಎಸ್.ಐ. ಬಾಲಿಕಾಶ್ರಮದಲ್ಲಿ ವಿಶ್ವ ಮಹಿಳಾ ದಿನಾಚರಣೆ

Posted On: 08-03-2024 10:18PM

ಮುಲ್ಕಿ: ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಸೇವಾದಳ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಮುಲ್ಕಿ ಸಿ.ಎಸ್.ಐ. ಬಾಲಿಕಾಶ್ರಮದ ಮಕ್ಕಳೊಂದಿಗೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭ ಡಾ. ಐಶ್ವರ್ಯ ಸಿ.ಅಂಚನ್ ಆಯುರ್ವೇದ ಜೀವನ ಪದ್ಧತಿ ಮತ್ತು ಚಿಕಿತ್ಸಾ ಮಾಹಿತಿ ನೀಡಿದರು. ಇದೇ ಸಂದರ್ಭ ಸ್ನಾತಕೋತ್ತರ 6ನೇ ರ‍್ಯಾಂಕ್ ವಿಜೇತೆ ಡಾ. ಐಶ್ವರ್ಯ ಸಿ. ಅಂಚನ್‌ರವರನ್ನು ಸಂಘಟಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬಾಲಿಕಾಶ್ರಮದ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಸ್ವಾವಲಂಬಿಗಳಾಗಿ, ಸಾಧಕರಾಗಿ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು. ಸಿ.ಎಸ್.ಐ. ಚರ್ಚ್ ಸಭಾಪಾಲಕ ರೆ.ಫಾ. ಸ್ಟೀವನ್ ಸರ್ವೋತ್ತಮ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧಕರ ಶ್ರಮ ಬಾಲೆಯರಿಗೆ ಪ್ರೇರಣೆಯಾಗಲಿ ಎಂದರು.

ಸೇವಾದಳದ ಅಧ್ಯಕ್ಷ ಸಂತೋಷ್ ಪೂಜಾರಿ, ಮಹಿಳಾ ಮಂಡಳಿ ಅಧ್ಯಕ್ಷೆ ರೋಹಿಣಿ ಆನಂದ್, ಕಲ್ಪತರು ಸ್ವಸಹಾಯ ಸಂಘದ ಮೇಲ್ವಿಚಾರಕ ರಮಾನಂದ ಪೂಜಾರಿ, ಬಾಲಿಕಾಶ್ರಮದ ಮೇಲ್ವಿಚಾರಕಿ ಶಾಂತಿ ಮುಖ್ಯ ಅತಿಥಿಗಳಾಗಿದ್ದರು. ರವಿರಾಜ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ರೋಹಿಣಿ ಆನಂದ್ ಸ್ವಾಗತಿಸಿದರು. ಕಾರ್ಯದರ್ಶಿ ತೇಜವತಿ ವಂದಿಸಿದರು.

ಉಡುಪಿ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ : ಉಡುಪಿ ತಂಡ ವಿನ್ನರ್ಸ್, ಕುಂದಾಪುರ ತಂಡ ರನ್ನರ್ಸ್

Posted On: 06-03-2024 04:48PM

ಹೆಜಮಾಡಿ : ಲೀಗ್ ಮಾದರಿಯಲ್ಲಿ ಹೆಜಮಾಡಿಯ ರಾಜೀವ್ ಗಾಂಧಿ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಕಾಪು ತಾ. ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ರಜತ ಸಂಭ್ರಮದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದ ಆರು ತಂಡಗಳ ಕ್ರಿಕೆಟ್ ಹಣಾಹಣಿಯಲ್ಲಿ ರೋಚಕವಾಗಿದ್ದ ಅಂತಿಮ ಪಂದ್ಯದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡವು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು 4ರನ್ನುಗಳಿಂದ ಸೋಲಿಸಿ ಜಿಲ್ಲಾ ಮಟ್ಟದ ಕ್ರಿಕೆಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ವಿಜಯೀ ಜಿಲ್ಲಾ ತಂಡವು ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಉಡುಪಿ ತಂಡವು ನಿಗದಿತ 5 ಓವರ್‌ಗಳಲ್ಲಿ 37ರನ್ನುಗಳನ್ನು ಪೇರಿಸಿತ್ತು. ಕುಂದಾಪುರ ತಾ| ಪತ್ರಕರ್ತರ ತಂಡವು ದ್ವಿತೀಯ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ವಿನೋದ್ ಸಾಲ್ಯಾನ್ ಬೆಳ್ಳಾಯರು ಮುಖ್ಯ ಅತಿಥಿಗಳಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಜಿಲ್ಲಾ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ರಜತ ಸಂಭ್ರಮದ ಸಂಚಾಲಕ ಮಹಮ್ಮದ್ ಶರೀಫ್, ಕಾಪು ತಾ| ಅಧ್ಯಕ್ಷ ಹರೀಶ್ ಹೆಜಮಾಡಿ, ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ, ಕ್ರೀಡಾ ಸಂಚಾಲಕ ರಾಕೇಶ್ ಕುಂಜೂರು ವೇದಿಕೆಯಲ್ಲಿದ್ದರು. ಯತೀಶ್ ಉಡುಪಿ, ಸಂತೋಷ್ ಕುದೇಶ್ವರ, ಹರೀಶ್ ಕುಂದಾಪುರ, ರಾಘವೇಂದ್ರ ಉಡುಪಿ ವೈಯಕ್ತಿಕ ಪ್ರಶಸ್ತಿಗೆ ಭಾಜನರಾದರು.

ಮುಖ್ಯ ಅತಿಥಿಗಳಾಗಿದ್ದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಮಾತನಾಡಿ, ಒತ್ತಡದ ನಡುವೆಯೂ ಪತ್ರಕರ್ತರು ಕ್ರೀಡೋತ್ಸಾಹದಿಂದ ಸೇರಿದ್ದೀರಿ. ನಿಮ್ಮ ಸಂಘಟನೆಯಿಂದ ಮತ್ತಷ್ಟು ಬಲಯುತರಾಗಿರಿ ಎಂದರು. ಕ್ರೀಡಾಸೂರ್ತಿ, ಕ್ರೀಡಾ ಮನೋಭಾವ ಪತ್ರಕರ್ತರಲ್ಲಿ ನಿರಂತರವಾಗಿರಲಿ. ಇದು ಸೌಹಾರ್ದತೆಗೂ ನಾಂದಿಯಾಗುತ್ತದೆ. ಯಾವುದೇ ಹಮ್ಮು ಇರದೆ ಭಾಗವಹಿಸುತ್ತಿರುವುದನ್ನು ಕಂಡು ತನಗೂ ಕ್ರಿಕೆಟ್ ಆಡಬೇಕೆನಿಸಿದೆ. ಪತ್ರಕರ್ತರ ಮತ್ತಷ್ಟು ಕ್ರೀಡೋತ್ಸವಗಳು ನಡೆಯುತ್ತಿರಲಿ ಎಂದು ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಅರ್. ಹೇಳಿದರು. ಅವರು ಫೈನಲ್ ಪಂದ್ಯದ ಕ್ರೀಡಾಳುಗಳಿಗೆ ಹಸ್ತಲಾಘವವನ್ನಿತ್ತು ಅಂತಿಮ ಪಂದ್ಯದ ಟಾಸ್  ಚಿಮ್ಮಿ ತಂಡಗಳಿಗೆ ಶುಭ ಹಾರೈಸಿದರು. ಪಂದ್ಯಾಕೂಟವನ್ನು ಉದ್ಘಾಟಿಸಿದ ಅಸ್ಪೆನ್ ಇನ್ಪ್ರಾ ಪಡುಬಿದ್ರಿಯ ಮಹಾ ಪ್ರಬಂಧಕ ಅಶೋಕ್ ಶೆಟ್ಟಿ ಅವರು, ಪತ್ರಕರ್ತರು ನಿರಂತರ ತಮ್ಮ ಕಾರ್ಯನಿರತರಾಗಿದ್ದು ವಿಪರೀತ ಕಾರ್ಯ ಬಾಹುಳ್ಯದ ನಡುವೆಯೂ ಪಂದ್ಯಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯವೆಂದರು. ಮಾಜಿ ತಾ. ಪಂ. ಸದಸ್ಯ ನವೀನ್‌ಚಂದ್ರ ಶೆಟ್ಟಿ, ಉದ್ಯಮಿ ದೀಪಕ್ ಕುಮಾರ್ ಎರ್ಮಾಳು, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿದರು.

ಕಾಪು ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನಝೀರ್ ಪೊಲ್ಯ, ತಾಲೂಕು ಸಂಘದ ಕಾರ್ಯದರ್ಶಿ ಸಂತೋಷ್ ಕಾಪು, ಕೋಶಾಧಿಕಾರಿ ಹೇಮನಾಥ್ ಪಡುಬಿದ್ರಿ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ರಜತ ಸಂಭ್ರಮ ಸಮಿತಿಯ ಸಂಚಾಲಕ ಮೊಹಮ್ಮದ್ ಶರೀಫ್ ಕಾರ್ಕಳ, ಸಾಮಾಜಿಕ ಕಾರ್ಯಕರ್ತ ಶೇಖರ್ ಹೆಜಮಾಡಿ ಉಪಸ್ಥಿತರಿದ್ದರು. ಹರೀಶ್ ಹೆಜಮಾಡಿ ಸ್ವಾಗತಿಸಿದರು. ಕಾಪು ತಾಲೂಕು ಸಂಘದ ಕ್ರೀಡಾ ಸಂಚಾಲಕ ರಾಕೇಶ್ ಕುಂಜೂರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸಂತೋಷ್ ಕಾಪು ವಂದಿಸಿದರು.

ಕಾಪು ಫ್ಲೈ ಓವರ್ ಅಂಡರ್ ಪಾಸ್ನಲ್ಲಿ ಕೊನೆಗೂ ಬೆಳಕು ಕಂಡ ಕಾಪು ಜನತೆ : ನಮ್ಮ ಕಾಪು ವರದಿ ಫಲಶ್ರುತಿ

Posted On: 05-03-2024 08:07PM

ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನ ಮುಂಭಾಗದ ಫ್ಲೈ ಓವರ್ ಅಂಡರ್ ಪಾಸ್ ನಲ್ಲಿ ಬೆಳಕು ಕಾಣದೇ ಒಂದುವರೆ ವರುಷ ಕಳೆದಿರುವ ಕಾಪು ಜನತೆ ಇದೀಗ ನಮ್ಮ ಕಾಪು ನ್ಯೂಸ್ ವರದಿ ಬಿತ್ತರಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಿರುತ್ತಾರೆ. ಸಾಮಾಜಿಕ ಕಾರ್ಯಕರ್ತ ಜಯರಾಮ್ ಆಚಾರ್ಯ ಈ ಬಗ್ಗೆ ಮಾಧ್ಯಮದ ಗಮನಕ್ಕೆ ತಂದಿದ್ದು, ಅಧಿಕಾರಿಗಳಿಗೆ ನಿರಂತರವಾಗಿ ಮೇಲ್ ಮೂಲಕ ಮನವಿಯನ್ನು ಸಲ್ಲಿಸುತ್ತಿದ್ದರು. ನಮ್ಮ ಕಾಪು ವರದಿಯ ನಂತರ ಟೋಲ್ ಮ್ಯಾನೇಜರ್ ತಿಮ್ಮಯ್ಯ ಎ. ಎಸ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಹಲೋಜೇನ್ ಲೈಟ್ ಅಳವಡಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಟೋಲ್ ಸಿಬ್ಬಂದಿಗಳು, ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರು ಸೂಕ್ತ ಸ್ಪಂದನೆ ನೀಡಿರುವುದಕ್ಕೆ ಕಾಪು ಜನತೆಯ ಪರವಾಗಿ ಜಯರಾಮ್ ಆಚಾರ್ಯ ಅವರು ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸಿರುತ್ತಾರೆ.

ಉಡುಪಿ : ಅಧಿಕಾರಿಗಳ ವೈಫಲ್ಯದಿಂದ ಕಾಪುವಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಆಸಾಮಿ

Posted On: 04-03-2024 08:09PM

ಉಡುಪಿ : ಕಾಪು ಹೊಸ ಮಾರಿಗುಡಿ ಮುಂಭಾಗದ ಫ್ಲೈ ಓವರ್ ಅಂಡರ್ ಪಾಸ್ ನಲ್ಲಿ 3 ಹಲೊಜೆನ್ ಲೈಟ್ಗಳನ್ನು ಅಳವಡಿಸಿದ್ದರೂ, ಕಳೆದ 18 ತಿಂಗಳಿನಿಂದ ಬೆಳಕಿಲ್ಲದೆ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಸ್ಥಳೀಯ ನಿವಾಸಿ ಜಯರಾಮ್ ಆಚಾರ್ಯ ಅವರು ಅಧಿಕಾರಿಗಳಿಗೆ Email ಮೂಲಕ ಮನವಿ ಕಳುಹಿಸಿದ್ದರೂ ಕೂಡಾ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ, ನಮ್ಮ ಕಾಪು ನ್ಯೂಸ್ ಮೂಲಕ ಈ ವರದಿಯನ್ನು ಮಾಚ್೯ 1, ಶುಕ್ರವಾರದಂದು ಬಿತ್ತರಿಸಿದ್ದು, ಮರುದಿನ ಜಯರಾಮ್ ಆಚಾರ್ಯ ಅವರು ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರನ್ನು ಮುಖತಃ ಭೇಟಿ ಮಾಡಿ ಮನವಿ ನೀಡಿದ್ದರು.

ಮಾಚ್೯ 2, ಶನಿವಾರ ರಾತ್ರಿ 08:30 ರ ಅಸುಪಾಸಿಗೆ ಈ ಭಾಗದಲ್ಲಿ ಸೇಲ್ಸ್ ಮ್ಯಾನ್ ಓರ್ವರು ನಡೆದುಕೊಂಡು ಹೋಗುತ್ತಿದ್ದಾಗ ಅವರ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಇದ್ದ ಪರ್ಸನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಅಧಿಕಾರಿಗಳು ಇನ್ನಾದರೂ ಬೆಳಕಿನ ವ್ಯವಸ್ಥೆಯನ್ನು ಮಾಡುವರೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಯರಾಮ್ ಆಚಾರ್ಯ ನಮ್ಮ ಕಾಪು ನ್ಯೂಸ್ ಮೂಲಕ ಅಗ್ರಹಿಸಿದ್ದಾರೆ.

ಮಾರ್ಚ್ 10 : ಸಮಾಜರತ್ನ. ಕೆ. ಲೀಲಾಧರ ಶೆಟ್ಟಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Posted On: 04-03-2024 04:42PM

ಕಾಪು : ಸಮಾಜರತ್ನ ಕೆ ಲೀಲಾಧರ ಶೆಟ್ಟಿ ಸ್ಮರಣಾರ್ಥ ಅವರ ಅಭಿಮಾನಿ ಬಳಗದ ವತಿಯಿಂದ, ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಇವರ ನೇತೃತ್ವದಲ್ಲಿ, ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಮಾರ್ಚ್ 10, ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30 ರವರೆಗೆ ಶಿರ್ವ ಕೊಲ್ಲಬೆಟ್ಟು ಸಂಘ ಮಿತ್ರ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮವು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದ್ದು ,ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಶೈಲೇಶ್ ಹಾಗೂ ಬಳಗ ಉದ್ಯಾವರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅಂದು ನಡೆಯುವ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.