Updated News From Kaup

ಏ. 30 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಗೋ ಪೂಜೆ ; ಗೋನಿವಾಸ

Thumbnail
Posted On: 29 Apr 2024, 07:18 PM

ಕಾಪು : ಮಾರಿಯಮ್ಮನ ಕ್ಷೇತ್ರದಲ್ಲಿ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿದ್ದು ಆ ಪ್ರಯುಕ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಏಪ್ರಿಲ್ 9ಕ್ಕೆ ಸಾನಿಧ್ಯ, ವೃದ್ಧಿಗಾಗಿ ಭೂಕರ್ಷನ ಖನನ, ಹರಣ, ದಾಹ, ಪೂರಣ ಮತ್ತು ನವಧಾನ್ಯಗಳಿಂದ ಬೀಜ ವಪನ ಮಾಡಿರುತ್ತೇವೆ, ಈಗಾಗಲೇ ಬೀಜಗಳು ಮೊಳಕೆಯೊಡೆದಿವೆ. ಗರ್ಭಗುಡಿಯಲ್ಲಿ ಮೊಳಕೆಯೋಡೆದ ನವಧಾನ್ಯಗಳನ್ನು ಗೋವುಗಳು ಮೇಯುವ ಕಾರ್ಯಕ್ರಮ ಏಪ್ರಿಲ್ 30 ರಂದು ಬೆಳಿಗ್ಗೆ ಗಂಟೆ 10 ಕ್ಕೆ ಸರಿಯಾಗಿ ನಡೆಯಲಿದೆ. ಶ್ರೀಕೃಷ್ಣನ ಕೊಳಲಿನ ವಾದನದೊಂದಿಗೆ ಗೋವುಗಳನ್ನು ಗರ್ಭಗುಡಿಯವರೆಗೆ ಕರೆದುಕೊಂಡು ಹೋಗಿ ಪೂಜಿಸಲಾಗುವುದು, ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳಿಂದ ವಿಶೇಷ ಭಜನೆ ಮತ್ತು ಅನೇಕ ಕಾರ್ಯಕ್ರಮಗಳು ನಡೆಯಲಿವೆ. 9 ಗೋವುಗಳು ಸಾನಿಧ್ಯದಲ್ಲಿ ವಾಸ್ತವ್ಯವಿದ್ದು, ಅವುಗಳಿಗೆ ಮೇವನ್ನು ನೀಡಿ ಗೋಪೂಜೆ ನೆರವೇರಿಸುವ ಕಾರ್ಯಕ್ರಮವೇ ಗೋನಿವಾಸ. ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಮಾರಿಯಮ್ಮನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 5 : ಉಡುಪಿಯಲ್ಲಿ ಮಕ್ಕಳ ಚಿತ್ರದ ಆಡಿಷನ್

Thumbnail
Posted On: 28 Apr 2024, 09:31 AM

ಉಡುಪಿ : ಈ ಹಿಂದೆ ಆರ್.ಎಸ್.ಬಿ ಭಾಷಿತ ಕೊಂಕಣಿ ಸಿನೇಮಾ ‘ಅಮ್ಚೆ ಸಂಸಾರ್’ ನಿರ್ಮಿಸಿದ ತಂಡ ‘ಅಮ್ಚೆ ಕ್ರಿಯೇಷನ್ಸ್’ ಬ್ಯಾನೆರ್ ಅಡಿಯಲ್ಲಿ 2ನೇ ಸಿನೇಮಾ ತಯಾರಿಸಲು ಸಜ್ಜಾಗುತ್ತಿದೆ. ಈ ಚಿತ್ರವು ಮಕ್ಕಳ ಚಿತ್ರವಾಗಿದ್ದು ಈ ಚಿತ್ರಕ್ಕೆ ಆಡಿಷನ್ ಅನ್ನು ಇದೇ ಬರುವ ಮೇ 5ರಂದು ಬಡಗಬೆಟ್ಟು ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ., ಲಿ ಉಡುಪಿ ಇದರ ಜಗನ್ನಾಥ ಸಭಾಂಗಣದಲ್ಲಿ ಬೆಳಗ್ಗೆ 10 ಘಂಟೆಯಿಂದ ನಡೆಯಲಿದೆ. ಆಡಿಷನ್‌ನ ಉದ್ಘಾಟನೆಯನ್ನು ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಇವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಚಲನಚಿತ್ರ ಕಲಾವಿದರುಗಳಾದ ಶೋಭರಾಜ್ ಪಾವೂರು, ರಾಹುಲ್ ಅಮೀನ್, ವಿನೀತ್ ಕುಮಾರ್, ಮಾನಸಿ ಸುಧೀರ್, ಶೈಲಶ್ರೀ ಮುಲ್ಕಿ ಉಪಸ್ಥಿತರಿರಲಿದ್ದಾರೆ. ಆಡಿಷನ್ ಮಕ್ಕಳ ಆಯ್ಕೆಯನ್ನು ಖ್ಯಾತ ಚಲನಚಿತ್ರ ನಿರ್ದೇಶಕರಾದ ಪ್ರಕಾಶ್ ಸುವರ್ಣ ಕಟಪಾಡಿ, ಕ್ಲಿಂಗ್ ಜಾನ್ಸನ್ ಮತ್ತು ಕಲಾವಿದೆ ಚಂದ್ರಕಲಾ ರಾವ್ ಇವರು ನಡೆಸಿಕೊಡಲಿದ್ದಾರೆ. ಈ ಆಡಿಶನ್ ನಲ್ಲಿ 8ರಿಂದ 15 ವರ್ಷ ಒಳಗಿನ ಬಾಲ ಕಲಾವಿದರು ಮತ್ತು ಕಲಾವಿದೆಯರನ್ನ ಆಯ್ಕೆ ನಡೆಯಲಿದ್ದು ತುಳು ಹಾಗೂ ಕನ್ನಡ ಭಾಷೆ ಕಡ್ಡಾಯ ತಿಳಿದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9964006869, 8073975851ಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂದೀಪ್ ಕಾಮತ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಎ.30 - ಮೇ.5 : ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಗದ್ದಿಗೆಬೆಟ್ಟು ಕೈಪುಂಜಾಲು - ನೂತನ ಶಿಲಾಮಯ ಗರ್ಭಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ, ನೇಮೋತ್ಸವ

Thumbnail
Posted On: 27 Apr 2024, 03:20 PM

ಕಾಪು : ತಾಲೂಕಿನ ಕೈಪುಂಜಾಲು ಉಳಿಯಾರಗೋಳಿ ಗ್ರಾಮದ ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಗದ್ದಿಗೆಬೆಟ್ಟು ಇಲ್ಲಿ ಎ.30 - ಮೇ.5ರವರೆಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಅರ್ಚಕರಾದ ಮಡುಂಬು ಶ್ರೀ ನಾರಾಯಣ ತಂತ್ರಿ ಇವರ ನೇತೃತ್ವದಲ್ಲಿ ನೂತನ ಶಿಲಾಮಯ ಗರ್ಭಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಕುಂಭಾಭಿಷೇಕ ಮತ್ತು ನೇಮೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಗಳು ಜರಗಲಿವೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಾವಗುತ್ತು ಕಿರಣ್ ಆಳ್ವ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಎಪ್ರಿಲ್ 30, ಮಂಗಳವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಆಕರ್ಷಕ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ, ಮೇ 1ರಂದು ವಿವಿಧ ಧಾರ್ಮಿಕ ಕಾರ್ಯಗಳು, ಮೇ 2 ರಂದು ದೈವಗಳ ಪ್ರತಿಷ್ಠೆ, ಅಮ್ಮನವರ ಸಾನಿಧ್ಯ ಸಂಕಲ್ಪ, ಶ್ರೀ ಬಬ್ಬು ಸ್ವಾಮಿ, ಪರಿವಾರ ದೈವಗಳ ದರ್ಶನ ಸೇವೆ, ಗರ್ಭಗುಡಿ ಪ್ರವೇಶ, ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 6 ರಿಂದ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಧಾರ್ಮಿಕ ಉಪನ್ಯಾಸ ಇರಲಿದೆ. ರಾತ್ರಿ 8:30 ರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಲಿದೆ. ಮೇ. 3 ರಂದು ಸಂಜೆ ಗಂಟೆ 6ಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾವಗುತ್ತು ಕಿರಣ್ ಆಳ್ವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿದ್ದು ಪ್ರಸಾದ್ ಶೆಟ್ಟಿ ಕುತ್ಯಾರು ಇವರ ಧಾರ್ಮಿಕ ಉಪನ್ಯಾಸ ಇರಲಿದೆ. ರಾತ್ರಿ ಗಂಟೆ 8:30 ರಿಂದ ದೈವರಾಜ ಶ್ರೀ ಬಬ್ಬು ಸ್ವಾಮಿ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನವಾಗಲಿದೆ. ಮೇ.4ರಂದು ಶ್ರೀ ಬಬ್ಬುಸ್ವಾಮಿ ಮತ್ತು ತನ್ನಿಗಮಾನಿಗ ದೇವಿಯ ನೇಮೋತ್ಸವ, ಮೇ.5 ರಂದು ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ, ಜೋಡು ಗುಳಿಗ ದೈವಗಳ ನೇಮೋತ್ಸವ ಜರಗಲಿದೆ ಎಂದು ತಿಳಿಸಿದರು. ಈ ಸಂದರ್ಭ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

ದ್ವಿತೀಯ ಪಿ.ಯು.ಸಿ ಮರುಮೌಲ್ಯಮಾಪನ ಫಲಿತಾಂಶ : ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ, ಭಕ್ತಿ ಕಾಮತ್ ರಾಜ್ಯಕ್ಕೆ ಐದನೇ ರ‍್ಯಾಂಕ್

Thumbnail
Posted On: 27 Apr 2024, 01:36 PM

ಕಾರ್ಕಳ : ಶೈಕ್ಷಣಿಕ ಸಾಧನೆಯಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದಿದ್ದು ವಾಣಿಜ್ಯ ವಿಭಾಗದ ಸಾನ್ವಿ ರಾವ್ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶೇಷ ಸಾಧನೆಗೈದಿದ್ದಾರೆ. ಸಂಸ್ಕೃತ ಮತ್ತು ಇ.ಬಿ.ಎ.ಸಿ ಯಲ್ಲಿ ತಲಾ 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದ ಸಾನ್ವಿ ರಾವ್ ಆಂಗ್ಲ ಭಾಷೆಯಲ್ಲಿ 95 ಅಂಕಗಳನ್ನು ಗಳಿಸಿದ್ದರು. ಇದೀಗ ಮರುಮೌಲ್ಯಮಾಪನ ಫಲಿತಾಂಶದಲ್ಲಿ 03 ಅಂಕಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡು 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಇವರು ಉತ್ತರಕನ್ನಡದ ಹೊನ್ನಾವರದ ಜಗದೀಶ್ ರಾವ್ ಬಿ ಎಸ್ ಮತ್ತು ವಿನುತಾ ಭಟ್ ದಂಪತಿಗಳ ಸುಪುತ್ರಿ. ವಾಣಿಜ್ಯ ವಿಭಾಗದ ಭಕ್ತಿ ಕಾಮತ್ 594 ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ರ‍್ಯಾಂಕ್, ವಿಜ್ಞಾನ ವಿಭಾಗದ ಸಾಗರ್ ಎಸ್. ಟಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್ ಹಾಗೆಯೇ ವಾಣಿಜ್ಯ ವಿಭಾಗದ ವಿನಯ್ ಪ್ರಶಾಂತ್ 589 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 10ನೇ ರ‍್ಯಾಂಕ್ ಗಳಿಸಿರುತ್ತಾರೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಒಟ್ಟು 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವುದು ಹೆಮ್ಮೆಯ ವಿಷಯವಾಗಿದ್ದು ವಿದ್ಯಾರ್ಥಿಗಳ ಈ ವಿಶೇಷ ಸಾಧನೆಯನ್ನು ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು, ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

ಪಡುಬಿದ್ರಿ : ಕಾರಿಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲಿ ನಿಂತ ಲಾರಿ ; ಸಂಚಾರ ತೊಡಕು

Thumbnail
Posted On: 27 Apr 2024, 01:28 PM

ಪಡುಬಿದ್ರಿ : ಇಲ್ಲಿನ ಪಡುಬಿದ್ರಿ ಕಾರ್ಕಳ ಜಂಕ್ಷನ್ ನಲ್ಲಿ ಕಾರಿಗೆ ಡಿಕ್ಕಿ ಹೊಡೆದು ಡಿವೈಡರ್ ಏರಿ ನಿಂತ ಸರಕು ಸಾಗಾಣಿಕೆ ಲಾರಿ.ಸಂಚಾರ ತೊಡಕು. ಪಡುಬಿದ್ರಿ : ಉಡುಪಿಯಿಂದ ಮಂಗಳೂರು ಕಡೆಗೆ ಸರಕು ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಕಾರ್ಕಳ ಕಡೆಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆದು ಡಿವೈಡರ್ ಏರಿ ವಿರುದ್ಧ ದಿಕ್ಕಿನಲ್ಲಿ ನಿಂತ ಘಟನೆ ಸಂಭವಿಸಿದೆ. ಕಾರಿನಲ್ಲಿ ಆರು ಮಹಿಳಾ ಪ್ರಯಾಣಿಕರು ಇದ್ದರು. ಅಪಘಾತದಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ.ಕಾರು ನುಜ್ಜುಗುಜ್ಜಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಿಕೂರು : ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಮಹಿಳೆ ಮೃತ್ಯು

Thumbnail
Posted On: 26 Apr 2024, 08:50 PM

ನಂದಿಕೂರು : ಮಂಗಳೂರಿನಿಂದ ಕಾರ್ಕಳ ಮಾಳದತ್ತ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಂದಿಕೂರು ಮುದರಂಗಡಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಮೃತ ಮಹಿಳೆಯನ್ನು ಕಾವೂರಿನ ಸುಮಂಗಲಾ ಅಭ್ಯಂಕರ್(51) ಎಂದು ಗುರುತಿಸಲಾಗಿದೆ. ಉಪನಯನ ಸಮಾರಂಭದಲ್ಲಿ ಭಾಗವಹಿಸಲು ಮಂಗಳೂರು ಕಾವೂರಿನ ತಮ್ಮ ನಿವಾಸದಿಂದ ತೆರಳುತ್ತಿದ್ದರು. ಪತಿ ಪುರುಷೋತ್ತಮ ಅಭ್ಯಂಕರ್(61) ಅವರು ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಕ್ಷಣ ಸ್ಥಳೀಯರು ಹರಸಾಹಸಪಟ್ಟು ಸುಮಂಗಲಾ ಅವರನ್ನು ಹೊರತೆಗೆದಿದ್ದರೂ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು : ಮತದಾನ ಬಹಿಷ್ಕಾರ ಹಿಂಪಡೆದ ಕಟ್ಟಿಂಗೇರಿ ವಾಡ್೯ನಲ್ಲಿ ಬಿರುಸಿನ ಮತದಾನ

Thumbnail
Posted On: 26 Apr 2024, 05:35 PM

ಕಾಪು : ಊರಿನ ಸಮಸ್ಯೆಗಳು ಪರಿಹಾರ ಕಾಣದೆ ಮತದಾನ ಬಹಿಷ್ಕಾರಕ್ಕೆ ನಿರ್ಣಯಿಸಿದ್ದ ಕಟ್ಟಿಂಗೇರಿ ನಿವಾಸಿಗಳು ಕೊನೆಗೆ ರಾಜಕೀಯ ನಾಯಕರ ಭರವಸೆಯಿಂದ ಮತದಾನ ಬಹಿಷ್ಕಾರ ಹಿಂಪಡೆದಿದ್ದು ಇಂದು ವಾರ್ಡ್ 1 ಬೂತ್ ನಂಬರ್ 104 ರಲ್ಲಿ ಮತದಾನ ಮಾಡಿದರು. ಈ ವಾರ್ಡ್ ನ ಮತದಾರರು ಅತೀ ಉತ್ಸಾಹದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಉದ್ಯಾವರ : ಹಿರಿಯ ದಂಪತಿಗಳಿಂದ ಮತದಾನ

Thumbnail
Posted On: 26 Apr 2024, 03:29 PM

ಉದ್ಯಾವರ : ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಂತ ಹಿರಿಯ ದಂಪತಿ ಪಾಸ್ಕಲ್ ಡಿಸೋಜಾ (98 ವರ್ಷ) ಮತ್ತು ಕ್ರಿಸ್ತಿನ್ ಡಿಸೋಜಾ (93 ವರ್ಷ) ತನ್ನ ಪುತ್ರ ಮತ್ತು ಸೊಸೆಯೊಂದಿಗೆ ಮೇಲ್ಪೇಟೆ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತವನ್ನು ಚಲಾಯಿಸಿದರು.

ಉಡುಪಿ -ಚಿಕ್ಕಮಗಳೂರು, ದ.ಕ ಕಾಂಗ್ರೆಸ್, ಬಿಜೆಪಿ ಲೋಕಸಭಾ ಅಭ್ಯರ್ಥಿಗಳಿಂದ ಮತದಾನ

Thumbnail
Posted On: 26 Apr 2024, 03:23 PM

ಉಡುಪಿ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪೂಜಾರಿಯವರು ಕುಂದಾಪುರದಲ್ಲಿ ಮತ ಚಲಾಯಿಸಿದ ಬಳಿಕ ಸೆಲ್ಫಿ ಪಾಯಿಂಟಿನಲ್ಲಿ ಫೋಟೋವನ್ನು ತೆಗೆಸಿಕೊಂಡರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮನೆ ಸಮೀಪದ ಕೊರ್ಗಿ ಶ್ರೀಮತಿ ಗಿರಿಜಾ ಚಂದ್ರಶೇಖರ ಹೆಗ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 97ರಲ್ಲಿ ಸಹೋದರಿಯರಾದ ಸರೋಜಿನಿ ಹೆಗ್ಡೆ ಹಾಗೂ ಶಶಿಕಲಾ ಹೆಗ್ಡೆಯೊಂದಿಗೆ ಆಗಮಿಸಿ ಬೆಳಿಗ್ಗೆ 7 ಗಂಟೆಗೆ ಮತದಾನ ಮಾಡಿದರು. ದ.ಕ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಮತದಾನ : ಮಂಗಳೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ತಮ್ಮ ಪತ್ನಿ ಹಾಗೂ ಪುತ್ರಿಯೊಂದಿಗೆ ಬೆಳಗ್ಗೆಯೇ ನಗರದ ಕಪಿತಾನಿಯೋ ಶಾಲೆಯ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಂಗಳೂರು ನಗರದ ಕಾ‌ರ್ ಸ್ಟ್ರೀಟ್ ನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ರಥಬೀದಿಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ತಾಯಿ - ತಂದೆಯರೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಎಪ್ರಿಲ್ 27 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 'ಶ್ರೀರಾಮ ವೈಭವ' - ನೃತ್ಯರೂಪಕ

Thumbnail
Posted On: 26 Apr 2024, 03:08 PM

ಕಾಪು : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 25ರಿಂದ ಮೊದಲ್ಗೊಂಡು ಮೇ 9ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಈ ನಿಮಿತ್ತ ಎಪ್ರಿಲ್ 27, ಶನಿವಾರ ಶ್ರೀಮತಿ ಸ್ವಾತಿ ಕೃಷ್ಣಾನಂದ ಭಟ್, ಯಸ್ಯ ನಾಟ್ಯಾಲಯ, ಮುದರಂಗಡಿ ಇವರಿಂದ ಸಂಜೆ ಗಂಟೆ 6:30ರಿಂದ 'ಶ್ರೀರಾಮ ವೈಭವ' - ನೃತ್ಯರೂಪಕ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.