Updated News From Kaup

ಮುದರಂಗಡಿ : ವಿದ್ಯಾನಗರ ಫ್ರೆಂಡ್ಸ್ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಗಳು

Thumbnail
Posted On: 13 Nov 2023, 12:47 PM

ಮುದರಂಗಡಿ : ವಿದ್ಯಾನಗರ ಫ್ರೆಂಡ್ಸ್ ವಿದ್ಯಾನಗರ ಮುದರಂಗಡಿ ಹಾಗೂ ಊರಿನ ಸಹೃದಯಿ ದಾನಿಗಳ ಸಹಯೋಗದೊಂದಿಗೆ ದೀಪಾವಳಿಯಂದು ವಿವಿಧ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಸಾವಿತ್ರಿ ಆಚಾರ್ಯ ಮೈಕೋಡಿ ಇವರ ಮನೆಯ ಟಾಯ್ಲೆಟ್ ಸಂಪೂರ್ಣವಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ಸಂಪೂರ್ಣವಾಗಿ ಪುನನಿರ್ಮಿಸಿ ಹಸ್ತಾಂತರಿಸಲಾಯಿತು. ವಿದ್ಯಾನಗರದಲ್ಲಿ ಅಳವಡಿಸಿದ ರೋಡ್ ಮಿರರ್ ಉದ್ಘಾಟನೆ ಹಾಗೂ ಒಂದು ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು, ಒಂದು ವಿದ್ಯಾರ್ಥಿಯ ಶಾಲಾ ಶುಲ್ಕವನ್ನು ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ದುರ್ಗಾ ಮಂದಿರದ ಅರ್ಚಕರಾದ ಶ್ರೀಧರ ಆಚಾರ್ಯ, ಉದ್ಯಮಿಗಳಾದ ಗಂಗಾಧರ್ ಶೆಟ್ಟಿ ಮತ್ತು ವಿಶ್ವನಾಥ್ ಶೆಟ್ಟಿ, ಹರಿ ಎಚ್ ಮೈಕೋಡಿ, ಗ್ರಾಮ ಪಂಚಾಯತ್ ಸದಸ್ಯರಾದ ಶಿವರಾಮ್ ಭಂಡಾರಿ ಸ್ಥಳೀಯರಾದ ರಾಮ ಪೂಜಾರಿ ಹಾಗೂ ವಿದ್ಯಾ ನಗರ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾಪು : ನಾಗಸ್ವರ ವಾದಕ ಜಲೀಲ್ ಸಾಹೇಬ್ ವಿಧಿವಶ

Thumbnail
Posted On: 13 Nov 2023, 10:09 AM

ಕಾಪು : ಪರಿಸರದಲ್ಲಿ ಹೆಸರುವಾಸಿಯಾಗಿದ್ದ ನಾಗಸ್ವರ ವಾದಕ ಜಲೀಲ್ ಸಾಹೇಬ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕಾಪುವಿನ ಕೊಪ್ಪಲಂಗಡಿಯ ನಿವಾಸಿಯಾಗಿರುವ ಇವರು ಹಲವಾರು ದೈವಸ್ಥಾನ, ದೇವಸ್ಥಾನಗಳಲ್ಲಿ ನಾಗಸ್ವರ ವಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮಕ್ಕಳ ಕರ್ನಾಟಕ ರಾಜ್ಯೋತ್ಸವ-2023 ಬಾಲ ಪ್ರಶಸ್ತಿಗೆ ಅರ್ಜಿ ಆಹ್ವಾನ

Thumbnail
Posted On: 13 Nov 2023, 09:53 AM

ಕಟಪಾಡಿ : ಇನ್ವೆಂಜರ್ ಫೌಂಡೇಷನ್ ಮಂಗಳೂರು, ಸೃಷ್ಠಿ ಫೌಂಡೇಶನ್ ಕಟಪಾಡಿ, ಪ್ರಥಮ್ಸ್ ಮ್ಯಾಜಿಕ್ ವರ್ಲ್ಡ್ ಕಟಪಾಡಿ ವತಿಯಿಂದ ನೀಡಲಾಗುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಬಾಲಪ್ರಶಸ್ತಿಗೆ ಅರ್ಹ ಪ್ರತಿಭಾವಂತ ಮಕ್ಕಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 5ರಿಂದ 18ವರ್ಷದೊಳಗಿನ ಮಕ್ಕಳು ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಬಹುಮುಖ ಪ್ರತಿಭೆಗಳನ್ನು ಬಾಲಪ್ರಶಸ್ತಿಗೆ ಪರಿಗಣಿಸಲಾಗುವುದು. ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ,ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತರು ಅರ್ಜಿ ಸಲ್ಲಿಸಬಹುದು. ಆಸಕ್ತರು ತಮ್ಮ ಸಾಧನೆಗಳ ಕುರಿತ ಸವಿವರ ಮಾಹಿತಿಯನ್ನು ಸೂಕ್ತ ಸ್ವಯಂ ದೃಢೀಕರಣ ಮಾಡಿ ಅರ್ಜಿ ಯನ್ನು ನ.25ರೊಳಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು. ಕಾಮತ್ ಸರ್ವಿಸಸ್,ಎಸ್ ವಿ ಎಸ್ ಹಿರಿಯ ಪ್ರಾಥಮಿಕ ಶಾಲೆ ಎದುರು,ಹಳೇ ರಸ್ತೆ ಕಟಪಾಡಿ ಅಂಚೆ ಉಡುಪಿ ಜಿಲ್ಲೆ-574105 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕೆ.ನಾಗೇಶ್ ಕಾಮತ್ - 9886432197, ಪ್ರಕಾಶ ಸುವರ್ಣ ಕಟಪಾಡಿ - 9964019229. ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ನೀಡಿ ಸೂಕ್ತ ವೇದಿಕೆ ಕಲ್ಪಿಸುವ ವಿನೂತನ ಕಾರ್ಯಕ್ರಮವನ್ನು ನವೆಂಬರ್ ತಿಂಗಳಾಂತ್ಯಕ್ಕೆ ಆಯೋಜಿಸಲಾಗಿದೆ. ಇದೇ ವೇಳೆ ಗಾನಗಂಧರ್ವ ಎಸ್ ಪಿಬಿ ಸಂಗೀತೋತ್ಸವ ಹಾಗೂ ಮಕ್ಕಳಸ್ನೇಹಿ ಪತ್ರಕರ್ತ ಶೇಖರ್ ಅಜೆಕಾರ್ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ದೀಪದ ಹಬ್ಬ : ನಿಸರ್ಗ ನೀರೆಗೆ ನೀರಾಜನ ಬೆಳಗುವ ಮುನ್ನ....!

Thumbnail
Posted On: 12 Nov 2023, 10:43 PM

ಕತ್ತಲಲ್ಲಿ ಬೆಳಕಿನ ವಿಜ್ರಂಭಣೆ. ಹೊಲ-ಗದ್ದೆಗಳಲ್ಲಿ ಸೊಡರ ಸೊಂಪು. ಧಾನ್ಯದ ರಾಶಿಗೆ ಮನದುಂಬಿದ ಮಂಗಳಾರತಿ. ಹಟ್ಟಿ-ಕೊಟ್ಟಿಗೆಗಳೆಲ್ಲ ದೀಪಮಯ. ದೈವ-ದೇವ ಸನ್ನಿಗಳಲ್ಲಿ ದೀಪಾರಾಧನೆ. ಬಯಲು ಬೆಳ್ಳಂಬೆಳಕಾಗಿದೆ; ಆಲಯಗಳಲ್ಲಿ ಆನಂದ ತುಂಬಿದೆ. ಭೂರಮೆಗೆ ಕೃತಜ್ಞತಾರ್ಪಣೆ. ಬಲೀಂದ್ರನಿಗೆ ’ಬಲಿ’ ಸಮರ್ಪಣೆ. ’ಪೊಲಿ’ ಎಂಬ ಆಶಯದ ಸಮೃದ್ಧಿಯನ್ನು ಬೇಡುತ್ತಾ ನೆರವೇರುವ ಆಚರಣೆ. ಇದು ದೀಪಾವಳಿ. ಎಲ್ಲ ಹಬ್ಬಗಳಿಗಿಂತಲೂ ಹೆಚ್ಚಿನ ಸಡಗರದಿಂದ, ಮುತುವರ್ಜಿಯಿಂದ, ಶ್ರದ್ಧೆಯಿಂದ ನಡೆಸಲ್ಪಡುವ ಈ ಪರ್ವ ನಿಜ ಅರ್ಥದ ಹಬ್ಬ, ಆದುದರಿಂದಲೆ ನಮಗಿದು ’ಪರ್ಬ'. ಮನೆ ತುಂಬಿರುತ್ತದೆ - ಕೃಷಿಯ ಶ್ರಮದ ಪ್ರತಿಫಲವಾಗಿ ಧಾನ್ಯ ರಾಶಿ ಬಿದ್ದಿದೆ. ಕೃಷಿ ಆಧರಿತ ಸಂಸ್ಕೃತಿಯಲ್ಲಿ ಭೂಮಿ, ಕೃಷಿ ಉತ್ಪನ್ನಗಳೇ ಪ್ರಧಾನ. ಆದುದರಿಂದ ಧಾನ್ಯ ದೇವತೆಗೆ ಆರಾಧನೆ. ನಿಸರ್ಗ ’ನೀರೆ’ಗೆ ನೀರಾಜನ. ಈ ನಡುವೆ ಪ್ರತಿದಿನವೂ ಹಬ್ಬದ ಸಮೃದ್ಧಿಯನ್ನು ಸ್ಥಾಪಿಸಿ ಪ್ರಜೆಗಳನ್ನು ಪಾಲಿಸಿದ್ದ ಪುರಾತನ ಭೂನಾಥ ಬಲೀಂದ್ರನನ್ನು ಕೃತಜ್ಞತಾ ಭಾವದೊಂದಿಗೆ ಸ್ಮರಿಸುವುದು. ಆತನಿಂದಲೇ ಪೊಲಿ (ಹೊಲಿ) ಎಂಬ ಅತಿಶಯ ಸಮೃದ್ಧಿಯನ್ನು ಬೇಡುವುದು ನಡೆದು ಬಂದ ಪದ್ಧತಿ. ಇದು ಶತಮಾನಗಳಿಂದ ಸಾಗಿಬಂದಿದೆ. ಈ ಶ್ರದ್ಧೆ ಪ್ರಾಚೀನ, ಈ ಆಚರಣೆ ಇಂದಿಗೂ ಪ್ರಸ್ತುತವೆನಿಸುತ್ತದೆ. ಬಲಗುಂದದೆ, ಮೌಲ್ಯ ಕಳೆದುಕೊಳ್ಳದೆ ಆಚರಿಸಲ್ಪಡುತ್ತಿದೆ. ಪರಮ ಧಾರ್ಮಿಕರು, ಆದರ್ಶ ಪುರುಷರು, ಜನತೆಯಲ್ಲಿ ಜನಾರ್ದನನ್ನು ಕಂಡ ಪುಣ್ಯಾತ್ಮರು ಇಲ್ಲಿ ರಾಜ್ಯವಾಳಿದ ಬಗ್ಗೆ ಪುರಾಣ ಹೇಳುತ್ತದೆ. ಇತಿಹಾಸ ವಿವರಿಸುತ್ತದೆ. ಆದರೆ ಪೂರ್ವದ ಬಲಿ ಚಕ್ರವರ್ತಿಯ ಅಸ್ತಿತ್ವ ಮಾತ್ರ ಸ್ಮರಣೀಯವಾಗುತ್ತದೆ. ಇದು ಬಲೀಂದ್ರನ ಪ್ರಜಾವತ್ಸಲ ಮನೋಧರ್ಮ. ನಡೆ-ನುಡಿ, ಆಚಾರ-ವಿಚಾರಗಳು, ಕೊಟ್ಟ ಮಾತಿಗೆ ತಪ್ಪದೆ ತನ್ನ ಸರ್ವಸ್ವವನ್ನೂ ದಾನಕೊಟ್ಟ ಸ್ಥಿರ ಮನಃಸ್ಥಿತಿಗಳು ಕಾರಣವಾಗಿ ಸ್ಥಾಯಿಯಾದ ಪುಣ್ಯ ಕೀರ್ತಿ ಇರಬೇಕು. ಮಣ್ಣಿನ - ಮಣ್ಣಿನ ಮಕ್ಕಳ - ತನ್ನ ನಡುವಿನ ಅವಿನಾಭಾವ ಸಂಬಂಧವನ್ನು ಮರೆಯಲಾರದಷ್ಟು ಗಾಢವಾಗಿ ಸ್ವೀಕರಿಸಿರುವ ಈ ಮಹನೀಯ ಮತ್ತೆ ಬರುತ್ತಿದ್ದಾನೆ, ದೀಪ ಹಚ್ಚೋಣ, ಬಲಿ ಅರ್ಪಿಸೋಣ, ’ಪೊಲಿ’ಯಾಚಿಸೋಣ. ಎಣ್ಣೆ ಸ್ನಾನ, ಮನೆ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುವುದು. ಜಾನುವಾರುಗಳ ಮೈ ತೊಳೆದು ಅಲಂಕರಿಸುವುದು, ಕೃಷಿ ಉಪಕರಣಗಳನ್ನು ಶುಚಿಗೊಳಿಸುವುದು. ಧಾನ್ಯದ ರಾಶಿಗೆ ಪೂಜೆ ಸಲ್ಲಿಸಲು ಸಿದ್ಧತೆಗಳನ್ನು ಮಾಡುವುದು. ಸೊಡರು (ತುಡಾರ್) ಹಚ್ಚಲು ದೀಪದ ಕಂಬ-ಬಲಿಗೆ ಸೊಪ್ಪು, ಕಾಡುಹೂಗಳನ್ನು ಸಂಗ್ರಹಿಸುವುದು. ಹೊಸಬಟ್ಟೆ ತೊಟ್ಟು ಅಮಾವಾಸ್ಯೆಯ ಕತ್ತಲು ಆವರಿಸುವ ಸಮಯ ನಿರೀಕ್ಷಿಸುತ್ತಾ ದಿನ ಕಳೆಯುವ ದಿನ ದೀಪಾವಳಿ. ದೀಪ ಹಚ್ಚುವ ಮೊದಲು : ಬಲೀಂದ್ರನನ್ನು ಕರೆಯಲು, ದೀಪ ಹಚ್ಚಲು, ಬಲಿ ಸಮರ್ಪಿಸಲು ಸಿದ್ಧತೆಗಳಾಗಿವೆ. ಆದರೆ ಸೂರ್ಯಾಸ್ತವಾಗಿಲ್ಲ, ಕೊಂಚ ಸಮಯಾವಕಾಶವಿದೆ. ...ಈಗ ಯೋಚಿಸೋಣ.... ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯನ್ನು ನಂಬಿ ಬದುಕು ಕಟ್ಟಿದ ಮಾನವ ಲಕ್ಷಾಂತರ ವರ್ಷಗಳಿಂದ ಮುಂದುವರಿದು ಬರುತ್ತಲೇ ಇದ್ದಾನೆ. ಕಾಲ ಬದಲಾಗಿದೆ. ಆಧುನಿಕತೆ ನಮ್ಮನ್ನು ಆವರಿಸಿದೆ. ಅಭಿವೃದ್ಧಿಯ ಅನಿವಾರ್ಯತೆ ನಮ್ಮ ಮುಂದಿದೆ. ಈ ಎಲ್ಲವೂ ಹಿಂದೆಯೂ ನಡೆದಿದೆ. ಅಭಿವೃದ್ಧಿ ಸಾಧಿಸಲ್ಪಟ್ಟಿದೆ. ನಾವು ಸುಸಂಸ್ಕೃತರಾಗಿ ಬದುಕು ಬಾಳಿದ್ದೇವೆ. ಎಲ್ಲವೂ ಸರಿಯಾಗಿತ್ತು. ಏಕೆಂದರೆ ಒಂದು ಸಮತೋಲನವಿತ್ತು. ಕಾಡು-ನಾಡು-ನಗರ-ಹಳ್ಳಿಗಳ ಪ್ರಮಾಣ ಮನುಕುಲವನ್ನು ನಿಯಂತ್ರಿಸುತ್ತಿತ್ತು. ಪರಿಸರ ಪರಿಶುದ್ಧವಾಗಿತ್ತು. ಜೀವನಾಧಾರ ನದಿಗಳು ಸ್ವೇಚ್ಛೆಯಿಂದ ಹರಿಯುತ್ತಿದ್ದವು. ನದಿದಡದಲ್ಲಿ ನಾಗರಿಕತೆ ಬೆಳೆಯಿತು-ಸಂಸ್ಕೃತಿ ಮಡುಗಟ್ಟಿತು. ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳು ಆತಂಕ ಉಂಟು ಮಾಡುತ್ತಿವೆ. ಪರಿಸರ ನಾಶ. ನಮ್ಮ ಮುಂದಿರುವ ಬಗೆಹರಿಸಲಾರದ ಸಮಸ್ಯೆ. ಶುದ್ಧ ಪರಿಸರಬೇಕೆನ್ನುವುದು ಹಕ್ಕು ಹೊರತು ಅಭಿವೃದ್ಧಿ ವಿರೋಧವಲ್ಲ. ಪ್ರಾಕೃತಿಕ ಸ್ವರೂಪ ಬದಲಾವಣೆ ಬೇಡ. ಏಕೆಂದರೆ ನೈಜತೆ ಬೇಕು ಎಂಬ ಪ್ರೀತಿ. ಒಟ್ಟಿನಲ್ಲಿ ಈ ಕಾಳಜಿ ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಯಥಾಸ್ಥಿತಿಯಲ್ಲಿ ಹಸ್ತಾಂತರಿಸಬೇಕೆಂಬ ಮಹದಾಸೆ. ಪ್ರಕೃತಿ-ಕೃಷಿ-ಸಂಸ್ಕೃತಿ ಈ ಮೂರನ್ನೂ ಆರಾಧಿಸುವ, ವಿವಿಧ ಪರಿಕಲ್ಪನೆಗಳೊಂದಿಗೆ ಸ್ವೀಕರಿಸಿರುವ ನಾವು ನಿಸರ್ಗದ ಮಡಿಲಲ್ಲೆ ನಿಸರ್ಗ ಸಹಜ ವಸ್ತುಗಳನ್ನು ಪಡೆಯುತ್ತಾ ಪೂಜೆ, ಆಚರಣೆಗಳನ್ನೂ ನಡೆಸುತ್ತೇವೆ. ಬಲೀಂದ್ರನ ಕಾಲದಲ್ಲಿ ಕೃಷಿ ಕಾಯಕ ಗಾಢವಾಗಿತ್ತು. ಸಮೃದ್ಧಿ ಇತ್ತು. ಆದರೆ ಇಂದು ಕೃಷಿ ಭೂಮಿ ಪರಿವರ್ತನೆಗೊಂಡಿವೆ. ಉದ್ಯಮಗಳು ಬೆಳೆದಿವೆ. ಕೃಷಿ ಭೂಮಿ ಕೃಶವಾಗಿದೆ. ಭೂಮಿ ಇದ್ದರೂ ಬೆಳೆ ಬೆಳೆಯುವ ಆಸಕ್ತಿ ಇಲ್ಲ. ಕೃಷಿ ಲಾಭದಾಯಕವಾಗಿಲ್ಲ ಎಂಬುದು ಒಂದು ಉತ್ತರವಿದೆ. ಏನಿದ್ದರೂ ಕೃಷಿಯೊಂದಿಗೆ ಕೃಷಿ ಸಂಸ್ಕೃತಿಯೂ ಕೃಶವಾಗುತ್ತಿದೆ ಎಂಬುದು ಸತ್ಯ ತಾನೆ? ಹಾಗಿದ್ದರೆ ಇನ್ನೆಷ್ಟು ವರ್ಷ ಬಲೀಂದ್ರನ ಆಗಮನಕ್ಕೆ ಸಿದ್ಧರಾಗಬಹುದು, ಬಲೀಂದ್ರನಿಗೆ ಆತನು ಆಳಿದ ಸಮೃದ್ಧ ಭೂಮಿಯನ್ನು ತೋರಿಸಬಹುದು. ದೀಪ ಹಚ್ಚಲು ಕೃಷಿಭೂಮಿ ಬರಡು ನೆಲವಾಗುತ್ತದೆ. ಸೊಡರು ಹಚ್ಚಲು ಹಟ್ಟಿ-ಕೊಟ್ಟಿಗೆ ಇಲ್ಲವಾಗಬಹುದು. ಮಂಗಲಾರತಿ ಎತ್ತಲು ಭತ್ತದ ರಾಶಿಯೇ ಇಲ್ಲ. ಇಂತಹ ಸ್ಥಿತಿ ಸನ್ನಿಹಿತವಾಗುವ ದಿನ ಬರುತ್ತಿದೆ. ಬರಡು ನೆಲಕ್ಕೆ, ಧಾನ್ಯದ ರಾಶಿಯ ಸಮೃದ್ಧಿ ಇಲ್ಲದ ಮನೆಗೆ, ದನ-ಕರು-ಕೋಣ-ಎತ್ತುಗಳ ಸಾಕಣೆಗಳೇ ಇಲ್ಲದ ವಾಸ್ತವ್ಯಕ್ಕೆ ಬಲೀಂದ್ರನನ್ನು ಹೇಗೆ ಕರೆಯೋಣ. ಅಲ್ಪಸ್ವಲ್ಪ ಉಳಿಸಿರುವ ನಾವೇನೊ ಕರೆಯಬಹುದು, ನಮ್ಮ ಮುಂದಿನ ತಲೆ ಯಾರು ಬಲೀಂದ್ರನನ್ನು ಕರೆಯುವ ಕ್ರಮವನ್ನೇ ಮಾಡದಿರಬಹುದೋ ಏನೋ? ಸಜ್ಜನ, ಪುಣ್ಯಾತ್ಮ, ಮಳೆದೇವತೆ, ಬಂದು ಹೋಗುವ ದೇವರು ಎಂಬಿತ್ಯಾದಿ ಬಿರುದಾಂಕಿತ ಬಲಿಚಕ್ರವರ್ತಿಗೆ ಮನುಕುಲ ವಂಚಿಸಿದಂತಾಗದೆ....? ಕ್ಷಮಿಸು ಬಲೀಂದ್ರ. ಮಕ್ಕಳು ಸಿಡಿಸಿದ ಪಟಾಕಿಯೊಂದು ಆಲೋಚನಾ ಪರನಾಗಿದ್ದ ನನ್ನನ್ನೂ ಎಚ್ಚರಿಸಿದೆ. ವಾಸ್ತವದಲ್ಲಿ ಕಾಣುತ್ತಿರುವುದು ಎಲ್ಲೆಡೆ ದೀಪ ಬೆಳಗುತ್ತಿದೆ. ಬಲೀಂದ್ರನನ್ನು ಕರೆಯುತ್ತಾ ಜನ ಬಯಲಲ್ಲಿ ದೀಪಾರಾಧನೆ ನಿರತರಾಗಿದ್ದರೆ, ಪೂರ್ವದ ಸೊಗಡು, ಬಲ, ಸಂಭ್ರಮ, ತೀವ್ರತೆ ಇಲ್ಲವಾಗಿದೆ. ಎಲ್ಲೆಲ್ಲೂ ಇರಬೇಕಾದ್ದು ಅಲ್ಲಲ್ಲಿದೆ. ಓ....ಬಲೀಂದ್ರ ಎಂಬ ಕರೆಯೇ ಕ್ಷೀಣವಾಗುತ್ತಿದೆ. ಇದರೊಂದಿಗೆ ಕೃಷಿ ಆಧರಿಸಿ ಪ್ರಕೃತಿಯ ಮಡಿಲಲ್ಲಿ ರೂಪುಗೊಂಡ ಒಂದು ಸಮೃದ್ಧ ಸಂಸ್ಕೃತಿ ತನ್ನ ಪ್ರಖರತೆಯನ್ನೂ ಕ್ರಮೇಣ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಈಗ..ಬುದ್ಧಿವಂತ ಮೊಮ್ಮಗ ಕೇಳುತ್ತಿದ್ದಾನೆ.... ಅಜ್ಜಾ....ಅಮಾವಾಸ್ಯೆಯ ಕತ್ತಲಲ್ಲಿ ಬೆಳಗುವ ಈ ಎಣ್ಣೆ ದೀಪದಲ್ಲಿ ಬಲೀಂದ್ರನಿಗೆ ಯಾವುದೂ ನಿಚ್ಛಳವಾಗಿ ಕಾಣದು ಅಲ್ಲವೇ....? ’ಓ ಬಲೀಂದ್ರ....ಬಲಿಗೆತೊಂದು ಪೊಲಿಕೊರ್ಲ. ಲೇಖನ : ಕೆ.ಎಲ್.ಕುಂಡಂತಾಯ

ಇನ್ನಂಜೆ : ನಿಸರ್ಗ ಫ್ರೆಂಡ್ಸ್ ಪಾದೆಕೆರೆ - ಗೂಡುದೀಪ

Thumbnail
Posted On: 12 Nov 2023, 06:11 PM

ಇನ್ನಂಜೆ : ಎಲ್ಲೆಲ್ಲೂ ದೀಪದ ಹಬ್ಬ ದೀಪಾವಳಿಯ ಸಂಭ್ರಮ. ಅದರಲ್ಲೂ ಮನೆ, ಬೀದಿಗಳಲ್ಲಿ ಗೂಡುದೀಪಗಳನ್ನು ನೋಡುವುದೇ ಚಂದ. ಕಳೆದ 12 ವರ್ಷಗಳಿಂದ ಗೂಡುದೀಪವನ್ನು ತಯಾರಿಸಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ ನಿಸರ್ಗ ಫ್ರೆಂಡ್ಸ್ (ರಿ.)ಪಾದೆಕೆರೆ, ಇನ್ನಂಜೆ ತಂಡ. ಈ ಬಾರಿಯೂ 8×5 ಫೀಟ್ ಮಾದರಿಯ ಗೂಡುದೀಪ ತಯಾರಿಸಿದ್ದಾರೆ.

ಪಲಿಮಾರು ಹೊೖಗೆ ಫ್ರೆಂಡ್ಸ್ ವತಿಯಿಂದ ಕಾರುಣ್ಯ ಆಶ್ರಮಕ್ಕೆ ದಿನಬಳಕೆಯ ವಸ್ತುಗಳ ವಿತರಣೆ

Thumbnail
Posted On: 12 Nov 2023, 06:01 PM

ಕಟಪಾಡಿ : ದೀಪಾವಳಿ ಹಬ್ಬದ ಪ್ರಯುಕ್ತ ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಇವರು ಕಟಪಾಡಿಯ ಕಾರುಣ್ಯ ಆಶ್ರಮಕ್ಕೆ ದಿನಬಳಕೆಯ ವಸ್ತುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಿತೇಶ್ ದೇವಾಡಿಗ , ಕಾರ್ಯದರ್ಶಿ ಸತೀಶ ಕುಮಾರ್, ಉಪಾಧ್ಯಕ್ಷ ಸಂತೋಷ್ ದೇವಾಡಿಗ, ರಾಘವೇಂದ್ರ ಜೆ ಸುವರ್ಣ, ವಿಶು ಕುಮಾರ್, ರವಿ ದೇವಾಡಿಗ, ಶ್ರೀಜಿತ್, ಅಂಕಿತ್, ಅಭಿಷೇಕ್, ಸಿಂಚನ್ ಎಸ್ ಅಮೀನ್, ಆಶ್ರಮದ ಮೇಲ್ವಿಚಾರಕರಾದ ಪಿ. ಕುಮಾರ್ ಮತ್ತು ಆಶ್ರಮ ನಿವಾಸಿಗಳು ಉಪಸ್ಥಿತರಿದ್ದರು.

ಪಡುಬಿದ್ರಿ ರೋಟರಿ ಕ್ಲಬ್ ‌: ವರ್ಣ ವಿಹಾರ-2023

Thumbnail
Posted On: 12 Nov 2023, 03:38 PM

ಪಡುಬಿದ್ರಿ : ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರ ಕಲೆಯ ಸವಿಯು ಸವಿದವನಿಗೆ ಗೊತ್ತು ಚಿತ್ರಕಲೆಯ ಬಗ್ಗೆ ತಿಳಿಯುವ ಮುನ್ನ ನಾವು ಕಲೆಯ ಬಗ್ಗೆ ಅರಿತು ಕೊಳ್ಳಲೇಬೇಕು. ಚಿತ್ರಕಲೆಯು ಮಗುವಿನ ಮಾನಸಿಕ ಬೆಳವಣಿಗೆಗೆ ಸ್ವಾಭಾವಿಕ ಸಾಧನ. ಪ್ರತಿಯೊಂದು ಮಗುವು‌ ಶ್ರೇಷ್ಠ ಕಲಾವಿದ. ಪ್ರತಿಶತ ಶೇ.80 ರಷ್ಟು ಮಕ್ಕಳು ತಾವು ಇಷ್ಟ ಪಡುವ‌ ಆಟಕ್ಕಿಂತಲು ಹೆಚ್ಚು ಸಮಯವನ್ನು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ಏಕಾಗ್ರತೆ ಹಾಗು ತಾಳ್ಮೆ ಇದ್ದರೆ ಎಷ್ಟೇ ಕಷ್ಟಕರವಾದ ಚಿತ್ರವನ್ನು ಬಿಡಿಸಬಹುದು" ಎಂದು ಖ್ಯಾತ ಚಿತ್ರ ಕಲಾವಿದ ಸೂರಾಜ್ ಮಂಗಳೂರು ನುಡಿದರು. ಅವರು ಪಡುಬಿದ್ರಿ ಸುಜಾತ ಆಡಿಟೋರಿಯಮ್ ನಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ ಇದರ ವತಿಯಿಂದ ನಡೆದ ವರ್ಣ ವಿಹಾರ-2023 ಉಡುಪಿ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾ.ಪಂ ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ ಮಾಲಕ ಅಬ್ದುಲ್ ಹಮೀದ್, ಸರಸ್ವತಿ ಮಂದಿರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಎಸ್ ಅಚಾರ್ಯ, ರೋಟರಿ ಪೂರ್ವ ಅಧ್ಯಕ್ಷ ಗಣೇಶ್ ಅಚಾರ್ಯ, ಹೇಮಲತಾ ಸುವರ್ಣ ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರ ವಿವರ : 1ರಿಂದ 4 ತರಗತಿ ವಿಭಾಗ - ಎಮ್ .ರಾಝಿಕ್ (ಪ್ರಥಮ), ಜಯಕೃಷ ಎಲ್ ಬಂಗೇರ (ದ್ವಿತೀಯ) 5 ರಿಂದ‌ 8 ನೇ ತರಗತಿ ವಿಭಾಗ - ಅನುಜ್ಞ (ಪ್ರಥಮ), ಅಮೀನಾ ಬಾನು (ದ್ವಿತೀಯ) 9 ರಿಂದ 12ನೇ ತರಗತಿ ವಿಭಾಗ - ಶುಭಾಶ್ರೀ (ಪ್ರಥಮ), ಸಮರ್ಥ ಜೋಶಿ (ದ್ವಿತೀಯ) ಸಾರ್ವಜನಿಕ ವಿಭಾಗ - ತಸ್ನೀನ್ ಅರಾ ಪಡುಬಿದ್ರಿ (ಪ್ರಥಮ), ಪ್ರತೀಕ್ ಶೆಟ್ಟಿ ಪಡುಬಿದ್ರಿ (ದ್ವಿತೀಯ) ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ‌ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ವಹಿಸಿದ್ದರು. ಮಾಜಿ ತಾ.ಪಂ ಸದಸ್ಯ ನವೀನಚಂದ್ರ ಜೆ ಶೆಟ್ಟಿ, ಪಡುಬಿದ್ರಿ ಗ್ರಾ.ಪಂ. ಉಪಾಧ್ಯಕ್ಷ ವೈ. ಸುಕುಮಾರ್, ಕನ್ನಡ ಚಲನಚಿತ್ರ ನಿರ್ಮಾಪಕ ಡಾ| ಸುರೇಶ್ ಕೋಟ್ಯಾನ್ ಚಿತ್ರಾಪು, ವಲಯ ಸೇನಾನಿ ರಿಯಾಜ್ ಮುದರಂಗಡಿ, ವಲಯ ಸಂಯೋಜಕ ರಮೀಜ್ ಹುಸೇನ್, ರೋಟರಿ ಪೂರ್ವ ಅಧ್ಯಕ್ಷ ಅಬ್ದುಲ್ ಹಮೀದ್, ಪಡುಬಿದ್ರಿ ಕೆನರಾ ಬ್ಯಾಂಕ್ ಪ್ರಬಂಧಕಿ ವಿಜಯ ಕಾಮತ್, ಚಲನಚಿತ್ರ ನಟಿ, ರೂಪದರ್ಶಿ ಕು.ತೃಪ್ತಿ, ಕಾರ್ಯಕ್ರಮ ನಿರ್ದೇಶಕ ರಾದ ಗಣೇಶ್ ಅಚಾರ್ಯ ಎರ್ಮಾಳ್, ತಸ್ನೀನ್ ಅರಾ, ಹೇಮಲತಾ ಸುವರ್ಣ ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ‌ಸ್ವಾಗತಿಸಿದರು. ಬಿ.ಎಸ್. ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿದರು.

ಹೆಜಮಾಡಿ : ಕುಣಿತ ಭಜನಾ ತರಬೇತಿಗೆ ಚಾಲನೆ

Thumbnail
Posted On: 12 Nov 2023, 11:21 AM

ಹೆಜಮಾಡಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದೆಬೆಟ್ಟುಶ್ರೀಧರ್ ಆಚಾರ್ಯ ಇವರ ನೇತೃತ್ವದಲ್ಲಿ ಕುಣಿತ ಭಜನಾ ತರಬೇತಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ದೇವಸ್ಥಾನದ ಅರ್ಚಕರು, ದಯಾನಂದ ಹೆಜಮಾಡಿ, ರಾಜಶೇಖರ್ ಹೆಜಮಾಡಿ, ಶ್ರೀನಿವಾಸ್ ಹೆಜಮಾಡಿ, ಮಹಿಳಾ ಬಳಗ ಮತ್ತು ಮಕ್ಕಳು ಉಪಸ್ಥಿತರಿದ್ದರು.

ಬಂಟಕಲ್ಲು : ಕೆ ಆರ್ ಪಾಟ್ಕರ್ ರಿಂದ ರಚಿಸಲ್ಪಟ್ಟ ಕನ್ನಡದ ಗೂಡುದೀಪ

Thumbnail
Posted On: 12 Nov 2023, 11:15 AM

ಬಂಟಕಲ್ಲು : ದೀಪಾವಳಿ ಸಂಭ್ರಮದಲ್ಲಿ ಗೂಡುದೀಪಕ್ಕೂ ಪಾಲಿದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ತಯಾರಿಸಿದ ಗೂಡುದೀಪಗಳು ರಾರಾಜಿಸಿದರೆ ಇಂದು ಅಂಗಡಿಗಳಲ್ಲಿ ತಯಾರಿಸಲ್ಪಟ್ಟ ಗೂಡುದೀಪಗಳು ಮನೆಯ ಎದುರಿಗೆ ರಾರಾಜಿಸುತ್ತಿದೆ. ಆದರೆ ಇಲ್ಲೊಬ್ಬರು ಕನ್ನಡದ ಕಟ್ಟಾಳು, ಬಂಟಕಲ್ಲು ಗ್ರಾಮ ಪಂಚಾಯ್ ನ ಮಾಜಿ ಅಧ್ಯಕ್ಷ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಸಂಘಟನಾ ಕಾರ್ಯದರ್ಶಿ, ಇತ್ತೀಚೆಗೆ ನಡೆದ ೫ನೇ ಕಾಪು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ರೂಪಿಸಿದ ಸಮ್ಮೇಳನದ ಕಾರ್ಯಧ್ಯಕ್ಷರಾದ ಕೆ‌ ಆರ್ ಪಾಟ್ಕರ್ ತಮ್ಮ ಮನೆಯಲ್ಲಿ ಕನ್ನಡದ ಗೂಡುದೀಪ ತಯಾರಿಸಿದ್ದಾರೆ. ಇದು ನೋಡುಗರಿಗೂ ಖುಷಿ ತಂದಿದೆ.

ವೀರವನಿತೆ ಒನಕೆ ಓಬವ್ವರಂತೆ ಸಮಯ ಪ್ರಜ್ಞೆ ಹಾಗೂ ಧೈರ್ಯ ಮನೋಭಾವವನ್ನು ರೂಢಿಸಿಕೊಳ್ಳಿ : ಡಾ. ಪ್ರತಿಭ ಆರ್.

Thumbnail
Posted On: 11 Nov 2023, 11:20 PM

ಕಾಪು : ಇಲ್ಲಿನ‌ ತಹಶಿಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಅವರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾಪು ತಾಲ್ಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್ ರವರು ಜ್ಯೋತಿ ಬೆಳಗಿಸಿ ವೀರವನಿತೆ ಓಬವ್ವನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ‌ ಸಂದರ್ಭ ಮಾತನಾಡಿದ ಅವರು ವೀರವನಿತೆ ಒನಕೆ ಓಬವ್ವ ಅವರ ಧೈರ್ಯ-ಸ್ಥೈರ್ಯಗಳನ್ನು ಶ್ಲಾಘಿಸಿದರು. ಆಕೆ ತನ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ಒಂದು ಸಾಮ್ರಾಜ್ಯದ ಉಳಿವಿಗೆ ಕಾರಣಳಾದಳು. ನಮ್ಮ ಹೆಣ್ಣುಮಕ್ಕಳು ಕೂಡಾ ಆಕೆಯಂತೆ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭ ಉಪ ತಹಶಿಲ್ದಾರ್ ಅಶೋಕ್ ಎನ್ ಕೋಟೆಕಾರ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.