Updated News From Kaup
ಹೆಜಮಾಡಿ : ಯುನೈಟೆಡ್ ಕನ್ನಂಗಾರ್ ಫುಟ್ಬಾಲ್ ಕ್ಲಬ್ - ಸಮಾಜ ಸೇವಕ ಫಾರೂಕ್ ಚಂದ್ರನಗರಗೆ ಸನ್ಮಾನ
Posted On: 05 Nov 2023, 05:11 PM
ಹೆಜಮಾಡಿ : ಇಲ್ಲಿನ ರಾಜೀವ ಗಾಂಧಿ ಕ್ರಿಡಾಂಗಣದಲ್ಲಿ ರಾಜ್ಯ ಮಟ್ಟದ ಫುಟ್ ಬಾಲ್ ಕ್ರೀಡಾ ವೇದಿಕೆಯಲ್ಲಿ ಯುನೈಟೆಡ್ ಕನ್ನಂಗಾರ್ ಫುಟ್ಬಾಲ್ ಕ್ಲಬ್ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಕ ಫಾರೂಕ್ ಚಂದ್ರನಗರ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹಾಜಿ ಗುಲಾಮ್ ಮಹಮ್ಮದ್, ರಜಬ್ ಪರ್ಕಳ ಉದ್ಯಮಿ ಸೌದಿ ಅರೇಬಿಯಾ, ಸಂದೇಶ್ ಶೆಟ್ಟಿ ಉದ್ಯಮಿ ಮುಂಬೈ, ಆಸೀಫ್ ಕಾರ್ಕಳ, ಶೇಖರ್ ಹೆಜಮಾಡಿ, ಅಝೀಜ್ ಹೆಜಮಾಡಿ, ನಜಿರ್ ಕಾರ್ನಾಡ್, ಯುನೈಟೆಡ್ ಅಧ್ಯಕ್ಷ ಆಶಿಫ್, ಝಿಯಾನ್ ಹೆಜಮಾಡಿ, ಮೋಹನ್ ಸುವರ್ಣ, ಶರಣ್ ಕುಮಾರ್ ಮಟ್ಟು, ಶಿವರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಾವರ : ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಅಂಚೆ ಇಲಾಖೆಯ ಸೇವೆಗಳ ಮಾಹಿತಿ ಅಭಿಯಾನ
Posted On: 04 Nov 2023, 12:40 PM
ಉದ್ಯಾವರ : ಗುರ್ಮೆ ಫೌಂಡೇಶನ್, ಗುರ್ಮೆ ಕಳತ್ತೂರು, ಬಿಜೆಪಿ ಮಹಾಶಕ್ತಿ ಕೇಂದ್ರ, ಉದ್ಯಾವರ, ಶ್ರೀನಿವಾಸ ಆಸ್ಪತ್ರೆ ಮುಕ್ಕಾ, ಸುರತ್ಕಲ್, ಮಂಗಳೂರು ಇವರ ಆಶ್ರಯದಲ್ಲಿ ಶನಿವಾರ ಉದ್ಯಾವರ ಸೌಂದರ್ಯ ಹಾಲ್ ನಲ್ಲಿ ಆಯೋಜಿಸಲಾದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಅಂಚೆ ಇಲಾಖೆಯ ಸೇವೆಗಳ ಮಾಹಿತಿ ಅಭಿಯಾನವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಉಪಾಧ್ಯಕ್ಷರಾದ ನವೀನ್ ಎಸ್.ಕೆ, ಶ್ರೀನಿವಾಸ ಆಸ್ಪತ್ರೆಯ ಶಶಿರಾಜ್ ಶೆಟ್ಟಿ, ಉದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಕಾಪು ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಚೀನ್ ಸುವರ್ಣ, ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿ ಕೋಟ್ಯಾನ್ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಬಂಟಕಲ್ಲು : ೫ನೇ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
Posted On: 04 Nov 2023, 12:26 PM
ಬಂಟಕಲ್ಲು : ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೫ನೇ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷರಾದ ಕೆ ಎಸ್ ಶ್ರೀಧರ ಮೂರ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಜೊತೆಗೂಡಿ ಉದ್ಘಾಟಿಸಿದರು. ಸ್ಮರಣ ಸಂಚಿಕೆ/ಪುಸ್ತಕ ಬಿಡುಗಡೆ : ಶಿಕ್ಷಕ ಸತ್ಯಸಾಯಿ ಪ್ರಸಾದ್ ರ ಕೃತಿ 'ಸಾಯಿ ಸಂದೇಶ' ವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಅನಂತ ಮೂಡಿತ್ತಾಯ ಸಂಪಾದಕತ್ವದ ಸ್ಮರಣ ಸಂಚಿಕೆ 'ಕಡಲು' ನ್ನು ಮಾಧವ ಕಾಮತ್ ಬಿಡುಗಡೆಗೊಳಿಸಿದರು. ಧ್ವಜ ಹಸ್ತಾಂತರ : ಕಾಪು ತಾಲ್ಲೂಕಿನ ೪ ನೇ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರಾದ ಕ್ಯಾಥರೀನ್ ರೊಡ್ರಿಗಸ್ ಸಾಹಿತ್ಯ ಪರಿಷತ್ತಿನ ಧ್ವಜವನ್ನು ೫ನೇ ಸಮ್ಮೇಳನದ ಅಧ್ಯಕ್ಷರಾದ ಕೆ ಎಸ್ ಶ್ರೀಧರ ಮೂರ್ತಿಯವರಿಗೆ ಹಸ್ತಾಂತರಿಸಿದರು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಅತಿಥಿ ದೇವೋ ಭವ ಎಂಬ ಸಂಸ್ಕೃತಿ ನಮ್ಮದು. ಭಾರತ ಹಲವು ಸಂಸ್ಕೃತಿ ಮತ್ತು ಭಾಷೆಯನ್ನು ಹೊಂದಿರುವ ದೇಶ ಅದರಲ್ಲಿ ನಮ್ಮ ಕರ್ನಾಟಕ ವಿಶೇಷ ಎಂದು ಹೇಳಿದ ಅವರು ಕನ್ನಡ ನಾಡು ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದು ಎಂದರು. ಹಲ್ಮಿಡಿಯ ಕನ್ನಡ ಶತ ಶತಮಾನಗಳ ನಂತರ ಮುಂದುವರೆದಿದೆ. ಕನ್ನಡದ ಸೊಗಸನ್ನು ನಾವು ಅರಿಯಬೇಕಾಗಿದೆ. ಪಾಶ್ಚಿಮಾತ್ಯರ ಪ್ರಭಾವದಿಂದ ಸಾಹಿತ್ಯ ವೈವಿಧ್ಯಮಯವಾಯಿತು ಎಂದು ಸಮ್ಮೇಳನಾಧ್ಯಕ್ಷರಾದ ಕೆ ಎಸ್ ಶ್ರೀಧರ ಮೂರ್ತಿ ಹೇಳಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಂಟಕಲ್ಲು ಪುಂಡಲೀಕ ಮರಾಠೆ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ರಾಜೇಶ್, ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾl ತಿರುಮಲೇಶ್ವರ ಭಟ್, ಕಾಪು ತಹಶೀಲ್ದಾರರಾದ ನಾಗರಾಜ್ ನಾಯ್ಕಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಸಮ್ಮೇಳನದ ಕಾರ್ಯದರ್ಶಿ ಎಸ್ ಎಸ್ ಪ್ರಸಾದ್, ದೇವಸ್ಥಾನ ಆಡಳಿತ ಮೊಕ್ತೇಸರರು ಮತ್ತು ಧರ್ಮಗುರುಗಳು ಉಪಸ್ಥಿತರಿದ್ದರು. ಸಮ್ಮೇಳನದ ಕಾರ್ಯಾಧ್ಯಕ್ಷರಾದ ಕೆ ಆರ್ ಪಾಟ್ಕರ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವನೆಗೈದರು. ಅನಂತ ಮೂಡಿತ್ತಾಯ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ವಂದಿಸಿದರು.
ಪಡುಬಿದ್ರಿ : ಟ್ಯಾಂಕರ್ ಹರಿದು ಯುವಕ ಸಾವು
Posted On: 03 Nov 2023, 08:46 PM
ಪಡುಬಿದ್ರಿ : ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕೊಂದು ಟೂರಿಸ್ಟ್ ಬಸ್ಸಿಗೆ ಢಿಕ್ಕಿ ಹೊಡೆದು ಬೈಕಿನಲ್ಲಿದ್ದ ಯುವಕ ರಸ್ತೆಗೆ ಎಸೆಯಲ್ಪಟ್ಟು ಆತನ ಮೇಲೆ ಟ್ಯಾಂಕರ್ ಹರಿದ ಪರಿಣಾಮ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಪೇಟೆಯಲ್ಲಿ ಇಂದು ಸಂಜೆ ನಡೆದಿದೆ. ಮೃತನನ್ನು ಕಂಚಿನಡ್ಕ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಇಲ್ಲಿನ ಮಂಗಳೂರು ಕಡೆಗೆ ತೆರಳುವ ಬಸ್ಸು ನಿಲ್ದಾಣದ ಬಳಿ ಹೆದ್ದಾರಿಯಲ್ಲಿ ಖಾಸಗಿ ಟೂರಿಸ್ಟ್ ಬಸ್ಸು ನಿಲ್ಲಿಸಿದ ವೇಳೆ ಹಿಂಬದಿಯಲ್ಲಿದ್ದ ಬೈಕ್ ಬಸ್ಸಿಗೆ ಢಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟಿದ್ದನು. ಇದೇ ವೇಳೆ ಟ್ಯಾಂಕರ್ ಆತನ ಮೇಲೆ ಹರಿದ ಪರಿಣಾಮ ಟ್ಯಾಂಕರ್ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟನು. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳಪರಿಶೀಲನೆ ನಡೆಸಿದ್ದಾರೆ.
ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರಾವಳಿ ಸ್ಟಾರ್ಸ್ ನಡಿಪಟ್ಣ ವತಿಯಿಂದ ಧ್ವಜಾರೋಹಣ, ಸ್ವಚ್ಛತಾ ಕಾರ್ಯಕ್ರಮ
Posted On: 01 Nov 2023, 06:12 PM
ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸಂಸ್ಥೆಯ ವತಿಯಿಂದ ಬುಧವಾರ ಧ್ವಜಾರೋಹಣ ಕಾರ್ಯಕ್ರಮ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಕರಣ್ ಗೇಮ್ ಝೋನ್ ಪಡುಬಿದ್ರಿ ಇದರ ಮಾಲೀಕರಾದ ಕಿರಣ ಪ್ರತಾಪ್ ಸಾಲಿಯಾನ್ ನೆರವೇರಿಸಿದರು. ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸಂಸ್ಥೆಯ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಹದಗೆಟ್ಟಿದ್ದ ಪಡುಬಿದ್ರಿಯ ಬೀಚ್ ರಸ್ತೆಯ ದುರಸ್ತಿ ಕಾರ್ಯ ನಡೆಯಿತು. ಈ ಕಾರ್ಯವು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆಶಿಕ್ ಅಮೀನ್, ಸಂಸ್ಥೆಯ ಸ್ಥಾಪಕರಾದ ಕಿರಣ್ ರಾಜ್ ಕರ್ಕೇರ, ಸಂತೋಷ್ ಸಾಲಿಯಾನ್, ಶಶಿಕಲಾ ಕಾಡಿಪಟ್ಣ, ಸಾಗರ್ ವಿದ್ಯಾ ಮಂದಿರ, ಗಣಪತಿ ಪ್ರೌಢಶಾಲೆ ವಿದ್ಯಾರ್ಥಿಗಳು, ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಪಡುಬಿದ್ರಿ : ಕ್ರೀಡೆಗಳು ವ್ಯಕ್ತಿಯನ್ನು ಆರೋಗ್ಯವಂತ, ಕ್ರಿಯಾಶೀಲನನ್ನಾಗಿ ಮಾಡಲು ಸಹಕಾರಿ - ಶರತ್ ಶೆಟ್ಟಿ
Posted On: 01 Nov 2023, 03:18 PM
ಪಡುಬಿದ್ರಿ : ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಕ್ರೀಡೆಗಳು ಯಾವಾಗಲೂ ಒಬ್ಬ ವ್ಯಕ್ತಿಯನ್ನು ಆರೋಗ್ಯಕರವಾಗಿ ಸಮೃದ್ಧವಾಗಿ ಮತ್ತು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಆರೋಗ್ಯ ವಂತ ದೇಹದಿಂದ ಮಾತ್ರ ಮನಸ್ಸು ಆರೋಗ್ಯ ವಾಗಿರಲು ಸಾಧ್ಯ. ನಾವು ಎಲ್ಲಾ ಸಮಯದಲ್ಲೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ನಾವು ಜೀವನದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಬಹುದು ಅದ್ದರಿಂದ ಜೀವನದಲ್ಲಿ ಕ್ರೀಡೆಗಳು ಅವಶ್ಯಕ ಎಂದು ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಗೌರವ ಅಧ್ಯಕ್ಷ ಶರತ್ ಶೆಟ್ಟಿ ಹೇಳಿದರು. ಪಡುಬಿದ್ರಿ ಬೋರ್ಡ್ ಶಾಲಾ ಮ್ಯೆದಾನದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ , ಇನ್ನರ್ ವೀಲ್ ಕ್ಲಬ್ , ರೋಟರಿ ಸಮುದಾಯದಳ ಹಾಗು ರೋಟರಾಕ್ಟ್ ಕ್ಲಬ್ ವತಿಯಿಂದ ನಡೆದ ಕುಟುಂಬ ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ವಲಯ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಮಾತನಾಡಿ ಪ್ರತಿಯೊಂದು ಆಟಕ್ಕೂ ವಿಶಿಷ್ಟವಾದ ಉದ್ದೇಶ ಹಾಗು ಮೌಲ್ಯವಿದೆ. ನಾವು ಆಡುವ ಪ್ರತಿಯೊಂದು ಕ್ರೀಡೆ ಮತ್ತು ಆಟವು ನಮಗೆ ಶಿಸ್ತನ್ನು ಕಲಿಸುತ್ತದೆ. ಕ್ರೀಡೆಗಳು ನಮಗೆ ಅಮೂಲ್ಯ ವಾದ ಪಾಠವನ್ನು ಕಲಿಸುತ್ತದೆ. ಕಷ್ಟಗಳ ಹೊರತಾಗಿಯೂ ನಾವು ಕ್ರೀಡಾಪಟುವಾಗಿ ಅನುಭವಿಸಬೇಕು. ಆದ್ದರಿಂದ ನಾವು ನಮ್ಮ ಜೀವನದಲ್ಲಿ ಆಟಗಳು ಮತ್ತು ಕ್ರೀಡೆಗಳ ಮೌಲ್ಯ ಮತ್ತು ಮಹತ್ವವನ್ನು ಗ್ರಹಿಸ ಬೇಕು ಎಂದರು. ಸನ್ಮಾನ : ರಾಜ್ಯ ಕಬಡ್ಡಿ ತಂಡಕ್ಕೆ ಆಯ್ಕೆಗೊಂಡ ಕಬಡ್ಡಿ ಆಟಗಾರ್ತಿ ಗಣ್ಯ ಜಿ. ಸುವರ್ಣ ಹೆಜಮಾಡಿಯವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದರು. ರೋಟರಿ ವಲಯ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಕೆ., ಇನ್ನರ್ ವೀಲ್ ಅಧ್ಯಕ್ಷೆ ನಮೃತಾ ಮಹೇಶ್, ಪೂರ್ವ ಸಹಾಯಕ ಗವರ್ನರ್ ಗಳಾದ ಮಾಧವ ಸುವರ್ಣ, ಗಣೇಶ್ ಅಚಾರ್ಯ ಉಚ್ಚಿಲ , ಕರ್ನಾಟಕ ಪಬ್ಲಿಕ್ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಕೃಷ್ಣ ಬಂಗೇರ, ಕಾಪು ಜೀವವಿಮಾ ನಿಗಮದ ನಿವೃತ ಅಭಿವೃದ್ಧಿ ಅಧಿಕಾರಿ ರಮೇಶ್ ಯು, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಎರ್ಮಾಳ್, ವಲಯ ಸೇನಾನಿ ರಿಯಾಜ್ ಮುದರಂಗಡಿ, ವಲಯ ಸಂಯೋಜಕ ರಮೀಜ್ ಹುಸೇನ್, ವ್ಯೆದ್ಯಾಧಿಕಾರಿ ಪಯಶಸ್ವಿನಿ ಶೆಟ್ಟಿಗಾರ್, ಕ್ರೀಡಾಪಟು ಪ್ರಮೋದ್ ಸಾಲ್ಯಾನ್ ಎರ್ಮಾಳ್, ರೋಟರಿ ಸಮುದಾಯದಳ ಅಧ್ಯಕ್ಷ ರಚನ್ ಸಾಲ್ಯಾನ್, ಕಾರ್ಯದರ್ಶಿ ಪ್ರತೀಕ್ ಶೆಟ್ಟಿ ರೋಟರಾಕ್ಟ್ ಅಧ್ಯಕ್ಷೆ ತನಿಷಾ ಜಿ ಕುಕ್ಯಾನ್, ಕಾರ್ಯದರ್ಶಿ ಪ್ರತೀಕ್ ಅಚಾರ್ಯ, ರೋಟರಿ ಕಾರ್ಯದರ್ಶಿ ಪವನ್ ಸಾಲ್ಯಾನ್ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ಶಟಲ್ ಬಾಡ್ಮಿಂಟನ್, ಕ್ರಿಕೆಟ್, ತ್ರೋಬಾಲ್, ಹಗ್ಗ-ಜಗ್ಗಾಟ , ಅಥ್ಲೆಟಿಕ್ಸ್ ವಿಭಾಗದಲ್ಲಿ ಶಾಟ್ ಪುಟ್ ,100 ಮೀ., 200 ಮೀ. ಓಟಗಳನ್ನು ವಿವಿಧ ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಲಾಯಿತು. ದ್ಯೆಹಿಕ ಶಿಕ್ಷಕ ಮೋಹನ್ ಕರ್ಕೇರ, ಸುರೇಶ್ ಎರ್ಮಾಳ್, ಶ್ಯಾಮ್ ಸುಂದರ್ ಮತ್ತು ಮಹಮ್ಮದ್ ಗಫೂರ್ ತೀರ್ಪುಗಾರರಾಗಿ ಸಹಕರಿಸಿದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಬಿ.ಎಸ್ ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಪವನ್ ಸಾಲ್ಯಾನ್ ವಂದಿಸಿದರು.
ಕಾಪು : ತಾಲೂಕು ಮಟ್ಟದ 68ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
Posted On: 01 Nov 2023, 10:44 AM
ಕಾಪು : ತಾಲೂಕು ಮಟ್ಟದ 68ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ನವೆಂಬರ್ 1ರಂದು ಕಾಪು ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಪು ತಹಶೀಲ್ದಾರರಾದ ನಾಗರಾಜ್ ನಾಯ್ಕಡ, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ಸಂತೋಷ್, ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ, ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆ ಹಾಗೂ ಕಾಪು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯೋತ್ಸವ ಕೇವಲ ಆಚರಣಗೆ ಸೀಮಿತವಾಗದಿರಲಿ…ಕನ್ನಡಿಗರ ಮನೆ ಮನಸ್ಸಿನ ಹಬ್ಬವಾಗಲಿ
Posted On: 01 Nov 2023, 06:59 AM
ಪ್ರತೀ ಸಲ ಕರ್ನಾಟಕ ರಾಜ್ಯೋತ್ಸವ ಆಚರಣೆಯ ವೇಳೆ ಕೇಳಿ ಬರುವ ಒಂದೇ ಕೂಗು “ಕನ್ನಡ ಭಾಷೆಯನ್ನು ಉಳಿಸಿ!”. ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಿ ಎಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಮ್ಮ ಕನ್ನಡಿಗರದ್ದು. ಹಾಗಾದರೆ ನಮ್ಮ ಭಾಷೆಯನ್ನು ಸಾಯಿಸುವಂತೆ ಮಾಡುತ್ತಿರುವವರು ಯಾರು? ಜಾಗತೀಕರಣ, ವಾಣಿಜ್ಯೀಕರಣದಿಂದ ಪರಭಾಷೆಗಳು ಕನ್ನಡದ ಮೇಲೆ ಪ್ರಭಾವ ಬೀರಿರಬಹುದು. ಆದರೆ ಪ್ರಾಚೀನ ಹಾಗೂ ಸಮೃದ್ದ ವಾದ ಕನ್ನಡ ನುಡಿ ಇಷ್ಟೊಂದು ಕ್ಷೀಣವಾಗಲು ಕಾರಣಕತ೯ರು ನಾವೇ ಅಲ್ಲವೇ?ಎಂಬುದು ಚಿಂತಿಸಬೇಕಾದ ಸಂಗತಿ. ಭಾಷೆ ಎನ್ನುವುದು ಸಂವಹನ ಮಾಧ್ಯಮ ಮಾತ್ರವಾಗಿರದೆ ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅಂತಹ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಕನ್ನಡ ನುಡಿ ಇಂದು ಕರ್ನಾಟಕದಲ್ಲಿ ಸೊರಗಿಹೋಗುತ್ತಿದೆ. ಒಂದು ಕಾಲದಲ್ಲಿ “ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ” ಎಂದು ಹಾಡಿದ್ದ ನಾವು ಇಂದು Sorry, I can’t speak kannada ಅನ್ನುತ್ತೇವೆ. ಪರಭಾಷಾ ವ್ಯಾಮೋಹದಲ್ಲಿ ಕನ್ನಡ ಬಡವಾಯಿತೆ? ಹೌದು. ದೂರದ ಬೆಟ್ಟ ಕಣ್ಣಿಗೆ ನುಣ್ಣನೆ ಅನ್ನುವ ಹಾಗೆ ವಿದೇಶೀ ಸಂಸ್ಕೃತಿಯ ಅನುಕರಣೆ ನಮ್ಮ ಭಾಷೆಯನ್ನೂ ಬಲಿತೆಗೆದುಕೊಂಡಿದೆ. ಭೌಗೋಳಿಕ ಪ್ರದೇಶಕ್ಕನುಸಾರವಾಗಿ ನಮ್ಮ ಭಾಷೆಯ ಮೇಲೆ ಇತರ ಸಂಸ್ಕೃತಿ ಹಾಗೂ ಭಾಷೆಯ ಪ್ರಭಾವವಿದ್ದೇ ಇರುತ್ತದೆ. ಅದು ಮುಂದೆಯೂ ಇರುತ್ತದೆ. ಹಾಗಂತ ನಮ್ಮ ಮಾತೃಭಾಷೆಯನ್ನು ಕಡೆಗಣಿಸುವುದು ಎಷ್ಟು ಸರಿ? ಕಾಲ ಕಳೆದಂತೆ ಭಾಷೆ ಪ್ರಬುದ್ದತೆಯನ್ನು ಗಳಿಸುತ್ತದೆ ಎನ್ನುವುದಾದರೆ ಕನ್ನಡ ಭಾಷೆಗೆ ಈ ಸ್ಥಿತಿ ಯಾಕೆ ಬಂತು? ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಯಾಕೆ? ಅಂದ ಹಾಗೆ ಕನ್ನಡ ಅನ್ನ ಕೊಡದ ಭಾಷೆಯೆ? ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕನ್ನಡ ಕಲಿತರೇನು ಸಿಗುತ್ತೆ? ಇಂಗ್ಲೀಷ್ ಕಲಿತರೆ ಮುಂದೆ ಸುಲಭವಾಗಿ ಕೆಲಸ ಸಿಗಬಹುದು ಎಂಬ ಆಸೆಯಿಂದ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಅಟ್ಟುವ ಮಂದಿಯೇ ಜಾಸ್ತಿ. ಮಕ್ಕಳಿಗೆ ಪಾಠ ತಲೆಗೆ ಹತ್ತದಿದ್ದರೂ ತೊಂದರೆಯಿಲ್ಲ ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಬೇಕು ಎನ್ನುವ ಹಠ ಹೆತ್ತವರದ್ದು. ಇಂಗ್ಲೀಷ್ ಶಾಲೆಗೆ ಹೋಗಿ ತಮ್ಮ ಮಕ್ಕಳು ಇಂಗ್ಲೀಷ್ ನಲ್ಲಿ ಮಾತನಾಡಿದರೆ ಹೆತ್ತವರ ಮುಖದಲ್ಲಿ ಧನ್ಯತಾ ಭಾವ. ಇನ್ನು ಕೆಲವರು ಕನ್ನಡ ಉಳಿಯಬೇಕಾದರೆ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿ ಎಂದು ಭಾಷಣ ಬಿಗಿಯುತ್ತಾರೆ, ಆದರೆ ಅವರ ಮಕ್ಕಳು ಮಾತ್ರ ಆಂಗ್ಲ ಮಾಧ್ಯಮದಲ್ಲೋದಿ, “ಐ ಡೋಂಟ್ ನೋ ಕನ್ನಡ “ಎನ್ನುತ್ತಿರುತ್ತವೆ. ಇನ್ನು ಕೆಲವರು ಕನ್ನಡ ಗೊತ್ತಿದ್ದರೂ ತಮಗೆ ಕನ್ನಡವೇ ಗೊತ್ತಿಲ್ಲ ಎಂಬಂತೆ ನಟಿಸುತ್ತಾರೆ. ಕನ್ನಡ ಮಾತನಾಡಿದರೆ ತಮಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಎಂಬ ಭಾವನೆಯಿಂದ ಕನ್ನಡವನ್ನು ತಮ್ಮಲ್ಲೇ ಬಚ್ಚಿಟ್ಟವರೂ ಇದ್ದಾರೆ. ! ಇತ್ತ, ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳ ಪಾಡು ಯಾರಿಗೆ ಅರ್ಥವಾಗುತ್ತದೆ ಹೇಳಿ? ಹಳ್ಳಿಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಜನೆಗೈದ ಮಕ್ಕಳು ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದಿದ್ದಾರೆ ಅಂದುಕೊಂಡರೆ, ‘ಅಲ್ಪಸಂಖ್ಯಾತ’ ಕನ್ನಡಿಗರಿರುವ ಬೆಂಗಳೂರಲ್ಲಿ ಇಂಗ್ಲೀಷಿನದ್ದೇ ಕಾರುಬಾರು. ಇಲ್ಲಿ ಬಂದು ಕನ್ನಡದಲ್ಲಿ ಮಾತನಾಡಿದವರಿಗೆ ‘ಹಳ್ಳಿ ಗುಗ್ಗು’ ಎಂಬ ಪಟ್ಟ ಗ್ಯಾರಂಟಿ. ಹೀಗಿರುವಾಗ ನಿಮಗೆ ಚೆನ್ನಾಗಿ ಇಂಗ್ಲೀಷ್ ಗೊತ್ತಿಲ್ಲದಿದ್ದರೂ ಪರ್ವಾಗಿಲ್ಲ, ಒಂದೆರಡು ಇಂಗ್ಲಿಷ್ ಪದಗಳನ್ನು ಕನ್ನಡದೊಳಗೆ ತುರುಕಿ ಕಂಗ್ಲೀಷು ಮಾತನಾಡಿದರೆ ಸಾಕು.ನೀವು ಬುದ್ದಿವಂತರೆಸಿಕೊಳ್ಳುತ್ತೀರಿ. ಇಂಗ್ಲೀಷ್ ಮಾತನಾಡಿದರೆ ನಾವು ತುಂಬಾ ಬಲ್ಲವರು ಎಂದು ಜನ ತಿಳಿದುಕೊಳ್ಳುತ್ತಾರೆ ಎಂಬ ಹುಚ್ಚು ಭ್ರಮೆಯೇ ಕನ್ನಡ ಭಾಷೆ ಈ ರೀತಿ ಸೊರಗಲು ಕಾರಣ ಎಂದರೆ ತಪ್ಪಾಗಲಾರದು. ಕನ್ನಡ ಮಾತನಾಡಲು ಹಿಂದೇಟು ಯಾಕೆ ? ಸಂವಹನದಿಂದಲೇ ಭಾಷೆಯೊಂದು ಬೆಳೆಯಲು ಸಾಧ್ಯ. ಆದರೆ ಇಂದೇನಾಗುತ್ತಿದೆ? ನಮ್ಮ ರಾಜ್ಯದಲ್ಲಿ ಪರಭಾಷಾ ಪ್ರಾಬಲ್ಯ ಏರುತ್ತಿದ್ದಂತೆ ಕನ್ನಡದಲ್ಲಿ ವ್ಯವಹರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಉದಾಹರಣೆಗೆ ಬೆಂಗಳೂರನ್ನೇ ತೆಗೆದುಕೊಳ್ಳೋಣ. ಇಲ್ಲಿಗೆ ಬರುವ ಅನ್ಯ ಭಾಷಿಗರಲ್ಲಿ ನಾವು ಕನ್ನಡಿಗರು ಅವರದ್ದೇ ಭಾಷೆಯಲ್ಲಿ ಅಥವಾ ಹಿಂದಿ, ಇಂಗ್ಲೀಷ್ ನಲ್ಲಿ ವ್ಯವಹರಿಸುತ್ತೇವೆಯೇ ವಿನಾ ಕನ್ನಡದಲ್ಲಿ ವ್ಯವಹರಿಸಲು ಹೋಗುವುದಿಲ್ಲ. ಅವರು ತಮಿಳರಾಗಿದ್ದರೆ ನಾವು ಅವರಲ್ಲಿ ತಮಿಳಲ್ಲಿ ಮಾತನಾಡಿ ಅವರನ್ನು ಮೆಚ್ಚಿಸಲು ನೋಡುತ್ತೇವೆಯೇ ಹೊರತು ನಮ್ಮ ಭಾಷೆಯನ್ನು ಅವರಿಗೆ ಕಲಿಸಲು ಹೋಗುವುದಿಲ್ಲ. ಅವರು ಕಲಿಯುವ ಆಸಕ್ತಿಯನ್ನೂ ತೋರುವುದಿಲ್ಲ. ನೆರೆ ರಾಜ್ಯಗಳಿಂದ ಕಲಿಯಬೇಕು : ನಮ್ಮ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದ ಜನರನ್ನು ಗಮನಿಸಿ. ಅವರು ಅನ್ಯಭಾಷಿಗರಲ್ಲಿ ಅಥ೯ವಾಗದಿದ್ದರೂ ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರೆ. ತಮಿಳುನಾಡಲ್ಲಿದ್ದರೆ ಕನ್ನಡಿಗನೂ ತಮಿಳು ಕಲಿತು ಬಿಡ್ತಾನೆ. ಆದರೆ ಕನಾ೯ಟಕದಲ್ಲಿ ಕನ್ನಡೇತರರಿಗೆ ಕನ್ನಡ ಕಲಿಯಬೇಕೆಂಬ ಒತ್ತಡವೂ ಇಲ್ಲ. ಕನ್ನಡ ಕಲಿತೇ ಆಗಬೇಕೆಂಬ ಆವಶ್ಯಕತೆಯೂ ಅವರಿಗಿರುವುದಿಲ್ಲ. ಇದರ ಪರಿಣಾಮ ಇತರ ಭಾಷೆಗಳ ಅಧಿಪತ್ಯವನ್ನು ಇನ್ನೂ ಹೆಚ್ಚಾಗ ತೊಡಗುತ್ತದೆ. ಸಂವಹನ ಅಂತ ಹೇಳುವಾಗ ಅದು ಮಾತಿಗೂ ಕೃತಿಗೂ ಅನ್ವಯವಾಗುತ್ತದೆ. ಮಾತು ಹಾಗೂ ಕೃತಿ ಇವೆರಡರಲ್ಲಿ ಬಳಕೆಯಾಗುವ ಕನ್ನಡ ಸಾಮಾನ್ಯ ವ್ಯಕ್ತಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಲ್ಲುದು. ಯಾವುದೇ ಭಾಷೆಯಾಗಲಿ, ಅದರ ಕಲಿಕೆ ಆರಂಭವಾಗುವುದೇ ಕೇಳುವುದರಿಂದ. ನಿರಂತರವಾಗಿ ನಾವು ಆಲಿಸುವ ಭಾಷೆಯನ್ನು ನಾವು ಬೇಗನೆ ಕಲಿತು ಬಿಡುತ್ತೇವೆ. ಆದರೆ ನಾವೀಗ ಕೇಳುವ ಕನ್ನಡವಾದರೂ ಎಂತದ್ದು. ಕೆಲವೊಮ್ಮೆ ಇದೂ ಕನ್ನಡವೇ? ಎಂಬ ಪ್ರಶ್ನೆ ಕಾಡುತ್ತದೆ. ಎಫ್. ಎಂ ನ ಆರ್ ಜೆ ಗಳು ಉಲಿಯುವ ‘ಬಿಂದಾಸ್ ಕನ್ನಡ’, ಸೆಲೆಬ್ರಿಟಿಗಳ ‘ಕಂಗ್ಲೀಷು’ ಹಾಗೂ ಮಾಧ್ಯಮಗಳ ಪ್ರಭಾವದಿಂದ ಬಂದ ‘ಪಂಚಿಂಗ್ ಕನ್ನಡ’ ಇವೇ” ನಮ್ಮ ಕನ್ನಡ” ಆಗಿ ಬಿಟ್ಟಿದೆ. ನಾವು ಕೇಳುವ ಕನ್ನಡದ ಕಥೆ ಹೀಗಾಯ್ತು, ಇತ್ತ ಬರವಣಿಗೆಯಲ್ಲೂ ನಾವು ಇದೇ ಕನ್ನಡವನ್ನು ಬಳಸಿ ಬರವಣಿಗೆಯನ್ನೂ ಹಾಳು ಮಾಡಹೊರಟಿದ್ದೇವೆ. ನೀವೇ ಗಮನಿಸಿ, ಅಪ್ಪಟ ಕನ್ನಡದಲ್ಲಿ ಬರೆದ ಲೇಖನಕ್ಕಿಂತ ಇಂಗ್ಲೀಷ್ , ಒಂದಷ್ಟು ಎಸ್ಸೆಮ್ಮೆಸ್ಸ್ ಭಾಷೆಗಳನ್ನು ಬಳಸಿ ಬರೆದ ಲೇಖನವೇ ಇಂದು ಯುವ ಜನಾಂಗವನ್ನು ಆಕಷಿ೯ಸುತ್ತದೆ. ಇಂತಿರುವಾಗ ಸಾಕಷ್ಟು ಮಾಹಿತಿಗಳಿದ್ದರೂ ಅಪ್ಪಟ ಕನ್ನಡದಲ್ಲಿ ಬರೆದ ಲೇಖನ ಇವುಗಳ ಮುಂದೆ ಏನೂ ಇಲ್ಲ ಎಂಬಂತಾಗುತ್ತದೆ. ಇಂತಹಾ ಪರಿಸ್ಥಿತಿಯಲ್ಲಿ ಬರಹಗಾರರು ಕೂಡಾ ಮಡಿವಂತಿಕೆಯನ್ನ ಬಿಟ್ಟು ಟ್ರೆಂಡ್ ಗೆ ತಕ್ಕಂತೆ ತಮ್ಮ ಬರವಣಿಗೆಯಲ್ಲೂ ಬದಲಾವಣೆಯನ್ನು ತರುತ್ತಾರೆ. ಪರಿಣಾಮ ಓದುಗ ಕೂಡಾ ಅದೇ ಕನ್ನಡಕ್ಕೆ ಒಗ್ಗಿಕೊಳ್ಳುತ್ತಾನೆ. ಇದು ಕನ್ನಡ ಭಾಷೆಯ ಮಟ್ಟಿಗೆ ಅಪಾಯಕಾರಿ ಬೆಳವಣಿಗೆ ಎಂದೇ ಹೇಳಬಹುದು. ನಮ್ಮ ಶಿಕ್ಷಣ ವ್ಯವಸ್ಥೆಯೂ ಸುಧಾರಿಸಬೇಕಾಗಿದೆ ಕಂಬಾರರು ಹೇಳಿದಂತೆ ಕನಾ೯ಟಕದಲ್ಲಿ ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಕೆಯಾಗಬೇಕು. ಇಂಗ್ಲಿಷ್ ವ್ಯಾಮೋಹಕ್ಕೊಳಗಾಗಿ ನಾಡು ನುಡಿಯಿಂದ ದೂರ ಸಾಗುತ್ತಿರುವ ಕನ್ನಡಿಗರನ್ನು ಮತ್ತೆ ತಾಯ್ನುಡಿಯತ್ತ ಸೆಳೆಯುವ ಕಾರ್ಯವನ್ನು ಸಕಾ೯ರ ಮಾಡಬೇಕಾಗಿದೆ. ಒಂದೆಡೆ ಕನ್ನಡ ಮಾಧ್ಯಮದ ಸಕಾ೯ರಿ ಶಾಲೆಗಳು ಮುಚ್ಚುತ್ತಿವೆ. ಇನ್ನೊಂದೆಡೆ ಆಂಗ್ಲ ಮಾಧ್ಯಮ ಶಾಲೆಗಳು ಅಣಬೆಗಳಂತೆ ತಲೆಯೆತ್ತುತ್ತಿವೆ. ಇವುಗಳ ಬಗ್ಗೆ ಜಾಣ ಕುರುಡು ಪ್ರದಶಿ೯ಸುತ್ತಿರುವ ಸಕಾ೯ರವನ್ನು ಬಡಿದೆಬ್ಬಿಸುವ ಹೊಣೆಗಾರಿಕೆಯೂ ಕನ್ನಡಿಗನ ಮೇಲಿದೆ. ಇದೀಗ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಕೊಂಡಿರುವ ನಮ್ಮ ಕನ್ನಡ ಸಾಹಿತ್ಯ ಲೋಕ ಸಮೃದ್ದವಾಗಿದೆ. ಅದನ್ನು ಇನ್ನಷ್ಟು ಸಮೃದ್ದಗೊಳಿಸುವುದರ ಜತೆಗೆ ತಾಯ್ನುಡಿಯಾದ ಕನ್ನಡವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕನ್ನಡಿಗರಿಗಿದೆ. ನಮ್ಮ ನಾಡಿನ ಜನಪದ, ಸಾಂಸ್ಕತಿಕ ಜೀವನದ ಉಸಿರಾಗಿರುವ ಕನ್ನಡದ ಜ್ಞಾನ ಶಾಖೆ ಪಸರಿಸಬೇಕಾದರೆ ಕನ್ನಡಲ್ಲೇ ಜ್ಞಾನಾಜ೯ನೆಯಾಗಬೇಕು.ಈ ನಡುವೆ ಕಲಿಕೆಗೆ ಇಂಗ್ಲೀಷ್ ಬೇಕೋ ಬೇಡವೋ, ಕನ್ನಡ ಮಾತ್ರ ಸಾಕೆ? ಎಂಬ ಎಂಬ ವಿಚಾರದಲ್ಲಿ ಸಾಕಷ್ಟು ಚಚೆ೯ಗಳು ಈಗಾಗಲೇ ನಡೆದಿವೆ. ಈ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ನಿಲುವು ಇದ್ದೇ ಇರುವುದು. ಯಾವುದೇ ಭಾಷೆಯಾಗಲಿ ಅದಕ್ಕೆ ಅದರದ್ದೇ ಆದ ಸೌಂದರ್ಯವಿದೆ. ಸತ್ವವಿದೆ. ಅದನ್ನು ಕಾಪಾಡುವ ಹೊಣೆ ನಮ್ಮದು ಒಟ್ಟಿನಲ್ಲಿ ಹೇಳುವುದೇನೆಂದರೆ ಜ್ಞಾನ ಸಂಪಾದನೆಗೆ ಯಾವ ಭಾಷೆಯಾದರೇನಂತೆ, ನಮ್ಮ ನಡೆ-ನುಡಿ ಕನ್ನಡವಾಗಿರಲಿ. ನಮ್ಮ ನಾಡು, ನಮ್ಮ ಸಂಸ್ಕೃತಿ ಹಾಗೂ ನಮ್ಮ ಭಾಷೆಯ ಮೇಲಿರುವ ಈ ಪ್ರೀತಿ, ಉತ್ಸಾಹ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಈ ಬಾರಿಯ ಸುವಣ೯ ರಾಜ್ಯೋತ್ಸವ ಕನ್ನಡದ ಅಭಿವೃದ್ಧಿಗೆ ನಾಂದಿ ಹಾಡಲಿ. ಲೇಖನ : ರಾಘವೇಂದ್ರ ಪ್ರಭು ಕರ್ವಾಲು
ನವೆಂಬರ್ ೪ : ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಪು ತಾಲ್ಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನ
Posted On: 01 Nov 2023, 06:40 AM
ಕಾಪು : ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ, ಕಾಪು ತಾಲ್ಲೂಕು ಘಟಕದ ೫ನೇ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ ೪, ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿವೃತ್ತ ಉಪನ್ಯಾಸಕ, ಕನ್ನಡ ಸಂಘಟಕ ಕೆ.ಎಸ್. ಶ್ರೀಧರ ಮೂರ್ತಿ ಶಿರ್ವಾರವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ‘ಸಿರಿಗನ್ನಡದ ಸೊಗಸು; ಭಾಷಾ ಶುದ್ಧತೆಯೆಡೆಗೆ ಪುಟ್ಟ ಹೆಜ್ಜೆ’ ಪರಿಕಲ್ಪನೆಯಲ್ಲಿ ದಿನವಿಡೀ ಗೋಷ್ಠಿಗಳು, ಸಂವಾದ, ಪ್ರಾತ್ಯಕ್ಷಿಕೆ ಜರಗಲಿವೆ. ಸಮ್ಮೇಳನದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಅವರು ನೆರವೇರಿಸಲಿದ್ದು, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್. ಪಾಟ್ಕರ್, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಕ್ಯಾಥರಿನ್ ರೊಡ್ರಿಗಸ್, ಕಾಪು ತಹಶೀಲ್ದಾರ್ ನಾಗರಾಜ ವಿ. ನಾಯ್ಕಡ, ಪಾಂಬೂರು ಚರ್ಚ್ ಧರ್ಮಗುರು ವಂ. ಹೆನ್ರಿ ಮಸ್ಕರೇನಸ್, ಶಿರ್ವ ಸುನ್ನಿ ಜಾಮಿಯಾ ಮಸೀದಿ ಧರ್ಮಗುರು ಸಿರಾಜುದ್ದೀನ್ ಝೈನಿ, ಕಾಲೇಜಿನ ಪ್ರಾಚಾರ್ಯರಾದ ಡಾ. ತಿರುಮಲೇಶ್ವರ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ. ನಿರ್ದೇಶಕಿ ಪೂರ್ಣಿಮಾ, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರರು, ನಿವೃತ್ತ ಪಂ. ಅಭಿವೃದ್ಧಿ ಅಧಿಕಾರಿ ಶಂಕರ ಪದಕಣ್ಣಾಯ, ಜಿಲ್ಲಾ ಕನ್ನಡ ಭವನ ಸಮಿತಿ ಕಾರ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧಿಕಾರಿ ಮನೋಹರ ಪಿ. ಭಾಗವಹಿಸುವರು. ಕಸಾಪ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗ ಇರಲಿದೆ. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ರಾಷ್ಟ್ರ ಧ್ವಜಾರೋಹಣಗೈಯಲಿದ್ದು, ಕಸಾಪ ಕಾಪು ತಾ. ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಪರಿಷತ್ತಿನ ಧ್ವಜಾರೋಹಣಗೈಯಲಿದ್ದಾರೆ. ಗ್ರಾಪಂ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್ ಉಪಸ್ಥಿತರಿರಲಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅಧ್ಯಯನಾತ್ಮಕ ಗೋಷ್ಠಿಯನ್ನು ಉಪನ್ಯಾಸಕರಾದ ನೀಲಾನಂದ ನಾಯ್ಕ್, ಡಾ. ಪ್ರಜ್ಞಾ ಮಾರ್ಪಳ್ಳಿ, ವಿದ್ಯಾ ಅಮ್ಮಣ್ಣಾಯ, ವಿದ್ಯಾಧರ ಪುರಾಣಿಕ್ ಸಂಯೋಜಿಸುವರು. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಜಾನಪದ ಗಾಯಕ ಗಣೇಶ ಗಂಗೊಳ್ಳಿ ಅವರಿಂದ ಕನ್ನಡ ಗೀತ ಗಾಯನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ‘ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡ, ಪಾಂಬೂರು, ಪಡುಬೆಳ್ಳೆ’ ಇವರಿಂದ ಕಲಾಪ್ರಸ್ತುತಿ ನಡೆಯಲಿದೆ. ನಿವೃತ್ತ ಶಿಕ್ಷಕ ಕೃಷ್ಣಕುಮಾರ್ ರಾವ್ ಮಟ್ಟು ಮತ್ತು ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್.ಯು ಕನ್ನಡದ ಬಗ್ಗೆ ಸೃಜನಾತ್ಮಕ ರಸಪ್ರಶ್ನೆ ನಡೆಸಿಕೊಡಲಿದ್ದಾರೆ. ಸಾಹಿತಿ ಡಾ. ರಾಘವೇಂದ್ರ ರಾವ್ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ. ಸಾಧಕರಿಗೆ ಸಮ್ಮಾನ : ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶೀನ ಪಾತ್ರಿ ನಂದಿಕೂರು (ದೈವಾರಾಧನೆ), ಹೇಮನಾಥ ಪಡುಬಿದ್ರಿ (ಪತ್ರಿಕೋದ್ಯಮ), ರಾಮಚಂದ್ರ ಭಟ್ ಯೆಲ್ಲೂರು (ಯಕ್ಷಗಾನ), ರಘುರಾಮ ನಾಯಕ್ ಸಡಂಬೈಲು (ಕೃಷಿ), ನಾಗರಿಕ ಸೇವಾ ಸಮಿತಿ ಬಂಟಕಲ್ಲು (ಸೇವಾ ಸಂಘ ಸಂಸ್ಥೆ) ಇವರನ್ನು ಅದಾನಿ ಯುಪಿಸಿಎಲ್ ಘಟಕದ ಅಧ್ಯಕ್ಷ ಡಾ. ಕಿಶೋರ್ ಆಳ್ವ ಸಮ್ಮಾನಿಸುವರು. ಕಸಾಪ ತಾ. ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯಾ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಅಶೋಕ ಕಾಮತ್, ಉದ್ಯಮಿ ನವೀನ್ ಅಮೀನ್, ಕಾಪು ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಶಿರ್ವ ವ್ಯ.ಸೇ.ಸ.ಸಂ. ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಶಿರ್ವ ಪಂ. ಅಭಿವೃದ್ಧಿ ಅಧಿಕಾರಿ, ನಿವೃತ್ತ ಸೈನಿಕ ಅನಂತ ಪದ್ಮನಾಭ ನಾಯಕ್, ಶಿರ್ವ ಗ್ರಾಮ ಆಡಳಿತ ಅಧಿಕಾರಿ ಅರುಣ್ ಕುಮಾರ್, ಉಪನ್ಯಾಸಕಿ ಡಾ. ರವಿಪ್ರಭಾ ಕೆ., ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕಸಾಪ ಕಾಪು ತಾ. ಉಸ್ತುವಾರಿ ಪಿ.ವಿ. ಆನಂದ ಸಾಲಿಗ್ರಾಮ, ಗೌರವ ಕಾರ್ಯದರ್ಶಿ ಅಶ್ವಿನಿ ಲಾರೆನ್ಸ್ ಉಪಸ್ಥಿತರಿರುವರು. ನವೆಂಬರ್ ೩ರಂದು ಕನ್ನಡಾಂಬೆಯ ಶೋಭಾಯಾತ್ರೆ : ಸಮ್ಮೇಳನದ ಪೂರ್ವಭಾವಿಯಾಗಿ ನವೆಂಬರ್ ೩, ಶುಕ್ರವಾರ ಸಂಜೆ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಸಮ್ಮೇಳನ ಸಭಾಂಗಣದವರೆಗೆ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ನೇತೃತ್ವದಲ್ಲಿ ಮತ್ತು ಸ್ಥಳೀಯ ವಿವಿಧ ಸಂಘಟನೆಗಳ ಪಾಲ್ಗೊಳ್ಳುವಿಕೆಯಲ್ಲಿ ಕನ್ನಡಾಂಬೆಯ ಶೋಭಾಯಾತ್ರೆ ಜರಗಲಿದೆ ಎಂದು ಕಸಾಪ ಕಾಪು ತಾಲೂಕಿನ ಪ್ರಕಟನೆ ತಿಳಿಸಿದೆ.
ಉಚ್ಚಿಲ : ಬಹುಭಾಷಾ ನಟ ಸುಮನ್ ತಲ್ವಾರ್ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳ ಭೇಟಿ
Posted On: 31 Oct 2023, 07:51 PM
ಉಚ್ಚಿಲ : ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮಂಗಳವಾರ ಖ್ಯಾತ ಬಹುಭಾಷಾ ನಟ ಸುಮನ್ ತಲ್ವಾರ್ ಭೇಟಿ ನೀಡಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರು ಪ್ರಸಾದ ವಿತರಿಸಿದರು. ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಅವರು ದೇವಳದ ವತಿಯಿಂದ ಸುಮನ್ ತಲ್ವಾರ್ ರವರನ್ನು ಅಭಿನಂದಿಸಿದರು. ಈ ಸಂದರ್ಭ ದೇವಳದ ಸಿಬ್ಬಂದಿ ವರ್ಗ, ಅರ್ಚಕ ವರ್ಗ ಉಪಸ್ಥಿತರಿದ್ದರು.
