Updated News From Kaup
ಡಿಸೆಂಬರ್ 23 : ಶ್ರೀ ಧೂಮಾವತಿ ದೈವಸ್ಥಾನ ಎರ್ಮಾಳು ಬಡಾ - ನೇಮೋತ್ಸವ
Posted On: 21 Dec 2023, 08:25 AM
ಎರ್ಮಾಳು : ಬಡಾ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಡಿಸೆಂಬರ್ 23 ರಂದು ವಾರ್ಷಿಕ ನೇಮೋತ್ಸವ ಜರಗಲಿದೆ. ಡಿಸೆಂಬರ್ 22, ಶುಕ್ರವಾರ ಮಧ್ಯಾಹ್ನ ಗಂಟೆ 3 ಕ್ಕೆ ನೂತನ ಬೆಳ್ಳಿಯ ನಗ, ನಾಣ್ಯಗಳನ್ನು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ಸಮರ್ಪಿಸಲಾಗುವುದು. ಸಂಜೆ ಶ್ರೀ ಧೂಮಾವತಿ ದೈವದ ದರ್ಶನ, ಧ್ವಜಾರೋಹಣ ಜರಗಲಿದ್ದು, ಡಿಸೆಂಬರ್ 23, ಶನಿವಾರ ನೇಮೋತ್ಸವದಂದು ಭಂಡಾರ ಇಳಿದ ನಂತರ ರಾತ್ರಿ ಘಂಟೆ 8 ಕ್ಕೆ ಸುರೇಶ ಗೋಪಾಲ ಶೆಟ್ಟಿ ಮತ್ತು ಕುಟುಂಬಿಕರು, ಮಾತೋಶ್ರೀ, ಎರ್ಮಾಳು ಬಡಾ ಇವರ ವತಿಯಿಂದ ಅನ್ನಸಂತರ್ಪಣೆ ಹಾಗೂ ಕುಮಾರ ಜಿ.ಶೆಟ್ಟಿ ಮಾತೋಶ್ರೀ, ಎರ್ಮಾಳು ಬಡಾ ಮತ್ತು ಎರ್ಮಾಳು ನೈಮಾಡಿ ಶ್ರೀ ನಾರಾಯಣ ಕೆ. ಶೆಟ್ಟಿ ಇವರ ವತಿಯಿಂದ ಹೂವಿನ ಅಲಂಕಾರ ಸೇವೆ ಜರಗಲಿರುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿವಿಧ ಬೇಡಿಕೆ ಈಡೇರಿಕೆಗಾಗಿ ವೈದ್ಯಕೀಯ ಪ್ರತಿನಿಧಿಗಳ ಮುಷ್ಕರ : ಕೇಂದ್ರ ಸಕಾ೯ರಕ್ಕೆ ಮನವಿ ಸಲ್ಲಿಕೆ
Posted On: 21 Dec 2023, 08:12 AM
ಉಡುಪಿ : ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (KSM&SRA), ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FMRAI) ಯ ಅಂಗಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಧಾನ ಮಂತ್ರಿಯವರಿಗೆ ಅಪರ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಎಲ್ಲಾ ವೈದ್ಯಕೀಯ ಪ್ರತಿನಿಧಿಗಳು ಮುಷ್ಕರ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಕೇಂದ್ರ ಸರ್ಕಾರವು ಮಾರಾಟ ಪ್ರಚಾರ ನೌಕರರನ್ನು ರಕ್ಷಿಸಬೇಕು.(ಸೇವೆಗಳ ಷರತ್ತುಗಳು) ಕಾಯಿದೆ, 1976.,ಮಾರಾಟ ಪ್ರಚಾರದ ಉದ್ಯೋಗಿಗಳಿಗೆ ಶಾಸನಬದ್ಧ ಕೆಲಸದ ನಿಯಮಗಳನ್ನು ರೂಪಿಸಬೇಕು,ಸರ್ಕಾರಿ ಆಸ್ಪತ್ರೆಗಳು, ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರತಿನಿಧಿಗಳ ಪ್ರವೇಶದ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿ ಕೆಲಸ ಮಾಡುವ ಹಕ್ಕನ್ನು ಖಾತ್ರಿಪಡಿಸಿಕೊಳ್ಳಬೇಕು, ಬೆಲೆಗಳನ್ನು ಕಡಿಮೆ ಮಾಡಿ ಮತ್ತು ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳ GST ಅನ್ನು ತೆಗೆದುಹಾಕಬೇಕು.,ಡೇಟಾ ಗೌಪ್ಯತೆಯನ್ನು ರಕ್ಷಿಸಬೇಕು. ಅದೇ ರೀತಿ ಉದ್ಯೋಗದಾತರು ಮಾರಾಟಕ್ಕೆ ಸಂಬಂಧಿಸಿದ ಕಿರುಕುಳ ನಿಲ್ಲಿಸಬೇಕು,.ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಮೂಲಕ ಗೌಪ್ಯತೆಗೆ ಇರುವ ಕ್ರಮ ತೆಗೆಯಬೇಕು,ಕೆಲಸದ ಸ್ಥಳಗಳಿಗೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕು, ಎಂಬ ವಿಷಯಗಳನ್ನು ಮನವಿಯಲ್ಲಿ ತಿಳಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಮನವಿ ಸ್ವೀಕರಿಸಿದರು. ಈ ಸಂದಭ೯ದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್ ಹೆಗ್ಡೆ, ಕಾಯ೯ದಶಿ೯ ಪ್ರಸನ್ನ ಕಾರಂತ್, ಅಶೋಕ ಡಿ'ಸೋಜ, ಅನಂತ್ ಹೊಳ್ಳ, ಅಶೋಕ್ ಶೆಟ್ಟಿ ಮತ್ತು ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಪು : ಶಂಕರಪುರ ಜಾಸ್ಮಿನ್ ಜೆಸಿಐಯ 2024ನೇ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿ ಆಯ್ಕೆ
Posted On: 21 Dec 2023, 08:07 AM
ಕಾಪು : ಅಂತರರಾಷ್ಟ್ರೀಯ ಸಂಸ್ಥೆಯಾದ ಜೆಸಿಐ ಇದರ ಘಟಕವಾದ ಶಂಕರಪುರ ಜಾಸ್ಮಿನ್ ಜೆಸಿಐಯ 2024 ನೇ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿಯವರು ಆಯ್ಕೆಯಾಗಿದ್ದಾರೆ. ಈ
ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ನಿನಾದ-ಸಂಚಿಕೆ 5 ಬಿಡುಗಡೆ
Posted On: 19 Dec 2023, 06:22 PM
ಕಾರ್ಕಳ : ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹೊರತರಲಾಗುತ್ತಿರುವ ತ್ರೈಮಾಸಿಕ ಪತ್ರಿಕೆ “ನಿನಾದ” ಸಂಚಿಕೆ-5 ನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಲಿಂಗಪ್ಪ ಮತ್ತು ರತ್ನಾ ಲಿಂಗಪ್ಪ ದಂಪತಿಗಳು ತ್ರೈಮಾಸಿಕ ಪತ್ರಿಕೆಯನ್ನು ಅನಾವರಣಗೊಳಿಸಿದರು. ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್ ಮಾತನಾಡಿ ನಿನಾದ ಪತ್ರಿಕೆ ವಿದ್ಯಾರ್ಥಿಗಳಿಗೆ, ಯುವ ಬರಹಗಾರರಿಗೆ ಉತ್ತಮವಾದ ವೇದಿಕೆ ಒದಗಿಸುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಳ್ಳೆಯ, ಚಿಂತನಾತ್ಮಕ ಅಂಶಗಳನ್ನು ಬೆಳೆಸಲು ಹಾಗೂ ಕ್ರಿಯಾಶೀಲ ಮನಸ್ಸುಗಳ ಕಟ್ಟಲು ಕ್ರಿಯೇಟಿವ್ ಎಂದಿಗೂ ಸಿದ್ಧವಾಗಿದೆ. ಈಗಾಗಲೇ ನಾಲ್ಕು ಸಂಚಿಕೆಗಳನ್ನು ಪೂರೈಸಿ ಐದನೇ ಸಂಚಿಕೆ ಸಿದ್ಧವಾಗಿ ಲೋಕಮುಖಕ್ಕೆ ಪ್ರಕಟಗೊಳ್ಳುತ್ತಿದೆ. ಹೊಸತನದ ಬರಹಗಳು ಓದುಗರನ್ನು ಖಂಡಿತವಾಗಿಯೂ ತಲುಪುತ್ತವೆ. ಓದುಗರೂ ಸಾಕಷ್ಟು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸಾಹಿತ್ಯದ ಕುರಿತು ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು. “ನಿನಾದ” ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಬರೆದ ವಿದ್ಯಾರ್ಥಿಗಳನ್ನು “ಪುಸ್ತಕ” ಬಹುಮಾನದೊಂದಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ, ಆದರ್ಶ ಎಂ.ಕೆ, ಉಪನ್ಯಾಸಕ ವರ್ಗದವರು, ನ್ಯೂಸ್ ಕಾರ್ಕಳದ ಜ್ಯೋತಿ ರಮೇಶ್, ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕ ಲೋಹಿತ್ ಎಸ್.ಕೆ ನಿರೂಪಿಸಿ, ವಂದಿಸಿದರು.
ಡಿಸೆಂಬರ್ 24 : ಕುಲಾಲ ಸಂಘ ಹೆಬ್ರಿ ತಾಲೂಕು - ಪ್ರಥಮ ವರ್ಷದ ಕ್ರೀಡಾಕೂಟ
Posted On: 19 Dec 2023, 06:16 PM
ಹೆಬ್ರಿ : ತಾಲೂಕು ಕುಲಾಲ ಬಾಂಧವರಿಗಾಗಿ ಡಿಸೆಂಬರ್ 24 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಬ್ರಿಯ ಮೈದಾನದಲ್ಲಿ ಪ್ರಥಮ ವರ್ಷದ ಕ್ರೀಡಾಕೂಟ ನಡೆಯಲಿದೆ. ಅಂದು ಬೆಳಿಗ್ಗೆ 8.30 ರಿಂದ ಕ್ರೀಡಾ ಕೂಟವು ಉದ್ಘಾಟನೆಗೊಂಡು ಸಂಜೆ 5 ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ಹೆಬ್ರಿ ತಾಲೂಕು ಕುಲಾಲ ಸಂಘದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರ್ಮಾಳು : ಶ್ರೀನಿಧಿ ಮಹಿಳಾ ಮಂಡಳಿಯ 39ನೇ ವಾರ್ಷಿಕೋತ್ಸವ
Posted On: 18 Dec 2023, 08:03 PM
ಎರ್ಮಾಳು : ಇಲ್ಲಿನ ಶ್ರೀನಿಧಿ ಮಹಿಳಾ ಮಂಡಳಿಯ 39 ನೇ ವಾರ್ಷಿಕೋತ್ಸವವು ಶ್ರೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಮಾಜಿ ಅಧ್ಯಕ್ಷೆ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್ ಮಾತನಾಡಿ, ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯು ಕಲೆ, ಸಂಸ್ಕೃತಿಯ ರಾಯಭಾರಿಯಂತೆ ಕಾರ್ಯ ಚಟುವಟಿಕೆಯನ್ನು ನಡೆಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮನೆ ಮಾತಾಗಿ ಬೆಳೆದು ನಿಂತ ಸಂಸ್ಥೆಯಾಗಿದೆ. ಸಮಾಜಮುಖಿ ಚಟುವಟಿಕೆ, ಸಂಸ್ಕಾರ, ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗಿ ಕಾರ್ಯೋನ್ಮುಖವಾಗಲಿ ಎಂದರು. ಕ.ಸಾ.ಪ. ಕಾಪು ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಮಾತನಾಡಿ, ಸಮಾಜದ ಸಂಸ್ಕಾರಯುತ ಬೆಳವಣಿಗೆಗೆ ಮಾತೃಸ್ಥಾನವು ಮತ್ತಷ್ಟು ಜಾಗ್ರತಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮಾತೆಯರೇ ಒಗ್ಗೂಡಿ ಬೆಳೆದು ನಿಂತ ಸಂಸ್ಥೆಯು ಸಮಾಜಕ್ಕೆ ಮಾತೃಸ್ಥಾನದಲ್ಲಿ ನಿಂತು ಮಾರ್ಗದರ್ಶ ಮಾಡಬೇಕಿದೆ ಎಂದರು. ಜಿ.ಪಂ. ಮಾಜಿ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ ಮಾತನಾಡಿ, ಪ್ರತಿಭೆಗಳಿಗೆ ಉತ್ತಮ ಅವಕಾಶವನ್ನು ನೀಡುವ ಜೊತೆಗೆ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ನೀಡುವ ಮಹಿಳಾ ಶಕ್ತಿಯಾಗಿ ಶ್ರೀನಿಧಿ ಮಹಿಳಾ ಮಂಡಳಿಯು ಸಮಾಜವನ್ನು ಉತ್ತಮವಾಗಿ ಕಟ್ಟುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿರುವುದು ಶ್ಲಾಘನೀಯ ಎಂದರು. ಸಾಧಕರಾದ ಉಪನ್ಯಾಸಕಿ, ಮಂಗಳೂರು ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಎನ್ಎಸ್ಎಸ್ವಿಭಾಗಾಧಿಕಾರಿ ಸವಿತಾ ಎರ್ಮಾಳು, ಶೈಕ್ಷಣಿಕ ಸಾಧಕಿ ಹರ್ಷಾ ಜಿ. ರಾವ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ತೆಂಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖಾ ಚಂದ್ರಶೇಖರ್, ಶ್ರೀನಿಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ಅಮಣಿ ಕುಂದರ್, ಕಾರ್ಯದರ್ಶಿ ವಿಮಲಾ ಕೆ. ಸಾಲ್ಯಾನ್, ಕೋಶಾಧಿಕಾರಿ ಶಕುಂತಲಾ, ಜೊತೆ ಕಾರ್ಯದರ್ಶಿ ರೇಖಾ ಶೆಟ್ಟಿ, ಉಪಾಧ್ಯಕ್ಷೆ ಮಾಲತಿ ಜೆ. ಶೆಟ್ಟಿ ಇದ್ದರು. ಅಮಣಿ ಕುಂದರ್ ಸ್ವಾಗತಿಸಿದರು. ಶಕುಂತಲಾ ವಂದಿಸಿದರು. ಶಶಿಕಲಾ ನವೀನ್ ಬಹುಮಾನಿತರನ್ನು ಪರಿಚಯಿಸಿದರು. ಶಿಕ್ಷಕಿ ಸುಪ್ರೀತಾ ಕಿಶೋರ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ಸಮಾರಂಭವನ್ನು ನಿರೂಪಿಸಿದರು. ಶ್ರೀನಿಧಿ ಮಹಿಳಾ ಮಂಡಳಿಯ ಸದಸ್ಯೆಯರಿಂದ ಬಳಿಕ ನೃತ್ಯ ವೈಭವ ಮತ್ತು ಶೀಲಾ ಕೆ. ಶೆಟ್ಟಿ ವಿರಚಿತ ತುಳುವ ಬೀರೆರ್ ಕೋಟಿ ಚೆನ್ನಯೆರ್ ತುಳು ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.
ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ ಎಲ್ಲೂರು ಪಣಿಯೂರು - ವಾರ್ಷಿಕೋತ್ಸವ, ಶ್ರೀ ವಿಶ್ವಕರ್ಮ ಪೂಜೆ ಸಂಪನ್ನ
Posted On: 18 Dec 2023, 06:02 PM
ಕಾಪು : ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಎಲ್ಲೂರು ಪಣಿಯೂರು ಇದರ ವಾರ್ಷಿಕೋತ್ಸವ ಮತ್ತು ಶ್ರೀ ವಿಶ್ವಕರ್ಮ ಪೂಜೆಯು ಆದಿತ್ಯವಾರದಂದು ಸಂಘದಲ್ಲಿ ನೆರವೇರಿತು. ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ಮಾತನಾಡಿ ಸಂಘವು ಕೊಡುತ್ತಿರುವ ವಿದ್ಯಾರ್ಥಿ ವೇತನವು ಉತ್ತಮವಾದ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವಕರ್ಮ ಒಕ್ಕೂಟ (ರಿ.) ಅವಿಭಜಿತ ಉಡುಪಿ, ದಕ್ಷಿಣ ಕನ್ನಡ ಇದರ ಅಧ್ಯಕ್ಷ ಮಧು ಆಚಾರ್ಯ ಮಾತನಾಡಿ ಸಂಘದ ಸ್ವಂತ ಕಟ್ಟಡ ನಿರ್ಮಾಣದ ಯೋಜನೆಯಲ್ಲಿ ವಿಶ್ವಕರ್ಮ ಒಕ್ಕೂಟದ ಸಂಪೂರ್ಣ ಸಹಕಾರವು ಸಿಗಲಿದೆ ಎನ್ನುವ ಭರವಸೆ ನೀಡಿದರು. ಸಂಘದ ಅಧ್ಯಕ್ಷರಾದ ವೈ.ಕಿಶೋರ್ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ, ಸಂಘದ ವ್ಯಾಪ್ತಿಯೊಳಗೆ ಬರುವ ಶಾಲೆಗಳಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮೂವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಈ ಸಂದರ್ಭ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾಪು : ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ - ನಾಪತ್ತೆಯಾಗಿದ್ದ ಸಾಕು ಮಗಳು ಪತ್ತೆ ; ನಾಲ್ವರು ಆರೋಪಿಗಳು ಪೋಲಿಸ್ ವಶಕ್ಕೆ
Posted On: 18 Dec 2023, 04:11 PM
ಕಾಪು : ಆತ್ಮಹತ್ಯೆ ಮಾಡಿಕೊಂಡಿದ್ದ ಕಾಪುವಿನ ಸಮಾಜ ಸೇವಕ ಲೀಲಾಧರ ಶೆಟ್ಟಿ ದಂಪತಿಗಳ ನಾಪತ್ತೆಯಾಗಿದ್ದ ಸಾಕು ಮಗಳನ್ನು, ನಾಲ್ವರು ಆರೋಪಿಗಳನ್ನು ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಳಿ ಕಾಪು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಆಕೆಯ ಸ್ನೇಹಿತ ಶಿರ್ವ ನಿವಾಸಿ ಗೀರಿಶ್ (20), ಮತ್ತು ನಾಪತ್ತೆಯಾಗಲು ಸಹಕರಿಸಿದವರಾದ ಶಿರ್ವ ನಿವಾಸಿ ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮೊಹ್ಮದ್ ಅಝೀಜ್ ಎಂದು ಗುರುತಿಸಲಾಗಿದೆ. ಲೀಲಾಧರ ಶೆಟ್ಟಿಯವರು 16 ವರ್ಷಗಳ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದದ್ದು ಆಕೆ ಡಿಸೆಂಬರ್ 11 ರಂದು ಮನೆ ಬಿಟ್ಟು ಹೋಗಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಾಕು ಮಗಳು ನಾಪತ್ತೆಯಾಗಿರುವುದರಿಂದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಎಲ್ ಶೆಟ್ಟಿ ರವರು ಸಮಾಜಕ್ಕೆ ಹೆದರಿಕೊಂಡು, ಮರ್ಯಾದೆಗೆ ಅಂಜಿ ಮನನೊಂದು ಮನೆಯ ಮಲಗುವ ಕೋಣೆಯಲ್ಲಿನ ಪಕ್ಕಾಸಿಗೆ ನೈಲಾನ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿ ಗಿರೀಶ್ ವಿರುದ್ಧ ಫೋಕ್ಸೊ, ಅತ್ಯಾಚಾರ ಹಾಗೂ ಕಿಡ್ನಾಪ್ ಪ್ರಕರಣಗಳನ್ನು ಹಾಗೂ ಇತರ ಮೂವರ ವಿರುದ್ದ ಪೋಕ್ಸೊ ಪ್ರಕರಣವನ್ನು ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಟಿ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಇವರ ಮಾರ್ಗದರ್ಶನದಲ್ಲಿ ಕಾಪು ಸಿಪಿಐ ಜಯಶ್ರೀ ಮಾನೆ ನೇತೃತ್ವದಲ್ಲಿ ಕಾಪು ಪಿಎಸ್ಐ ಅಬ್ದುಲ್ ಖಾದರ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸಿದೆ.
ಉಡುಪಿ : ಇತಿಹಾಸ ಪ್ರಸಿದ್ಧ ವರ್ತೆ ಕಲ್ಕುಡ ದೈವಸ್ಥಾನ, ಬಜೆ ತಂಗಾಣ : ಕಾಲಾವಧಿ ಸಿರಿ ಸಿಂಗಾರದ ನೇಮ ಸಂಪನ್ನ
Posted On: 18 Dec 2023, 03:47 PM
ಉಡುಪಿ : ಇತಿಹಾಸ ಪ್ರಸಿದ್ಧ 110 ವರ್ಷಗಳ ಇತಿಹಾಸವಿರುವ ವರ್ತೆ ಕಲ್ಕುಡ ದೈವಸ್ಥಾನ, ಬಜೆ ತಂಗಾಣ ಇಲ್ಲಿಯ ಕಾಲಾವಧಿ ಸಿರಿಸಿಂಗಾರದ ನೇಮ ಶನಿವಾರ ಜರಗಿತು. ಸಂಜೆ ಭಜನೆ ಕಾರ್ಯಕ್ರಮ ಹಾಗೂ ರಾತ್ರಿ ಹೂವಿನ ಪೂಜೆ ದೈವದ ದರ್ಶನ ಸೇವೆ ಮಹಾ ಅನ್ನ ಸಂತರ್ಪಣೆ ತದನಂತರ ದೈವಗಳ ನೇಮ ಸೇವೆ ಜರಗಿತು. ಸನ್ಮಾನ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಅನುಭವಿ ದೈವ ನರ್ತಕರಾದ ಬೀರು ಪಾಣರ, ಸಮಾಜ ಸೇವಕ, ದೈವಾರಾಧನೆ, ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಿನೋದ್ ಶೆಟ್ಟಿ, ದೈವಾರಾಧನೆ ಕ್ಷೇತ್ರ ಹಾಗೂ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿರುವ ಹಿರಿಯರಾದ ಬಾಲಕೃಷ್ಣ ಶೆಟ್ಟಿ ಪೆರ್ಡೂರನ್ನು ತಂಗಾಣ ಕುಟುಂಬಸ್ಥರ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮುಖ್ಯಸ್ಥರಾದ ಸುಧಾಕರ್ ಶೆಟ್ಟಿ ಕುಟುಂಬದ ಹಿರಿಯರಾದ ಸುಂದರ ಶೆಟ್ಟಿ ಹಾಗೂ ಕೃಷ್ಣ ಶೆಟ್ಟಿ, ಮೋಹನ ಶೆಟ್ಟಿ, ಸುರೇಶ್ ಶೆಟ್ಟಿ, ಗಣೇಶ ಶೆಟ್ಟಿ, ವಿಜಯ್ ಶೆಟ್ಟಿ, ಕೃಷ್ಣ ಪೂಜಾರಿ ಹಾಗೂ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಹೆಜಮಾಡಿ : ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ - ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಪನ್ನ
Posted On: 18 Dec 2023, 02:56 PM
ಹೆಜಮಾಡಿ : ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಮೆಂಡನ್ ಉದ್ಘಾಟಿಸಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಶಾಲೆ ಎಂಬ ರಥ ನಡೆಸಲು ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯದವರ ಪಾತ್ರ ಬಹುಮುಖ್ಯ ಎಂದರು. ಈ ಸಂದರ್ಭ ಶಾಸಕರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಹಳೆ ವಿದ್ಯಾರ್ಥಿ, ದಾನಿಗಳಾದ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶೇಷಗಿರಿ ರಾವ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಹೆಜಮಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ಸುವರ್ಣ, ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸತೀಶ್ ಕೆ .ನಾಯಕ್, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪಾಂಡುರಂಗ ಕರ್ಕೇರ, ಉದ್ಯಮಿ ರಾಲ್ಫಿ ಡಿ'ಕೋಸ್ತ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲರಾದ ಈಶ್ವರ್ ಎ. ಸ್ವಾಗತಿಸಿದರು. ಪ್ರೌಢಶಾಲಾ ಹಿರಿಯ ಶಿಕ್ಷಕಿ ಸಂಪಾವತಿ, ಕಾಲೇಜು ಪ್ರಾಂಶುಪಾಲ ಈಶ್ವರ್ ಎ. ವರದಿ ವಾಚಿಸಿದರು. ಸಹ ಶಿಕ್ಷಕರಾದ ಮಂಜುನಾಥ ಪಿ, ಅನಿತಾ ಬಹುಮಾನಿತರ ಪಟ್ಟಿಯನ್ನು ವಾಚಿಸಿದರು. ಸಹ ಶಿಕ್ಷಕಿ ಸರೋಜಾ ಆಚಾರಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ದೀಪಾ ಎನ್ ಉಡುಪ ವಂದಿಸಿದರು. ಉಪನ್ಯಾಸಕ ವಿನ್ಸೆಂಟ್ ಡಿಸೋಜರವರ ಹಿನ್ನೆಲೆ ಸಂಗೀತದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
