Updated News From Kaup
ಕಾಪು : ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ
Posted On: 19 Sep 2023, 12:27 PM
ಕಾಪು : ಮೊದಲ ಪೂಜಿತ ದೇವ ಗಣಪತಿಯ ಆರಾಧನಾ ಮಹೋತ್ಸವ ಗಣೇಶ ಚತುರ್ಥಿಯ ಸಂಭ್ರಮವನ್ನು ಕಾಪು ತಾಲೂಕಿನಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಮೂಲಕ 14 ಕಡೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಾಪು ತಾಲೂಕಿನ ದೇವಳಗಳಲ್ಲಿ ವಿಶೇಷ ಪೂಜೆಯೊಂದಿಗೆ, ಉಚ್ಚಿಲದಲ್ಲಿ 33 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಕಾಪುವಿನಲ್ಲಿ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಪಾದೂರಿನಲ್ಲಿ 9ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, 20 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಪಣಿಯೂರು, 36 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಎರ್ಮಾಳು ಸೇರಿದಂತೆ ಪಡುಬಿದ್ರಿ ಇನ್ನಿತರ ಭಾಗಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗಣೇಶೋತ್ಸವವು ಆಚರಿಸಲಾಗುತ್ತಿದೆ.
ಕಾಪು : ಕಾಲು ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ ವ್ಯಕ್ತಿಗೆ ಸಹಾಯಗೈದ ಕುಲಾಲ್ಸ್ ದೋಹಾ ಸದಸ್ಯರು
Posted On: 18 Sep 2023, 11:23 PM
ಕಾಪು : ಕಾಲು ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ ಕಾಪು ತಾಲೂಕಿನ ಅದಮಾರುವಿನ ರಾಜೇಶ್ ಕುಲಾಲ್ ಅವರ ಮನವಿಗೆ ದೋಹಾ ಕತಾರ್ ಕುಲಾಲ ಮಿತ್ರರು ಸ್ಪಂದಿಸಿ ಅವರಿಗೆ 25 ಸಾವಿರ ರೂಪಾಯಿ ಸಹಾಯ ನೀಡಿದ್ದಾರೆ.
ನಮ್ಮ ನಾಡ ಒಕ್ಕೂಟ - ಕಾಪು ತಾಲೂಕು ಘಟಕದಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರಿಗೆ ಸನ್ಮಾನ
Posted On: 18 Sep 2023, 10:35 PM
ಕಾಪು : ಮನುಕುಲದ ಸೇವೆಯೆ ಭಗವಂತನ ಸೇವೆ ಎಂಬ ಧ್ಯೇಯ ವಾಕ್ಯವನ್ನು ನಂಬಿಕೊಂಡು ಜಾತಿ ಮತ ಬೇದವಿಲ್ಲದೆ ಸಮಾಜ ಸೇವೆಯಲ್ಲಿ ಜನರಿಗೆ ತನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತ ಉತ್ತಮ ಸಮಾಜ ಸೇವಕರಾಗಿ ಗುರುತಿಸಿ ಅನೇಕ ಸಂಘ ಸಂಸ್ಥೆಗಳಿಂದ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಡೆದ ಫಾರೂಕ್ ಚಂದ್ರನಗರರನ್ನು ನಮ್ಮ ನಾಡ ಒಕ್ಕೂಟ (ರಿ.) ಕಾಪು ತಾಲೂಕು ಘಟಕದಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭ ನಮ್ಮ ನಾಡ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ಪಡುಬಿದ್ರಿ, ಉಪಾಧ್ಯಕ್ಷರಾದ ಮಹಮ್ಮದ್ ಇರ್ಫಾನ್ ಕಾಪು, ಕಾರ್ಯದರ್ಶಿ ಅಬ್ದುಲ್ ಹಮೀದ್ ಯೂಸುಫ್, ಕೋಶಾಧಿಕಾರಿ ಯು.ಎ ರಶೀದ್, ಸದಸ್ಯ ರಝಾಕ್ ಉಚ್ಚಿಲ ಉಪಸ್ಥಿತರಿದ್ದರು.
ಪಣಿಯೂರು : ಶೈನಿಂಗ್ ಫ್ರೆಂಡ್ಸ್ ಖಾನ - 4ನೇ ವರ್ಷದ ಹುಲಿವೇಷ
Posted On: 18 Sep 2023, 07:05 PM
ಪಣಿಯೂರು : ಇಲ್ಲಿನ ಖಾನ ಶೈನಿಂಗ್ ಫ್ರೆಂಡ್ಸ್ ವತಿಯಿಂದ ಗಣೇಶ ಚತುರ್ಥಿಯ ಸಂದರ್ಭದಲ್ಲಿ 4 ನೇ ವರ್ಷದ ಹುಲಿ ವೇಷ, ಊದು ಸೇವೆ ನಡೆಯಲಿದೆ. ಸಂಗ್ರಹದ ಹಣವನ್ನು ಆರ್ಥಿಕವಾಗಿ ಹಿಂದುಳಿದ ಅಶಕ್ತರಿಗೆ ಹಂಚಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುವರು.
ಕಾಪು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದಂಡತೀರ್ಥ ಉಳಿಯಾರಗೋಳಿ : 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
Posted On: 18 Sep 2023, 06:59 PM
ಕಾಪು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದಂಡತೀರ್ಥ ಉಳಿಯಾರಗೋಳಿ ಇಲ್ಲಿಯ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 19, ಮಂಗಳವಾರ ಶ್ರೀ ಬಾವು ಬಬ್ಬರ್ಯ ದೈವಸ್ಥಾನದ ಬಳಿ, ಕೈಪುಂಜಾಲು ಇಲ್ಲಿ ಜರಗಲಿದೆ. ಬಿಂದಾಸ್ ಫ್ರೆಂಡ್ಸ್ ಕೈಪುಂಜಾಲು ಬೆಳಿಗ್ಗೆ ಗಂಟೆ 7ಕ್ಕೆ ಗಣಹೋಮ, 8 ಕ್ಕೆ ಮೂರ್ತಿ ಪ್ರತಿಷ್ಠಾಪನೆ, ಮಧ್ಯಾಹ್ನ ಗಂಟೆ 11:30 ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 2ಕ್ಕೆಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 3 ಕ್ಕೆ ಪ್ರಸಾದ ವಿತರಣೆ, ಸಂಜೆ ಗಂಟೆ 5:30 ಕ್ಕೆ ವಿಸರ್ಜನಾ ಪೂಜೆ, ಸಾಯಂಕಾಲ ಗಂಟೆ 4ಕ್ಕೆ ವಿಸರ್ಜನಾ ಮೆರವಣಿಗೆ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ. ನೇರ ಪ್ರಸಾರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಪಡುಬಿದ್ರಿ : ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭ
Posted On: 18 Sep 2023, 05:08 PM
ಪಡುಬಿದ್ರಿ : ವ್ಯಕ್ತಿಯೊಬ್ಬ ತನ್ನ ದುರ್ಗುಣಗಳನ್ನು ಬದಲಾಯಿಸಿಕೊಂಡು ಸತ್ಪ್ರಜೆಯಾಗಿ ಬಾಳಿದರೆ ಸಮಾಜದ ಪರಿವರ್ತನೆ ಸಾಧ್ಯ. ಆ ಪರಿವರ್ತನೆಯ ಪಥವನ್ನು ಯುವವಾಹಿನಿಯ ಪ್ರತಿಜ್ಞಾ ವಿಧಿಯಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದು ಬೈಂದೂರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹರೀಶ್ ಕೋಟ್ಯಾನ್ ಹೇಳಿದರು. ಅವರು ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭವನ್ನು ಉದ್ಘಾಟಿಸಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಅವರು ಅವಿಭಜಿತ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿರುವ ಯುವವಾಹಿನಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ. ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಭೋದಿಸಿ ಶುಭ ಹಾರೈಸಿದರು. ಕಾರ್ಯದರ್ಶಿ ಡಾ| ಐಶ್ವರ್ಯ ಸಿ. ಅಂಚನ್ ಗತಸಾಲಿನ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು. ಘಟಕದ ಉಪಾಧ್ಯಕ್ಷರಾದ ಅಶ್ವಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಡ್ವೆ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಯುವವಾಹಿನಿಯ ಸಂಘಟನಾ ಕಾರ್ಯದರ್ಶಿ ಉದಯ ಕಾವೂರು ಉಪಸ್ಥಿತರಿದ್ದರು. ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾಪು : 33 ನೇ ವರ್ಷದ ಸಂಭ್ರಮದಲ್ಲಿ ಕಳತ್ತೂರು ಗಣೇಶೋತ್ಸವ
Posted On: 18 Sep 2023, 04:50 PM
ಕಾಪು : ಇಲ್ಲಿಯ ಕುತ್ಯಾರು ಭಾಗದ ಕಳತ್ತೂರು ಪುಂಚಲಕಾಡು ಇಲ್ಲಿ 33 ನೇ ಗಣೇಶೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮ, 8 ಗಂಟೆಗೆ ಮೆರವಣಿಗೆ ಮುಖೇನ ಮಂಗಳ ಮೂರ್ತಿಯ ಜಲಾದಿವಾಸ ಕಳತ್ತೂರು ಅರಬಿಕಟ್ಟೆ ಬಳಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ : ನಾನಿಲ್ತಾರು ಕುಲಾಲ ಸಂಘದ 35ನೇ ವರ್ಷದ ಮಹಾಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 18 Sep 2023, 04:45 PM
ಕಾರ್ಕಳ : ಇಲ್ಲಿಯ ಕುಲಾಲ ಸಂಘ ನಾನಿಲ್ತಾರು ಮುಲ್ಲಡ್ಕ ಮುಂಡ್ಕೂರು ಇದರ ಅಕ್ಟೋಬರ್ 1, ಆದಿತ್ಯವಾರದಂದು ನಡೆಯುವ 35ನೇ ವರ್ಷದ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಧ್ವನಿವರ್ಧಕ ಕೊಡುಗೆ, ಅಭಿನಂದನಾ ಕಾರ್ಯಕ್ರಮ, ವೈದ್ಯಕೀಯ ನೆರವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಬಿಡುಗಡೆ ಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ದಿನೇಶ್ ಕುಲಾಲ್, ಮಾಜಿ ತಾ.ಪ.ಉಪಾಧ್ಯಕ್ಷರು ಗೋಪಾಲ್ ಮೂಲ್ಯ, ಆಶಾ ವರದರಾಜ್, ಹರ್ಷಿತ, ಲೋಕೇಶ್, ಅನೀಶ್ ಉಪಸ್ಥಿತರಿದ್ದರು.
ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಕಾಪು ಮಂಡಲ ಬಿಜೆಪಿ ವತಿಯಿಂದ ಬೃಹತ್ ರಕ್ತದಾನ ಶಿಬಿರ
Posted On: 17 Sep 2023, 01:11 PM
ಕಾಪು : ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ, ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ರವಿವಾರ ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭ ಶಾಸಕರು ಮಾತನಾಡಿ ಭಾರತದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಇತ್ತೀಚಿಗೆ ನಡೆದ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿ ಸಮರ್ಥ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನರೇಂದ್ರ ಮೋದಿಯವರು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಯನ್ನು ಪ್ರಪಂಚದಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯದರಲ್ಲಿ ಸಂಶಯವಿಲ್ಲ ಎಂದರು. ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ನವೀನ್ ಎಸ್.ಕೆ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕೃಷ್ಣ ರಾವ್, ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಡಾ. ವೀಣಾ ಹಾಗೂ ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷದ ಹಿರಿಯರು, ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೌರಿ-ಗಣೇಶ : ವಿಲಕ್ಷಣ ತಾಯಿ-ಮಗ
Posted On: 17 Sep 2023, 12:19 PM
ಸ್ತ್ರೀ ತನ್ನ ಬಯಕೆಯನ್ನು ಪುರುಷ ಸಂಬಂಧವಿಲ್ಲದೆ ನೆರವೇರಿಸಿಕೊಳ್ಳುತ್ತಾಳೆ, ಮಗುವನ್ನು ಪಡೆಯುತ್ತಾಳೆ. ಇದನ್ನು ಗಮನಿಸಿದ ಪುರುಷ ಸಿಟ್ಟಾಗುತ್ತಾನೆ,ಅಸೂಯೆಗೊಳ್ಳುತ್ತಾನೆ, ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಾನೆ. ಜನಿಸಿದ ಮಗು - ಪುರುಷ ಸಂಘರ್ಷವೇರ್ಪಡುತ್ತದೆ. ಪ್ರಕರಣ ಸುಖಾಂತ್ಯವಾಗುತ್ತದೆ. ಸ್ತ್ರೀಯ ನಿರ್ಬಂಧಕ್ಕೆ ಪುರುಷನು ಮಗುವನ್ನು ಒಪ್ಪಿಕೊಳ್ಳುತ್ತಾನೆ. ಇದು ಅನಿವಾರ್ಯವಾಗಿಯಲ್ಲ, ಪ್ರೀತಿಪೂರ್ವಕವಾಗಿ. ಗೌರಿ-ಗಣೇಶ ಇವರ ತಾಯಿ-ಮಗ ಸಂಬಂಧ ಇದು ಸ್ವಾರಸ್ಯಕರವಾದುದು, ಅಪ್ರಾಕೃತವಾದುದು. ಅಂತೂ ದಂಪತಿಗಳ ಸಹಜ ಸಂಬಂಧದಿಂದ ಒದಗಿ ಬಂದವನಲ್ಲ 'ಗಣೇಶ'. ಪ್ರಕೃತಿ - ಪುರುಷ ಸಮಾಗಮವಿಲ್ಲದೆಯೂ ಪ್ರಕೃತಿಯೊಂದಿಗೆ ಎಷ್ಟು ಆಳವಾದ ದೇಹ ಸಂಬಂಧದ ಅವಿನಾಭಾವವಿರುತ್ತದೊ ಅಷ್ಟೇ ಪ್ರಮಾಣದ ಭಾವ ತೀವ್ರತೆಯನ್ನು ಅಥವಾ ಅನುರಾಗವನ್ನು ಪುರುಷನೊಂದಿಗೆ ಹೊಂದಿ 'ಗಣನಾಥ'ನಾದದ್ದು, ವಿಘ್ನೇಶನಾದದ್ದು ಆದಿಪೂಜಿತನಾದದ್ದು. ನಿಗ್ರಹಿಲ್ಪಟ್ಟರೂ ಶಿವನ ಪ್ರಸನ್ನತೆಗೆ ಪ್ರಕೃತಿ ಕಾರಣವಾಗಿ ಗಣಪ ಏರಿದ ಎತ್ತರ, ಪಡೆದ ಸ್ಥಾನಮಾನ ಪುರಾಣಗಳೇ ವಿವರಿಸುವಂತೆ ಅದು ವಿಸ್ತಾರವಾದುದು.ಎಷ್ಟು ಮುನಿದರೂ ಕೊನೆಗೊಮ್ಮೆ ಪ್ರಕೃತಿಯನ್ನು ಪುರುಷ ಸಮೀಪಿಸಲೇ ಬೇಕಾಗುತ್ತದೆ. ಅನುಗ್ರಹಿಸುವುದು ಅನಿವಾರ್ಯವಾಗುತ್ತದೆ. ಈ ಪ್ರಪಂಚ ನಿಯಮ ಗಣೇಶನ ಜನನದಲ್ಲಿ ಸಹಜವಾಗಿ ಪಡಿಮೂಡಿದೆ. ಪ್ರಕೃತಿಯ ನಿರೀಕ್ಷೆ ಮತ್ತು ಸಿದ್ಧತೆಯ ಸಂಕೇತವಾಗಿ ಗೌರಿಯ ಮೈಯ ಮಣ್ಣನ್ನು ಆಕೆ ತೆಗೆಯುವುದು ಮತ್ತು ಸ್ನಾನಕ್ಕೆ ಹೊರಡುವುದು. ಈ ನಡುವೆ ಮೈಯ ಮಣ್ಣಿಗೆ ರೂಪು ನೀಡಿ - ಜೀವ ಕೊಡುವುದು ಮತ್ತೆ ಪರಿಶುದ್ಧಳಾದುದನ್ನು ದೃಢೀಕರಿಸುತ್ತದೆ. ಪುರುಷ ಪ್ರವೇಶ ಪ್ರಕೃತಿಯ ನಿರೀಕ್ಷೆಯಂತೆಯೇ ಆದರೂ ಕಾಲವಲ್ಲದ ಕಾಲದಲ್ಲಿ ಆಗುತ್ತದೆ. ಸಮಾಗಮಕ್ಕೆ ತೊಡಕಾಗುವ ಮೈಯ ಮಣ್ಣು ಪ್ರತಿಮೆಯಾಗಿ ರೂಪು ಪಡೆದು ತಡೆಯುತ್ತದೆ. ಈ ಘಟನೆ ಭೂಮಿ-ಆಕಾಶ ಸಂಬಂಧವನ್ನು ನಿರೂಪಿಸುತ್ತಾ ವಿಶಾಲತೆಯನ್ನು ಒದಗಿಸಿ ಕೃಷಿ ಸಂಸ್ಕೃತಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಮತ್ತು ಕೃಷಿ ಆಧರಿತ ಮಾನವ ಬದುಕನ್ನು ತೆರೆದಿಡುತ್ತದೆ. ಪ್ರಕೃತಿ-ಮಣ್ಣಿನೊಂದಿಗೆ ಗಾಢವಾದ ಸ್ನೇಹ ಮಣ್ಣಿನಮಗ ಮಹಾಕಾಯನಾದ ಮಹಾಗಣಪತಿಯ ಬಿಂಬ ಕಲ್ಪನೆಯಲ್ಲಿ ಸ್ಪಷ್ಟವಾಗುತ್ತದೆ. ಗೌರಿಗೆ ಮಗನಾದರೂ ರುದ್ರ ಪುತ್ರನಾದರೂ ಗಣಪ 'ಮಣ್ಣಿನ ಮಗನೆ'. ಅದು ಅಂದಿಗೂ ಸರಿ,ಇಂದಿಗೂ ಪ್ರಸ್ತುತ. ಆದುದರಿಂದ ಈ ಮಣ್ಣಿನ ಮಕ್ಕಳಿಗೆ ಆತ ಪ್ರಿಯನಾಗುತ್ತಾನೆ, ಬಂಧುವಾಗುತ್ತಾನೆ. ಮನುಷ್ಯ ಬೇಟೆಯಾಡಿ ಬದುಕುತ್ತಿದ್ದ ಕಾಲದಿಂದಲೂ ಅಡ್ಡಿ ಆತಂಕಗಳ, ಕಾರ್ಯಭಂಗಗಳ ಕುರಿತು ಆಲೋಚನೆ ಇತ್ತು. ಮುಂದೆ ಕೃಷಿ ಸಂಸ್ಕೃತಿ ತೊಡಗಿದಾಗ ಎಲ್ಲವೂ ನಿರಾತಂಕವಾಗಿ ನಡೆಯಬೇಕು. ಕೃಷಿ ಸಮೃದ್ಧಿ ಪರಿಪೂರ್ಣವಾಗಿ ಒದಗಬೇಕು ಎಂಬ ಆಸೆ ಇತ್ತು. ಎಲ್ಲಿ ಕೈಗೂಡುವುದಿಲ್ಲವೊ ಎಂಬ ಆತಂಕವಿತ್ತು. ಮುಂದೆ ನಾಗರಿಕತೆ ಬೆಳೆದಂತೆ ತನ್ನ ಬದುಕು ವಿಸ್ತೃತವಾಗಿ ಅನಾವರಣಗೊಂಡಾಗ ಬಾಳು ಸುಂದರ, ನಿರರ್ಗಳವಾಗಿರಬೇಕೆಂದು ಬಯಸಿದ ಮನುಷ್ಯ ವಿಘ್ನ ವಿಡ್ಡೂರಗಳು ಬಂದಾಗ ವಿಘ್ನದ ಕುರಿತು ಗಮನಹರಿಸಿದ ,ವಿಘ್ನ ನಿವಾರಕ ದೇವರೊಂದು ಅನಿವಾರ್ಯವಾಯಿತು. ಈಗ ಪ್ರಾಚೀನ - ಅರ್ವಾಚೀನಗಳನ್ನು ಬೆಸೆಯುತ್ತಾ ಗಣಪತಿ ಮತ್ತೆ ಸಾಕಾರಗೊಂಡ. ವಿಘ್ನ ನಿವಾರಕ (ಮೊದಲೇ ಶಿವನಿಂದ ಅನುಗ್ರಹಿತನಾದ)ಎಂದೆನಿಸಿಕೊಂಡ. ಜಾತಿ - ಮತ-ಪಂಥ-ಆಸ್ತಿಕ-ನಾಸ್ತಿಕ ಬೇಧವಿಲ್ಲದೆ ಬಹುಮಾನ್ಯನಾದ. ಏಕೆಂದರೆ ವಿಘ್ನ ಬರುವುದು ಸಹಜ ತಾನೆ? ವೈದಿಕವು ವಿನಾಯಕನ ಮೂಲವನ್ನು ಋಗ್ವೇದದಷ್ಟು ಪ್ರಾಚೀನತೆಗೆ ಒಯ್ಯುತ್ತದೆ. ವೈದಿಕ ವಿದ್ವಾಂಸರು 'ಗಣಾನಾಮ್ ಗಣಪತಿಮ್ ಹವಾಮಹೇ...'ಎಂಬ ಮಂತ್ರವನ್ನೂ ಆಧಾರವಾಗಿ ನೀಡುತ್ತಾರೆ.ಮುಂದಿನ ಪುರಾಣ ಮತ್ತು ಮಹಾಕಾವ್ಯಗಳು ಪ್ರಸ್ತುತ ನಾವು ಕಾಣುವ ಸ್ವರೂಪವನ್ನು ಗಜಾನನಿಗೆ ನೀಡಿದುವು. ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ ಅಂಶಗಳಿಗನುಸಾರವಾಗಿ ಗಣಪತಿಯ ಪರಿಕಲ್ಪನೆಗಳು, ರಹಸ್ಯ ಅರ್ಥಗಳು ರೂಪಾಂತರಗೊಂಡು ಋಗ್ವೇದದ ಗಣಪತಿ-ಬ್ರಹ್ಮಣಸ್ಪತಿಯು ಗಜವದನ, ಗಣೇಶ, ವಿಘ್ನೇಶ್ವರ ರೂಪವನ್ನು ಪಡೆದವು. ಋಗ್ವೇದದ ಗಣಪತಿ-ಬ್ರಹ್ಮಣಸ್ಪತಿಯು ವಾಚಸ್ಪತಿ-ಬ್ರಹ್ಮಸ್ಪತಿ ಆಗುವುದು. ಜ್ಞಾನದ ಸಂಕೇತವಾಗಿ ಸ್ಪಷ್ಟಗೊಂಡಿದ್ದು ಮೂರ್ತಿ ಲಕ್ಷಣಗಳನ್ನು ಹೊಂದಿ ಬಂಗಾರ, ಕೆಂಪು ಬಣ್ಣ ಹಾಗೂ ಆಯುಧಗಳನ್ನು ಪಡೆದನು. ಗಣ = ಗುಂಪು, ಇಂತಹ ಹಾಡುವವರ, ನರ್ತಿಸುವವರ ಗುಂಪಿನಲ್ಲಿ ಇರುವವನು ಎಂಬುದು ಸೇರಿಕೊಂಡ ಕಲ್ಪನೆ. ಋಗ್ವೇದದ ಇನ್ನೊಂದು ವಿಭಾಗದಲ್ಲಿ ಮರುತರು ಅಥವಾ 'ಮರುದ್ಗಣ'ಗಳೆಂದು ಉಲ್ಲೇಖಿಸಲ್ಪಡುವ ಶಕ್ತಿಗಳನ್ನು ರುದ್ರನ ಮಕ್ಕಳೆಂದು ಹೆಸರಿಸಲಾಗಿದ್ದು, ಮೇಲಿನ ಗುಣಧರ್ಮವನ್ನೇ ಆರೋಪಿಸಲಾಗಿದೆ. ಸಿದ್ಧಿ ಮತ್ತು ಬುದ್ಧಿಯರನ್ನು ಹೊಂದಿರುವ ಗಣಪತಿ ಪರಿಕಲ್ಪನೆಯು ಸಿದ್ಧಿ ಮತ್ತು ಬುದ್ಧಿಗಳಿಗೆ ಈತನು ಕಾರಕನೆಂಬುದನ್ನು ಪ್ರತಿಪಾದಿಸುತ್ತದೆ. ಜನಪ್ರಿಯವಾಗಿರುವ ಕತೆಗಳು ಗಜಮುಖ ರೂಪದ ಹಿನ್ನೆಲೆಯಲ್ಲಿವೆ. ಆನೆಮುಖವನ್ನು ಹೊಂದಿರುವ ಗಜಮುಖ ಶಬ್ದವನ್ನು (ಗಜಮುಖ = ಜಾನಪದ ಮೂಲದ್ದು, ಬೇಟೆ ಸಂಸ್ಕೃತಿಯಿಂದ ಬಂದದ್ದು) ತತ್ತ್ವಜ್ಞಾನಿಗಳು ವಿಶ್ವದ ಆದಿ, ಗತಿ, ಐಕ್ಯವನ್ನು ಸಾಂಕೇತಿಸುವ ವಿರಾಟ್ ಸ್ವರೂಪವನ್ನು ವ್ಯಾಖ್ಯಾನಿಸುತ್ತಾರೆ. ಗಣಪತಿಯ ಆಯುಧಗಳಾದ ಪಾಶವನ್ನು ರಾಗ, ಅಂಕುಶವನ್ನು ಕ್ರೋಧವೆಂದು ಅರ್ಥೈಸಿರುವ ವಿದ್ವಾಂಸರು ರಾಗ ಮತ್ತು ಕ್ರೋಧಗಳ ನಿರಂಕುಶ ನಿಯಂತ್ರಣದಿಂದ ಹೊರಬರಲು ಅವುಗಳನ್ನು ಧರಿಸಿರುವ ದೇವರೇ ಅನುಗ್ರಹಿಸಬೇಕೆಂದು ಅಭಿಪ್ರಾಯಪಡುತ್ತಾರೆ. ಈ ನಂಬಿಕೆ, ಶ್ರದ್ಧೆ ಭಗವದ್ಭಕ್ತರಲ್ಲಿದೆ. ಬೇಟೆ ಸಂಸ್ಕೃತಿಯಿಂದ ತೊಡಗಿದ ಮಾನವ ಬದುಕಿನ ವಿವಿಧ ಹಂತಗಳಲ್ಲಿ ಭಿನ್ನ ಪರಿಕಲ್ಪನೆ ಅನುಸಂಧಾನದೊಂದಿಗೆ ಸಾಗಿ ಬಂದ ಗಣಪತಿ ಆರಾಧನೆ ಈ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ವಿಜೃಂಭಿಸುತ್ತಿದೆ. ಈ ನಡುವೆ ಇತಿಹಾಸಕಾಲದಲ್ಲೂ ಗಣಪತಿ ಇಲಿ ರಹಿತನಾಗಿಯೇ ಮೊತ್ತಮೊದಲು ಕಾಣಸಿಗುತ್ತಾನೆ. ಬಳಿಕ ಇಲಿಯ ಸಾಂಗತ್ಯ ಸಿಗುತ್ತದೆ. ಕೃಷಿ ಸಂಸ್ಕೃತಿ ಬಹುವಾಗಿ ಪೂಜಿಸುತ್ತದೆ. ಆಕರ್ಷಕ ಪ್ರತಿಮಾ ಲಕ್ಷಣಗಳ ವೈವಿಧ್ಯಮಯ ಗಣಪತಿ ಶಿಲಾಶಿಲ್ಪಗಳಲ್ಲಿ-ದಾರುಶಿಲ್ಪಗಳಲ್ಲಿ ಲಭ್ಯ. ಸರ್ವಮಾನ್ಯ ಸುಮುಖ ಸರ್ವ ವಿಘ್ನಗಳನ್ನು ನಿವಾರಿಸಿ ಲೋಕಕ್ಕೆ ಮಂಗಳವನ್ನು ಅನುಗ್ರಹಿಸಲಿ. ಆಶಯ ಮರೆಯದೆ ಗಣಪತಿಯ ಆರಾಧನೆ ನಡೆಯಲಿ. ವೈಭವೀಕರಣ ಮಿತಿಮೀರಿ ಉಪಾಸನಾ ಸತ್ಯ ಮರೆಯದಿರೋಣ. ಲೇಖನ : ಕೆ.ಎಲ್.ಕುಂಡಂತಾಯ
