Updated News From Kaup
ವರಮಹಾಲಕ್ಷ್ಮಿ ವ್ರತ : ’ಸಂಪತ್ತಿನ ರಾಣಿಯ ಆರಾಧನೆ’
Posted On: 25 Aug 2023, 07:08 AM
"ಲಕ್ಷಯತಿ ಪಶ್ಯತಿ ಭಕ್ತಜನಾನ್ ಇತಿ ಲಕ್ಷ್ಮೀ" ಇದು ’ಲಕ್ಷ್ಮೀ’ ಶಬ್ದದ ವ್ಯುತ್ಪತ್ತಿ. ಉಪಾಸಕರನ್ನು ಕೃಪಾಕಟಾಕ್ಷದಿಂದ ವೀಕ್ಷಿಸುವವಳೇ ’ಲಕ್ಷ್ಮೀ’. ಶ್ರೀ ಎಂಬುದು ’ಲಕ್ಷ್ಮೀ’ಯ ನಾಮಾಂತರ. ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯ, ಕಮಲ, ಬಿಲ್ವವೃಕ್ಷ ಮುಂತಾದುವು ’ಶ್ರೀ’ ಶಬ್ದಕ್ಕಿರುವ ಹಲವು ಅರ್ಥಗಳು. ಸಂಪತ್ತು ಎಂಬುದು ಸಾಮಾನ್ಯ ಅರ್ಥವಾದರೂ ’ಐಶ್ವರ್ಯವೆಂಬುದು ಪ್ರಧಾನವಾದ ಅರ್ಥ ಅಥವಾ ಸಾಮಾನ್ಯ ಒಪ್ಪಿಗೆ - ತಿಳಿವಳಿಕೆ. "ಈಶ್ಚರಸ್ಯ ಭಾವಃ ಐಶ್ವರ್ಯಂ". ಪರಮಾತ್ಮನ ಅನುಗ್ರಹಕಾರಕವಾದ ಗುಣ ವಿಶೇಷವೇ ’ಶ್ರೀ’. ’ಲಕ್ಷ್ಮೀ’ ಸಮುದ್ರ ಮಥನದಲ್ಲಿ ಹುಟ್ಟಿದಳು. ನಾರಾಯಣನನ್ನು ವರಿಸಿ ತಾನು ’ಮಹಾಲಕ್ಷ್ಮೀ’ಯಾದಳು. ನಾರಾಯಣನು ’ಲಕ್ಷ್ಮೀನಾರಾಯಣ’ನಾದ, ಶ್ರೀಮನ್ನಾರಾಯಣನಾದ. ಸ್ಥಿತಿಕರ್ತನಾದ-ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ, ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ ’ಲಕ್ಷ್ಮೀ’ ಬಹುಮಾನ್ಯಳಾದಳು. ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ.ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು, ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ. ಆ ದಿನದಂದು ಲಕ್ಷ್ಮೀಯನ್ನು ವರಗಳನ್ನು ಕೊಡುವವಳು ಅಥವಾ ಅನುಗ್ರಹಿಸುವವಳು ಎಂಬ ಅನುಸಂಧಾನದಿಂದ "ವರಮಹಾಲಕ್ಷ್ಮೀ"ಯನ್ನಾಗಿ ಪರಿಕಲ್ಪಿಸಿಕೊಂಡು ಆರಾಧಿಸುವುದು. ಕಟ್ಟು-ಕಟ್ಟಳೆ, ನಿಯಮ, ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ, ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ : ವರಮಹಾಲಕ್ಷ್ಮೀವ್ರತ’. ನಾರಾಯಣ-ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು. ಪರಶುರಾಮನಾದಾಗ ಈಕೆ ಭೂದೇವಿ. ರಾಮಾವತಾರದಲ್ಲಿ ಸೀತಾದೇವಿ. ಕೃಷ್ಣಾವತಾರದಲ್ಲಿ ರುಕ್ಮಿಣಿ. ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ. ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ. ಈ ಲಕ್ಷ್ಮೀಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ ’ತಿರುಪತಿ’- ಶ್ರೀಪತಿ, ಭೂವೈಕುಂಠ. ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ ’ಶ್ರೀಸೂಕ್ತದ’ ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ, ಜೊತೆಯಲ್ಲೇ ಇರುವ ಶ್ರೀ ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು, ರೂಪಗಳನ್ನು ವರ್ಣಿಸುತ್ತದೆ. ಲಕ್ಷ್ಮೀಯು ಚತುರ್ಭಾಹುವುಳ್ಳವಳ್ಳವಳು ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು. ಕೆಳಗಿನ ಕೈಗಳಿಂದ ’ವರದ’ ಮತ್ತು ’ಅಭಯ’ ಮುದ್ರೆಗಳನ್ನು ತೋರಿಸುತ್ತಿರುವವಳು. ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು. ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯಗಳನ್ನು ದಯಪಾಲಿಸುವವಳು. ಆದುದರಿಂದ ಜನಪ್ರಿಯಳು, ಅದೇ ತಾನೇ ಬಹುಮಾನ್ಯತೆ. ದೇವರುಗಳೆಷ್ಟು ? : ಭಾರತೀಯರಿಗೆ ದೇವರುಗಳು ಎಷ್ಟು? ನಂಬಿಕೆ, ಉಪಾಸನೆ ಗೊಂದಲವಿಲ್ಲವೇ? ಹೀಗೆಂದು ವಿದೇಶಿಯೊಬ್ಬ ಕೇಳುತ್ತಾನೆ. ಹೌದಲ್ಲ.... ನಮ್ಮ ದೇವತೆಗಳು, ದೇವರುಗಳನ್ನು ಲೆಕ್ಕ ಹಾಕಿದಾಗ ಅದು ಮೂವತ್ತಮೂರು ಕೋಟಿಗೂ ಹೆಚ್ಚು. ಆದರೆ ನಮಗೆ ಆರಾಧನೆಯಲ್ಲಿ ಗೊಂದಲವೇ ಇಲ್ಲ.ಒಂದೊಂದು ಉದ್ದೇಶಕ್ಕೆ, ಇಷ್ಟಾರ್ಥ ಸಿದ್ಧಿಗೆ ಒಂದೊಂದು ದೇವರು. ಮೊನ್ನೆ ನಾಗನನ್ನು ಪೂಜಿಸಿದೆವು, ಈಗ ಲಕ್ಷ್ಮೀಯನ್ನು ಆರಾಧಿಸುತ್ತೇವೆ, ಮುಂದೆ ಕೃಷ್ಣನನ್ನು ಬಳಿಕ ಗಣಪತಿಯನ್ನು, ನವದುರ್ಗೆಯರನ್ನು, ಬಲೀಂದ್ರನನ್ನು, ಶಿವನನ್ನು ಪೂಜಿಸುತ್ತೇವೆ. ವರ್ಷಪೂರ್ತಿ ಪೂಜೆ, ವ್ರತಗಳು ನಮ್ಮ ಶ್ರಮದ ಬದುಕಿನ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಸಾಗಿಬಂದಿವೆ. ತುಳುವರಿಗೆ ಮೇಲಿನ ದೇವತೆ - ದೇವರುಗಳೊಂದಿಗೆ ಸಾವಿರಮಾನಿ ದೈವಗಳು, ನೂರೆಂಟು ಗಂಡಗಣಗಳನ್ನು ವಿಧಿಯಂತೆ ಪೂಜಿಸುವ ಸಹಜ ನಂಬಿಕೆ. ಇವುಗಳಲ್ಲದೆ ಕೃಷಿ ಸಂಸ್ಕೃತಿಯೊಂದಿಗೆ ಆಚರಿಸಲ್ಪಡುವ ಆಚರಣೆಗಳು. ಇತ್ತೀಚೆಗೆ ನಮ್ಮದಲ್ಲದ ಹತ್ತಾರು ಆರಾಧನೆಗಳು ಸೇರಿ ಕೊಂಡಿವೆ. ಆದರೆ ಗೊಂದಲವಿಲ್ಲ, ಮನಃಪೂರ್ವಕವಾದ ಒಪ್ಪಿಗೆಗಳಿವೆ. ಇದು ಈ ದೇಶದ, ತುಳುನಾಡಿನ, ಮಣ್ಣಿನ ಆಸ್ತಿಕತೆ. ಇದು ನಮ್ಮ ಪರಂಪರೆಯಾಗಿ ವಂಶವಾಹಿನಿಯಲ್ಲಿದೆ. ಬಹುತೇಕ ಆರಾಧನೆ, ನಂಬಿಕೆಗಳೆಲ್ಲ ಏನನ್ನೊ ಪ್ರಾಪ್ತಿಸಿಕೊಳ್ಳಲೇ ಆಗಿದೆ. ಸಮೃದ್ಧಿಯನ್ನು ಬಯಸಿಯೇ ಇರುತ್ತದೆ. ಲಕ್ಷ್ಮೀ ಶಬ್ದದ ಅರ್ಥಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡಾಗ ನಾವು ಬದುಕಿನಲ್ಲಿ ಬಯಸುವುದು ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯಗಳನ್ನೇ ತಾನೆ? ಇದೇ "ಲಕ್ಷ್ಮೀಯ ಆರಾಧನೆ". ಲೇಖನ : ಕೆ.ಎಲ್.ಕುಂಡಂತಾಯ
ಉದ್ಯಾವರ : ಕಳುವುಗೈದ ಲಕ್ಷಾಂತರ ಮೌಲ್ಯದ ಸೊತ್ತು ಸಹಿತ ಕಳ್ಳನ ಬಂಧನ
Posted On: 24 Aug 2023, 12:10 PM
ಉದ್ಯಾವರ : ಇಲ್ಲಿನ ಬೊಳ್ಜೆ ನಿವಾಸಿ ಅನಿತಾ ಡಿ. ಸಿಲ್ವಾ ಅವರ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾಪು ಪೊಲೀಸರು ಬಂಧಸಿದ್ದು ಚಿನ್ನಾಭರಣ, ನಗದು, ಸ್ಕೂಟಿ ಸಹಿತ 8,02,083 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಟಪಾಡಿ ಏಣಗುಡ್ಡೆ ಗ್ರಾಮದ ಅಚ್ಚಡ ನಿವಾಸಿ ಜೋನ್ ಪ್ರಜ್ವಲ್ ಫೆರ್ನಾಂಡಿಸ್ (32) ಬಂಧಿತ ಆರೋಪಿ. ಬಂಧಿತನಿಂದ 6,90,713 ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, ಮೋಟಾರು ಸೈಕಲ್ ಸಹಿತ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಪು : ಚಂದ್ರಯಾನ - 3 ಯಶಸ್ಸಿಗೆ ನವಗ್ರಹ ಯಾಗ, ಪುರಸ್ಸರ ಚಂದ್ರಶಾಂತಿ
Posted On: 23 Aug 2023, 07:55 PM
ಕಾಪು : ಇಸ್ರೋ ನೇತೃತ್ವದಲ್ಲಿ ಉಡಾವಣೆಯಾದ ಚಂದ್ರಯಾನ - 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಪರ್ಯಾಯ ಉಡುಪಿ ಶ್ರೀ ಕೃಷ್ಣಾಪುರ ಮಠದ ಆಡಳಿತಕ್ಕೊಳಪಟ್ಟಿರುವ ಕಾಪು ದಂಡತೀರ್ಥ ಮಠದಲ್ಲಿ ಬುಧವಾರ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ ನಡೆಯಿತು. ದಂಡತೀರ್ಥ ಮಠದ ಆಡಳಿತ ಮೊಕ್ತೇಸರ ಡಾ. ಸೀತಾರಾಮ್ ಭಟ್ ನೇತೃತ್ವದಲ್ಲಿ, ವೇದ ಮೂರ್ತಿ ನಾಗಭೂಷಣ್ ಭಟ್, ವಾಗೀಶ್ ಭಟ್, ಕ್ಷೇತ್ರದ ಅರ್ಚಕರಾದ ಶ್ರೀನಿವಾಸ್ ಭಟ್ ಪೌರೋಹಿತ್ವದಲ್ಲಿ ನವಗ್ರಹ ಯಾಗ, ಚಂದ್ರಶಾಂತಿ ನಡೆಯಿತು.
ಕಾಪು : ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸವಿತಾ ಪೂಜಾರಿ, ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆ
Posted On: 23 Aug 2023, 07:22 PM
ಕಾಪು : ತಾಲೂಕಿನ ಶಿರ್ವ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸವಿತಾ ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ. ಇಬ್ಬರೂ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 34 ಸದಸ್ಯಬಲದ ಶಿರ್ವ ಗ್ರಾ.ಪಂ. ನಲ್ಲಿ 20 ಮಂದಿ ಕಾಂಗ್ರೆಸ್ ಬೆಂಬಲಿತರು ಮತ್ತು 14 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಸವಿತಾ ಪೂಜಾರಿ 20 ಮತ ಮತ್ತು ಆಶಾ ಆಚಾರ್ಯ 14 ಮತ ಗಳಿಸಿದ್ದಾರೆ. ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್ 19 ಮತ ಗಳಿಸಿದ್ದು ಬಿಜೆಪಿ ಬೆಂಬಲಿತ ರಾಜೇಶ್ ಶೆಟ್ಟಿ 15 ಮತ ಗಳಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಒಂದು ಅಡ್ಡ ಮತದಾನವಾಗಿದೆ. ಉಡುಪಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಕೆ. ಪಿ.ಗಿರೀಶ್ ಚುನಾವಣಾಧಿಕಾರಿಯಾಗಿದ್ದರು.
ಮುದರಂಗಡಿ ಗ್ರಾಮಪಂಚಾಯತ್ ಅಧ್ಯಕ್ಷರಾಗಿ ನಮಿತಾ, ಉಪಾಧ್ಯಕ್ಷರಾಗಿ ಮೋಹಿನಿ ಸಿ ಹೆಗ್ಡೆ ಅವಿರೋಧ ಆಯ್ಕೆ
Posted On: 23 Aug 2023, 07:14 PM
ಮದರಂಗಡಿ : ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಎರಡನೇ ಅವಧಿಗಾಗಿ ಬುಧವಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತೆ ನಮಿತಾರವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಮೋಹಿನಿ ಸಿ ಹೆಗ್ಡೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆ ಅಧಿಕಾರಿ ಗುರುಪ್ರಸಾದ್ ಕಾರ್ಯನಿರ್ವಹಿಸಿದರು. ಮುದರಂಗಡಿಯಲ್ಲಿ 15 ಸದಸ್ಯರ ಬೆಂಬಲ ಇದ್ದು, 10 ಬಿಜೆಪಿ ಹಾಗೂ 5 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ . ಅಧ್ಯಕ್ಷ ಸ್ಥಾನವು ಅನುಸೂಚಿತ ಮಹಿಳೆಗೆ ನಿಗದಿತವಾಗಿದ್ದರಿಂದ ಬಿಜೆಪಿಯಲ್ಲಿ ಅನುಸೂಚಿತ ಮಹಿಳೆ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತೆಗೆ ಒಲಿದಿದೆ. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಮೈಕಲ್ ರಮೇಶ್ ಡಿ ಸೋಜಾ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತಿತರರು ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.
ಉಡುಪಿ : ಆರ್.ಎಸ್.ಬಿ ಸಮಾಜದಿಂದ ಚಾತುಮಾ೯ಸ್ಯದಲ್ಲಿರುವ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಶ್ರೀಗಳ ಭೇಟಿ
Posted On: 22 Aug 2023, 08:36 PM
ಉಡುಪಿ : ಗೋವಾ ಬಾಂಧಿವಾಡೆ ಶ್ರೀ ಮಹಾಲಕ್ಮೀ ದೇವಾಲಯದಲ್ಲಿ ಚಾತುಮಾ೯ಸ್ಯ ಕೈಗೊಂಡಿರುವ ಕೈವಲ್ಯ ಗೌಡಪಾದಚಾಯ೯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಶ್ರೀಗಳ ಭೇಟಿ ಮತ್ತು ಕುಲದೇವಾಲಯ ಸಂದಶ೯ನ ಆರ್.ಎಸ್.ಬಿ ಸಮಾಜದ ವತಿಯಿಂದ ಆ.20 ಆದಿತ್ಯವಾರ ನಡೆಯಿತು. ಈ ಸಂದಭ೯ದಲ್ಲಿ ಸ್ವಾಮೀಜಿಯವರನ್ನು ವಿಶೇಷವಾಗಿ ಗೌರವಿಸಲಾಯಿತು. ನೂರಾರು ಜನ ಸದಸ್ಯರು ಭಾಗವಹಿಸಿದ್ದರು.
ಶಿರ್ವ : ಹಿಂದೂ ಜೂನಿಯರ್ ಕಾಲೇಜು - ವಿದ್ಯಾರ್ಥಿಗಳ ದತ್ತು ಸ್ವೀಕಾರ ; ವಿದ್ಯಾರ್ಥಿ ವೇತನ ಕಾರ್ಯಕ್ರಮ
Posted On: 22 Aug 2023, 08:29 PM
ಶಿರ್ವ : ಸ್ಥಳೀಯ ಹಿಂದೂ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳ ದತ್ತು ಸ್ವೀಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಜರಗಿತು. ಹಿಂದೂ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮಾನಂದ್ ಶೆಟ್ಟಿಗಾರ್ ಇವರು ವಹಿಸಿದ್ದರು. ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀ.ವಿ ಸುಬ್ಬಯ್ಯ ಹೆಗ್ಡೆಯವರು ದೀಪ ಪ್ರಜ್ವಲನ ಮಾಡಿದರು. ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಇನ್ನಾ ರಾಜೇಂದ್ರ ಭಟ್ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವೂ ಸೇರಿದಂತೆ ಕಾಲೇಜಿನಲ್ಲಿ ನಡೆಯುವ ಕ್ರೀಡಾಕೂಟ, ವಾರ್ಷಿಕೋತ್ಸವ, ನಿರ್ವಹಣಾ ಕೆಲಸಗಳಿಗೆ, ಹೀಗೆ ಒಟ್ಟು ರೂಪಾಯಿ 4 ಲಕ್ಷ ದ ಕೊಡುಗೆಗಳನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಉಪಾನ್ಯಾಸಕರಾದ ವಿಷ್ಣು ಭಟ್ ದಂಪತಿಗಳನ್ನು ಹಾಗೂ ಕಳೆದ ಬಾರಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ನೇ ರಾಂಕನ್ನು ಗಳಿಸಿದ ಕುಮಾರಿ ಅಂಶಿ.ಎಸ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮುಂಬೈ ಸಮಿತಿಯ ಗೌರವ ಸಲಹೆಗಾರರಾದ ಕುತ್ಯಾರು ಕಿಶೋರ್ ಶೆಟ್ಟಿ, ಮುಂಬೈ ಸಮಿತಿಯ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಸೊರ್ಕಳ, ಉಪಾಧ್ಯಕ್ಷರಾದ ಕೋಡು ಜಯಪ್ರಕಾಶ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಭಾಸ್ಕರ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ವಸಂತಿ ಬಾಯಿ ಹಾಗೂ ಕೋಶಾಧಿಕಾರಿ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೇಂಜ ಪವನ್ ಶೆಟ್ಟಿ ವಂದಿಸಿದರು.
ಆಗಸ್ಟ್ 25 : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ - 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ
Posted On: 22 Aug 2023, 07:43 PM
ಶಿರ್ವ : ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ ವತಿಯಿಂದ ಆಗಸ್ಟ್ 25, ಶುಕ್ರವಾರ ಗಾಂಧಿನಗರ ಕಲಾವೃಂದದ ವೇದಿಕೆಯಲ್ಲಿ 10ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಜರಗಲಿದೆ. ಈ ನಿಮಿತ್ತ ಬೆಳಗ್ಗೆ ಗಂಟೆ 9 ಕ್ಕೆ ಸಾಮೂಹಿಕ ಪ್ರಾರ್ಥನೆ, ಗಂಟೆ 9.30ಕ್ಕೆ ಕಲಶ ಪ್ರತಿಷ್ಠೆ, ಗಂಟೆ 10ಕ್ಕೆ ಚೂಡಿ ಪೂಜೆ, ಗಂಟೆ 10.15ಕ್ಕೆ ಕುಂಕುಮಾರ್ಚನೆ, ಗಂಟೆ 11.45ಕ್ಕೆ ಭಜನಾ ಕಾರ್ಯಕ್ರಮ, ಗಂಟೆ 12.30ಕ್ಕೆ ಮಂಗಳಾರತಿ ಮಹಾಪೂಜೆ, ಗಂಟೆ 1ಕ್ಕೆ ಅನ್ನಸಂತರ್ಪಣೆ ಜರಗಲಿದೆ ಎಂದು ಶ್ರೀ ವಿಷ್ಣು ಕಲಾವೃಂದ ಗಾಂಧಿನಗರ, ಶಿರ್ವ ಇದರ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಟಪಾಡಿ ಗ್ರಾಮ ಪಂಚಾಯತ್ : ಅಧ್ಯಕ್ಷರಾಗಿ ಪ್ರಭಾ ಶೆಟ್ಟಿ, ಉಪಾಧ್ಯಕ್ಷರಾಗಿ ಸುಗುಣ ಆಯ್ಕೆ
Posted On: 22 Aug 2023, 07:22 PM
ಕಟಪಾಡಿ : ಇಲ್ಲಿನ ಗ್ರಾಮ ಪಂಚಾಯತಿಯ ಎರಡನೇ ಸಾಲಿನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮಂಗಳವಾರ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಪ್ರಭಾ ಶೆಟ್ಟಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸುಗುಣ ಆಯ್ಕೆ ಆಗಿದ್ದಾರೆ. ಕಟಪಾಡಿ ಗ್ರಾಮ ಪಂಚಾಯತಿಯಲ್ಲಿ 26 ಸದಸ್ಯರ ಬಲವಿದ್ದು, ಬಿಜೆಪಿ ಬೆಂಬಲಿತರಾಗಿ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಅಶೋಕ್ ರಾವ್ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತೆ ಕವಿತಾ ಸುವರ್ಣ ಸ್ಫರ್ಧಿಸಿದ್ದರು. 14 ಮತಗಳನ್ನು ಪಡೆದ ಪ್ರಭಾ ಶೆಟ್ಟಿ ವಿಜಯಿ ಆಗಿದ್ದಾರೆ. ಅಶೋಕ್ ರಾವ್ ಮತ್ತು ಕವಿತಾ ಸುವರ್ಣ 12 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಗೆಲುವು ಸಾಧಿಸಿದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಆಶಾ ಕಟಪಾಡಿ, ವಿನಯ ಬಳ್ಳಾಲ್, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದರು.
ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸಮಾರಿಗುಡಿ ದೇವಳದ ಕರಸೇವೆಯಲ್ಲಿ ಇನ್ನಂಜೆ ಗ್ರಾಮಸ್ಥರು
Posted On: 22 Aug 2023, 11:33 AM
ಕಾಪು : ಪ್ರಥಮ ಹಂತದಲ್ಲಿ ಸುಮಾರು 30ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಳದಲ್ಲಿ ಈಗಾಗಲೇ ಕರಸೇವೆಯನ್ನು ಮಾಡಿರುವ ಇನ್ನಂಜೆ ಗ್ರಾಮಸ್ಥರು ದೇವಳದ ಪ್ರದಕ್ಷಿಣಾ ಪಥದ ಸುತ್ತಲೂ ಸ್ವಚ್ಛತೆಯನ್ನು ಮಾಡುವ ಮೂಲಕ ಕರಸೇವೆಯನ್ನು ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಇನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷರಾದ ಸದಾಶಿವ ಪೂಜಾರಿ ಮಜಲು, ಶ್ರೀದೇವಿ ಭಜನಾ ಮಂಡಳಿಯ ಅಧ್ಯಕ್ಷರಾದ ಕೆ. ಲಕ್ಷ್ಮಣ ಶೆಟ್ಟಿ ಮಂಡೇಡಿ, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುಮಲತಾ ಮತ್ತು ಯುವಸೇನೆ ಮಡುಂಬು ತಂಡದ ಅಧ್ಯಕ್ಷರಾದ ಸುನಿಲ್ ಸಾಲ್ಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
