Updated News From Kaup
ಉಡುಪಿ : ಕೊರಗಜ್ಜ ದೈವದ ದೊಂದಿ ಬೆಳಕಿನ ಕೋಲ ಸಂಪನ್ನ
Posted On: 25 Jul 2023, 10:30 AM
ಉಡುಪಿ : ಜಿಲ್ಲೆಯ ಇತಿಹಾಸ ಪ್ರಸಿದ್ಧ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಜುಲೈ 22ರಂದು ಬೊಬ್ಬರ್ಯ ಯುವ ಸೇವಾ ಸಮಿತಿ ಹಾಗೂ ಸುಪ್ರಸಾದ್ ಶೆಟ್ಟಿ ಅಭಿಮಾನಿ ಬಳಗ ಹಾಗೂ ಮಮತಾ ಶೆಟ್ಟಿ ಅಭಿಮಾನಿ ಬಳಗ ಉಡುಪಿ ಇವರ ವತಿಯಿಂದ ಕೊರಗಜ್ಜ ದೈವಕ್ಕೆ ದೊಂದಿ ಬೆಳಕಿನ ಸಿರಿ ಸಿಂಗಾರ ಕೋಲ ಸೇವೆ ಜರಗಿತು. ಈ ಸಂದರ್ಭದಲ್ಲಿ ಬೊಬ್ಬರ್ಯ ಯುವ ಸೇವಾ ಸಮಿತಿ ಗೌರವಾಧ್ಯಕ್ಷರು ಹಾಗೂ ಅಭಿಮಾನಿ ಬಳಗ ಸಂಚಾಲಕರಾದ ವಿನೋದ್ ಶೆಟ್ಟಿ, ಸುಪ್ರಸಾದ್ ಶೆಟ್ಟಿ, ಮಮತಾ ಶೆಟ್ಟಿ, ಸಚಿಂದ್ರ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಸಮಿತ ಶೆಟ್ಟಿ, ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಭವಿಷ್, ಪ್ರದೀಪ್ ಶೆಟ್ಟಿ, ಸುಧಾಕರ್ ಶೆಟ್ಟಿ, ಬನ್ನಂಜೆ ಗಣೇಶ್ ದೇವಾಡಿಗ, ಸುಧಾಕರ್ ಮಡಿವಾಳ, ವಿಜಯ ಮಡಿವಾಳ, ಗೌರಿ ಮತ್ತಿತರರು ಉಪಸ್ಥಿತಿಯಿದ್ದರು.
ಬಂಟಕಲ್ಲು : ವಿದ್ಯಾರ್ಥಿಗಳಿಗೆ ಅಭಿನಂದನೆ ; ವನಮಹೋತ್ಸವ ಆಚರಣೆ
Posted On: 25 Jul 2023, 10:21 AM
ಬಂಟಕಲ್ಲು : ಶಾಲಾ ಜೀವನದಲ್ಲಿ ಪಾಠದೊಂದಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರವನ್ನು ಸಮಗ್ರವಾಗಿ ಅರಿತು ಮುನ್ನಡೆದರೆ ಓರ್ವ ವಿದ್ಯಾರ್ಥಿ ಉತ್ತಮ ಗುಣಮಟ್ಟದ ಪ್ರಜೆಯಾಗಿ ಬೆಳೆಯಬಲ್ಲ ಎಂದು ಹೇರೂರು ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿಯವರು ಹೇಳಿದರು. ಅವರು ಬಂಟಕಲ್ಲು ಆಟೋರಿಕ್ಷಾ ಚಾಲಕ ಮತ್ತು ಮಾಲಕರ ಸಂಘ, ವಿಕಾಸ ಸೇವಾ ಸಮಿತಿ ಮತ್ತು ಮಹಿಳಾ ಬಳಗ ಹೇರೂರು ಹಾಗೂ ಹೇರೂರು ಫ್ರೆಂಡ್ಸ್ ಇದರ ವತಿಯಿಂದ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 16 ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಈ ಸಂದರ್ಭ ಹಿರಿಯ ಕೃಷಿ ಕಾರ್ಮಿಕೆ ಲೀಲಾವತಿ ಅಚ್ಚುತ ಆಚಾರ್ಯ ಇವರನ್ನು ಭಜನಾ ಮಂಡಳಿಯ ಮಹಿಳಾ ಬಳಗದ ಅಧ್ಯಕ್ಷೆ ಸುಂದರಿ ರಾವ್ ಸನ್ಮಾನಿಸಿ, ಹಿರಿಯರನ್ನು ಗುರುತಿಸಿ ಗೌರವಿಸುವುದು ಯುವ ಪೀಳಿಗೆಗೆ ಮಾರ್ಗದರ್ಶಿತ್ವದ ಸಂದೇಶ ಕೊಡುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವನಮಹೋತ್ಸವ ಕಾರ್ಯಕ್ರಮವನ್ನು ಹಿರಿಯ ಉದ್ಯಮಿ ದೇವದಾಸ್ ಜೋಗಿ ಅವರು ಸಸಿ ವಿತರಿಸುವ ಮೂಲಕ ಉದ್ಘಾಟಿಸಿದರು. ಉಮೇಶ್ ಪ್ರಭು ರವರು ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉತ್ತಮವಾಗಿ ಬೆಳೆದು ಮಾತೃಭೂಮಿಗೆ ಉತ್ತಮ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಹೇರೂರು ಫ್ರೆಂಡ್ಸ್ ಕಾರ್ಯದರ್ಶಿ ಕುಮಾರಿ ದೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ವರ್ಷಿಣಿ ಪ್ರಾರ್ಥಿಸಿದರು. ಡೇನಿಸ್ ಡಿಸೋಜಾ ಸ್ವಾಗತಿಸಿದರು. ವಿಕಾಸ ಸೇವಾ ಸಮಿತಿ ಅಧ್ಯಕ್ಷ ಮಾಧವ ಆಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ದಿವ್ಯ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ಗೌರವಾಧ್ಯಕ್ಷ ಮಾಧವ ಕಾಮತ್, ಹೇರೂರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಜೋಗಿ ಸಹಕರಿಸಿದ್ದರು.
ಕಾಪು : ಟೀಮ್ ಭಗ್ವ ತಂಡದಿಂದ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ
Posted On: 24 Jul 2023, 06:57 PM
ಕಾಪು : ಇಲ್ಲಿನ ಟೀಮ್ ಭಗ್ವಾ ತಂಡದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಕಳ ತಾಲೂಕಿನ ಕಲ್ಯಾ ಹಾಳೆಕಟ್ಟೆ ನಿವಾಸಿ ಆನಂದ್ ಶೆಟ್ಟಿಯವರ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಾಯಿತು. ಈ ಸಂದರ್ಭ ಟೀಮ್ ಭಗ್ವದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾರಿ ಮಳೆ : ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ಜುಲೈ 25 ರಂದು ರಜೆ ಘೋಷಣೆ
Posted On: 24 Jul 2023, 06:50 PM
ಉಡುಪಿ: ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಆರೆಂಜ್ ಅಲರ್ಟ್ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 25 ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.
ಕಟಪಾಡಿ : ಮೂಡಬೆಟ್ಟುವಿನಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿತ
Posted On: 24 Jul 2023, 12:25 PM
ಕಟಪಾಡಿ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಬೆಟ್ಟು ನಿವಾಸಿ ಗೋಪಾಲ ಪಾಣರ ಅವರ ಮನೆಯ ಗೋಡೆ ಭಾರೀ ಮಳೆಗೆ ಕುಸಿದು ಬಿದ್ದಿದೆ. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕರು ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಸ್ ಬಲ್ಲಾಳ್, ಸವಿತಾ ಎ ಶೆಟ್ಟಿ, ಸುಜಲಾ ಪೂಜಾರಿ, ಕೋಟೆ ಗ್ರಾಮ ಪಂಚಾಯತ್ ಸದಸ್ಯರಾದ ರತ್ನಾಕರ, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿಗಳಾದ ಗುರುಕೃಪಾ ರಾವ್, ಶಕ್ತಿ ಕೇಂದ್ರದ ಸಂಚಾಲಕರಾದ ನಿತಿನ್, ಬೂತ್ ಅಧ್ಯಕ್ಷರಾದ ಕರುಣಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ರಾಮ ಪಾಣರ, ಪಕ್ಷದ ಪ್ರಮುಖರಾದ ಮುರಳಿಧರ ಪೈ, ಶಾಂತ ಪೂಜಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ನಾಳೆ (ಜುಲೈ 24) : ಭಾರೀ ಮಳೆ - ಉಡುಪಿ ಜಿಲ್ಲೆಯ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ
Posted On: 23 Jul 2023, 10:01 PM
ಉಡುಪಿ : ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನಾಳೆಯೂ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ರಜೆ ಘೋಷಿಸಿ ಆದೇಶಿಸಿದ್ದಾರೆ.
ಉಡುಪಿ : ಸಾಲುಮರದ ತಿಮ್ಮಕ್ಕನಿಗೆ ಗೌರವಾರ್ಪಣೆ
Posted On: 23 Jul 2023, 04:40 PM
ಉಡುಪಿ : ನಮ್ಮ ಮನೆ ನಮ್ಮ ಮರ ತಂಡದಿಂದ ಉಡುಪಿಯ ಬುಡ್ನಾರಿನ ಛಾಯಾನಟ್ ಮನೆಯಲ್ಲಿ ಪದ್ಮಶ್ರೀ ಪುರಸ್ಕತೆ ನಾಡೋಜ ಸಾಲುಮರದ ತಿಮ್ಮಕ್ಕ ಅವರನ್ನು ಜಯಕರ್ ಶೆಟ್ಟಿ ಇಂದ್ರಾಳಿ ಅವರು ಗೌರವಿಸಿದರು. ಸಾಲುಮರದ ತಿಮ್ಮಕ್ಕ ನೀಡಿದ ಹಣ್ಣಿನ ಗಿಡಗಳನ್ನು ಇದೇ ಪರಿಸರದಲ್ಲಿ ನೆಡಲಾಯಿತು. ಇದೇ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಮಗ ಉಮೇಶ್, ವನಸಿರಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಉಪಾಧ್ಯಕ್ಷೆ ಸಂಧ್ಯಾ ಶೆಣೈ, ನಾಗರಾಜ್ ಹೆಬ್ಬಾರ್ ವಿಘ್ನೇಶ್ವರ ಅಡಿಗ, ಮಧುಸೂದನ್ ಹೇರೂರು, ಉಡುಪಿಯ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಹರೀಶ್ಚಂದ್ರ, ಡಾ. ವ್ಯಾಸರಾಯ ತಂತ್ರಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್. ಪಿ, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ನಮ್ಮ ಮನೆ ನಮ್ಮ ಮರ ತಂಡದ ಅವಿನಾಶ್ ಕಾಮತ್, ಗುರುರಾಜ್ ಸನಿಲ್, ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು , ಪ್ರೊ .ಕೃಷ್ಣಯ್ಯ, ಕಲಾವಿದರಾದ ಪುರುಷೋತ್ತಮ ಅಡ್ವೆ , ಜನಾರ್ದನ ಹಾವಂಜೆ, ಗಿರಿಜಾ ಹೆಲ್ತ್ ಕೇರ್ ಮಾಲಕ ರವೀಂದ್ರ ಕಡೆಕಾರ್ , ರಾಘವೇಂದ್ರ ಪ್ರಭು ಕರ್ವಾಲು, ರಾಘವೇಂದ್ರ ಅಜೆಕಾರು, ರಾಮಾಂಜಿ, ರೋಟರಾಕ್ಟ್ ಕ್ಲಬ್ ಉಡುಪಿ ಇದರ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.
ಪಡುಬಿದ್ರಿ : ಕಡಲ್ಕೊರೆತದ ಭೀತಿಯಲ್ಲಿ ಎಂಡ್ ಪಾಯಿಂಟ್ ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್
Posted On: 23 Jul 2023, 04:24 PM
ಪಡುಬಿದ್ರಿ : ಅಂತರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಎಂಡ್ ಪಾಯಿಂಟ್ ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್ ಕಡಲ್ಕೊರೆತದ ಭೀತಿಯಲ್ಲಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಪ್ರಬಂಧಕ ವಿಜಯ ಶೆಟ್ಟಿ, ಎರಡು ದಿನಗಳಿಂದ ಕಡಲ್ಕೊರೆತ ಜಾಸ್ತಿ ಇರುವುದರಿಂದ ಪ್ರವಾಸಿಗರಿಗೆ ಸಮುದ್ರ ದಡಕ್ಕೆ ಹೋಗಲು ನಿಬಂ೯ಧ ವಿಧಿಸಿದ್ದೆವು. ಒಳಗಿನ ಗಾರ್ಡನ್ ಏರಿಯಾಕ್ಕೆ ಬರಲು ಅವಕಾಶವಿತ್ತು. ಮುಂಜಾಗ್ರತಾ ಕ್ರಮವಾಗಿ ಭಾನುವಾರ 3 ಗಂಟೆಯಿಂದ ಪ್ರವಾಸಿಗರಿಗೆ ನಿಬಂ೯ಧಿಸಲಾಗಿದೆ. ಜೋರಾದ ಕಡಲ ಅಲೆಗಳಿಗೆ ರಕ್ಷಣೆಗಾಗಿ ಕಟ್ಟಿದ ಕಲ್ಲಿನ ಕಟ್ಟೆ ಕೊಚ್ಚಿಕೊಂಡು ಹೋಗಿದ್ದು, ವಾಚ್ ಟವರ್ ಕುಸಿಯುವ ಭೀತಿಯಲ್ಲಿದೆ. ಇದರಿಂದ ಸ್ವಲ್ಪ ಮಟ್ಟಿನ ನಷ್ಟವಾಗಿದೆ ಎಂದರು. ಅಂತರಾಷ್ಟ್ರೀಯ ಮಾನ್ಯತೆ ಪಡೆದ ದೇಶದ ಹನ್ನೆರಡು ಬೀಚ್ ಗಳಲ್ಲಿ ಇದೂ ಒಂದಾಗಿದ್ದು, ಕಾಮಿನಿ ನದಿ ಮತ್ತು ಸಮುದ್ರದ ನಡುವೆ ಇರುವ ಈ ಪ್ರದೇಶ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.
ಎರ್ಮಾಳು : ಕೆಸರ್ಡ್ ಗೊಬ್ಬು ಕ್ರೀಡಾಕೂಟ
Posted On: 23 Jul 2023, 01:46 PM
ಎರ್ಮಾಳು : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಹಾಗೂ ಬಂಟರ ಕ್ರೀಡಾ ವಿಭಾಗಧ ಆಶ್ರಯದಲ್ಲಿ ಆದಿತ್ಯವಾರ ಎರ್ಮಾಳು ಬರ್ಪಾಣಿ ಜಗನ್ನಾಥ ಶೆಟ್ಟಿಯವರ ಗದ್ದೆಯಲ್ಲಿ ಕೆಸರ್ಡ್ ಗೊಬ್ಬು ಕ್ರೀಡಾ ಕೂಟ ಜರಗಿತು. ಮಾಜಿ ಕಸ್ಟಂಸ್ ಅಧಿಕಾರಿ, ಜಿಲ್ಲಾ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಕ್ರೀಡೆ ಪ್ರಶಸ್ತಿ ಪಡೆಯುವ ಸಲುವಾಗಿ ಮಾತ್ರವಲ್ಲದೆ, ದೇಹದ ಆರೋಗ್ಯ ಕಾಪಾಡಲು ಬಹು ಮುಖ್ಯ. ಕ್ರೀಡೆಯಲ್ಲಿ ಸಾಧನೆಯ ಮುಖಾಂತರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಸಾಧ್ಯ ಎಂದರು. ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪಡುಬಿದ್ರಿ ಗ್ರಾಮ ಪಂಚಾಯತ್ ಅದ್ಯಕ್ಷ ರವಿ ಶೆಟ್ಟಿ, ಪುಣೆ ಉದ್ಯಮಿ ಬಾಲಚಂದ್ರ ಎಲ್. ಶೆಟ್ಟಿ ಎರ್ಮಾಳು, ಎಸ್.ಇ.ಝಡ್ ಜನರಲ್ ಮೆನೇಜರ್ ಅಶೋಕ್ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಉದ್ಯಮಿ ಮಿಥುನ್ ಆರ್ ಹೆಗ್ಡೆ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕಾರ್ಯದರ್ಶಿ, ಪಡುಹಿತ್ಲು ಪ್ರಕಾಶ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಸಂತೋಷ್ ಶೆಟ್ಟಿ ಬರ್ಪಾಣಿ, ಯುವ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಕ್ರೀಡಾ ಸಂಚಾಲಕ ವಿನಯ್ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನವೀನ್ ಎನ್ ಶೆಟ್ಟಿ ಸ್ವಾಗತಿಸಿದರು. ಪದ್ರ ಜಯ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಎಸ್. ಶೆಟ್ಟಿ ವಂದಿಸಿದರು.
ಪಡುಬಿದ್ರಿ : ಅಪಾಯಕ್ಕೆ ಸಿಲುಕಿದ್ದ ಅಪರೂಪದ ಹಾಕ್ಸ್ ಬಿಲ್ ಸೇರಿದಂತೆ ಒಟ್ಟು 6 ಕಡಲಾಮೆಗಳ ರಕ್ಷಣೆ
Posted On: 22 Jul 2023, 06:22 PM
ಪಡುಬಿದ್ರಿ : ಬಲೆಗೆ ಸಿಲುಕಿ ಒದ್ದಾಡುತ್ತಾ ಸಮುದ್ರ ತೀರಕ್ಕೆ ಬಂದಿದ್ದ ಹಾಕ್ಸ್ ಬಿಲ್ ಸೇರಿದಂತೆ ಒಟ್ಟು 6 ಕಡಲಾಮೆಗಳನ್ನು ಪಡುಬಿದ್ರಿ ಬ್ಲೂ ಫ್ಲ್ಯಾಗ್ ಸಿಬ್ಬಂದಿ ರಕ್ಷಿಸಿ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಕಡಲಬ್ಬರವಿದ್ದರೂ ಸಮುದ್ರಕ್ಕೆ ಇಳಿದ ಬ್ಲೂಫ್ಲ್ಯಾಗ್ ಬೀಚ್ನ ಮೇಲ್ವಿಚಾರಕ ಕಿರಣ್ರಾಜ್ ಮತ್ತವರ ತಂಡ ಬಲೆಯಲ್ಲಿ ಸಿಲುಕಿದ್ದ ಕಡಲಾಮೆಯನ್ನು ಸಮುದ್ರದ ಮೇಲಕ್ಕೆ ತಂದು ರಕ್ಷಿಸಿದ್ದಾರೆ. ರಕ್ಷಣಾ ತಂಡದಲ್ಲಿ ಸ್ಥಳೀಯರಾದ ದಿನರಾಜ್ ಕುಂದರ್, ಹೇಮರಾಜ್ ಕುಂದರ್, ಕಾರ್ತಿಕ್, ಬೀಚ್ ಸಿಬ್ಬಂದಿ ಸತ್ಯವತಿ, ಸುಮನ್, ಯತೀಶ್ ಮತ್ತಿತರರಿದ್ದರು.
