Updated News From Kaup

ನಂದಿಕೂರು : ಆಚಾರ್ಯಪುರುಷ , ಯಕ್ಷಕಲಾ ಕುಸುಮ - ಗೌರವಾರ್ಪಣೆ, ಸಮ್ಮಾನ

Posted On: 13-04-2023 03:32PM

ನಂದಿಕೂರು : ಇಲ್ಲಿಯ ಭಾಗವತ ಪ್ರತಿಷ್ಠಾನದ ಇಪ್ಪತ್ತಮೂರನೇ ವರ್ಷದ ಸಮ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮವೂ 'ಮೋಹನ ರಾವ್ - ಜಯಲಕ್ಷ್ಮೀ ರಾವ್' ಸಂಸ್ಮರಣೆಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಭಾರತೀಯ ಋಷಿ ಪರಂಪರೆಯ ಸಾಂಸ್ಕೃತಿಕ ಆವರಣವನ್ನು ಮತ್ತೆ ಸ್ಥಾಪಿಸಿದ ನಾಲ್ಕು ವೇದ,ವೇದಾಂತ, ತರ್ಕ,ವ್ಯಾಕರಣ,ಪೌರೋಹಿತ್ಯ ,ಧರ್ಮಶಾಸ್ತ್ತಗಳಲ್ಲಿ ಉತ್ತೀರ್ಣರಾಗಿ ಭಾಗವತ,ಮಹಾಭಾರತ ಗ್ರಂಥಗಳನ್ನು ಅಧ್ಯಯನ ಮಾಡಿರುವ , ಶ್ರೀ ವಿದ್ಯಾಮಾನ್ಯರ್ತಿರ್ಥರು, ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ ಜಿಲ್ಲೆಯ ಪ್ರಸಿದ್ಧ ವೈದಿಕ ವಿದ್ವಾಂಸರಿಂದ ಪಾಠಕೇಳಿದ, ಗುರುಮನೆ ಸ್ಥಾಪಿಸಿ‌‌ ನಿಜ‌ ಅರ್ಥದ ಗುರುವಾದ ವೇ.ಮೂ. ಪ.ಸು.ಲಕ್ಷ್ಮೀಶ ಆಚಾರ್ಯ ಅವರನ್ನು‌ "ಆಚಾರ್ಯಪುರುಷ" ಎಂಬ ಉಪಾದಿಯೊಂದಿಗೆ ಗೌರವಿಸಲಾಯಿತು.

ಹವ್ಯಾಸಿ ಯಕ್ಷಗಾನ‌ ಕಲಾವಿದ, ಕಲಾಪೋಷಕ, ಸಮಾಜ ಸೇವಕರಾಗಿ ಗುರುತಿಸಿಕೊಂಡು ಕರ್ನಿರೆಯಲ್ಲಿ‌ ಯಕ್ಷಗುರುಗಳಾದ ಪು.ಶ್ರೀನಿವಾಸ ಭಟ್ಟ ಕಟೀಲು ಹಾಗೂ ಪುಚ್ಚೆಕೆರೆ ಕೃಷ್ಣ ಭಟ್ ಅವರ ಸಾರಥ್ಯದಲ್ಲಿ ಸಂಪನ್ನಗೊಂಡ ಯಕ್ಷಗಾನ ತರಬೇತಿ ಸಂದರ್ಭದಲ್ಲಿ ತರಬೇತಿ ಪಡೆದು ಹಿಮ್ಮೇಳ, ನಾಟ್ಯ,ಅರ್ಥಗಾರಿಕೆಯ ಅಭ್ಯಾಸಮಾಡಿರುವ , ಸಂಘ ಸಂಸ್ಥೆಗಳ ಆಟ - ಕೂಟಗಳಲ್ಲಿ‌ ಪಾಲ್ಗೊಂಡು ತಮ್ಮದೇ ಆದ ಶೈಲಿಯೊಂದಿಗೆ ಜನಪ್ರಿಯರಾಗಿದ್ದ ಕರ್ನಿರೆ ಹರಿಶ್ಚಂದ್ರ ಶೆಟ್ಟಿ ಅವರನ್ನು "ಯಕ್ಷಕಲಾ ಕುಸುಮ‌" ಎಂಬ ಉಪಾದಿಯೊಂದಿಗೆ ಸಮ್ಮಾನಿಸಲಾಯಿತು.

ಚತುರ್ವೇದಿ,ಶ್ರೀ ಕ್ಷೇತ್ರ ಕದ್ರಿಯ ಅರ್ಚಕ ವೇ.ಮೂ.ಪ್ರಭಾಕರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ನಂದಿಕೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧ್ವರಾಯ ಭಟ್ ಶುಭಹಾರೈಸಿದರು. ವೇ.ಮೂ.ವೆಂಕಟೇಶ ಪುರಾಣಿಕ ಅವರು ಆಶೀರ್ವದಿಸಿದರು. ನಿವೃತ್ತ ಉಪನ್ಯಾಸಕ, ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದ ವೈ.ರಾಮಕೃಷ್ಣ ರಾವ್, ಪತ್ರಕರ್ತ ರಾಮಚಂದ್ರ ಆಚಾರ್ಯ,ವಿಶ್ವನಾಥ ಶೆಟ್ಟಿ ಕರ್ನಿರೆ, ಎ .ಪಿ. ಜೆನ್ನಿ , ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ ಉಪಸ್ಥಿತರಿದ್ದರು.

ಭಾಗವತ ಪ್ರತಿಷ್ಠಾನದ ನಾಗರಾಜ ರಾವ್ ಸ್ವಾಗತಿಸಿ, ವಂದಿಸಿದರು‌.ರಾಧಾಕೃಷ್ಣ ರಾವ್, ರಾಘವೇಂದ್ರ ರಾವ್, ಹರಿಕೃಷ್ಣ ರಾವ್, ಶೀಕಾಂತ ರಾವ್, ಅನುಪಮಾ ಪ್ರಭಾಕರ ಅಡಿಗ, ಅಮೃತಾ ಹರಿಕೃಷ್ಣ ರಾವ್ ಪಾಲ್ಗೊಂಡಿದ್ದರು. ವಿಜಯ ಶೆಟ್ಟಿ ಕೊಳಚೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಗುರುದಕ್ಷಿಣೆ ತಾಳಮದ್ದಳೆ ನಡೆಯಿತು.

ರಾಜ್ಯ ವಿಧಾನಸಭೆ ಚುನಾವಣೆ : ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ

Posted On: 13-04-2023 03:24PM

ಕಾಪು : ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಮೇ 10 ರಂದು ಮತದಾನ, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಬಹುದಾಗಿದೆ. ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಗೆ ಆಗಮಿಸಬಹುದು. ಆದ್ರೆ, ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶವಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ 3 ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿರುತ್ತದೆ.

ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದೆ. ಹೆಚ್ಚಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭ ಶುಭ ದಿನ, ಘಳಿಗೆ ಇತ್ಯಾದಿಗಳನ್ನು ನೋಡುತ್ತಾರೆ. ಎಲ್ಲಾ ಪ್ರಕ್ರಿಯೆಯು ಮುಗಿದ ಬಳಿಕ ಪ್ರಚಾರದ ಭರಾಟೆಯೊಂದಿಗೆ ವಿಧಾನಸಭೆ ಚುನಾವಣೆ ರಂಗೇರಲಿದೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲಿವೆ.

ಕಾಪು : ನಾಗೇಶ್ ಸುವರ್ಣ ನಿಧನ

Posted On: 12-04-2023 09:46AM

ಕಾಪು : ಇಲ್ಲಿನ ಪುರಸಭೆಯ ಮಾಜಿ ಸದಸ್ಯ ನಾಗೇಶ್ ಸುವರ್ಣ (54) ಅವರು ಮಂಗಳವಾರ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು.

ಕಾಪು ಪುರಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದ ಅವರು, ಕಾಪು ಗ್ರಾ.ಪಂ. ಸದಸ್ಯ, ಯುವವಾಹಿನಿ ಕಾಪು ಘಟಕದ ಸ್ಥಾಪಕಾಧ್ಯಕ್ಷ, ಕಾಪು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಗರೋಡಿ ಸೇವಾ ಯುವ ಸಮಿತಿ ಅಧ್ಯಕ್ಷ, ಪಡು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ, ಕಾಪು ಬಿಲ್ಲವರ ಸಹಾಯಕ ಸಂಘದ ಜತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಮೃತರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ನಾಗೇಶ್ ಸುವರ್ಣರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಪಡುಬಿದ್ರಿ : ಚುನಾವಣೆಯ ಪ್ರಯುಕ್ತ ಪೋಲಿಸ್ ಪಥಸಂಚಲನ

Posted On: 11-04-2023 11:00PM

ಪಡುಬಿದ್ರಿ : ವಿಧಾನಸಭಾ ಚುನಾವಣೆಯ ಪ್ರಯುಕ್ತ ಪಡುಬಿದ್ರಿಯಲ್ಲಿ ಶಿರ್ವ, ಕಾಪು, ಪಡುಬಿದ್ರಿ ಪೋಲಿಸರು ಹಾಗೂ ಸಿ ಆರ್ ಪಿ ತಂಡದಿಂದ ಇಂದು ಸಂಜೆ ಪಥಸಂಚಲನ ನಡೆಯಿತು.

ಪಥಸಂಚಲನವು ಕಾರ್ಕಳ ರಸ್ತೆಯಿಂದ ಮೊದಲ್ಗೊಂಡು ಪಡುಬಿದ್ರಿ ಪೇಟೆಯ ಮಾರ್ಗವಾಗಿ ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿ ಹಿಂತಿರುಗಿದೆ.

ಈ ಸಂದರ್ಭ ಕಾರ್ಕಳ ಡಿ ವೈ ಎಸ್ ಪಿ ಅರವಿಂದ ಕಲಗುಜ್ಜಿ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ ಸಿ ಪುವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ ಹಾಗೂ ಮೂರು ಠಾಣೆಯ ಪೊಲೀಸರು ಉಪಸ್ಥಿತರಿದ್ದರು.

ಉಡುಪಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಯಶ್‌ಪಾಲ್‌ ಎ. ಸುವರ್ಣ ಆಯ್ಕೆ

Posted On: 11-04-2023 10:31PM

ಉಡುಪಿ : ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಯಶ್‌ಪಾಲ್‌ ಎ. ಸುವರ್ಣರನ್ನು ಬಿಜೆಪಿ‌ ಪಕ್ಷ ಆಯ್ಕೆ ಮಾಡಿದೆ.

ಉಡುಪಿ ನಗರಸಭೆಯಲ್ಲಿ 3 ಬಾರಿ ಅಜ್ಜರಕಾಡು ವಾರ್ಡಿನಿಂದ ಸದಸ್ಯರಾಗಿ ಸೇವೆ, ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ದುಡಿದ ಅನುಭವ, ರಾಜ್ಯ ಬಿಜೆಪಿ ಯುವ ಮೋರ್ಚ ರಾಜ್ಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದು, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಬಿಜೆಪಿ ಸಹಕಾರಿ ಹಾಗೂ ಮೀನುಗಾರಿಕಾ ಪ್ರಕೋಷ್ಟದ ಸದಸ್ಯರಾಗಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ರಾಜ್ಯ ಬಿಜೆಪಿ ಮೀನುಗಾರರ ಪ್ರಕೋಷ್ಟದ ರಾಜ್ಯ ಸಂಚಾಲಕರಾಗಿ, ಪ್ರಸ್ತುತ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅನುಭವದ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿಜೆಪಿ ಪಕ್ಷದ ಪ್ರಮುಖರಾದ ಅರುಣ್ ಸಿಂಗ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಇವರ ಆಯ್ಕೆಯನ್ನು ಘೋಷಿಸಿದರು.

ಕಾಪು : ಬಿಜೆಪಿಯಿಂದ ಗುರ್ಮೆ ಸುರೇಶ್ ಶೆಟ್ಟಿ ಅಭ್ಯರ್ಥಿಯಾಗಿ ಆಯ್ಕೆ

Posted On: 11-04-2023 09:48PM

ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಮಾಜ ಸೇವಕ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಪಕ್ಷದ ಪ್ರಮುಖರಾದ ಅರುಣ್ ಸಿಂಗ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಏಪ್ರಿಲ್ 23, 24 : ಬೊಲ್ಲೆಟ್ಟು ಆಲಡೆಯಲ್ಲಿ ಆಯನೋತ್ಸವ - ಸಿರಿಗಳ ಜಾತ್ರೆ, ಮಹಾ ಅನ್ನ ಸಂತರ್ಪಣೆ

Posted On: 11-04-2023 06:05PM

ಕಾಪು : ಇತಿಹಾಸ ಪ್ರಸಿದ್ಧ ಎಲ್ಲೂರು ಸೀಮೆಯ ಶ್ರೀ ಬ್ರಹ್ಮಲಿಂಗೇಶ್ವರ ಆಲಡೆಯಲ್ಲಿ ನಡೆಯುವ ಧ್ವಜಾರೋಹಣ ಪೂರ್ವಕ ವರ್ಷಾವಧಿ ಆಯನೋತ್ಸವ - ಸಿರಿಗಳ ಜಾತ್ರೆ ಹಾಗೂ ಮಹಾ ಅನ್ನಸಂತರ್ಪಣೆ ಏಪ್ರಿಲ್ 23, 24 ರಂದು ಜರಗಲಿದೆ.

ಎಲ್ಲರೂ ಆಗಮಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಸಿರಿ ಕುಮಾರ ಭಜನಾ ಮಂಡಳಿ ಬೊಲ್ಲೆಟ್ಟು ಇದರ ಸರ್ವ ಸದಸ್ಯರು ತಿಳಿಸಿರುತ್ತಾರೆ.

ಬಂಟಕಲ್ಲು : ಪ್ರಾಧ್ಯಾಪಕಿ ರೆನಿಟಾ ಶರೋನ್ ಮೋನಿಸ್ ಅವರಿಗೆ ಪಿಎಚ್‌ಡಿ ಪದವಿ

Posted On: 09-04-2023 11:48AM

ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ರೆನಿಟಾ ಶರೋನ್ ಮೋನಿಸ್ ಇವರು ಎಮ್.ಐ.ಟಿ.ಇ ತಾಂತ್ರಿಕ ಮಹಾವಿದ್ಯಾಲಯ, ಮೂಡುಬಿದ್ರಿ, ಮಂಗಳೂರು ಇಲ್ಲಿಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ಡಾ. ಆಶಾ ಕ್ರಾಸ್ಟಾ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಎಸ್ಟಿಮೇಟ್ ಆಫ್ ಅನ್‌ಸ್ಟಡಿ ಸ್ಟೆಬಿಲಿಟಿ ಡಿರೈವೆಟೀಸ್ ಫಾರ್ ಡೆಲ್ಟಾ ವಿಂಗ್ಸ್ ಇನ್ ಹೈ ಸ್ಪೀಡ್ ಫ್ಲೋ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪ್ರಾಧ್ಯಾಪಕಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಎಂ.ಎಸ್.ಆರ್.ಎಸ್ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘ ಮುಂಬೈ - ವಾರ್ಷಿಕೋತ್ಸವ

Posted On: 09-04-2023 11:18AM

ಶಿರ್ವ : ಬ್ಯಾಂಕಿಂಗ್ ಕ್ಷೇತ್ರದ ಧುರೀಣ ಕೀರ್ತಿಶೇಷ ಮೂಲ್ಕಿ ಸುಂದರ್ ರಾಮ್ ಶೆಟ್ಟಿಯವರು ವಿಜಯ ಬ್ಯಾಂಕಿನ ಆಡಳಿತ ನಿರ್ದೇಶಕರಾಗಿದ್ದ ಕಾಲಘಟ್ಟದಲ್ಲಿ ತುಳುನಾಡಿನ ವಿದ್ಯಾವಂತರನ್ನು ಕರೆ ಕರೆದು ಮನೆಗೊಬ್ಬರಂತೆ ಕೆಲಸ ನೀಡಿದವರು ಎಂದು ತುಂಗಾ ಸಮೂಹ ಹೋಟೆಲುಗಳ ಆಡಳಿತ ನಿರ್ದೇಶಕ ಶ ಸುಧಾಕರ್ ಹೆಗ್ಡೆಯವರು ನುಡಿದರು. ಅವರು ಎಪ್ರಿಲ್ 2ರಂದು ಮಲಾಡ್ ಪಶ್ಚಿಮದ ಹೋಟೆಲ್ ಸಾಯಿ ಪ್ಯಾಲೇಸ್ ಗ್ರ್ಯಾಂಡ್ ಇಲ್ಲಿ ನಡೆದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘ ಮುಂಬೈ ಘಟಕದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಂದುವರಿದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ವ್ಯಾಸಂಗಮಾಡಿದವರು ಇಂದು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗಳನ್ನು ಹಾಗೂ ನಮಗೆ ವಿದ್ಯೆ ನೀಡಿದ ಸಂಸ್ಥೆಗಳನ್ನು ಎಂದಿಗೂ ನಾವು ಮರೆಯಬಾರದು. ಉದಯ್ ಸುಂದರ್ ಶೆಟ್ಟಿಯವರ ದಕ್ಷ ಅಧ್ಯಕ್ಷತೆಯಲ್ಲಿ ಈ ಹಿರಿಯ ವಿದ್ಯಾರ್ಥಿಗಳ ಸಂಘವು ಬೆಳೆದು ಬಂದ ರೀತಿ ಮತ್ತು ತಾವು ಕಲಿತ ಕಾಲೇಜಿನ ಬಲವರ್ಧನೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಸಂಘದ ಸಲಹೆಗಾರ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ಮಾತನಾಡಿ, ಸಂಘ ಸಂಸ್ಥೆಗಳ ಹುರುಪು ಉಲ್ಲಾಸ ಐದಾರು ವರ್ಷಗಳಲ್ಲಿ ಇಳಿಮುಖವಾಗುವುದನ್ನು ಕಾಣುತ್ತೇವೆ. ಆದರೆ ಈ ಹಳೆ ವಿದ್ಯಾರ್ಥಿ ಸಂಘದ ಉತ್ಸಾಹ ಕುಂದದೆ ಚಿಗುರುತ್ತಿರುವುದು ಮತ್ತು ಹದಿಮೂರು ವರ್ಷಗಳಲ್ಲಿ ಏರಿದ ಎತ್ತರ ಸಂತಸ ತಂದಿದೆ ಎಂದರು. ಸಂಘದ ಪೋಷಕರಾರದ ಪೆನಿನ್ಸುಲಾ ಸಮೂಹ ಹೋಟೆಲುಗಳ ಆಡಳಿತ ನಿರ್ದೇಶಕ ಸತೀಶ್ ಶೆಟ್ಟಿಯವರು, ಇಂದಿನ ಮಕ್ಕಳಿಗೆ ನಮ್ಮ ಊರಿನ ಶ್ರೀಮಂತ ಸಂಸ್ಕೃತಿಯನ್ನು ತೋರಿಸುವ, ತಿಳಿಸುವ ಅಗತ್ಯವಿದೆ ಎಂದರು. ಮಾರ್ಗದರ್ಶಕ, ಎಂ. ಎಸ್. ಆರ್. ಎಸ್. ಕಾಲೇಜಿನ ಮಾಜಿ ಪ್ರಾಧ್ಯಾಪಕ, ಪ್ರಸ್ತುತ ಬಂಟರ ಸಂಘ ಮುಂಬಯಿ ಪ್ರಾಯೋಜಿತ ಎಸ್. ಎಂ. ಶೆಟ್ಟಿ ಕಾಲೇಜ್ ಪೊವೈ ಇಲ್ಲಿಯ ಪ್ರಾಂಶುಪಾಲರಾದ ಡಾ. ಶ್ರೀಧರ್ ಶೆಟ್ಟಿಯವರು ಮಾತನಾಡಿ, ಕೀರ್ತಿಶೇಷರಾದ ಮುದ್ದು ಶೆಟ್ಟಿ, ಸುಂದರ್ ರಾಮ್ ಶೆಟ್ಟಿ, ಸತೀಶ್ಚಂದ್ರ ಹೆಗ್ಡೆಯವರಂಥ ಧೀಮಂತ ವ್ಯಕ್ತಿಗಳು ಸಮರ್ಪಣಾ ಭಾವದೊಂದಿಗೆ ಶಿರ್ವದಂಥ ಗ್ರಾಮೀಣ ಪ್ರದೇಶದಲ್ಲಿ ಕಟ್ಟಿ ಬೆಳೆಸಿದ ವಿದ್ಯಾದೇಗುಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಹಳೆ ವಿದ್ಯಾರ್ಥಿಗಳಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಬಿಸಿಯೂಟದ ವ್ಯವಸ್ಥೆ ವಿನೂತನವಾದುದು. ಅದನ್ನು ಉಳಿಸಿ ಬೆಳೆಸುವ ತೀವ್ರ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನನ್ನನ್ನೂ ಸೇರಿ ಎಲ್ಲರೂ ಉದಾರತೆಯಿಂದ ಆರ್ಥಿಕವಾಗಿ ಸ್ಪಂದಿಸಬೇಕೆಂದು ಹಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷ, ಉದಯ್ ಸುಂದರ್ ಶೆಟ್ಟಿ ಮಾತನಾಡಿ, ಸಮಾಜದ ಶ್ರೇಷ್ಠ ವ್ಯಕ್ತಿಗಳೊಂದಿಗಿನ ಒಡನಾಟವು ನಮ್ಮ ವ್ಯಕ್ತಿತ್ವದಲ್ಲಿ ಅಮೂಲಗ್ರಹ ಬದಲಾವಣೆಗಳನ್ನು ತರಬಲ್ಲುದು. ನಮ್ಮ ಜೀವನದಲ್ಲಿ ಅನುಭವಿ ಹಾಗೂ ಮಾಗಿದ ವ್ಯಕ್ತಿಗಳಿಂದ ಕಲಿಯುವ ಜೀವನ ಮೌಲ್ಯಗಳನ್ನು ಯಾವ ವಿಶ್ವ ವಿದ್ಯಾಲಯಗಳು ಕಲಿಸಲಾರವು. ಸಂಘವು 2016ರಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರಾಯೋಜಿಸುತ್ತಿರುವ ಬಿಸಿಯೂಟದ ಪ್ರಯೋಜನವನ್ನು 250 ವಿದ್ಯಾರ್ಥಿಗಳು ಪಡೆಯುತ್ತಿರುವುದು ಸಂತಸದ ಸಂಗತಿ. ಪದಾಧಿಕಾರಿಗಳ ಸಾಂಘಿಕ ಪ್ರಯತ್ನ ಹಾಗೂ ಉದಾರತೆಯ ಫಲವಾಗಿ ಸಂಘವು 13 ವರ್ಷಗಳಲ್ಲಿ ಈ ಎತ್ತರಕ್ಕೆ ಏರಲು ಸಾಧ್ಯವಾಯಿತು. ಕೋವಿಡ್ ಸಂಕಷ್ಟದಲ್ಲಿ ನಾವೆಲ್ಲ ಪರಸ್ಷರ ಸಂಪರ್ಕದಲ್ಲಿದ್ದು ಸಹಕರಿಸುತ್ತಿದ್ದೆವು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುಧಾಕರ್ ಹೆಗ್ಡೆ ಹಾಗೂ ರಂಜನಿ ಸುಧಾಕರ್ ಹೆಗ್ಡೆ ದಂಪತಿಗಳನ್ನು ಸನ್ಮಾನಿಸಲಾಯಿತು. ಜ್ಯೋತಿ ಶೆಟ್ಟಿ ಸೂಡ ಸನ್ಮಾನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಅಶೋಕ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಲಕ್ಷ್ಮೀ ಸತೀಶ್ ಶೆಟ್ಟಿಯವರ ಪ್ರಾರ್ಥನಾ ಗೀತೆಯೊಂದಿಗೆ ನೆರೆದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಪಲಿಮಾರು ವಸಂತ್ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸಿ.ಎ. ರವಿರಾಜ್ ಶೆಟ್ಟಿಯವರು 2020 ರಿಂದ 2023ರ ಈ ವರೆಗಿನ ಸಂಘದ ಖರ್ಚು ವೆಚ್ಚಗಳ ವರದಿಯನ್ನು ವಾಚಿಸಿದರು. ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಎರಡು ವರ್ಷಗಳಲ್ಲಿ ಸಂಘವು ನಿರ್ವಹಿಸಿದ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು. ಸಂಘದ ಸದಸ್ಯ ಹರೀಶ್ ಶೆಟ್ಟಿ ಪಂಜಿಮಾರು ಅವರ ಪ್ರತಿಭಾವಂತ ಮಗಳು ಡಾ. ಹರ್ಷಿತಾ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಅಭ್ಯಾಸದ ಕುರಿತಾಗಿ ಸಲಹೆಯನ್ನೂ ಹಿರಿಯರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು. ಮಹಿಳಾ ವಿಭಾಗದ ಅಧ್ಯಕ್ಷೆ ಶಬುನ ಸತೀಶ್ ಶೆಟ್ಟಿ ಹಾಗೂ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಜಾತ ಶೆಟ್ಟಿಯವರು ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಅಶೋಕ್ ಶೆಟ್ಟಿ, ಪಲಿಮಾರು ವಸಂತ್ ಶೆಟ್ಟಿ, ಖಾಂದೇಶ್ ಭಾಸ್ಕರ್ ಶೆಟ್ಟಿ, ಮೋಹನ್ ಶೆಟ್ಟಿ ಕಾಪು ಹಾಗೂ ಸಮನ್ವಯಕ ವಾಲ್ಟರ್ ಮಥಾಯಸ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಸಂಗೀತಗೋಷ್ಠಿಯಲ್ಲಿ ಸುರೇಶ್ ಶೆಟ್ಟಿ ಶಿಬರೂರು ಮತ್ತು ಲಕ್ಷ್ಮೀ ಸತೀಶ್ ಶೆಟ್ಟಿಯವರು ದೇವರನಾಮಗಳನ್ನು ಹಾಡಿದರು. ಸದಸ್ಯರ ಮತ್ತು ಅವರ ಮಕ್ಕಳ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಸುರೇಶ್ ಶೆಟ್ಟಿಯವರು ನಡೆಸಿಕೊಟ್ಟರು. ಸಾಯಿ ಪ್ಯಾಲೇಸ್ ಹೋಟೆಲಿನ ಆದರಾತಿಥ್ಯದ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವರದಿ: ಉದಯ ಬಿ. ಶೆಟ್ಟಿ, ಪಂಜಿಮಾರು

ಕಾಪು : ಶಂಕರಪುರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ

Posted On: 07-04-2023 03:53PM

ಕಾಪು : ರೋಟರಿ ಕ್ಲಬ್ ಶಂಕರಪುರ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಜಂಟಿಯಾಗಿ ವಿಶ್ವ ಆರೋಗ್ಯ ದಿನಾಚರಣೆಯನ್ನು ರೋಟರಿ ಭವನ ಶಂಕರಪುರದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಇದರ ಅಧ್ಯಕ್ಷರಾದ ಡಾ. ಪಿವಿ ಭಂಡಾರಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ವಿಶ್ವ ಆರೋಗ್ಯ ದಿನಾಚರಣೆ ಹೇಗೆ ಪ್ರಾರಂಭವಾಯಿತು, ಆರೋಗ್ಯವೇ ಭಾಗ್ಯ ಎಂಬ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಸನ್ಮಾನ : ಆಫೀಸರ್ ಇನ್ ಪಿ ಹೆಚ್ ಸಿ ಮೂಡಬೆಟ್ಟುವಿನ ಅನಿತಾ ಫರ್ನಾಂಡಿಸ್, ಆಶಾ ಕಾರ್ಯಕರ್ತೆ ಗಾಯತ್ರಿ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಕೇಶವ ನಾಯಕ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿಯ ಕಾರ್ಯದರ್ಶಿ ಡಾ. ಕೇಶವ ನಾಯಕ್, ಡಾ. ಶ್ರೀನಿವಾಸ್ ಭಟ್, ರೋಟರಿಯ ಕಾರ್ಯದರ್ಶಿ ಸಿಲ್ವಿಯಾ ಕಾಸ್ಟಲಿನೋ ಹಾಗೂ ರೋಟರಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ವಿಕ್ಟರ್ ಮಾರ್ಟಿಸ್ ಪ್ರಾರ್ಥಿಸಿದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿದರು.