Updated News From Kaup
ಆಗಸ್ಟ್ 6: ಕುಲಾಲ ಸಂಘ ನಾನಿಲ್ತಾರು, ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Posted On: 04 Aug 2023, 05:01 PM
ಕಾರ್ಕಳ : ಇಲ್ಲಿಯ ನಾನಿಲ್ತಾರು ಕುಲಾಲ ಸಂಘದಲ್ಲಿ ಆಗಸ್ಟ್ 6 ರ ಭಾನುವಾರ ಬೆಳ್ಳಿಗ್ಗೆ 11 ಗಂಟೆಯಿಂದ ಕುಲಾಲ ಸಭಾಭವನದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಪ್ರತಿ ವರ್ಷದಂತೆ ನಡೆಯಲಿದ್ದು, ಸನ್ಮಾನ ಜೊತೆಗೆ, ಸಮುದಾಯದ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರಯು ಸಮುದಾಯದ ಗಣ್ಯರ ಜೊತೆಗೆ ನಡೆಯಲ್ಲಿದೆ ಎಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುವರು.
ಉಡುಪಿ ವಿಡಿಯೋ ಪ್ರಕರಣ : ಎಸ್ ಐ ಟಿ ತನಿಖೆಗೆ ಆಗ್ರಹಿಸಿ ಶಾಸಕರಿಂದ ರಾಜ್ಯಪಾಲರಿಗೆ ಮನವಿ
Posted On: 04 Aug 2023, 04:50 PM
ಉಡುಪಿ : ಇಲ್ಲಿನ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಮೊಬೈಲ್ ಫೋನ್ ಮೂಲಕ ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸಿದ ಪ್ರಕರಣವನ್ನು ಎಸ್.ಐ.ಟಿ ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಆದೇಶ ನೀಡುವಂತೆ ರಾಜ್ಯಪಾಲರಿಗೆ ಇಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಶಾಸಕರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಭರತ್ ಶಟ್ಟಿ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮುಂತಾದವರು ಉಪಸ್ಥಿತರಿದ್ದರು.
ಪಡುಬಿದ್ರಿ ಬ್ರಹ್ಮಸ್ಥಾನ: ಅಜಕಾಯಿ ಸೇವೆ ಸಂಪನ್ನ
Posted On: 03 Aug 2023, 12:08 PM
ಪಡುಬಿದ್ರಿ: ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಸಂಸ್ಥೆ ವನ ದುರ್ಗಾ ಟ್ರಸ್ಟ್ನ ಆಡಳಿತಕ್ಕೊಳಪಟ್ಟಿರುವ ಬಯಲು ಆಲಯವೆಂದೇ ಜಗತ್ಪ್ರಸಿದ್ದಿ ಪಡೆದ ಪಡುಬಿದ್ರಿಯ ಶ್ರೀ ಖಡೇಶ್ವರಿ ಬ್ರಹ್ಮಸ್ಥಾನದಲ್ಲಿ ಬುಧವಾರ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಶ್ರದ್ಧಾ ಭಕ್ತಿಯ ಅಜಕಾಯಿ ಸೇವೆಯು ಸಂಪನ್ನಗೊಂಡಿತು. ಸುಮಾರು 15000 ಕ್ಕೂ ಮಿಕ್ಕಿ ತೆಂಗಿನಕಾಯಿಗಳು ಶ್ರೀ ಸನ್ನಿಧಾನಕ್ಕೆ ಸಮರ್ಪಿತವಾಯಿತು. ಅಜಕಾಯಿ ಸೇವೆಯ ಬಳಿಕ ಭಕ್ತರಿಗೆ ಅರ್ಪಿತ ತೆಂಗಿನ ಕಾಯಿಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಪಾತ್ರಿ ಸುರೇಶ್ ರಾವ್, ಅರ್ಚಕ ವರ್ಗ, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ಮಂಗಳೂರು : ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ 7 ನೇ ರ್ಯಾಂಕ್ - ಶ್ರೀಪ್ರಿಯ
Posted On: 03 Aug 2023, 07:51 AM
ಮಂಗಳೂರು : ಮೂಡುಬಿದಿರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನ(ಮೈಟ್) ವಿದ್ಯಾರ್ಥಿನಿ ಶ್ರೀಪ್ರಿಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈ ಬಾರಿ ವಿಶ್ವವಿದ್ಯಾಲಯಕ್ಕೆ 7 ನೇ ರ್ಯಾಂಕ್ ಬರುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ನಡೆದ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀಪ್ರಿಯ ಅವರು ಗಣ್ಯರಿಂದ ಪುರಸ್ಕಾರ ಪಡೆದರು. ಸಾಧನೆಯ ಹಿಂದಿನ ಶ್ರಮ : ತಮ್ಮ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಬೆಳ್ತಂಗಡಿ ತಾಲೂಕು ಸುಲ್ಕೇರಿಮೊಗ್ರು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸುಬ್ರಹ್ಮಣ್ಯ ಭಟ್ ಅವರ ಪುತ್ರಿ, ಅಳದಂಗಡಿ ಎಂಬ ಗ್ರಾಮಾಂತರ ಪ್ರದೇಶದಿಂದ ನಿತ್ಯ ಕಾಲೇಜಿಗೆ ಓಡಾಟ ಮಾಡುತ್ತಿದ್ದ ಶ್ರೀಪ್ರಿಯ ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರತಿವರ್ಷ ನಡೆಸುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅತ್ಯಂತ ಹೆಚ್ಚು ಪುನರಾವರ್ತನೆ ಆಗುತ್ತಿದ್ದ ಪ್ರಶ್ನೆಗಳ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುತ್ತಿದ್ದೆ. ಮಹತ್ವದ ವಿಷಯಗಳ ಬಗ್ಗೆ ಪ್ರಾಧ್ಯಾಪಕರ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತಿದ್ದೆ. ಬರೆದು ಕಲಿಯುವ ಅಭ್ಯಾಸ ರೂಢಿಸಿಕೊಂಡಿದ್ದರಿಂದ ಅದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಿತ್ತು. ಅಳದಂಗಡಿಯಿಂದ ಮೂಡುಬಿದಿರೆ ಕಾಲೇಜಿಗೆ ಬೆಳಗ್ಗೆ ಬೇಗ ತೆರಳಬೇಕಾದ್ದರಿಂದ ಆ ಸಮಯದಲ್ಲಿ ಓದಲು ಸಮಯ ಸಿಗುತ್ತಿರಲಿಲ್ಲ. ಕಾಲೇಜಿನಿಂದ ವಾಪಸ್ ಬಂದ ನಂತರ ಪ್ರತಿದಿನ ರಾತ್ರಿ 9 ರಿಂದ 11 ಗಂಟೆವರೆಗೆ ಹಾಗೂ ಪರೀಕ್ಷೆ ಸಂದರ್ಭದಲ್ಲಿ ಅಧಿಕ ಸಮಯ ಓದುತ್ತಿದ್ದೆ. ನನ್ನ ಸಾಧನೆಗೆ ಪೋಷಕರು ಮತ್ತು ಕಾಲೇಜಿನ ಬೋಧಕ ವರ್ಗ ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಪು ಲಯನ್ಸ್ ಕ್ಲಬ್ ಪದಗ್ರಹಣ
Posted On: 03 Aug 2023, 07:45 AM
ಕಾಪು : ಇಲ್ಲಿನ ಲಯನ್ಸ್ ಕ್ಲಬ್ ಪದಗ್ರಹಣವು ಕಾಪುವಿನ K1 ನ ಶಾಂಭವಿ ಸಭಾಭವನದಲ್ಲಿ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭುರವರ ನೇತೃತ್ವದಲ್ಲಿ ನಡೆಯಿತು. ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನಿಸಿ ಮಾತನಾಡಿದ ಅವರು ಸುಮಾರು 47 ವರ್ಷ ಇತಿಹಾಸವುಳ್ಳಂತಹ ಕಾಪು ಲಯನ್ಸ್ ಕ್ಲಬ್ ಅತ್ಯಂತ ಹಿರಿದಾದ ಕ್ಲಬ್ ಗಳಲ್ಲಿ ಒಂದಾಗಿದ್ದು ಸಂಘಟನೆಗಳು ಪ್ರಾಮಾಣಿಕ ಸತ್ಯ ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಕಾಪು ಲಯನ್ಸ್ ಕ್ಲಬ್ ನ ಅಧ್ಯಕ್ಷ ವರುಣ್ ಶೆಟ್ಟಿ ನೂತನ ಅಧ್ಯಕ್ಷರಾದ ಉದಯ ಆರ್ ಶೆಟ್ಟಿರವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ಕೆ.ಎಂ. ಲುತುಪುಲ್ಲ, ಕೋಶಾಧಿಕಾರಿಯಾಗಿ ನಡಿಕೆರೆ ರತ್ನಾಕರ್ ಶೆಟ್ಟಿ 2022-2023 ನೆ ಸಾಲಿನ ಪದಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ಪ್ರಾಂತೀಯ ಅಧ್ಯಕ್ಷರಾದ ರಿಷಿಕೇಶ ಹೆಗಡೆ ಸ್ಥಳೀಯ ಶಾಲೆಗಳಿಗೆ ಸ್ಕೂಲ್ ಬ್ಯಾಗನ್ನು ವಿತರಿಸುವ ಸಲುವಾಗಿ ಚೆಕ್ ಅನ್ನು ವಲಯ ಅಧ್ಯಕ್ಷರಾದ ವರುಣ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾಪುವಿನ ಸ್ಥಳೀಯರಿಗೆ ಆಹಾರ ಸಾಮಗ್ರಿಯ ಕಿಟ್ ಅನ್ನು ನೂತನವಾಗಿ ಆಯ್ಕೆಯಾದ ವಲಯ ಅಧ್ಯಕ್ಷರಾದ ವರುಣ್ ಶೆಟ್ಟಿ ಅವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಮೆಂಬರ್ ಶಿಪ್ ಡೆವಲಪ್ಮೆಂಟ್ ಚೇರ್ಮನ್ ಹರೀಶ್ ನಾಯಕ್ ಕಾಪು ಕಾರ್ಯಕ್ರಮ ನಿರ್ವಹಿಸಿ ಕಾರ್ಯದರ್ಶಿ ಕೆ ಎಂ ಲುತ್ ಪುಲ್ಲ ವಂದಿಸಿದರು.
ಕಾಪು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಕ್ರಮಗಳ ಸಭೆ
Posted On: 02 Aug 2023, 07:01 PM
ಕಾಪು : ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅಗಸ್ಟ್ 2ರಂದು ಜಿಲ್ಲಾ ಪಂಚಾಯತ್ ಡಾl ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ಜರಗಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದ್ದರು. ಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್, ನರೇಗಾ ಯೋಜನೆ, ಜಲ ಜೀವನ್ ಮಿಷನ್, 14 ಮತ್ತು 15 ನೇ ಹಣಕಾಸು ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುಷ್ ಚಿಕಿತ್ಸಾಲಯ, ಪಶು ಚಿಕಿತ್ಸಾಲಯ, ಕೃಷಿ ಸಂಭಂದಿತ ಯೋಜನೆಗಳು, ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯ, ಅಂಗನವಾಡಿ ಕೇಂದ್ರ, ಕೊರಗ ಸಮುದಾಯದ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳು, ಹಾಗೂ ಸಂಪನ್ಮೂಲ ಕ್ರೋಢೀಕರಣ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಸನ್ನ ಎಚ್, ಮುಖ್ಯ ಯೋಜನಾಧಿಕಾರಿಗಳಾದ ಶ್ರೀನಿವಾಸ್ ರಾವ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಪು : ಕಟಪಾಡಿ ಏಣಗುಡ್ಡೆ ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಸಂಪನ್ನ
Posted On: 02 Aug 2023, 06:37 PM
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕಾಪು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಗ್ರಾಮ ಸಮಿತಿ ರಚಿಸಿ, ಪ್ರತಿ ಮನೆಗೂ ಮನವಿ ಪತ್ರ ತಲುಪಿಸಿ ಅಮ್ಮನ ಅಭಯ ವಾಕ್ಯದಂತೆ ದೇವಳ ನಿರ್ಮಾಣದ ವಿಷಯ ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಆಶಯ ಅದರಂತೆ ನಿನ್ನೆ ಏಣಗುಡ್ಡೆ ಗ್ರಾಮದ ಗ್ರಾಮ ಸಮಿತಿ ರಚನಾ ಸಭೆ ಅಗ್ರಹಾರ ವೀರಸ್ತಂಭ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗ್ರಾಮದ ಹಿರಿಯರಾದ ವೈ. ಭರತ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಶಿಲ್ಪಾ ಜಿ. ಸುವರ್ಣ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳನ್ನು ಸ್ವಾಗತಿಸಿ, ಗುರುತಿಸಿದರು. ಒಂಬತ್ತು ಜನ ಸುಮಂಗಲಿಯರಾದ ವಸಂತಿ ಜಗನ್ನಾಥ್ ಕೋಟೆ, ಜಯಂತಿ ಇಂದುಶೇಖರ್, ಸುನಂದಾ ಎಸ್. ಪೂಜಾರಿ, ಲೀಲಾವತಿ, ಸರೋಜ ಆನಂದ್, ಶೈಲಜಾ ಎಂ. ಹೆಗ್ಡೆ, ಜಯಂತಿ ಶೇರಿಗಾರ್ , ಜಯಶ್ರೀ ಮತ್ತು ಸುಮಿತ್ರ ಇವರು ಏಕಕಾಲದಲ್ಲಿ ದೀಪ ಬೆಳಗಿಸಿ ಅಮ್ಮನ ಸ್ತುತಿಯೊಂದಿಗೆ ಆರತಿ ಎತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ದೇವಳ ನಿರ್ಮಾಣದ ಜೊತೆಗಿರುವ ಯೋಜನೆಗಳನ್ನು ತಿಳಿಸಿದರು, ಶಿಲಾಸೇವೆಯ ಮಹತ್ವ, ಗ್ರಾಮ ಸಮಿತಿಯ ಜವಾಬ್ದಾರಿ ಹಾಗೂ ಇತರ ವಿಷಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು ಗ್ರಾಮ ಸಮಿತಿಯನ್ನು ರಚನೆ ಮಾಡಿ 9 ಜನ ಪುರುಷರ ಒಂದು ತಂಡ ಮತ್ತು 9 ಜನ ಮಹಿಳೆಯರ ಒಂದು ತಂಡವನ್ನು ರಚಿಸಿದರು. ಶೀಘ್ರವಾಗಿ ಇನ್ನಷ್ಟು ತಂಡಗಳನ್ನು ರಚಿಸಿ ಹೊಸ ಮಾರಿಗುಡಿ ದೇವಳದ ಜೀರ್ಣೋದ್ಧಾರ ವಿಷಯವನ್ನು ಗ್ರಾಮದ ಪ್ರತಿ ಮನೆ ಮನೆಗೂ ಸುದ್ದಿ ತಲುಪಿಸುವ ಜವಾಬ್ದಾರಿ ನಮ್ಮದು ಎಂದು ಗ್ರಾಮದ ಹಿರಿಯರು ತಿಳಿಸಿರುತ್ತಾರೆ. ಗ್ರಾಮಸ್ಥರ ಅಭಿಪ್ರಾಯ ಮಂಡನೆಗೆ ಅವಕಾಶವನ್ನು ನೀಡಿ ನಂತರ ಉಪಾಧ್ಯಕ್ಷರಾದ ಮಾಧವ ಆರ್ ಪಾಲನ್ ಮಾತನಾಡಿ ಏಣಗುಡ್ಡೆ ಗ್ರಾಮದ ಪ್ರತಿ ಮನೆಯಿಂದಲೂ ಕನಿಷ್ಠ 9 ಶಿಲಾಸೇವೆಯನ್ನು (ರೂಪಾಯಿ 9,999) ನೀಡುವ ಮೂಲಕ "ಕಾಪುವಿನ ಅಮ್ಮನ ಮಕ್ಕಳು" ತಂಡಕ್ಕೆ ಸೇರಬೇಕೆಂದು ವಿನಂತಿಸಿಕೊಂಡರು. ಗ್ರಾಮದ ಪ್ರತಿ ಮನೆ ಮನೆಗೆ ತಲುಪಿಸುವ ಮನವಿ ಪತ್ರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ಪ್ರಮುಖರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಗ್ರಾಮದ ಪ್ರಮುಖರಾದ ರಂಜನ್ ಹೆಗ್ಡೆ, ಸುಭಾಸ್ ಬಲ್ಲಾಳ್, ಅಶ್ವಿನ್ ಬಲ್ಲಾಳ್ ಕಟಪಾಡಿ ಬೀಡು, ಮಹೇಶ್ ಬಿ. ಶೆಟ್ಟಿ, ಜಗನ್ನಾಥ್ ಕೋಟೆ, ಅಶೋಕ್ ರಾವ್, ಸೂರಪ್ಪ ಪೂಜಾರಿ, ಆನಂದ ಮಾಬೆನ್, ಶ್ರೀಧರ್, ಪದ್ಮನಾಭ ಕೋಟ್ಯಾನ್, ಸಾಧು ಪೂಜಾರಿ, ಹರೀಶ್ ಕಟಪಾಡಿ, ನಾಗೇಶ್, ದೀಪಕ್, ಜಯಕರ ಸೇರಿಗಾರ್ ಮತ್ತು ಪ್ರಶಾಂತ್ ಆಚಾರ್ಯ ಉಪಸ್ಥಿತರಿದ್ದರು.
ಬಂಟಕಲ್ಲು : ನಾಗರಿಕ ಸೇವಾ ಸಮಿತಿಯಿಂದ ಶಾಸಕರ ಭೇಟಿ ; ಅಭಿನಂದನೆ ; ಮನವಿ ಸಲ್ಲಿಕೆ
Posted On: 02 Aug 2023, 06:26 PM
ಬಂಟಕಲ್ಲು : ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರು ಕಾಪು ಕ್ಷೇತ್ರ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆಯವರನ್ನು ಅವರ ಕಛೇರಿಯಲ್ಲಿ ಭೇಟಿಯಾಗಿ ಸಮಿತಿ ಪರವಾಗಿ ಶಾಸಕರನ್ನು ಸನ್ಮಾನಿಸಿ, ಅಭಿನಂದಿಸಿ ಮನವಿ ಸಲ್ಲಿಸಿದರು. ನಾ.ಸೇ.ಸಮಿತಿ ಅಧ್ಯಕ್ಷ ಕೆ .ಆರ್ ಪಾಟ್ಕರ್ ಶಾಸಕರನ್ನು ಸನ್ಮಾನಿಸಿ, ಅಭಿನಂದಿಸಿದರು. ಶಾಸಕರಿಗೆ ಮನವಿ ಸಲ್ಲಿಸಿ ಸಮಿತಿಯು ಕೆಲವು ಪ್ರಮುಖ ಅಭಿವೃದ್ದಿ ವಿಚಾರಗಳ ಬಗ್ಗೆ ಶಾಸಕರಲ್ಲಿ ಚರ್ಚಿಸಿತು. ಶಿರ್ವ ಸಮುದಾಯ ಆರೋಗ್ಯ ಕೇಂದ್ರವನ್ನು 24 ಗಂಟೆ ಕಾರ್ಯನಿರ್ವಹಿಸುವಂತೆ, ಕೇಂದ್ರದಲ್ಲಿ ಡಯಾಲಿಸ್ ಯಂತ್ರದ ಅಳವಡಿಕೆ, ತಜ್ಞ ವೈದ್ಯರ ಹಾಗೂ ಇತರೇ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದು, ತೀರ ಹದೆಗಟ್ಟಿರುವ ಕಟಪಾಡಿ- ಶಿರ್ವ ರಾಜ್ಯ ಹೆದ್ದಾರಿಯನ್ನು ಮರು ಡಾಮರೀಕರಣಗೊಳಿಸುವುದು, ದ್ವಿಪಥ ಕಾಮಗಾರಿ ಬಾಕಿ ಇರುವ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಕೆಯಿಂದ ಸಿದ್ದಿವಿನಾಯಕ ದೇವಸ್ಥಾನದವರೆಗಿನ ರಾಜ್ಯ ಹೆದ್ದಾರಿಯನ್ನು ದ್ವಿಪಥಗೊಳಿಸಿ ಅಭಿವೃದ್ದಿಪಡಿಸುವುದು, ಶಿರ್ವ ಉಡುಪಿ ಮಾರ್ಗದಲ್ಲಿ ಒಂದು ನರ್ಮ್ ಬಸ್ ಸಂಚರಿಸುತ್ತಿದ್ದು, ಪರವಾನಿಗೆ ಇದ್ದೂ ಸಂಚಾರವನ್ನು ನಿಲ್ಲಿಸಿರುವ ಇನ್ನೂಂದು ನರ್ಮ್ ಬಸ್ಸು ಸಂಚಾರವನ್ನು ಪುನರಾರಂಭಿಸುವುದು, ಶಿರ್ವ ಮೆಸ್ಕಾಂ ಉಪವಿಭಾಗದಲ್ಲಿ ಲೈನ್ ಮೆನ್ ಗಳ ಕೊರತೆ, ಶಿರ್ವ ಕೇಂದ್ರಿಕೃತವಾಗಿ ಅಗ್ನಿಶಾಮಕ ಘಟಕವನ್ನು ಪ್ರಾರಂಭಿಸುವಂತೆ ಸಮಿತಿಯಿಂದ ಮನವಿಯನ್ನು ನೀಡಲಾಯಿತು. ಶಾಸಕರು ಮನವಿ ಬಗ್ಗೆ ಅಧಿಕಾರಿಗಳೊಂದಿಗೆ ಕರೆಮಾಡಿ ಮಾತನಾಡಿ ಈ ವಿಚಾರಗಳ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದರು. ಸಮಿತಿ ಮನವಿ ವಿಚಾರಗಳಿಗೆ ಸೂಕ್ತವಾಗಿ ಸ್ಪಂದಿಸುವುದಾಗಿ ತಿಳಿಸಿದರು. ನಾ.ಸೇ ಸಮಿತಿಯ ಉಪಾಧ್ಯಕ್ಷರಾದ ಪುಂಡಲೀಕ ಮರಾಠೆ, ಮಾಧವ ಕಾಮತ್, ಕಾರ್ಯದರ್ಶಿ ದಿನೇಶ್ ದೇವಾಡಿಗ, ಕೋಶಾಧಿಕಾರಿ ಜಗದೀಶ್ ಆಚಾರ್ಯ, ಸಮಿತಿ ಸದಸ್ಯರಾದ ಉಮೇಶ್ ರಾವ್, ವಿರೇಂದ್ರ ಪಾಟ್ಕರ್, ಡೇನಿಸ್ ಡಿ ಸೋಜ, ಹರೀಶ್ ಹೇರೂರು, ವಸಂತಿ ಆಚಾರ್ಯ, ರಾಘವೇಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಅದಮಾರು : ನೇಮನಿಷ್ಠೆಯ ಹಬ್ಬಗಳು ಪುಸ್ತಕ ಬಿಡುಗಡೆ
Posted On: 02 Aug 2023, 12:56 PM
ಅದಮಾರು : ನಮ್ಮ ಹಬ್ಬಗಳ ಆಚರಣೆಯಲ್ಲಿ ಸಂಸ್ಕೃತಿಯ ಅನಾವರಣ ಇದೆ.ಇಂತಹ ಹಬ್ಬಗಳು ಸನ್ನಿಹಿತವಾಗುವ ವೇಳೆ ಮನೆಯ ಹಿರಿಯರು ಆಚರಣೆ ವಿಧಾನ ಹಾಗೂ ಅವುಗಳ ಮಹತ್ವವನ್ನು ಮನೆಯ ಮಕ್ಕಳಿಗೆ ವಿವರಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ಪಾಂಶುಪಾಲ ಬಿ.ಆರ್.ನಾಗರತ್ನ ಅವರು ಅಭಿಪ್ರಾಯಪಟ್ಟರು. ಅವರು ಅದಮಾರಿನ ಸುದರ್ಶನ ನಿಲಯದಲ್ಲಿ ಕೆ.ಎಲ್.ಕುಂಡಂತಾಯರ 'ನೇಮನಿಷ್ಠೆಯ ಹಬ್ಬಗಳು' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ತೊಂಬತ್ತಾರರ ಹರೆಯದ ನಿವೃತ್ತ ಶಿಕ್ಷಕ,ಶಿಕ್ಷಣ ಪ್ರೇಮಿ ವೈ.ಎಂ.ಶ್ರೀಧರ ರಾವ್ , ಪುಸ್ತಕದ ಪ್ರಕಾಶಕರಾದ ಕಿನ್ನಿಗೋಳಿಯ ಗಾಯತ್ರೀ ಪ್ರಕಾಶನ ಸಂಸ್ಥೆಯ ಸಚ್ಚಿದಾನಂದ ಉಡುಪ, ಗುರುರಾಜ ಮಂಜಿತ್ತಾಯ, ಉದ್ಯಮಿ ಸತೀಶ ಕುಂಡಂತಾಯ, ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್., ಅದಮಾರು ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ ಉಪಸ್ಥಿತರಿದ್ದರು. ಕೆ.ಎಲ್.ಕುಂಡಂತಾಯ ಪ್ರಸ್ತಾವಿಸಿದರು, ಸುದರ್ಶನ ಅವರು ಸ್ವಾಗತಿಸಿ, ವಂದಿಸಿದರು.
ಕಾಪು ವಲಯದ ಎಸ್ ಕೆ ಪಿ ಎ ಅಧ್ಯಕ್ಷರಾಗಿ ಸಚಿನ್ ಉಚ್ಚಿಲ ಅವಿರೋಧ ಆಯ್ಕೆ
Posted On: 01 Aug 2023, 08:29 PM
ಕಾಪು : ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಕಾಪು ವಲಯದ ಅಧ್ಯಕ್ಷರಾಗಿ ಸಚಿನ್ ಉಚ್ಚಿಲ ಅವಿರೋಧ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್, ಕೋಶಾಧಿಕಾರಿಯಾಗಿ ರವಿರಾಜ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಕರುಣಾಕರ ನಾಯಕ್, ಉಪಾಧ್ಯಕ್ಷರಾಗಿ ಸಂತೋಷ್ ಕಾಪು ಮತ್ತು ಸತೀಶ್ ಎರ್ಮಾಳು, ಕ್ರೀಡಾ ಕಾರ್ಯದರ್ಶಿಯಾಗಿ ವಿಕ್ರಮ್ ಭಟ್, ಜೊತೆ ಕಾರ್ಯದರ್ಶಿಯಾಗಿ ದೀಪಕ್ ಶೆಣೈ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಕಾಪು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯ್ ಇನ್ನ, ಅರುಳ್ ಡಿಸೋಜಾ ಛಾಯಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಜಿಲ್ಲಾ ಸಮಿತಿ ಸದಸ್ಯರಾಗಿ ರವಿಕುಮಾರ್ ಕಟಪಾಡಿ, ಕೃಷ್ಣ ರಾವ್, ಶ್ರೀನಿವಾಸ ಐತಾಳ್, ವೀರೇಂದ್ರ ಶಿರ್ವ, ಉದಯ್ ಮುಂಡ್ಕೂರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರವಿರಾಜ್ ರಾವ್, ಅಶೋಕ್ ಸುಭಾಸ್ ನಗರ ಆಯ್ಕೆಯಾಗಿದ್ದಾರೆ.
