Updated News From Kaup
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಂತ್ರಿಕ ಶಿಕ್ಷಣದ ಜೊತೆಗೆ ಇನ್ನೆರಡು ಶೈಕ್ಷಣಿಕ ಸಂಸ್ಥೆಗಳ ಕಾರ್ಯಾರಂಭ
Posted On: 19 Jul 2023, 05:32 PM
ಬಂಟಕಲ್ಲು : ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಬಂಟಕಲ್ನಲ್ಲಿ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅತೀ ಅಗತ್ಯವಾದ NAAC ನಿಂದ “ಎ” ಶ್ರೇಣಿಯ ಮಾನ್ಯತೆ ಹಾಗು ರಾಷ್ಟ್ರೀಯ ಮೌಲ್ಯಾಂಕನ ಮಂಡಳಿ (NBA)ಯಿಂದ ಮಾನ್ಯತೆ ಕೂಡಾ ದೊರೆತಿದೆ. ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಖಾತ್ರಿಪಡಿಸುವ ಈ ಎರಡು ಮಾನ್ಯತೆ ಗಳನ್ನು ವಿದ್ಯಾಸಂಸ್ಥೆಯು ಪ್ರಾರಂಭವಾದ 9 ಮತ್ತು 11ನೇ ವರ್ಷಗಳಲ್ಲಿ ಪಡೆದಿರುವ ಕರಾವಳಿ ಕರ್ನಾಟಕದ ಪ್ರಪ್ರಥಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆ ಈ ವಿದ್ಯಾ ಸಂಸ್ಥೆಗೆ ಸಿಕ್ಕಿರುವುದು ಹೆಮ್ಮೆಯ ವಿಷಯ. ಇದೀಗ 2023-24 ಶೈಕ್ಷಣಿಕ ವರ್ಷದಿಂದ ಉಡುಪಿ ಸುತ್ತಮುತ್ತಲಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಎಜ್ಯುಕೇಶನ್ ಸೊಸೈಟಿಯ ಆಶ್ರಯಲ್ಲಿ ನಿರಾಮಯ ಕಾಲೇಜ್ ಆಫ್ ನರ್ಸಿಂಗ್ನಲ್ಲಿ 4 ವರ್ಷದ ಬಿ.ಎಸ್ಸಿ ನರ್ಸಿಂಗ್ ಹಾಗೂ ನಿರಾಮಯ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ನಲ್ಲಿ ಅನಸ್ತೀಶಿಯ ಆಪರೇಶನ್ ಥಿಯೇಟರ್ ಟೆಕ್ನಾಲಜಿ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಹಾಗೂ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಎಂಬ ಮೂರು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳ ಜೊತೆಗೆ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಮಾರ್ಕೆಟಿಂಗ್ ಹಾಗೂ ಫೈನಾನ್ಸ್ ವಿಶೇಷತೆಯೊಂದಿಗೆ 2 ವರ್ಷದ ಪದವಿ ಪ್ರಾರಂಭಿಸಲು ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ, ಬೆಳಗಾವಿ ವಿಶ್ವವಿದ್ಯಾನಿಲಯದ ಅನುಮೋದನೆ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಸರಕಾರದಿಂದ ಅನುಮತಿ ದೊರೆತಿರುತ್ತದೆ. ಈ ಎಲ್ಲಾ ಕೋರ್ಸ್ಗಳು ಬಂಟಕಲ್ಲಿನ ಸುಂದರ ವಾತಾವರಣದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ. ಈ ಎಲ್ಲಾ ಸಾಧನೆಗಳು ಪೂಜ್ಯ ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದರ ಕನಸಾದ ಮಧ್ವ ವಿಶ್ವವಿದ್ಯಾನಿಲಯಕ್ಕೆ ಕನಸಿಗೆ ಮತ್ತೊಂದು ಮೆಟ್ಟಿಲಾಗಿದೆ ಎಂದು ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಬುಧವಾರ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಎಮ್ಬಿಎ 2 ವರ್ಷದ ಪದವಿಯಾಗಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಯದಿಂದ 3 ವರ್ಷದ ಪದವಿ ಪೂರ್ಣಗೊಳಿಸಿ ಶೇಕಡಾ 50% ಅಂಕಗಳೊಂದಿಗೆ ಹಾಗೂ KMAT/PGCET/CAT ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು. ಬಿಎಸ್ಸಿ ನರ್ಸಿಂಗ್ 4 ವರ್ಷದ ಕೋರ್ಸ್ ಆಗಿದ್ದು (3 ವರ್ಷ ಮತ್ತು 1 ವರ್ಷ ಇಂಟರ್ನ್ಶಿಪ್) ಅಭ್ಯರ್ಥಿಗಳು ಸಂಪೂರ್ಣವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆಯಬಹುದು. ಅಲೈಡ್ ಹೆಲ್ತ್ ಸೈನ್ಸ್ ಇದು ಕೂಡ 4 ವರ್ಷದ ಕೋರ್ಸ್ ಆಗಿದ್ದು (3 ವರ್ಷ ಮತ್ತು 1 ವರ್ಷ ಇಂಟರ್ನ್ಶಿಪ್) ಅಭ್ಯರ್ಥಿಗಳು ವಿಶ್ವವಿದ್ಯಾನಿಯದ ಮಾನದ೦ಡದ ಪ್ರಕಾರ ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಒಟ್ಟು ಕನಿಷ್ಠ 50% ಅಂಕವನ್ನು ಪಡೆದಿರಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ ಈ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಬೆಳ್ಮಣ್, ನರ್ಸಿಂಗ್ ಕಾಲೇಜಿನ ನಿಯೋಜಿತ ಪ್ರಾಂಶುಪಾಲೆಯಾದ ಡಾ. ಪ್ಲೇವಿಯಾ ಕ್ಯಾಸ್ಟೆಲಿನೊ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ನಿಯೋಜಿತ ಪ್ರಾಂಶುಪಾಲರಾದ ಡಾ. ನವೀನ್ ಬಲ್ಲಾಳ್, ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಆಡಳಿತಾಧಿಕಾರಿ ವಿದ್ಯಾಭಟ್ ಹಾಜರಿದ್ದರು.
ಕಾಪು : ಕುತ್ಯಾರಿನ ಗ್ರಾಮ one ಸೇವಾ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಅವಕಾಶ
Posted On: 19 Jul 2023, 02:18 PM
ಕಾಪು : ಕುತ್ಯಾರು, ಕಳತ್ತೂರು ಗ್ರಾಮದ ಜನತೆಗೆ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಶ್ರೀ ಸಾಯಿ ಕಂಪ್ಯೂಟರ್ ಗ್ರಾಮ one ಸೇವಾ ಕೇಂದ್ರದ ಕುತ್ಯಾರಿನ ಕಚೇರಿಯಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. ಕಚೇರಿ ವಿಳಾಸ : ಸಾಯಿ ಕಂಪ್ಯೂಟರ್ ಗ್ರಾಮ one ಸೇವಾ ಕೇಂದ್ರ (ಗ್ರಾಮ ಪಂಚಾಯತಿ ಕುತ್ಯಾರಿನ ಹತ್ತಿರ) ಐಡ ಕಾಂಪ್ಲೆಕ್ಸ್, ಶಾಂತಿ ಗುಡ್ಡೆ ಬಸ್ಟ್ಯಂಡ್ ಬಳಿ, 108 ಕಳತ್ತೂರು ಕಾಪು ತಾಲೂಕು ಉಡುಪಿ ಜಿಲ್ಲೆ 574106 ಮೊಬೈಲ್ :9606764039
ಜುಲೈ 22 : ದೊಂದಿ ಬೆಳಕಿನ ಕೊರಗಜ್ಜ ದೈವದ ನೇಮೋತ್ಸವ
Posted On: 17 Jul 2023, 07:34 PM
ಉಡುಪಿ : ಇಲ್ಲಿನ ವುಡ್ಲ್ಯಾಂಡ್ಸ್ ಹೋಟೆಲ್ ಹತ್ತಿರದ ಬೊಬ್ಬರ್ಯಕಟ್ಟೆ ಶ್ರೀ ಬೊಬ್ಬರ್ಯ, ಕಾಂತೇರಿ ಜುಮಾದಿ ಹಾಗೂ ಕಲ್ಕುಡ, ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಬೊಬ್ಬರ್ಯ ಯುವ ಸೇವಾ ಸಮಿತಿ ಉಡುಪಿ ಸುಪ್ರಸಾದ್ ಶೆಟ್ಟಿ ಅಭಿಮಾನಿ ಬಳಗ ಉಡುಪಿ ಹಾಗೂ ಮಮತಾ ಪಿ. ಶೆಟ್ಟಿ ಅಭಿಮಾನಿ ಬಳಗ ಉಡುಪಿ ಇವರ ವತಿಯಿಂದ ದೊಂದಿ ಬೆಳಕಿನ ಕೊರಗಜ್ಜ ದೈವದ ನೇಮೋತ್ಸವ ಜುಲೈ 22, ಶನಿವಾರ ಸಂಜೆ 7 ಗಂಟೆಗೆ ಜರಗಲಿದೆ. ನೇಮೋತ್ಸವದ ನೇರ ಪ್ರಸಾರವವು ನಮ್ಮ ಉಡುಪಿ ಟಿ.ವಿ. ಚಾನೆಲ್ ಹಾಗೂ ಫೇಸ್ಬುಕ್ ಪೇಜ್ನಲ್ಲಿ ಪ್ರಸಾರವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಟಿಪ್ಪರ್ನ ಹಿಂಬದಿಗೆ ಸಿಲುಕಿದ ಕಾರು ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ; ಪ್ರಕರಣ ದಾಖಲು
Posted On: 17 Jul 2023, 07:05 PM
ಪಡುಬಿದ್ರಿ : ಟಿಪ್ಪರ್ನ ಹಿಂಬದಿಗೆ ಸಿಲುಕಿದ ಸ್ಯಾಂಟ್ರೋ ಕಾರನ್ನು ಕಿಲೋಮೀಟರ್ ದೂರ ಟಿಪ್ಪರ್ ಎಳೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಕಾರು ಸಾಗರದಿಂದ ಮಂಗಳೂರು ಕಡೆ ಹಾಗೂ ಟಿಪ್ಪರ್ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಬಳಿಕ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದ ಸಾರ್ವಜನಿಕರು ಬೈಯ್ದು ನಿಲ್ಲಿಸಿದ್ದು, ಪಡುಬಿದ್ರಿ ಪೊಲೀಸರು ಟಿಪ್ಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯವಾಗಿದ್ದು, ಗಾಯಗಳನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವ ಜನತೆ ಉನ್ನತ ಸಾಧನೆಯ ಗುರಿ ಇಟ್ಟುಕೊಳ್ಳಬೇಕು : ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ.
Posted On: 17 Jul 2023, 06:33 PM
ಉಡುಪಿ : ಯುವ ಜನತೆ ತಮ್ಮ ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಸ್ಪಷ್ಟ ಗುರಿ ಇಟ್ಟುಕೊಂಡು, ಆ ಗುರಿ ತಲುಪಲು ನಿರಂತರವಾಗಿ ಪರಿಶ್ರಮ ಪಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆದ ಆಗ್ನಿಪಥ್ ಸೇನಾ ನೇಮಕಾತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಯುವಜನತೆ ತಾವು ಇಟ್ಟುಕೊಂಡ ಗುರಿ ಸಾಧನೆಗೆ ಕಠಿಣ ಶ್ರಮ ಪಡಬೇಕು. ಶ್ರಮ ಪಟ್ಟರೆ ಸ್ವಲ್ಪ ತಡವಾದರೂ ಉತ್ತಮ ಪ್ರತಿಫಲ ದೊರಕೇ ದೊರೆಯುತ್ತದೆ. ಯಾವುದೇ ಸಂದರ್ಭದಲ್ಲಿ ನಿರಾಶರಾಗದೇ ಮುಂದೆ ಸಾಗಿದ್ದಲ್ಲಿ ಯಶಸ್ಸು ಸಿಗಲಿದೆ. ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡುವ ನಿಟ್ಟಿನಲ್ಲಿ ಯುವ ಜನತೆ ಕಾರ್ಯೋನ್ಮುಖರಾಗಬೇಕು ಎಂದರು. ಉನ್ನತ ಧ್ಯೇಯದಿಂದ ಅಗ್ನಿಪಥ್ ಮೂಲಕ ದೇಶರಕ್ಷಣೆಗಾಗಿ ಸೇನೆಗೆ ಸೇರ್ಪಡೆಯಾಗುತ್ತಿರುವ ಯುವಜನರ ಕನಸು ಸಾಕಾರಗೊಂಡು ಯಶಸ್ಸು ದೊರೆಯಲಿ, ಮುಂದಿನ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಸೇನೆಯ ಮೇಜರ್ ಜನರಲ್ ಆರ್.ಆರ್.ರೈನಾ, ವಿಶಿಷ್ಠ ಸೇವಾ ಮೆಡಲ್, ಅಡಿಷನಲ್ ಡೈರಕ್ಟರ್ ಜನರಲ್, ನೇಮಕಾತಿ ವಿಭಾಗ ಮತ್ತು ಮಂಗಳೂರು ಸೇನಾ ನೇಮಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ಅನುಜ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು. ಇಂದು ನಡೆದ ರ್ಯಾಲಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 41, ಉಡುಪಿಯ 59, ದ.ಕನ್ನಡದ 88, ದಾವಣಗೆರೆಯ 91, ಶಿವಮೊಗ್ಗದ 92 ಹಾಗೂ ಹಾವೇರಿ ಜಿಲ್ಲೆಯ 294 ಸೇರಿದಂತೆ ಒಟ್ಟು 665 ಅಭ್ಯರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 6.30 ರಿಂದ ನಡೆದ ಓಟದ ಸ್ಪರ್ಧೆಯಲ್ಲಿ ಅಭ್ಯರ್ಥಿಗಳನ್ನು ತಲಾ 100 ಜನರಂತೆ ತಂಡಗಳಾಗಿ ವಿಂಗಡಿಸಲಾಗಿದ್ದು, ನಿಗದಿತ ದೂರ 1600 ಮೀ. (ಕ್ರೀಡಾಂಗಣದ 4 ಸುತ್ತು) ನ್ನು 5.30 ನಿಮಿಷದೊಳಗೆ ಪೂರ್ಣಗೊಳಿಸಿದವರನ್ನು ಮತ್ತು 5.30 ರಿಂದ 5.45 ನಿಮಿಷದೊಳಗೆ ಪೂರ್ಣಗೊಳಿಸಿದವರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿತು. ಅದರ ನಂತರ ಓಡಿದ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಯಿತು. ಕೆಲವೇ ಸೆಕಂಡ್ಗಳ ಅಂತರದಲ್ಲಿ ಓಟವನ್ನು ಪೂರ್ಣಗೊಳಿಸಲಾಗದೇ ವಿಫಲರಾದ ಹಲವು ಅಭ್ಯರ್ಥಿಗಳು ಸ್ಥಳದಲ್ಲೇ ರೋಧಿಸಿ, ತಮ್ಮನ್ನು ಅರ್ಹತೆಗೆ ಪರಿಗಣಿಸುವಂತೆ ಸೇನೆಯ ಅಧಿಕಾರಿಗಳಲ್ಲಿ ಬೇಡಿಕೊಳ್ಳುತ್ತಿದ್ದರು. ಆದರೆ ಸೇನೆಯ ಅಧಿಕಾರಿಗಳು ಅವರನ್ನು ಮುಂದಿನ ರ್ಯಾಲಿಯಲ್ಲಿ ಮತ್ತೊಮ್ಮೆ ಪ್ರಯತ್ನಿಸುವಂತೆ ಸಮಾಧಾನ ಮಾಡಿ ಕಳುಹಿಸುತ್ತಿದ್ದರು. 4 ಓಟದ ಸ್ಪರ್ಧೆಯಲ್ಲಿ ಸಂಪೂರ್ಣ ನಿತ್ರಾಣರಾದವರಿಗೆ ತುರ್ತು ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲು ಅಂಬುಲೆನ್ಸ್ ಸಹಿತ ವೈಧ್ಯಾಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಸ್ಥಳದಲ್ಲಿ ಯಾವುದೇ ಗದ್ದಲ, ನೂಕು ನುಗ್ಗಲು ಉಂಟಾಗದಂತೆ ಪೊಲೀಸ್ ಸಿಬ್ಬಂದಿ ಅಗತ್ಯ ಮುಂಜಾಗ್ರತೆ ವಹಿಸಿದ್ದರು. ರ್ಯಾಲಿಯಲ್ಲಿ ಅಭ್ಯರ್ಥಿಗಳಿಗೆ 1600 ಮೀ ಓಟದ ಜೊತೆಗೆ 9 ಅಡಿ ಕಂದಕ ಜಿಗಿತ, ಫುಲ್ ಅಪ್, ಎತ್ತರ, ಎದೆಯ ಸುತ್ತಳತೆ ಮತ್ತು ತೂಕ ಹಾಗೂ ವೈದ್ಯಕೀಯ ಪರೀಕ್ಷೆ ಮುಂತಾದ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜುಲೈ 17 ರಿಂದ 25 ರ ವರೆಗೆ ನಡೆಯುವ ರ್ಯಾಲಿಗೆ ಜಿಲ್ಲಾಡಳಿದ ಮೂಲಕ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಅಭ್ಯರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 6,800 ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಂಡಿದ್ದು, ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮೆನ್, ಅಗ್ನಿವೀರ್ ಕ್ಲಕ್/ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.
ಮೀನುಗಾರರಿಗೆ ಸಾಮೂಹಿಕ ಅಪಘಾತ ವಿಮಾ ಯೋಜನೆ
Posted On: 17 Jul 2023, 06:25 PM
ಉಡುಪಿ : ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯತ್ವ ಹೊಂದಿರುವ 18 ರಿಂದ 60 ವರ್ಷದೊಳಗಿನ ಮೀನುಗಾರರು, ಮೀನುಗಾರಿಕೆಯಲ್ಲಿ ಹಾಗೂ ಮೀನುಗಾರಿಕೆಗೆ ಪೂರಕವಾದ ಇತರೇ ಚಟುವಟಿಕೆಗಳಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಅಥವಾ ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಿಂದ ಜೀವ ಹಾನಿಯಾದಲ್ಲಿ ಅಂತಹ ಕುಟುಂಬದವರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ಸಾಮೂಹಿಕ ಅಪಘಾತ ವಿಮಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಮೀನುಗಾರಿಕೆ ಸಹಕಾರ ಸಂಘದ ಸದಸ್ಯತ್ವ ಹೊಂದಿರುವ ಮೀನುಗಾರರ ಹಾಗೂ ವಿಮೆ ಸೌಲಭ್ಯಕ್ಕಾಗಿ ನಾಮನಿರ್ದೇಶನ ಮಾಡುವ ಕುಟುಂಬ ಸದಸ್ಯರ ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಪ್ರತಿ ಹಾಗೂ ಇತರೆ ವಿವರಗಳನ್ನು ತಾವು ಸದಸ್ಯತ್ವ ಹೊಂದಿರುವ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಜುಲೈ 28 ರ ಒಳಗೆ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಆಟಿ ಅಮಾವಾಸ್ಯೆಯ ಕಷಾಯ ವಿತರಣೆ
Posted On: 17 Jul 2023, 05:44 PM
ಪಡುಬಿದ್ರಿ : ಇಲ್ಲಿನ ಸಾಯಿ ಆರ್ಕೇಡ್ ನಲ್ಲಿ ಸಾರ್ವಜನಿಕರಿಗೆ ಆಟಿ ಅಮಾವಾಸ್ಯೆಯ ಕಷಾಯ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಹಿರಿಯ ತುಳು ಜಾನಪದ ವಿದ್ವಾಂಸರಾದ ಸದಾನಂದ ಪಿ.ಕೆ, ಆಷಾಢ ಮಾಸದ (ಆಟಿ ಅಮಾವಾಸ್ಯೆ) ಹಾಲೆ ಮರದ ಕೆತ್ತೆಯನ್ನು ನಡುರಾತ್ರಿ ವಿವಸ್ತ್ರವಾಗಿ ಹೋಗಿ ಕಲ್ಲಿನಿಂದ ಕೆತ್ತಿ ತಂದು ಮೇಲಿನ ತೊಗಟೆಯನ್ನು ತೆಗದು , ಗುದ್ದಿ ರಸ ತೆಗದು ಆ ಮೇಲೆ ಬೆಳ್ಳುಳ್ಳಿ , ಕರಿ ಮೆಣಸು ಮತ್ತು ಓಮವನ್ನು ಸೇರಿಸಿ ಅದನ್ನು ಸರಿಯಾದ ರೀತಿಯಲ್ಲಿ ಹುರಿದು, ಕಷಾಯ ದಲ್ಲಿರುವ ಶೀತದ ಅಂಶವನ್ನು ತೆಗೆಯುವ ಉದ್ದೇಶ ದಿಂದ ಕಾಯಿಸಿದ ಬಿಳಿ ಬೋರ್ಗಲ್ಲನ್ನು ಕಷಾಯಕ್ಕೆ ಹಾಕಿ ನಂತರ ತೆಗೆದು ತಯಾರಿಸುವ ಕಷಾಯವೇ ಆಟಿ ಅಮಾವಾಸ್ಯೆ ಕಷಾಯ ಆಗಿದೆ ಎಂದರು. ಈ ಸಂದರ್ಭದಲ್ಲಿ ಗಾ.ಪಂ. ಅಧ್ಯಕ್ಷ ರವಿ ಶೆಟ್ಟಿ, ಸದಸ್ಯೆ ವಿದ್ಯಾಶ್ರೀ , ಹೆಜಮಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಹಿತೇಶ್ ಪಡುಬಿದ್ರಿ, ಶೀಲಾ ಪಡುಬಿದ್ರಿ ಉಪಸ್ಥಿತರಿದ್ದರು.
ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ನಾಲ್ಕನೇ ವರುಷದ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಣೆ
Posted On: 17 Jul 2023, 05:30 PM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಸಂಸ್ಥೆಯ ವತಿಯಿಂದ ಸತತ ನಾಲ್ಕನೇ ವರುಷದ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಿಸಲಾಯಿತು. ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ, ಶರತ್ ಉಡುಪ, ಹೊಯಿಗೆ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ರಿತೇಶ್ ದೇವಾಡಿಗ, ಉಪಾಧ್ಯಕ್ಷ ಸಂತೋಷ್ ದೇವಾಡಿಗ, ಕಾರ್ಯದರ್ಶಿ ಸತೀಶ ಕುಮಾರ್, ರಾಘವೇಂದ್ರ ಸುವರ್ಣ, ಲಕ್ಷ್ಮಣ್ ಕೋಟ್ಯಾನ್, ಅರುಣ್ ಪೂಜಾರಿ, ರೋಷನ್, ಶ್ರೀನಿತ್, ಶ್ರೀಜಿತ್, ಅಂಕಿತ್ ಉಪಸ್ಥಿತರಿದ್ದರು.
ಮೂಳೂರು : ಸತತ 8ನೇ ವರ್ಷದ ಆಟಿ ಕಷಾಯ ವಿತರಣೆ
Posted On: 17 Jul 2023, 05:24 PM
ಮೂಳೂರು : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು, ಟ್ರಸ್ಟ್ ಸದಸ್ಯರು ಹಾಗೂ ಸಂಜೀವ ಪೂಜಾರಿ ಸಹಕಾರದೊಂದಿಗೆ ಆಟಿ ಅಮಾವಾಸ್ಯೆಯ ಪ್ರಯುಕ್ತ ಸತತ 8ನೇ ವರ್ಷ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಸರಕಾರಿ ಸಂಯುಕ್ತ ಶಾಲೆ ಮೂಳೂರಿನಲ್ಲಿ ಉಚಿತವಾಗಿ ವಿತರಿಸುವ ಮೂಲಕ ಈ ಪುರಾತನ ಸಂಪ್ರದಾಯದ ಪ್ರಯೋಜನವನ್ನು ಸುಮಾರು ೧೨೦೦ ಜನರು ಪಡೆದರು. ಗೌರವ ಸಲಹೆಗಾರರಾದ ಅಶೋಕ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ, ಟ್ರಸ್ಟೀ ನಾಗೇಶ್ ಅಮೀನ್, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಸುಖೇಶ್ ಡಿ ಮೂಳೂರು, ಅಶೋಕ್ ಕರ್ಕೇರ, ಸುಜಯ್ ಕುಕ್ಯನ್, ಅರುಣ್ ಕುಲಾಲ್, ಹವ್ಯಾಸ್ ಪೂಜಾರಿ, ಗಗನ್ ಮೆಂಡನ್, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರ ಪ್ರಯಾಣ
Posted On: 17 Jul 2023, 04:55 PM
ಉಡುಪಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಮೂಲಕ ಉಡುಪಿ ಜಿಲ್ಲೆಯ ಸರಕಾರಿ ಬಸ್ ಗಳಲ್ಲಿ 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ ಜುಲೈ 14 ರ ವರೆಗೆ ಇದುವರೆಗೆ 3.62 ಕೋಟಿ ರೂ ಆದಾಯ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಮತ್ತು ಕುಂದಾಪುರ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ನಗರ ಸಾರಿಗೆ, ವೇಗದೂತ ಮತ್ತು ಸಾಮಾನ್ಯ ಸಾರಿಗೆ ಈ ಎಲ್ಲಾ ವರ್ಗದಲ್ಲಿಯೂ ಮಹಿಳಾ ಪ್ರಯಾಣಿಕರ ಸಂಚಾರದಲ್ಲಿ ಗಣನೀಯ ಏರಿಕೆಯಾಗಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸುಮಾರು 25 ರಿಂದ 30 % ರಷ್ಟು ಪ್ರಯಾಣಿಕರ ಸಂಖ್ಯೆ ಅಧಿಕಗೊಂಡಿದೆ. ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, ಅಂದಿನಿಂದ ಜೂನ್30 ರ ವರೆಗೆ ಉಡುಪಿ ಘಟಕದಲ್ಲಿ , ನಗರ ಸಾರಿಗೆ ಬಸ್ ಗಳಲ್ಲಿ 100838 ಮಹಿಳಾ ಪ್ರಯಾಣಿಕರು ಸಂಚರಿಸಿ 1470793 ರೂ, ವೇಗದೂತ ಬಸ್ ಗಳಲ್ಲಿ 94998 ಮಹಿಳಾ ಪ್ರಯಾಣಿಕರು ಸಂಚರಿಸಿ 7409003 ರೂ, ಸಾಮಾನ್ಯ ಬಸ್ ಗಳಲ್ಲಿ 40232 ಮಹಿಳಾ ಪ್ರಯಾಣಿಕರು ಸಂಚರಿಸಿ 794933 ರೂ, ಆದಾಯ ಬಂದಿದ್ದರೆ, ಕುಂದಾಪುರ ಘಟಕದಲ್ಲಿ ವೇಗದೂತ ಬಸ್ ಗಳಲ್ಲಿ 71410 ಮಹಿಳಾ ಪ್ರಯಾಣಿಕರು ಸಂಚರಿಸಿ 6325419 ರೂ, ಸಾಮಾನ್ಯ ಬಸ್ ಗಳಲ್ಲಿ 241497 ಮಹಿಳಾ ಪ್ರಯಾಣಿಕರು ಸಂಚರಿಸಿ 4352614 ರೂ, ಆದಾಯ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5,48,975 ಮಹಿಳಾ ಪ್ರಯಾಣಿಕರು ಸಂಚರಿಸಿ 2,03,52,762 ರೂ ಆದಾಯ ಸಾರಿಗೆ ನಿಗಮಕ್ಕೆ ಬಂದಿದೆ. ಜುಲೈ 14 ರ ವರೆಗೆ ಉಡುಪಿ ಘಟಕದಲ್ಲಿ ಒಟ್ಟು 1,92,641 ಮಹಿಳೆಯರು ಸಂಚರಿಸಿದ್ದು, 78,40,072 ರೂ ಆದಾಯ, ಕುಂದಾಪುರ ಘಟಕದಲ್ಲಿ 2,29,557 ಮಹಿಳೆಯರು ಸಂಚರಿಸಿದ್ದು, 80,88,362 ರೂ ಆದಾಯ ಗಳಿಕೆಯಾಗುವ ಮೂಲಕ ಯೋಜನೆ ಜಾರಿಗೆಯಾದಾಗಿನಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 9.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಸಾರಿಗೆ ಸಂಸ್ಥೆಗೆ 3.62 ಕೋಟಿ ರೂ ಆದಾಯ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಾಬಲ್ಯವಿದ್ದರೂ ಸಹ ಶಕ್ತಿ ಯೋಜನೆಯ ನಂತರ ಮಹಿಳಾ ಪ್ರಯಾಣಿಕರು ಸರಕಾರಿ ಬಸ್ ಗಳಲ್ಲಿ ಸಂಚರಿಸಲು ಉತ್ಸಾಹ ತೋರುತ್ತಿದ್ದು, ಸರಕಾರದ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಉಡುಪಿಯ ಘಟಕದಲ್ಲಿ 65 ಬಸ್ ಮತ್ತು ಕುಂದಾಪುರ ಘಟಕದ ಬಸ್ ಗಳು 68 ಬಸ್ ಗಳು ಶಕ್ತಿ ಯೋಜನೆಯಡಿ ಪ್ರತಿದಿನ ಸೇವೆ ನೀಡುತ್ತಿದ್ದು, ಪ್ರತಿದಿನ ಜಿಲ್ಲೆಯ ವಿವಿಧ ಕಡೆಗಳಿಲ್ಲಿ ಮತ್ತು ಜಿಲ್ಲೆಯ ಹೊರಗೆ ಹಲವಾರು ಟ್ರಿಪ್ ಸಂಚರಿಸುತ್ತಿವೆ. ವಾರಾಂತ್ಯದಲ್ಲಿ ಉಡುಪಿಯ ಶ್ರೀ ಕೃಷ್ಠ ಮಠ, ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳು ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಹೊರ ಜಿಲ್ಲೆಯಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರು ಆಗಮಿಸುತ್ತಿದ್ದು, ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೂ ಸಹ ಆದಾಯ ಬರುತ್ತಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಈ ಶಕ್ತಿ ಯೋಜನೆಯು ಮಹಿಳೆಯರು ಸ್ವಾಭಿಮಾನ ಮತ್ತು ಸ್ವಾವಲಂಬಿಯಾಗಿ ಬದುಕಲು ನೆರವಾಗುವುದರ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆ ಹಾಗೂ ಆರ್ಥಿಕ ಬೆಳವಣಿಗೆಗೂ ಸಹ ನೆರವು ನೀಡುತ್ತಿದ್ದು, ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರ ಸಂಖ್ಯೆಯೂ ಸಹ ಅಧಿಕಗೊಂಡಿದ್ದು, ನಷ್ಟದಲ್ಲಿದ್ದ ರಾಜ್ಯದ ಎಲ್ಲಾ ಸರ್ಕಾರಿ ಸಾರಿಗೆ ನಿಗಮಗಳು ಸಹ ಲಾಭದಾಯಕವಾಗಿ, ಶೀಘ್ರದಲ್ಲಿಯೇ ಸ್ವಾವಲಂಬನೆಯ ಹಾದಿಯಲ್ಲಿ ನಡೆಯಲಿವೆ.
