Updated News From Kaup
ಇಂದು ಕಟಪಾಡಿಗೆ ಅಮಿತ್ ಷಾ : ಬಹಿರಂಗ ಸಾರ್ವಜನಿಕ ಸಭೆ

Posted On: 29-04-2023 12:41PM
ಕಟಪಾಡಿ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಬಿಜೆಪಿ ಅಭ್ಯರ್ಥಿ ಮತ ಪ್ರಚಾರದ ಅಂಗವಾಗಿ ಮಧ್ಯಾಹ್ನ 2ಕ್ಕೆ ಉಡುಪಿಯಿಂದ ನೇರವಾಗಿ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಜರಗುವ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಮಿತ್ ಶಾ ಬರುವಿಕೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.

ಕೇರಳದ ಬ್ರಾಹ್ಮಣರ ಬೆನ್ನತ್ತಿ ಬಂದು ಇನ್ನಂಜೆ ಗ್ರಾಮದ ಮಂಡೇಡಿಯಲ್ಲಿ ನೆಲೆಯಾದ ಕೊರತಿ ದೈವ

Posted On: 29-04-2023 07:44AM
ಸುಮಾರು ನೂರಾರು ವರುಷಗಳ ಹಿಂದೆ ಕೇರಳದ ಬ್ರಾಹ್ಮಣ ಕುಟುಂಬವೊಂದರ ಭಕ್ತಿಗೆ ಬೆನ್ನತಿ ಬಂದ ಕೊರತಿ ದೈವವು ಮಂಡೇಡಿಯ ಬಾಕ್ಯಾರಿನ ಜಾಗವೊಂದರಲ್ಲಿ ಪರಿವಾರ ದೈವಗಳಾದ ಬೊಬ್ಬರ್ಯ, ಪಂಜುರ್ಲಿ, ನೀಚ ಮತ್ತು ಗುಳಿಗ ದೈವದೊಂದಿಗೆ ನೆಲೆಯಾಗಿ ಮುಂದೆ ಆ ಜಾಗವು ಕೊರತಿ ಬಾಕ್ಯಾರು ಎಂಬ ಹೆಸರಿನಿಂದಲೇ ಪ್ರಸಿದ್ದಿಯಾಗಿ ಪಂಚದೈವಗಳ ಸಾನಿಧ್ಯವೆಂದೇ ಹೆಸರಾಯಿತು. ಕಾಲಕ್ರಮೇಣ 33 ವರ್ಷಗಳ ಹಿಂದೆ ಕೊಂಕಣ ರೈಲ್ವೆಯವರು ಟ್ರ್ಯಾಕ್ ನಿರ್ಮಿಸುವ ಸಂದರ್ಭದಲ್ಲಿ ಗುಡಿಯನ್ನು ಹಿಂದೆ ಇದ್ದ ಜಾಗದಿಂದ ತೆರವುಗೊಳಿಸಬೇಕಾದಾಗ 5,000 ರೂಪಾಯಿಯನ್ನು ನೀಡಿ ಕೈ ತೊಳೆದುಕೊಂಡಿದ್ದರು, ಆಗ ಆ ಕುಟುಂಬ ದೈವವನ್ನು ಬಿಟ್ಟು, ನಾಗನ ಕಲ್ಲನ್ನು ನೀರಿಗೆ ವಿಸರ್ಜಿಸಿ ಅಲ್ಲಿಂದ ಬೇರೆ ಕಡೆಗೆ ತೆರಳಿದ್ದರು.
ಮಂಡೇಡಿ ಗ್ರಾಮಕ್ಕೆ ಸಂಬಂಧಪಟ್ಟ ಅಸುಪಾಸಿನ ಹತ್ತು ಮನೆಯವರು ಸೇರಿ ಬ್ರಾಹ್ಮಣರ ಜಾಗದಲ್ಲಿಯೇ ಚಲನೆ ಮಾಡಿ ದೈವವನ್ನು ತೆಂಗಿನಕಾಯಿಗೆ ಅವಾಹನೆ ಮಾಡಿ ಹಾಲಿನ ಮರಕ್ಕೆ ಕಟ್ಟಿ ಇಟ್ಟಿದ್ದರು, ರೈಲ್ವೆ ಟ್ರ್ಯಾಕ್ನ ಕೆಲಸಕ್ಕೆ ಬಂದಿದ್ದ ಜೇಸಿಬಿಯವರು ಆ ತೆಂಗಿನಕಾಯಿಯನ್ನು ಒಡೆದು ತಿಂದಿದ್ದರು ಪರಿಣಾಮ ಎಷ್ಟೇ ಪ್ರಯತ್ನ ಪಟ್ಟರು ಜೇಸಿಬಿ ಕೆಟ್ಟು ಹೋಗಿ ಕೆಲಸ ಮುಂದೆ ಸಾಗಲಿಲ್ಲ, ದೊಡ್ಡ ದೊಡ್ಡ ಮೆಕ್ಯಾನಿಕ್ಗಳನ್ನು ಕರೆಸಿದರು ಕೂಡಾ ಜೇಸಿಬಿ ಮುಂದೆ ಸಾಗದೇ ಇದ್ದಾಗ ದೇವರ ಮೊರೆ ಹೋಗುವುದೋ, ದೈವಜ್ಞರ ಮೊರೆ ಹೋಗುವುದೋ ಅನಿವಾರ್ಯವಾಯಿತು. ಅವರಿಗೆ ತಿಳಿದ ಕೇರಳದ ಮಾಂತ್ರಿಕರೊಬ್ಬರನ್ನು ಕರೆಸಿ ಕೇಳಿದಾಗ ಅವರು ಸಾನಿಧ್ಯದ ಬಗ್ಗೆ ಹೇಳಲಾಗಿ ತೆಂಗಿನಕಾಯಿಯನ್ನು ತಿಂದ ಬಗ್ಗೆ ಗೋಚರಕ್ಕೆ ಬಂದು ದೈವವನ್ನು ಪ್ರತಿಷ್ಠೆ ಮಾಡದೇ ಇದ್ದರೆ ಜೇಸಿಬಿ ಯಾವುದೇ ಕಾರಣಕ್ಕೂ ಮುಂದೆ ಹೋಗುವುದಿಲ್ಲ, ಎಂದು ಕಾಣಿಸುತ್ತದೆ. ಕಲ್ಲು ಹಾಕಿ ದೈವವನ್ನು ನಂಬಿದ ನಂತರ ಜೇಸಿಬಿ ಪುನಃ ಎಂದಿನಂತೆ ಕೆಲಸ ಮಾಡಲಾರಂಭಿಸಿತು. ಬ್ರಾಹ್ಮಣರೊಬ್ಬರು ಅಲ್ಲಿನ ಕಾಡಿನಲ್ಲಿ ಇದ್ದ ಪಂಜುರ್ಲಿಯ ಕಲ್ಲಿನಲ್ಲಿ ಬಲ ಕಾಲಿನ ಹೆಜ್ಜೆಯ ಗುರುತಿನಂತಿದ್ದು ಆಕಾರವಿಲ್ಲದ ಸುಂದರವಾದ ಕಲ್ಲನ್ನು ತನ್ನ ಮನೆಯ ದನದ ಕೊಟ್ಟಿಗೆಯಲ್ಲಿ ತಂದು ಹಾಕಿದರು ಆ ದಿನ ಹಸುವಿನ ಹಾಲನ್ನು ಕರೆದಾಗ ಹಾಲಿನ ಬದಲಾಗಿ ರಕ್ತ ಸುರಿಯಲಾರಂಭಿಸಿತು, ಭಯಭೀತರಾದ ಅವರು ಎಲ್ಲಿಯೋ ಕೇಳಿ ನೋಡಿದಾಗ ಅದು ಪಂಜುರ್ಲಿಯ ಕಲ್ಲು ಎಂದು ಗೋಚರಕ್ಕೆ ಬಂದು ಇದ್ದ ಜಾಗದಲ್ಲಿಯೇ ಅದನ್ನು ಪ್ರತಿಷ್ಠೆ ಮಾಡಬೇಕೆಂದು ಕಾಣಿಸಿತು ಹೀಗೆ ಪಂಜುರ್ಲಿಯು ಕೂಡಾ ಒಂದು ಕಾಲದಲ್ಲಿ ಕಾರಣಿಕ ಮೆರೆದು ತನ್ನ ಇರುವಿಕೆಯನ್ನು ತೋರ್ಪಡಿಸಿದ್ದ.
ಇನ್ನು ಕ್ಷೇತ್ರದ ಗುಳಿಗನ ಬಗ್ಗೆ ಹೇಳಬೇಕೆಂದರೆ ಸ್ವತಃ ನನಗೆ ನೇಮದ ಸಂದರ್ಭದಲ್ಲಿ ಆಗಿದ್ದ ಅನುಭವ ಎದೆ ಜಲ್ಲೆನ್ನುವ ರೀತಿಯಲ್ಲಿತ್ತು. ಐದು ವರ್ಷಗಳ ಹಿಂದೆ ಬೇರೆ ಕಡೆಯ ನೇಮಕ್ಕೆಲ್ಲ ಹೋಗುವುದು ಕಡಿಮೆ ಊರಿನ ಬೆರ್ಮೋಟ್ಟಿನ ಗುಳಿಗನ ನೇಮವೋ, ಮತ್ಯಾರದ್ದೋ ಮನೆಯ ನೇಮವನ್ನು ನೋಡಿದ್ದ ನನಗೆ ಗುಳಿಗ ಅಬತರ ಹೇಗಿರಬಹುದು, ಆರ್ಭಟ ಹೇಗಿರಬಹುದೆನ್ನುವ ಕುತೂಹಲ. ಹತ್ತಿರದಲ್ಲಿ ನೋಡಬೇಕೆನ್ನುವ ಆಸೆಯಿಂದ ನಿಂತಿದ್ದಾಗ ಗುಳಿಗ ರೈಲ್ವೆ ಟ್ರ್ಯಾಕ್ ನ ಕಡೆಗೆ ಓಡುತ್ತಾನೆ ಟ್ರ್ಯಾಕ್ ನ ಮೇಲೆ ಹೋಗಿ ಕೆಳಗೆ ಇಳಿದಾಗಲೇ ಟ್ರ್ಯಾಕ್ನಲ್ಲಿ ರೈಲೊಂದು ಹಾದು ಹೋಗುತ್ತದೆ. ಗುಳಿಗನ ಮತ್ತು ರೈಲಿನ ಅಂತರ ನೋಡುವಾಗಲೇ ಮೈ ಜುಮ್ಮೆನ್ನುತ್ತದೆ , ದೈವ ನರ್ತನ ನಡೆಸುವ ಸಂದರ್ಭದಲ್ಲೆ ಇಹಲೋಕ ತ್ಯಜಿಸಿರುವ ಒಂದೆರಡು ಘಟನೆಗಳನ್ನು ಕಂಡಿರುವ ನಮಗೆ ಇಂತಹ ಘಟನೆಗಳು ಮತ್ತೆ ಮತ್ತೆ ನೆನಪಿಗೆ ಬಂದು ಗುಳಿಗನ ಕಾರಣಿಕವು ಬಹಳಷ್ಟಿದೆ ಅನ್ನುವುದಕ್ಕೆ ಸಾಕ್ಷಿಯಾಗಿದೆ. ಹಿಂದೆ ಕಾರಣಾಂತರಗಳಿಂದ ದೈವವನ್ನು ಬಿಟ್ಟುಹೋಗಿದ್ದ ಕುಟುಂಬ ಇದೀಗ ಬಂದಿದ್ದು, ನಿಮ್ಮೊಂದಿಗೆ ನಾವು ಕೂಡಾ ತನು -ಮನ -ಧನಗಳಿಂದ ದೈವದ ಸೇವೆಯನ್ನು ಮಾಡಲು ತಯಾರಿದ್ದೇವೆ ಎಂದು ಹೇಳಿರುವುದು, ಸಮಿತಿಗೆ ಮತ್ತು ಊರವರಿಗೆ ಆನೆಬಲ ಬಂದಂತಾಗಿದೆ. ಸರ್ವೇ ಜನೋ ಸುಖಿನೋ ಭವಂತು...
(ವಿಶೇಷ ಸೂಚನೆ : 2023ರ ಏಪ್ರಿಲ್ 30ರಂದು ರಾತ್ರಿ 9 ಗಂಟೆಯ ನಂತರ ನೇಮ ನಡೆಯಲಿದ್ದು ತುಳುನಾಡ ಸಂಸ್ಕೃತಿಯ ಬಗ್ಗೆ ವಿಶೇಷವಾದ ಕಾಳಜಿ ಇರುವವರು, ಭಕ್ತಾದಿಗಳು ಇದನ್ನೇ ವೈಯುಕ್ತಿಕ ಆಮಂತ್ರಣ ಎಂದು ಭಾವಿಸಿ ಬರಬಹುದು) ಬರಹ : ವಿಕ್ಕಿ ಪೂಜಾರಿ ಮಡುಂಬು
ಕಾಪು : ಪೇಟೆ ವಾರ್ಡ್ ನಂಬರ್ 135 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಬಿರುಸಿನ ಪ್ರಚಾರ

Posted On: 29-04-2023 07:42AM
ಕಾಪು : ಇಲ್ಲಿನ ಪೇಟೆ ವಾರ್ಡ್ ನಂಬರ್ 135 ರಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪರ ಬಿರುಸಿನ ಮತಯಾಚನೆ ಪಕ್ಷದ ಕಾರ್ಯಕರ್ತರಿಂದ ನಡೆಯಿತು.
ಈ ಸಂದರ್ಭ ಮಾತನಾಡಿದ ಕಾಪು ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹರೀಶ್ ನಾಯಕ್, ಕಾಪು ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆಯವರಿಗೆ ಎಲ್ಲಾ ಸಮಾಜದವರಿಂದಲೂ ಉತ್ತಮ ಸ್ಪಂದನೆಯನ್ನು ದೊರೆಯುತ್ತಿದ್ದು, ಈ ಬಾರಿ ಖಂಡಿತವಾಗಿಯೂ ಕಾಪುವಿನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ. ಅಲ್ಲದೆ ಪ್ರತಿ ಮನೆಗೂ ಪ್ರತಿ ತಿಂಗಳು ಗೃಹ ಜ್ಯೋತಿ ಕಾರ್ಯಕ್ರಮದ ಅಡಿಯಲ್ಲಿ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪ್ರತೀ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ಮನೆ ನಿರ್ವಹಣೆಗೆ ರೂ. 2,000 ಹಾಗೂ ವಿವಿಧ ಯೋಜನೆಗಳ ಕಾಂಗ್ರೆಸ್ ಗ್ಯಾರಂಟಿಗೆ ಮತದಾರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಹರೀಶ್ ನಾಯಕ್ ಕಾಪು, ದೀಪಕ್ ಕುಮಾರ್ ಎರ್ಮಾಳ್, ಮಾಧವ ಪಾಲನ್, ಆಶಾ ಕಟಪಾಡಿ, ಫರ್ಝಾನ, ಆಶಾ ಶಂಕರ್, ಶೋಭ ಪಾಂಗಳ, ಪ್ರಭಾಕರ್, ಶಂಕರ್ ಕಾಪು, ಕಾರ್ಯಕರ್ತರು ಉಪಸ್ಥಿತಿಯಿದ್ದರು.
ಕಟಪಾಡಿ : ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ ಅನುಶ್ರೀಯವರನ್ನು ಅಭಿನಂದಿಸಿದ ಗುರ್ಮೆ ಸುರೇಶ್ ಶೆಟ್ಟಿ

Posted On: 28-04-2023 10:01PM
ಕಟಪಾಡಿ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಉನ್ನತ ಸಾಧನೆಗೈದು, ರಾಜ್ಯಕ್ಕೆ 5 ನೇ ರ್ಯಾಂಕ್ ಪಡೆದ ಕಟಪಾಡಿಯ ಅನುಶ್ರೀ ಅವರನ್ನು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಮಾಡಿ, ಗೌರವಿಸಿ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.
ಕಾಪು : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯಿಂದ ಮಣಿಪುರ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ

Posted On: 28-04-2023 06:16PM
ಕಾಪು : ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಜೊತೆಯಾಗಿ ಕಾಪು ತಾಲೂಕಿನ ಮಣಿಪುರ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು.
ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಕಾಪು : ಕಾಂಗ್ರೆಸ್ ಪ್ರಚಾರ ವಾಹನಕ್ಕೆ ಚಾಲನೆ

Posted On: 28-04-2023 06:05PM
ಕಾಪು : ಕ್ಷೇತ್ರದಲ್ಲಿ ವಿನಯಕುಮಾರ್ ಸೊರಕೆಯವರ ಅಭಿವೃದ್ಧಿ ಕಾರ್ಯಕ್ರಮಗಳ ಬಗೆಗೆ ಪ್ರಚಾರ ನಡೆಸುವ ಕಾಂಗ್ರೆಸ್ ಪ್ರಚಾರ ವಾಹನಕ್ಕೆ ಕಾಪು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕರು ವಿನಯ ಕುಮಾರ್ ಸೊರಕೆ ಉದ್ಯಾವರದಲ್ಲಿ ಚಾಲನೆ ನೀಡಿದರು.
ಈ ಪ್ರಚಾರ ವಾಹನ ಕಾಪು ಕ್ಷೇತ್ರದಾದ್ಯಂತ ಸಂಚರಿಸಿ ಪ್ರಚಾರ ನಡೆಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಕುಮಾರ್, ರಾಯಸ್ ಫೆರ್ನಾಂಡೀಸ್, ಅಬೀದ್ ಅಲಿ, ಶೇಖರ ಕೋಟ್ಯಾನ್, ಸಾಯಿನಾಥ್, ನಿತೀನ್ ಸಾಲ್ಯಾನ್, ಸೊಹೇಲ್ ರಹಮತುಲ್ಲಾ, ಭಾಸ್ಕರ ಕೋಟ್ಯಾನ್, ಸಚಿನ್, ರಿಯಾಝ್ ಪಳ್ಳಿ, ಮೇರಿ ಡಿಸೋಜ, ಪೂರ್ಣಿಮಾ, ಆಶಾ, ಹೆಲೆನ್ ಫೆರ್ನಾಂಡೀಸ್, ದಿವಾಕರ ಬೊಳ್ಜೆ, ಸರೋಜ, ಗಿರೀಶ್ ಗುಡ್ಡೆಯಂಗಡಿ, ಮೀರಾ, ದಯಾನಂದ, ನಯಾಝ್ ಪಳ್ಳಿ, ಅನ್ಸರ್, ಆಶಾ ಸುರೇಶ್, ಸತೀಶ್ ಉಪಸ್ಥಿತರಿದ್ದರು.
ಮತ ಮಾರಿಕೊಳ್ಳಬೇಡಿ : ನ್ಯಾ.ಶಾಂತವೀರ ಶಿವಪ್ಪ

Posted On: 28-04-2023 04:53PM
ಉಡುಪಿ :ಮೇ 10 ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ, ತಮ್ಮ ಮತವನ್ನು ಮಾರಿಕೊಳ್ಳದೇ, ಉತ್ತಮ ಅಭ್ಯರ್ಥಿಗೆ ಮತಚಲಾಯಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು. ಅವರು ಉಡುಪಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮದರ್ಜೆಕಾಲೇಜು ಮತ್ತು ಸ್ನಾತಕೋತ್ತರಅಧ್ಯಯನ ಕೇಂದ್ರದಲ್ಲಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ, ಮತದಾನ ಜಾಗೃತಿ ಸಾರುವ ಟ್ಯಾಬ್ಲೋ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಚುನಾವಣೆಯಲ್ಲಿ ಬಹುತೇಕ ಯುವಜನತೆ ಮೊದಲ ಬಾರಿಗೆ ಮತ ಚಲಾಯಿಸುವ ಸಂಭ್ರಮದಲ್ಲಿದ್ದು, ಯಾವುದೇ ಆಮಿಷಗಳಿಗೆ ಬಲಿಯಾಗದೇ, ತಮ್ಮ ಮುಂದಿನ ಭವಿಷ್ಯಕ್ಕೆಉತ್ತಮ ಯೋಜನೆ ರೂಪಿಸುವ, ಉದ್ಯೋಗ ಸೃಷ್ಠಿಸುವ ಆಲೋಚನೆಯಿರುವ, ಪ್ರಾಮಾಣಿಕ ಮತ್ತು ನೈತಿಕತೆಯಿರುವ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ತಮ್ಮ ಹಕ್ಕು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ವಿದ್ಯಾರ್ಥಿನಿಯರಿಗೆ ಮತದಾನದ ಪ್ರತಿಜ್ಞಾ ವಿಧಿ ಭೋದಿಸಿದ ಜಿಲ್ಲಾಧಿಕಾರಿಕೂರ್ಮಾರಾವ್ ಎಂ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಮತದಾರರ ಪಟ್ಟಿಗೆ ತಮ್ಮ ಹೆಸರು ನೊಂದಣಿ ಮಾಡಿದ್ದು, ಇದರಿಂದ ಜಿಲ್ಲೆಗೆ ಚುನಾವಣಾ ಆಯೋಗದಿಂದ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಸಹ ಬಂದಿದೆ. ಮತದಾನ ದಿನದಂದು ಜಿಲ್ಲೆಯ ಎಲ್ಲಾ ಯುವಜನತೆ ತಪ್ಪದೇ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾಎಸ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಉಡುಪಿ ನಗರಸಭೆಯ ಪೌರಾಯುಕ್ತ ರಮೇಶ್ ನಾಯಕ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಮತ್ತಿತರರು ಭಾಗವಹಿಸಿದ್ದರು.
ಬಿಸಿಲ ಧಗೆಗೆ ಮುನ್ನೆಚ್ಚರಿಕಾ ಕ್ರಮಗಳು

Posted On: 28-04-2023 04:41PM
ಉಡುಪಿ : ಭಾರತೀಯ ಹವಾಮಾನ ಇಲಾಖೆಯು ಪ್ರಸಕ್ತ ಸಾಲಿನ ಬಿಸಿಗಾಳಿ ಕುರಿತು ಮುನ್ಸೂಚನೆ ನೀಡಿದ್ದು, ಪ್ರಸ್ತುತ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿ ಸೆ. ಅಧಿಕ ತಾಪಮಾನ ದಾಖಲಾಗುತ್ತಿದ್ದು, ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಬಿಸಿಗಾಳಿಯಿಂದಾಗುವ ಅಪಾಯಗಳನ್ನು ತಡೆಯಲು ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆಯು ಸಲಹೆ - ಸೂಚನೆಗಳನ್ನು ಪಾಲಿಸುವುದು ಅಗತ್ಯವಿದೆ. ಬಿಸಿಗಾಳಿಯಿಂದ ಉಂಟಾಗುವ ಅನಾರೋಗ್ಯವನ್ನುತ ಡೆಗಟ್ಟಲು ಸಾಧ್ಯವಾದಷ್ಟು ಮದ್ಯಾಹ್ನ 12 ರಿಂದ 3 ರ ವರೆಗಿನ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ಕಡಿಮೆ ಮಾಡಬೇಕು.
ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರನ್ನು ಸೇವಿಸಬೇಕು. ಹಗುರವಾದ ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣೆಗಾಗಿಕನ್ನಡಕ, ಛತ್ರಿ/ ಟೊಪಿ, ಬೂಟುಅಥವಾ ಚಪ್ಪಲಿಗಳನ್ನು ಬಳಸಬೇಕು. ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಪ್ರಯಾಣ ಮಾಡುವಾಗ ನೀರನ್ನುಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತುಕಾರ್ಬೋನೇಟ್ ನಂತಹ ತಂಪು ಪಾನೀಯಗಳನ್ನು ಸೇವಿಸಬಾರದು. ಈ ಸಂದರ್ಭದಲ್ಲಿ ಬಿಸಿ ಆಹಾರವನ್ನು ಸೇವಿಸಬಾರದು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಹಾಗೂ ಸಾಕುಪ್ರಾಣಿಗಳನ್ನು ಬಿಡಬಾರದು.
ಮೂರ್ಛೆ ಅಥವಾ ಅನಾರೋಗ್ಯ ಅನಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯ ಮತ್ತು ಓ.ಆರ್.ಎಸ್ ಅನ್ನು ಬಳಸಬೇಕು. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು. ಮನೆಯನ್ನು ತಂಪಾಗಿರಿಸಲು ಪರದೆ, ಸನ್ಶೆಡ್ಗಳನ್ನು ಬಳಸಬೇಕು.ಹೊರಗೆ ಹೋಗುವಾಗ ನೀರಿನ ಬಾಟಲಿ, ಛತ್ರಿ/ ಟೋಪಿ ಅಥವಾಕ್ಯಾಪ್/ ಹೆಡ್ಕವರ್, ಹ್ಯಾಂಡ್ಟವೆಲ್, ಹ್ಯಾಂಡ್ ಫ್ಯಾನ್, ಎಲೆಕ್ಟ್ರೋಲೈಟ್, ಗ್ಲೂಕೋಸ್, ಮೌಖಿಕರೀಹೈಡ್ರೇಶನ್ ಪೌಡರ್ ಒಳಗೊಂಡಿರುವ ಬಿಸಿಗಾಳಿ ತಡೆಗಟ್ಟುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಾಗರಿಕರನ್ನು ಪ್ರೋತ್ಸಾಹಿಸಬೇಕು.
ಬಿಸಿಗಾಳಿಯಿಂದ ಸಾಮಾನ್ಯವಾಗಿ ನಿರ್ಜಲೀಕರಣ, ಶಾಖ ಸೆಳೆತ, ಶಾಖದ, ಬಳಲಿಕೆ ಮತ್ತು ಸನ್ ಸ್ಟ್ರೋಕ್ ನಂತಹ ಆರೋಗ್ಯ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇದ್ದು, ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ನೆರಳಿನ ಅಡಿಯ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ವ್ಯಕ್ತಿಯು ಪ್ರಜ್ಞೆ ಹೊಂದಿದ್ದರೆ, ನೀರು ಅಥವಾ ಪುನರ್ಜಲೀಕರಣ ಪಾನೀಯ ನೀಡಿ, ತಂಪಾದ ಗಾಳಿಯ ವ್ಯವಸ್ಥೆ ಮಾಡಬೇಕು. ರೋಗ ಲಕ್ಷಣಗಳು ಉಲ್ಬಣಗೊಂಡರೆ, ದೀರ್ಘಕಾಲದವರೆಗೆ ಇದ್ದರೆ ಅಥವಾ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ಮದ್ಯಪಾನ, ಕಾಫಿ ಹಾಗೂ ಶೇಖರಿಸಿದ ಪಾನೀಯಗಳನ್ನು ನೀಡಬಾರದು. ಬಿಸಿಗಾಳಿಗೆ ತುತ್ತಾದವರ ಮೇಲೆ ತಂಪಾದ ಒದ್ದೆ ಬಟ್ಟೆಯನ್ನು ಹಾಕುವ ಮೂಲಕ ವ್ಯಕ್ತಿಯನ್ನು ತಂಪಾಗಿರಿಸಬೇಕು. ಉತ್ತಮ ಗಾಳಿಗಾಗಿ ಬಟ್ಟೆಗಳನ್ನು ಸಡಿಲಗೊಳಿಸಬೇಕು.
ಸಿಡಿಲಿನ ಕುರಿತು ಮುನ್ಸೂಚನೆ ನೀಡಲಿದೆ ಸಿಡಿಲು ಆ್ಯಪ್

Posted On: 28-04-2023 04:15PM
ಉಡುಪಿ : ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಿಡಿಲಿನಿಂದರಕ್ಷಣೆ ಪಡೆಯಬಹುದಾದ ಸರಳ ಮಾರ್ಗಗಳನ್ನು ತಿಳಿಸಿದೆ. ಸಿಡಿಲು-ಮೊಬೈಲ್ ಆ್ಯಪ್ ನಲ್ಲಿ ಸಿಡಿಲಿನ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಸಿಡಿಲಿನ ಸಂಭವನೀಯತೆ ಇದ್ದಲ್ಲಿ ಹೊರಗಿನ ಕೆಲಸಗಳನ್ನು ಮುಂದೂಡಿ, ಆದಷ್ಟು ಮನೆಯಲ್ಲಿಯೇ ಇರುವುದು ಸೂಕ್ತ. ಮನೆಯ ಸುತ್ತಲಿನಲ್ಲಿರುವ ಕೊಳೆತ ಹಾಗೂ ಒಣಗಿದ ಮರಗಳನ್ನು ತೆರವುಗೊಳಿಸಬೇಕು. ಮನೆಯ ಒಳಗಿರುವಾಗ ಸಿಡಿಲು ಬಂದಾಗ ಕಿಟಕಿಯಿಂದದೂರವಿರಬೇಕು. ಈ ಸಂದರ್ಭದಲ್ಲಿ ದೂರವಾಣಿ, ಮೊಬೈಲ್ ಮತ್ತುಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು. ಗೃಹಪಯೋಗಿ ಉಪಕರಣಗಳ ಫ್ಲಗ್ಗಳನ್ನು ತೆಗೆದಿಡಬೇಕು. ಗೋಡೆಯಿಂದವದೂರವಿರುವುದು ಉತ್ತಮ. ಒಣ ಮರದ ಪೀಠೋಪಕರಣಗಳು ಸುರಕ್ಷಿತವಾಗಿದ್ದು, ವಿದ್ಯುತೀಕರಣದ ಅಪಾಯ ಇರುವುದರಿಂದ ಸಿಡಿಲಿನ ಸಂದರ್ಭದಲ್ಲಿ ಸ್ನಾನ ಮತ್ತು ಪಾತ್ರೆ ಹಾಗೂ ಇತರ ನೀರಿನೊಂದಿಗಿನ ಕೆಲಸವನ್ನು ಮಾಡಬಾರದು.
ಹೊರಾಂಗಣದಲ್ಲಿದ್ದಾಗ ಸಿಡಿಲು ಬರುವ ಲಕ್ಷಣಗಳಿದ್ದಲ್ಲಿ ತಕ್ಷಣ ಸುರಕ್ಷಿತ ಕಟ್ಟಡಗಳ ಒಳಗೆ ಸೇರಿಕೊಳ್ಳಬೇಕು. ಎತ್ತರ ಪ್ರದೇಶದಲ್ಲಿ ಸಿಡಿಲಿನ ಪ್ರಭಾವ ಅಧಿಕವಾಗಿರುವುದರಿಂದ ತಗ್ಗು ಪ್ರದೇಶಗಳಿಗೆ ತೆರಳಬೇಕು. ಸಿಡಿಲಿನ ಸಂದರ್ಭದಲ್ಲಿ ಕೊಡೆ ಅಥವಾ ಛತ್ರಿಯನ್ನು ಬಳಸಬಾರದು. ಮಕ್ಕಳು ಈ ಸಂದರ್ಭದಲ್ಲಿ ಗಾಳಿಪಟವನ್ನು ಹಾರಿಸಬಾರದು. ವಾಹನ ಚಲಿಸುವ ಸಂದರ್ಭದಲ್ಲಿ ಸಿಡಿಲು ಬಂದಾಗ ಮರ ಹಾಗೂ ತಂತಿಕಂಬಗಳಿಂದ ವಾಹನವನ್ನು ದೂರ ನಿಲ್ಲಿಸಿ, ವಾಹನದೊಳಗೆ ಇರುವುದು ಸೂಕ್ತ. ಬಸ್ಗಳಲ್ಲಿ ಪ್ರಯಾಣಿಸುವಾಗ ಕಿಟಕಿಗಳ ಗಾಜನ್ನು ಮುಚ್ಚಬೇಕು. ಕಾಡಿನಲ್ಲಿದ್ದ ಸಂದರ್ಭದಲ್ಲಿ ಕಡಿಮೆ ಮರಗಳಿರುವ ಪ್ರದೇಶದಲ್ಲಿ ಸಣ್ಣ ಮರದ ಕೆಳಗೆ ಆಶ್ರಯ ಪಡೆಯಬೇಕು. ಗುಂಪಿನಲ್ಲಿದ್ದಾಗ ಜನರಿಂದ ಪರಸ್ಪರ ಅಂತರವನ್ನು ಕಾಪಾಡಿಕೊಳ್ಳುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಉಡುಪಿ : ಮಾಂಗ್ರೋವ್ ವನದ ಮಧ್ಯೆ ಕಯಾಕ್ ಮೂಲಕ ವಿನೂತನ ರೀತಿಯಲ್ಲಿ ಮತದಾನ ಜಾಗೃತಿ

Posted On: 28-04-2023 03:04PM
ಉಡುಪಿ : ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂದಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಕುರಿತಂತೆ ಸ್ವೀಪ್ ವತಿಯಿಂದ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದೇ ಮೊದಲ ಬಾರಿಗೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ಹೊಳೆಯಲ್ಲಿ ಕಯಾಕಿಂಗ್ ಮೂಲಕ ತೆರಳಿ ಮಾಂಗ್ರೋವ್ ಕಾಡುಗಳ ಮಧ್ಯೆ ಕಯಾಕ್ ಗಳಲ್ಲಿ ವಿನೂತನ ರೀತಿಯಲ್ಲಿ ಮತದಾನ ಮಹತ್ವ ಕುರಿತು ಜಾಗೃತಿ ಮೂಡಿಸಲಾಗಿದೆ.

ಜಿಲ್ಲಾಡಳಿತ ಉಡುಪಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬುಧವಾರ, ಸಾಲಿಗ್ರಾಮದ ಸೀತಾ ನದಿಯ ಹಿನ್ನೀರಿನಲ್ಲಿ ನಡುವಿನ ದಟ್ಟ ಕಾಂಡ್ಲಾವನದ ನಡುವೆ ಕಯಾಕಿಂಗ್ ಮಾಡಲು ಬಳಸುವ ದೋಣಿಗಳ ಮೂಲಕ ಮತದಾನ ಜಾಗೃತಿಯ ಸಂದೇಶವನ್ನು ಸಾರಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಸಾಲಿಗ್ರಾಮ ಬಳಿಯ ಕಯಾಕಿಂಗ್ ಪಾಯಿಂಟ್ ಬಳಿಗೆ ತೆರಳಿದ ,ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಕೂರ್ಮರಾವ್ ಎಂ , ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ , ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಯತೀಶ್, ಅವರು ಕಯಾಕಿಂಗ್ ಪ್ರಾರಂಭದ ಸ್ಥಳದಲ್ಲಿ ತುಳುನಾಡಿನ ಸಾಂಪ್ರದಾಯಿಕ ಅಡಿಕೆ ಮುಟ್ಟಾಳೆ ಧರಿಸಿ, ಸ್ಥಳದಲ್ಲಿ ಅಳವಡಿಸಲಾಗಿದ್ದ ನೈತಿಕ ಮತದಾನ ಪ್ರತಿಜ್ಞೆ ಕುರಿತ ಫಲಕದಲ್ಲಿ ಸಹಿ ಮಾಡಿ, ಸಂಪೂರ್ಣ ಸುರಕ್ಷತಾ ಉಪಕರಣಗಳನ್ನು ಧರಿಸಿ ಕಯಾಕಿಂಗ್ ಆರಂಭಿಸಿದರು.
ಸುಮಾರು 30 ನಿಮಿಷಗಳ ಕಯಾಕಿಂಗ್ ನಂತರ ಮಾಂಗ್ರೋವ್ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ ಸುಮಾರು 40 ಕ್ಕೂ ಹೆಚ್ಚು ಕಯಾಕ್ ದೋಣಿಗಳ ಮೂಲಕ ಮತದಾನ ದಿನವಾದ, ಮೇ 10 ದಿನಾಂಕದ ಚಿತ್ರಣ ರೂಪಿಸಿ ಮತ್ತು ಮತದಾನ ಜಾಗೃತಿಯ ಫಲಕವನ್ನು ನೀರಿನ ಮೇಲೆ ಪ್ರದರ್ಶಿಸಿ ಅತ್ಯಂತ ಆಕರ್ಷಕ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಕಯಾಕಿಂಗ್ ನ ಆರಂಭದ ಸ್ಥಳದಿಂದ ನದಿ ಮಧ್ಯದ ಕಾರ್ಯಕ್ರಮ ನಡೆಯವ ಸ್ಥಳದವರೆಗೂ ನದಿಯಲ್ಲಿ ಮತದಾನ ಜಾಗೃತಿ ಸಾರುವ ಯಕ್ಷಗಾನ ಮುಖುಟ ಮಾದರಿಯ ಆಕೃತಿಗಳು ಗಮನ ಸೆಳೆದವು.
ಇದೇ ಸಂದರ್ಭದಲ್ಲಿ, ಕಯಾಕಿಂಗ್ ಮೂಲಕ ಆ ಪ್ರದೇಶಕ್ಕೆ ಆಗಮಿಸಿದ್ದ ಮಣೂರು ಪಡುಕೆರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿ,ಮತದಾನ ದಿನಾಂಕವನ್ನು ಒಳಗೊಂಡ ಬಲೂನ್ಗಳನ್ನು ಹಾರಿಬಿಡುವ ಮೂಲಕ ಕೂಡಾ ಜಾಗೃತಿ ಮೂಡಿಸಲಾಯಿತು. ಈ ವಿಶಿಷ್ಠ ಕಾರ್ಯಕ್ರಮಕ್ಕೆ ಸಾಲಿಗ್ರಾಮ ಕಯಕಿಂಗ್ ಪಾಯಿಂಟ್ ನಲ್ಲಿ ಕಾರ್ಯನಿರ್ವಹಿಸುವ ವಿವಿಧ ಸಂಸ್ಥೆಗಳು ಮತ್ತು ಸಿಬ್ಬಂದಿ ಅಗತ್ಯ ಸಹಕಾರ ನೀಡುವುದರ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು.