Updated News From Kaup

ಕಾಪು : ಮಜೂರು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

Thumbnail
Posted On: 31 May 2023, 05:25 PM

ಕಾಪು : ಇಲ್ಲಿನ ಮಜೂರು ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಗೆ ಮಂಗಳ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಸ್ವಾಗತಿಸಿದರು. ಶಾಲೆಯನ್ನು ಸ್ಥಳೀಯರ ಸಹಕಾರದಲ್ಲಿ ಸಿಂಗರಿಸಲಾಗಿತ್ತು. ಇದೇ ವೇಳೆ ವಿದ್ಯಾರ್ಥಿಗಳಿಗೆ ಸಿಹಿತಿಂಡಿ, ಉಪಹಾರ ನೀಡಲಾಯಿತು. ಈ ಸಂದರ್ಭ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲೀಲಾಧರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮನಾಭ ಶಾನುಭಾಗ್, ಮುಖ್ಯ ಶಿಕ್ಷಕ ಆರ್. ಎಸ್ ಕಲ್ಲೂರ, ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ್ ಕುಮಾರ್, ಪಿಡಬ್ಲ್ಯೂಡಿ ಇಂಜಿನಿಯರ್ ಮಿಥುನ್ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ನಾಗಭೂಷಣ್ ರಾವ್, ದಿನೇಶ್ ಶೆಟ್ಟಿ, ಹಳೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಾಪು : ಶಾಸಕರಿಂದ ಗುದ್ದಲಿ ಪೂಜೆ

Thumbnail
Posted On: 30 May 2023, 11:42 AM

ಕಾಪು : ಇಲ್ಲಿನ ಪುರಸಭೆ ವ್ಯಾಪ್ತಿಯ ಹಳೆ ಎಂ.ಬಿ.ಸಿ. ರಸ್ತೆಯಲ್ಲಿ ಮಳೆಯಿಂದ ಹಾನಿಗೊಳಗಾದ ಭಾಗದ ಡಾಂಬರೀಕರಣ ಕಾಮಗಾರಿಗೆ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. 40 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದ ಕಾಮಗಾರಿಯಾಗಿದೆ. ಈ ಸಂದರ್ಭ ಅನಿಲ್ ಕುಮಾರ್, ಸಂದೀಪ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೀತಾಂಜಲಿ ಸುವರ್ಣ, ಗಂಗಾಧರ ಸುವರ್ಣ, ಸ್ಥಳೀಯರು, ಪಕ್ಷದ ಪ್ರಮುಖರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಜೈ ತುಲುನಾಡ್ ಸಂಘಟನೆಯ ವಾರ್ಷಿಕ ಮಹಾಸಭೆ ; ನೂತನ ಪದಾಧಿಕಾರಿಗಳ ಆಯ್ಕೆ

Thumbnail
Posted On: 29 May 2023, 08:00 PM

ಮಂಗಳೂರು : ಜೈ ತುಲುನಾಡ್ (ರಿ.) ಸಂಘಟನೆಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಮೇ 28ರಂದು ಕೂಳೂರಿನ ಫಲ್ಗುಣಿ ಹಾಲ್ ನಲ್ಲಿ ನಡೆಯಿತು. ಜೈ ತುಲುನಾಡ್ (ರಿ) ಸಂಘಟನೆಯ 2023-24ನೇ ಸಾಲಿನ ಕೇಂದ್ರಸಮಿತಿಯ ಅಧ್ಯಕ್ಷರಾಗಿ ವಿಶು ಶ್ರೀಕೇರ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ತುಲುವೆ ಹಾಗೂ ಕೋಶಾಧಿಕಾರಿಯಾಗಿ ಸಂತೋಷ್ ಕಟಪಾಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರವೀಶ್ ಪಡುಮಲೆ, ಉದಯ್ ಪೂಂಜಾ ಮತ್ತು ಉಮೇಶ್ ಸಾಲ್ಯಾನ್, ಉಪ ಕಾರ್ಯದರ್ಶಿಯಾಗಿ ಪೂರ್ಣಿಮಾ ಬಂಟ್ವಾಳ ಮತ್ತು ರಾಜಶ್ರೀ ತಲಪಾಡಿ, ಉಪ ಕೋಶಾಧಿಕಾರಿಯಾಗಿ ಪೂರ್ಣಿಮಾ ಕಿರಣ್, ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಹೆಬ್ರಿ, ಉಪಸಂಘಟನಾ ಕಾರ್ಯದರ್ಶಿಯಾಗಿ ಶೇಖರ್ ಗಂಗೆನೀರ್ ಮತ್ತು ರಾಜೇಶ್ ನೀರುಡೆ, ತುಲು ಲಿಪಿ ಸಮಿತಿಯ ಸಮಿತಿಯ ಸಂಚಾಲಕರಾಗಿ ಪ್ರಶಾಂತ್ ನಂದಲಿಕೆ, ಉಪ ಸಂಚಾಲಕರಾಗಿ ಅಕ್ಷತಾ ಇನ್ನಂಜೆ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕರಾಗಿ ಸದಾಶಿವ ಮುದ್ರಾಡಿ, ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಯ ಸಂಚಾಲಕರಾಗಿ ಯತೀಶ್ ಮುಂಡೋಡಿ, ತುಲು ಭಾಷಾ ಸಮಿತಿಯ ಸಂಚಾಲಕರಾಗಿ ಜಯಪ್ರಸಾದ್ ಕೆದಿಲ, ಉಪ ಸಂಚಾಲಕರಾಗಿ ಅನುಷಾ ಸಾಲ್ಯಾನ್ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಜೈ ತುಲುನಾಡ್ (ರಿ ) ಸಂಘಟನೆಯ ಸ್ಥಾಪಕ ಸದಸ್ಯರು, 2022-23 ಸಾಲಿನ ಪದಾಧಿಕಾರಿಗಳು ಮತ್ತು ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು. 2022-23ನೇ ಸಾಲಿನ ವರದಿಯನ್ನು ರಾಜೇಶ್ ಉಪ್ಪೂರು, ಲೆಕ್ಕಾಚಾರದ ವರದಿಯನ್ನು ರಕ್ಷಿತ್ ಕೋಟ್ಯಾನ್ ಮಂಡಿಸಿದರು. ಕುಶಾಲಾಕ್ಷಿ ವಿ. ಕಣ್ವತೀರ್ಥ ಪ್ರಾರ್ಥಿಸಿದರು. ಶರತ್ ಕೊಡವೂರು ಸ್ವಾಗತ ಕೋರಿದರು ಮತ್ತು ಸುಮಂತ್ ಹೆಬ್ರಿ ಧನ್ಯವಾದ ಅರ್ಪಿಸಿದರು. ಕಿರಣ್ ತುಲುವೆ ಕಾರ್ಯಕ್ರಮ ನಿರೂಪಿಸಿದರು.

ಕಾಪು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೂತನ ಕಚೇರಿ ಉದ್ಘಾಟನೆ

Thumbnail
Posted On: 29 May 2023, 07:54 PM

ಕಾಪು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ನೂತನ ಕಚೇರಿಯನ್ನು ಕಾಪು ಮಿನಿ ವಿಧಾನಸೌಧದ ಪ್ರಥಮ ಮಹಡಿಯಲ್ಲಿ ಬಿಜೆಪಿಯ ಹಿರಿಯ ಚೇತನ ಗುಜ್ಜಾಡಿ ಪ್ರಭಾಕರ್ ನಾಯಕ್ ಸೋಮವಾರ ಬೆಳಿಗ್ಗೆ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಈಗಾಗಲೇ ಬಿಜೆಪಿ ಪಕ್ಷವು ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಯಾವ ಬೂತ್ ನಲ್ಲಿ ಕಡಿಮೆ ಮತ ಸಿಕ್ಕಿದೆಯೋ ಅಲ್ಲಿಗೆ ಹೋಗಿ ಮತ್ತೆ ಕೆಲಸ ಮಾಡಬೇಕಾಗಿದೆ ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಕಾಪು ಕ್ಷೇತ್ರದ ಎಲ್ಲ ಜನರಿಗೂ ನಾನು ಶಾಸಕನಾಗಿದ್ದು ಎಲ್ಲರನ್ನೂ ಸಮಾನ ಭಾವದಿಂದ ನೋಡಿ ಕೆಲಸ ಮಾಡುತ್ತೇನೆ ಎಂದರು. ಮೊದಲಿಗೆ ಶಾಸಕರ ಕಚೇರಿಯಲ್ಲಿ ಪೂಜಾವಿಧಿ ಕಾರ್ಯಕ್ರಮ ಜರಗಿತು. ಈ ಸಂದರ್ಭ ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್, ಉಡುಪಿ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಅಧ್ಯಕ್ಷ ಶ್ರೀಕಾಂತ ನಾಯಕ್ , ಕಾರ್ಯದರ್ಶಿ ಗೋಪಾಲ ಕೃಷ್ಣರಾವ್, ಶಿಲ್ಪ ಸುವರ್ಣ, ಅನಿಲ್ ಕುಮಾರ್, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಂದೀಪ್ ಶೆಟ್ಟಿ ಕಲ್ಯಾ ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಶುಭ ಹಾರೈಸಿದರು.

ಕಾಪು : ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ, ಕುಟುಂಬ ಸಮ್ಮಿಲನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Thumbnail
Posted On: 28 May 2023, 07:51 AM

ಕಾಪು : ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಹಾಗೂ ಕುಟುಂಬ ಸಮ್ಮಿಲನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ಕಾಪುವಿನಲ್ಲಿ ಜರಗಿತು. ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ‌ಮಾತನಾಡಿದ ಅವರು ಕಾಪು ಕ್ಷೇತ್ರವನ್ನು ಮಾದರಿಯಾಗಿಸುವ ಗುರಿಯಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಲಹೆ ಅವಶ್ಯ. ಸಾಮಾಜಿಕ ಬದ್ಧತೆಯ ಮೂಲಕ ಕ್ಷೇತ್ರದ ಬಗೆಗೆ ಕಾಳಜಿಯಿರುವವರು ಪತ್ರಕರ್ತರು. ನಾಗರಿಕರ ಧ್ವನಿಯಾಗಿ ಸಮಾಜದ ಬೇಕು ಬೇಡಗಳನ್ನು ಸುದ್ದಿಯ ಮೂಲಕ ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ. ಕಾಪು ಪತ್ರಕರ್ತರ ಸಂಘಕ್ಕೆ ಶಾಶ್ವತ ಕಟ್ಟಡಕ್ಕಾಗಿ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಾರ್ಪೋರೇಟ್ ವ್ಯವಹಾರಗಳು ಯುಪಿಸಿಎಲ್, ಅದಾನಿ ಗ್ರೂಪ್ ಕಾರ್ಯನಿರ್ವಾಹಕ‌ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ ಮಾಧ್ಯಮಗಳ ಜೀವಂತಿಕೆಯಿಂದ ಸಮಾಜದ ಉನ್ನತಿ ಸಾಧ್ಯ. ಅದಾನಿ ಸಂಸ್ಥೆಯ ಮೂಲಕ ಸಾಮಾಜಿಕ ಜವಾಬ್ದಾರಿಯುತ ಕಾರ್ಯಗಳು ನಡೆದಿದೆ. ಸೂಕ್ತ ಕಟ್ಟಡ ಸೌಲಭ್ಯಕ್ಕಾಗಿ ಸಿ ಎಸ್ ಆರ್ ಯೋಜನೆ ಮೂಲಕ ಕಾಪು ಪತ್ರಕರ್ತರ ಸಂಘಕ್ಕೂ ಆರ್ಥಿಕ ನೆರವು ನೀಡಲಾಗುವುದು ಎಂದರು. ಸಮ್ಮಾನ/ ಪ್ರತಿಭಾ ಪುರಸ್ಕಾರ/ಬಹುಮಾನ ವಿತರಣೆ : ಕಾಪು ಪತ್ರಕರ್ತರ ಸಂಘದ ವತಿಯಿಂದ ನೂತನ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರನ್ನು, ಕಲಿಕೆ/ಸಾಧನೆಗೈದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ನಡೆಯಿತು. ಈ ಸಂದರ್ಭ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ, ಝಿಯಾನ್ ಕನ್ ಸ್ಟ್ರಕ್ಷನ್ಸ್ ಪ್ರೈ.ಲಿ. ಆಡಳಿತ ನಿರ್ದೇಶಕ ಗುಲಾಂ ಮೊಹಮ್ಮದ್ , ಉದ್ಯಮಿ ಹರೀಶ್ ನಾಯಕ್, ಸಂಘದ ಕೋಶಾಧಿಕಾರಿ ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿ ವಿಜಯ ಆಚಾರ್ಯ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು. ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳು ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಸಂತೋಷ್ ಕಾಪು ಕ್ರೀಡಾ ವಿಜೇತರ ಪಟ್ಟಿ ವಾಚಿಸಿದರು. ಉಪಾಧ್ಯಕ್ಷರಾದ ಹರೀಶ್ ಕಟಪಾಡಿ ನಿರೂಪಿಸಿದರು. ಕಾರ್ಯದರ್ಶಿ ಪುಂಡಲೀಕ ಮರಾಠೆ ವಂದಿಸಿದರು.

ಕಾಪು : ಸೋಲಿನ ಪರಾಮರ್ಶೆ ನಡೆಸಿ, ಪಕ್ಷ ಬಲವರ್ಧನೆಗೆ ಪಣ ತೊಡೋಣ - ವಿನಯ್ ಕುಮಾರ್ ಸೊರಕೆ

Thumbnail
Posted On: 27 May 2023, 06:05 PM

ಕಾಪು : ಸೋಲು- ಗೆಲುವು ಎಲ್ಲಾ ರಂಗಗಳಲ್ಲಿಯೂ ಸಹಜ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮೂಲಕ, ಸೋಲಿನ ಪರಾಮರ್ಶೆ ನಡೆಸಿ ಎಲ್ಲಿ ಎಡವಿದ್ದೇವೆಯೋ ಅಲ್ಲಿ ಎಚ್ಚೆತ್ತು ಕ್ರೀಡಾಸ್ಫೂರ್ತಿಯೊಂದಿಗೆ ಇನ್ನಷ್ಟು ಬಲಿಷ್ಠವಾಗಿ ಸಂಘಟನಾತ್ಮಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷ ಬಲವರ್ಧನೆಗೆ ಪಣ ತೊಡೋಣ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಶನಿವಾರ ಕಾಪು ಬ್ಲಾಕ್ ಕಾಂಗ್ರೆಸ್ ಕಛೇರಿ ರಾಜೀವ್ ಭವನದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಕಾರ್ಯದಲ್ಲಿ ಅವಿರತ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೃತಜ್ಞತಾರ್ಪಣಾ ಸಭೆಯಲ್ಲಿ ಮಾತಾಡಿದರು. ಕರ್ನಾಟಕ ರಾಜ್ಯದಲ್ಲಿ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದರೆ, ಕರಾವಳಿ ಭಾಗದಲ್ಲಿ ಅದಕ್ಕೆ ವ್ಯತಿರಿಕ್ತವಾದ ಫಲಿತಾಂಶ ಬಂದಿರುವುದು ನಿಜಕ್ಕೂ ಅಚ್ಚರಿ ಹಾಗೂ ಆಘಾತಕಾರಿಯಾಗಿದೆ. ಚುನಾವಣಾ ಕಾರ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ನಿಷ್ಠೆ ಮತ್ತು ಅಭಿಮಾನದಿಂದ ಅವಿರತ ಶ್ರಮವಹಿಸಿದ್ದಾರೆ, ಆದರೆ ಮತದಾರರ ಮನ ಮುಟ್ಟುವಲ್ಲಿ ಸಂಪೂರ್ಣ ಯಶಸ್ಸು ಕಾಣಲು ವಿಫಲರಾಗಿರುವುದು ಹಾಗೂ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಂದ ನಡೆದ ವ್ಯವಸ್ಥಿತ ಅಪಪ್ರಚಾರ ಹಾಗೂ ಹಣಬಲದ ಮುಂದೆ ನಮ್ಮ ಪ್ರಾಮಾಣಿಕ ಜನಸೇವೆ ಮಂಕಾಗಿ ಹೋಯಿತು. ಸೋಲಾಯಿತೆಂದು ಕಾರ್ಯಕರ್ತರು ಯಾರೂ ವಿಚಲಿತರಾಗದೆ ಯಾವುದೇ ಸಂದರ್ಭದಲ್ಲಿಯೂ ಎದೆಗುಂದಬೇಡಿ, ನಾನಂತೂ ನಿಮ್ಮೊಂದಿಗೆ ಈ ಹಿಂದೆ ಯಾವ ರೀತಿಯಲ್ಲಿ ನಿಮಗೆ ಸಹಕರಿಸಿ, ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬೆಂಬಲಿಸುತ್ತಿದ್ದೇನೋ ಇನ್ನು ಅದಕ್ಕಿಂತಲೂ ಒಂದು ಪಟ್ಟು ಹೆಚ್ಚಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಅಭಯ ನೀಡಿದರು. ನಿಮ್ಮ ಸಹಕಾರ, ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ. ಪಕ್ಷದ ಕಾರ್ಯಕರ್ತರ ಜೊತೆಗೆ ನನಗಿರುವ ಅವಿನಾಭಾವ ಸಂಬಂಧವನ್ನು ನಾನು ಯಾವತ್ತಿಗೂ ಕಡಿದು ಕೊಳ್ಳುವುದಿಲ್ಲ, ಕಾರ್ಯಕರ್ತರ ಪ್ರೀತಿ-ಅಭಿಮಾನವೇ ನಾನು ರಾಜಕೀಯದಲ್ಲಿ ಸಂಪಾದಿಸಿರುವ ಬಹುದೊಡ್ಡ ಆಸ್ತಿ ಎಂದು ಭಾವನಾತ್ಮಕವಾಗಿ ಹೇಳಿದರು. ಕಾಪು ಕ್ಷೇತ್ರದಲ್ಲಿ ನಮಗೆ ಸೋಲಾಗಿರಬಹುದು, ಆದರೆ ರಾಜ್ಯದ ಸರ್ಕಾರ ಕಾಂಗ್ರೆಸ್ ನದ್ದಾಗಿದೆ, ಹಾಗಾಗಿ ಅದರ ಪ್ರಯೋಜನವನ್ನು ಪಡೆದು ಅಭಿವೃದ್ಧಿಯ ದೃಷ್ಟಿಕೋಣ ದೊಂದಿಗೆ ಮುಂದೆ ಸಾಗೋಣ, ಸರ್ಕಾರದ ಸವಲತ್ತುಗಳನ್ನು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸೋಣ ಈ ಮೂಲಕ ಮುಂಬರಲಿರುವ ತಾಲೂಕು ಪಂಚಾಯತ್/ ಜಿಲ್ಲಾಪಂಚಾಯತ್ ಹಾಗೂ 2024 ರ ಲೋಕಸಭಾ ಚುನಾವಣೆಗೆ ಸಜ್ಜಾಗೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಸಭೆಯಲ್ಲಿ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಎಸ್. ಸುವರ್ಣ ವಹಿಸಿ ಮಾತನಾಡಿದರು. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ.ಗಫೂರ್, ರಾಜ್ ಶೇಖರ್ ಕೋಟ್ಯಾನ್, ಕೆ.ಪಿ.ಸಿ.ಸಿ ಸಂಯೋಜಕರಾದ ನವೀನ್ ಚಂದ್ರ ಜೆ.ಶೆಟ್ಟಿ, ರಾಜ್ಯ ಹಿಂ. ವ. ಘಟಕಗಳ ಸಮಿತಿಯ ಕಾರ್ಯದರ್ಶಿ ಶಿವಾಜಿ ಸುವರ್ಣ ಬೆಳ್ಳೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಬಲ್ಲಾಳ್ , ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿಕ್ರಂ ಕಾಪು, ಜಿಲ್ಲಾ ಅನಿವಾಸಿ ಭಾರತೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ವಹಿದ್ ಶೇಖ್, ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಜಿತೇಂದ್ರ ಫುರ್ಟಾಡೋ, ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾಂತಲತಾ ಎಸ್. ಶೆಟ್ಟಿ, ಯುವ ಕಾಂ. ಸ. ಅಧ್ಯಕ್ಷ ರಮೀಜ್ ಹುಸೇನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ದೀಪಕ್ ಎರ್ಮಾಳ್, ಮೊಹಮ್ಮದ್ ಸಾದಿಕ್, ಪ್ರಶಾಂತ್ ಜತ್ತನ್ನ, ಸರಸು ಡಿ.ಬಂಗೇರ, ಪ್ರಭಾ ಬಿ.ಶೆಟ್ಟಿ, ವೈ.ಸುಧೀರ್, ಹಸನಬ್ಬ ಶೇಖ್, ರತನ್ ಶೆಟ್ಟಿ, ಕಿಶೋರ್ ಅಂಬಾಡಿ, ಇಂದಿರಾ ಆಚಾರ್ಯ, ಸಿಮ್ಮಿ ಡಿಸೋಜ, ಯು.ಸಿ.ಶೇಕಬ್ಬ, ಆಶಾ ಅಂಚನ್ ಕಟಪಾಡಿ, ಸುನಿಲ್ ಡಿ.ಬಂಗೇರ, ಎಚ್.ಅಬ್ದುಲ್ಲಾ, ಅಬ್ದುಲ್ ಹಮೀದ್ ಮೂಳೂರು, ದಿವಾಕರ್ ಡಿ.ಶೆಟ್ಟಿ, ರಾಜೇಶ್ ಕುಲಾಲ್, ಫರ್ಜಾನ ಸಂಜಯ್, ಶೋಭಾ ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ ಆನಂದ್, ಸತೀಶ್ ಚಂದ್ರ ಮೂಳೂರು, ಶ್ರೀಕರ್ ಅಂಚನ್, ಮಹೇಶ್ ಪೂಜಾರಿ ಕಟಪಾಡಿ, ಕೆ.ಎಚ್.ಉಸ್ಮಾನ್, ಹಮೀದ್ ಯೂಸುಫ್, ಶೇಖರ್ ಹೆಜಮಾಡಿ, ಕೇಶವ ಸಾಲ್ಯಾನ್,ಗಣೇಶ್ ಕೋಟ್ಯಾನ್, ಜ್ಯೋತಿ ಮೆನನ್, ಸುಧೀರ್ ಕರ್ಕೇರ, ಮೊಹಮ್ಮದ್ ನಯಿಮ್, ಯಶವಂತ ಫಲಿಮಾರು, ಗೋಪಾಲ್ ಪೂಜಾರಿ ಮತ್ತಿತರ ಪ್ರಮುಖ ನಾಯಕರು, ಬ್ಲಾಕ್ ಪದಾಧಿಕಾರಿಗಳು, ವಿವಿಧ ಘಟಕ/ಸಮಿತಿಗಳ ಅಧ್ಯಕ್ಷರು/ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ಬೂತ್ ಸಮಿತಿಯ ಅಧ್ಯಕ್ಷರು/ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸೊರಕೆಯವರ ಹಿತೈಷಿಗಳು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಮೊಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ದಿನೇಶ್ ಕೋಟ್ಯಾನ್ ಫಲಿಮಾರು ವಂದಿಸಿದರು.

ಕಟಪಾಡಿ : ಕನ್ನಡ ಚಲನಚಿತ್ರ - ಸ್ಕೂಲ್ ಲೀಡರ್ ಚಿತ್ರದ ಮುಹೂರ್ತ

Thumbnail
Posted On: 27 May 2023, 05:47 PM

ಕಟಪಾಡಿ : ಸನ್ ಮ್ಯಾಟ್ರಿಕ್ಸ್ ಅರ್ಪಿಸುವ ಫಿಲಂ ವ್ಹೀಲ್ ಸ್ಟುಡಿಯೋಸ್ ಸಹಯೋಗದೊಂದಿಗೆ ಕನ್ನಡ ಚಲನಚಿತ್ರ ಸ್ಕೂಲ್ ಲೀಡರ್ ಚಿತ್ರದ ಮುಹೂರ್ತ ಶುಕ್ರವಾರ ಕಟಪಾಡಿ ಶ್ರೀ ವೆಂಕಟರಮಣ ದೇವಳದಲ್ಲಿ ಜರಗಿತು. ಈ ಸಂದರ್ಭ ಗಣ್ಯರು ಶುಭ ಹಾರೈಸಿದರು. ಈ ಸಂದರ್ಭ ಕಿರುತೆರೆ ನಟ ಪ್ರದೀಪ್ ಚಂದ್ರ ಕುದ್ಪಾಡಿ, ಎಸ್ ವಿ ಎಸ್ ವಿದ್ಯಾವರ್ಧಕ ಸಂಘ ಕಟಪಾಡಿಯ ಗಣೇಶ್ ಕಿಣಿ, ಮಂಗಳೂರಿನ ಉದ್ಯಮಿ ಹರ್ಷಮಣಿ ರೈ, ಎಸ್ ವಿ ಎಸ್ ಪದವಿ ಪೂರ್ವ ಕಾಲೇಜು ಕಟಪಾಡಿಯ ಪ್ರಾಂಶುಪಾಲರಾದ ಡಾ. ದಯಾನಂದ ಪೈ, ಚಲನಚಿತ್ರ ನಟ ರಘು ಪಾಂಡೇಶ್ವರ, ಎಸ್ ವಿ ಎಸ್ ಪ್ರೌಢಶಾಲೆ ಕಟಪಾಡಿಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ, ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ಮಾಪಕ ದಯಾನಂದ ಎಸ್ ರೈ, ಬಾಸುಮ ಕೊಡಗು, ಶೇಖರ ಅಜೆಕಾರು, ಪುರುಷೋತ್ತಮ ಪೈ, ಸುದರ್ಶನ್ ಎಸ್ ಪುತ್ತೂರು, ಚಿತ್ರ ನಿರ್ಮಾಪಕರಾದ ಸತ್ಯೇಂದ್ರ ಪೈ, ಬಾಲಕೃಷ್ಣ ಶೆಟ್ಟಿ, ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ಅಕ್ಷತ್, ಮೋಹನ್ ಪಡ್ರೆ, ಪ್ರಕಾಶ್ ಸುವರ್ಣ, ನಾಗೇಶ್ ಕಾಮತ್ ಉಪಸ್ಥಿತರಿದ್ದರು.

ಮೇ 29 : ಮಿನಿ ಉದ್ಯೋಗ ಮೇಳ

Thumbnail
Posted On: 27 May 2023, 07:30 AM

ಉಡುಪಿ : ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮೇ 29 ರಂದು ಬೆಳಗ್ಗೆ 10.30 ಕ್ಕೆ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ : ರಾಷ್ಟ್ರಮಟ್ಟದ ಜೆ.ಇ.ಇ ಬಿ-ಪ್ಲಾನಿಂಗ್ ನಲ್ಲಿ ಕ್ರಿಯೇಟಿವ್‌ ಕಾಲೇಜಿಗೆ 2 ರ‍್ಯಾಂಕ್‌

Thumbnail
Posted On: 27 May 2023, 07:16 AM

ಕಾರ್ಕಳ : ಮೇ 2023 ರಲ್ಲಿ ನಡೆದ ರಾಷ್ಟ್ರಮಟ್ಟದ ಜೆ.ಇ.ಇ ಬಿ-ಪ್ಲಾನಿಂಗ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಾದ ವರುಣ್‌ ಜಿ ನಾಯಕ್‌ ಆಲ್‌ ಇಂಡಿಯಾ ರ‍್ಯಾಂಕಿಂಗ್ ನಲ್ಲಿ 656 ನೇ ಸ್ಥಾನ ಗಳಿಸಿದ್ದಾರೆ ಹಾಗೂ ಸುಮುಖ್‌ ಶೆಟ್ಟಿ ಜೆ.ಎಸ್‌ ಬಿ.ಆರ್ಕ್‌ ನಲ್ಲಿ 609 ನೇ ರ‍್ಯಾಂಕ್‌ ಗಳಿಸಿದ್ದಾರೆ. ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ಹಾಗೂ ಕ್ರಿಯೇಟಿವ್‌ ಶೈಕ್ಷಣಿಕ ಸಹಭಾಗಿತ್ವದ ಹಾಸನದ ಹೆಚ್.ಕೆ.ಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಥಮ ಪಿ.ಯು.ಸಿ ಯಿಂದಲೇ ಅನುಭವಿ ಉಪನ್ಯಾಸಕರಿಂದ ತರಬೇತಿ ಲಭ್ಯವಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆಇಇ ಸಂಯೋಜಕರಾದ ಸುಮಂತ್‌ ದಾಮ್ಲೆ ಅಭಿನಂದಿಸಿದ್ದಾರೆ.

ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ : ನೋಂದಣಿಗೆ ಸೂಚನೆ

Thumbnail
Posted On: 25 May 2023, 07:07 AM

ಉಡುಪಿ : ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ.ರಾ.ಮು.ವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಮೇ 30 ರ ಒಳಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ದೂ.ಸಂಖ್ಯೆ: 0821-2515944 ಅನ್ನು ಸಂಪರ್ಕಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕ.ರಾ.ಮು.ವಿ ಕುಲಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.