Updated News From Kaup

ಏಪ್ರಿಲ್ 23, 24 : ಬೊಲ್ಲೆಟ್ಟು ಆಲಡೆಯಲ್ಲಿ ಆಯನೋತ್ಸವ - ಸಿರಿಗಳ ಜಾತ್ರೆ, ಮಹಾ ಅನ್ನ ಸಂತರ್ಪಣೆ

Posted On: 11-04-2023 06:05PM

ಕಾಪು : ಇತಿಹಾಸ ಪ್ರಸಿದ್ಧ ಎಲ್ಲೂರು ಸೀಮೆಯ ಶ್ರೀ ಬ್ರಹ್ಮಲಿಂಗೇಶ್ವರ ಆಲಡೆಯಲ್ಲಿ ನಡೆಯುವ ಧ್ವಜಾರೋಹಣ ಪೂರ್ವಕ ವರ್ಷಾವಧಿ ಆಯನೋತ್ಸವ - ಸಿರಿಗಳ ಜಾತ್ರೆ ಹಾಗೂ ಮಹಾ ಅನ್ನಸಂತರ್ಪಣೆ ಏಪ್ರಿಲ್ 23, 24 ರಂದು ಜರಗಲಿದೆ.

ಎಲ್ಲರೂ ಆಗಮಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಸಿರಿ ಕುಮಾರ ಭಜನಾ ಮಂಡಳಿ ಬೊಲ್ಲೆಟ್ಟು ಇದರ ಸರ್ವ ಸದಸ್ಯರು ತಿಳಿಸಿರುತ್ತಾರೆ.

ಬಂಟಕಲ್ಲು : ಪ್ರಾಧ್ಯಾಪಕಿ ರೆನಿಟಾ ಶರೋನ್ ಮೋನಿಸ್ ಅವರಿಗೆ ಪಿಎಚ್‌ಡಿ ಪದವಿ

Posted On: 09-04-2023 11:48AM

ಬಂಟಕಲ್ಲು : ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ರೆನಿಟಾ ಶರೋನ್ ಮೋನಿಸ್ ಇವರು ಎಮ್.ಐ.ಟಿ.ಇ ತಾಂತ್ರಿಕ ಮಹಾವಿದ್ಯಾಲಯ, ಮೂಡುಬಿದ್ರಿ, ಮಂಗಳೂರು ಇಲ್ಲಿಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾದ ಡಾ. ಆಶಾ ಕ್ರಾಸ್ಟಾ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಎಸ್ಟಿಮೇಟ್ ಆಫ್ ಅನ್‌ಸ್ಟಡಿ ಸ್ಟೆಬಿಲಿಟಿ ಡಿರೈವೆಟೀಸ್ ಫಾರ್ ಡೆಲ್ಟಾ ವಿಂಗ್ಸ್ ಇನ್ ಹೈ ಸ್ಪೀಡ್ ಫ್ಲೋ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪ್ರಾಧ್ಯಾಪಕಿಯ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

ಎಂ.ಎಸ್.ಆರ್.ಎಸ್ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘ ಮುಂಬೈ - ವಾರ್ಷಿಕೋತ್ಸವ

Posted On: 09-04-2023 11:18AM

ಶಿರ್ವ : ಬ್ಯಾಂಕಿಂಗ್ ಕ್ಷೇತ್ರದ ಧುರೀಣ ಕೀರ್ತಿಶೇಷ ಮೂಲ್ಕಿ ಸುಂದರ್ ರಾಮ್ ಶೆಟ್ಟಿಯವರು ವಿಜಯ ಬ್ಯಾಂಕಿನ ಆಡಳಿತ ನಿರ್ದೇಶಕರಾಗಿದ್ದ ಕಾಲಘಟ್ಟದಲ್ಲಿ ತುಳುನಾಡಿನ ವಿದ್ಯಾವಂತರನ್ನು ಕರೆ ಕರೆದು ಮನೆಗೊಬ್ಬರಂತೆ ಕೆಲಸ ನೀಡಿದವರು ಎಂದು ತುಂಗಾ ಸಮೂಹ ಹೋಟೆಲುಗಳ ಆಡಳಿತ ನಿರ್ದೇಶಕ ಶ ಸುಧಾಕರ್ ಹೆಗ್ಡೆಯವರು ನುಡಿದರು. ಅವರು ಎಪ್ರಿಲ್ 2ರಂದು ಮಲಾಡ್ ಪಶ್ಚಿಮದ ಹೋಟೆಲ್ ಸಾಯಿ ಪ್ಯಾಲೇಸ್ ಗ್ರ್ಯಾಂಡ್ ಇಲ್ಲಿ ನಡೆದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘ ಮುಂಬೈ ಘಟಕದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಂದುವರಿದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ವ್ಯಾಸಂಗಮಾಡಿದವರು ಇಂದು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗಳನ್ನು ಹಾಗೂ ನಮಗೆ ವಿದ್ಯೆ ನೀಡಿದ ಸಂಸ್ಥೆಗಳನ್ನು ಎಂದಿಗೂ ನಾವು ಮರೆಯಬಾರದು. ಉದಯ್ ಸುಂದರ್ ಶೆಟ್ಟಿಯವರ ದಕ್ಷ ಅಧ್ಯಕ್ಷತೆಯಲ್ಲಿ ಈ ಹಿರಿಯ ವಿದ್ಯಾರ್ಥಿಗಳ ಸಂಘವು ಬೆಳೆದು ಬಂದ ರೀತಿ ಮತ್ತು ತಾವು ಕಲಿತ ಕಾಲೇಜಿನ ಬಲವರ್ಧನೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಸಂಘದ ಸಲಹೆಗಾರ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ಮಾತನಾಡಿ, ಸಂಘ ಸಂಸ್ಥೆಗಳ ಹುರುಪು ಉಲ್ಲಾಸ ಐದಾರು ವರ್ಷಗಳಲ್ಲಿ ಇಳಿಮುಖವಾಗುವುದನ್ನು ಕಾಣುತ್ತೇವೆ. ಆದರೆ ಈ ಹಳೆ ವಿದ್ಯಾರ್ಥಿ ಸಂಘದ ಉತ್ಸಾಹ ಕುಂದದೆ ಚಿಗುರುತ್ತಿರುವುದು ಮತ್ತು ಹದಿಮೂರು ವರ್ಷಗಳಲ್ಲಿ ಏರಿದ ಎತ್ತರ ಸಂತಸ ತಂದಿದೆ ಎಂದರು. ಸಂಘದ ಪೋಷಕರಾರದ ಪೆನಿನ್ಸುಲಾ ಸಮೂಹ ಹೋಟೆಲುಗಳ ಆಡಳಿತ ನಿರ್ದೇಶಕ ಸತೀಶ್ ಶೆಟ್ಟಿಯವರು, ಇಂದಿನ ಮಕ್ಕಳಿಗೆ ನಮ್ಮ ಊರಿನ ಶ್ರೀಮಂತ ಸಂಸ್ಕೃತಿಯನ್ನು ತೋರಿಸುವ, ತಿಳಿಸುವ ಅಗತ್ಯವಿದೆ ಎಂದರು. ಮಾರ್ಗದರ್ಶಕ, ಎಂ. ಎಸ್. ಆರ್. ಎಸ್. ಕಾಲೇಜಿನ ಮಾಜಿ ಪ್ರಾಧ್ಯಾಪಕ, ಪ್ರಸ್ತುತ ಬಂಟರ ಸಂಘ ಮುಂಬಯಿ ಪ್ರಾಯೋಜಿತ ಎಸ್. ಎಂ. ಶೆಟ್ಟಿ ಕಾಲೇಜ್ ಪೊವೈ ಇಲ್ಲಿಯ ಪ್ರಾಂಶುಪಾಲರಾದ ಡಾ. ಶ್ರೀಧರ್ ಶೆಟ್ಟಿಯವರು ಮಾತನಾಡಿ, ಕೀರ್ತಿಶೇಷರಾದ ಮುದ್ದು ಶೆಟ್ಟಿ, ಸುಂದರ್ ರಾಮ್ ಶೆಟ್ಟಿ, ಸತೀಶ್ಚಂದ್ರ ಹೆಗ್ಡೆಯವರಂಥ ಧೀಮಂತ ವ್ಯಕ್ತಿಗಳು ಸಮರ್ಪಣಾ ಭಾವದೊಂದಿಗೆ ಶಿರ್ವದಂಥ ಗ್ರಾಮೀಣ ಪ್ರದೇಶದಲ್ಲಿ ಕಟ್ಟಿ ಬೆಳೆಸಿದ ವಿದ್ಯಾದೇಗುಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಹಳೆ ವಿದ್ಯಾರ್ಥಿಗಳಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಬಿಸಿಯೂಟದ ವ್ಯವಸ್ಥೆ ವಿನೂತನವಾದುದು. ಅದನ್ನು ಉಳಿಸಿ ಬೆಳೆಸುವ ತೀವ್ರ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನನ್ನನ್ನೂ ಸೇರಿ ಎಲ್ಲರೂ ಉದಾರತೆಯಿಂದ ಆರ್ಥಿಕವಾಗಿ ಸ್ಪಂದಿಸಬೇಕೆಂದು ಹಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷ, ಉದಯ್ ಸುಂದರ್ ಶೆಟ್ಟಿ ಮಾತನಾಡಿ, ಸಮಾಜದ ಶ್ರೇಷ್ಠ ವ್ಯಕ್ತಿಗಳೊಂದಿಗಿನ ಒಡನಾಟವು ನಮ್ಮ ವ್ಯಕ್ತಿತ್ವದಲ್ಲಿ ಅಮೂಲಗ್ರಹ ಬದಲಾವಣೆಗಳನ್ನು ತರಬಲ್ಲುದು. ನಮ್ಮ ಜೀವನದಲ್ಲಿ ಅನುಭವಿ ಹಾಗೂ ಮಾಗಿದ ವ್ಯಕ್ತಿಗಳಿಂದ ಕಲಿಯುವ ಜೀವನ ಮೌಲ್ಯಗಳನ್ನು ಯಾವ ವಿಶ್ವ ವಿದ್ಯಾಲಯಗಳು ಕಲಿಸಲಾರವು. ಸಂಘವು 2016ರಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರಾಯೋಜಿಸುತ್ತಿರುವ ಬಿಸಿಯೂಟದ ಪ್ರಯೋಜನವನ್ನು 250 ವಿದ್ಯಾರ್ಥಿಗಳು ಪಡೆಯುತ್ತಿರುವುದು ಸಂತಸದ ಸಂಗತಿ. ಪದಾಧಿಕಾರಿಗಳ ಸಾಂಘಿಕ ಪ್ರಯತ್ನ ಹಾಗೂ ಉದಾರತೆಯ ಫಲವಾಗಿ ಸಂಘವು 13 ವರ್ಷಗಳಲ್ಲಿ ಈ ಎತ್ತರಕ್ಕೆ ಏರಲು ಸಾಧ್ಯವಾಯಿತು. ಕೋವಿಡ್ ಸಂಕಷ್ಟದಲ್ಲಿ ನಾವೆಲ್ಲ ಪರಸ್ಷರ ಸಂಪರ್ಕದಲ್ಲಿದ್ದು ಸಹಕರಿಸುತ್ತಿದ್ದೆವು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸುಧಾಕರ್ ಹೆಗ್ಡೆ ಹಾಗೂ ರಂಜನಿ ಸುಧಾಕರ್ ಹೆಗ್ಡೆ ದಂಪತಿಗಳನ್ನು ಸನ್ಮಾನಿಸಲಾಯಿತು. ಜ್ಯೋತಿ ಶೆಟ್ಟಿ ಸೂಡ ಸನ್ಮಾನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಅಶೋಕ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಲಕ್ಷ್ಮೀ ಸತೀಶ್ ಶೆಟ್ಟಿಯವರ ಪ್ರಾರ್ಥನಾ ಗೀತೆಯೊಂದಿಗೆ ನೆರೆದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಪಲಿಮಾರು ವಸಂತ್ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸಿ.ಎ. ರವಿರಾಜ್ ಶೆಟ್ಟಿಯವರು 2020 ರಿಂದ 2023ರ ಈ ವರೆಗಿನ ಸಂಘದ ಖರ್ಚು ವೆಚ್ಚಗಳ ವರದಿಯನ್ನು ವಾಚಿಸಿದರು. ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಎರಡು ವರ್ಷಗಳಲ್ಲಿ ಸಂಘವು ನಿರ್ವಹಿಸಿದ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು. ಸಂಘದ ಸದಸ್ಯ ಹರೀಶ್ ಶೆಟ್ಟಿ ಪಂಜಿಮಾರು ಅವರ ಪ್ರತಿಭಾವಂತ ಮಗಳು ಡಾ. ಹರ್ಷಿತಾ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಅಭ್ಯಾಸದ ಕುರಿತಾಗಿ ಸಲಹೆಯನ್ನೂ ಹಿರಿಯರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು. ಮಹಿಳಾ ವಿಭಾಗದ ಅಧ್ಯಕ್ಷೆ ಶಬುನ ಸತೀಶ್ ಶೆಟ್ಟಿ ಹಾಗೂ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಜಾತ ಶೆಟ್ಟಿಯವರು ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಅಶೋಕ್ ಶೆಟ್ಟಿ, ಪಲಿಮಾರು ವಸಂತ್ ಶೆಟ್ಟಿ, ಖಾಂದೇಶ್ ಭಾಸ್ಕರ್ ಶೆಟ್ಟಿ, ಮೋಹನ್ ಶೆಟ್ಟಿ ಕಾಪು ಹಾಗೂ ಸಮನ್ವಯಕ ವಾಲ್ಟರ್ ಮಥಾಯಸ್ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಸಂಗೀತಗೋಷ್ಠಿಯಲ್ಲಿ ಸುರೇಶ್ ಶೆಟ್ಟಿ ಶಿಬರೂರು ಮತ್ತು ಲಕ್ಷ್ಮೀ ಸತೀಶ್ ಶೆಟ್ಟಿಯವರು ದೇವರನಾಮಗಳನ್ನು ಹಾಡಿದರು. ಸದಸ್ಯರ ಮತ್ತು ಅವರ ಮಕ್ಕಳ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಸುರೇಶ್ ಶೆಟ್ಟಿಯವರು ನಡೆಸಿಕೊಟ್ಟರು. ಸಾಯಿ ಪ್ಯಾಲೇಸ್ ಹೋಟೆಲಿನ ಆದರಾತಿಥ್ಯದ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವರದಿ: ಉದಯ ಬಿ. ಶೆಟ್ಟಿ, ಪಂಜಿಮಾರು

ಕಾಪು : ಶಂಕರಪುರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ

Posted On: 07-04-2023 03:53PM

ಕಾಪು : ರೋಟರಿ ಕ್ಲಬ್ ಶಂಕರಪುರ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಜಂಟಿಯಾಗಿ ವಿಶ್ವ ಆರೋಗ್ಯ ದಿನಾಚರಣೆಯನ್ನು ರೋಟರಿ ಭವನ ಶಂಕರಪುರದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಇದರ ಅಧ್ಯಕ್ಷರಾದ ಡಾ. ಪಿವಿ ಭಂಡಾರಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ವಿಶ್ವ ಆರೋಗ್ಯ ದಿನಾಚರಣೆ ಹೇಗೆ ಪ್ರಾರಂಭವಾಯಿತು, ಆರೋಗ್ಯವೇ ಭಾಗ್ಯ ಎಂಬ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಸನ್ಮಾನ : ಆಫೀಸರ್ ಇನ್ ಪಿ ಹೆಚ್ ಸಿ ಮೂಡಬೆಟ್ಟುವಿನ ಅನಿತಾ ಫರ್ನಾಂಡಿಸ್, ಆಶಾ ಕಾರ್ಯಕರ್ತೆ ಗಾಯತ್ರಿ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಕೇಶವ ನಾಯಕ್ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿಯ ಕಾರ್ಯದರ್ಶಿ ಡಾ. ಕೇಶವ ನಾಯಕ್, ಡಾ. ಶ್ರೀನಿವಾಸ್ ಭಟ್, ರೋಟರಿಯ ಕಾರ್ಯದರ್ಶಿ ಸಿಲ್ವಿಯಾ ಕಾಸ್ಟಲಿನೋ ಹಾಗೂ ರೋಟರಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ವಿಕ್ಟರ್ ಮಾರ್ಟಿಸ್ ಪ್ರಾರ್ಥಿಸಿದರು. ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ಸ್ವಾಗತಿಸಿದರು.

ಸಸಿಹಿತ್ಲು ಭಗವತಿ ಯಕ್ಷಗಾನ ಮೇಳದ ಕಲಾವಿದ ನಲ್ಕ ಜಗದೀಶ ನಿಧನ

Posted On: 07-04-2023 03:36PM

ಮುಲ್ಕಿ : ಸಸಿಹಿತ್ಲು ಭಗವತಿ ಯಕ್ಷಗಾನ ಮೇಳದ ಹಿರಿಯ ಕಲಾವಿದ ನಲ್ಕ ಜಗದೀಶ ( 56 ) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸುಮಾರು 21 ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ಕಲಾವಿದನಾಗಿ ದುಡಿದಿರುವ ಇವರು ಭಗವತಿ ಮೇಳದ ಪ್ರಸಿದ್ಧ ಪ್ರಸಂಗ ಭಗವತಿ ಕ್ಷೇತ್ರ ಮಹಾತ್ಮೆಯಲ್ಲಿ ಈಶ್ವರನ ಪಾತ್ರ, ದೇವಿ ಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜ ಪಾತ್ರ ನಿರ್ವಹಿಸಿದ್ದರು.

ಕಾಸರಗೋಡು ತಾಲೂಕಿನ ನಲ್ಕದಲ್ಲಿ ಜನಿಸಿದ ಇವರು ಸಣ್ಣ ಪ್ರಾಯದಲ್ಲಿಯೇ ಯಕ್ಷಗಾನದ ಕಡೆಗೆ ಆಕರ್ಷಿತರಾಗಿದ್ದರು. ಪತ್ನಿ ಹವ್ಯಾಸಿ ಯಕ್ಷಗಾನ ಕಲಾವಿದೆ ಹೇಮಾ, ಒಂದು ಹೆಣ್ಣು ಮತ್ತು ಗಂಡು ಮಗುವನ್ನು ಅಗಲಿದ್ದಾರೆ.

ನಲ್ಕ ಜಗದೀಶರವರ ಅಕಾಲಿಕ ನಿಧನಕ್ಕೆ ಶ್ರೀ ಭಗವತೀ ದೇವಸ್ಥಾನದ ಆಡಳಿತ ಮಂಡಳಿ, ಪ್ರಧಾನ ಅರ್ಚಕರು, ಪ್ರಮುಖರು, ಮೇಳದ ಸಂಚಾಲಕರು, ಸಹಕಲಾವಿದರು, ಯಕ್ಷಾಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಪ್ರಿಲ್ 11 ರಂದು ವಿದ್ಯುತ್ ವ್ಯತ್ಯಯ

Posted On: 07-04-2023 12:05PM

ಉಡುಪಿ : ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಎಪ್ರಿಲ್ 11 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

33/11 ಕೆ.ವಿ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ತಲ್ಲೂರು ಉಪಕೇಂದ್ರದಿಂದ ಹೊರಡುವ 11 ಕೆ.ವಿ ಹೆಮ್ಮಾಡಿ, ಗುಲ್ವಾಡಿ, ವಂಡ್ಸೆ, ನೇರಳಕಟ್ಟೆ, ಬಾಂಡ್ಯ, ಕೆಂಚನೂರು, ದೇವಲ್ಕುಂದ ಮತ್ತು ಸಬ್ಲಾಡಿ ಹಾಗೂ 33/11 ಕೆ.ವಿ ಗಂಗೊಳ್ಳಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಮುಳ್ಳಿಕಟ್ಟೆ, ತ್ರಾಸಿ, ಗಂಗೊಳ್ಳಿ ಫೀಡರುಗಳ ವಂಡ್ಸೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಆನಗಳ್ಳಿ, ಉಪ್ಪಿನಕುದ್ರು, ತಲ್ಲೂರು, ಇಡೂರು-ಕುಂಜ್ಞಾಡಿ, ಮುದೂರು, ಹೊಸೂರು, ಕರ್ಕುಂಜೆ, ಕಾವ್ರಾಡಿ, ಅಂಪಾರು, ಬೆಳ್ಲಾಲ, ಕೆರಾಡಿ, ಆಜ್ರಿ, ಕೊಡ್ಲಾಡಿ, ಹೇರಿಕುದ್ರು, ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ, ಕಟ್ಬೆಲ್ತೂರು ಮತ್ತು ದೇವಲ್ಕುಂದ, ಮುಳ್ಳಿಕಟ್ಟೆ, ಗಂಗೊಳ್ಳಿ, ಹೊಸಾಡು, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ 33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಸದರಿ ಎಂ.ಯು.ಎಸ್.ಎಸ್ ನಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ ಮಾರ್ಗಗಳಾದ ಉಳಿಯಾರಗೋಳಿ, ಬಂಟಕಲ್ಲು, ಮೂಡಬೆಟ್ಟು, ಪಾಂಗಳ, ಶಿರ್ವ, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಶಿರ್ವ, ಮಟ್ಠಾರು, ಪದವು, ಪಾಂಬೂರು, ಪಿಲಾರುಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಪೊಲಿಪು, ಕೊಪ್ಪಲಂಗಡಿ, ಪಣಿಯೂರು, ಕಾಪು, ಬಡಾ ಮೂಳೂರು, ಬೆಳಪು, ಮಲ್ಲಾರು, ಅಬ್ಬೆಟ್ಟು, ಪಾದೂರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11 ಕೆ.ವಿ ಬ್ರಹ್ಮಾವರ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಚೇರ್ಕಾಡಿ, ಉಪ್ಪೂರು, ಹೊನ್ನಾಳ, ಕೊಳಲಗಿರಿ ಫೀಡರ್ ಮಾರ್ಗ ಹಾಗೂ 110/11 ಕೆ.ವಿ ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಶಾಂತಿವನ ಫೀಡರ್ ಮಾರ್ಗ ಮತ್ತು 110/11 ಕೆ.ವಿ ಮಧುವನ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ ಮಂದಾರ್ತಿ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೇರೂರು, ಚಾಂತಾರು, ಕುಂಜಾಲು, ಆರೂರು, ಚೇರ್ಕಾಡಿ, ಹಲುವಳ್ಳಿ, ಉಪ್ಪೂರು, ಮಾಯಾಡಿ, ಸಾಲ್ಮರ, ಕುದ್ರುಬೆಟ್ಟು, ಕೆ.ಜಿ.ರೋಡ್, ಕೋಟೆರೋಡ್, ನಿಡಂಬಳ್ಳಿ, ಕಲ್ಯಾಣಪುರ, ಆದರ್ಶನಗರ, ಕೀರ್ತಿನಗರ, ಸಾಲಿಕೇರಿ, ಬಿರ್ತಿ, ಹೊನ್ನಾಳ, ಕುಕ್ಕುಡೆ, ಉಗ್ಗೇಲ್ಬೆಟ್ಟು, ಜಾತಾಬೆಟ್ಟು, ಹಾವಂಜೆ, ಮಂದಾರ್ತಿ, ಕಾಡೂರು, ತಂತ್ರಾಡಿ, ಹೆಗ್ಗುಂಜೆ, ಕಾಡೂರು, ನಡೂರು, ಹೆಬ್ಬಾಡಿ, ಗೋಪಾಲಪುರ, ಶಾಂತಿವನ, ಗರಡಿಮಜಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಪ್ರಿಲ್ 11 : ಮಿನಿ ಉದ್ಯೋಗ ಮೇಳ

Posted On: 07-04-2023 11:51AM

ಉಡುಪಿ : ಯುಕ್ತ ಕೌಶಲ್ಯ ತರಬೇತಿ ಕೇಂದ್ರ, ಪ್ರಕಾಶ್ ರಿಟೇಲ್, ಎಸ್.ಬಿ.ಐ ಲೈಫ್ ಇನ್ಶೂರೆನ್ಸ್, ಏಂಜೆಲ್ ಬ್ರೋಕಿಂಗ್ ಪ್ರೈ.ಲಿ. ಮತ್ತು ಮೆಡ್ ಪ್ಲಸ್ ಕಂಪನಿಗಳ ವತಿಯಿಂದ ಎಪ್ರಿಲ್ 11 ರಂದು ಬೆಳಗ್ಗೆ 10.30 ಕ್ಕೆ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ.

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ಕಾರ್ಡ್ ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ, ದೂರವಾಣಿ ಸಂಖ್ಯೆ: 8105618291, 9945856670 ಹಾಗೂ 9901472710 ಅನ್ನು ಸಂಪರ್ಕಿಸಬಹುದಾಗಿದೆ. ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಉಡುಪಿ : ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ

Posted On: 07-04-2023 11:45AM

ಉಡುಪಿ : ಇಲ್ಲಿನ ಲೋಕಾಯುಕ್ತ ವಿಭಾಗದ ವತಿಯಿಂದ ಜಿಲ್ಲಾ ಲೋಕಾಯುಕ್ತ ವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ನಿರೀಕ್ಷಕರು ಮತ್ತು ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು ಎಪ್ರಿಲ್ 12 ರಂದು ಬೈಂದೂರು ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ರ ವರೆಗೆ ಜನಸಂಪರ್ಕ ಸಭೆ ಹಾಗೂ ಸಾರ್ವಜನಿಕ ಅಹವಾಲು ಕಾರ್ಯಕ್ರಮ ನಡೆಸಲಿದ್ದಾರೆ.

ಉಳಿದ ದಿನಗಳಲ್ಲಿಯೂ ಸಹ ಸಾರ್ವಜನಿಕರು ಅಹವಾಲುಗಳಿದ್ದಲ್ಲಿ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ: 0820-2958881 ಹಾಗೂ ದೂ.ಸಂಖ್ಯೆ: 0820-2536661 ಅಥವಾ ಅರ್ಜಿದಾರರು ನಮೂನೆ 1 ಮತ್ತು 2 ರಲ್ಲಿ ಭರ್ತಿ ಮಾಡಿ, ಅಫಿಡವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಅಥವಾ ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್ ಅಂಬೇಡ್ಕರ್ ವೀಥಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ ಹಾಗೂ ನೌಕರರ ವಿರುದ್ಧವೂ ಸಹ ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಉಡುಪಿ : ನಿಯಮ ಉಲ್ಲಂಘಿಸುವ ಪ್ರಿಂಟಿಂಗ್ ಪ್ರೆಸ್ ಗಳ ವಿರುದ್ದ ಕಠಿಣ ಕ್ರಮ - ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Posted On: 06-04-2023 11:42AM

ಉಡುಪಿ : ಪ್ರಸ್ತುತ ವಿಧಾನಸಭಾ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಸೂಚಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಿ, ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮುಗಲಭೆ ಸೃಷ್ಟಿಸುವಂತಹ ಕರಪತ್ರ, ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಮುದ್ರಿಸಿದಲ್ಲಿ ಅಂತಹ ಮುದ್ರಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಇಂದು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು , ಪ್ಲೆಕ್ಸ್ ಮುದ್ರಕರು ಮತ್ತು ಅವರ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರಪತ್ರ, ಫಲಕ ಪೋಸ್ಟರ್ ಬ್ಯಾನರ್ ಮುಂಭಾಗದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಮುದ್ರಣ ಪ್ರತಿಗಳ ಸಂಖ್ಯೆ ನಮೂದಿಸಬೇಕು. ಯಾವುದೇ ಧರ್ಮ, ಜಾತಿ, ಭಾಷೆ, ಜನರ ಭಾವನೆಗೆ ಧಕ್ಕೆಯಾಗುವಂತಹ ವಿಷಯಗಳನ್ನು ಮುದ್ರಿಸಬಾರದು ಎಂದು ತಿಳಿಸಿದರು. ಮುದ್ರಕರು ಪಾಂಪ್ಲೇಟಗಳು ಮತ್ತು ಪೋಸ್ಟರಗಳನ್ನು ಮುದ್ರಿಸುವ ಮೊದಲು ಪ್ರಕಾಶಕರ ಗುರುತಿನ ಬಗ್ಗೆ ದೃಢೀಕರಣವನ್ನು ಇಬ್ಬರು ಅನುಮೋದಕರೊಂದಿಗೆ ದೃಢೀಕರಣ ಪಡೆದಿರಲೇಬೇಕು. ಗುರುತಿನ ದೃಢೀಕರಣವಿಲ್ಲದೇ ಮುದ್ರಣ ಮಾಡಬಾರದು. ತಾವು ಮುದ್ರಿಸುವ ಒಂದು ಪ್ರತಿಯನ್ನು, ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ (ಆರ್‌ಓ) ಗಳಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಮುದ್ರಣವಾಗುವ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಕಬಾರದು ಎಂದು ಸೂಚಿಸಿದರು. ಮುದ್ರಣ ಕುರಿತ ಸೂಕ್ತ ಬಿಲ್ ಗಳನ್ನು ಇಟ್ಟುಕೊಂಡಿರಬೇಕು, ಮುದ್ರಣ ವೆಚ್ಚವನ್ನು ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಖರ್ಚು ವೆಚ್ಚಗಳಿಗೆ ಸೇರ್ಪಡೆ ಮಾಡುವುದರಿಂದ, ಅಗತ್ಯವಿದ್ದಲ್ಲಿ ಅವುಗಳನ್ನು ಹಾಜರುಪಡಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ತರಬೇತಿ ನಿರತ ಪ್ರೊಬೇಷನರಿ ಐ.ಎ.ಎಸ್.ಅಧಿಕಾರಿ ಯತೀಶ್, ಉಪಸ್ಥಿತರಿದ್ದರು. ಮಾಸ್ಟರ್ ಟ್ರೈನರ್ ಡಾ.ಅಶೋಕ್ ಕಾಮತ್ , ಮುದ್ರಣ ಮತ್ತು ಪ್ರಿಂಟಿಂಗ್ ಚುನಾವಣಾ ಆಯೋಗವು ಸೂಚಿಸಿರುವ ಮಾನದಂಡಗಳ ಕುರಿತಂತೆ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಪ್ರಿಂಟಿಂಗ್ ಪ್ರೆಸ್ ಗಳ ಮಾಲೀಕರು , ಪ್ಲೆಕ್ಸ್ ಮುದ್ರಕರು ಮತ್ತು ಅವರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಉಡುಪಿ : ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಲ್ಲಿ ಶಿಸ್ತು ಕ್ರಮ ಜಾರಿ

Posted On: 05-04-2023 07:32PM

ಉಡುಪಿ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಚುನಾವಣೆ ಮತ್ತು ಪ್ರಚಾರ ಕಾರ್ಯಗಳಲ್ಲಿ ರಾಜಕೀಯ ಪಕ್ಷದವರು ಚುನಾವಣೆ ರ್ಯಾಲಿಯಲ್ಲಿ, ಕರಪತ್ರ ಹಂಚುವಿಕೆ ಕೆಲಸದಲ್ಲಿ, ಪ್ರಚಾರ ಕಾರ್ಯಗಳಲ್ಲಿ ಮತ್ತು ಇತರೆ ಕೆಲಸಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ಈ ಆದೇಶಕ್ಕೆ ವ್ಯತಿರಿಕ್ತವಾಗಿ ಮಕ್ಕಳನ್ನು ಬಳಸಿಕೊಂಡಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.