Updated News From Kaup
ಕಾರ್ಕಳ : ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್ ಆಯ್ಕೆ
Posted On: 19 Jul 2023, 07:17 PM
ಕಾರ್ಕಳ : ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಷರೀಫ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬೈಲೂರು ಹರೀಶ್ ಅಚಾರ್ಯ, ಕೋಶಾಧಿಕಾರಿಯಾಗಿ ಕೆ.ಎಂ ಖಲೀಲ್ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳ ಪುನರ್ ರಚನೆ ಪ್ರಕ್ರಿಯೆ ತಾಲೂಕು ಪ್ರವಾಸಿ ಕೇಂದ್ರದಲ್ಲಿ ಬುಧವಾರ ಜರುಗಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲ್, ರಜತ ಸಮಿತಿ ಕಾರ್ಯದರ್ಶಿ ಜಯಕರ ಸುವರ್ಣ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಉಪಾಧ್ಯಕ್ಷರಾಗಿ ಹರೀಶ್ ಸಚ್ಚರಿಪೇಟೆ, ಜತೆ ಕಾರ್ಯದರ್ಶಿಯಾಗಿ ವಾಸುದೇವ ಭಟ್ , ಕ್ರೀಡಾ ಕಾರ್ಯದರ್ಶಿ ರಾಂ ಅಜೆಕಾರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರಿಪ್ರಸಾದ್ ನಂದಳಿಕೆ ಆಯ್ಕೆಗೊಂಡರು. ಜಿಲ್ಲಾ ಉಪಾಧ್ಯಕ್ಷ ಆರ್. ಬಿ ಜಗದೀಶ್, ಜಿಲ್ಲಾ ಸಮಿತಿ ಪ್ರತಿನಿಧಿ ಉದಯ್ ಮುಂಡ್ಕೂರ್ ಉಪಸ್ಥಿತರಿದ್ದರು.
ಜುಲೈ 22 : ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಶ್ರೀ ಪುರುಷೋತ್ತಮ ಯಾಗ
Posted On: 19 Jul 2023, 06:20 PM
ಕಾಪು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರು ಇಲ್ಲಿನ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಶೋಭಕೃತ್ ನಾಮ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ-2023 ಜುಲೈ 3ರಿಂದ ಸೆಪ್ಟಂಬರ್ 29 ತನಕ ಶ್ರೀ ಸರಸ್ವತೀ ಸತ್ಸಂಗ ಮಂದಿರ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಇಲ್ಲಿ ಜರಗುತ್ತಿದೆ. ಈ ನಿಮಿತ್ತ ವಿಶ್ವ ಬ್ರಾಹ್ಮಣ ಪ್ರತಿಷ್ಠಾನ ಹುಬ್ಬಳ್ಳಿ ಇವರ ವತಿಯಿಂದ ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ವೇ.ಬ್ರ. ಶ್ರೀ ಶಂಕರಾಚಾರ್ಯಗುರುನಾಥ ಆಚಾರ್ಯ ಪಂಡಿತ್ ಕಡ್ಲಾಸ್ಕರ್ ಅವರ ನೇತೃತ್ವದೊಂದಿಗೆ, ಪಡುಕುತ್ಯಾರಿನಲ್ಲಿ ಸ್ವಸ್ತಿ ವಿಜಯಾಭ್ಯುದಯ ಶಾಲಿವಾಹನಶಕ 1946, ಜುಲೈ 22, ಶನಿವಾರದಂದು ಪೂರ್ವಾಹ್ನ ಘಂಟೆ 7 ರಿಂದ ಶೊಭಕೃತ್ ಸಂವತ್ಸರದ ಅಧಿಕ ಮಾಸದ ಅಧಿಕ ಶ್ರಾವಣ ಶುಕ್ಲ ಪಕ್ಷ ಚತುರ್ಥಿ, ಶನಿವಾರದಂದು ಶ್ರೀ ಪುರುಷೋತ್ತಮ ಯಾಗವನ್ನು ನಡೆಸಲು ತೀರ್ಮಾನಿಸಲಾಗಿದೆ. ಪುರುಷೋತ್ತಮ ಮಾಸದ ನಿಮಿತ್ತವಾಗಿ ಮಾಡುವ ವ್ರತನಿಯಮ, ಪೂಜಾನುಷ್ಠಾನ,ಯಾಗ ಧರ್ಮಗಳಿಗೆ ಪುರುಷೋತ್ತಮ ಸ್ವರೂಪಿಯಾಗಿರುವ ಯತಿಗಳ ಸಾನಿಧ್ಯದಲ್ಲಿ ಸಂಪನ್ನಗೊಳ್ಳುವ ಸೇವೆಗಳಿಗೆ ವಿಶೇಷ ಮತ್ತು ಅಧಿಕ ಫಲಗಳು ಇವೆ. ಪುರುಷೋತ್ತಮ ಯಾಗವು 108 ದಂಪತಿ ಪೂಜೆ, ವಾಯನ ದಾನ, ಅಪೂಪಾದಿ ದಾನ ಇವುಗಳೊಂದಿಗೆ ಕಾರ್ಯಕ್ರಮಗಳು ಮಹಾ ಸನ್ನಿಧಾನಂಗಳವರ ದಿವ್ಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳಲಿದೆ. ಗೌರವಾಧ್ಯಕ್ಷರಾದ ಪಿ.ವಿ ಗಂಗಾಧರ ಆಚಾರ್ಯ, ಉಡುಪಿ, ಅಧ್ಯಕ್ಷರಾದ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಪದಾಧಿಕಾರಿಗಳು ಹಾಗೂ ಸದಸ್ಯರು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ(ರಿ) ಕಟಪಾಡಿ ಪಡುಕುತ್ಯಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಡುಪಿ : ಮಹತ್ಮಾ ಗಾಂಧಿ ಅಂತರಾಷ್ಟ್ರೀಯ ಪುರಸ್ಕಾರಕ್ಕೆ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆ
Posted On: 19 Jul 2023, 05:59 PM
ಉಡುಪಿ :- ಡಬ್ಲ್ಯು.ಎ.ಸಿ ಬುಕ್ ಆಫ್ ರೆಕಾಡ್೯ ಸಂಸ್ಥೆಯ ಮೂಲಕ ನೀಡಲಾಗುವ ಮಹತ್ಮಾ ಗಾಂಧಿ ಅಂತರಾಷ್ಟ್ರೀಯ ಪುರಸ್ಕಾರ ಕ್ಕೆ ರಾಘವೇಂದ್ರ ಪ್ರಭು, ಕವಾ೯ಲುರವರು ಆಯ್ಕೆಯಾಗಿದ್ದಾರೆ. ಸಾಮಾಜಿಕ ಕಾಯ೯ ಮತ್ತು ರಕ್ತದಾನ ವಿಭಾಗದಲ್ಲಿ ಈ ಪುರಸ್ಕಾರ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ವಿವಿಧ ರೀತಿಯ ಸಾಮಾಜಿಕ ಚಟುವಟಿಕೆಯ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು, ರಕ್ತದಾನ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ್ದು, ರೆಡ್ ಕ್ರಾಸ್ ರಾಜ್ಯ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.
ಕಾಪು : ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ
Posted On: 19 Jul 2023, 05:52 PM
ಕಾಪು : ಎಲ್ಲೂರು ಗ್ರಾಮದ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ ವಿಜೃಂಭಣೆಯಿಂದ ನೆರವೇರಿತು. ಶನಿವಾರ ಮುಂಜಾನೆ ಸೂರ್ಯೋದಯದ ಕಾಲ 6 ಗಂಟೆಗೆ ದೀಪ ಪ್ರಜ್ವಲನೆಯ ಮೂಲಕ ಆರಂಭಗೊಂಡ ಭಜನೆ ಮರುದಿನ ಭಾನುವಾರ 6:10 ನಿಮಿಷಕ್ಕೆ ಸಂಪನ್ನಗೊಂಡಿತು. ಭಜನಾ ಸೇವೆಯಲ್ಲಿ ಜಿಲ್ಲೆಯ 22 ಭಜನಾ ತಂಡಗಳು ಪಾಲ್ಗೊಂಡಿದ್ದವು. ಜಾನಪದ ವಿದ್ವಾಂಸ ಕೆ ಎಲ್ ಕುಂಡಂತಾಯರು ,ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಕೆ.ಲಕ್ಷ್ಮೀನಾರಾಯಣ ರಾವ್ ದಂಪತಿಗಳು, ನಿವೃತ್ತ ಪ್ರಾಚಾರ್ಯ ನಾಗರತ್ನ ರಾವ್ ದಂಪತಿಗಳು, ಕಮಲಾವತಿ ಉಡುಪಿ, ಸತೀಶ್ ಕುತ್ಯಾರ್, ಪ್ರೀತಿ ಸಂತೋಷ್ ಭಂಡಾರಿ ಕಟಪಾಡಿ, ಅರುಣ್ ಶೆಟ್ಟಿ ಕುತ್ಯಾರು, ಶ್ರೀನಿವಾಸ್ ಭಾಗವತರು, ಅರ್ಚಕ ಗುರುರಾಜ್ ರಾವ್, ವಿಎ ಸುನೀಲ್ ದೇವಾಡಿಗ ಮತ್ತಿತರ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಹೋರಾತ್ರಿ ನಡೆದ ಭಜನೆ, ಅನ್ನಸಂತರ್ಪಣೆ, ಮಾತೃ ಮಂಡಳಿಯ ಸುಮಾರು ನೂರಕ್ಕೂ ಹೆಚ್ಚು ಸದಸ್ಯರ ಕುಣಿತ ಭಜನೆಯೊಂದಿಗೆ ಸಮಾಪನೆಗೊಂಡು ತರುವಾಯ ಓಕುಳಿ ಸೇವೆ , ಅವಭೃತ ಸ್ನಾನ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು.
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಂತ್ರಿಕ ಶಿಕ್ಷಣದ ಜೊತೆಗೆ ಇನ್ನೆರಡು ಶೈಕ್ಷಣಿಕ ಸಂಸ್ಥೆಗಳ ಕಾರ್ಯಾರಂಭ
Posted On: 19 Jul 2023, 05:32 PM
ಬಂಟಕಲ್ಲು : ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಆಶ್ರಯದಲ್ಲಿ ಬಂಟಕಲ್ನಲ್ಲಿ ಸ್ಥಾಪಿತವಾದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅತೀ ಅಗತ್ಯವಾದ NAAC ನಿಂದ “ಎ” ಶ್ರೇಣಿಯ ಮಾನ್ಯತೆ ಹಾಗು ರಾಷ್ಟ್ರೀಯ ಮೌಲ್ಯಾಂಕನ ಮಂಡಳಿ (NBA)ಯಿಂದ ಮಾನ್ಯತೆ ಕೂಡಾ ದೊರೆತಿದೆ. ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಖಾತ್ರಿಪಡಿಸುವ ಈ ಎರಡು ಮಾನ್ಯತೆ ಗಳನ್ನು ವಿದ್ಯಾಸಂಸ್ಥೆಯು ಪ್ರಾರಂಭವಾದ 9 ಮತ್ತು 11ನೇ ವರ್ಷಗಳಲ್ಲಿ ಪಡೆದಿರುವ ಕರಾವಳಿ ಕರ್ನಾಟಕದ ಪ್ರಪ್ರಥಮ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆ ಈ ವಿದ್ಯಾ ಸಂಸ್ಥೆಗೆ ಸಿಕ್ಕಿರುವುದು ಹೆಮ್ಮೆಯ ವಿಷಯ. ಇದೀಗ 2023-24 ಶೈಕ್ಷಣಿಕ ವರ್ಷದಿಂದ ಉಡುಪಿ ಸುತ್ತಮುತ್ತಲಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಶ್ರೀ ಸೋದೆ ವಾದಿರಾಜ ಮಠದ ಆಡಳಿತಕ್ಕೆ ಒಳಪಟ್ಟ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಎಜ್ಯುಕೇಶನ್ ಸೊಸೈಟಿಯ ಆಶ್ರಯಲ್ಲಿ ನಿರಾಮಯ ಕಾಲೇಜ್ ಆಫ್ ನರ್ಸಿಂಗ್ನಲ್ಲಿ 4 ವರ್ಷದ ಬಿ.ಎಸ್ಸಿ ನರ್ಸಿಂಗ್ ಹಾಗೂ ನಿರಾಮಯ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ನಲ್ಲಿ ಅನಸ್ತೀಶಿಯ ಆಪರೇಶನ್ ಥಿಯೇಟರ್ ಟೆಕ್ನಾಲಜಿ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ಹಾಗೂ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಎಂಬ ಮೂರು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್ಗಳ ಜೊತೆಗೆ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಮಾರ್ಕೆಟಿಂಗ್ ಹಾಗೂ ಫೈನಾನ್ಸ್ ವಿಶೇಷತೆಯೊಂದಿಗೆ 2 ವರ್ಷದ ಪದವಿ ಪ್ರಾರಂಭಿಸಲು ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ, ಬೆಳಗಾವಿ ವಿಶ್ವವಿದ್ಯಾನಿಲಯದ ಅನುಮೋದನೆ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಸರಕಾರದಿಂದ ಅನುಮತಿ ದೊರೆತಿರುತ್ತದೆ. ಈ ಎಲ್ಲಾ ಕೋರ್ಸ್ಗಳು ಬಂಟಕಲ್ಲಿನ ಸುಂದರ ವಾತಾವರಣದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ. ಈ ಎಲ್ಲಾ ಸಾಧನೆಗಳು ಪೂಜ್ಯ ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದರ ಕನಸಾದ ಮಧ್ವ ವಿಶ್ವವಿದ್ಯಾನಿಲಯಕ್ಕೆ ಕನಸಿಗೆ ಮತ್ತೊಂದು ಮೆಟ್ಟಿಲಾಗಿದೆ ಎಂದು ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಬುಧವಾರ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಎಮ್ಬಿಎ 2 ವರ್ಷದ ಪದವಿಯಾಗಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಯದಿಂದ 3 ವರ್ಷದ ಪದವಿ ಪೂರ್ಣಗೊಳಿಸಿ ಶೇಕಡಾ 50% ಅಂಕಗಳೊಂದಿಗೆ ಹಾಗೂ KMAT/PGCET/CAT ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು. ಬಿಎಸ್ಸಿ ನರ್ಸಿಂಗ್ 4 ವರ್ಷದ ಕೋರ್ಸ್ ಆಗಿದ್ದು (3 ವರ್ಷ ಮತ್ತು 1 ವರ್ಷ ಇಂಟರ್ನ್ಶಿಪ್) ಅಭ್ಯರ್ಥಿಗಳು ಸಂಪೂರ್ಣವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆಯಬಹುದು. ಅಲೈಡ್ ಹೆಲ್ತ್ ಸೈನ್ಸ್ ಇದು ಕೂಡ 4 ವರ್ಷದ ಕೋರ್ಸ್ ಆಗಿದ್ದು (3 ವರ್ಷ ಮತ್ತು 1 ವರ್ಷ ಇಂಟರ್ನ್ಶಿಪ್) ಅಭ್ಯರ್ಥಿಗಳು ವಿಶ್ವವಿದ್ಯಾನಿಯದ ಮಾನದ೦ಡದ ಪ್ರಕಾರ ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಒಟ್ಟು ಕನಿಷ್ಠ 50% ಅಂಕವನ್ನು ಪಡೆದಿರಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆಯ ಅವಶ್ಯಕತೆ ಇರುವುದಿಲ್ಲ ಈ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಬೆಳ್ಮಣ್, ನರ್ಸಿಂಗ್ ಕಾಲೇಜಿನ ನಿಯೋಜಿತ ಪ್ರಾಂಶುಪಾಲೆಯಾದ ಡಾ. ಪ್ಲೇವಿಯಾ ಕ್ಯಾಸ್ಟೆಲಿನೊ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ನಿಯೋಜಿತ ಪ್ರಾಂಶುಪಾಲರಾದ ಡಾ. ನವೀನ್ ಬಲ್ಲಾಳ್, ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಆಡಳಿತಾಧಿಕಾರಿ ವಿದ್ಯಾಭಟ್ ಹಾಜರಿದ್ದರು.
ಕಾಪು : ಕುತ್ಯಾರಿನ ಗ್ರಾಮ one ಸೇವಾ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಅವಕಾಶ
Posted On: 19 Jul 2023, 02:18 PM
ಕಾಪು : ಕುತ್ಯಾರು, ಕಳತ್ತೂರು ಗ್ರಾಮದ ಜನತೆಗೆ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಗೆ ಶ್ರೀ ಸಾಯಿ ಕಂಪ್ಯೂಟರ್ ಗ್ರಾಮ one ಸೇವಾ ಕೇಂದ್ರದ ಕುತ್ಯಾರಿನ ಕಚೇರಿಯಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. ಕಚೇರಿ ವಿಳಾಸ : ಸಾಯಿ ಕಂಪ್ಯೂಟರ್ ಗ್ರಾಮ one ಸೇವಾ ಕೇಂದ್ರ (ಗ್ರಾಮ ಪಂಚಾಯತಿ ಕುತ್ಯಾರಿನ ಹತ್ತಿರ) ಐಡ ಕಾಂಪ್ಲೆಕ್ಸ್, ಶಾಂತಿ ಗುಡ್ಡೆ ಬಸ್ಟ್ಯಂಡ್ ಬಳಿ, 108 ಕಳತ್ತೂರು ಕಾಪು ತಾಲೂಕು ಉಡುಪಿ ಜಿಲ್ಲೆ 574106 ಮೊಬೈಲ್ :9606764039
ಜುಲೈ 22 : ದೊಂದಿ ಬೆಳಕಿನ ಕೊರಗಜ್ಜ ದೈವದ ನೇಮೋತ್ಸವ
Posted On: 17 Jul 2023, 07:34 PM
ಉಡುಪಿ : ಇಲ್ಲಿನ ವುಡ್ಲ್ಯಾಂಡ್ಸ್ ಹೋಟೆಲ್ ಹತ್ತಿರದ ಬೊಬ್ಬರ್ಯಕಟ್ಟೆ ಶ್ರೀ ಬೊಬ್ಬರ್ಯ, ಕಾಂತೇರಿ ಜುಮಾದಿ ಹಾಗೂ ಕಲ್ಕುಡ, ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ಬೊಬ್ಬರ್ಯ ಯುವ ಸೇವಾ ಸಮಿತಿ ಉಡುಪಿ ಸುಪ್ರಸಾದ್ ಶೆಟ್ಟಿ ಅಭಿಮಾನಿ ಬಳಗ ಉಡುಪಿ ಹಾಗೂ ಮಮತಾ ಪಿ. ಶೆಟ್ಟಿ ಅಭಿಮಾನಿ ಬಳಗ ಉಡುಪಿ ಇವರ ವತಿಯಿಂದ ದೊಂದಿ ಬೆಳಕಿನ ಕೊರಗಜ್ಜ ದೈವದ ನೇಮೋತ್ಸವ ಜುಲೈ 22, ಶನಿವಾರ ಸಂಜೆ 7 ಗಂಟೆಗೆ ಜರಗಲಿದೆ. ನೇಮೋತ್ಸವದ ನೇರ ಪ್ರಸಾರವವು ನಮ್ಮ ಉಡುಪಿ ಟಿ.ವಿ. ಚಾನೆಲ್ ಹಾಗೂ ಫೇಸ್ಬುಕ್ ಪೇಜ್ನಲ್ಲಿ ಪ್ರಸಾರವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಟಿಪ್ಪರ್ನ ಹಿಂಬದಿಗೆ ಸಿಲುಕಿದ ಕಾರು ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ; ಪ್ರಕರಣ ದಾಖಲು
Posted On: 17 Jul 2023, 07:05 PM
ಪಡುಬಿದ್ರಿ : ಟಿಪ್ಪರ್ನ ಹಿಂಬದಿಗೆ ಸಿಲುಕಿದ ಸ್ಯಾಂಟ್ರೋ ಕಾರನ್ನು ಕಿಲೋಮೀಟರ್ ದೂರ ಟಿಪ್ಪರ್ ಎಳೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಕಾರು ಸಾಗರದಿಂದ ಮಂಗಳೂರು ಕಡೆ ಹಾಗೂ ಟಿಪ್ಪರ್ ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಬಳಿಕ ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದ ಸಾರ್ವಜನಿಕರು ಬೈಯ್ದು ನಿಲ್ಲಿಸಿದ್ದು, ಪಡುಬಿದ್ರಿ ಪೊಲೀಸರು ಟಿಪ್ಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯವಾಗಿದ್ದು, ಗಾಯಗಳನ್ನು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವ ಜನತೆ ಉನ್ನತ ಸಾಧನೆಯ ಗುರಿ ಇಟ್ಟುಕೊಳ್ಳಬೇಕು : ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕೆ.
Posted On: 17 Jul 2023, 06:33 PM
ಉಡುಪಿ : ಯುವ ಜನತೆ ತಮ್ಮ ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡಲು ಸ್ಪಷ್ಟ ಗುರಿ ಇಟ್ಟುಕೊಂಡು, ಆ ಗುರಿ ತಲುಪಲು ನಿರಂತರವಾಗಿ ಪರಿಶ್ರಮ ಪಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಮಹಾತ್ಮ ಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನಡೆದ ಆಗ್ನಿಪಥ್ ಸೇನಾ ನೇಮಕಾತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಯುವಜನತೆ ತಾವು ಇಟ್ಟುಕೊಂಡ ಗುರಿ ಸಾಧನೆಗೆ ಕಠಿಣ ಶ್ರಮ ಪಡಬೇಕು. ಶ್ರಮ ಪಟ್ಟರೆ ಸ್ವಲ್ಪ ತಡವಾದರೂ ಉತ್ತಮ ಪ್ರತಿಫಲ ದೊರಕೇ ದೊರೆಯುತ್ತದೆ. ಯಾವುದೇ ಸಂದರ್ಭದಲ್ಲಿ ನಿರಾಶರಾಗದೇ ಮುಂದೆ ಸಾಗಿದ್ದಲ್ಲಿ ಯಶಸ್ಸು ಸಿಗಲಿದೆ. ಜೀವನದಲ್ಲಿ ಉನ್ನತ ಸಾಧನೆಗಳನ್ನು ಮಾಡುವ ನಿಟ್ಟಿನಲ್ಲಿ ಯುವ ಜನತೆ ಕಾರ್ಯೋನ್ಮುಖರಾಗಬೇಕು ಎಂದರು. ಉನ್ನತ ಧ್ಯೇಯದಿಂದ ಅಗ್ನಿಪಥ್ ಮೂಲಕ ದೇಶರಕ್ಷಣೆಗಾಗಿ ಸೇನೆಗೆ ಸೇರ್ಪಡೆಯಾಗುತ್ತಿರುವ ಯುವಜನರ ಕನಸು ಸಾಕಾರಗೊಂಡು ಯಶಸ್ಸು ದೊರೆಯಲಿ, ಮುಂದಿನ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಸೇನೆಯ ಮೇಜರ್ ಜನರಲ್ ಆರ್.ಆರ್.ರೈನಾ, ವಿಶಿಷ್ಠ ಸೇವಾ ಮೆಡಲ್, ಅಡಿಷನಲ್ ಡೈರಕ್ಟರ್ ಜನರಲ್, ನೇಮಕಾತಿ ವಿಭಾಗ ಮತ್ತು ಮಂಗಳೂರು ಸೇನಾ ನೇಮಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ಅನುಜ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು. ಇಂದು ನಡೆದ ರ್ಯಾಲಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 41, ಉಡುಪಿಯ 59, ದ.ಕನ್ನಡದ 88, ದಾವಣಗೆರೆಯ 91, ಶಿವಮೊಗ್ಗದ 92 ಹಾಗೂ ಹಾವೇರಿ ಜಿಲ್ಲೆಯ 294 ಸೇರಿದಂತೆ ಒಟ್ಟು 665 ಅಭ್ಯರ್ಥಿಗಳು ಭಾಗವಹಿಸಿದ್ದರು. ಬೆಳಗ್ಗೆ 6.30 ರಿಂದ ನಡೆದ ಓಟದ ಸ್ಪರ್ಧೆಯಲ್ಲಿ ಅಭ್ಯರ್ಥಿಗಳನ್ನು ತಲಾ 100 ಜನರಂತೆ ತಂಡಗಳಾಗಿ ವಿಂಗಡಿಸಲಾಗಿದ್ದು, ನಿಗದಿತ ದೂರ 1600 ಮೀ. (ಕ್ರೀಡಾಂಗಣದ 4 ಸುತ್ತು) ನ್ನು 5.30 ನಿಮಿಷದೊಳಗೆ ಪೂರ್ಣಗೊಳಿಸಿದವರನ್ನು ಮತ್ತು 5.30 ರಿಂದ 5.45 ನಿಮಿಷದೊಳಗೆ ಪೂರ್ಣಗೊಳಿಸಿದವರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿತು. ಅದರ ನಂತರ ಓಡಿದ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಯಿತು. ಕೆಲವೇ ಸೆಕಂಡ್ಗಳ ಅಂತರದಲ್ಲಿ ಓಟವನ್ನು ಪೂರ್ಣಗೊಳಿಸಲಾಗದೇ ವಿಫಲರಾದ ಹಲವು ಅಭ್ಯರ್ಥಿಗಳು ಸ್ಥಳದಲ್ಲೇ ರೋಧಿಸಿ, ತಮ್ಮನ್ನು ಅರ್ಹತೆಗೆ ಪರಿಗಣಿಸುವಂತೆ ಸೇನೆಯ ಅಧಿಕಾರಿಗಳಲ್ಲಿ ಬೇಡಿಕೊಳ್ಳುತ್ತಿದ್ದರು. ಆದರೆ ಸೇನೆಯ ಅಧಿಕಾರಿಗಳು ಅವರನ್ನು ಮುಂದಿನ ರ್ಯಾಲಿಯಲ್ಲಿ ಮತ್ತೊಮ್ಮೆ ಪ್ರಯತ್ನಿಸುವಂತೆ ಸಮಾಧಾನ ಮಾಡಿ ಕಳುಹಿಸುತ್ತಿದ್ದರು. 4 ಓಟದ ಸ್ಪರ್ಧೆಯಲ್ಲಿ ಸಂಪೂರ್ಣ ನಿತ್ರಾಣರಾದವರಿಗೆ ತುರ್ತು ಪ್ರಥಮ ಚಿಕಿತ್ಸೆ ಮತ್ತು ವೈದ್ಯಕೀಯ ಚಿಕಿತ್ಸೆ ನೀಡಲು ಅಂಬುಲೆನ್ಸ್ ಸಹಿತ ವೈಧ್ಯಾಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದರು. ಸ್ಥಳದಲ್ಲಿ ಯಾವುದೇ ಗದ್ದಲ, ನೂಕು ನುಗ್ಗಲು ಉಂಟಾಗದಂತೆ ಪೊಲೀಸ್ ಸಿಬ್ಬಂದಿ ಅಗತ್ಯ ಮುಂಜಾಗ್ರತೆ ವಹಿಸಿದ್ದರು. ರ್ಯಾಲಿಯಲ್ಲಿ ಅಭ್ಯರ್ಥಿಗಳಿಗೆ 1600 ಮೀ ಓಟದ ಜೊತೆಗೆ 9 ಅಡಿ ಕಂದಕ ಜಿಗಿತ, ಫುಲ್ ಅಪ್, ಎತ್ತರ, ಎದೆಯ ಸುತ್ತಳತೆ ಮತ್ತು ತೂಕ ಹಾಗೂ ವೈದ್ಯಕೀಯ ಪರೀಕ್ಷೆ ಮುಂತಾದ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜುಲೈ 17 ರಿಂದ 25 ರ ವರೆಗೆ ನಡೆಯುವ ರ್ಯಾಲಿಗೆ ಜಿಲ್ಲಾಡಳಿದ ಮೂಲಕ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಅಭ್ಯರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ 6,800 ಕ್ಕೂ ಅಧಿಕ ಮಂದಿ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಂಡಿದ್ದು, ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮೆನ್, ಅಗ್ನಿವೀರ್ ಕ್ಲಕ್/ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.
ಮೀನುಗಾರರಿಗೆ ಸಾಮೂಹಿಕ ಅಪಘಾತ ವಿಮಾ ಯೋಜನೆ
Posted On: 17 Jul 2023, 06:25 PM
ಉಡುಪಿ : ಮೀನುಗಾರಿಕೆ ಇಲಾಖೆಯ ವತಿಯಿಂದ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯತ್ವ ಹೊಂದಿರುವ 18 ರಿಂದ 60 ವರ್ಷದೊಳಗಿನ ಮೀನುಗಾರರು, ಮೀನುಗಾರಿಕೆಯಲ್ಲಿ ಹಾಗೂ ಮೀನುಗಾರಿಕೆಗೆ ಪೂರಕವಾದ ಇತರೇ ಚಟುವಟಿಕೆಗಳಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಅಥವಾ ಆಕಸ್ಮಿಕವಾಗಿ ಸಂಭವಿಸುವ ಅವಘಡಗಳಿಂದ ಜೀವ ಹಾನಿಯಾದಲ್ಲಿ ಅಂತಹ ಕುಟುಂಬದವರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ಸಾಮೂಹಿಕ ಅಪಘಾತ ವಿಮಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಮೀನುಗಾರಿಕೆ ಸಹಕಾರ ಸಂಘದ ಸದಸ್ಯತ್ವ ಹೊಂದಿರುವ ಮೀನುಗಾರರ ಹಾಗೂ ವಿಮೆ ಸೌಲಭ್ಯಕ್ಕಾಗಿ ನಾಮನಿರ್ದೇಶನ ಮಾಡುವ ಕುಟುಂಬ ಸದಸ್ಯರ ಪಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಪ್ರತಿ ಹಾಗೂ ಇತರೆ ವಿವರಗಳನ್ನು ತಾವು ಸದಸ್ಯತ್ವ ಹೊಂದಿರುವ ಮೀನುಗಾರಿಕೆ ಸಹಕಾರಿ ಸಂಘಕ್ಕೆ ಜುಲೈ 28 ರ ಒಳಗೆ ಸಲ್ಲಿಸುವಂತೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
