Updated News From Kaup

ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಯಾಗಿ ಫಾರೂಕ್ ಚಂದ್ರನಗರ ಆಯ್ಕೆ

Thumbnail
Posted On: 18 Jan 2023, 06:34 PM

ಕಾಪು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿಯಾಗಿ ಫಾರೂಕ್ ಚಂದ್ರನಗರರನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರ ಶಿಫಾರಸಿನ ಮೇರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರು ಹಾಗೂ ಕೇಂದ್ರ ಸರಕಾರದ ಸಂಸದರಾದ ಇಮ್ರಾನ್ ಪ್ರತಾಪ್ ಗರ್ಹೀ ಅವರ ಆದೇಶದ ಮೇರೆಗೆ ಕೆ.ಪಿ.ಸಿ.ಸಿ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಕೆ. ಅಬ್ದುಲ್ ಜಬ್ಬಾರ್ ಆಯ್ಕೆ ಮಾಡಿರುತ್ತಾರೆ. ಫಾರೂಕ್ ಚಂದ್ರನಗರ ಈ ಮೊದಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಹಲವಾರು ಹುದ್ದೆ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು : ಉಡುಪಿ ಜಿಲ್ಲಾ ಸಮಿತಿ, ತಾಲೂಕು ಅಧ್ಯಕ್ಷರ ನಿಯೋಗ - ಸಚಿವ ಸುನಿಲ್ ಕುಮಾರ್ ಭೇಟಿ

Thumbnail
Posted On: 18 Jan 2023, 06:18 PM

ಉಡುಪಿ : ಜಿಲ್ಲಾ ಕನ್ನಡ ಭವನ ನಿರ್ಮಾಣದ ಬಗ್ಗೆ ಸರಕಾರದ ಮೂಲಕ ಅನುದಾನ ನೀಡುವ ಬಗ್ಗೆ ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರು ಸುನಿಲ್ ಕುಮಾರ್ ರನ್ನು ಅವರ ನಿವಾಸದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇತೃತ್ವದಲ್ಲಿ ಜಿಲ್ಲಾ ಸಮಿತಿ ಹಾಗೂ ತಾಲೂಕು ಅಧ್ಯಕ್ಷರುಗಳ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿದರು.

ಮೂಲ್ಯರ ಯಾನೆ ಕುಲಾಲರ ಸಂಘ ಕುತ್ಯಾರು : ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ

Thumbnail
Posted On: 17 Jan 2023, 01:53 PM

ಕಾಪು : ತಾಲೂಕಿನ ಕುತ್ಯಾರುವಿನ ಮೂಲ್ಯರ ಯಾನೆ ಕುಲಾಲ ಸಂಘ (ರಿ) ಕುತ್ಯಾರು ಇವರ ಆಶ್ರಯದಲ್ಲಿ ಸಂಘದ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಸತೀಶ್ ಕುತ್ಯಾರು ಅಧ್ಯಕ್ಷತೆಯಲ್ಲಿ ಕುತ್ಯಾರು ರಾಮೊಟ್ಟು ಬನತೋಡಿ ಗದ್ದೆಯಲ್ಲಿ ಜನವರಿ 15 ರಂದು ನಡೆಯಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪೆರ್ಡೂರಿನ ಐತು ಕುಲಾಲ್ ಹಾಗೂ ಕುತ್ಯಾರು ಅಂಚೆ ಕಚೇರಿಯಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ ಇನ್ನದ ಸತೀಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಂಗಳೂರಿನ ವೈದ್ಯರಾದ ಶ್ರೀನಿವಾಸ್ ಮಂಗಳೂರು, ಆಗಮ ಪಂಡಿತ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಉದ್ಯಮಿ ಸಮಾಜ ಸೇವಕರು ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇದರ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್ ಕುಲಾಲ್ ಉಪಸ್ಥಿತರಿದ್ದರು. ರಾಜಲಕ್ಷ್ಮಿ ಸತೀಶ್ ಎಲ್ಲರನ್ನು ಸ್ವಾಗತಿಸಿದರು. ಧೀರಜ್ ಕುಲಾಲ್ ಕುತ್ಯಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಶಬ್ಬೀರ್ ಎಸ್ ಅಭಿಮಾನಿ ಬಳಗದಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರಿಗೆ ಅಭಿನಂದನೆ

Thumbnail
Posted On: 17 Jan 2023, 12:41 PM

ಕಾಪು : ಶಬ್ಬೀರ್ ಎಸ್ ಅಭಿಮಾನಿ ಬಳಗ ಮಂಗಳೂರು ವತಿಯಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರ ರವರನ್ನು ಬಟರ್ ಫ್ಲೈ ಗೆಸ್ಟ್ ಹೌಸ್ ನಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿ.ಕೆ.ಡಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಶಬ್ಬೀರ್ ಸಿದ್ದಕಟ್ಟೆ ಮಾತನಾಡಿ ಫಾರೂಕ್ ಚಂದ್ರನಗರ ಉಡುಪಿ ಜಿಲ್ಲೆಯ ಹತ್ತಾರು ಗ್ರಾಮದಲ್ಲಿ ಉತ್ತಮ ಸಮಾಜ ಸೇವೆ ಸಲ್ಲಿಸಿದ್ದಾರೆ ಅದಕ್ಕಾಗಿ ಅವರಿಗೆ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಆ ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಕೂಡ ಅವರ ಪಾಲಿಗೆ ಬಂದಿರುತ್ತದೆ. ಇನ್ನು ಮುಂದೆಯೂ ದೇವರು ಅವರಿಗೆ ಇನ್ನಷ್ಟು ಶಕ್ತಿ ಕೊಟ್ಟು ಬಡವರ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೂಡುಬಿದ್ರೆ ಅಳ್ವಾಸ್ ಪಿ.ಯು ಕಾಲೇಜು ಪ್ರಾಂಶುಪಾಲರಾದ ಮೊಹಮ್ಮದ್ ಸದಕತ್, ಮಾಜಿ ವಿಲೇಜ್ ಅಕೌಂಟೆಂಟ್ ಸುಲೈಮಾನ್ ಬಜಗೋಳಿ, ಉದ್ಯಮಿ ಶಬ್ಬೀರ್ ಅಲ್ತಾಫ್, ಮಾಜಿ ವಿ.ಎಸ್.ಎಸ್.ಎನ್ ಬ್ಯಾಂಕ್ ಮೆನೇಜರ್ ಮೊಹಮ್ಮದ್ ವೇಣೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಡ್ವೆ-ನಂದಿಕೂರು ಕಂಬಳ - ಕಂಬಳ‌ ನೋಡಬೇಕೆನ್ನುವ ಹಂಬಲವಿತ್ತು, ನೋಡಿ ಧನ್ಯನಾದೆ : ಪ್ರಮೋದ್ ಮುತಾಲಿಕ್

Thumbnail
Posted On: 15 Jan 2023, 11:44 PM

ಪಡುಬಿದ್ರಿ : ಕಂಬಳದ ಬಗ್ಗೆ ಆಸಕ್ತಿ ಇತ್ತು. ನೋಡಬೇಕೆನ್ನುವ ಹಂಬಲವೂ ಇತ್ತು. ಅದು ಇಂದು ಅಡ್ವೆ- ನಂದಿಕೂರು ಕಂಬಳದಲ್ಲಿ ಈಡೇರಿದೆ. ಮೊದಲನೆಯ ಬಾರಿ ಕಂಬಳ ನೋಡಿ ಧನ್ಯನಾದೆ. ಜಾತಿ,ಮತ, ಶ್ರೀಮಂತ, ಬಡವನೆಂಬ ಬೇಧವಿಲ್ಲದೆ, ಎಲ್ಲರ ಕ್ರೀಡೆ ಎನ್ನಬಹುದು. ರೈತವರ್ಗಕ್ಕೆ ಪ್ರೋತ್ಸಾಹ, ಆನಂದ ಕೊಡುವ ಕ್ರೀಡೆ. ಗ್ರಾಮೀಣ ಭಾಗದ ಕಂಬಳವು ದೇಶದಲ್ಲಿ ಆಕರ್ಷಕವಾದಂತಹ ಕ್ರೀಡೆ. ತುಳು ಭಾಷೆ ಗ್ರಾಮೀಣ ಭಾಷೆ, ಶ್ರೇಷ್ಠ ಭಾಷೆ, ಪುರಾತನ ಭಾಷೆ ಸರಕಾರ ಮಾನ್ಯತೆ ನೀಡಬೇಕೆಂದು ಸರಕಾರಕ್ಕೆ ಆಗ್ರಹಿಸುತ್ತೇನೆ. ಈ ಭಾಗದಲ್ಲಿ ಧಾರ್ಮಿಕತೆಗೆ ಒತ್ತು ನೀಡುತ್ತಾ ಭಜನಾ ಸಂಸ್ಕೃತಿಗೂ ಕೂಡ ಮಹತ್ವ ನೀಡಲಾಗುತ್ತಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದರು. ಅವರು ಆದಿತ್ಯವಾರ ಪಡುಬಿದ್ರಿ ಸಮೀಪದ ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ 30ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿರಂತರ 30 ವರ್ಷಗಳಿಂದ ಕಂಬಳ ಆಯೋಜಿಸಿದ ಸಂಘಟಕರಿಗೆ ಮತ್ತು ಭಾಗವಹಿಸಿದ ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು. ಈ ಸಂದರ್ಭ ಗಣ್ಯರು, ಕಂಬಳಾಭಿಮಾನಿಗಳು ಉಪಸ್ಥಿತರಿದ್ದರು.

ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮದ ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Thumbnail
Posted On: 15 Jan 2023, 10:40 PM

ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗ ಇದರ ಸಭೆಯಲ್ಲಿ ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ನಡೆಯುವ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಬಗ್ಗೆ ಮಾಹಿತಿ ಮತ್ತು ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮದ ದಶಮಾನೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ನವೀನ ಆಚಾರ್ಯ ಪಡುಬಿದ್ರಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ನಾವು ಪ್ರತಿದಿನ ಶ್ರದ್ದಾ ಭಕ್ತಿಯಿಂದ ಕುಲ ದೇವರನ್ನು ನೆನೆದು ಪ್ರಾರ್ಥಿಸಿದರೆ ನಿಮ್ಮ ಕೆಲಸ ಕಾರ್ಯ ಸುಗಮ ರೀತಿಯಲ್ಲಿ ನಡೆಯುತ್ತದೆ ದೇವರಿಗೆ ನಾವು ಶರಣಾದರೆ ದೇವರು ನಮಗೆ ಶರಣಾಗುತ್ತಾನೆ ಎಂದರು. ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ವಿಶ್ವ ಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷರಾದ ಸುಧಾಕರ ಆಚಾರ್ಯ ಬಿಳಿಯಾರು, ಬಂಟಕಲ್ಲು ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರಳಿಧರ ಆಚಾರ್ಯ, ಸ್ಥಳೀಯ ಮೊಕ್ತೇಸರರು, ಯುವ ಸಂಗಮದ ಗೌರವಾಧ್ಯಕ್ಷ ಸುರೇಶ್ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರಾಚಾರ್ಯ, ಶೋಭಾ ಶಂಕರಚಾರ್ಯ ಉಪಸ್ಥಿತರಿದ್ದರು. ಅಧ್ಯಕ್ಷ ಉಮೇಶ್ ಆಚಾರ್ಯ ಸ್ವಾಗತಿಸಿ, ದಶಮಾನೋತ್ಸವದ ಸಂಚಾಲಕ ಪ್ರಶಾಂತ್ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಮಾಧವಾಚಾರ್ಯ ಕಾರ್ಯಕ್ರಮ ನಿರೂಪಿಸಿದರು

ಮುದರಂಗಡಿ : ಸಿ.ಎ. ಪರೀಕ್ಷೆಯಲ್ಲಿ ದೀಕ್ಷಾ ಶೆಣೈ ತೇರ್ಗಡೆ

Thumbnail
Posted On: 15 Jan 2023, 03:49 PM

ಮುದರಂಗಡಿ : ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ನಡೆಸಿದ ಪ್ರತಿಷ್ಠಿತ ಸಿ.ಎ. ಪರೀಕ್ಷೆಯಲ್ಲಿ ಕಾಪು ತಾಲೂಕಿನ ಮುದರಂಗಡಿಯ ದೀಕ್ಷಾ ಶೆಣೈ ತೇರ್ಗಡೆಯಾಗಿರುತ್ತಾರೆ. ಇವರು ದೀಪಾ ಶೆಣೈ ಮತ್ತು ದಿವಾಕರ್ ಶೆಣೈ ಮುದರಂಗಡಿ ಇವರ ಪುತ್ರಿ.

ಇಂದು ಅಡ್ವೆ-ನಂದಿಕೂರು ಕಂಬಳ

Thumbnail
Posted On: 15 Jan 2023, 12:03 PM

ಪಡುಬಿದ್ರಿ : ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ 30ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳೋತ್ಸವ ಜನವರಿ 15, ಆದಿತ್ಯವಾರ ಅಡ್ವೆ ನಂದಿಕೂರಿನಲ್ಲಿ ನಡೆಯಲಿದೆ. ಕನೆ ಹಲಗೆ, ಅಡ್ಡಹಲಗೆ, ನೇಗಿಲು ಕಿರಿಯ ಮತ್ತು ಹಿರಿಯ, ಹಗ್ಗ ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಹಗ್ಗ ಹಿರಿಯ ವಿಭಾಗದ ವಿಜೇತ ಕೋಣಗಳನ್ನು ಓಡಿಸಿದ ಓಟಗಾರನಿಗೆ ದಿ. ನಡುಮುಗೇರಗುತ್ತು ಕರುಣಾಕರ ಶೆಟ್ಟಿ ಸ್ಮರಣಾರ್ಥ ಒಂದು ಪವನ್ ವಿಶೇಷ ಬಹುಮಾನ ನೀಡಲಾಗುತ್ತದೆ.

ಕಾಪು : ಸೈಂಟ್ ಜಾನ್ಸ್ ಶಂಕರಪುರ ಶಾಲೆಯಲ್ಲಿ ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಮಾಹಿತಿ ಕಾರ್ಯಾಗಾರ

Thumbnail
Posted On: 15 Jan 2023, 11:52 AM

ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ಇವರ ವತಿಯಿಂದ ವಿವೇಕಾನಂದರ ಜನ್ಮದಿನದ ಅಂಗವಾಗಿ ಸೈಂಟ್ ಜಾನ್ಸ್ ಶಂಕರಪುರ ಇಲ್ಲಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ಮಾದಕ ದ್ರವ್ಯ, ಡ್ರಗ್ಸ್ ಬಗ್ಗೆ ಮಾಹಿತಿಯನ್ನು ಜೆಸಿಐ ಇಂಡಿಯಾ ತರಬೇತುದಾರರು ಆದ ಪಿಪಿಪಿ ಜೆಸಿ ರಾಕೇಶ್ ಕುಂಜೂರು ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಂಕರಪುರದ ಅಧ್ಯಕ್ಷರಾದ ಜೆಸಿ ಮಾಲಿನಿ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯರಾದ ಅಶ್ವಿನ್ ರೋಡ್ರಿಗಸ್, ವಿದ್ಯಾರ್ಥಿ ನಾಯಕಿ ಮರೀನಾ ಕ್ರಾಸ್ಟ, ಜೆಸಿ ಶಂಕರಪುರದ ಪೂರ್ವ ಅಧ್ಯಕ್ಷೆ ಸೀಮಾಮಾರ್ಗರೇಟ್ ಉಪಸ್ಥಿತರಿದ್ದರು. ಅಧ್ಯಕ್ಷರು ಸ್ವಾಗತಿಸಿದರು. ಸಿಲ್ವಿಯಾ ಕಾಸ್ಟಲಿನೋ ಪ್ರಾರ್ಥಿಸಿದರು. ಜೆಸಿ ಸಂತೋಷ್ ಕುಮಾರ್ ವಂದಿಸಿದರು.

ಓಮನ್ ಬಿಲ್ಲವಾಸ್ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ

Thumbnail
Posted On: 12 Jan 2023, 09:59 PM

ಓಮನ್ ಬಿಲ್ಲವಾಸ್ ಇದರ 2023-24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಜನವರಿ 6ರಂದು ಮಸ್ಕತಿನ ಅಜೈಬ ಗಾರ್ಡನ್ ಸಭಾಂಗಣದಲ್ಲಿ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮ ಜರಗಿತು. ನೂತನ ಸಾಲಿನ ಅಧ್ಯಕ್ಷರಾಗಿ ಸುಜಿತ್ ಎಸ್ ಅಂಚನ್ ಪಾಂಗಾಳ ಮತ್ತು ವಿವಿಧ ಪದಾಧಿಕಾರಿಗಳು ಆಯ್ಕೆಯಾಗಿದ್ದು, ಬ್ರಹ್ಮಶ್ರೀ ನಾರಾಯಣ ಗುರುದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹಿರಿಯರಾದ ರಾಮಕೃಷ್ಣ ಸುಜೀರ್ ಪ್ರಮಾಣ ವಚನ ಬೋಧಿಸಿ, ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಸದಸ್ಯರಾದ ಡಾ. ಅಂಚನ್ ಸಿ ಕೆ, ಆಯ್ಕೆ ಸಮಿತಿಯ ಕೃಷ್ಣಪ್ರಸಾದ್ ಮತ್ತು ಬಾಲಕೃಷ್ಣ ಆರ್ ಕೋಟ್ಯಾನ್ ಕಾಪು ಹಾಗೂ ಹಾಗೂ ವಿವಿಧ ಬಿಲ್ಲವ ಸಮಾಜದ ಸದಸ್ಯರು ಉಪಸ್ಥಿತರಿದ್ದರು.