Updated News From Kaup
ಫೆಬ್ರವರಿ 18 : ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ
Posted On: 17 Feb 2023, 09:30 PM
ಕಾಪು : ತಾಲೂಕಿನ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ದೇವಳದಲ್ಲಿ ಫೆಬ್ರವರಿ 18ರ ಸಂಜೆ ಗಂಟೆ 4 ರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ ಗಂಟೆ 4 ರಿಂದ ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ, ಸಂಜೆ ಗಂಟೆ 5 ರಿಂದ ಶಿರ್ವ ಶ್ರೀ ಮಹಾಲಾಸ ನಾರಾಯಣಿ ಭಜನಾ ಮಂಡಳಿ ಸಂಜೆ ಗಂಟೆ 6 ರಿಂದ ಚಂದ್ರನಗರ ಶ್ರೀ ರಾಮ ಭಜನಾ ಮಂಡಳಿ, ರಾತ್ರಿ ಗಂಟೆ 7 ರಿಂದ ಕುತ್ಯಾರು ಗ್ರಾಮಸ್ಥರ ಭಜನಾ ಮಂಡಳಿ, ರಾತ್ರಿ ಗಂಟೆ 8 ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ನಂತರ ಸಣ್ಣ ರಂಗಪೂಜೆ ,ಫಲಾಹಾರ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಳತ್ತೂರು ಪ್ರಕಟಣೆಯಲ್ಲಿ ತಿಳಿಸಿರುವರು.
ಮಾರ್ಚ್ 11 : ಮಟ್ಟಾರಿನಲ್ಲಿ ಹಿಂದೂ ಹೃದಯ ಸಂಗಮ ; ಕುಮಾರಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ
Posted On: 17 Feb 2023, 09:08 PM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ಮಾರ್ಚ್ 11 ರಂದು ಹಿಂದೂ ಹೃದಯ ಸಂಗಮ ಕಾರ್ಯಕ್ರಮ ಶಿರ್ವ ಗ್ರಾಮದ ಮಟ್ಟಾರ್ ನಲ್ಲಿ ಜರಗಲಿದೆ. ಅಂದು ಸಂಜೆ 3 ಗಂಟೆಗೆ ದಶಮ ವರ್ಷದ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ನಡೆಯಲಿದೆ. ಸಂಜೆ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ಬಾಲವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಒಡಿಯೂರು ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಅವರು ಆಶೀರ್ವಚನ ನೀಡಲಿದ್ದು ಅನೇಕ ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಲಿದೆ. ರಾತ್ರಿ 8 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಅನ್ನ ಸಂತರ್ಪಣೆ ಮತ್ತು ಶ್ರೀಕೃಷ್ಣ ಲೀಲೆ-ಕಂಸವಧೆ ಎಂಬ ಕಾಲಮಿತಿಯ ಯಕ್ಷಗಾನ ನಡೆಯಲಿದೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ಉಸ್ತುವಾರಿ ಜೀನಲ್ ಗಾಲರಿಗೆ ಸನ್ಮಾನ
Posted On: 15 Feb 2023, 09:50 PM
ಉಡುಪಿ : ಎ.ಐ.ಸಿ.ಸಿ ಯಿಂದ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಜೀನಲ್ ಗಾಲರಿಗೆ ಕೆ.ಪಿ.ಸಿ.ಸಿ ಕಚೇರಿ ಬೆಂಗಳೂರಿನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿಗಳಾದ ಫಾರೂಕ್ ಚಂದ್ರನಗರ, ಹಸನ್ ಮಣಿಪುರ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷರಾದ ಇಸ್ಮಾಯಿಲ್ ಆತ್ರಾಡಿ ಉಪಸ್ಥಿತರಿದ್ದರು.
ಉಡುಪಿ : ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಯಕ್ಷಪ್ರಭಾ ಪತ್ರಿಕೆಗೆ ಗೌರವ ಸಮರ್ಪಣೆ
Posted On: 15 Feb 2023, 09:38 PM
ಉಡುಪಿ : ಜಿಲ್ಲೆಯಲ್ಲಿ ನೆರವೇರಿದ 'ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ - ೨೦೨೩' ಈ ಸದವಸರದಲ್ಲಿ ಶ್ರೀಕ್ಷೇತ್ರ ಕಟೀಲಿನಿಂದ ಪ್ರಕಟವಾಗುವ "ಯಕ್ಷಪ್ರಭಾ ಪತ್ರಿಕೆ"ಯನ್ನು ಗೌರವಿಸಲಾಯಿತು. ಪತ್ರಿಕೆಯ ಗೌರವ ಸಂಪಾದಕ ವಿದ್ವಾನ್ ಹರಿನಾರಾಯಣದಾಸ ಅಸ್ರಣ್ಣ ಹಾಗೂ ಸಂಪಾದಕ ಕೆ.ಎಲ್.ಕುಂಡಂತಾಯ ಅವರು ಗೌರವವನ್ನು ಸ್ವೀಕರಿಸಿದರು. ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಡಾ| ಎಂ. ಪ್ರಭಾಕರ ಜೋಶಿ, ಶಾಸಕ ಕೆ.ರಘುಪತಿ ಭಟ್, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್, ಸಮ್ಮೇಳನ ಕಾರ್ಯಾಧ್ಯಕ್ಷ ಡಾ| ಜಿ.ಎಲ್. ಹೆಗಡೆ, ಹಿರಿಯ ಕಲಾವಿದರಾದ ಡಾ| ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟರಮಣ ಭಟ್ ಉಪಸ್ಥಿತರಿದ್ದರು.
ಕಾಪು : ಹೊಸ ಮಾರಿಗುಡಿಯಲ್ಲಿ ಜೀರ್ಣೋದ್ಧಾರದ ಕುರಿತು ಪೇಟೆಯ ವ್ಯಾಪಾರಸ್ಥರೊಂದಿಗೆ ಸಮಾಲೋಚನಾ ಸಭೆ
Posted On: 15 Feb 2023, 09:32 PM
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನದ ನವದುರ್ಗಾ ಮಂಟಪದಲ್ಲಿ ಆದಿತ್ಯವಾರ ಮಧ್ಯಾಹ್ನ ಸಮಗ್ರ ಜೀರ್ಣೋದ್ಧಾರದ ಕುರಿತು ಕಾಪು ಪೇಟೆಯ ವ್ಯಾಪಾರಸ್ಥರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಪ್ರಾಸ್ತವಿಕವಾಗಿ ಮಾತನಾಡಿ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟವಾಗಿ ನಿರ್ಮಾಣವಾಗುತ್ತಿರುವ ದೇಗುಲ ಇದಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ, ಇದೊಂದು ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಮಿಂಚಲಿದೆ ಇದರಿಂದ ಕಾಪು ಪೇಟೆಯ ವ್ಯಾಪಾರಸ್ಥರ ವ್ಯಾಪಾರದಲ್ಲಿಯೂ ಅಭಿವೃದ್ಧಿಯಾಗಲಿದೆ ಎಂದು ಹೇಳುತ್ತಾ ದೇಗುಲದ ಜೀರ್ಣೋದ್ಧಾರದ ಸಂಪೂರ್ಣ ಮಾಹಿತಿಯನ್ನು ನೀಡಿದರು. ವ್ಯಾಪಾರಸ್ಥರಾದ ನೀವೆಲ್ಲರೂ ಶಿಲಾಸೇವೆ ನೀಡುವ, ನೀಡಿಸುವ ಮೂಲಕ ಕಾರ್ಯೋನ್ಮುಖರಾಗಿ ನಿಮ್ಮನ್ನು ನೀವು ಸಂಪೂರ್ಣವಾಗಿ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು. ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ ಪ್ರಾರ್ಥಿಸಿದರು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಗಂಗಾಧರ ಸುವರ್ಣ ಮತ್ತು ಮಾಧವ ಆರ್. ಪಾಲನ್ ಜೀರ್ಣೋದ್ಧಾರದ ಬಗ್ಗೆ ಮಾತನಾಡಿದರು. ಪೇಟೆಯ ವ್ಯಾಪಾರಸ್ಥರಿಂದ ಅನಿಸಿಕೆಯನ್ನು ಸಂಗ್ರಹಿಸಲಾಗಿ ಗ್ರಾಹಕರಿಗೆ ಶಿಲಾಸೇವೆಯ ಬಗ್ಗೆ ತಿಳಿಸಿ ದೇವಳದ ಸಮಗ್ರ ಜೀರ್ಣೋದ್ಧಾರಕ್ಕೆ ಕೈ ಜೋಡಿಸುತ್ತೇವೆ ಎಂದರು. ನಂತರ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ವ್ಯಾಪಾರಸ್ಥರು ಹೊಸ ಮಾರಿಗುಡಿಯ ಜಿರ್ಣೋದ್ಧಾರದಿಂದ ಕಾಪು ಪೇಟೆಯು ಅಭಿವೃದ್ಧಿಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಚೇರಿ ನಿರ್ವಹಣಾ ಸಮಿತಿಯ ಮುಖ್ಯ ಸಂಚಾಲಕರಾದ ಸುನಿಲ್ ಎಸ್. ಪೂಜಾರಿ, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ್ ಆಚಾರ್ಯ, ಹರೀಶ್ ನಾಯಕ್, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಪ್ರಭಾತ್ ಶೆಟ್ಟಿ ಮೂಳೂರು ಮತ್ತು ದೇವಳದ ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು. ಗೌರವ ಸಲಹೆಗಾರರಾದ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಯಕ್ಷರಂಗದ ಭರವಸೆಯ ಭಾಗವತ ರೋಶನ್ ಕೋಟ್ಯಾನ್
Posted On: 14 Feb 2023, 12:31 AM
ಶತಮಾನಗಳ ಇತಿಹಾಸವಿರುವ ಯಕ್ಷಗಾನವು ಸದಾ ಪಂಡಿತ ಪಾಮರರ ಚಿಂತನ-ಮಂಥನದ ವಸ್ತುವಾಗಿರುದು ಯಕ್ಷಗಾನ ಕಲೆಯ ಜೀವಂತಿಕೆಯ ಲಕ್ಷಣವಾಗಿದೆ. ಇದರ ವರ್ಣರಂಜಿತ ಇತಿಹಾಸದಲ್ಲಿ ತೆಂಕು-ಬಡಗಿನ ಅನೇಕ ಕಲಾವಿದರು ಅವಿಸ್ಮರಣೀಯರು.ಯಕ್ಷರಂಗದಲ್ಲಿ ಮಿಂಚಿ ಕಲಾ ಪ್ರೇಮಿಗಳ ಮನಗೆದ್ದ ತನ್ನದೇ ಆದ ಛಾಪನ್ನು ಒತ್ತಿ ಪ್ರೇಕ್ಷಕರ ಮನ ಗೆಲ್ಲಲು ಅಂಗೈ ಅಗಲದ ರಂಗದಲ್ಲಿ ಕ್ಷಣಾರ್ಧದಲ್ಲಿ ಮೂರು ಲೋಕಗಳನ್ನು ಸಾಕ್ಷಾತ್ಕರಿಸಿ ಪುರಾಣ ಕಥೆಗಳಿಗೆ ಜೀವಂತಿಕೆಯನ್ನು ನೀಡಬಲ್ಲ ತೆಂಕು-ಬಡಗಿನ ಪ್ರಬುದ್ಧ ಕಲಾವಿದರನೇಕರು ಇಂದು ಕಣ್ಮರೆಯಾದರೂ ಅವರೆಲ್ಲರ ಆದರ್ಶನೀಯವಾದ ಮಾರ್ಗದರ್ಶನದಲ್ಲಿ ಯಕ್ಷರಂಗದತ್ತ ಪಾದ ಬೆಳೆಸುವ ಕಲಾವಿದರಿಂದ ಯಕ್ಷಗಾನವನ್ನು ಉಳಿಸಬೇಕು, ಬೆಳೆಸಬೇಕು ಮಾತ್ರವಲ್ಲದೆ ರಂಗಕರ್ಮಿಗಳ ಬದುಕನ್ನು ರೂಪಿಸಲೆಂದು ಉದಯಿಸಿರುವ ಸಂಘ ಸಂಸ್ಥೆಗಳು ಹಲವಾರು.ಹಾಗಾಗಿ ಸರ್ವಾಂಗ ಸುಂದರವಾದ ಯಕ್ಷಗಾನವು ನಮ್ಮ ಜಿಲ್ಲೆಯ ಜನ ಜೀವನದಲ್ಲಿ ಬೆರೆತಂತೆ ಮತ್ಯಾವ ಕಲಾ - ಪ್ರಕಾರವೂ ಬೆರೆತಿಲ್ಲವೆನ್ನಬಹುದು. ಜಾನಪದ ಕಲಾಪ್ರಕಾರವು ಕೆಲವು ನಿರ್ದಿಷ್ಟ ಜಾತಿ,ಪಂಗಡಗಳಿಗೆ ಮಿಸಲಾಗಿದ್ದರೆ ಯಕ್ಷಗಾನಕ್ಕೆ ಆ ಬಂಧನವಿಲ್ಲ.ಈ ರಂಗದಲ್ಲಿ ಎಲ್ಲಾ ಸಮಾಜದ ಜನರು ವಿವಿಧ ಸ್ತರಗಳಲ್ಲಿ ಪಾರಂಗತರಾಗಿರುವುದನ್ನು ನಾವು ಕಾಣಬಹುದು. ಜನಾಕರ್ಷಣಿಯಾವಾದ ಈ ಕಲಾ ಪ್ರಪಂಚಕ್ಕೆ ಬೆಡಗಿಗೆ ಮನಸೋತು ತಾನೂ ಒಬ್ಬ ಅತ್ಯುತ್ತಮ ಕಲಾವಿದನಾಗಬೇಕೇಂಬ ಹಂಬಲ ಜಾಗ್ರತವಾದಾರೂ ಎಲ್ಲರಿಗೂ ಅವರ ಬಯಕೆ ಈಡೆರುವ ಅವಕಾಶ ಒದಗುವುದಿಲ್ಲ .ಪರಿಸರ ಪರಿಸ್ಥಿತಿ ಸಂಧರ್ಭದಲ್ಲಿ ಅನುಕೂಲವಾಗಿ ಒದಗಿ ಬಂದರೆ ಮಾತ್ರ ಬಾಳ ಪ್ರತಿಭೆಗಳಲ್ಲಿ ಸುಪ್ತವಾಗಿರುವ ಕಲಾ ಚೇತನಗಳಿಗೆ ಆಕಾರವು ಪ್ರಾಪ್ತಿಯಾಗುತ್ತದೆಯೆಂಬುದಕ್ಕೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರು ತುರ್ಕಿ ತೋಟದ ಜಯಂತಿ ಶಿವರಾಮ ಕೋಟ್ಯಾನ್ ರವರ ಪುತ್ರ ರೋಶನ್ ಕೋಟ್ಯಾನ್ ರವರೆ ಉದಾಹರಣೆಯಾಗಿದ್ದಾರೆ. "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬತೆ ಮಹಾನಗರ ಮುಂಬಯಿಯ ಘಾಟ್ಕೋಪಾರ್ ಪಶ್ಚಿಮ ಆಂಗ್ಲ ಮಾಧ್ಯಮದ ನಾರ್ತ್ ಬಾಂಬೆ ಶಾಲೆಯ ಆರನೇ ತರಗತಿ ಕಲಿಯುತ್ತಿರುವಾಗಲೇ ಶಾಲೆಯ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಂದಲೇ ಪ್ರಶಂಸಿತನಾಗಿ ಭವಿಷ್ಯತ್ತಿನಲ್ಲಿ ತಾನೋರ್ವ ಶ್ರೇಷ್ಠ ಕಲಾವಿದನಾಗ ಬಲ್ಲೇ ಎಂಬ ಭರವಸೆಯನ್ನು ಮೂಡಿಸಿರುವ ಆ ಪುಟ್ಟ ಬಾಲಕನೇ ಇಂದು ಮುಂಬಯಿ ಹಾಗೂ ವಿದೇಶದಲ್ಲಿ ಯಕ್ಷ ಕಲಾಭಿಮಾನಿಗಳು ಕಂಡ "ಉದಯೋನ್ಮುಖ ಭಾಗವತ" ಶಾಲೆಯ ಬಿಡುವಿನ ಸಮಯದಲ್ಲಿ ಇವರ ಕಲಾಭಿರುಚಿಯು ಕೆರಳಿ ಅದು ಪ್ರತಿಭೆಗೆ ಬರಲು ಪ್ರೋತ್ಸಾಹಿಸಿದವರೆಂದರೆ ಇವರ ಮಾತ- ಪಿತರು ,ಮಾತ್ರವಲ್ಲದೆ ಮನೆ ಸಮೀಪದ ಸಂಘಾನಿ ಶನಿ ಮಂದಿರದ ಭಕ್ತ ವ್ರಂದ. ಇವರೆಲ್ಲರ ಸಂಪೂರ್ಣ ಸಹಕಾರದಿಂದ ಮಂದಿರದ ವಠಾರದಲ್ಲಿ ಜರಗುತ್ತಿದ್ದ ಪ್ರತಿಯೊಂದು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತ ವ್ರಂದದ ಪ್ರಶಂಸೆಗೆ ಪಾತ್ರರಾದ ಅತ್ಯುತ್ತಮ ಭಜನಾ ಗಾಯಕರಾದ ಇವರ ಮಾವನಾದ ನಾಗೇಶ್ ಸುವರ್ಣರಿಂದ ಭಜನಾ ತರಬೇತಿಯನ್ನು ಅಲ್ಲದೆ ಶನಿಗ್ರಂಥ ಪಾರಾಯಣದ ತರಬೇತಿಯನ್ನು ಪಡೆದು ಎಲ್ಲರಿಂದಲೂ ಸೈ ಎನಿಸಿಕೊಂಡವರು. ಯಕ್ಷರಂಗದ ಸವ್ಯಸಾಚಿಯೆಂದು ಖ್ಯಾತರಾದ ಕಟೀಲು ಮೇಳದ ಸುಪ್ರಸಿದ್ಧ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ಮೃದಂಗನಾದವನ್ನು ಯಕ್ಷರಂಗದ ಪರಂಪರೆಯ ಯಕ್ಷಕಲಾ ಗುರುಗಳಾದ ಮೋಹನ ಬೈಪಡಿತ್ತಾಯರವರಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿ ಗುರು ಪ್ರೇರಣೆಯಂತೆ ಗುರುನಾರಾಯಣ ಮೇಳದವರ "ಶ್ರೀ ದೇವಿ ಮಹಾತ್ಮೆ" ಪ್ರಸಂಗದಲ್ಲಿ ಪ್ರಥಮ ಭಾಗವತಿಕೆಯನ್ನು ಮಾಡಿ ಪ್ರೇಕ್ಷಕರ ಮನಗೆದ್ದು ಗುರುಪ್ರಶಂಸೆಯನ್ನು ಪಡೆದ ಕಿರ್ತಿಗೆ ಭಾಜನರಿವರು.ಗುರುನಾರಯಣ ಮೇಳದ ಪ್ರಸಿದ್ಧ ಭಾಗವತ ಜಯಪ್ರಕಾಶ್ ನಿಡ್ವಣ್ಣಾಯರವರಿಂದ ಭಾಗವತಿಕೆಯ ಹೆಚ್ಚಿನ ತರಬೇತಿಯನ್ನು ಪಡೆದಿರುವ ಇವರು ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಿ ಅಲ್ಲಿ ಶಿಪ್ಪಿಂಗ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತನ್ನ ಕಲಾ ಪ್ರತಿಭೆಗೆ ಕಾರಣರಾಗಿರುವ ಹಿರಿಯ-ಕಿರಿಯರನೇಕರನ್ನು ಸದಾ ಸ್ಮರಿಸುತ್ತಿರುವ ಪ್ರಸ್ತುತ ವಿದೇಶದಲ್ಲಿರೂ ಆಗಾಗ್ಗೆ ತನ್ನ ತಾಯ್ನಾಡಿಗೆ ಮರಳಿದಾಗ ನಗರದಲ್ಲಿ ಜರಗುತ್ತಿರುವ ಪ್ರತಿಯೊಂದು ಸಂಘ ಸಂಸ್ಥೆಗಳ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಕಲಾರಂಗದ ಮನದಾಸೆಯನ್ನು ಪೂರೈಸಿಕೊಂಡು ಸಂತಸ ಪಡುವ ಸಂತೃಪ್ತ ಕಲಾವಿದರು. ಇವರ ಕಲಾ ಪ್ರೌಡಿಮೆಗೆ ತಾನಾಗಿ ಒಲಿದು ಬಂದ ಸನ್ಮಾನಗಳು, ಪ್ರಶಸ್ತಿಗಳು ಅನೇಕ. ಅವುಗಳಲ್ಲಿ ಪ್ರಧಾನವಾದವು ಬೆಹರಿನ್ ಕರ್ನಾಟಕ ಸಂಘದ ವತಿಯಿಂದ ಹಾಗೂ "ಹವ್ಯಾಸಿ ಕಲಾವಿದರು" ಸೌದಿ ಅರೇಬಿಯಾ ಮತ್ತು "ಕುಡ್ಲ ಅಡ್ವೆಂಚರ್ " ದಮಾಮ್ ಇಲ್ಲಿ ಅಲ್ಲದೆ ಅಮ್ಮ ಕಲಾವಿದರು, ಪಟ್ಲ ಫೌಂಡೇಶನ್ ಟ್ರಸ್ಟ್. ಮುಂತಾದ ಕಡೆಗಳಲ್ಲಿ ಒದಗಿರುವ ಗೌರವ ಸನ್ಮಾನಗಳು ಅವಿಸ್ಮರಣೀಯವಾಗಿದೆ ಎನ್ನುತ್ತಾರೆ. ಮುಂಬೈಯ ಯಕ್ಷ ಭ್ರಾಮರಿ ನೃತ್ಯ ನಿಲಯದ ಸನ್ಮಾನವು ಮತ್ತು ಇವರಿಗೆ ಭ್ರಮರಇಂಚರ ಹಾಗೂ 2021 ಮುಂಬಾಯಿ ಯಲ್ಲಿ ನಡೆದ ಜಯ.ಸಿ. ಸುವರ್ಣ ಬಿಲ್ಲವಾರ್ ಐಕೊನ್ ಪ್ರಶಸ್ತಿ ತುಂಬಾ ಖುಷಿ ಕೊಟ್ಟಿದ್ದೆನ್ನುತ್ತಾರೆ. ಶ್ರೀಯುತರು 2013ರಲ್ಲಿ ಶ್ರೀ ಮತಿ ದೀಕ್ಷಾ ಎಂಬವರೊಡನೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿರುತ್ತಾರೆ ಇವರಿಗೆ ವೃತಿ ಎಂಬ ಪುಟ್ಟ ಹೆಣ್ಣು ಮಗಳು ಇದ್ದಾರೆ ಹೀಗೆ ಚಿಕ್ಕದಾದರೂ ಚೊಕ್ಕ ಸಂಸಾರದಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ವಿದೇಶದಲ್ಲಿ ಅದೆಷ್ಟೋ ಯಕ್ಷ ಕಲಾಭಿಮಾನಿಗಳು ಇದ್ದು ಅವರಿಗೆ ಇವರ ಭಾಗವತಿಕೆ ಎಂದರೆ ಅಚ್ಚು ಮೆಚ್ಚು. ಇವರು ವಿದ್ಯಭ್ಯಾಸವನ್ನು ಮುಂಬೈಯಲ್ಲಿ ಪೂರ್ಣಗಳಿಸಿರುದರಿಂದ ಇವರಿಗೆ ಕನ್ನಡ ಅಕ್ಷರ ಓದಲು ಬರೆಯಲು ಬರುವುದಿಲ್ಲ ಆದರೂ ಇವರು ಛಲ ಬಿಡದೆ ಕನ್ನಡದಲ್ಲಿ ಬರೆದ ಭಾಗವತಿಕೆಯನ್ನು ಹಲವರ ಸಹಾಯದಿಂದ ಹಿಂದಿ ಭಾಷೆಯಲ್ಲಿ ಬರೆದು ಭಾಗವತಿಕೆಯನ್ನು ಅಭ್ಯಾಸ ಮಾಡುತ್ತಾರೆ.ಈ ವೃತ್ತಿ ಜೀವನದಲ್ಲಿ ಸಮಯ ಸರಿಯಾಗಿ ಸಿಕ್ಕಿಲ್ಲವೆಂದರೂ ಸುಮಾರೂ ಮೂರು ಗಂಟೆಗಳ ಕಾಲ ತನ್ನ ವಾಹನದಲ್ಲಿ ಸಂಚಾರ ಮಾಡಿ ಯಕ್ಷಗಾನ ಅಭ್ಯಾಸ ಮಾಡಿ ಮತ್ತು ಯುವಕರನ್ನು ಯಕ್ಷರಂಗದತ್ತ ಒಲವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ತನ್ನ ಕಲಾ ಜೀವನದಲ್ಲಿ ಸಂಪೂರ್ಣ ರೀತಿಯಲ್ಲಿ ಸಹಕರಿಸುವ ಕಟೀಲು ಮೇಳದ ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಬೊಂದೆಲ್ ಹಾಗೂ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ದೀಪಕ್ ರಾವ್ ಪೇಜಾವರ ಅವರ ಹಾಗೂ ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಪಟ್ಲ ಇವರ ಹೆಸರನ್ನು ಹೇಳಲು ಮರೆಯುದಿಲ್ಲ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು,ಮೋಹನ ಬೈಪಾಡಿತ್ತಾಯರು,ಜಯಪ್ರಕಾಶ್ ನಿಡ್ವಣ್ಣಾಯರು ಹೀಗೆ ಗುರುತ್ರಯರಿಂದ ಯಕ್ಷ ರಂಗದ ತರಬೇತಿ ಪಡೆದಿರುವ ಇವರು ಭವಿಷ್ಯತ್ತಿನಲ್ಲಿ ಅತ್ಯುತ್ತಮ ಕಲಾವಿದನಾಗಿ ಯಕ್ಷ ಪ್ರಪಂಚದಲ್ಲಿ ವಿಜೃಂಭಿಸಲಿಯೆಂಬುದೇ ನಮ್ಮ ಶುಭ ಹಾರೈಕೆ.
ಕಾಪು : ಬೆಳಪು ವಿಜ್ಞಾನ ಕೇಂದ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ ಹಣ ಮೀಸಲಿಟ್ಟು ಕಾಮಗಾರಿ ಪೂರ್ಣಗೊಳ್ಳಲಿ - ಡಾ|| ದೇವಿ ಪ್ರಸಾದ್ ಶೆಟ್ಟಿ
Posted On: 14 Feb 2023, 12:07 AM
ಕಾಪು : ಕಳೆದ 7 ವರ್ಷಗಳಿಂದ ಕಾಮಗಾರಿ ಕುಂಠಿತಗೊಂಡ ಬೆಳಪುವಿನ ವಿಜ್ಞಾನ ಕೇಂದ್ರ ಹಾಗೂ ಪಿಜಿ ಸೆಂಟರ್ ಗೆ ಈ ಬಾರಿಯ ಬಜೆಟ್ ನಲ್ಲಿ ಕನಿಷ್ಠ 50 ಕೋಟಿ ಹಣ ಇಡಬೇಕೆಂದು ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪುವಿನಲ್ಲಿ ಆಗ್ರಹಿಸಿದ್ದಾರೆ. ಬೆಳಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಜ್ಞಾನ ಕೇಂದ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಲನ್ಯಾಸ ನೆರವೇರಿಸಿ ಮೂವತ್ತಮೂರು ಕೋಟಿ ರೂಪಾಯಿ ಬಿಡುಗಡೆಗೊಳಿಸಿದ್ದರು. 33 ಕೋಟಿ ರೂಪಾಯಿಯಲ್ಲಿ ಕಾಮಗಾರಿ ಪ್ರಾರಂಭಗೊಂಡಿತ್ತು. ಅದರ 12 ಕೋಟಿ ರೂಪಾಯಿಯನ್ನು ಇತರ ಕಾಮಗಾರಿಗೆ ತೆಗೆಯಲಾಗಿದೆ. ಗುತ್ತಿಗೆದಾರರಿಗೆ ಹಣಪಾವತಿಯಾಗದೆ ಕೆಲಸ ಸ್ಥಗಿತಗೊಂಡಿದೆ. ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಆದರೂ ಕಾಮಗಾರಿ ಪೂರ್ಣ ಆಗುವ ಭರವಸೆ ಇದ್ದರೂ, ಕೆಲಸ ಪೂರೈಸುವ ಸಾಧ್ಯತೆ ಕಡಿಮೆ ಇದೆ. ಐದು ವರ್ಷದಲ್ಲಿ ಸರಕಾರ ನಯಾ ಪೈಸೆ ಹಣ ಮಂಜೂರಾತಿ ಮಾಡಿಲ್ಲ. ಈ ಬಾರಿಯ ಬಜೆಟ್ಟಿನಲ್ಲಿ ಹಣ ಮೀಸಲಿಟ್ಟು ಕಾಮಗಾರಿ ಪೂರ್ಣಗೊಳ್ಳಲಿ ಎಂದು ದೇವಿ ಪ್ರಸಾದ್ ಶೆಟ್ಟಿ ಆಗ್ರಹಿಸಿದರು.
ಸಾಧು ಸಂತರನ್ನು ವಿಭಜಿಸದರಿ : ಈಶ ವಿಠಲದಾಸ ಸ್ವಾಮೀಜಿ
Posted On: 13 Feb 2023, 11:58 PM
ಕಟಪಾಡಿ : ನಾವು ಇಂದು ಸಾಧು ಸಂತರುಗಳನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತ ಆಗುವಂತೆ ಮಾಡುತ್ತಿದ್ದೇವೆ. ಸಾಧು ಸಂತರು ಎಲ್ಲ ಜಾತಿ ಧರ್ಮಕ್ಕೆ ಒಳಪಟ್ಟಿರುವುದರಿಂದ ದಯಮಾಡಿ ಅವರನ್ನು ವಿಭಜಿಸದಿರಿ ಎಂದು ಕೇಮಾರು ಸಾಂದಿಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ. ಅವರು ಕಟಪಾಡಿ ಏಣ ಗುಡ್ಡೆ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಗುರ್ಮೆ ಪೌಂಡೇಶನ್ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ರಮೇಶ್ ನಾಯಕ್, ಗಣಪತಿ ನಾಯಕ್, ವೈ ಭರತ್ ಹೆಗಡೆ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಆಚಾರ್ಯ, ಗೀತಾಂಜಲಿ ಸುವರ್ಣ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಬೆಳಪು : ಪಣಿಯೂರಿನಲ್ಲಿ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 13 Feb 2023, 11:53 PM
ಬೆಳಪು : ಗ್ರಾಮದ ಪಣಿಯೂರು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಪಣಿಯಾರು ಶ್ರೀ ಬಬ್ಬು ಸ್ವಾಮಿ ಸನ್ನಿಧಿಯಲ್ಲಿ ಫೆಬ್ರವರಿ 12ರಂದು ಬಿಡುಗಡೆಗೊಳಿಸಲಾಯಿತು. ಫೆಬ್ರವರಿ 21ರಿಂದ ಫೆಬ್ರವರಿ 25ರವರೆಗೆ ಪುನರು ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮತ್ತು ಸಿರಿ ಸಿಂಗಾರದ ನೇಮ ನೆರವೇರಲಿದೆ ಎಂದು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ|| ದೇವಿ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು. ಈ ಸಂದರ್ಭ ಗುತ್ತಿನಾರ್ ಯೋಗೀಶ್ ಶೆಟ್ಟಿ ಪಣಿಯೂರು ಗುತ್ತು, ಗುರಿಕಾರ ಬಿ ಶಂಕರ್, ಜಯಾನಂದ ಶೆಟ್ಟಿ, ಪ್ರಭಾಕರ ಶೆಟ್ಟಿ ಎಲ್ಲೂರು ಗುತ್ತು, ನಡಿಮನೆ ದೇವರಾಜ ರಾವ್, ಕರುಣಾಕರ್ ಶೆಟ್ಟಿ ಪಣಿಯಾರು ಗುತ್ತು, ಸಾಧು ಶೆಟ್ಟಿ, ಸಚಿನ್ ಶೆಟ್ಟಿ, ಸೌಮ್ಯ ಸುರೇಂದ್ರ, ಮಹೇಶ್ ಶೆಟ್ಟಿ, ಶಿವ ಪೂಜಾರಿ, ಸಂಜೀವ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮತ್ತಿತರರು ಉಪಸ್ಥಿತರಿದ್ದರು.
ಮಾರ್ಚ್ 3: ಕಳತ್ತೂರು ಪಿ.ಕೆ ಎಸ್ ಪ್ರೌಢಶಾಲೆಯಲ್ಲಿ ಗುರುವಂದನೆ, ಮನೋರಂಜನಾ ಕಾರ್ಯಕ್ರಮ
Posted On: 13 Feb 2023, 11:04 PM
ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢ ಶಾಲೆ ಕಳತ್ತೂರು ಇಲ್ಲಿ ಮಾರ್ಚ್ 3, ಶುಕ್ರವಾರ ಸಂಜೆ ಗಂಟೆ 5ರಿಂದ ಶಾಲೆಯ ನಿವೃತ್ತ ಶಿಕ್ಷಕರಾದ ಗೋಪಾಲ ಕೃಷ್ಣ ರಾವ್ ಅವರಿಗೆ ಹಳೆ ವಿದ್ಯಾರ್ಥಿಗಳು ಹಾಗೂ ಅವರ ಅಭಿಮಾನಿಗಳ ಮುಂದಾಳತ್ವದಲ್ಲಿ ಗುರುವಂದನಾ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳ ಮನೋರಂಜನ ಕಾರ್ಯಕ್ರಮ, ಕಾಪು ರಂಗತರಂಗ ಕಲಾವಿದರ ತುಳು ಹಾಸ್ಯಮಯ ನಾಟಕ ಬುಡೆದಿ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಗುರ್ಮೆ ಫೌಂಡೇಶನ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಲಿದ್ದು, ಪಡುಬಿದ್ರಿಯ ಸಂಸ್ಕೃತ ಅಧ್ಯಾಪಕ ಡಾ| ರಾಘವೇಂದ್ರ ರಾವ್, ಆರ್. ಎಸ್. ಎಸ್ ಹಿರಿಯ ಪ್ರಚಾರಕ ಶ್ರೀ ದಾ.ಮಾ. ರವೀಂದ್ರ, ವಿದ್ಯಾವರ್ಧಕ ಸಂಘ, (ರಿ) ಕಳತ್ತೂರು ಇದರ ಅಧ್ಯಕ್ಷರಾದ ನಿತ್ಯಾನಂದ ಆರ್ ಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಪೈಯ್ಯಾರು, ಪಿ.ಕೆ.ಎಸ್ ಪ್ರೌಢಶಾಲೆಯ ಸಂಚಾಲಕ ಶಿವರಾಮ್ ಶೆಟ್ಟಿ ಪೈಯ್ಯಾರು, ಪಿ ಕೆ ಎಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಗಂಗಾ ನಾಯ್ಕ್ ಉಪಸ್ಥಿತರಿರುವರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
