Updated News From Kaup

ಫೆಬ್ರವರಿ 10 : ಬನ್ನಂಜೆ ಶ್ರೀ ವರ್ತೆಕಾಳಿ ಕಲ್ಲುಡ ದೈವಸ್ಥಾನದಲ್ಲಿ ಕಾಲಾವಧಿ ಕೋಲ

Thumbnail
Posted On: 02 Feb 2023, 07:57 AM

ಉಡುಪಿ : ಶ್ರೀ ವರ್ತೆಕಾಳಿ ಕಲ್ಲುಡ ದೈವಸ್ಥಾನ ಬನ್ನಂಜೆ, ಉಡುಪಿ ಇಲ್ಲಿ ಫೆಬ್ರವರಿ 10, ಶುಕ್ರವಾರ ರಾತ್ರಿ 9ಕ್ಕೆ ಕಾಲಾವಧಿ ಕೋಲ ಜರಗಲಿದೆ. ಮಧ್ಯಾಹ್ನ ಗಂಟೆ ಗಂಟೆ 12 ರಿಂದ 3ರವರೆಗೆ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ದರ್ಶನ ಮತ್ತು ಹೂವಿನ ಪೂಜೆಯ ಪ್ರಸಾದ ವಿತರಣೆ ರಾತ್ರಿ 9ಕ್ಕೆ ದೈವದ ಕೋಲ ಜರಗಲಿದೆ. ಸರ್ವರು ಆಗಮಿಸಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ವಿಠಲ ಶೆಟ್ಟಿ ಮತ್ತು ಕುಟುಂಬಿಕರು, ಕಲ್ಕುಡ ಮನೆ, ಬನ್ನಂಜೆ, ಉಡುಪಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು : ಟ್ರಾಫಿಕ್ ಪೋಲಿಸ್ ಉಪನಿರೀಕ್ಷಕ‌ ಸತೀಶ್ ರನ್ನು ಸನ್ಮಾನಿಸಿದ ಜೆಸಿಐ ಶಂಕರಪುರ ಜಾಸ್ಮಿನ್

Thumbnail
Posted On: 01 Feb 2023, 11:51 PM

ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ದಕ್ಷ ಹಾಗೂ ಪ್ರಾಮಾಣಿಕ ಟ್ರಾಫಿಕ್ ಪೋಲಿಸ್ ಅಧಿಕಾರಿಯಾಗಿ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಆಗಿ ಆಯ್ಕೆಯಾದ ಉಪ ನಿರೀಕ್ಷಕರಾಗಿರುವ ಸತೀಶ್ ರವರನ್ನು ಅವರ ಮನೆಗೆ ಹೋಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೆಸಿ ಮಾಲಿನಿ ಶೆಟ್ಟಿ ಇನ್ನಂಜೆ, ಜೆಸಿಯ ಗೌರವ ಸದಸ್ಯರಾದ ಲಕ್ಷ್ಮಣ ಪೂಜಾರಿ, ಪೂರ್ವ ವಲಯ ಉಪಾಧ್ಯಕ್ಷರಾದ ಜೆಸಿ ಸಂತೋಷ್ ಕುಮಾರ್, ಪೂರ್ವಧ್ಯಕ್ಷರಾದ ಜೆಸಿ ನವೀನ್ ಅಮೀನ್, ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಜಗದೀಶ್ ಅಮೀನ್ ಉಪಸ್ಥಿತರಿದ್ದರು.

ಫೆಬ್ರವರಿ 3 : ಕಾಪು ಗದ್ದಿಗೆ ಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ : ನೂತನ ಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ

Thumbnail
Posted On: 01 Feb 2023, 11:39 PM

ಕಾಪು : ಇಲ್ಲಿನ ಗದ್ದಿಗೆಬೆಟ್ಟು ಕೈಪುಂಜಾಲು ಉಳಿಯಾರಗೋಳಿಯ ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ (ರಿ.)ದ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಗಳು ಪ್ರಾರಂಭಗೊಂಡಿರುತ್ತದೆ. ಆ ಪ್ರಯುಕ್ತ ನೂತನ ಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ಫೆಬ್ರವರಿ 03, ಶುಕ್ರವಾರ ಬೆಳಿಗ್ಗೆ 8.30ಕ್ಕೆ ನೆರವೇರಲಿರುವುದು. ಈ ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ , ಪದ್ಮಶ್ರೀ ಡಾ| ಬಿ. ಆರ್. ಶೆಟ್ಟಿ ಭಾಗವಹಿಸಲಿರುವರು. ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : ಓಂ ಫ್ರೆಂಡ್ಸ್ ಅದಮಾರು - ಓಂ ಟ್ರೋಫಿ ಕ್ರಿಕೆಟ್ ಪಂದ್ಯಾಟ ; ಒಸಿಯನ್ ಫ್ರೆಂಡ್ಸ್ ಕಟಪಾಡಿ ಪ್ರಥಮ, ವೀರಮಾರುತಿ ಗರಡಿಮಜಲ್ ದ್ವಿತೀಯ

Thumbnail
Posted On: 01 Feb 2023, 08:55 PM

ಪಡುಬಿದ್ರಿ : ಓಂ ಫ್ರೆಂಡ್ಸ್ ಅದಮಾರು ಇವರ ಆಶ್ರಯದಲ್ಲಿ ಜನವರಿ 28 ಮತ್ತು 29 ರಂದು ನಡೆದ ಓಂ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 30 ತಂಡಗಳು ಭಾಗವಹಿಸಿ ಮೊದಲ ಬಹುಮಾನ 25,000 ಒಸಿಯನ್ ಫ್ರೆಂಡ್ಸ್ ಕಟಪಾಡಿ ಹಾಗೂ ಎರಡನೇ ಬಹುಮಾನ 15,000 ವೀರಮಾರುತಿ ಗರಡಿಮಜಲ್ ಈ ಎರಡು ತಂಡಗಳು ಪಡೆದುಕೊಂಡಿದೆ. ಈ ಪಂದ್ಯಕೂಟಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಪಂಚಾಯತ್ ಅಧ್ಯಕ್ಷ ಶಶಿಧರ್ ಶೆಟ್ಟಿ ನಡಿಗುತ್ತು, ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ, ಅದಮಾರು ಅಂಬೇಡ್ಕರ್ ಸಮಿತಿಯ ಅಧ್ಯಕ್ಷ ಜಯರಾಮ್ ಮಾಸ್ಟರ್, ಮಾಜಿ ಪಂಚಾಯತ್ ಸದಸ್ಯ ರಾಘವೇಂದ್ರ ಉಲ್ಲೂರು, ಉದ್ಯಮಿ ಸತೀಶ್ ಭಟ್ ಕುಂಡತಾಯ ಅದಮಾರು, ಉದ್ಯಮಿ ನವೀನ್ ಶೆಟ್ಟಿ ಕುಂಜೂರು, ಉದ್ಯಮಿ ವಿಜಯ ಶೆಟ್ಟಿ ಮಹಾಬಲಗುತ್ತು ಭಾಗವಹಿಸಿದ್ದರು.

ನಾಟಕದ ಮೂಲಕ ಭಾಷೆಗಳಿಗೆ ಪ್ರಾಧ್ಯಾನತೆ : ರಾಧಾಕೃಷ್ಣ ಶ್ರೀಯಾನ್

Thumbnail
Posted On: 01 Feb 2023, 08:22 PM

ಉಡುಪಿ : ನಿರಂತರ ಉದ್ಯಾವರ ಸಂಘಟನೆಯ ಮೂಲಕ ಈಗ ನಾಟಕಗಳು ಈ ಭಾಗದಲ್ಲಿ ಪ್ರಖ್ಯಾತಿಯನ್ನು ಪಡೆದಿವೆ. ವಿವಿಧ ಭಾಷೆ ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ ವಿವಿಧ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವ ಕೆಲಸವನ್ನು ನಿರಂತರ್ ಸಂಘಟನೆ ಮಾಡುತ್ತಿದೆ ಎಂದು ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ತಿಳಿಸಿದರು. ನಿರಂತರ್ ಉದ್ಯಾವರ ಸಂಘಟನೆ ನೇತೃತ್ವದಲ್ಲಿ ಉದ್ಯಾವರದಲ್ಲಿ ನಡೆಯುತ್ತಿರುವ ಏಳು ದಿನದ ಬಹುಭಾಷಾ ನಾಟಕೋತ್ಸವದಲ್ಲಿ ದ್ವಿತೀಯ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಂಸ್ಕೃತಿಕ ಸಂಸ್ಥೆ ಪರಿಚಯ ಮತ್ತು ಕಲಾರಾಧನ್ ಇದರ ಅಧ್ಯಕ್ಷರಾಗಿರುವ ಅನಿಲ್ ಡೆಸಾ ಶಂಕರಪುರ, ಲಯನ್ಸ್ ಕ್ಲಬ್ ಬಂಟಕಲ್ ಬಿ ಸಿ ರೋಡ್ ಇದರ ಅಧ್ಯಕ್ಷ ಲ. ವಿಲ್ಫ್ರೆಡ್ ಪಿಂಟೊ, ರಂಗ ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ನಾಟಕೋತ್ಸವ ಸಂಚಾಲಕ ರೊನಾಲ್ಡ್ ಡಿಸೋಜಾ, ನಿರಂತರ್ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ತಾ, ಕಾರ್ಯದರ್ಶಿ ಒಲಿವೇರಾ ಮತಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಷನ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ದಿ. ಲುವಿಸ್ ಪಿಂಟೋ ಸ್ಮರಣಾರ್ಥ ಅವರ ಪತ್ನಿ ವೆರೋನಿಕ ಪಿಂಟೊ ಮತ್ತು ಮಕ್ಕಳು ಪಾಂಬೂರು ಇವರು ಪ್ರಾಯೋಜಕತ್ವ ಮಾಡಿದ ಗಣೇಶ್ ರಾವ್ ಎಲ್ಲೂರು ನಿರ್ದೇಶನದ ಶಂಕರಪುರದ ಕಲಾರಾಧನೆ ಸಂಸ್ಥೆಯ ಕೊಂಕಣಿ ನಾಟಕ ಕಾಮಿಲ್ ಕಾಲ್ವಾರ್ ಪ್ರದರ್ಶನಗೊಂಡಿತು. 500ಕ್ಕೂ ಅಧಿಕ ಕಲಾಭಿಮಾನಿಗಳು ನಾಟಕವನ್ನು ವೀಕ್ಷಿಸಿದರು.

ಜೆಸಿಐ ಉಡುಪಿ : ನೂತನ ಪದಾಧಿಕಾರಿಗಳ ಪದ ಪ್ರಧಾನ

Thumbnail
Posted On: 01 Feb 2023, 08:16 PM

ಉಡುಪಿ : ಜೆ ಸಿ ಐ ಉಡುಪಿ ಸಿಟಿ ಇದರ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ಜನವರಿ 31ರಂದು ಉದ್ಯಾವರ ನಿತ್ಯಾನಂದ ಆರ್ಕೆಡ್ ನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಹೋಂ ಡಾಕ್ಟರ್ ಫೌಂಡೇಶನ್ ಇದರ ಮುಖ್ಯಸ್ಥ ಡಾ|| ಶಶಿಕಿರಣ್ ಶೆಟ್ಟಿ ಸಮಾಜ ಸೇವೆ ಮಾಡಬೇಕಾದರೆ ಹಣ ಅಂತಸ್ತು ಬೇಕಾಗಿಲ್ಲ ಮುಖ್ಯವಾಗಿ ಮಾಡಬೇಕೆಂಬ ಮನಸಿದ್ದರೆ ಸಾಕು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂಪತ್ತು ಅದು ಮಾನವನ ವ್ಯಕ್ತಿತ್ವ ಈ ನಿಟ್ಟಿನಲ್ಲಿ ನಾವು ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜದ ಪರಿವರ್ತನೆಗೆ ಕಾರಣರಾಗಬೇಕು ಈ ನಿಟ್ಟಿನಲ್ಲಿ ಹೋಮ್ ಡಾಕ್ಟರ್ ಫೌಂಡೇಶನ್ ಮತ್ತು ಜೆಸಿಐ ಉಡುಪಿ ಸಿಟಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮವಾದ ವಿಚಾರವಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ|| ಶಶಿಕಿರಣ್ ಶೆಟ್ಟಿ ಮತ್ತು ಟೌನ್ ಪೊಲೀಸ್ ಸ್ಟೇಷನ್ ನ ಸಹಾಯಕ ಪೊಲೀಸ್ ಅಧಿಕಾರಿ ಜಯಕರ ಐರೋಡಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ ಜೇಸಿ ಸಂಸ್ಥೆಯ ವಿಶೇಷತೆಯ ಬಗ್ಗೆ ಮಾತನಾಡಿದರು. ಪೂವ೯ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್ ಶುಭ ಹಾರೈಸಿದರು. ವಲಯ ಉಪಾಧ್ಯಕ್ಷೆ ಜಯಶ್ರೀ ಮಿತ್ರ ಕುಮಾರ್ ಪದ ಪ್ರಧಾನ ಸಮಾರಂಭದ ಅಧಿಕಾರಿಯಾಗಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಅಧ್ಯಕ್ಷತೆಯನ್ನು ಡಾ| ವಿಜಯ್ ನೆಗಳೂರು ವಹಿಸಿ ವರದಿ ವಾಚಿಸಿ , ಎಲ್ಲರಿಗೂ ಗೌರವಿಸಿದರು. ವೇದಿಕೆಯಲ್ಲಿ ಕಾಯ೯ದಶಿ೯ ಕಿರಣ್ ಭಟ್, ಮಹಿಳಾ ಜೇಸಿ ಡಾII ಚಿತ್ರಾ ನೆಗಳೂರು, ಉದಯ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ನೂತನ ಅಧ್ಯಕ್ಷೆಯಾಗಿ ನೈನಾ ನಾಯಕ್ ಮತ್ತು ಅವರ ತಂಡದ ಪದ ಪ್ರಧಾನ ನೆರವೇರಿತು.ಈ ಸಂದಭ೯ದಲ್ಲಿ ನೂತನ ಸದಸ್ಯರಿಗೆ ಮತ್ತು ಪದಾಧಿಕಾರಿಗಳಿಗೆ ಪ್ರಮಾಣ ವಚನ ಮಾಡಲಾಯಿತು. ನೂತನ ಕಾಯ೯ದಶಿ೯ ಸಂಧ್ಯಾ ಕುಂದರ್ ವಂದಿಸಿದರು. ಪೂವ೯ ಅಧ್ಯಕ್ಷರುಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

ಉಚ್ಚಿಲ : ಯಶೋಭಿನಂದನ - ಸಹಕಾರ ರತ್ನ ಯಶ್‌ಪಾಲ್ ಸುವರ್ಣರಿಗೆ ಸನ್ಮಾನ ; ಮೊಗವೀರ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು : ಜಿ ಶಂಕರ್

Thumbnail
Posted On: 01 Feb 2023, 05:41 PM

ಉಚ್ಚಿಲ : ಮೀನುಗಾರಿಕಾ ಫೆಡರೇಷನ್ ಮತ್ತು ಸಹಕಾರಿ ಸಂಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿದ ಯಶ್ಪಾಲ್ ಸುವರ್ಣರು ಇನ್ನು ರಾಜಕೀಯವಾಗಿ ಬೆಳೆಯಬೇಕಾಗಿದೆ. ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ದೊರಕಲಿ. ರಾಜಕೀಯ ಪಕ್ಷಗಳು ಮುಂದಿನ ದಿನಗಳಲ್ಲಿ ಮೊಗವೀರ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ನಾಡೋಜ ಜಿ ಶಂಕರ್ ಹೇಳಿದರು. ಅವರು ಸಹಕಾರ ರತ್ನ ಯಶ್‌ಪಾಲ್ ಎ.ಸುವರ್ಣ ಅಭಿನಂದನಾ ಸಮಿತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮಂಗಳೂರು ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯಶ್‌ಪಾಲ್ ಎ. ಸುವರ್ಣ ಅವರಿಗೆ ಫೆ. 1ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಜರಗಿದ ಸಾರ್ವಜನಿಕ ಅಭಿನಂದನಾ ಸಮಾರಂಭ ಯಶೋಭಿನಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯಶ್‌ಪಾಲ್ ಎ. ಸುವರ್ಣರನ್ನು ಸನ್ಮಾನಿಸಲಾಯಿತು. ಉದ್ಯಮಿ ಆನಂದ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಮಹಾಸಂಸ್ಥಾನ ಮಠದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್ ಮೆಂಡನ್, ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಬೆಳಪು ದೇವಿ ಪ್ರಸಾದ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಜೇಸಿಐ - ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಗೌರವ ಪುರಸ್ಕೃತರಾದ ಎಎಸ್ಐ ಗೋಪಾಲ್ ಶೆಟ್ಟಿಗಾರ್

Thumbnail
Posted On: 31 Jan 2023, 10:43 PM

ಕಾಪು : ಪೊಲೀಸ್ ಇಲಾಖೆಯ ಟ್ರಾಫಿಕ್ ನಿರ್ವಹಣೆಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆ ಗಳಿಸಿರುವ ಪ್ರಸ್ತುತ ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಉಪನಿರೀಕ್ಷಕ ಗೋಪಾಲ್ ಶೆಟ್ಟಿಗಾರ್ ಅವರನ್ನು ಕಾಪು ಜೇಸಿಐನ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಕಾಪು ಜೇಸಿಐನ ಅಧ್ಯಕ್ಷೆ ದೀಕ್ಷಾ ಆರ್. ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ವಲಯಾಧ್ಯಕ್ಷ, ಪತ್ರಕರ್ತ ರಾಕೇಶ್ ಕುಂಜೂರು ಅಭಿನಂದನಾ ಭಾಷಣ ಮಾಡಿದರು. ಪೂರ್ವಾಧ್ಯಕ್ಷ ರಾಜೇಂದ್ರ ಬಿ.ಕೆ. ಸಮ್ಮಾನ ಪತ್ರ ವಾಚಿಸಿದರು. ಕಾಪು ಪೊಲೀಸ್ ಠಾಣೆಯ ಎಎಸ್‌ಐ ರಾಜೇಂದ್ರ ಮಣಿಯಾಣಿ, ಠಾಣಾ ಮೇಲ್ವಿಚಾರಕ ರವೀಂದ್ರ, ಕಾಪು ಜೇಸಿಐನ ಪೂರ್ವಾಧ್ಯಕ್ಷರಾದ ರಮೇಶ್ ನಾಯ್ಕ್, ವಿನೋದ್ ಕಾಂಚನ್, ಅರುಣಾ ಐತಾಳ್, ಕಾರ್ಯದರ್ಶಿ ಪ್ರಸಾದ್ ಆಚಾರ್ಯ, ಕೋಶಾಽಕಾರಿ ಸಂತೋಷ್ ಉಳಿಯಾರು, ಪದಾಧಿಕಾರಿಗಳಾದ ಶ್ರುತಿ ಶೆಟ್ಟಿ, ವಿಕ್ಕಿ ಪೂಜಾರಿ, ಪ್ರಕಾಶ್ ಆಚಾರ್ಯ ಹಾಗೂ ಪೊಲೀಸ್ ಠಾಣೆಯ ಸಿಬಂದಿಗಳು ಉಪಸ್ಥಿತರಿದ್ದರು.

ಉದ್ಯಾವರ : ಬಹುಭಾಷಾ ನಿರಂತರ್ ನಾಟಕೋತ್ಸವ ಉದ್ಘಾಟನೆ

Thumbnail
Posted On: 31 Jan 2023, 11:55 AM

ಉಡುಪಿ : ನಾಟಕಗಳಿಂದ ಸಭಿಕರಿಗೆ ಉತ್ತಮ ಮೌಲ್ಯಗಳು ದೊರಕುತ್ತವೆ. ಉತ್ತಮ ನಾಟಕಗಳ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಲು ಸಾಧ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಾಟಕ ಒಂದು ಪ್ರಬಲವಾದ ಮಾಧ್ಯಮ ಎಂದು ಉದ್ಯಾವರ ಸಂತ ಫ್ರಾನ್ಸಿಸ್ ಜೆವಿಯರ್ ದೇವಾಲಯದ ಪ್ರಧಾನ ಧರ್ಮ ಗುರು ವಂ. ಸ್ಟ್ಯಾನಿ ಬಿ ಲೋಬೋ ತಿಳಿಸಿದರು. ಉದ್ಯಾವರ ದೇವಾಲಯದ ವಠಾರದಲ್ಲಿರುವ ಐಸಿವೈಎಂ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ ನಿರಂತರ್ ಉದ್ಯಾವರ ಸಂಘಟನೆಯ ಐದನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಏಳು ದಿನಗಳ ಕಾಲ ನಡೆಯುತ್ತಿರುವ ಬಹುಭಾಷಾ ನಿರಂತರ್ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ, 'ಸಹಕಾರ ರತ್ನ' ಪ್ರಶಸ್ತಿ ಪುರಸ್ಕೃತ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ, ಏಳು ದಿನ ನಾಟಕ ಆಯೋಜನೆ ಮಾಡುವುದು ಅಷ್ಟು ಸುಲಭವಲ್ಲ. ಒಂದು ನಾಟಕದಿಂದ ಉತ್ತಮ ಸಂದೇಶ ದೊರಕಲು ಸಂಘಟಕರು ಬಹಳಷ್ಟು ಪ್ರಯತ್ನ ಪಡುತ್ತಾರೆ. ಅಂತಹ ಉತ್ತಮ ಸಾಹಸಕ್ಕೆ ನಿರಂತರ್ ಉದ್ಯಾವರ ಮುಂದಡಿ ಇಟ್ಟಿದೆ ಎಂದರು. ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಯಕರ್ ಶೆಟ್ಟಿ ಇಂದ್ರಾಳಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರಂಗ ನಿರ್ದೇಶಕ ನಾಗೇಶ್ ಕುಮಾರ್ ಉದ್ಯಾವರ, ದೇವಾಲಯದ ಪಾಲನ ಮಂಡಳಿ ಉಪಾಧ್ಯಕ್ಷ ಲಾರೆನ್ಸ್ ಡೆಸಾ, ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ರೋಷನ್ ಕ್ರಾಸ್ತಾ ಕಾರ್ಯದರ್ಶಿ ಒಲಿವೀರ ಮಥಾಯಸ್ ಮತ್ತು ಸಂಚಾಲಕ ರೊನಾಲ್ಡ್ ಡಿಸೋಜ ಉಪಸ್ಥಿತರಿದ್ದರು. ಮೈಕಲ್ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭೂಮಿಗೀತಾ ತಂಡದಿಂದ 'ಹೇ ರಾಮ್' ಎನ್ನುವ ತುಳು ನಾಟಕ ಪ್ರದರ್ಶನಗೊಂಡಿತು. 600ಕ್ಕೂ ಅಧಿಕ ಸಭಿಕರು ಪ್ರಥಮ ದಿನದ ನಾಟಕೋತ್ಸವ ವೀಕ್ಷಿಸಿದರು.

ಕೆಮುಂಡೇಲು : ಹುತಾತ್ಮರ ದಿನಾಚರಣೆ

Thumbnail
Posted On: 31 Jan 2023, 11:49 AM

ಪಡುಬಿದ್ರಿ : ಸ್ವಾತಂತ್ರ್ಯ ಪೂರ್ವದಲ್ಲಿ ಮಾತ್ರವಲ್ಲದೇ ಸ್ವಾತಂತ್ರ್ಯ ನಂತರೂ ಹಲವಾರು ಹೋರಾಟಗಾರರು, ಯೋಧರು ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಅವರೆಲ್ಲರ ಬಲಿದಾನವನ್ನು ನಾವು ಇಂದು ಸ್ಮರಿಸಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವ , ಆಲೋಚನೆಗಳು ಮತ್ತು ಆದರ್ಶಗಳು ನವಭಾರತ ನಿರ್ಮಾಣಕ್ಕೆ ಸ್ಪೂರ್ತಿ ನೀಡುತ್ತಲೇ ಇರುತ್ತವೆ ಎಂದು ಉಪನ್ಯಾಸಕ ಹರೀಶ್ ಕೋಟ್ಯಾನ್ ನುಡಿದರು. ನೆಹರೂ ಯುವ ಕೇಂದ್ರ, ಉಡುಪಿ, ಪಾಂಡುರಂಗ ಹವ್ಯಾಸಿ ಕಲಾ ಸಂಘ (ರಿ) ಕೆಮುಂಡೇಲು ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪಾಂಡುರಂಗ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಬಾಲಕೃಷ್ಣ ಆಚಾರ್ ಕೊಲ್ಯ , ಉದ್ಯಮಿ ಚಂದ್ರಹಾಸ್ ಭಂಡಾರಿ, ಪಾಂಡುರಂಗ ಭಜನಾ ಮಂಡಳಿ ಕಾರ್ಯದರ್ಶಿ ಕೃಷ್ಣಾನಂದ ರಾವ್ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಬಾಪೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಹುತಾತ್ಮರಿಗಾಗಿ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ನಿಶಾಂತ್ ಕುಲಾಲ್ ಸ್ವಾಗತಿಸಿ, ಸರ್ವಜ್ಞ ರಾವ್ ವಂದಿಸಿದರು, ರಾಘವೇಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.