Updated News From Kaup

ಸಮಾನ ಮನಸ್ಕರ ತಂಡದಿಂದ ಉಚ್ಚಿಲದ ಅಶಕ್ತ ಕುಟುಂಬಕ್ಕೆ ನೂತನ ಗೃಹ ಹಸ್ತಾಂತರ

Posted On: 17-10-2022 05:50PM

ಉಚ್ಚಿಲ : ಸಮಾಜ ಸೇವಕ ಕಟಪಾಡಿ ಶಶಿಧರ್ ಪುರೋಹಿತ್ ನೇತೃತ್ವದ ಸಮಾನ ಮನಸ್ಕರ ತಂಡದ ೧೩ನೇ ಯೋಜನೆಯಡಿ ಬಡ-ಅಶಕ್ತರಾದ ಉಚ್ಚಿಲ ಪೊಲ್ಯದ ಪ್ರೇಮಾ ಆಚಾರ್ಯ ಮತ್ತು ಪುತ್ರಿ ಪ್ರೀತಿಕಾ ಅವರ ವಾಸ್ತವ್ಯಕ್ಕೆ ೬ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಗೃಹವನ್ನು ರವಿವಾರ ಸಂಜೆ ಹಸ್ತಾಂತರಿಸಲಾಯಿತು.

ಗಣ್ಯರ ಸಮ್ಮುಖದಲ್ಲಿ ಮನೆಯನ್ನು ಹಸ್ತಾಂತರಿಸಿ ಶುಭ ಸಂದೇಶ ನೀಡಿದ ಕಟಪಾಡಿ ಶಶಿಧರ್ ಪುರೋಹಿತ್ ಅವರು, ಸಮಾನ ಮನಸ್ಕರ ತಂಡದ ಮೂಲಕ ಸಮಾಜದ ಸುಪ್ತವಾಗಿರುವ ಶ್ರೇಷ್ಠ ವ್ಯಕ್ತಿತ್ವವು ಅನಾವರಣಗೊಳ್ಳುತ್ತಿದೆ. ಗೃಹ ನಿರ್ಮಾಣ ಮತ್ತು ನವೀಕರಣ ಸಮಿತಿಯ ೪೯ ಜನರ ತಂಡದಿಂದ ಈ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಗಿದ್ದು, ತಂಡದ ಸಮಸ್ತರ ತ್ಯಾಗ, ಪರಿಶ್ರಮವನ್ನು ಶ್ಲಾಘಿಸಿದರು.

ಸ್ಥಳೀಯ ಪ್ರಮುಖರಾದ ಶಾಂತಮೂರ್ತಿ ಭಟ್ ಉಚ್ಚಿಲ, ಸಮಾನ ಮನಸ್ಕರ ತಂಡದ ಶಿಲ್ಪಿ ಮಾಧವ ಆಚಾರ್ಯ ಪುತ್ತೂರು, ಪಡು ಕುತ್ಯಾರು ಸದಾಶಿವ ಎ. ಆಚಾರ್ಯ, ಡಾ| ಪ್ರತಿಮಾ ಜೆ. ಆಚಾರ್ಯ ಮಣಿಪಾಲ, ನಿವೃತ್ತ ಯೋಧ ವಾದಿರಾಜ ಆಚಾರ್ಯ ಅಲೆವೂರು, ಕಾಂತಿ ಸುಬ್ರಹ್ಮಣ್ಯ ಆಚಾರ್ಯ ವೇದಿಕೆಯಲ್ಲಿದ್ದರು. ಈ ಸಂದರ್ಭ ಸಮಾನ ಮನಸ್ಕ ತಂಡದ ಸದಸ್ಯರು ಉಪಸ್ಥಿತರಿದ್ದರು.

ಬಿಳಿಯಾರು ರಾಜೇಶ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಯಜ್ನನಾಥ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ವಿಠ್ಠಲ ಆಚಾರ್ಯ ಪಣಿಯೂರು ವಂದಿಸಿದರು.

ತೆಂಕ ಎರ್ಮಾಳು : ಕಳ್ಳತನ ಮಾಡಿ ಸ್ಕೂಟರ್ ಬಿಟ್ಟು ಪರಾರಿಯಾದ ಕಳ್ಳ

Posted On: 16-10-2022 08:10PM

ಎರ್ಮಾಳು : ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೊಯ್ದ ಘಟನೆ ಭಾನುವಾರ ಬೆಳಗ್ಗಿನ ಜಾವ ಸಂಭವಿಸಿದೆ. ತೆಂಕ ಎರ್ಮಾಳು ಅಯೆಶಾ ಇಬ್ರಾಹಿಂರವರ ಬಾಡಿಗೆ ರೂಮ್ ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್ ಗೆ ಬೀಗ ಹಾಕಿ ಊರಿಗೆ ತೆರಳಿದ್ದರು.

ಭಾನುವಾರ ಮುಂಜಾನೆ 5:30ರ ಸುಮಾರಿಗೆ ಮನೆಗೆ ಬಂದಾಗ, ಮಂದ ಬೆಳಕಿನಲ್ಲಿ ಮನೆ ಮುಂದೆ ವ್ಯಕ್ತಿಯೊಬ್ಬರು ನಿಂತಿದ್ದು, ಇವರನ್ನು ಕಂಡು ತಾನು ತಂದಿದ್ದ ಸ್ಕೂಟರ್ ಬಿಟ್ಟು ಪಲಾಯನ ಮಾಡಿದ್ದಾನೆ. ರೂಮ್ ನ ಬಾಗಿಲು ತೆರೆದುಕೊಂಡಿದ್ದು ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಸಣ್ಣ ಪುಟ್ಟ ಮಕ್ಕಳ ಆಭರಣ ಸಹಿತ ಇಪ್ಪತ್ತು ಸಾವಿರ ನಗದು, ಹೊಸ ಪಾತ್ರೆಗಳು ಸುಮಾರು ಅರವತ್ತು ಕೆ.ಜಿಯಷ್ಟಿದ್ದ ಅಕ್ಕಿ ನಾಪತ್ತೆಯಾಗಿತ್ತು.

ಈ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಠಾಣಾ ಕ್ರೈಂ ಎಸ್ಸೈ ಪ್ರಕಾಶ್ ತಂಡ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ ಆಗಮಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಪೋಲಿಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಟೋಬರ್ 18ರ ಟೋಲ್ ತೆರವು ಹೋರಾಟಕ್ಕೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದೆ - ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿ

Posted On: 16-10-2022 05:05PM

ಕಾಪು : ರಾಷ್ಟ್ರೀಯ ಹೆದ್ದಾರಿಯ ಹತ್ತು ಕಿಲೋಮೀಟರ್ ಅಂತರದಲ್ಲಿ ಎರಡು ಕಡೆ ಟೋಲ್ ಸಂಗ್ರಹಿಸುವುದು ಕಾನೂನು ಬಾಹಿರ ಎಂದು ಸಂಸತ್ತಿನಲ್ಲಿ ಘೋಷಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮೂರು ತಿಂಗಳೊಳಗೆ ಸುರತ್ಕಲ್ ಟೋಲ್ ಗೇಟ್ ಮುಚ್ಚಿಸುವುದಾಗಿ ಆಶ್ವಾಸನೆ ನೀಡಿದರೂ, ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ರಾಜ್ಯದಲ್ಲಿ 18 ಇಂತಹ ಅಕ್ರಮ ಟೋಲ್ಗಳಿದ್ದು ಸುರತ್ಕಲ್ ಟೋಲ್ ಗೇಟ್ ಇದರಲ್ಲಿ ಸೇರಿದೆ.

ಅಕ್ಟೋಬರ್ 18ರಂದು ಟೋಲ್ ತೆರವು ಮಾಡಲು ಹೋರಾಟ ಸಮಿತಿ ನಿರ್ಧರಿಸಿದ್ದು ಕಳೆದ ಆರು ವರ್ಷಗಳಲ್ಲಿ ಟೋಲ್ ಗೇಟ್ ತೆರವಿನ ಹಲವು ಭರವಸೆಗಳು ನೀಡಲಾಗಿದೆ. ಕಳೆದ ಆರು ತಿಂಗಳಲ್ಲಿ ಸರಕಾರದ ಹಲವು ವೇದಿಕೆ,ಮತ್ತು ವಿಧಾನಸಭೆಯಲ್ಲೂ ತಿಂಗಳೊಳಗೆ ಟೋಲ್ ಗೇಟ್ ತೆರವು ಎಂಬ ಹೇಳಿಕೆಗಳು ಹೊರಬಿದ್ದಿದೆ ಅವು ಯಾವುದೇ ಜಾರಿಗೆ ಬರಲಿಲ್ಲ. ಈಗಿನ ಭರವಸೆಯು ಜಾರಿಗೆ ಬರುತ್ತದೆ ಎಂಬ ವಿಶ್ವಾಸ ಜನತೆಗಿಲ್ಲ ಸುಂಕ ಸಂಗ್ರಹ ಸ್ಥಗಿತಗೊಳ್ಳದೆ ಹೋರಾಟ ನಿಲ್ಲುವುದಿಲ್ಲ. ಅಕ್ಟೋಬರ್ 18ರಂದು ಟೋಲ್ ತೆರವು ಹೋರಾಟಕ್ಕೆ ಉಡುಪಿ ಜಿಲ್ಲೆಯ ಜನತಾದಳ (ಜಾತ್ಯತೀತ) ಪಕ್ಷದ ಸಂಪೂರ್ಣ ಬೆಂಬಲವಿದೆಯೆಂದು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿ, ರಾಜ್ಯ ಕಾರ್ಯದರ್ಶಿಯಾದ ಸುಧಾಕರ ಶೆಟ್ಟಿ ಹೆಜಮಾಡಿ ಮತ್ತು ಜೆಡಿಎಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಜಯರಾಮ ಆಚಾರ್ಯಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಪು ಬೀಚ್ ನ ನೂತನ ಸಿಬ್ಬಂದಿ ಕಚೇರಿ ಉದ್ಘಾಟನೆ

Posted On: 16-10-2022 12:55PM

ಕಾಪು : ಇಲ್ಲಿನ ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಕಾಪು ಬೀಚ್ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಬೀಚ್ ಸಿಬ್ಬಂದಿ ಕಚೇರಿಯನ್ನು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಿತಿನ್ ಕುಮಾರ್, ಅನಿಲ್ ಕುಮಾರ್, ನವೀನ್ ಅಮೀನ್, ಲಾಲ್ ಬಹಾದ್ದೂರ್ ಶಾಸ್ತ್ರೀ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಅಧ್ಯಕ್ಷ ಶೀಲಾರಾಜ್ ಪುತ್ರನ್, ಕಾಪು ಮೊಗವೀರ ಮಹಾಸಭಾ ಮಾಜಿ ಅಧ್ಯಕ್ಷ ಮೋಹನ್ ಬಂಗೇರ ಸ್ಥಳೀಯ ಮುಖಂಡರಾದ ಪ್ರವೀಣ್ ಪೂಜಾರಿ, ಆನಂದ್ ಶ್ರೀಯಾನ್, ಸಂತೋಷ್ ಶ್ರೀಯಾನ್, ಉದ್ಯಮಿ ಮಹಮ್ಮದ್ ಆಲಿ ಹಾಗೂ ಬೀಚ್ ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು.

ಶಿರ್ವ : ಅಂತರಾಷ್ಟ್ರೀಯ ಮಟ್ಟದ ಇಂಡೋ ನೇಪಾಳ ಥ್ರೋಬಾಲ್ ಚಾಂಪಿಯನ್‌ಶಿಪ್‌ ಗೆ ಆಯ್ಕೆಯಾದ ಶಮಿತಾ ಪೂಜಾರಿ

Posted On: 15-10-2022 06:29PM

ಶಿರ್ವ : ನೇಪಾಳದ ಪೋಕಾರದಲ್ಲಿ ನವೆಂಬರ್ 12 ರಿಂದ 14 ರವರೆಗೆ ನಡೆಯುವ ಅಂತರಾಷ್ಟ್ರೀಯ ಮಟ್ಟದ ಇಂಡೋ ನೇಪಾಳ ಥ್ರೋಬಾಲ್ ಚಾಂಪಿಯನ್‌ಶಿಪ್‌ಗೆ ರಯಿಸ್ ಥ್ರೋಬಾಲ್ ಅಕಾಡೆಮಿ ವತಿಯಿಂದ ಶಿರ್ವ ಗ್ರಾಮದ ಭಟ್ರ ನಿವಾಸಿ ಶಮಿತಾ ಪೂಜಾರಿ ಇವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.

ಇವರು ಶಿರ್ವದ ಶಂಕರ ಪೂಜಾರಿ ಹಾಗೂ ಶಾರದಾ ದಂಪತಿಗಳ ಮಗಳು.

ಹುಲಿವೇಷ, ಮರಕಾಲು ಕುಣಿತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಅಂತ್ರ ಆನಂದ್ ಕೋಟ್ಯಾನ್

Posted On: 14-10-2022 11:48PM

ಉಡುಪಿ : ನ್ಯಾಷನಲ್ ಪರ್ಫಾಮಿಂಗ್ ಆರ್ಟ್ಸ್ ಚಾಂಪಿಯನ್ ಶಿಪ್ ಮಹಾರಾಷ್ಟ್ರ - 2022 ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹುಲಿವೇಷ ಧರಿಸಿ, ಮರಕಾಲು ಕುಣಿತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಂತ್ರ ಆನಂದ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಕೊರಂಗ್ರಪಾಡಿಯ ಆನಂದ್ ಕೋಟ್ಯಾನ್ ಮತ್ತು ತನುಜಾ ಕೋಟ್ಯಾನ್ ದಂಪತಿಗಳ ಪುತ್ರಿಯಾದ ಈಕೆ ಉಡುಪಿ ಸೈಂಟ್ ಸಿಸಿಲಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ.

ಶಾಸಕ ಹರೀಶ್ ಪೂಂಜಾರ ಹಲ್ಲೆ ಯತ್ನ - ಶಾಸಕ ಲಾಲಾಜಿ ಆರ್ ಮೆಂಡನ್ ಖಂಡನೆ ; ಸೂಕ್ತ ಕ್ರಮಕ್ಕಾಗಿ ಆಗ್ರಹ

Posted On: 14-10-2022 10:01PM

ಕಾಪು : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಮಿತ್ರರಾದ ಹರೀಶ್ ಪೂಂಜಾರವರ ಮೇಲೆ ನಿನ್ನೆ ತಡರಾತ್ರಿ ತಮ್ಮ ಕೆಲಸಗಳನ್ನು ಮುಗಿಸಿ ವಾಪಸಗುತ್ತಿದ್ದಾಗ ಅವರ ಮೇಲೆ ಆಘಂತುಕರಿಂದ ಹಲ್ಲೆ ಯತ್ನ ನಡೆದಿರುವುದು ಅತ್ಯಂತ ಖಂಡನೀಯ ವಿಷಯ. ಒಬ್ಬ ಜನರಿಂದ ಆರಿಸಿ ಬಂದ ಜನಪ್ರತಿನಿಧಿಯ ಮೇಲೆ ನಡೆದಿರುವ ಈ ಕೃತ್ಯ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಆಗಿರುವ ಹಲ್ಲೆಯಂತೆ.

ಸಮಾಜದ ಪರವಾಗಿ ಅಥವಾ ಸಾಮಾಜಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಇಂತಹ ಹಲ್ಲೆಗಳು ಹೆಚ್ಚಾಗುತ್ತಿದ್ದು ಇದನ್ನು ನಿಗ್ರಹ ಮಾಡಲು ಸರ್ಕಾರ ತುರ್ತು ಕ್ರಮವನ್ನ ಕೈಗೊಳ್ಳಬೇಕು. ಜೊತೆಗೆ, ಬಂಧಿತನಾಗಿರುವ ಆರೋಪಿಯ ಸಂಪೂರ್ಣ ತನಿಖೆ ನಡೆಸಿ ಆತನ ಉದ್ದೇಶ ಮತ್ತು ಆತನ ಹಿಂದಿರುವ ಕೈಗಳ ಬಗ್ಗೆ ಸಮಗ್ರ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಜೊತೆಗೆ, ಶಾಸಕರಿಗೆ ಸರಿಯಾದ ಭದ್ರತೆಯನ್ನು ಒದಗಿಸಬೇಕು ಮತ್ತು ಇಂತಹ ಘಟನೆಗಳು ಇನ್ನು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹಾಗೂ ಗೃಹ ಸಚಿವರಿಗೆ ಆರಗ ಈ ಮೂಲಕ ಆಗ್ರಹಿಸುತ್ತೇನೆ ಎಂದು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಪುಣೆ ಸಮಿತಿಗೆ ಚಾಲನೆ , ಶ್ರೀದೇವಿ ಮಹಾತ್ಮೆ ಯಕ್ಷಗಾನ

Posted On: 14-10-2022 09:54PM

ಪುಣೆ : ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿಗಾಗಿ ರಚಿಸಿದ ಪುಣೆ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಹಾವಂಜೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವು ಅ . ೧೩ ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಸಂಭ್ರಮದಿಂದ ನಡೆಯಿತು . ಪುಣೆ ಬಂಟರ ಸಂಘದ ಅಧ್ಯಕ್ಷ ಹಾಗೂ ಕಾಪು ಮಾರಿಗುಡಿ ಅಭಿವೃದ್ಧಿ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಎಂ ಆರ್ ಜಿ ಗ್ರೂಪ್ ನ ಸಿಎಂಡಿ ಕೆ . ಪ್ರಕಾಶ್ ಶೆಟ್ಟಿ,ಕಾಪು ಮಾರಿಗುಡಿ ಅಭಿವೃದ್ಹಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ದಿವಾಕರ ಶೆಟ್ಟಿ ಕಾಪು, ಮುಂಬಯಿ ಸಮಿತಿಯ ಅಧ್ಯಕ್ಷರಾದ ಸುಧಾಕರ ಹೆಗ್ಡೆ ,ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷರಾದ ರವಿ ಸುಂದರ್ ಶೆಟ್ಟಿ ,ಕಾಪು ಮಾರಿಗುಡಿ ಅಭಿವೃದ್ಹಿ ಪ್ರಚಾರ ಸ ಮಿತಿ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ ,ಆರ್ಥಿಕ ಸಮಿತಿಯ ಮುಖ್ಯ ಪ್ರಧಾನ ಸಂಚಾಲಕರಾಗಿರುವ ಉದಯ್ ಸುಂದರ್ ಶೆಟ್ಟಿ , ಸಂದೀಪ್ ಶೆಟ್ಟಿ , ರವಿರಾಜ್ ಶೆಟ್ಟಿ ,ಮೋಹನ್ ಶೆಟ್ಟಿ ,ದಿವಾಕರ ಶೆಟ್ಟಿ , ದಯಾನಂದ್ ಶೆಟ್ಟಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಪು ಹೊಸ ಮಾರಿಗುಡಿಯ ಅಭಿವೃದ್ಧಿ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಹಾಗೂ ಪದಾಧಿಕಾರಿಗಳಿಗೆ ಕಾಪು ಮಾರಿಗುಡಿ ಅಭಿವೃದ್ಹಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ ಯವರು ಶ್ರೀದೇವಿಯ ಪ್ರಸಾದವನ್ನು ನೀಡಿದರು . ಅತಿಥಿಗಳನ್ನು ಶಾಲು ಹೊದೆಸಿ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ವಾಸುದೇವ ಶೆಟ್ಟಿಯವರು ಕಾಪು ಹೊಸ ಮಾರಿಗುಡಿಯ ಜೀರ್ಣೋದ್ಧಾರದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ,ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ,ಮಂಡಳಿ ,ನಾಗವ್ರುಜ ಕ್ಷೇತ್ರ ಪಾವಂಜೆಯ ಪ್ರಸಿದ್ಧ ಕಲಾವಿದರಿಂದ "ಸಂಪೂರ್ಣ ಶ್ರೀದೇವಿ ಮಹಾತ್ಮೆ "ಯಕ್ಷಗಾನ ಪ್ರದರ್ಶನ ನಡೆಯಿತು . ಕಾರ್ಯಕ್ರಮದಲ್ಲಿ ಕಾಪು ಹೊಸ ಮಾರಿಗುಡಿ ಪುಣೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ,ಮುಖ್ಯ ಸಲಹಾ ಸಮಿತಿಯ ಸದಸ್ಯರು ,ಉತ್ತರ ವಲಯ ಸಮಿತಿ ,ದಕ್ಷಿಣ ವಲಯ ಸಮಿತಿ ,ಪಿಂಪ್ರಿ -ಚಿಂಚ್ವಾಡ್, ಹಡಪ್ಸರ್, ಯುವ ವಲಯ ಹಾಗೂ ಮಹಿಳಾ ವಲಯ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಾಧ್ಯಕ್ಷರಾದ ಪಾದೂರು ಹೊಸಮನೆ ಮಾಧವ ಆರ್ ಶೆಟ್ಟಿ ,ಉಪಾಧ್ಯಕ್ಷರಾದ ಎರ್ಮಾಳ್ ಚಂದ್ರಹಾಸ ಶೆಟ್ಟಿ , ವಿಶ್ವನಾಥ ಪೂಜಾರಿ ಕಡ್ತಲ , ಪ್ರವೀಣ್ ಶೆಟ್ಟಿ ಪುತ್ತೂರು ,ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ,ಕಾರ್ಯದರ್ಶಿ ಉದಯ್ ಶೆಟ್ಟಿ ಕಳತ್ತೂರು, ಗೌರವ ಕೋಶಾಧಿಕಾರಿ ದಿನೇಶ್ ಶೆಟ್ಟಿ ಕಳತ್ತೂರು , ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ ,ವಿವಿಧ ವಲಯಗಳ ಕಾರ್ಯಾಧ್ಯಕ್ಷರಾದ ಗಣೇಶ್ ಹೆಗ್ಡೆ ಪುಂಚೂರು, ಜಗದೀಶ್ ಶೆಟ್ಟಿ , ರವಿ ಕೆ ಶೆಟ್ಟಿ ಕಾಪು ,ಗಣೇಶ್ ಪೂಂಜಾ , ರೋನಕ್ ಜಯ ಶೆಟ್ಟಿ , ಕಾರ್ಯಾಧ್ಯಕ್ಷೆ ಸುಲತಾ ಸತೀಶ್ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಉಡುಪಿ : ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರರಾಗಿ ಶ್ರೀಕಾಂತ್ ಕುಚ್ಚೂರು ನೇಮಕ

Posted On: 14-10-2022 11:28AM

ಉಡುಪಿ :ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಜನತಾದಳ( ಜಾತ್ಯತೀತ) ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂರವರು ಶ್ರೀಕಾಂತ್ ಕುಚ್ಚೂರುರವರನ್ನು ಉಡುಪಿ ಜಿಲ್ಲೆಯ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾ ವಕ್ತಾರರನ್ನಾಗಿ ನೇಮಕಗೊಳಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಂತಾರ ತುಳುನಾಡಿನ ದೈವಾರಾಧನೆಯನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸಿದೆ. ಆದರೆ....!

Posted On: 13-10-2022 11:39PM

" ಕಾಂತಾರ " ಇಂದು ಜಗತ್ತಿನಾದ್ಯಂತ ತುಂಬಿರುವ ತುಳು ಕನ್ನಡಿಗರ ವಲಯದಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆದಂತಹ ದೈವ ಆಧಾರಿತ ಚಲನ ಚಿತ್ರ. ತುಳುನಾಡಿನ ಜನತೆಗೆ "ದೈವ"ಮೊದಲು "ದೇವರು"ನಂತರ ಎಂಬ ಮೂಲ ನಂಬಿಕೆಗೆ ಸಂಪೂರ್ಣವಾಗಿ ಶರಣಾದಂತಹ ಸತ್ಯ ಸಂಕಲ್ಪ. ಅದಕ್ಕಾಗಿಯೇ ತುಳುವರು "ದೈವ ದೇವೆರೇ " ಎಂದು ಕರೆಯುವುದೇ ಅವರ ಮಹಾಮಂತ್ರ ಎಂದರೆ ತಪ್ಪಾಗಲಾರದು. ಭಯದ ಅಡಿಯಲ್ಲಿ ಭಕ್ತಿಯನ್ನು ಪಾಲಿಸಿಕೊಂಡು ಬಂದಿರುವ ಏಕೈಕ ಸಂಪ್ರದಾಯ ನಮ್ಮ ತುಳುವರದ್ದು. ದೈವ ಎಂಬುವುದು ಒಂದು ಕುಟುಂಬಕ್ಕೆ ಮಾವ (ತಮ್ಮಲೆ)ನಂತೆ ಎಂದೂ ಹೇಳುತ್ತಾರೆ .ತುಳುವರು ತಾಯಿ ತಂದೆಯ ಮೇಲೆ ಅಪಾರ ಭಕ್ತಿಯನ್ನು ತೋರಿಸಿ ಮಾವನಿಗೆ ತುಂಬಾ ಹೆದರುವ ಗೌರವ ಕೊಡುವ ನಮ್ಮ ಸಂಸ್ಕ್ರತಿ.ಹಾಗಾಗಿ ದೇವರು ಸಲಹುವವನಾದರೆ ನಾವು ಧರ್ಮ ತಪ್ಪಿದಲ್ಲಿ ದಂಡಿಸುವ ಮತ್ತು ತಿದ್ದುವ ಕೆಲಸವನ್ನು ಮಾವ(ತಮ್ಮಲೆ ) ನ ಸ್ಥಾನದಲ್ಲಿ ನಿಂತು ದೈವಗಳೆ ಮಾಡುವುದು ಎಂಬುವುದನ್ನು ಬಲವಾಗಿ ನಂಬಲೇ ಬೇಕಾದ ವಿಚಾರ.

ಈಗ ನಾವು ಕಾಂತಾರ ಸಿನಿಮಾದ ಬಗ್ಗೆ ದೃಷ್ಟಿ ಹರಿಸೋಣ ! ಕಾಂತಾರ ಸಿನಿಮಾದ ಕಥೆ ಒಂದು ದಂತಕಥೆಯಾಗಿ ತೆರೆಯ ಮೇಲೆ ಬಂದಿರುವುದು ಎಷ್ಟು ಸರಿ.ಎಷ್ಟು ತಪ್ಪು ಎಂಬುದನ್ನು ಹೇಳಲು ದೈವ ಚಿಂತಕರಿಂದ ಮಾತ್ರ ಸಾಧ್ಯ. ಆದರೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ತುಳುವರನ್ನು ಈ ಒಂದು ಸಿನೆಮಾ ಬಡಿದು ಎಬ್ಬಿಸಿದ್ದಂತೂ ನೂರಕ್ಕೆ ನೂರು ಸತ್ಯ ತುಳುವನ ದೇಹದ ರಕ್ತದಲ್ಲಿ ಒಂದು ದೈವ ಸಂಚಾರವನ್ನೇ ಮೂಡಿಸಿದೆ. ಅಲ್ಲದೆ ತುಳುನಾಡಿಗೆ ಕೋರ್ಟು ಕಚೇರಿ ಕಾನೂನಿಗಿಂತಲೂ ದೈವದ ತೀರ್ಪೇ ಮೇಲು ಎಂಬ ಸತ್ಯ ಸಂದೇಶವನ್ನು ಈ ಸಿನೆಮಾ ನೀಡಿದೆ. ಸಿನಿಮಾದ ಒಂದು ದೃಶ್ಯದಲ್ಲಿ: ಗುರುವ ಎಂಬ ದೈವದ ಚಾಕರಿ ಮಾಡುವವನ ಕೊಲೆಯಾದಾಗ .ಜೈಲಲ್ಲಿರುವ ನಾಯಕ ನಟ ಶಿವನಿಗೆ ತನ್ನ ಮನೆಯವರಿಂದ ಸುದ್ದಿ ಮುಟ್ಟುವ ಮೊದಲು.ಜೈಲಿನ ವರಾಂಡದಲ್ಲಿ ದೈವ ಕುಳಿತು ಕಣ್ಣೀರು ಹಾಕಿ ತನ್ನ ಚಾಕರಿಯವನ ಕೊಲೆಗೆ ಸಂತಾಪಗೊಂಡು ರೋಧಿಸುವ ಸನ್ನಿವೇಶ ನಿಜವಾಗಿಯೂ ದೈವ ಭಕ್ತ ಪ್ರೇಕ್ಷಕನ ಕಣ್ಣಲ್ಲಿ ನೀರು ಬರುವುದಂತೂ ಖಂಡಿತ.ತನ್ನ ಚಾಕರಿ ಮಾಡುವವನನ್ನು ದೈವ ಎಷ್ಟೊಂದು ಪ್ರೀತಿಸುತಿದೇ ಎಂಬುದನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಚಿತ್ರದ ಕೊನೆ ಘಳಿಗೆಯಲ್ಲಿ ದೈವದ ಅಧೀನ ದಲ್ಲಿರುವ ಜಾಗ ದೈವದ ಸುಪರ್ದಿಗೆ ಸೇರಲು ಶ್ರಮಿಸಿದ ಪೊಲೀಸ್ ಅಧಿಕಾರಿಯನ್ನು ದೈವ ತನ್ನ ಕೈ ಭಾಷೆಯಲ್ಲಿ ಕರೆದು ಅಧಿಕಾರಿಯ ಕೈಯನ್ನು ತನ್ನ ಎದೆಗೆ ಒತ್ತಿ ಮುದ್ದಾಡಿ ತನ್ನ ಸಂತಸವನ್ನು ವ್ಯಕ್ತ ಪಡಿಸುವ ದೃಶ್ಯವಂತೂ ತುಂಬಾ ಹೃದಯ ಕರಗುವಂತಿತ್ತು.ದೈವಕ್ಕೆ ತನ್ನನ್ನು ನಂಬಿಕೊಂಡು ಬದುಕುವವರು ಧರ್ಮದ ಹಾದಿಯಲ್ಲಿ ಬದುಕುವಂತಾದರೆ ಅದರಷ್ಟು ಖುಷಿ ದೈವಕ್ಕೆ ಬೇರೊಂದಿಲ್ಲ ಅನ್ನಬಹುದು ಅಲ್ಲವೇ !! ಒಂದು ಆದ್ಯಾತ್ಮಿಕ ಹಾದಿಯಲ್ಲಿ ಹೋಗುವ ಈ ಚಿತ್ರದ ನಡುವೆ ನಾಯಕ ನಟ ನಟಿಯರ ಪ್ರಣಯಕ್ಕೆ ಸಂಬಂಧಿಸಿ ಹಾಕಿದ ಮಸಾಲ ಹಾಗೂ ಸಾಹುಕಾರನ ಅನೈತಿಕ ಸಂಬಂಧ ನಡೆಯುತ್ತಿರುವಾಗ ಕಾದು ಕುಳಿತ ಶಿವನಿಗೆ ಅಲ್ಲಿ ದೈವ ಕಣ್ಣ ಮುಂದೆ ಬಂದಂತಾದಾಗ ಸಾಹುಕಾರ ಹೆದರಿ ತನ್ನ ಬಟ್ಟೆ ಯನ್ನು ಕೈಯಲ್ಲಿ ಹಿಡಿದು ಓಡುವ ದೃಶ್ಯ ಕಮರ್ಷಿಯಲ್ ದೃಷ್ಟಿ ಯಿಂದ ಒಪ್ಪಬೇಕೆ ವಿನಃ ಅದನ್ನು ಬೇರೆ ರೀತಿಯಲ್ಲಿ ತೋರಿಸುತ್ತಿದ್ದರೆ ಇನ್ನೂ ಭಕ್ತಿ ಪೂರ್ವಕವಾಗಿ ಮೂಡಿ ಬರುತ್ತಿತ್ತು..ಯಾಕೆಂದರೆ ತುಳು ಮಾತನಾಡಲು ಬರುವ ಕನ್ನಡ ಬಾರದ ಮಕ್ಕಳಿಗೆ ದೈವದ ಭಕ್ತಿಯ ಹಾದಿಯಲಿ ನಡೆಯುವ ದೃಶ್ಯಗಳ ನಡುವೆ ಇಂತಹ ದೃಶ್ಯ ಬಂದಾಗ ಸ್ವಲ್ಪ ಗೊಂದಲ ಮೂಡಿಸಿರುವುದು ಸತ್ಯ ದರ್ಶನ...ಕ್ಷಮಿಸಿ

ಇಂತಹಾ ಸಿನೆಮಾ ಇಷ್ಟರ ತನಕ ಬಂದಿಲ್ಲ! ಇನ್ನು ಮುಂದೆ ಬರಕೂಡದು !... ಇದೇ ಮೊದಲು ಇದೇ ಕೊನೆಯಾಗಲಿ..............................ಯಾಕೆ??? ಯಾಕೆಂದರೆ!!!ಇವತ್ತು ಒಂದು ಪಂಜುರ್ಲಿ ದೈವ ಮತ್ತು ಅದಕ್ಕೆ ಸೇರಿದ ಜಾಗವನ್ನು ಆಧಾರವಾಗಿಟ್ಟುಕೊಂಡು ಒಂದು ಕತೆ ನಿರ್ಮಿಸಿ. ದೈವಾರಾಧನೆಯನ್ನು ತೆರೆಯ ಮೇಲೆ ತೋರಿಸಿ .ಜನಮನ ಹಣ ಗೆದ್ದ ನಿರ್ಮಾಪಕರು ಉತ್ಸಾಹದಿಂದ ನಾಳೆ ಇದರ ಮುಂದುವರಿದ ಭಾಗ ಕಾಂತಾರ -2 ಬಂದರೂ ಬರಬಹುದು.ಅಥವಾ ಇಂತಹ ಸಿನಿಮಾದಿಂದ ಪ್ರೇರಿತಗೊಂಡ ಕನ್ನಡ ತುಳು ಚಿತ್ರ ನಿರ್ಮಾಪಕರು ಮುಂದಿನ ಕತೆಗಳಲ್ಲಿ ಜುಮಾದಿ ಜಾರಂದಾಯ ಕೊರಗಜ್ಜಾ ಮುಂತಾದ ಕಾರ್ಣಿಕದ ಕ್ಷೇತ್ರಗಳ ಕತೆ ಸೃಷ್ಟಿಸಿ ಕೋಲ ನೇಮ ತಂಬಿಲದ ಕೆಲವೊಂದು ದೃಶ್ಯಗಳನ್ನು ಕತೆಗೆ ಬಂಡವಾಳವನ್ನಾಗಿಸಿ ಹಣ ಮಾಡುವ ದಂಧೆ ಶುರು ಆದರೂ ಆಗಬಹುದು..ದೈವ ನರ್ತನ ಆರಾಧನೆಯನ್ನು ಬೇಕಂತಲೇ ಸ್ವಲ್ಪ ವಿರೂಪಗೊಳಿಸಿ ಚಿತ್ರವನ್ನು ವಿರೋಧಿಸುವಂತೆ ಅವರೇ ಮಾಡಿ ಪ್ರಚಾರ ಪಡೆದು ಸಿನಿಮಾವನ್ನು ಗೆಲ್ಲಿಸುವ ಕೆಟ್ಟ ಪ್ರಜ್ಞೆ ಬಂದರೂ ಆಶ್ಚರ್ಯವಿಲ್ಲ.... ಹಿಂದೂ ಧರ್ಮದ ದೇವರುಗಳನ್ನು ಕೆಟ್ಟದಾಗಿ ತೋರಿಸಿ ಸಿನಿಮಾ ಮಾಡಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ.ಯಾಕೆಂದರೆ ಕೆಲವೊಂದು ನಿರ್ಮಾಪಕರಿಗೆ ತನ್ನ ಜನಪ್ರಿಯತೆ ಹಾದಿ ತಪ್ಪಿಸುವುದರಲ್ಲಿ ಸಂಶಯವಿಲ್ಲ.. ತುಳುನಾಡಿನ ದೈವ ಮತ್ತು ಆರಾಧನೆಯನ್ನು ತೆರೆಯ ಮೇಲೆ ಭಯವಿಲ್ಲದೆ ತೋರಿಸಿ ಮುಂದಿನ ದಿನಗಳಲ್ಲಿ ಕೋಲ ನೇಮ ಗಳನ್ನೂ ತೆರೆಯ ಮೇಲೆ ಮಾತ್ರ ನೋಡುವ ಕಾಲ ಬಂದರೂ ಬರಬಹುದು.....ಇವತ್ತು ಕಾಂತಾರ ಸಿನೆಮಾದಲ್ಲಿ ಬರುವ ಕೋಲದ ದೃಶ್ಯ ಕಂಡು ಭಾವೋದ್ರೇಕರಾಗಿ ಕೈ ಮುಗಿಯುವುದು ಅದನ್ನು ನೋಡಿ ಭಕ್ತಿಪರವಶ ವಾಗಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅದು ನಮ್ಮ ದುರಾದೃಷ್ಟ ಎಂದೆಣಿಸಿಕೊಳ್ಳ ಬಹುದು....!! ದೈವ ಕಾರ್ಣಿಕಗಳನ್ನು ನಮ್ಮ ಭಯ ಭಕ್ತಿಯ ಮೂಲಕ ನಮ್ಮ ಮಣ್ಣಿನಲ್ಲಿಯೇ ಆರಾಧಿಸಿಕೊಂಡು ಅದನ್ನು ಅನುಭವಿಸಬೇಕೇ ವಿನಃ. ..ಸಿನಿಮಾದಲ್ಲಿನ ಕ್ರಿಯೇಟಿವ್ ಥಿಯೇಟರಿನ ಸೌಂಡ್ ಎಫೆಕ್ಟ್ ಗಳಿಗೆ ರೋಮಾಂಚನಗೊಂಡು ಭಕ್ತಿ ಪರವಶಗೊಳ್ಳುವುದು ನಿಜವಾದ ದೈವ ಭಕ್ತಿ ಅಲ್ಲವೇ ಅಲ್ಲ...ತುಳುನಾಡಿನ ದೈವ ದೇವರುಗಳ ಆರಾಧನೆಯನ್ನು ತುಳುವರ ಮುಂದಿನ ಪೀಳಿಗೆಗೆ ತಿಳಿಸುವಂತಾಗಲು .. ಕೋಲ ಧರ್ಮ ನೇಮಗಳಂತಹ ಕಾರ್ಯಗಳನ್ನು. ನಮ್ಮ ನೆಲದಲ್ಲಿಯೇ ಮಾಡಿ.ವಾದ್ಯ ಪಾರ್ಧನ ದೈವ ನರ್ತನಗಳನ್ನು ನಿಜ ಕಣ್ಣಿನಿಂದ ನೋಡಿ ಭಯ ಭಕ್ತಿಯನ್ನು ತುಂಬಿಸಿ ಕೊಂಡರೆ ಖಂಡಿತವಾಗಿಯೂ ದೈವ ದೇವರುಗಳ ಕಾರ್ಣಿಕಗಳನ್ನು ನಿಜ ಜೀವನದಲ್ಲಿ ಅನುಭವಿಸಬಲ್ಲಿರಿ !! ಸಿನಿಮಾ ನೋಡಿ "ಸೌಂಡ್ ಎಫೆಕ್ಟ್ ಗೆ ಭಯ ಭಕ್ತಿ ಬಂದಲ್ಲಿ ದೈವದ ಕಾರ್ಣಿಕ ಖಂಡಿತಾ ಅನುಭವಿಸಲಾರಿರಿ.....ಅಲ್ಲದೆ ಅದರಿಂದ ವಿಘ್ನವೇ ಹೆಚ್ಚು ಈ ಒಂದು ಸಿನೆಮಾ ಕೆಲವರನ್ನು ಎಚ್ಚರಿಸುವ ಸಲುವಾಗಿ ದೈವ ಸಂಕಲ್ಪದಿಂದ ಭರ್ಜರಿ ಯಶಸ್ಸು ಕಂಡಿದೆ ಮಾತ್ರವಲ್ಲದೆ ಇನ್ನು ಮುಂದೆ ಇಂತಹ ಸಿನಿಮಾವನ್ನು ತಯಾರಿಸಿದರೆ ಯಶಸ್ಸು ಬಿಡಿ ಹಲವಾರು ಸಮಸ್ಯೆಗಳನ್ನು ಎದುರಿಸುವ ಸಮಸ್ಯೆ ಬರಲಿದೆ....ನಿಮಗೆ ತಿಳಿದಿರಲೂ ಬಹುದು ಕೋಟಿ ಚೆನ್ನಯ ಪ್ರಥಮ ಬ್ಲಾಕ್ ಆಂಡ್ ವೈಟ್ ಸಿನಿಮಾವನ್ನು ಕೂರ್ಕಾಲ್ ಗರಡಿಯಲ್ಲಿ ಚಿತ್ರೀಕರಣ ಮಾಡಿದಾಗ ಮತ್ತು ಬಿಡುಗಡೆಗೊಂಡ ನಂತರ ನಟಿಸಿದ ನಟರಿಗೆ ಹಲವಾರು ಸಮಸ್ಯೆಗಳು ಬಂದಿರುವುದನ್ನು ನಾನು ಸಣ್ಣ ವಯಸ್ಸಿನಲ್ಲಿ ಕೇಳಿದ ನೆನಪು...ಆಪ್ತ ಮಿತ್ರದಂತಹ ಕನ್ನಡ ಸಿನೆಮಾದಲ್ಲೂ ಸಮಸ್ಯೆ ಕಂಡುಬಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು....

ಎಚ್ಚರಿಕೆ ನಿರ್ಮಾಪಕರೇ ತುಳು ನಾಡಿನ ದೈವಗಳು ಇದಕ್ಕಿಂತಲೂ ಭಯ ಭಯಂಕರ !!ಆಯೆ ಬುಡಿಯೆಡಲಾ ಯಾನ್ ಬುಡಯೆ!! ಈ ದೈವ ನುಡಿ ನೆನಪಿರಲಿ ನನ್ನ ಆಲೋಚನೆ ತಪ್ಪಿದ್ದರೆ ಕ್ಷಮೆ ಇರಲಿ ಬರಹ : ಚಂದ್ರಕೃಷ್ಣ ಶೆಟ್ಟಿ ಬೆರ್ಮೊಟ್ಟು ಇನ್ನಂಜೆ ( ಕಾಪುದಾರ್ )