Updated News From Kaup
ಅಕ್ಟೋಬರ್ 3 : ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ, ಶಂಕರಪುರದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ಕಾರ್ಯಕ್ರಮ

Posted On: 25-09-2022 03:03PM
ಕಾಪು : ಶ್ರೀ ಸಾಯಿ ಈಶ್ವರ್ ಗುರೂಜಿ ದಿವ್ಯ ಸಂಕಲ್ಪದಲ್ಲಿ ದುರ್ಗಾಷ್ಟಮಿಯ ಪ್ರಯುಕ್ತ ದ್ವಾರಕಾಮಾಯಿ ಮಠ ಉಡುಪಿ ಜಿಲ್ಲೆಯ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ,ಶಂಕರಪುರ ಇಲ್ಲಿ ಶ್ರೀ ಸೌಭಾಗ್ಯ ಹೆಣ್ಣಿನ ಭಾಗ್ಯೋದಯದ ಬೆಳಕು ಎಂಬ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 03, ಸೋಮವಾರ ಬೆಳಿಗ್ಗೆ 9:30 ರಿಂದ 7 ವರ್ಷದಿಂದ 19 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ಕಾರ್ಯಕ್ರಮ ಜರಗಲಿದೆ. ಮೊದಲೇ ಹೆಸರು ನೊಂದಾವಣಿ ಮಾಡಿಕೊಂಡವರಿಗೆ ಮಾತ್ರ ಈ ಅವಕಾಶವಿದೆ.
ಮೂಗುತಿ ಧಾರಣೆಯ ಬಗ್ಗೆ :ಶ್ರೀ ಸಾಯಿ ಈಶ್ವರ್ ಗುರೂಜಿ ಸಂಕಲ್ಪದಲ್ಲಿ ನವರಾತ್ರಿಯ ಪರ್ವ ಕಾಲದಲ್ಲಿ ಹೆಣ್ಣು ಮಕ್ಕಳ ಸೌಭಾಗ್ಯಕ್ಕಾಗಿ ಉಚಿತ ಮೂಗುತಿ ಧಾರಣೆಯು ಹೆಣ್ಣುಗಳ ಭಾಗ್ಯಕ್ಕೆ, ಮಕ್ಕಳ ಕೋಪ, ಹಠ, ಚಂಚಲತೆ ನಿಗ್ರಹಿಸುತ್ತದೆ ಈ ಸುಂದರ ಮೂಗುತಿ. ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷ ಮಹತ್ವವನ್ನು ಕೊಡಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ ಆದ್ದರಿಂದ ಮೂಗುತಿ ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯ ನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಕುದುರೆಗೆ ಮೂಗಿಗೆ ದಾರ ಹಾಕಿ ನಿಯಂತ್ರಿಸುವುದನ್ನು ನೋಡಿರಬಹುದು. ಅದೇ ರೀತಿಯಲ್ಲಿಯೇ ಮೂಗುತ್ತಿ ಕೂಡ ಹೆಣ್ಣಿನ ಕೋಪ, ಹಠ, ಚಂಚಲತೆಯನ್ನು ನಿಗ್ರಹಿಸುತ್ತದೆ. ಮೂಗುತಿ ಮಹಿಳೆಯರ ಶ್ವಾಸಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ. ಮೂಗಿನ ಸುತ್ತಲಿನ ವಾಯು ಮಂಡಲವೂ ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹ ಪ್ರವೇಶಿಸಲು ಸುಲಭವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಗಂಗಳಿಗೆ ಸಂಬಂಧಿಸಿದ ನರವು ಮೂಗಿನ ಎಡ ಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ. ಇದೇ ಕಾರಣದಿಂದಾಗಿ ಮೂಗುತಿಯನ್ನು ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಜೊತೆಗೆ ಇದು ಮಹಿಳೆಯರ ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ ವಿಚ್ಚೇದನೆ ಹಾಗೂ ಬಂಜೆತನ ಹೆಚ್ಚಾಗುತ್ತಿರುವುದನ್ನು ಅರಿತುಕೊಂಡ ಶ್ರೀ ಸಾಯಿ ಈಶ್ವರ್, ಹೆಣ್ಣು ಮಕ್ಕಳು ಈ ದೇಶದ ಆಸ್ತಿ ಮತ್ತು ಅವರ ಜೀವನವು ಸುಖಮಯವಾಗಿರಬೇಕೆಂದು ದ್ವಾರಕಾಮಾಯಿ ಮಠ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಪ್ರತಿವರ್ಷ ನವರಾತ್ರಿಯ ದುರ್ಗಾಷ್ಟಮಿಯಂದು ನೂರಾರು ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿಯನ್ನು ಚುಚ್ಚುವ ಪುಣ್ಯ ಸೇವೆಯನ್ನು ನಡೆಸುತ್ತ ಬರುತ್ತಿದ್ದರೆ ಹೆಣ್ಣು ಮಕ್ಕಳು ದರಿಸುವ ಮೂಗುತಿಯ ಮಹತ್ವವನ್ನು ಸಾರುವುದರೊಂದಿಗೆ ನಮ್ಮ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೂ ಈ ಸೇವೆಯನ್ನು ಮುಂದುವರಿಸುವ ಸಂಕಲ್ಪವನ್ನು ಮಾಡಿರುತ್ತಾರೆ. ಈ ಪುಣ್ಯ ಸೇವೆಯಲ್ಲಿ ತಾವು ಕೈ ಜೋಡಿಸಿ ಪೋತ್ಸಾಹಿಸಿ ಎಂದು ಶ್ರೀ ಸಾಯಿ ಈಶ್ವರ್ ಗುರೂಜಿ ದಾನಿಗಳಲ್ಲಿ ಮನವಿ ಮಾಡಿರುತ್ತಾರೆ.
ಶಟಲ್ ಬ್ಯಾಡ್ಮಿಂಟನ್ ನಲ್ಲಿ ಕ್ರಿಯೇಟಿವ್ ಕಾಲೇಜಿನ ಲೇಖನಾ ರಾಜ್ಯಮಟ್ಟಕ್ಕೆ ಆಯ್ಕೆ

Posted On: 24-09-2022 11:18PM
ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲ್ಪಟ್ಟ ಉಡುಪಿ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪ ಪೂ ಕಾಲೇಜಿನ ಕುಮಾರಿ ಲೇಖನಾ ಬಾಲಕಿಯರ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ 18 ರ ವಯೋಮಿತಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಮುಂದಿನ ರಾಜ್ಯಮಟ್ಟದ ತಂಡದಲ್ಲಿ ಆಡುವ ಅವಕಾಶ ಗಳಿಸಿದ್ದಾರೆ.

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರವಲ್ಲದೆ ಕ್ರೀಡಾ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುತ್ತಿದೆ. ಕ್ರಿಯೇಟಿವ್ ಈ ಹಿಂದೆಯೂ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದು ಪ್ರಶಂಸೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳ ಸಾಧನೆಯನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿ, ತಂಡದ ಸಂಯೋಜಕ ಮಹೇಶ್ ಶೆಣೈ, ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನಂಜೆ : ಹಾಲು ಉತ್ಪಾದಕರ ಸಂಘದ ಮಹಾಸಭೆ, ಸನ್ಮಾನ

Posted On: 24-09-2022 11:09PM
ಇನ್ನಂಜೆ : ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಇನ್ನಂಜೆ ದಾಸ ಭವನದಲ್ಲಿ ಜರಗಿತು. ಈ ಸಂದರ್ಭ ಮಾತನಾಡಿದ ಅವರು ಸದಸ್ಯರು ಉತ್ತಮ ಗುಣ ಮಟ್ಟದ ಮತ್ತು ಹೆಚ್ಚು ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸಿದ್ದರಿಂದ ನಮ್ಮ ಸಂಘವು ಉಡುಪಿ ತಾಲೂಕಿನಲ್ಲಿಯೇ ಅತ್ಯುತ್ತಮ ಸಂಘವಾಗಿ ಮೂಡಿ ಬಂದಿದೆ. ಮುಂದೆಯೂ ಇದೇ ರೀತಿಯ ಬೆಂಬಲದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.

ಒಕ್ಕೂಟದ ಪಶು ವೈದ್ಯಾಧಿಕಾರಿ ಪ್ರಶಾಂತ್ ಮಾತನಾಡಿ ಲಾಭದಾಯಕ ಹೈನುಗಾರಿಕೆ ಬಗ್ಗೆ ರಾಸುವಿನ ಆರೋಗ್ಯದ ದೃಷ್ಟಿಯಲ್ಲಿ ಪ್ರತಿದಿನ ಖನಿಜ ಲವಣ ಮಿಶ್ರಣ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಸಾಮೂಹಿಕ ಜಂತುಹುಳದ ಔಷಧಿಯನ್ನು ನೀಡಲು, ಸದಸ್ಯರಿಗೆ ತಿಳಿಸಿದರು. ಒಕ್ಕೂಟದಿಂದ ಸಂಘದ ಸದಸ್ಯರಿಗೆ ಸಿಗುವ ಅನುದಾನದ ಬಗ್ಗೆ ಹಾಲಿನ ಗುಣಮಟ್ಟದ ಬಗ್ಗೆ ವಿಸ್ತರಣಾಧಿಕಾರಿ ಯಶವಂತ್ ತಿಳಿಸಿದರು. ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ.ಸುಚರಿತ ಶೆಟ್ಟಿ, ಕೆ.ಎಂ.ಎಫ್. ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಿ. ಅಶೋಕ್ ರವರ ಸಮ್ಮುಖದಲ್ಲಿ ಸಂಘದ ಸಕ್ರಿಯ ಹಿರಿಯ ಸದಸ್ಯರಾದ ರಾಘು ಶೆಟ್ಟಿ, ಶ್ರೀನಿವಾಸ ಕೋಟ್ಯಾನ್ ಮತ್ತು ಪ್ರಭಾವತಿ ಪೂಜಾರ್ತಿ ಇವರನ್ನು ಸರ್ವ ಸದಸ್ಯರ ಪರವಾಗಿ ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ. 85 ಕ್ಕಿಂತ ಅಂಕಗಳಿಸಿದ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಂಘವು 2021-2022 ಸಾಲಿನಲ್ಲಿ ನಿವ್ವಳ ಲಾಭ ರೂ. 7,18,247.40 ಗಳಿಸಿದ್ದು ಶೇ 15 ಡಿವಿಡೆಂಡ್ ಘೋಷಿಸಲಾಯಿತು. ಪ್ರಸಕ್ತ ಸಾಲಿನಲ್ಲ ಹಾಲು ಸರಬರಾಜು ಮಾಡಿದ ಸದಸ್ಯರಿಗೆ ರೂ. 3,08, 828.26 ಬೋನಸ್ಸು ಹಾಗೂ ಶೇ 1 ರಂತೆ ರೂ. 91, 288 ಪ್ರೋತ್ಸಾಹಧನ ನೀಡಲಾಯಿತು.
ಅಧಿಕ ಹಾಲು ಸರಬರಾಜು ಮಾಡಿದ ಆಶಾ ಪ್ರಥಮ, ರಾಘವೇಂದ್ರ ಉಪಾಧ್ಯಾಯ ದ್ವಿತೀಯ ಮತ್ತು ಸುನೀತಾ ಶೆಟ್ಟಿ ತೃತೀಯ ಬಹುಮಾನವನ್ನು ಪಡೆದರು. ಸಂಘದ ನಿರ್ದೇಶಕರಾದ ಆರ್.ಎಲ್.ಉಪಾಧ್ಯಾಯ, ರಾಮ ಕೆ. ಶೆಟ್ಟಿ, ನಾಗರಾಜ ಮುಚ್ಚಿನ್ನಾಯ, ಸುಮತಿ ಪಿ.ಅಂಚನ್, ಉದಯ ಜಿ, ಶಿವರಾಮ ಶೆಟ್ಟಿ, ಜಯ ಕೆ. ಪೂಜಾರಿ , ಉಮೇಶ್ ಆಚಾರ್ಯ, ಬೇಬಿ ಎಂ.ಪೂಜಾರಿ ಮತ್ತು ಪದ್ಮ ಮುಖಾರ್ದಿ ಉಪಸ್ಥಿತರಿದ್ದರು. ಸಂಘದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಎಸ್. ಭಟ್ ರವರು ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಉಚ್ಚಿಲ ದಸರಾ : ವಿದ್ಯುತ್ ದೀಪಾಲಂಕಾರದ ಉದ್ಘಾಟನೆ

Posted On: 24-09-2022 08:48PM
ಉಚ್ಚಿಲ : ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ಉತ್ಸವದ ಪೂರ್ವ ಭಾವಿಯಾಗಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸುಮಾರು 17 ಕಿಮೀ ಉದ್ದಕ್ಕೆ ವಿದ್ಯುತ್ ದೀಪ ಅಲಂಕಾರದ ಉದ್ಘಾಟನೆಯನ್ನು ನಾಡೋಜ ಜಿ.ಶಂಕರ್ ರವರು ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಉಚ್ಚಿಲ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಕರ್ನಾಟಕದ ಇತರ ಕಡೆಗಳಲ್ಲಿ ಜರಗುವಂತೆ ಇಲ್ಲಿ ಕೂಡ ಅತ್ಯಂತ ವಿಜೃಂಭಣೆಯಿಂದ ದಸರಾ ಆಚರಿಸಲು ನಮ್ಮ ಸಮಿತಿ ಎಲ್ಲ ಏರ್ಪಾಟು ಮಾಡಿದ್ದಾರೆ. ಪ್ರತಿದಿನ ಅನ್ನಸಂತರ್ಪಣೆ ಕಾರ್ಯಕ್ರಮ ಕೂಡಾ ಇರುತ್ತದೆ. ವಿದ್ಯುತ್ ಅಲಂಕಾರ ಸಾಂಕೇತಿಕವಾಗಿ ಇಂದು ಉದ್ಘಾಟನೆ ಮಾಡಿದ್ದೇವೆ. ಜಲಸ್ತಂಭನ ಕಾರ್ಯಕ್ರಮ ವಿನೂತನ ರೀತಿಯಲ್ಲಿ ನವದುರ್ಗೆಯರ ಹಾಗೂ ಶಾರದಾ ಮೂರ್ತಿಗಳನ್ನು ಇಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಹೆಜಮಾಡಿ ತನಕ ಹೋಗಿ ವಾಪಾಸು ಕಾಪು ತನಕ ಟ್ಯಾಬ್ಲೋ ಸಹಿತ ಮೆರವಣಿಗೆಯ ಮೂಲಕ ದೀಪಸ್ತಂಭದ ಬಳಿ ಸಮುದ್ರದಲ್ಲಿ ಜಲಸ್ಥಂಭನೆ ಮಾಡಲಾಗುವುದು ಎಂದರು.
ಈ ಸಂದರ್ಭ ದೇವಳದ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಕಾಪು : ಕುಂಜೂರಿನಲ್ಲಿ ಶರನ್ನವರಾತ್ರಿ ರಮೋತ್ಸವ

Posted On: 24-09-2022 08:46PM
ಕಾಪು : ಕುಂಜೂರಿನ ಶ್ರೀದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ರಮೋತ್ಸವವು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 4 ರ ಪರ್ಯಂತ ವೈಭವದಲ್ಲಿ ನೆರವೇರಲಿದೆ.
ಪ್ರತಿದಿನ ಉಷಃಕಾಲ ಪೂಜೆಯೊಂದಿಗೆ ಆರಂಭಗೊಂಡು ಚಂಡಿಕಾಯಾಗ ಹಾಗೂ ದುರ್ಗಾ ಹೋಮ,ಲಕ್ಷ್ಮೀ ಹೃದಯ ಹೋಮ,ಶ್ರೀಸೂಕ್ತ ಹೋಮ ಸಹಿತ ವಿವಿಧ ದುರ್ಗಾ ಹೋಮಗಳು,ವಾಯನ ದಾನ- ಕನ್ನಿಕಾ ಪೂಜೆಗಳು ಒಂಬತ್ತು ದಿನಗಳಲ್ಲೂ ನಡೆಯುವುದು.
ಮಧ್ಯಾಹ್ನ ಅಲಂಕಾರ ಪೂಜೆ, ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ. ಸಂಜೆ ದೀಪಾರಾಧನೆ,ಗಣಪತಿ ರಂಗಪೂಜೆ,ಹೂವಿನ ಪೂಜೆ,ನವರಾತ್ರಿ ಪೂಜೆಗಳು ನಡೆಯುವುದು. ಮಹಾನವಮಿಯಂದು ಸಾಮೂಹಿಕ ಹೂವಿನಪೂಜೆ,ಪುಸ್ತಕ ಪೂಜೆ ನಡೆಲಿದೆ. ವಿಜಯ ದಶಮಿಯಂದು ಸಾಮೂಹಿಕ ದುರ್ಗಾನಮಸ್ಕಾರ ಹೀಗೆ ನವರಾತ್ರಿ ಆಚರಣೆ ನೆರವೇರುವುದು ,ಪ್ರತಿನಿತ್ಯ ಹೂವಿನ ಅಲಂಕಾರವಿರುತ್ತದೆಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ತರಬೇತಿ ಶಿಬಿರ

Posted On: 24-09-2022 07:51PM
ಶಿರ್ವ: ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಯೋಗ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು.ಯೋಗದಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದೆಂದು ಶಿರ್ವ ವಲಯ ಪತಂಜಲಿ ಯೋಗ ಸಮಿತಿಯ ಯೋಗಗುರುಗಳಾದ ಶ್ರೀ ರಾಧಾಕೃಷ್ಣ ಪ್ರಭು ಹೇಳಿದರು. ಅವರು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ಮತ್ತು ಫಿಟ್ನೆಸ್ ಸೆಲ್ ಹಾಗೂ ಎನ್.ಸಿ.ಸಿ ಸಂಯುಕ್ತವಾಗಿ ಏರ್ಪಡಿಸಿದ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯಯುತ ಯುವಜನರನ್ನು ರೂಪಿಸಲು ಯೋಗ ಮತ್ತು ಕ್ರೀಡಾ ಕಡ್ಡಾಯವಾಗಿ ಶಿಕ್ಷಣದಲ್ಲಿ ಭಾಗವಾಗಿದೆ. ಈ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಪಡೆದು ಮುಂದೆ ಇತರರಿಗೆ ಮಾದರಿಯಾಗಿ ಸಮಾಜಸೇವೆಯನ್ನು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಗುರುಗಳಾದ ಅನಂತ ರಾಯ ಶೆಣೈ, ಯೋಗ ಮತ್ತು ಫಿಟ್ನೆಸ್ ಸೆಲ್ ನಿರ್ದೇಶಕ ಜೆಫ್ ಸನ್ನಿ ಡಿಸೋಜಾ, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಅಧ್ಯಾಪಕ ವೃಂದ,ಆಡಳಿತ ಸಿಬ್ಬಂದಿ, ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಅನುಕ್ ನಾಯಕ ಸಹಕರಿಸಿದರು. ರಕ್ಷ ಮತ್ತು ಬಳಗ ಪ್ರಾರ್ಥಿಸಿದರು. ಸನಿಯಾ ಶೇಕ್ ಸ್ವಾಗತಿಸಿದರು. ತರನಂ ಕಾರ್ಯಕ್ರಮ ನಿರೂಪಿಸಿದರು. ಜಿಯಾ ಸಿ ಪೂಜಾರಿ ವಂದಿಸಿದರು.
ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಬೃಹತ್ ರಕ್ತದಾನ ಶಿಬಿರ ; ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

Posted On: 24-09-2022 07:16PM
ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆ ಹಾಗೂ ಬ್ರಹ್ಮಾವರ ಘಟಕ ಜಂಟಿ ಆಶ್ರಯದೊಂದಿಗೆ ಸೆಪ್ಟೆಂಬರ್ 25, ಆದಿತ್ಯವಾರದಂದು ಮಲ್ಪೆಯ ಫಿಶರೀಸ್ ಸಭಾಭವನದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಬೆಳಗ್ಗೆ 7 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ಬೆಳಗ್ಗೆ 10ಗಂಟೆಗ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ, ಬೆಳಿಗ್ಗೆ 11 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 12:30 ಅನ್ನ ಸಂತರ್ಪಣೆ, ಸಂಜೆ 4 ಗಂಟೆಗೆ ಗಜಾನನ ಯಕ್ಷಗಾನ ಕಲಾ ಸಂಘ (ರಿ.) ತೊಟ್ಟಂ, ಬಡನಿಡಿಯೂರು ಕಲಾವಿದರಿಂದ ವೀರ ಕೋಟಿ ಚೆನ್ನಯ ತುಳು ಯಕ್ಷಗಾನ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 4 : ರಕ್ಷಣಾಪುರ ಜವನೆರ್ನ ಕೂಟ ಕಾಪು ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ - ಹುಲಿ ವೇಷ ಸ್ಪರ್ಧೆ
 (1).jpg)
Posted On: 24-09-2022 06:56PM
ಕಾಪು : ಎಂದರೆ ರಕ್ಷಣಾಪುರ. ಈ ಹೆಸರು ಬ್ರಾಂಡ್ ಆಗಬೇಕೆನ್ನುವ ಉದ್ದೇಶದಿಂದ ಸಾಕಷ್ಟು ಯುವಕರ ಅಭಿಲಾಷೆಯಾಗಿದೆ. ಇದರೊಂದಿಗೆ ದಸರಾ ಸಂದರ್ಭ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ದಸರಾ ಹಬ್ಬದ ಪ್ರಯುಕ್ತ ರಕ್ಷಣಾಪುರ ಜವನೆರ್ನ ಕೂಟ ಕಾಪು ಸಾರಥ್ಯದಲ್ಲಿ ಅಕ್ಟೋಬರ್ 4ರಂದು ಕಾಪು ಶ್ರೀ ಜನಾರ್ಧನ ದೇವಸ್ಥಾನದ ಬಳಿಯ ಮೈದಾನದಲ್ಲಿ (ಬಂಟರ ಸಂಘದ ಕಚೇರಿಯ ಮುಂಭಾಗ) 2 ಗಂಟೆಯಿಂದ ಹುಲಿ ವೇಷ ಸ್ಪರ್ಧೆಯಾದ ಕಾಪು ಪಿಲಿ ಪರ್ಬ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಕಾಪು ರಾಜೀವ್ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾಹಿತಿ ನೀಡಿದರು.

ಇದೊಂದು ಪಕ್ಷಾತೀತವಾದ ಕಾರ್ಯಕ್ರಮ. ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಕಾಪು ಮಾರಿಗುಡಿಯ ತಂತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದು ಪ್ರತಿ ತಂಡದಲ್ಲಿ 15 ಜನರಿಗೆ ಮಾತ್ರ ಅವಕಾಶ. ಧರಣಿ ಮಂಡಲ ಹಾಡಿಗೆ ಕುಣಿತ, ಮರಕಾಲು ಕುಣಿತ, ಅಕ್ಕಿಮುಡಿ ಎಸೆತ ಇತ್ಯಾದಿ ಪ್ರಕಾರಗಳನ್ನು ಪ್ರಸ್ತುತಪಡಿಸುವ ಅಂಶಗಳ ಮೇಲೆ ಬಹುಮಾನ ನೀಡಲಾಗುವುದು. ಪ್ರತಿ ತಂಡಕ್ಕೆ 20 ನಿಮಿಷದ ಕಾಲಾವಧಿ. ಪ್ರಥಮ 1ಲಕ್ಷ ರೂಪಾಯಿ , ದ್ವಿತೀಯ 50 ಸಾವಿರ ಬಹುಮಾನ ಹಾಗೂ ಇತರ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾವುದು. ಸ್ಪರ್ಧೆಯ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಈಗಾಗಲೇ 10 ತಂಡಗಳು ಹೆಸರು ನೋಂದಾಯಿಸಿದೆ. ಸೆಪ್ಟೆಂಬರ್ 30 ಹೆಸರು ನೋಂದಾವಣೆಗೆ ಕೊನೆಯ ದಿನ ಎಂದರು.
ಈ ಸಂದರ್ಭ ಕಾರ್ಯಕ್ರಮ ಆಯೋಜನೆಯ ಸಂಚಾಲಕ ನವೀನ್ ಶೆಟ್ಟಿ ಪಡುಬಿದ್ರಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಗಣೇಶ್ ಕೋಟ್ಯಾನ್, ರಮೀಝ್ ಹುಸೇನ್, ಶರ್ಫುದ್ದೀನ್, ಹರೀಶ್ ನಾಯಕ್, ರಕ್ಷಣಾಪುರ ಜವನೆರ್ನ ಕೂಟದ ಪ್ರಮುಖರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9964026471 / 8105780251/ 9900555542/ 9901731999/ 9844995937
ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ : ವಿದ್ಯೆ, ಶಸ್ತ್ರಚಿಕಿತ್ಸೆಗಾಗಿ ಸಹಾಯ ನಿಧಿ ಹಸ್ತಾಂತರ ಕಾಯ೯ಕ್ರಮ

Posted On: 23-09-2022 11:07PM
ಉಡುಪಿ : ಇಲ್ಲಿನ ರೋಟರಿ ಸೌಟ್ಕ್ ಭವನ, ಕಮಲ ಬಾಯಿ ಹೈಸ್ಕೂಲ್ ಕಡಿಯಾಳಿ ಉಡುಪಿಯಲ್ಲಿ ಸೆಪ್ಟೆಂಬರ್ 21ರಂದು ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ತಂಡವು 2 ದಿನ ವೇಷ ಧರಿಸಿದ ಬಂದ ಹಣವನ್ನು ವಿದ್ಯೆಗಾಗಿ ಸಹಾಯ ನಿಧಿ ಹಸ್ತಾಂತರ ಕಾರ್ಯಕ್ರಮದ ಮೂಲಕ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನುಮಲಬಾರ್ ಶಾಖಾ ಮುಖ್ಯಸ್ಥ ಹಪೀಜ್ ರೆಹಮಾನ್ ವಹಿಸಿದ್ದರು. ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆ ಉಡುಪಿ ಮುಖ್ಯ ಶಿಕಕ್ಷಕಿ ಸುಜಾತ ಶೆಟ್ಟಿ, ಜಿಲ್ಲಾ ತರಬೇತಿ ಆಯುಕ್ತರಾದ ಆನಂದ್ ಬಿ ಅಡಿಗ, ರಾಜ್ಯ ಸಹಾಯಕ ಸಂಘಟನ ಆಯುಕ್ತಾದ ಸುಮನ್ ಶೇಖರ್, ಕೆವಿಎಸ್ಎಮ್ ಕಾಲೇಜಿನ ಪ್ರವೀಣ್ ಆಚಾಯ೯ , ಎಸ್ ವಿ ಎಸ್ ಪದವಿ ಪೂರ್ವ ಕಾಲೇಜು, ವಿದ್ಯಾ ಲಕ್ಷ್ಮೀ ಗ್ರೂಪ್ ಆಫ್ ಎಜುಕೇಶನ್ ಇನ್ಸ್ಟಿಟ್ಯೂಟ್, ವೈಕುಂಠ ಬಾಳಿಗ ಕಾನೂನು ವಿದ್ಯಾಲಯದ ಉಪನ್ಯಾಸಕರು ಹಾಗೂ ವಿವಿಧ ಸಂಸ್ಥೆಗಳ ಪಧಾದಿಕಾರಿಗಳು ಭಾಗವಹಿಸಿದ್ದರು.

ಈ ಸಂಧಭ೯ದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ದಾನಿಗಳ ಸಮುಖದಲ್ಲಿ ವಿದ್ಯಾರ್ಥಿಗಳಾದ ಕಮಲಾ ಪಿ ಐತಾಳ್ ಹಂಗಾರಕಟ್ಟೆ, ಅವಿನಾಶ್ ಮೂಡು ಅಲೆವೂರು, ವಿನೀಶ್ ಎಸ್ ಸಂತೆಕಟ್ಟೆ ಹಾಗೂ ಹೃದಯದ ಶಸ್ತ್ರ ಚಿಕಿತ್ಸೆ ಮಾಡಲು ಇರುವ 2 ವಷ೯ 7 ತಿಂಗಳಿನ ಮಗು ಪೀಯುಷ್ ಕುಮಾರ್ ಹಂಪನಕಟ್ಟೆ . ಪ್ರತಿ ಒಬ್ಬರಿಗೆ ತಲಾ 10 ಸಾವಿರ ರೂಪಾಯಿ ಚೆಕ್ ವಿತರಿಸಲಾಯಿತು.
ಶಮಿ೯ನಾ ಬಾನು ಕಾರ್ಯಕ್ರಮ ನಿರೂಪಿಸಿದರು. ಅಮೃತ್ ಸ್ವಾಗತಿಸಿದರು. ಹಿತೇಶ್ ಆರ್ ಶೆಟ್ಟಿ ಪ್ರಸ್ತಾವನೆಗೈದರು. ಸೃಜನ್ ಎಸ್ ಶೇರಿಗಾರ್ ವಂದಿಸಿದರು . ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ತಂಡದ ಸೃಜನ್ ಎಸ್ ಶೇರಿಗಾರ್ , ಅನುರೂಪ್,ರಾಜೇ ಸಾಬ್, ರೋಯ್ಸ್ಟಾನ್, ಹಿತೇಶ್, ಲತೇಶ್, ಚೇತನ್, ಅಮೃತ್, ಅಶೀಶ್, ಶ್ರೇಯಸ್ಸ್ , ತರುಣ್, ಅಕ್ಷಯ್ ಭಟ್, ಪ್ರಪುಲ್, ಶ್ರೇಯಸ್ಸ್ ಶೇರಿಗಾರ್, ಆಯುಷ್, ಆಧಿ ಆಚಾಯ೯, ದಶ೯ನ್, ಅಕ್ಷಯ್, ಸವೆ೯ಶ್, ಸುಕೇತ್ ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಮೂಡುಬೆಳ್ಳೆ ಘಟಕ : ಶ್ರೀ ಸತ್ಯನಾರಾಯಣ ಪೂಜೆ-ಶ್ರೀ ಶಾರದಾ ಪೂಜೆ, ಮಹಾ ಚಂಡಿಕಾಯಾಗ

Posted On: 23-09-2022 10:39PM
ಕಾಪು : ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಮೂಡುಬೆಳ್ಳೆ ಘಟಕದ ವತಿಯಿಂದ ಅಕ್ಟೋಬರ್ 04, ಮಂಗಳವಾರ ಬೆಳ್ಳೆ ಗೀತಾ ಮಂದಿರದಲ್ಲಿ ವೇದಮೂರ್ತಿ ಬಿ ಗಣೇಶ್ ಭಟ್ ಇವರ ನೇತೃತ್ವದಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ-ಶ್ರೀ ಶಾರದಾ ಪೂಜೆ, ಮಹಾ ಚಂಡಿಕಾಯಾಗ ನಡೆಯಲಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ ಬೆಳಿಗ್ಗೆ 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವಿಶ್ವಹಿಂದೂಪರಿಷತ್ ನ ಶಿರ್ವ ವಲಯದ ಅಧ್ಯಕ್ಷರಾದ ವಿಖ್ಯಾತ ಭಟ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.