Updated News From Kaup
ಕಾಪು : ಕಲ್ಲಿದ್ದಲು ಸಾಗಾಟದ ಟ್ರಕ್ನಲ್ಲಿ ಆಕಸ್ಮಿಕ ಬೆಂಕಿ ; ತಪ್ಪಿದ ಭಾರಿ ಅವಘಡ
Posted On: 18 Oct 2022, 10:35 AM
ಕಾಪು : ಮಂಗಳೂರು ಬಂದರ್ನಿಂದ ಮುನವಳ್ಳಿಗೆ ಕಲ್ಲಿದ್ದಲು ಸಾಗಾಟ ಮಾಡುತ್ತಿದ್ದ ಟ್ರಕ್ಗೆ ಸೋಮವಾರ ತಡರಾತ್ರಿ ಕಾಪುವಿನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಸಿಬಂದಿಗಳ ಸಕಾಲಿಕ ಕಾರ್ಯಾಚರಣೆಯಿಂದಾಗಿ ಭಾರಿ ಅವಘಡವೊಂದು ತಪ್ಪಿದಂತಾಗಿದೆ. ಟ್ರಕ್ನಲ್ಲಿ ತುಂಬಿದ್ದ ಕಲ್ಲಿದ್ದಲ್ಲಿನಲ್ಲಿ ಘರ್ಷಣೆಯುಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು ಟ್ರಕ್ ಚಾಲಕ ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಉಡುಪಿ ಅಗ್ನಿಶಾಮಕದಳಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಟ್ರಕ್ನ ಮೇಲೇರಿ ಹೊಗೆಯನ್ನು ಸಂಪೂರ್ಣವಾಗಿ ನಂದಿಸುವ ಮೂಲಕ ಮುಂದೆ ಸಂಭವಿಸಬಹುದಾಗಿದ್ದ ಭಾರೀ ಅವಘಡವೊಂದನ್ನು ತಪ್ಪಿಸಿದ್ದಾರೆ.
ಇನ್ನಂಜೆ : ಶ್ರೀ ವಿಠೋಭ ಭಜನಾ ಮಂಡಳಿ ಗೋಳಿಕಟ್ಟೆ - ನೂತನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳ ಆಯ್ಕೆ
Posted On: 17 Oct 2022, 08:01 PM
ಇನ್ನಂಜೆ : ಕಾಪು ತಾಲೂಕಿನ ಶ್ರೀ ವಿಠೋಭ ಭಜನಾ ಮಂಡಳಿ ಗೋಳಿಕಟ್ಟೆ ಇನ್ನಂಜೆ ಇದರ 2022 ರಿಂದ 2024 ರ ಸಾಲಿನ ನೂತನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಇನ್ನಂಜೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ರಾಘವೇಂದ್ರ ಕುಲಾಲ್, ಉಪಾಧ್ಯಕ್ಷರಾಗಿ ಸಂತೋಷ್ ಕುಲಾಲ್, ಕಾರ್ಯದರ್ಶಿಯಾಗಿ ಅಶೋಕ್ ಕುಲಾಲ್, ಕೋಶಾಧಿಕಾರಿಯಾಗಿ ವಿಶ್ವನಾಥ ಕುಲಾಲ್ ಗೋಳಿಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ ಕುಲಾಲ್ ಗೋಳಿಕಟ್ಟೆ ಆಯ್ಕೆಯಾದರು.
ಬೆಳ್ಮಣ್ : ಕೃಷಿ ರತ್ನ - 2022 ಪ್ರಶಸ್ತಿ ಪುರಸ್ಕೃತರಾದ ಕಾಪುವಿನ ಶಾರದೇಶ್ವರಿ ಗುರ್ಮೆ
Posted On: 17 Oct 2022, 07:50 PM
ಬೆಳ್ಮಣ್ : ಜೇಸಿಐ ಇಂಡಿಯ ವಲಯದ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕೃಷಿ ರತ್ನ - 2022 ಪ್ರಶಸ್ತಿಯನ್ನು ಅಕ್ಟೋಬರ್ 16ರಂದು ಬೆಳ್ಮಣ್ ನಲ್ಲಿ ಜರಗಿದ ವಲಯ 15ರ ವ್ಯವಹಾರ ಸಮ್ಮೇಳನ 'ಸಂಚಲನ' ಸಾಧಕರ ಸಮಾಗಮ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಜೇಸಿಐ ಕಾಪುವಿನ ಶಾರದೇಶ್ವರಿ ಗುರ್ಮೆ ಅವರಿಗೆ ನೀಡಿ ಗೌರವಿಸಲಾಯಿತು. ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶಾರದೇಶ್ವರಿಯವರು ಸಾವಯವ ಕೃಷಿ ಪದ್ಧತಿಯ ಮೂಲಕ ಭತ್ತದ ಬೇಸಾಯ ಮಾಡುತ್ತಿರುವುದಲ್ಲದೆ, ತೆಂಗು ಮತ್ತು ಅಡಿಕೆ ಕೃಷಿಯಲ್ಲಿಯೂ ತೊಡಗಿಸಿಕೊಂಡು ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ಘಟಕವನ್ನು ಸ್ಥಾಪಿಸಿ ಕೃಷಿಗೆ ಬೇಕಾದ ಗೊಬ್ಬರವನ್ನೂ ತಯಾರಿಸುತ್ತಿದ್ದಾರೆ. ವಿವಿಧ ಬಗೆಯ ತರಕಾರಿಗಳನ್ನು, ವಿವಿಧ ಹಣ್ಣಿನ ಗಿಡಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸುವ ಹವ್ಯಾಸವನ್ನು ಹೊಂದಿರುವ ಇವರು ಅತ್ಯುತ್ತಮ ಕೃಷಿಕರಾಗಿದ್ದಾರೆ. ಜೇಸಿಐ ಸಂಸ್ಥೆ, ಇನ್ನಿತರ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬಂಟಕಲ್ಲು : ಆರ್ಎಸ್ಬಿ ಯುವವೃಂದದಿಂದ ಧಾರ್ಮಿಕ ಕಾರ್ಯಕ್ರಮ ; ಸಾಧಕರಿಗೆ ಸನ್ಮಾನ
Posted On: 17 Oct 2022, 06:34 PM
ಬಂಟಕಲ್ಲು : ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವೀ ಸನ್ನಿಧಿಯಲ್ಲಿ ರಾಜಾಪುರ ಸಾರಸ್ವತ ಯುವವೃಂದ ಇದರ ಆಶ್ರಯದಲ್ಲಿ ಅಕ್ಟೋಬರ್ 16ರಂದು 26ನೇ ವರ್ಷದ ದುರ್ಗಾಹೋಮ ಸೇವೆ, ಧಾರ್ಮಿಕ ಅನುಷ್ಠಾನಗಳು ಕಾರ್ಯಕ್ರಮ ಜರಗಿತು. ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಇದರ ಸದಸ್ಯ ಸದಾಶಿವ ಪ್ರಭು ಎಳ್ಳಾರೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ್ ಪ್ರಭು ಗಂಪದಬೈಲು, ನೀರೆ ಗ್ರಾ,ಪಂ.ಅಭಿವೃದ್ಧಿ ಅಧಿಕಾರಿ ಅಂಕಿತಾ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ವೈಧ್ಯಾಧಿಕಾರಿ ಡಾ.ಮಧುಸೂದನ ನಾಯಕ್, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ದಿನೇಶ್ ನಾಯಕ್ ಮುದರಂಗಡಿ, ಪಿಎಚ್ಡಿ ಗೌರವ ಸಾಧಕ ಪ್ರೊ. ವಿಠಲ್ ನಾಯಕ್, ಪುರಾತತ್ವ ಸಂಶೋಧಕ ಸುಭಾಷ್ ನಾಯಕ್ ಬಂಟಕಲ್ಲು, ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಫರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವೃಂದದ ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ ವಹಿಸಿದ್ದರು. ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿಕಾ ಪಾಟ್ಕರ್ ಪ್ರಾರ್ಥಿಸಿದರು. ದೇವದಾಸ್ ಪಾಟ್ಕರ್ ಮುದರಂಗಡಿ, ರಾಮದಾಸ್ ಪ್ರಭು ನಿರೂಪಿಸಿದರು. ಕಾರ್ಯದರ್ಶಿ ಅನಂತರಾಮ ವಾಗ್ಲೆ ವಂದಿಸಿದರು.
ಸಮಾನ ಮನಸ್ಕರ ತಂಡದಿಂದ ಉಚ್ಚಿಲದ ಅಶಕ್ತ ಕುಟುಂಬಕ್ಕೆ ನೂತನ ಗೃಹ ಹಸ್ತಾಂತರ
Posted On: 17 Oct 2022, 05:50 PM
ಉಚ್ಚಿಲ : ಸಮಾಜ ಸೇವಕ ಕಟಪಾಡಿ ಶಶಿಧರ್ ಪುರೋಹಿತ್ ನೇತೃತ್ವದ ಸಮಾನ ಮನಸ್ಕರ ತಂಡದ ೧೩ನೇ ಯೋಜನೆಯಡಿ ಬಡ-ಅಶಕ್ತರಾದ ಉಚ್ಚಿಲ ಪೊಲ್ಯದ ಪ್ರೇಮಾ ಆಚಾರ್ಯ ಮತ್ತು ಪುತ್ರಿ ಪ್ರೀತಿಕಾ ಅವರ ವಾಸ್ತವ್ಯಕ್ಕೆ ೬ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಗೃಹವನ್ನು ರವಿವಾರ ಸಂಜೆ ಹಸ್ತಾಂತರಿಸಲಾಯಿತು. ಗಣ್ಯರ ಸಮ್ಮುಖದಲ್ಲಿ ಮನೆಯನ್ನು ಹಸ್ತಾಂತರಿಸಿ ಶುಭ ಸಂದೇಶ ನೀಡಿದ ಕಟಪಾಡಿ ಶಶಿಧರ್ ಪುರೋಹಿತ್ ಅವರು, ಸಮಾನ ಮನಸ್ಕರ ತಂಡದ ಮೂಲಕ ಸಮಾಜದ ಸುಪ್ತವಾಗಿರುವ ಶ್ರೇಷ್ಠ ವ್ಯಕ್ತಿತ್ವವು ಅನಾವರಣಗೊಳ್ಳುತ್ತಿದೆ. ಗೃಹ ನಿರ್ಮಾಣ ಮತ್ತು ನವೀಕರಣ ಸಮಿತಿಯ ೪೯ ಜನರ ತಂಡದಿಂದ ಈ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಗಿದ್ದು, ತಂಡದ ಸಮಸ್ತರ ತ್ಯಾಗ, ಪರಿಶ್ರಮವನ್ನು ಶ್ಲಾಘಿಸಿದರು. ಸ್ಥಳೀಯ ಪ್ರಮುಖರಾದ ಶಾಂತಮೂರ್ತಿ ಭಟ್ ಉಚ್ಚಿಲ, ಸಮಾನ ಮನಸ್ಕರ ತಂಡದ ಶಿಲ್ಪಿ ಮಾಧವ ಆಚಾರ್ಯ ಪುತ್ತೂರು, ಪಡು ಕುತ್ಯಾರು ಸದಾಶಿವ ಎ. ಆಚಾರ್ಯ, ಡಾ| ಪ್ರತಿಮಾ ಜೆ. ಆಚಾರ್ಯ ಮಣಿಪಾಲ, ನಿವೃತ್ತ ಯೋಧ ವಾದಿರಾಜ ಆಚಾರ್ಯ ಅಲೆವೂರು, ಕಾಂತಿ ಸುಬ್ರಹ್ಮಣ್ಯ ಆಚಾರ್ಯ ವೇದಿಕೆಯಲ್ಲಿದ್ದರು. ಈ ಸಂದರ್ಭ ಸಮಾನ ಮನಸ್ಕ ತಂಡದ ಸದಸ್ಯರು ಉಪಸ್ಥಿತರಿದ್ದರು. ಬಿಳಿಯಾರು ರಾಜೇಶ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಯಜ್ನನಾಥ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ವಿಠ್ಠಲ ಆಚಾರ್ಯ ಪಣಿಯೂರು ವಂದಿಸಿದರು.
ತೆಂಕ ಎರ್ಮಾಳು : ಕಳ್ಳತನ ಮಾಡಿ ಸ್ಕೂಟರ್ ಬಿಟ್ಟು ಪರಾರಿಯಾದ ಕಳ್ಳ
Posted On: 16 Oct 2022, 08:10 PM
ಎರ್ಮಾಳು : ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೊಯ್ದ ಘಟನೆ ಭಾನುವಾರ ಬೆಳಗ್ಗಿನ ಜಾವ ಸಂಭವಿಸಿದೆ. ತೆಂಕ ಎರ್ಮಾಳು ಅಯೆಶಾ ಇಬ್ರಾಹಿಂರವರ ಬಾಡಿಗೆ ರೂಮ್ ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್ ಗೆ ಬೀಗ ಹಾಕಿ ಊರಿಗೆ ತೆರಳಿದ್ದರು. ಭಾನುವಾರ ಮುಂಜಾನೆ 5:30ರ ಸುಮಾರಿಗೆ ಮನೆಗೆ ಬಂದಾಗ, ಮಂದ ಬೆಳಕಿನಲ್ಲಿ ಮನೆ ಮುಂದೆ ವ್ಯಕ್ತಿಯೊಬ್ಬರು ನಿಂತಿದ್ದು, ಇವರನ್ನು ಕಂಡು ತಾನು ತಂದಿದ್ದ ಸ್ಕೂಟರ್ ಬಿಟ್ಟು ಪಲಾಯನ ಮಾಡಿದ್ದಾನೆ. ರೂಮ್ ನ ಬಾಗಿಲು ತೆರೆದುಕೊಂಡಿದ್ದು ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಸಣ್ಣ ಪುಟ್ಟ ಮಕ್ಕಳ ಆಭರಣ ಸಹಿತ ಇಪ್ಪತ್ತು ಸಾವಿರ ನಗದು, ಹೊಸ ಪಾತ್ರೆಗಳು ಸುಮಾರು ಅರವತ್ತು ಕೆ.ಜಿಯಷ್ಟಿದ್ದ ಅಕ್ಕಿ ನಾಪತ್ತೆಯಾಗಿತ್ತು. ಈ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಠಾಣಾ ಕ್ರೈಂ ಎಸ್ಸೈ ಪ್ರಕಾಶ್ ತಂಡ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ ಆಗಮಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಪೋಲಿಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 18ರ ಟೋಲ್ ತೆರವು ಹೋರಾಟಕ್ಕೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿದೆ - ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿ
Posted On: 16 Oct 2022, 05:05 PM
ಕಾಪು : ರಾಷ್ಟ್ರೀಯ ಹೆದ್ದಾರಿಯ ಹತ್ತು ಕಿಲೋಮೀಟರ್ ಅಂತರದಲ್ಲಿ ಎರಡು ಕಡೆ ಟೋಲ್ ಸಂಗ್ರಹಿಸುವುದು ಕಾನೂನು ಬಾಹಿರ ಎಂದು ಸಂಸತ್ತಿನಲ್ಲಿ ಘೋಷಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮೂರು ತಿಂಗಳೊಳಗೆ ಸುರತ್ಕಲ್ ಟೋಲ್ ಗೇಟ್ ಮುಚ್ಚಿಸುವುದಾಗಿ ಆಶ್ವಾಸನೆ ನೀಡಿದರೂ, ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ರಾಜ್ಯದಲ್ಲಿ 18 ಇಂತಹ ಅಕ್ರಮ ಟೋಲ್ಗಳಿದ್ದು ಸುರತ್ಕಲ್ ಟೋಲ್ ಗೇಟ್ ಇದರಲ್ಲಿ ಸೇರಿದೆ. ಅಕ್ಟೋಬರ್ 18ರಂದು ಟೋಲ್ ತೆರವು ಮಾಡಲು ಹೋರಾಟ ಸಮಿತಿ ನಿರ್ಧರಿಸಿದ್ದು ಕಳೆದ ಆರು ವರ್ಷಗಳಲ್ಲಿ ಟೋಲ್ ಗೇಟ್ ತೆರವಿನ ಹಲವು ಭರವಸೆಗಳು ನೀಡಲಾಗಿದೆ. ಕಳೆದ ಆರು ತಿಂಗಳಲ್ಲಿ ಸರಕಾರದ ಹಲವು ವೇದಿಕೆ,ಮತ್ತು ವಿಧಾನಸಭೆಯಲ್ಲೂ ತಿಂಗಳೊಳಗೆ ಟೋಲ್ ಗೇಟ್ ತೆರವು ಎಂಬ ಹೇಳಿಕೆಗಳು ಹೊರಬಿದ್ದಿದೆ ಅವು ಯಾವುದೇ ಜಾರಿಗೆ ಬರಲಿಲ್ಲ. ಈಗಿನ ಭರವಸೆಯು ಜಾರಿಗೆ ಬರುತ್ತದೆ ಎಂಬ ವಿಶ್ವಾಸ ಜನತೆಗಿಲ್ಲ ಸುಂಕ ಸಂಗ್ರಹ ಸ್ಥಗಿತಗೊಳ್ಳದೆ ಹೋರಾಟ ನಿಲ್ಲುವುದಿಲ್ಲ. ಅಕ್ಟೋಬರ್ 18ರಂದು ಟೋಲ್ ತೆರವು ಹೋರಾಟಕ್ಕೆ ಉಡುಪಿ ಜಿಲ್ಲೆಯ ಜನತಾದಳ (ಜಾತ್ಯತೀತ) ಪಕ್ಷದ ಸಂಪೂರ್ಣ ಬೆಂಬಲವಿದೆಯೆಂದು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿ, ರಾಜ್ಯ ಕಾರ್ಯದರ್ಶಿಯಾದ ಸುಧಾಕರ ಶೆಟ್ಟಿ ಹೆಜಮಾಡಿ ಮತ್ತು ಜೆಡಿಎಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಜಯರಾಮ ಆಚಾರ್ಯಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಪು ಬೀಚ್ ನ ನೂತನ ಸಿಬ್ಬಂದಿ ಕಚೇರಿ ಉದ್ಘಾಟನೆ
Posted On: 16 Oct 2022, 12:55 PM
ಕಾಪು : ಇಲ್ಲಿನ ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಕಾಪು ಬೀಚ್ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಬೀಚ್ ಸಿಬ್ಬಂದಿ ಕಚೇರಿಯನ್ನು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಿತಿನ್ ಕುಮಾರ್, ಅನಿಲ್ ಕುಮಾರ್, ನವೀನ್ ಅಮೀನ್, ಲಾಲ್ ಬಹಾದ್ದೂರ್ ಶಾಸ್ತ್ರೀ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಅಧ್ಯಕ್ಷ ಶೀಲಾರಾಜ್ ಪುತ್ರನ್, ಕಾಪು ಮೊಗವೀರ ಮಹಾಸಭಾ ಮಾಜಿ ಅಧ್ಯಕ್ಷ ಮೋಹನ್ ಬಂಗೇರ ಸ್ಥಳೀಯ ಮುಖಂಡರಾದ ಪ್ರವೀಣ್ ಪೂಜಾರಿ, ಆನಂದ್ ಶ್ರೀಯಾನ್, ಸಂತೋಷ್ ಶ್ರೀಯಾನ್, ಉದ್ಯಮಿ ಮಹಮ್ಮದ್ ಆಲಿ ಹಾಗೂ ಬೀಚ್ ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು.
ಶಿರ್ವ : ಅಂತರಾಷ್ಟ್ರೀಯ ಮಟ್ಟದ ಇಂಡೋ ನೇಪಾಳ ಥ್ರೋಬಾಲ್ ಚಾಂಪಿಯನ್ಶಿಪ್ ಗೆ ಆಯ್ಕೆಯಾದ ಶಮಿತಾ ಪೂಜಾರಿ
Posted On: 15 Oct 2022, 06:29 PM
ಶಿರ್ವ : ನೇಪಾಳದ ಪೋಕಾರದಲ್ಲಿ ನವೆಂಬರ್ 12 ರಿಂದ 14 ರವರೆಗೆ ನಡೆಯುವ ಅಂತರಾಷ್ಟ್ರೀಯ ಮಟ್ಟದ ಇಂಡೋ ನೇಪಾಳ ಥ್ರೋಬಾಲ್ ಚಾಂಪಿಯನ್ಶಿಪ್ಗೆ ರಯಿಸ್ ಥ್ರೋಬಾಲ್ ಅಕಾಡೆಮಿ ವತಿಯಿಂದ ಶಿರ್ವ ಗ್ರಾಮದ ಭಟ್ರ ನಿವಾಸಿ ಶಮಿತಾ ಪೂಜಾರಿ ಇವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಇವರು ಶಿರ್ವದ ಶಂಕರ ಪೂಜಾರಿ ಹಾಗೂ ಶಾರದಾ ದಂಪತಿಗಳ ಮಗಳು.
ಹುಲಿವೇಷ, ಮರಕಾಲು ಕುಣಿತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಅಂತ್ರ ಆನಂದ್ ಕೋಟ್ಯಾನ್
Posted On: 14 Oct 2022, 11:48 PM
ಉಡುಪಿ : ನ್ಯಾಷನಲ್ ಪರ್ಫಾಮಿಂಗ್ ಆರ್ಟ್ಸ್ ಚಾಂಪಿಯನ್ ಶಿಪ್ ಮಹಾರಾಷ್ಟ್ರ - 2022 ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹುಲಿವೇಷ ಧರಿಸಿ, ಮರಕಾಲು ಕುಣಿತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಂತ್ರ ಆನಂದ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಕೊರಂಗ್ರಪಾಡಿಯ ಆನಂದ್ ಕೋಟ್ಯಾನ್ ಮತ್ತು ತನುಜಾ ಕೋಟ್ಯಾನ್ ದಂಪತಿಗಳ ಪುತ್ರಿಯಾದ ಈಕೆ ಉಡುಪಿ ಸೈಂಟ್ ಸಿಸಿಲಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ.
