Updated News From Kaup
ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆಯ ಉದ್ಘಾಟನೆ
Posted On: 06 Nov 2022, 07:26 PM
ಉಡುಪಿ : ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇದರ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ವಾಯ್ಸ್ ಆಫ್ ಚಾಣಕ್ಯ 2022 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಉಡುಪಿ ಸೃಷ್ಟಿ ಸಂಗೀತ ತರಬೇತಿ ಕೇಂದ್ರದಲ್ಲಿ ರವಿವಾರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸೃಷ್ಟಿ ಸಂಗೀತ ತರಬೇತಿ ಕೇಂದ್ರದ ಆಡಳಿತ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ವಹಿಸಿದ್ದರು. ಸಮಾರಂಭದಲ್ಲಿ ಚಿತ್ರಕಲಾ ಶಿಕ್ಷಕ ರಮೇಶ್ ಕಿದಿಯೂರು, ತೀರ್ಪುಗಾರರಾದ ಸಂಗೀತ ಶಿಕ್ಷಕಿ ಸ್ವಾತಿ ಭಟ್ ಉಡುಪಿ, ಜಯಶ್ರೀ ಕೋಟ್ಯಾನ್ ಕಟಪಾಡಿ, ಸೃಷ್ಟಿ ಫೌಂಡೇಶನ್ ನ ಅಧ್ಯಕ್ಷೆ ಪ್ರೀತಿ ಪಿ.ಸುವರ್ಣ, ಎಸ್ ಪಿ ಮ್ಯೂಸಿಕ್ ನ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ಮಟ್ಟಾರುವಿನಲ್ಲಿ ಜರಗಲಿರುವ ಹಿಂದೂ ಸಮಾಜೋತ್ಸವದ ಪ್ರಚಾರ ಸ್ಟಿಕರ್ ಬಿಡುಗಡೆ
Posted On: 06 Nov 2022, 06:44 PM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ನವೆಂಬರ್ 27 ರಂದು ಮಟ್ಟಾರ್ ನಲ್ಲಿ ಜರಗಲಿರುವ ಹಿಂದೂ ಸಮಾಜೋತ್ಸವದ ಪ್ರಚಾರ ಸ್ಟಿಕರ್ ಬಿಡುಗಡೆ ಇಂದು ನಡೆಯಿತು. ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ಪ್ರಚಾರ ಸ್ಟಿಕರ್ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಿಶ್ವ ಹಿಂದೂ ಪರಿಷದ್ ಮಟ್ಟಾರು ಉಪಾಧ್ಯಕ್ಷ ಜಗದೀಶ ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು. ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಸಾದ್ ಕುತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಟ್ಟಿಂಗೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವದಾಸ್ ಹೆಬ್ಬಾರ್ ಬೆಳ್ಳೆ ಗ್ರಾಮ ಪಂಚಾಯತ್ ಸದಸ್ಯ ಗುರುರಾಜ ಭಟ್, ಬಜರಂಗದಳ ಕಾಪು ಪ್ರಖಂಡ ಸುರಕ್ಷಾ ಪ್ರಮುಖ್ ಆನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಪು : ವಿಶ್ವ ಹಿಂದೂ ಪರಿಷದ್ - ಮಟ್ಟಾರುವಿನಲ್ಲಿ ಹಿತ ಚಿಂತಕ ಅಭಿಯಾನಕ್ಕೆ ಚಾಲನೆ
Posted On: 06 Nov 2022, 06:38 PM
ಕಾಪು : ವಿಶ್ವ ಹಿಂದೂ ಪರಿಷದ್ ನ ಹಿತ ಚಿಂತಕ ಅಭಿಯಾನಕ್ಕೆ ಕಾಪು ತಾಲೂಕಿನ ಮಟ್ಟಾರುವಿನಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬಂಟಕಲ್ಲು ಇದರ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಳೆ, ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಸಾದ್ ಕುತ್ಯಾರು, ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು, ಕಾರ್ಯದರ್ಶಿ ರಾಜೇಂದ್ರ ಶೆಣೈ, ಬಜರಂಗದಳ ಸಹ ಸಂಚಾಲಕ ಪ್ರಸಾದ್ ಅಂಚನ್ ಉಪಸ್ಥಿತರಿದ್ದರು.
ಇನ್ನಂಜೆ : ಸುವರ್ಣಮಹೋತ್ಸವ ಕಟ್ಟಡದ ವಿಜ್ಞಾಪನಾ ಪತ್ರ ಬಿಡುಗಡೆ
Posted On: 06 Nov 2022, 06:31 PM
ಇನ್ನಂಜೆ : ಇಲ್ಲಿನ ಇನ್ನಂಜೆ ಯುವಕ ಮಂಡಲ (ರಿ) ಇದರ ಸುವರ್ಣಮಹೋತ್ಸವ ಕಟ್ಟಡದ ವಿಜ್ಞಾಪನಾ ಪತ್ರವನ್ನು ಸೋದೆ ವಾದಿರಾಜ ಮಠದ ಯತಿಗಳಾದ ವಿಶ್ವವಲ್ಲಭ ತೀರ್ಥರು ಹಾಗೂ ಇನ್ನಂಜೆಯ ಉದ್ಯಮಿ ಗ್ರೇಗೊರಿ ಮಥಾಯಸ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಲಹಾ ಸಮಿತಿಯ ಸದಸ್ಯರುಗಳಾದ ನಂದನ್ ಕುಮಾರ್ ಮತ್ತು ರವಿವರ್ಮ ಶೆಟ್ಟಿ ಮತ್ತು ಯುವಕ ಮಂಡಲದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರುಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾಪು : ಡಿಸೆಂಬರ್ 10 ರಂದು ಪಡುಬೆಳ್ಳೆಯಲ್ಲಿ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆ
Posted On: 05 Nov 2022, 10:10 AM
ಕಾಪು : ಝಿಝೋ ಎಜುಕೇಶನ್ ಅರ್ಪಿಸುವ ಲೆಟ್ಸ್ ನಾಚೊ ಜಿಲ್ಲಾ ಮಟ್ಟದ ಸೊಲೊ ಮತ್ತು ಗುಂಪು ನೃತ್ಯ ಸ್ಪರ್ಧೆ 2022 ಡಿಸೆಂಬರ್ 10, ಶನಿವಾರ ಸಂಜೆ 6 ಗಂಟೆಗೆ ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಜರಗಲಿದೆ. ಗುಂಪು ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 8,000 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 4000 ಮತ್ತು ಟ್ರೋಫಿ, ಎರಡು ಸಮಾಧಾನಕರ ಬಹುಮಾನಗಳು. ಸೋಲೊ ವಿಭಾಗದಲ್ಲಿ 3,000 ನಗದು ಮತ್ತು ಟ್ರೋಫಿ, ದ್ವಿತೀಯ 1,500 ನಗದು ಮತ್ತು ಟ್ರೋಫಿ, ಎರಡು ಸಮಾಧಾನಕರ ಬಹುಮಾನಗಳು ಇರಲಿವೆ. ನೋಂದಣಿ ಮಾಡಲು ಡಿಸೆಂಬರ್ 6 ಕಡೆಯ ದಿನವಾಗಿದ್ದು ಸೊಲೋ ವಿಭಾಗಕ್ಕೆ 200 ರೂ. ಮತ್ತು ಗುಂಪು ವಿಭಾಗಕ್ಕೆ 500 ರೂ. ನೋಂದಣಿ ಶುಲ್ಕ ಇರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7676921592 8746023845
ನವೆಂಬರ್ 6 : ಕಟಪಾಡಿಯ ಸುಭಾಸ್ ನಗರದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ
Posted On: 04 Nov 2022, 03:40 PM
ಕಾಪು : ಕೆನ್-ಈ-ಮಾಬುನಿ ಶಿಟೋ-ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ ಸಂಸ್ಥೆಯ ವತಿಯಿಂದ ಕಟಪಾಡಿ ಸುಭಾಸ್ ನಗರದ ಥಂಡರ್ಸ್ ಗ್ರಾಂಡ್ ಬೇ ಸಭಾಂಗಣದಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಕೂಟ "ಕೊಂಪಿಟ್ -3.0" ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯತೀಶ್ ಶುಕ್ರವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರಾಟೆ ಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಪಡೆಯುವಲ್ಲಿ ಸಹಕಾರಿಯಾಗಲಿದೆ. ಸಂಸ್ಥೆಯ ಗೌರವಾಧ್ಯಕ್ಷರುಗಳಾದ ಯಶ್ಪಾಲ್ ಎ ಸುವರ್ಣ, ನವೀನ್ ಅಮೀನ್ ಶಂಕರಪುರ ಇವರ ಮಾರ್ಗದರ್ಶನದಲ್ಲಿ ಕರಾಟೆ ಶಿಕ್ಷಕ ರವಿ ಸಾಲ್ಯಾನ್ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ಒಂದು ದಿನದ ಪಂದ್ಯಾಕೂಟ ಜರಗಲಿದೆ. ಈ ಪಂದ್ಯಾಕೂಟ ದಲ್ಲಿ ರಾಜ್ಯದ ಅಲ್ಲದೆ ನೆರೆಯ ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕರಾಟೆ ಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಯಶ್ಪಾಲ್ ಎ ಸುವರ್ಣ, ನವೀನ್ ಅಮೀನ್ ಶಂಕರಪುರ, ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ರವಿ ಕೋಟ್ಯಾನ್, ಗೌರವ ಸಲಹೆಗಾರ ರವಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ನವೆಂಬರ್ 6 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರರಿಗೆ ಹುಟ್ಟೂರ ಸನ್ಮಾನ
Posted On: 04 Nov 2022, 02:29 PM
ಕಾಪು : ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಾಪು ತಾಲೂಕಿನ ಮೂಳೂರಿನ ಪಿಲಿ ಕೋಲ ನರ್ತಕರಾದ ಗುಡ್ಡ ಪಾಣಾರ ಅವರಿಗೆ ನವೆಂಬರ್ 6, ಆದಿತ್ಯವಾರದಂದು ಸಂಜೆ ಗಂಟೆ 3:30ಕ್ಕೆ ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇಲ್ಲಿ ಹುಟ್ಟೂರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜಮಾಡಿ ಟೋಲ್ ಸಿಬ್ಬಂದಿಗೆ ಹಲ್ಲೆ, ಬೆದರಿಕೆ
Posted On: 04 Nov 2022, 01:56 PM
ಪಡುಬಿದ್ರಿ : ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಯೋರ್ವರಿಗೆ ಯುವಕರ ಗುಂಪೊಂದು ಎರಡು ಕಾರುಗಳಲ್ಲಿ ಬಂದು ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ. ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಮಟ್ಟಿ ಹೌಸ್ ನಿವಾಸಿ ಸುದೀಶ್ ಜೆ ಶೆಟ್ಟಿ ಇವರು ಹೆಜಮಾಡಿಯ ಟೋಲ್ಗೇಟಿನಲ್ಲಿ ಕೆಲಸ ಮಾಡಿಕೊಂಡಿದ್ದು ಅಕ್ಟೋಬರ್ 30 ರಂದು ರಾತ್ರಿ ಕರ್ತವ್ಯದಲ್ಲಿರುವ ಸಮಯ 11ಗಂಟೆಯ ವೇಳೆಗೆ ಹೆಜಮಾಡಿಯ ಸಂದೇಶ್ ಶೆಟ್ಟಿ, ಮನೋಜ್ ಸುವರ್ಣ, ಶ್ರೇಯಸ್ ದೇವಾಡಿಗ ಮುಕ್ಕ, ಜಯರಾಜ್ ಪೂಜಾರಿ ಹೆಜಮಾಡಿ, ಕೀರ್ತನ್ ಪೂಜಾರಿ ಕೊಪ್ಪಲ ಹೆಜಮಾಡಿ ಹಾಗೂ ಇತರೆ 3 ಜನರು ಎರಡು ಕಾರುಗಳಲ್ಲಿ ಹೆಜಮಾಡಿ ಟೋಲ್ಗೇಟ್ ಬಳಿ ಬಂದು ಸುದೀಶ್ ಜೆ ಶೆಟ್ಟಿ ಯನ್ನು ಏಕಾಏಕಿ ದೂಡಿ ಹಾಕಿ, ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ ಎಂದು ಸುದೀಶ್ ಜೆ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ರಾತ್ರಿ ಸಮಯ ಸುದೀಶ್ ಜೆ ಶೆಟ್ಟಿ ಗೆ ಪೋನ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಪೋನ್ ಕರೆ ಸ್ವೀಕರಿಸದಿದ್ದಾಗ ಮೆಸೇಜ್ಗಳ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರನ್ನು ನೀಡಿದ್ದು ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಡಿಪಿಐ ಕಾಪು ಕ್ಷೇತ್ರದ ನೂತನ ಕಛೇರಿ ಉದ್ಘಾಟನೆ
Posted On: 04 Nov 2022, 11:40 AM
ಕಾಪು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕಾಪು ಕ್ಷೇತ್ರದ ನೂತನ ಕಛೇರಿ ಕಾಪುವಿನ ಹಿರಾ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಂಡಿತು. ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಸಿವು ಮತ್ತು ಭಯ ಮುಕ್ತ ಸ್ವಾತಂತ್ರವೇ ಎಸ್ಡಿಪಿಐ ಪಕ್ಷದ ಉದ್ದೇಶ. ರಾಜಕೀಯದಲ್ಲಿ ನಿರಾಸೆ ಸಲ್ಲದು. ಇಂದಲ್ಲ ನಾಳೆ ಗೆದ್ದೇ ಗೆಲ್ಲುತ್ತೇವೆ ಎಂ ಛಲ ನಮ್ಮಲ್ಲಿದ್ದರೆ, ವಿಜಯ ಪತಾಕೆ ನಮ್ಮದಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ವಹಿಸಿದ್ದರು. ಎಸ್ಡಿಪಿಐ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ, ಹನೀಫ್ ಮೂಳೂರು, ಅಬೂಬಕ್ಕರ್ ಪಾದೂರು, ಅಶ್ರಫ್ ಅಹಮದ್, ಸರಿತಾ, ಮಜೀದ್ ಪೊಲ್ಯ, ನೂರುದ್ದೀನ್ ಕಾಪು, ಆಸಿಫ್ ವೈಸಿ ಉಚ್ಚಿಲ ಹಾಗು ಅಝೀಝ್ ಪಡುಬಿದ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯರೆಡೆಗೆ ನಮ್ಮ ನಡಿಗೆ - ಪಡುಬಿದ್ರಿಯ ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದರಿಗೆ ಸನ್ಮಾನ
Posted On: 03 Nov 2022, 08:56 PM
ಪಡುಬಿದ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಗೀತಾನಂದ ಫೌಂಡೇಶನ್ ಮಣೂರು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 9ನೇ ವರ್ಷದ ಸಂಪದ 2022 ತಿಂಗಳ ಸಡಗರ ಕಾರ್ಯಕ್ರಮದ ಅಂಗವಾಗಿ ಕಾಪು ತಾಲೂಕು ಘಟಕದ ವತಿಯಿಂದ ನವಂಬರ್ 3ರಂದು ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ ಅಂಗವಾಗಿ ಪಡುಬಿದ್ರಿಯ ಪ್ರಗತಿಪರ ಕೃಷಿಕ ಪಿ.ಕೆ.ಸದಾನಂದ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಕೆ. ಸದಾನಂದ ಕೃಷಿಯ ಜೊತೆಗೆ ಮೂರ್ತೆದಾರಿಕೆ, ಹೈನುಗಾರಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದೇನೆ. ನಮ್ಮ ಹಿರಿಯರ ಅನುಭವದ ಪಾಠಗಳು ನಮಗೆ ದಾರಿ ದೀಪವಾಗಿದೆ. ರೈತ ಸಂಘದ ಮೂಲಕ ಹಳ್ಳಿಗಳಲ್ಲಿ ಭೂ ಮಸೂದೆಯ ಬಗ್ಗೆ ಜನರಿಗೆ ತಿಳಿಸುವ ಕಾರ್ಯ, ಮೂರ್ತೆದಾರರ ಸಂಘಟನೆ, ಇತ್ಯಾದಿ ಕಾರ್ಯಗಳಲ್ಲಿ ಭಾಗವಹಿಸಿ, ಸಾಮಾಜಿಕ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಆ ಮೂಲಕ ಹಿಂದಿನಿಂದ ಬಹಳಷ್ಟು ಶ್ರಮವಹಿಸಿ ಕೃಷಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಹಿಂದಿನ ಪೀಳಿಗೆಯ ಅನುಭವಗಳು, ಕಾರ್ಯಗಳು, ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ನಶಿಸಿಹೋಗುತ್ತಿರುವ ಕೃಷಿಯನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿರುವ ಪಿ. ಕೆ. ಸದಾನಂದರು ನಮಗೆಲ್ಲರಿಗೂ ಆದರ್ಶರು. ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಪೀಳಿಗೆಗೆ ಇಂತಹ ಸಾಧಕರನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದರು. ಈ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಾಮಚಂದ್ರ ಅಚಾರ್ಯ ಇವರನ್ನು ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಬೆಂಗಳೂರು ತುಳು ಕೂಟ ಅಧ್ಯಕ್ಷ ದಿನೇಶ್ ಹೆಗ್ಡೆ, ವಿಶು ಕುಮಾರ್ ಶೆಟ್ಟಿ, ಪತ್ರಕರ್ತ ಸಂಘದ ಅಧ್ಯಕ್ಷರಾದ ಸುರೇಶ್ ಎರ್ಮಾಳ್, ಗುರುರಾಜ್ ಪೂಜಾರಿ, ಸುಗಂಧಿ ಶ್ಯಾಮ್, ಕೇಶವ ಅಮೀನ್, ನವೀನ್ ಪೂಜಾರಿ, ಪ್ರಾಣೇಶ್ ಹೆಜಮಾಡಿ, ಭಾಸ್ಕರ, ನೀಲಾನಂದ ನಾಯ್ಕ್, ರಾಜೇಶ್, ಸುಂದರ್, ಸಂಘಟನಾ ಕಾರ್ಯದರ್ಶಿಗಳಾದ ದೀಪಕ್ ಬೀರ, ಕೆ.ಆರ್. ಪಾಟ್ಕರ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷರಾದ ವಿದ್ಯಾಧರ ಪುರಾಣಿಕ್ ವಂದಿಸಿದರು.
