Updated News From Kaup

ಡಿಸೆಂಬರ್ 16,17,18 ರಂದು ಕಾಪು ಕಡಲ ಕಿನಾರೆಯಲ್ಲಿ ಕಡಲ ಐಸಿರ - 2022

Thumbnail
Posted On: 29 Nov 2022, 06:47 PM

ಕಾಪು : ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ (ರಿ.) ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು, ದಿ| ಆರ್ ಡಿ ಮೆಂಡನ್ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ, ಕಾಪು ಇದರ ಸಂಯುಕ್ತ ಆಶ್ರಯದಲ್ಲಿ ಕಾಪು ದೀಪಸ್ಥಂಭದ ಬಳಿ ಕಡಲ ಕಿನಾರೆಯಲ್ಲಿ ಬೀಚ್ ಉತ್ಸವ ಕಡಲ ಐಸಿರ 2022 ಡಿಸೆಂಬರ್ 16,17,18 ರಂದು ಜರಗಲಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷರಾದ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕಾಪುವಿನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಲಾಲ್ ಬಹುದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ಸಂಸ್ಥೆಯ 45ನೇ ವಾರ್ಷಿಕೋತ್ಸವ ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ದಿ. ಆರ್ ಡಿ ಮೆಂಡನ್ ಕಾಪು ಇವರ ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಂಯುಕ್ತ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳು ಕಾಪು ಕಡಲ ಕಿನಾರೆಯಲ್ಲಿ ಜರಗಲಿದೆ. ಈ ಹಿಂದೆ ಕಾರ್ಯಕ್ರಮಗಳನ್ನು ಆಯೋಜಿಸಿದ ತಂಡ ಈ ಬಾರಿ ಆಟದ ಜೊತೆಗೆ, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ಫಲಪುಷ್ಪ ಕಲಾ ಸ್ಪರ್ಧೆ- ಪ್ರದರ್ಶನ, ಫುಡ್ ಫೆಸ್ಟಿವಲ್, ಲೇಸರ್ ಷೋ, ರಸಮಂಜರಿ, ಬಲೆ ಬೀಸಿ ಮೀನು ಹಿಡಿಯುವುದು, ಗಾಳ ಹಾಕಿ ಮೀನು ಹಿಡಿಯುವುದು, ಚೆಂಡೆ ಸ್ಪರ್ಧೆ, ಬೀಚ್ ವಾಲಿಬಾಲ್ ಸ್ಪರ್ಧೆ, ಮಹಿಳೆಯರಿಗಾಗಿ ತ್ರೋಬಾಲ್, ಸಂಗೀತ ಕುರ್ಚಿ ಇತ್ಯಾದಿ ಸ್ಪರ್ಧೆಗಳು, ಕೊಳಲು ತಬಲ ತಂಡ, ಶ್ವಾನ ಸ್ಪರ್ಧೆ, ಈಜು ಸ್ಪರ್ಧೆ, ಮರಳಿನಲ್ಲಿ ಕಲಾಕೃತಿ, ಹುಟ್ಟು ಧೋನಿ ಸ್ಪರ್ಧೆ, ಗಾಳಿಪಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಇದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದವರಿಗೆ ನಗದು ಬಹುಮಾನ ಇದೆ ಎಂದರು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಶೀಲರಾಜ್ ಪುತ್ರನ್, ಉಪಾಧ್ಯಕ್ಷರಾದ ಆನಂದ ಶ್ರೀಯಾನ್, ಕಾರ್ಯದರ್ಶಿ ಸಚಿನ್ ಪುತ್ರನ್, ಕೋಶಾಧಿಕಾರಿ ಕುಶ ಸಾಲ್ಯಾನ್, ದಿನೇಶ್ ಸುವರ್ಣ, ನಿತೇಶ್ ಸುವರ್ಣ, ರಾಜೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಕಟಪಾಡಿ : ಏಣಗುಡ್ಡೆ ಶ್ರೀ ಶಿವಾನಂದ ಭಜನಾ ಮಂಡಳಿಯ 76ನೇ ವಾರ್ಷಿಕ ಮಂಗಳೋತ್ಸವ

Thumbnail
Posted On: 29 Nov 2022, 02:57 PM

ಕಟಪಾಡಿ : ಇಲ್ಲಿನ ಏಣಗುಡ್ಡೆ ಶ್ರೀ ಶಿವಾನಂದ ಭಜನಾ ಮಂಡಳಿಯ 76ನೇ ವಾರ್ಷಿಕ ಮಂಗಳೋತ್ಸವ ಡಿಸೆಂಬರ್ 3ರಂದು ಜರಗಲಿದೆ. ಆ ಪ್ರಯುಕ್ತ ಅದೇ ದಿನ ಬೆಳಿಗ್ಗೆ ಏಳು ಗಂಟೆಗೆ ಗಣಹೋಮ, ಗಂಟೆ 10ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಗಂಟೆ 12ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6ಕ್ಕೆ ಕಲಶ ಪ್ರತಿಷ್ಠೆಯೊಂದಿಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ಗಂಟೆ 12ಕ್ಕೆ ಮಂಗಳೋತ್ಸವ ನೆರವೇರಲಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ಚಂಪಾ ಷಷ್ಠಿ - ಸುಬ್ರಹ್ಮಣ್ಯ ಷಷ್ಠಿ : "ನಾಗ - ಸುಬ್ರಹ್ಮಣ್ಯ" ಸಮೀಕರಣ ಒಂದು ವಿಶ್ಲೇಷಣೆ

Thumbnail
Posted On: 28 Nov 2022, 09:55 PM

ಆದಿಮ - ವೈದಿಕ ವಿಚಾರಧಾರೆಗಳು ಒಂದಕ್ಕೊಂದು ಪೂರಕವಾಗಿದ್ದುವುಗಳಾಗಿದ್ದುದರಿಂದಲೇ ಅಥವಾ ಆದಿಮದ ಮುಂದುವರಿದ ಭಾಗವಾಗಿ ವೈದಿಕವು ಪಡಿಮೂಡಿರುವುದರಿಂದಲೇ ನಮ್ಮ ಸಂಸ್ಕೃತಿಯಲ್ಲಿ ಸಾವಿರಾರು ದೈವಗಳು - ಕೋಟಿ ಸಂಖ್ಯೆಯ ದೇವತೆಗಳು - ದೇವರುಗಳಿದ್ದರೂ ಗೊಂದಲವಿಲ್ಲ.ಸರ್ವ ಆಶೋತ್ತರಗಳ ಈಡೇರಿಕೆಗೆ ಒಂದೇ ದೇವರಿಗೆ ಶರಣಾಗುವ ಜಾಯಮಾನ ನಮ್ಮದಲ್ಲ.ನಮ್ಮಲ್ಲಿ‌ ಒಂದೊಂದು ಅನುಗ್ರಹಕ್ಕೆ ಒಬ್ಬೊಬ್ಬ ದೇವರಂತೆ ಆರಾಧಿಸುತ್ತೇವೆ. ಈ‌ದೇವರುಗಳ ಸಂದಣಿಯಲ್ಲಿ‌ ತಾಯಿಯಾಗಿ ರಕ್ಷಿಸುವ ,ತಂದೆಯಾಗಿ ಕರುಣೆತೋರುವ, ಸಂಪತ್ತನ್ನು‌ಕೊಡುವ, ವಿಘ್ನಗಳನ್ನು‌ನಿವಾರಿಸಿ ಬದುಕನ್ನು ನಿರಾಳವಾಗಿಸುವ,ದುಷ್ಟಾರಿಷ್ಟಗಳನ್ನು ಪರಿಹರಿಸುವವರು ಇದ್ದಾರೆ.ಮಾನವ ಬದುಕಿನ‌ ಪರಮ ಲಕ್ಷ್ಯ ಸುಖ, ಸಮೃದ್ಧಿ ಹಾಗೂ ಭಾರತೀಯ ತತ್ತ್ವಜ್ಞಾನದಂತೆ ಸತ್ ಸಂತಾನ ಪ್ರಾಪ್ತಿ, ಮಕ್ಕಳಿಲ್ಲದವನ ಬದುಕು ಸಾರ್ಥಕವಾಗಲಾರದು‌ ಆದುದರಿಂದಲೇ ಈ ಅನುಗ್ರಹ ಶಕ್ತಿಯನ್ನು ಹೊಂದಿರುವ ದೇವರು ಬಹುಮಾನ್ಯನಾಗಿ ಜನಪ್ರಿಯನಾಗುವುದು ಸಹಜ.ಅದರೊಂದಿಗೆ ಅಕ್ಷಯ ಕೃಷಿಸಂಪತ್ತನ್ನು ನೀಡುವ ,ತೀವ್ರ ವ್ಯಾಧಿಗಳನ್ನು ಗುಣ‌ಪಡಿಸುವ‌ ಅನುಗ್ರಹ ವಿಶೇಷ ‌ಇರುವುದರಿಂದಲೇ ನಾಗ - ಸುಬ್ರಹ್ಮಣ್ಯ ಸಾನ್ನಿಧ್ಯಗಳು ಜನಪ್ರೀತಿ ಪಡೆದುವು. ಸುಬ್ರಹ್ಮಣ್ಯ - ಆರು : • ಸುಬ್ರಹ್ಮಣ್ಯ ಪುರಾಣಗಳು ಹೇಳುವ ಕಥೆಗಳಲ್ಲಿ ಸುರಸೈನ್ಯನಾಥನಾಗಿ,ಪರಾಕ್ರಮಿಯಾಗಿ ,ಅಸುರ ಮರ್ದನನಾದ,ದೇವತೆಗಳನ್ನು ರಕ್ಷಿಸುವ ಮಹಾದೇವನ ಪುತ್ರನಾದ ಷಣ್ಮುಖ,ಇವನ ಜನನವೇ ತಾರಕನೆಂಬ ರಾಕ್ಷಸನ ವಧೆಗಾಗಿ ಸಂಭವಿಸಿತು. • ಕೃತ್ತಿಕೆಯರು ಆರು ಮಂದಿಯಿಂದ ಪೋಷಿಸಲ್ಪಟ್ಟವ ಎಂಬ ಕಾರಣಕ್ಕೆ ಈತ ಕಾರ್ತಿಕೇಯನಂತೆ.ಹೀಗೆ ಆರು ಮುಖದಿಂದ ಪೂಜೆಗೊಳ್ಳುವ ಸುಬ್ರಹ್ಮಣ್ಯನಿಗೂ 'ಆರು' (ಷಟ್) ಅಂಕೆಗೂ ಒಂದು ಅವಿನಾಭಾವ ಸಂಬಂಧ. • ದೇವಿ ಭಾಗವತ ವಿವರಿಸುವಂತೆ 'ಷಷ್ಠೀ' ಎಂಬಾಕೆ ಕುಮಾರ ಸ್ವಾಮಿಯ ಮಡದಿ, 'ಷಷ್ಠೀ ಪ್ರಿಯ'ನೆಂಬುದು ಸುಬ್ರಹ್ಮಣ್ಯನಿಗಿರುವ ಅನ್ವರ್ಥನಾಮ. • ದೇವತೆಗಳಲ್ಲಿ ಶ್ರೇಷ್ಠನೆನಿಸಿ ,ಇಂದ್ರನು ಸೂಚಿಸಿದಂತೆ ದಕ್ಷಬ್ರಹ್ಮನ ಮಗಳಾದ ದೇವಸೇನೆಯನ್ನು ಷಷ್ಠಿ ದಿನದಂದು‌ ಸುಬ್ರಹ್ಮಣ್ಯನು‌ ವರಿಸಿದ ಎಂಬುದು ಒಂದು ಕಥೆ. • ಕಾರಣಾಂತರದಿಂದ ಬ್ರಹ್ಮಶಾಪಕ್ಕೆ ಒಳಗಾಗಿ ಘಟಸರ್ಪನಾದ ಸುಬ್ರಹ್ಮಣ್ಯ .ಈ ಶಾಪ‌ ನಿವೃತ್ತಿಗಾಗಿ ಸುಬ್ರಹ್ಮಣ್ಯನ ಮಾತೆ ಪಾರ್ವತಿ 108 ಷಷ್ಠಿ ದಿನಗಳಲ್ಲಿ ಉಪವಾಸ ವ್ರತವನ್ನು ಆಚರಿಸಲಾಗಿ ವ್ರತ ಉದ್ಯಾಪನೆಯಂದು ಮಹಾ ವಿಷ್ಣುವಿನ‌‌ ಸ್ಪರ್ಶ ಮಾತ್ರದಿಂದ ಸುಬ್ರಹ್ಮಣ್ಯನಿಗೆ‌ ತನ್ನ ಪೂರ್ವದ ಸುಕುಮಾರ ರೂಪ ಮರಳಿ‌ ಪ್ರಾಪ್ತಿಯಾಯಿತಂತೆ ಪ್ರತೀ ಪಕ್ಷದ ಷಷ್ಠಿಯೇ ಪಾರ್ವತಿ ಆಚರಿಸಿದ ವ್ರತದ ದಿನವಾಗಿದ್ದು ಷಷ್ಠಿಗೂ ಸುಬ್ರಹ್ಮಣ್ಯನಿಗೂ‌ ಸಂಬಂಧವಿದೆ. ವಿವಾಹದ ಶುಭ ಸಂದರ್ಭ, ದೇವತೆಗಳಿಗೆ ರಾಕ್ಷಸರ ವಿರುದ್ಧ ಯುದ್ಧದಲ್ಲಿ ವಿಜಯ ಪ್ರಾಪ್ತಿಯಾದ ದಿನ,ಶಾಪ ವಿಮೋಚನೆಯಂತಹ ನಿವೃತ್ತಿಯ ಪುಣ್ಯಕಾಲ,ಸ್ವತಃ ಕೃತ್ತಿಕ್ಕೆಯರಿಗೆ ಬೇಕಾಗಿ ಆರು ಮುಖ ಧರಿಸಿದ ಕುಮಾರನ ಬಾಲ್ಯ‌ಮುಂತಾದ ಸಂದರ್ಭಗಳು ಸುಬ್ರಹ್ಮಣ್ಯ ಷಷ್ಠಿಗಿರುವ ಸಂಬಂಧವನ್ನು ಬೆಸೆಯುತ್ತಾ ಸ್ಕಂದನ‌ ಆರಾಧನೆಗೆ ಷಷ್ಠಿ ಪ್ರಶಸ್ತ ದಿನವಾಗಿ ರೂಢಗೊಂಡಿರಬೇಕೆಂದು‌ ಭಾವಿಸಬಹುದು. ನಾಗ - ಸುಬ್ರಹ್ಮಣ್ಯ : ಉತ್ತರ ಭಾರತದಲ್ಲಿ ಸ್ಕಂದನಾಗಿ ಜನಪ್ರಿಯಗೊಂಡಿದ್ದು ,ತಮಿಳುನಾಡು‌ ಪರಿಸರದಲ್ಲಿ (ದಕ್ಷಿಣಭಾರತದಲ್ಲಿ) ಆದಿಮ‌ ಸಂಸ್ಕೃತಿಯೊಂದಿಗೆ ತನ್ನ ಅಸ್ತಿತ್ವವನ್ನು‌ ತೋರುತ್ತಾ ಕಂದ,ಕುಮಾರ, ಪರಾಕ್ರಮಿ,ಸುಂದರ ಮುಂತಾದ ನೆಗಳ್ತೆವೆತ್ತು‌ ರಸಿಕಾಗ್ರಣಿಯಾಗಿ‌ ,ಸಂತಾನ ಮತ್ತು ಸಮೃದ್ಧಿ ಹಾಗೂ ಸುಖ ದಾಂಪತ್ಯ, ಪ್ರೀತಿಸಿದ ವಧುವಿನೊಂದಿಗೆ ಅಥವಾ ವರನೊಂದಿಗೆ ವಿವಾಹ ಮುಂತಾದ ಅನುಗ್ರಹ ಶಕ್ತಿ ಎಂದೇ‌ ಪರಿಗ್ರಹಿಸಲ್ಪಟ್ಟ ಮೂಲತಃ ಮುರುಗನಾಗಿದ್ದು ಸುಬ್ರಹ್ಮಣ್ಯ ಎಂಬ ವೈದಿಕ ದೇವರ ಸ್ಥಾನಮಾನ ಪಡೆದ ಸ್ಕಂದನ ಮೂಲ‌ - ವಿಕಾಸ - ಪ್ರಸರಣದ ಕುರಿತಾದ ಅಧ್ಯಯನ ರೋಚಕ ವಿವರಗಳನ್ನು ತೆರೆದಿಡುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ನಾಗಾರಾಧನೆಗೆ ಪ್ರಸಿದ್ಧವಾದುದು.ಇಲ್ಲಿರುವಷ್ಟು ನಾಗ‌ ಉಪಾಸನಾ ವೈವಿಧ್ಯಗಳು ಬೇರೆಲ್ಲೂ ಕಾಣಸಿಗದು.ಭೂಮಿ - ಮರ - ನಾಗ ಸಂಬಂಧ ಪುರಾತನವಾದುದು.ಜಿಲ್ಲೆಯ ಸಂಸ್ಕೃತಿಯ ಆರಂಭದಿಂದಲೂ ನಾಗ ಶ್ರದ್ಧೆ - ಪೂಜೆ ವಿವಿಧ ರೋಚಕ ವಿಧಿವಿಧಾನಗಳಿಂದ ನಡೆಯುತ್ತಿರುವುದು ಸಂಶೋಧನೆಗಳಿಂದ ತಿಳಿದ ಸತ್ಯ.ಈ ನಾಗ ಆರಾಧನೆಯ ಮೂಲಕ‌ ಸಂತಾನ,ಕೃಷಿ ಸಮೃದ್ಧಿ,ಚರ್ಮವ್ಯಾಧಿಗಳಿಂದ ನಿವೃತ್ತಿಯಂತಹ ಅನುಗ್ರಹವನ್ನು ಪಡೆಯುತ್ತೇವೆ ಎಂಬುದು‌ ಪ್ರಾಕ್ತನ ನಂಬಿಕೆ. ವೈದಿಕ ವಿಧಾನಗಳು ಧಾರ್ಮಿಕ ಕ್ಷೇತ್ರದಲ್ಲಿ‌ ಪರಿಣಾಮ ಬೀರುತ್ತಾ ಪರಸ್ಪರ ಸಂಲಗ್ನಗೊಳ್ಳುವ ಸಂದರ್ಭದಲ್ಲಿ ಸಮಾನ ಆಶಯ ಹಾಗೂ ಅನುಗ್ರಹ ವಿಶೇಷಗಳುಳ್ಳ ಸುಬ್ರಹ್ಮಣ್ಯ - ನಾಗ ಉಪಾಸನೆ - ಶ್ರದ್ಧೆಗಳು ಸಮೀಕರಣಗೊಂಡುವು ಎಂಬುದು ಉಡುಪಿ - ದಕ್ಷಿಣಕನ್ನಡ ಜಿಲ್ಲೆಗಳ ಸುಬ್ರಹ್ಮಣ್ಯ ಕ್ಷೇತ್ರಗಳ ಸೂಕ್ಷ್ಮ ಅಧ್ಯಯನದಿಂದ ತಿಳಿಯಲಾಗುತ್ತದೆ.ನಾಗ - ಸುಬ್ರಹ್ಮಣ್ಯ ಅಭೇದ ಕಲ್ಪನೆಯಿಂದ ನಾಗನೇ ಸುಬ್ರಹ್ಮಣ್ಯನಾಗಿ , ಸುಬ್ರಹ್ಮಣ್ಯನೇ ನಾಗನಾಗಿ ಪೂಜೆಗೊಳ್ಳುವುದು ಸಾಮಾನ್ಯ. ಸುಬ್ರಹ್ಮಣ್ಯ, ಷಣ್ಮುಖ ಸುಬ್ರಹ್ಮಣ್ಯ, ವಾಸುಕೀ ಸುಬ್ರಹ್ಮಣ್ಯ , ವಾಸುಕಿ ಅನಂತ ಪದ್ಮನಾಭ, ಶಂಖಪಾಲ ಸುಬ್ರಹ್ಮಣ್ಯ, ಸುಬ್ರಾಯ, ಕಾರ್ತಿಕೇಯ ಸುಬ್ರಹ್ಮಣ್ಯಗಳೆಂದು ನಾಗ - ಸುಬ್ರಹ್ಮಣ್ಯ ದೇವಾಲಯಗಳು ಹೆಸರಿಸಲ್ಪಡುತ್ತವೆ. ಉಡುಪಿ ,ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ‌ ಕ್ರಿ.ಶ.7- 8ನೇ ಶತಮಾನದ ವೇಳೆ ಸ್ಕಂದ - ಸುಬ್ರಹ್ಮಣ್ಯ ಆರಾಧನೆ ಆರಂಭವಾಗಿರಬೇಕೆಂದು ಇತಿಹಾಸ ವಿವರಿಸುತ್ತದೆ. ಕೆಲವೆಡೆ ಸುಬ್ರಹ್ಮಣ್ಯ ಪ್ರತಿಮೆಗಳೇ ಮೂಲಸ್ಥಾನ ಮೂರ್ತಿಯಾಗಿ ದೇವಾಲಯಗಳಲ್ಲಿ ಪೂಜೆಗೊಂಡರೆ ಕೆಲವೆಡೆ ನಾಗಪ್ರತೀಕಗಳನ್ನೇ ( ಐದು ಹೆಡೆಯ ಸುಂದರ ಮೂರ್ತಿಯನ್ನು ಪಾಣಿಪೀಠದಲ್ಲಿ‌ ನೆಲೆಗೊಳಿಸಿರುವ) ಪ್ರತಿಷ್ಠಾಪಿಸಲಾಗಿದೆ.ಇನ್ನೂ ಹಲವೆಡೆ ವಲ್ಮೀಕವೇ( ಹುತ್ತ) ಮೂಲಸ್ಥಾನ ಸಾನ್ನಿಧ್ಯವಾಗಿ ಸುಬ್ರಹ್ಮಣ್ಯ ಮೂರ್ತಿ ಅಥವಾ ಲೋಹದ ನಾಗ - ಸುಬ್ರಹ್ಮಣ್ಯ ಪ್ರತೀಕಗಳು‌ ಪೂಜೆಗೊಳ್ಳುತ್ತವೆ‌.ಈ ವಿಶ್ಲೇಷಣೆಯಿಂದ ನಾಗ - ಸುಬ್ರಹ್ಮಣ್ಯ ಅಭೇದ ಚಿಂತನೆಯನ್ನು ಮತ್ತೊಮ್ಮೆ ದೃಢೀಕರಿಸಬಹುದು. ಷಷ್ಠಿ ಸಂಭ್ರಮ : ಬಹುತೇಕ ಸುಬ್ರಹ್ಮಣ್ಯ ( ನಾಗ ಸಹಿತ) ದೇವಳಗಳಲ್ಲಿ ಷಷ್ಠಿ ಪರ್ವದಿನದಂದೇ ವಾರ್ಷಿಕ‌ ಉತ್ಸವ ನಡೆಯುತ್ತವೆ . ಆದರೆ ಕೆಲವೆಡೆ ಮಾತ್ರ ಪ್ರತ್ಯೇಕ ದಿನಗಳಲ್ಲಿ ವಾರ್ಷಿಕ‌ ಉತ್ಸವ ನಡೆಯುತ್ತದೆ. ಆದರೆ ಷಷ್ಠಿ ವಿಶೇಷ ಪರ್ವದಿನವಾಗಿ ಆಚರಿಸಲ್ಪಡುತ್ತದೆ. ವಿವಿಧ ಹರಕೆ,ಎಡೆ ಸ್ನಾನ, ಉರುಳು ಸೇವೆ ಹಾಗೂ ವಿವಿಧ ಅಭಿಷೇಕ,ಅರ್ಚನೆ,ಬೆಳ್ಳಿಯ ನಾಗ ಪ್ರತಿಮೆ ಅರ್ಪಣೆ ,ಉಪ್ಪು ಸಹಿತ ಕೆಲವೊಂದು‌ ಧಾನ್ಯಗಳನ್ನು ,ತೊಗರಿಬೇಳೆಯನ್ನು ಹರಕೆಯಾಗಿ‌ ಸಲ್ಲಿಸಲಾಗುತ್ತದೆ .ಶರೀರ ಸಂಬಂಧಿಯಾದ ರೋಗಗಳ ನಿವಾರಣೆಗೆ ನರ,ಕಣ್ಣು,ಕೈ,ಕಾಲು, ಮುಂತಾದ ದೇಹದ ಅವಯವಗಳ‌‌ ಬೆಳ್ಳಿಯ‌ ಪ್ರತಿಕೃತಿಗಳನ್ನು ದೇವರಿಗೆ ಸಮರ್ಪಿಸುವ ಪರಿಪಾಠವು ರೂಢಿಯಲ್ಲಿವೆ. ‌‌ ತಿಥಿ ಸಂಬಂಧಿಯಾದ ಷಷ್ಠೀ‌ ಉತ್ಸವದ ಆಚರಣೆ ಚಾಂದ್ರಮಾನ ಪದ್ಧತಿಯಿಂದ ಬಂದಿರಬೇಕೆಂದು‌‌ ಪರಿಭಾವಿಸಬಹುದಾಗಿದೆ.ನಾಗರ ಪಂಚಮಿ‌ ಎಂಬುದು ಇದಕ್ಕೆ ಪೂರಕವಾಗಿದೆ.ನಾಗನಿಗೆ ಪಂಚಮಿಯಾದರೆ ಸುಬ್ರಹ್ಮಣ್ಯನಿಗೆ ಷಷ್ಠಿ.ಹೇಗಿದೆ ನಮ್ಮ ಪೂರ್ವಸೂರಿಗಳ ಶ್ರದ್ಧೆಯ ಪರಿಕಲ್ಪನೆ. ಬರಹ : ಕೆ.ಎಲ್.ಕುಂಡಂತಾಯ

ನಿರಂತರ್ ಉದ್ಯಾವರ ಸಂಘಟನೆಗೆ ಐದನೇ ವರ್ಷದ ಸಂಭ್ರಮ : ನೂತನ ಅಧ್ಯಕ್ಷರಾಗಿ ರೋಶನ್ ಕ್ರಾಸ್ಟೋ ಆಯ್ಕೆ

Thumbnail
Posted On: 28 Nov 2022, 09:14 PM

ಉದ್ಯಾವರ : ಕಲೆ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿರುವ ನಿರಂತ್ ಉದ್ಯಾವರ ಇದರ ಐದನೇ ವರ್ಷದ ಅಧ್ಯಕ್ಷರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ವಿಶ್ವಾಸಾರ್ಹ ಸೇವೆ ಸಲ್ಲಿಸಿರುವ ರೋಶನ್ ಕ್ರಾಸ್ಟೋ ಆಯ್ಕೆಗೊಂಡಿದ್ದಾರೆ. ಜೆಸಿಐ ಉದ್ಯಾವರ ಕುತ್ಪಾಡಿ, ಐಸಿವೈಎಂ ಉದ್ಯಾವರ ಇದರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೋಶನ್, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಹಾಗೂ ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಆರ್ಥಿಕ ಮತ್ತು ಪಾಲನ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಿರಂತರ್ ಉದ್ಯಾವರ 2022- 23ನೇ ಸಾಲಿನ ಕಾರ್ಯಕಾರಿ ಸಮಿತಿ ಹೀಗಿದೆ : ಅಧ್ಯಕ್ಷರಾಗಿ ರೋಷನ್ ಕ್ರಾಸ್ಟೋ, ಕಾರ್ಯದರ್ಶಿಯಾಗಿ ಒಲಿವೀರ ಮತಯಸ್, ಕೋಶಾಧಿಕಾರಿಯಾಗಿ ಸುನಿಲ್ ಡಿಸೋಜಾ, ಉಪಾಧ್ಯಕ್ಷರಾಗಿ ರೋಶನ್ ಡಿಸೋಜಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜೂಲಿಯ ಡಿಸೋಜಾ, ಮಾಧ್ಯಮ ಪ್ರತಿನಿಧಿಯಾಗಿ ಅನಿಲ್ ಡಿಸೋಜ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೈಕಲ್ ಡಿಸೋಜಾ, ಸವಿತಾ ಡಿಸೋಜಾ, ರೊನಾಲ್ಡ್ ಡಿಸೋಜಾ, ಜುಡಿತ್ ಪಿರೇರಾ, ಸಿಂತಿಯಾ ನೊರೋನ್ನಾ, ಗೌರವ ಸದಸ್ಯರಾಗಿ ತಿಯಾದೋರ್ ಪಿರೇರಾ, ಆಲ್ವಿನ್ ಡಿಸೋಜಾ, ವಿಕ್ಟರ್ ಮತಾಯಸ್ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಸ್ಟೀವನ್ ಕುಲಾಸೊ ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ನಡೆಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಮೂರು ದಿನದ ನಿರಂತರ ನಾಟಕೋತ್ಸವವನ್ನು ಹಮ್ಮಿಕೊಂಡಿರುವ ಸಂಘಟನೆಯು ಕವಿತಾ ಗೋಸ್ಟಿ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಐದನೇ ವರ್ಷದ ಸಂಭ್ರಮದ ಪ್ರಯುಕ್ತ ಫೆಬ್ರವರಿ ಒಂದರಿಂದ ಐದನೇ ತಾರೀಖಿನವರೆಗೆ 5 ದಿನದ ಬಹುಭಾಷಾ ನಿರಂತರ ನಾಟಕೋತ್ಸವ ಉದ್ಯಾವರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

ಹೊಳಪು ಕ್ರೀಡಾಕೂಟದಲ್ಲಿ ನಾಲ್ಕು ಬಹುಮಾನಗಳನ್ನು ಮುಡಿಗೇರಿಸಿದ ಕಾಪು ಪುರಸಭೆ

Thumbnail
Posted On: 28 Nov 2022, 09:11 PM

ಉಡುಪಿ : ಕೋಟ ಸಾಲಿಗ್ರಾಮದಲ್ಲಿ ನಡೆದ ಹೊಳಪು ಕ್ರೀಡಾಕೂಟದಲ್ಲಿ ಕಾಪು ಪುರಸಭೆ ಹಲವು ಬಹುಮಾನಗಳನ್ನು ಮುಡಿಗೇರಿಸಿಕೊಂಡಿದೆ. ಪಥಸಂಚಲನದಲ್ಲಿ ಪ್ರಥಮ ಸ್ಥಾನ. ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ. ಸ್ಥಬ್ದಚಿತ್ರದಲ್ಲಿ ಪ್ರಥಮ ಸ್ಥಾನ. ಛದ್ಮವೇಷ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಕುಲಾಲ ಸಮಾಜ ಸೇವಾ ಸಂಘ ಬ್ರಹ್ಮಾವರ : ವಾರ್ಷಿಕ ಮಹಾಸಭೆ ; ಸತ್ಯನಾರಾಯಣ ಪೂಜೆ ; ವಿದ್ಯಾರ್ಥಿವೇತನ ವಿತರಣೆ

Thumbnail
Posted On: 28 Nov 2022, 07:08 AM

ಉಡುಪಿ : ಕುಲಾಲ ಸಮಾಜ ಸೇವಾ ಸಂಘ (ರಿ.) ಬ್ರಹ್ಮಾವರ ಇದರ ವಾರ್ಷಿಕ ಮಹಾಸಭೆ ಮತ್ತು ಸತ್ಯನಾರಾಯಣ ಪೂಜೆ ಹಾಗೂ ಕುಲಾಲ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ರವಿವಾರ ಶಾರದಾ ಹೈಸ್ಕೂಲ್ ಚೇರ್ಕಾಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಕೆ. ರಘುಪತಿ ಭಟ್ ರವರು ಭಾಗವಹಿಸಿ ದೇವರಾಜ್ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾl. ಅಣ್ಣಯ್ಯ ಕುಲಾಲ್ ಉಳ್ತೂರು ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಐತು ಕುಲಾಲ್ ಕನ್ಯಾನ ಇವರನ್ನು ಸನ್ಮಾನಿಸಿ ಕುಲಾಲ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕುಲಾಲ ಸಮಾಜ ಸೇವಾ ಸಂಘ (ರಿ.) ಬ್ರಹ್ಮಾವರ ಅಧ್ಯಕ್ಷರಾದ ರಾಜೀವ ಕುಲಾಲ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ಯುವ ವೇದಿಕೆ ಗೌರವಾಧ್ಯಕ್ಷರಾದ ತೇಜಸ್ವಿರಾಜ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.) ಪೆರ್ಡೂರು ಅಧ್ಯಕ್ಷರಾದ ಸಂತೋಷ್ ಕುಲಾಲ್, ಕುಲಾಲ ಸಂಘ (ರಿ.) ಪೆರ್ಡೂರು ಅಧ್ಯಕ್ಷರಾದ ಕೃಷ್ಣಪ್ಪ ಕುಲಾಲ, ಕುಲಾಲ ಸಮಾಜ ಸೇವಾ ಸಂಘ (ರಿ.) ಬ್ರಹ್ಮಾವರ ಗೌರವಾಧ್ಯಕ್ಷರಾದ ಮಂಜುನಾಥ ಕುಲಾಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ - 2022 ಆಮಂತ್ರಣ ಪತ್ರಿಕೆ ಬಿಡುಗಡೆ

Thumbnail
Posted On: 27 Nov 2022, 07:30 PM

ಕಟಪಾಡಿ : ಇಲ್ಲಿನ ಎಸ್ ವಿ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಡಿಸೆಂಬರ್ 10ರಂದು ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಆಶ್ರಯದಲ್ಲಿ ನಡೆಯಲಿರುವ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸ್ವಾತಂತ್ರ್ಯ ಹೋರಾಟಗಾರರು, ಗೋವಾ ವಿಮೋಚನ ಹೋರಾಟಗಾರರಾದ ಮಟ್ಟಾರು ವಿಟ್ಠಲ ಕಿಣಿಯವರು ಮಂಗಳೂರಿನ ತಮ್ಮ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಯುವಕರ ಮೇಲೆ ಆಶಾದಾಯಕವಾದ ಜವಾಬ್ದಾರಿ ಇದೆ. ಮುಖ್ಯವಾಗಿ ಯುವಕರಿಗೆ ವಿದ್ಯೆ, ವೈಯಕ್ತಿಕ ಚಾರಿತ್ರ್ಯ, ರಾಷ್ಟ್ರೀಯ ಚಾರಿತ್ರ್ಯವಿರಬೇಕು. ಎಲ್ಲರೂ ಸಂಘಟಿತರಾದಾಗ ಮಾತ್ರ ಕಾರ್ಯಸಾಧ್ಯ. ಕಾಪು ತಾಲೂಕು ಘಟಕದ ಕಾರ್ಯ, ಪರಿಶ್ರಮಕ್ಕೆ ಶುಭವಾಗಲಿ ಎಂದು ಹಾರೈಸಿದರು. ಈ ಸಂದರ್ಭ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುಂಡಲೀಕ ಮರಾಠೆ, ಕಾಪು ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಾಧ್ಯಕ್ಷರಾದ ಮುದ್ದು ಮೂಡುಬೆಳ್ಳೆ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿಗಳಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ನೀಲಾನಂದ ನಾಯ್ಕ್, ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ| ದಯಾನಂದ ಪೈ, ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಕುಮಾರ್ ರಾವ್ ಮಟ್ಟು, ಕಾಪು ತಾಲೂಕಿನ ಸಂಘಟನ ಕಾರ್ಯದರ್ಶಿ ದೀಪಕ್ ಬೀರ, ಸುಧಾಕರ ಪಾಣಾರ ಮೂಡುಬೆಳ್ಳೆ ಉಪಸ್ಥಿತರಿದ್ದರು. ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಕುಮಾರ್ ರಾವ್ ಮಟ್ಟು ಸ್ವಾಗತಿಸಿ, ನಿರೂಪಿಸಿದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುಂಡಲೀಕ ಮರಾಠೆ ಪ್ರಸ್ತಾವನೆಗೈದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿಗಳಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ಬಿಳಿಯಾರು ಶ್ರೀ ಧೂಮಾವತಿ ದೈವಸ್ಥಾನಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ

Thumbnail
Posted On: 27 Nov 2022, 07:24 PM

ಕಾಪು : ತಾಲೂಕಿನ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಿಯಾರು ಶ್ರೀ ಧೂಮಾವತಿ ದೈವಸ್ಥಾನಕ್ಕೆ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ರವಿವಾರ ಭೇಟಿ ನೀಡಿದರು. 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ದೈವಸ್ಥಾನದ ಕಾಮಗಾರಿ ವೀಕ್ಷಣೆ ಮಾಡಿದರು. ಹಾಗೂ ದೈವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಮೊತ್ತದ ಅನುದಾನ ದೊರಕಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ದೈವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ಶೆಟ್ಟಿ ಹಾಗೂ ಪ್ರಮುಖರಾದ ವೀರೇಂದ್ರ ಪೂಜಾರಿ, ಚಂದ್ರಹಾಸ ಶೆಟ್ಟಿ, ಅಶೋಕ್ ಪೂಜಾರಿ, ವಿಶ್ವನಾಥ್ ಕುರ್ಕಾಲು, ಸುಧರ್ಶನ್ ಕುರ್ಕಾಲು, ಸುಮಾ ಶೆಟ್ಟಿ, ಪ್ರಮೀಳಾ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯೋಗಿತಾ ಹಾಗೂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಡೆದ ಡಿಗ್ರಿಯೊಂದಿಗೆ ಸಾಮಾನ್ಯ ಜ್ಞಾನವೂ ಅವಶ್ಯಕ : ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ

Thumbnail
Posted On: 27 Nov 2022, 07:03 PM

ಬಂಟಕಲ್ಲು : ಪ್ರತಿಯೊಬ್ಬ ವ್ಯಕ್ತಿಗೂ ಜ್ಞಾನದ ಅವಶ್ಯಕತೆಯಿದೆ. ಇದರ ಜೊತೆಗೆ ಸಾಮಾನ್ಯ ಜ್ಞಾನದ ಅವಶ್ಯಕತೆಯೂ ಇದೆ. ಪಡೆದ ಡಿಗ್ರಿ ಮುಖ್ಯವಲ್ಲ. ಸಾಮಾನ್ಯ ಜ್ಞಾನ ಹೊಂದಿದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ. ಅಧ್ಯಯನ ಘಟ್ಟದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿ ಎಂದು ಉಡುಪಿ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಅವರು ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಅಂಡ್ ಮ್ಯಾನೇಜ್ಮೆಂಟ್ ಬಂಟಕಲ್ಲು ಇಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗಾಗಿ ನಡೆದ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ಏಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಾಮದಾಸ್ ಮಡ್ಮಣ್ಣಾಯ ಮಾತನಾಡಿ ತಂದೆ ತಾಯಿಗಳು ಮಕ್ಕಳ ಅಭ್ಯುದಯಕ್ಕೆ ನಾಂದಿ ಹಾಡಬೇಕು. ದೃಢ ಸಂಕಲ್ಪ, ಹಠ ನಮ್ಮನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ. ಮಕ್ಕಳ ಭವಿಷ್ಯದ ಆಸೆಗೆ ಹೆತ್ತವರು ಮಾರ್ಗದರ್ಶನ ನೀಡಬೇಕು. ವಿದ್ಯೆ ಜೊತೆ ನಾಯಕತ್ವ ಗುಣ ಬೆಳೆಸಬೇಕು. ಕೇವಲ ಮಾಕ್೯ ಮುಖ್ಯವಲ್ಲ ಅದೊಂದು ಸಾಧನದಂತೆ. ಕಲಿಕೆಯ ವಿಷಯದ ಮೂಲಭೂತ ಜ್ಞಾನವಿರಬೇಕು. ಅಹಂಕಾರ ವಿದ್ಯಾರ್ಥಿಗಳಲ್ಲಿ ಇರಬಾರದು. ನಿಸ್ವಾರ್ಥದ ಜೀವನ ನಮ್ಮದಾಗಬೇಕು ಎಂದರು. ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಗೌರವ, ದಾನಿಗಳಿಂದ ಪ್ರೋತ್ಸಾಹಕವಾಗಿ ನೀಡಲ್ಪಟ್ಟ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ವಹಿಸಿದ್ದರು. ಈ ಸಂದರ್ಭ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಪ್ರಾಂಶುಪಾಲರಾದ ಡಾ| ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲರಾದ ಡಾ| ಗಣೇಶ್ ಐತಾಳ್, ಆಡಳಿತ ಮಂಡಳಿ ಸದಸ್ಯ ಹರೀಶ್ ಬೆಳ್ಮಣ್, ಉಪನ್ಯಾಸಕ ರವೀಂದ್ರ ಎಚ್ ಜೆ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ| ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕಿ ಡಾ| ಲೊಲಿಟ ಪ್ರಿಯ ಕ್ಯಾಸ್ಟಲಿನೊ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಉಪನ್ಯಾಸಕರಾದ ಲಹರಿ ವೈದ್ಯ ಮತ್ತು ಸಚಿನ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲರಾದ ಡಾ| ಗಣೇಶ್ ಐತಾಳ್ ವಂದಿಸಿದರು.

ಟೋಲ್ ಸುಲಿಗೆ - ಎರಡು ಜಿಲ್ಲೆಯ ಜನತೆಗೆ ಸಂಸದರು ಎಸೆಗಿದ ದ್ರೋಹ : ಯೋಗೀಶ್ ವಿ ಶೆಟ್ಟಿ

Thumbnail
Posted On: 27 Nov 2022, 01:52 PM

ಕಾಪು : ಸುರತ್ಕಲ್ ಟೋಲ್ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿಯಲ್ಲಿ ಸುಲಿಗೆ ನಡೆಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ ಅಂದರೆ ಸರಕಾರದ ನಿರ್ಧಾರ ಇದು ಎರಡು ಜಿಲ್ಲೆಯ ಜನತೆಗೆ ಸಂಸದರು ಎಸೆಗಿದ ದ್ರೋಹ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎಲ್ಲಾ ಕಡೆ ಸರ್ವಿಸ್ ರಸ್ತೆ ಕಾಮಗಾರಿ ನಿರ್ಮಾಣ ಮಾಡಿ ಅಪಘಾತಗಳು ಆಗದ ರೀತಿಯಲ್ಲಿ ಮುಂದಿನ ಕಾಮಗಾರಿ ನಿರ್ವಹಿಸಬೇಕು. ಬಸ್ ಬೇ ಮತ್ತು ಲಾರಿ ಬೇ ನಿರ್ಮಾಣವಾಗಬೇಕು, ಬೀದಿ ದೀಪಗಳು ಕೆಟ್ಟು ಹೋಗಿದ್ದು ಕೆಲವು ಜಂಕ್ಷನ್ ಗಳಲ್ಲಿ ಕತ್ತಲು ಆವರಿಸಿದ್ದು, ರಾತ್ರಿ ಸಂಚರಿಸುವ ವಾಹನಗಳು ಅಪಘಾತಗಳಿಗೆ ಸಿಲುಕಿ ನೂರಾರು ಜನರು ಪ್ರಾಣ ಕಳೆದುಕೊಂಡಿರುತ್ತಾರೆ. ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ಮತ್ತು ಕೆಲವು ಅಂಡರ್ ಪಾಸ್ ಗಳಲ್ಲಿ ದೀಪಗಳು ಉರಿಯದೆ ಇದೆ, ಮಾರ್ಕಿಂಗ್ ಗಳು ಕಾಣದೇ ಮತ್ತು ಗಾರ್ಡನ್ ನಿರ್ವಹಣೆಗಳು ಸರಿಯಾದ ರೀತಿಯಲ್ಲಿ ಆಗದೆ ಇದ್ದು, ಇದನ್ನೆಲ್ಲಾ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆಗೊಳಿಸಬೇಕು. ಟೋಲ್ ವಿಲೀನದ ಪರಿಣಾಮ ದುಬಾರಿ ಸುಂಕ ನೀಡುವ ಪರಿಸ್ಥಿತಿ ಬಂದಿರುವುದು ಕರಾವಳಿ ಜಿಲ್ಲೆಯ ಜನರ ದೌರ್ಭಾಗ್ಯ ಜನರ ಭಾವನೆ ಕಷ್ಟ ಸುಖಗಳಿಗೆ ಸರಕಾರ ಸ್ಪಂದಿಸುವರೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಹಿಂದೆಯೂ ಟೋಲ್ ರದ್ಧತಿ ಹೋರಾಟದಲ್ಲಿ ಪಾಲ್ಗೊಂಡಿದ್ದೆವು ಇನ್ನು ಮುಂದಿನ ದಿನಗಳಲ್ಲಿ ಜನತಾದಳ (ಜಾತ್ಯತೀತ )ಪಕ್ಷದ ವತಿಯಿಂದ ನಮ್ಮದೇ ಆದ ರೀತಿಯಲ್ಲಿ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ