Updated News From Kaup
ಶಾಸಕ ಹರೀಶ್ ಪೂಂಜಾರ ಹಲ್ಲೆ ಯತ್ನ - ಶಾಸಕ ಲಾಲಾಜಿ ಆರ್ ಮೆಂಡನ್ ಖಂಡನೆ ; ಸೂಕ್ತ ಕ್ರಮಕ್ಕಾಗಿ ಆಗ್ರಹ
Posted On: 14 Oct 2022, 10:01 PM
ಕಾಪು : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಮಿತ್ರರಾದ ಹರೀಶ್ ಪೂಂಜಾರವರ ಮೇಲೆ ನಿನ್ನೆ ತಡರಾತ್ರಿ ತಮ್ಮ ಕೆಲಸಗಳನ್ನು ಮುಗಿಸಿ ವಾಪಸಗುತ್ತಿದ್ದಾಗ ಅವರ ಮೇಲೆ ಆಘಂತುಕರಿಂದ ಹಲ್ಲೆ ಯತ್ನ ನಡೆದಿರುವುದು ಅತ್ಯಂತ ಖಂಡನೀಯ ವಿಷಯ. ಒಬ್ಬ ಜನರಿಂದ ಆರಿಸಿ ಬಂದ ಜನಪ್ರತಿನಿಧಿಯ ಮೇಲೆ ನಡೆದಿರುವ ಈ ಕೃತ್ಯ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಆಗಿರುವ ಹಲ್ಲೆಯಂತೆ. ಸಮಾಜದ ಪರವಾಗಿ ಅಥವಾ ಸಾಮಾಜಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಇಂತಹ ಹಲ್ಲೆಗಳು ಹೆಚ್ಚಾಗುತ್ತಿದ್ದು ಇದನ್ನು ನಿಗ್ರಹ ಮಾಡಲು ಸರ್ಕಾರ ತುರ್ತು ಕ್ರಮವನ್ನ ಕೈಗೊಳ್ಳಬೇಕು. ಜೊತೆಗೆ, ಬಂಧಿತನಾಗಿರುವ ಆರೋಪಿಯ ಸಂಪೂರ್ಣ ತನಿಖೆ ನಡೆಸಿ ಆತನ ಉದ್ದೇಶ ಮತ್ತು ಆತನ ಹಿಂದಿರುವ ಕೈಗಳ ಬಗ್ಗೆ ಸಮಗ್ರ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ, ಶಾಸಕರಿಗೆ ಸರಿಯಾದ ಭದ್ರತೆಯನ್ನು ಒದಗಿಸಬೇಕು ಮತ್ತು ಇಂತಹ ಘಟನೆಗಳು ಇನ್ನು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹಾಗೂ ಗೃಹ ಸಚಿವರಿಗೆ ಆರಗ ಈ ಮೂಲಕ ಆಗ್ರಹಿಸುತ್ತೇನೆ ಎಂದು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಪುಣೆ ಸಮಿತಿಗೆ ಚಾಲನೆ , ಶ್ರೀದೇವಿ ಮಹಾತ್ಮೆ ಯಕ್ಷಗಾನ
Posted On: 14 Oct 2022, 09:54 PM
ಪುಣೆ : ಕಾಪು ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿಗಾಗಿ ರಚಿಸಿದ ಪುಣೆ ಸಮಿತಿಯ ಉದ್ಘಾಟನಾ ಸಮಾರಂಭ ಹಾಗೂ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಹಾವಂಜೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವು ಅ . ೧೩ ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಸಂಭ್ರಮದಿಂದ ನಡೆಯಿತು . ಪುಣೆ ಬಂಟರ ಸಂಘದ ಅಧ್ಯಕ್ಷ ಹಾಗೂ ಕಾಪು ಮಾರಿಗುಡಿ ಅಭಿವೃದ್ಧಿ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಎಂ ಆರ್ ಜಿ ಗ್ರೂಪ್ ನ ಸಿಎಂಡಿ ಕೆ . ಪ್ರಕಾಶ್ ಶೆಟ್ಟಿ,ಕಾಪು ಮಾರಿಗುಡಿ ಅಭಿವೃದ್ಹಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ದಿವಾಕರ ಶೆಟ್ಟಿ ಕಾಪು, ಮುಂಬಯಿ ಸಮಿತಿಯ ಅಧ್ಯಕ್ಷರಾದ ಸುಧಾಕರ ಹೆಗ್ಡೆ ,ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷರಾದ ರವಿ ಸುಂದರ್ ಶೆಟ್ಟಿ ,ಕಾಪು ಮಾರಿಗುಡಿ ಅಭಿವೃದ್ಹಿ ಪ್ರಚಾರ ಸ ಮಿತಿ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ ,ಆರ್ಥಿಕ ಸಮಿತಿಯ ಮುಖ್ಯ ಪ್ರಧಾನ ಸಂಚಾಲಕರಾಗಿರುವ ಉದಯ್ ಸುಂದರ್ ಶೆಟ್ಟಿ , ಸಂದೀಪ್ ಶೆಟ್ಟಿ , ರವಿರಾಜ್ ಶೆಟ್ಟಿ ,ಮೋಹನ್ ಶೆಟ್ಟಿ ,ದಿವಾಕರ ಶೆಟ್ಟಿ , ದಯಾನಂದ್ ಶೆಟ್ಟಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಪು ಹೊಸ ಮಾರಿಗುಡಿಯ ಅಭಿವೃದ್ಧಿ ಪುಣೆ ಸಮಿತಿಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಹಾಗೂ ಪದಾಧಿಕಾರಿಗಳಿಗೆ ಕಾಪು ಮಾರಿಗುಡಿ ಅಭಿವೃದ್ಹಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ ಯವರು ಶ್ರೀದೇವಿಯ ಪ್ರಸಾದವನ್ನು ನೀಡಿದರು . ಅತಿಥಿಗಳನ್ನು ಶಾಲು ಹೊದೆಸಿ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ವಾಸುದೇವ ಶೆಟ್ಟಿಯವರು ಕಾಪು ಹೊಸ ಮಾರಿಗುಡಿಯ ಜೀರ್ಣೋದ್ಧಾರದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಂಗವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ,ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ,ಮಂಡಳಿ ,ನಾಗವ್ರುಜ ಕ್ಷೇತ್ರ ಪಾವಂಜೆಯ ಪ್ರಸಿದ್ಧ ಕಲಾವಿದರಿಂದ "ಸಂಪೂರ್ಣ ಶ್ರೀದೇವಿ ಮಹಾತ್ಮೆ "ಯಕ್ಷಗಾನ ಪ್ರದರ್ಶನ ನಡೆಯಿತು . ಕಾರ್ಯಕ್ರಮದಲ್ಲಿ ಕಾಪು ಹೊಸ ಮಾರಿಗುಡಿ ಪುಣೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ,ಮುಖ್ಯ ಸಲಹಾ ಸಮಿತಿಯ ಸದಸ್ಯರು ,ಉತ್ತರ ವಲಯ ಸಮಿತಿ ,ದಕ್ಷಿಣ ವಲಯ ಸಮಿತಿ ,ಪಿಂಪ್ರಿ -ಚಿಂಚ್ವಾಡ್, ಹಡಪ್ಸರ್, ಯುವ ವಲಯ ಹಾಗೂ ಮಹಿಳಾ ವಲಯ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷರಾದ ಪಾದೂರು ಹೊಸಮನೆ ಮಾಧವ ಆರ್ ಶೆಟ್ಟಿ ,ಉಪಾಧ್ಯಕ್ಷರಾದ ಎರ್ಮಾಳ್ ಚಂದ್ರಹಾಸ ಶೆಟ್ಟಿ , ವಿಶ್ವನಾಥ ಪೂಜಾರಿ ಕಡ್ತಲ , ಪ್ರವೀಣ್ ಶೆಟ್ಟಿ ಪುತ್ತೂರು ,ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ,ಕಾರ್ಯದರ್ಶಿ ಉದಯ್ ಶೆಟ್ಟಿ ಕಳತ್ತೂರು, ಗೌರವ ಕೋಶಾಧಿಕಾರಿ ದಿನೇಶ್ ಶೆಟ್ಟಿ ಕಳತ್ತೂರು , ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ ,ವಿವಿಧ ವಲಯಗಳ ಕಾರ್ಯಾಧ್ಯಕ್ಷರಾದ ಗಣೇಶ್ ಹೆಗ್ಡೆ ಪುಂಚೂರು, ಜಗದೀಶ್ ಶೆಟ್ಟಿ , ರವಿ ಕೆ ಶೆಟ್ಟಿ ಕಾಪು ,ಗಣೇಶ್ ಪೂಂಜಾ , ರೋನಕ್ ಜಯ ಶೆಟ್ಟಿ , ಕಾರ್ಯಾಧ್ಯಕ್ಷೆ ಸುಲತಾ ಸತೀಶ್ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಉಡುಪಿ : ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರರಾಗಿ ಶ್ರೀಕಾಂತ್ ಕುಚ್ಚೂರು ನೇಮಕ
Posted On: 14 Oct 2022, 11:28 AM
ಉಡುಪಿ :ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಜನತಾದಳ( ಜಾತ್ಯತೀತ) ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂರವರು ಶ್ರೀಕಾಂತ್ ಕುಚ್ಚೂರುರವರನ್ನು ಉಡುಪಿ ಜಿಲ್ಲೆಯ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾ ವಕ್ತಾರರನ್ನಾಗಿ ನೇಮಕಗೊಳಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಂತಾರ ತುಳುನಾಡಿನ ದೈವಾರಾಧನೆಯನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸಿದೆ. ಆದರೆ....!
Posted On: 13 Oct 2022, 11:39 PM
" ಕಾಂತಾರ " ಇಂದು ಜಗತ್ತಿನಾದ್ಯಂತ ತುಂಬಿರುವ ತುಳು ಕನ್ನಡಿಗರ ವಲಯದಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆದಂತಹ ದೈವ ಆಧಾರಿತ ಚಲನ ಚಿತ್ರ. ತುಳುನಾಡಿನ ಜನತೆಗೆ "ದೈವ"ಮೊದಲು "ದೇವರು"ನಂತರ ಎಂಬ ಮೂಲ ನಂಬಿಕೆಗೆ ಸಂಪೂರ್ಣವಾಗಿ ಶರಣಾದಂತಹ ಸತ್ಯ ಸಂಕಲ್ಪ. ಅದಕ್ಕಾಗಿಯೇ ತುಳುವರು "ದೈವ ದೇವೆರೇ " ಎಂದು ಕರೆಯುವುದೇ ಅವರ ಮಹಾಮಂತ್ರ ಎಂದರೆ ತಪ್ಪಾಗಲಾರದು. ಭಯದ ಅಡಿಯಲ್ಲಿ ಭಕ್ತಿಯನ್ನು ಪಾಲಿಸಿಕೊಂಡು ಬಂದಿರುವ ಏಕೈಕ ಸಂಪ್ರದಾಯ ನಮ್ಮ ತುಳುವರದ್ದು. ದೈವ ಎಂಬುವುದು ಒಂದು ಕುಟುಂಬಕ್ಕೆ ಮಾವ (ತಮ್ಮಲೆ)ನಂತೆ ಎಂದೂ ಹೇಳುತ್ತಾರೆ .ತುಳುವರು ತಾಯಿ ತಂದೆಯ ಮೇಲೆ ಅಪಾರ ಭಕ್ತಿಯನ್ನು ತೋರಿಸಿ ಮಾವನಿಗೆ ತುಂಬಾ ಹೆದರುವ ಗೌರವ ಕೊಡುವ ನಮ್ಮ ಸಂಸ್ಕ್ರತಿ.ಹಾಗಾಗಿ ದೇವರು ಸಲಹುವವನಾದರೆ ನಾವು ಧರ್ಮ ತಪ್ಪಿದಲ್ಲಿ ದಂಡಿಸುವ ಮತ್ತು ತಿದ್ದುವ ಕೆಲಸವನ್ನು ಮಾವ(ತಮ್ಮಲೆ ) ನ ಸ್ಥಾನದಲ್ಲಿ ನಿಂತು ದೈವಗಳೆ ಮಾಡುವುದು ಎಂಬುವುದನ್ನು ಬಲವಾಗಿ ನಂಬಲೇ ಬೇಕಾದ ವಿಚಾರ. ಈಗ ನಾವು ಕಾಂತಾರ ಸಿನಿಮಾದ ಬಗ್ಗೆ ದೃಷ್ಟಿ ಹರಿಸೋಣ ! ಕಾಂತಾರ ಸಿನಿಮಾದ ಕಥೆ ಒಂದು ದಂತಕಥೆಯಾಗಿ ತೆರೆಯ ಮೇಲೆ ಬಂದಿರುವುದು ಎಷ್ಟು ಸರಿ.ಎಷ್ಟು ತಪ್ಪು ಎಂಬುದನ್ನು ಹೇಳಲು ದೈವ ಚಿಂತಕರಿಂದ ಮಾತ್ರ ಸಾಧ್ಯ. ಆದರೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ತುಳುವರನ್ನು ಈ ಒಂದು ಸಿನೆಮಾ ಬಡಿದು ಎಬ್ಬಿಸಿದ್ದಂತೂ ನೂರಕ್ಕೆ ನೂರು ಸತ್ಯ ತುಳುವನ ದೇಹದ ರಕ್ತದಲ್ಲಿ ಒಂದು ದೈವ ಸಂಚಾರವನ್ನೇ ಮೂಡಿಸಿದೆ. ಅಲ್ಲದೆ ತುಳುನಾಡಿಗೆ ಕೋರ್ಟು ಕಚೇರಿ ಕಾನೂನಿಗಿಂತಲೂ ದೈವದ ತೀರ್ಪೇ ಮೇಲು ಎಂಬ ಸತ್ಯ ಸಂದೇಶವನ್ನು ಈ ಸಿನೆಮಾ ನೀಡಿದೆ. ಸಿನಿಮಾದ ಒಂದು ದೃಶ್ಯದಲ್ಲಿ: ಗುರುವ ಎಂಬ ದೈವದ ಚಾಕರಿ ಮಾಡುವವನ ಕೊಲೆಯಾದಾಗ .ಜೈಲಲ್ಲಿರುವ ನಾಯಕ ನಟ ಶಿವನಿಗೆ ತನ್ನ ಮನೆಯವರಿಂದ ಸುದ್ದಿ ಮುಟ್ಟುವ ಮೊದಲು.ಜೈಲಿನ ವರಾಂಡದಲ್ಲಿ ದೈವ ಕುಳಿತು ಕಣ್ಣೀರು ಹಾಕಿ ತನ್ನ ಚಾಕರಿಯವನ ಕೊಲೆಗೆ ಸಂತಾಪಗೊಂಡು ರೋಧಿಸುವ ಸನ್ನಿವೇಶ ನಿಜವಾಗಿಯೂ ದೈವ ಭಕ್ತ ಪ್ರೇಕ್ಷಕನ ಕಣ್ಣಲ್ಲಿ ನೀರು ಬರುವುದಂತೂ ಖಂಡಿತ.ತನ್ನ ಚಾಕರಿ ಮಾಡುವವನನ್ನು ದೈವ ಎಷ್ಟೊಂದು ಪ್ರೀತಿಸುತಿದೇ ಎಂಬುದನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಚಿತ್ರದ ಕೊನೆ ಘಳಿಗೆಯಲ್ಲಿ ದೈವದ ಅಧೀನ ದಲ್ಲಿರುವ ಜಾಗ ದೈವದ ಸುಪರ್ದಿಗೆ ಸೇರಲು ಶ್ರಮಿಸಿದ ಪೊಲೀಸ್ ಅಧಿಕಾರಿಯನ್ನು ದೈವ ತನ್ನ ಕೈ ಭಾಷೆಯಲ್ಲಿ ಕರೆದು ಅಧಿಕಾರಿಯ ಕೈಯನ್ನು ತನ್ನ ಎದೆಗೆ ಒತ್ತಿ ಮುದ್ದಾಡಿ ತನ್ನ ಸಂತಸವನ್ನು ವ್ಯಕ್ತ ಪಡಿಸುವ ದೃಶ್ಯವಂತೂ ತುಂಬಾ ಹೃದಯ ಕರಗುವಂತಿತ್ತು.ದೈವಕ್ಕೆ ತನ್ನನ್ನು ನಂಬಿಕೊಂಡು ಬದುಕುವವರು ಧರ್ಮದ ಹಾದಿಯಲ್ಲಿ ಬದುಕುವಂತಾದರೆ ಅದರಷ್ಟು ಖುಷಿ ದೈವಕ್ಕೆ ಬೇರೊಂದಿಲ್ಲ ಅನ್ನಬಹುದು ಅಲ್ಲವೇ !! ಒಂದು ಆದ್ಯಾತ್ಮಿಕ ಹಾದಿಯಲ್ಲಿ ಹೋಗುವ ಈ ಚಿತ್ರದ ನಡುವೆ ನಾಯಕ ನಟ ನಟಿಯರ ಪ್ರಣಯಕ್ಕೆ ಸಂಬಂಧಿಸಿ ಹಾಕಿದ ಮಸಾಲ ಹಾಗೂ ಸಾಹುಕಾರನ ಅನೈತಿಕ ಸಂಬಂಧ ನಡೆಯುತ್ತಿರುವಾಗ ಕಾದು ಕುಳಿತ ಶಿವನಿಗೆ ಅಲ್ಲಿ ದೈವ ಕಣ್ಣ ಮುಂದೆ ಬಂದಂತಾದಾಗ ಸಾಹುಕಾರ ಹೆದರಿ ತನ್ನ ಬಟ್ಟೆ ಯನ್ನು ಕೈಯಲ್ಲಿ ಹಿಡಿದು ಓಡುವ ದೃಶ್ಯ ಕಮರ್ಷಿಯಲ್ ದೃಷ್ಟಿ ಯಿಂದ ಒಪ್ಪಬೇಕೆ ವಿನಃ ಅದನ್ನು ಬೇರೆ ರೀತಿಯಲ್ಲಿ ತೋರಿಸುತ್ತಿದ್ದರೆ ಇನ್ನೂ ಭಕ್ತಿ ಪೂರ್ವಕವಾಗಿ ಮೂಡಿ ಬರುತ್ತಿತ್ತು..ಯಾಕೆಂದರೆ ತುಳು ಮಾತನಾಡಲು ಬರುವ ಕನ್ನಡ ಬಾರದ ಮಕ್ಕಳಿಗೆ ದೈವದ ಭಕ್ತಿಯ ಹಾದಿಯಲಿ ನಡೆಯುವ ದೃಶ್ಯಗಳ ನಡುವೆ ಇಂತಹ ದೃಶ್ಯ ಬಂದಾಗ ಸ್ವಲ್ಪ ಗೊಂದಲ ಮೂಡಿಸಿರುವುದು ಸತ್ಯ ದರ್ಶನ...ಕ್ಷಮಿಸಿ ಇಂತಹಾ ಸಿನೆಮಾ ಇಷ್ಟರ ತನಕ ಬಂದಿಲ್ಲ! ಇನ್ನು ಮುಂದೆ ಬರಕೂಡದು !... ಇದೇ ಮೊದಲು ಇದೇ ಕೊನೆಯಾಗಲಿ..............................ಯಾಕೆ??? ಯಾಕೆಂದರೆ!!!ಇವತ್ತು ಒಂದು ಪಂಜುರ್ಲಿ ದೈವ ಮತ್ತು ಅದಕ್ಕೆ ಸೇರಿದ ಜಾಗವನ್ನು ಆಧಾರವಾಗಿಟ್ಟುಕೊಂಡು ಒಂದು ಕತೆ ನಿರ್ಮಿಸಿ. ದೈವಾರಾಧನೆಯನ್ನು ತೆರೆಯ ಮೇಲೆ ತೋರಿಸಿ .ಜನಮನ ಹಣ ಗೆದ್ದ ನಿರ್ಮಾಪಕರು ಉತ್ಸಾಹದಿಂದ ನಾಳೆ ಇದರ ಮುಂದುವರಿದ ಭಾಗ ಕಾಂತಾರ -2 ಬಂದರೂ ಬರಬಹುದು.ಅಥವಾ ಇಂತಹ ಸಿನಿಮಾದಿಂದ ಪ್ರೇರಿತಗೊಂಡ ಕನ್ನಡ ತುಳು ಚಿತ್ರ ನಿರ್ಮಾಪಕರು ಮುಂದಿನ ಕತೆಗಳಲ್ಲಿ ಜುಮಾದಿ ಜಾರಂದಾಯ ಕೊರಗಜ್ಜಾ ಮುಂತಾದ ಕಾರ್ಣಿಕದ ಕ್ಷೇತ್ರಗಳ ಕತೆ ಸೃಷ್ಟಿಸಿ ಕೋಲ ನೇಮ ತಂಬಿಲದ ಕೆಲವೊಂದು ದೃಶ್ಯಗಳನ್ನು ಕತೆಗೆ ಬಂಡವಾಳವನ್ನಾಗಿಸಿ ಹಣ ಮಾಡುವ ದಂಧೆ ಶುರು ಆದರೂ ಆಗಬಹುದು..ದೈವ ನರ್ತನ ಆರಾಧನೆಯನ್ನು ಬೇಕಂತಲೇ ಸ್ವಲ್ಪ ವಿರೂಪಗೊಳಿಸಿ ಚಿತ್ರವನ್ನು ವಿರೋಧಿಸುವಂತೆ ಅವರೇ ಮಾಡಿ ಪ್ರಚಾರ ಪಡೆದು ಸಿನಿಮಾವನ್ನು ಗೆಲ್ಲಿಸುವ ಕೆಟ್ಟ ಪ್ರಜ್ಞೆ ಬಂದರೂ ಆಶ್ಚರ್ಯವಿಲ್ಲ.... ಹಿಂದೂ ಧರ್ಮದ ದೇವರುಗಳನ್ನು ಕೆಟ್ಟದಾಗಿ ತೋರಿಸಿ ಸಿನಿಮಾ ಮಾಡಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ.ಯಾಕೆಂದರೆ ಕೆಲವೊಂದು ನಿರ್ಮಾಪಕರಿಗೆ ತನ್ನ ಜನಪ್ರಿಯತೆ ಹಾದಿ ತಪ್ಪಿಸುವುದರಲ್ಲಿ ಸಂಶಯವಿಲ್ಲ.. ತುಳುನಾಡಿನ ದೈವ ಮತ್ತು ಆರಾಧನೆಯನ್ನು ತೆರೆಯ ಮೇಲೆ ಭಯವಿಲ್ಲದೆ ತೋರಿಸಿ ಮುಂದಿನ ದಿನಗಳಲ್ಲಿ ಕೋಲ ನೇಮ ಗಳನ್ನೂ ತೆರೆಯ ಮೇಲೆ ಮಾತ್ರ ನೋಡುವ ಕಾಲ ಬಂದರೂ ಬರಬಹುದು.....ಇವತ್ತು ಕಾಂತಾರ ಸಿನೆಮಾದಲ್ಲಿ ಬರುವ ಕೋಲದ ದೃಶ್ಯ ಕಂಡು ಭಾವೋದ್ರೇಕರಾಗಿ ಕೈ ಮುಗಿಯುವುದು ಅದನ್ನು ನೋಡಿ ಭಕ್ತಿಪರವಶ ವಾಗಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅದು ನಮ್ಮ ದುರಾದೃಷ್ಟ ಎಂದೆಣಿಸಿಕೊಳ್ಳ ಬಹುದು....!! ದೈವ ಕಾರ್ಣಿಕಗಳನ್ನು ನಮ್ಮ ಭಯ ಭಕ್ತಿಯ ಮೂಲಕ ನಮ್ಮ ಮಣ್ಣಿನಲ್ಲಿಯೇ ಆರಾಧಿಸಿಕೊಂಡು ಅದನ್ನು ಅನುಭವಿಸಬೇಕೇ ವಿನಃ. ..ಸಿನಿಮಾದಲ್ಲಿನ ಕ್ರಿಯೇಟಿವ್ ಥಿಯೇಟರಿನ ಸೌಂಡ್ ಎಫೆಕ್ಟ್ ಗಳಿಗೆ ರೋಮಾಂಚನಗೊಂಡು ಭಕ್ತಿ ಪರವಶಗೊಳ್ಳುವುದು ನಿಜವಾದ ದೈವ ಭಕ್ತಿ ಅಲ್ಲವೇ ಅಲ್ಲ...ತುಳುನಾಡಿನ ದೈವ ದೇವರುಗಳ ಆರಾಧನೆಯನ್ನು ತುಳುವರ ಮುಂದಿನ ಪೀಳಿಗೆಗೆ ತಿಳಿಸುವಂತಾಗಲು .. ಕೋಲ ಧರ್ಮ ನೇಮಗಳಂತಹ ಕಾರ್ಯಗಳನ್ನು. ನಮ್ಮ ನೆಲದಲ್ಲಿಯೇ ಮಾಡಿ.ವಾದ್ಯ ಪಾರ್ಧನ ದೈವ ನರ್ತನಗಳನ್ನು ನಿಜ ಕಣ್ಣಿನಿಂದ ನೋಡಿ ಭಯ ಭಕ್ತಿಯನ್ನು ತುಂಬಿಸಿ ಕೊಂಡರೆ ಖಂಡಿತವಾಗಿಯೂ ದೈವ ದೇವರುಗಳ ಕಾರ್ಣಿಕಗಳನ್ನು ನಿಜ ಜೀವನದಲ್ಲಿ ಅನುಭವಿಸಬಲ್ಲಿರಿ !! ಸಿನಿಮಾ ನೋಡಿ "ಸೌಂಡ್ ಎಫೆಕ್ಟ್ ಗೆ ಭಯ ಭಕ್ತಿ ಬಂದಲ್ಲಿ ದೈವದ ಕಾರ್ಣಿಕ ಖಂಡಿತಾ ಅನುಭವಿಸಲಾರಿರಿ.....ಅಲ್ಲದೆ ಅದರಿಂದ ವಿಘ್ನವೇ ಹೆಚ್ಚು ಈ ಒಂದು ಸಿನೆಮಾ ಕೆಲವರನ್ನು ಎಚ್ಚರಿಸುವ ಸಲುವಾಗಿ ದೈವ ಸಂಕಲ್ಪದಿಂದ ಭರ್ಜರಿ ಯಶಸ್ಸು ಕಂಡಿದೆ ಮಾತ್ರವಲ್ಲದೆ ಇನ್ನು ಮುಂದೆ ಇಂತಹ ಸಿನಿಮಾವನ್ನು ತಯಾರಿಸಿದರೆ ಯಶಸ್ಸು ಬಿಡಿ ಹಲವಾರು ಸಮಸ್ಯೆಗಳನ್ನು ಎದುರಿಸುವ ಸಮಸ್ಯೆ ಬರಲಿದೆ....ನಿಮಗೆ ತಿಳಿದಿರಲೂ ಬಹುದು ಕೋಟಿ ಚೆನ್ನಯ ಪ್ರಥಮ ಬ್ಲಾಕ್ ಆಂಡ್ ವೈಟ್ ಸಿನಿಮಾವನ್ನು ಕೂರ್ಕಾಲ್ ಗರಡಿಯಲ್ಲಿ ಚಿತ್ರೀಕರಣ ಮಾಡಿದಾಗ ಮತ್ತು ಬಿಡುಗಡೆಗೊಂಡ ನಂತರ ನಟಿಸಿದ ನಟರಿಗೆ ಹಲವಾರು ಸಮಸ್ಯೆಗಳು ಬಂದಿರುವುದನ್ನು ನಾನು ಸಣ್ಣ ವಯಸ್ಸಿನಲ್ಲಿ ಕೇಳಿದ ನೆನಪು...ಆಪ್ತ ಮಿತ್ರದಂತಹ ಕನ್ನಡ ಸಿನೆಮಾದಲ್ಲೂ ಸಮಸ್ಯೆ ಕಂಡುಬಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.... ಎಚ್ಚರಿಕೆ ನಿರ್ಮಾಪಕರೇ ತುಳು ನಾಡಿನ ದೈವಗಳು ಇದಕ್ಕಿಂತಲೂ ಭಯ ಭಯಂಕರ !!ಆಯೆ ಬುಡಿಯೆಡಲಾ ಯಾನ್ ಬುಡಯೆ!! ಈ ದೈವ ನುಡಿ ನೆನಪಿರಲಿ ನನ್ನ ಆಲೋಚನೆ ತಪ್ಪಿದ್ದರೆ ಕ್ಷಮೆ ಇರಲಿ ಬರಹ : ಚಂದ್ರಕೃಷ್ಣ ಶೆಟ್ಟಿ ಬೆರ್ಮೊಟ್ಟು ಇನ್ನಂಜೆ ( ಕಾಪುದಾರ್ )
ಕಾಪು : ಟೆಂಪೋ ಚಾಲಕ ಶಿವ ಪೂಜಾರಿ ನಿಧನ
Posted On: 13 Oct 2022, 11:29 PM
ಕಾಪು : ಟೆಂಪೋ ಚಾಲಕ ಶಿವ ಪೂಜಾರಿ ನಿಧನ ಕಾಪು : ಇಲ್ಲಿನ ಟೆಂಪೋ ಚಾಲಕ ಪೊಲಿಪುಗುಡ್ಡೆ ನಿವಾಸಿ ಶಿವ ಪೂಜಾರಿ (4೦) ಅವರು ಅಕ್ಟೋಬರ್ 13ರಂದು ಅಸೌಖ್ಯದಿಂದಾಗಿ ನಿಧನ ಹೊಂದಿದರು ಅವಿವಾಹಿತರಾಗಿದ್ದ ಅವರು ತಾಯಿ, ನಾಲ್ಕು ಮಂದಿ ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕಾಪು ಗೂಡ್ಸ್ ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಯಾಗಿದ್ದ ಅವರು ಕಳೆದ 15 ವರ್ಷದಿಂದ ತನ್ನ ಸ್ವಂತ ಟೆಂಪೋ ಚಲಾಯಿಸುತ್ತಿದ್ದರು.
ಉಚ್ಚಿಲದಲ್ಲಿ ಸ್ಕಾರ್ಪಿಯೋ ಚಾಲಕನ ಅವಾಂತರ 4 ವಾಹನಗಳಿಗೆ ಡಿಕ್ಕಿ
Posted On: 13 Oct 2022, 11:25 PM
ಉಚ್ಚಿಲ : ರಾಷ್ಟ್ರೀಯ ಹೆದ್ದಾರಿ 66ರ ಅನಾಫಿ ಮಸೀದಿ ಎದುರು ಸ್ಕಾರ್ಪಿಯೋ ಚಾಲಕನ ಅತೀವೇಗ ಹಾಗೂ ನಿರ್ಲಕ್ಷತೆಯ ಚಾಲನೆಯಿಂದ ಸರಣಿ ಅಪಘಾತ ಗುರುವಾರ ರಾತ್ರಿ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, ಅಲ್ಲಿ ನಿಲ್ಲಿಸದೆ ಅತಿವೇಗದಿಂದ ಬಂದು ಉಚ್ಚಿ. ರಾ. ರಾಷ್ಟ್ರೀಯ ಹೆದ್ದಾರಿ 66ರ ಅನಾಫಿ ಮಸೀದಿಯವರು ಎರ್ಟಿಗಾ ಕಾರು ಬೈಕು ಹಾಗೂ ಮೀನಿನ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಸ್ಕಾರ್ಪಿಯೋ ಕಾರು ಗುದ್ದಿದ ರಭಸಕ್ಕೆ ಎರ್ಟಿಗಾ ಕಾರು ವಿಭಾಜಕ ಏರಿ ಇನ್ನೊಂದು ಪಥದತ್ತ ತಿರುಗಿ ನಿಂತಿದೆ. ಸ್ಕೂಟಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ, ಕಾಪು ಠಾಣಾಧಿಕಾರಿ ಶ್ರೀಶೈಲ ಮುರುಗೋಡ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್ ಮತ್ತು ಸಿಬ್ಬಂದಿ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಹೆದ್ದಾರಿಯಾಗಿ ಅಪಘಾತಕ್ಕೆ ಹೆದ್ದಾರಿ ಅರೆಬರೆ ಕಾಮಗಾರಿ ಮತ್ತು ಹೆದ್ದಾರಿಯಲ್ಲಿ ವಿದ್ಯುತ್ ಇಲ್ಲದ ಕಾರಣ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಜನತಾದಳ ಪಕ್ಷದ ಜಿಲ್ಲಾ ವಕ್ತಾರರಾಗಿ ವಾಸುದೇವ ರಾವ್
Posted On: 12 Oct 2022, 11:16 PM
ಉಡುಪಿ : ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಜನತಾದಳ( ಜಾತ್ಯತೀತ) ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂರವರು ವಾಸುದೇವ ರಾವ್ ರವರನ್ನು ಉಡುಪಿ ಜಿಲ್ಲೆಯ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾ ವಕ್ತಾರರನ್ನಾಗಿ ನೇಮಕಗೊಳಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ರವೀಂದ್ರ ಪೂಜಾರಿ ಮರು ಆಯ್ಕೆ
Posted On: 12 Oct 2022, 06:17 PM
ಕಾಪು : ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಬೆಂಗಳೂರು, ಇದರ ಕಾಪು ತಾಲೂಕಿನ ಮಹಾ ಸಭೆಯು ಕಾಪು ಹೋಟೆಲ್ ಮಂದಾರದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಘವನ್ನು ಹುಟ್ಟು ಹಾಕಿ, ಸ್ಥಾಪಕ ಅಧ್ಯಕ್ಷರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ನಾಗರಾಜ್ ರಾವ್ ಎಮ್. ರವರನ್ನು ಕಾಪು ತಾಲೂಕು ಸಮಿತಿಯಿಂದ ಸನ್ಮಾನಿಸಲಾಯಿತು. ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯ ಮೇಲುಸ್ತುವಾರಿಯೊಂದಿಗೆ ಚುನಾವಣೆ ನಡೆದು, ಚುನಾವಣಾ ಪ್ರಕ್ರಿಯೆಯಲ್ಲಿ ಮಹಾದೇವಿ ಎಲೆಕ್ಟ್ರಿಕಲ್ಸ್ ನ ರವೀಂದ್ರ ಪೂಜಾರಿ ಯವರು ಮರು ಆಯ್ಕೆಯಾಗಿರುತ್ತಾರೆ ಎಂದು ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ್ ಶೆಣೈರವರು ಘೋಷಿಸಿದರು. ಉಪಾಧ್ಯಕ್ಷರಾಗಿ ವಸಂತ ಸುವರ್ಣ, ಕಾರ್ಯದರ್ಶಿಯಾಗಿ ಗಿರಿಧರ್, ಜತೆ ಕಾರ್ಯದರ್ಶಿಯಾಗಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಆಝಮ್ ರವರು ಅವಿರೋಧವಾಗಿ ಆಯ್ಕೆಯಾಗಿರುವರು ಎಂದು ತಿಳಿಸಿದರು. ಜಿಲ್ಲಾ ಮಟ್ಟದ ಸಂಘದ ಪ್ರಚಾರ ಸಭೆಯ ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ರವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಜಿಲ್ಲಾ ಅಧ್ಯಕ್ಷರಾದ ಶ್ರೀಕಾಂತ್ ಶೆಣೈ , ಉಪಾಧ್ಯಕ್ಷರು ಗಳಾದ ಅಶೋಕ್ ಸುವರ್ಣ , ಕೃಷ್ಣ ಕುಲಾಲ್, ಕಾರ್ಯದರ್ಶಿ ಸುರೇಶ್ ಜತ್ತನ್ನ , ಕೋಶಾಧಿಕಾರಿ ಆನಂದ ಶೇರಿಗಾರ, ಸಂಘಟನಾ ಕಾರ್ಯದರ್ಶಿ ಸುದರ್ಶನ್ ರವರು ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ರವೀಂದ ಪೂಜಾರಿ ವಹಿಸಿದ್ದರು. ಸುಪ್ರೀತ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಹೇಮಂತ್ ಪಡುಬಿದ್ರಿ ಸ್ವಾಗತಿಸಿದರು. ಕಾರ್ಯದರ್ಶಿ ದೇವರಾಜ ಕೋಟ್ಯಾನ್ ವರದಿ ವಾಚಿಸಿದರು. ಕೋಶಾಧಿಕಾರಿ ಮೋಹನ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಕಾರ್ಯಕ್ರಮವನ್ನು ಅನ್ವರ್ ಅಲಿ ಕಾಪು ಮತ್ತು ಪ್ರಕಾಶ್ ಅಂಚನ್ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ವಂದಿಸಿದರು.
ಕಾಪು: ನಿವೃತ್ತ ಯೋಧ ಮೂಳೂರು ನಿವಾಸಿ ಹಾಜಿ ಅಬ್ದುಲ್ ರಝಾಕ್ ಶಾಬಾನ್ ನಿಧನ
Posted On: 12 Oct 2022, 06:01 PM
ಕಾಪು : ನಿವೃತ್ತ ಯೋಧ ಮೂಳೂರು ನಿವಾಸಿ ಹಾಜಿ ಅಬ್ದುಲ್ ರಝಾಕ್ ಶಾಬಾನ್ (85) ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನ ಹೊಂದಿದರು. 18ನೇ ವಯಸ್ಸಿನಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡ ಅಬ್ದುಲ್ ರಝಾಕ್ ಶಾಬಾನ್ ಅವರು ಎರಡು ವರ್ಷ ಬೆಂಗಳೂರಿನ ಏರ್ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ಕಮ್ಯುನಿಕೇಶನ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದು ಬಳಿಕ ಕಮ್ಯುನಿಕೇಶನ್ ಆಫಿಸರ್ ಆಗಿ ಕಾರ್ಯನಿರ್ವಹಿಸಿದ್ದರು. ವಾಯುಸೇನಾ ಕಾಲಾವಧಿಯಲ್ಲಿ ದೆಹಲಿ, ಆಗ್ರಾ ಹಾಗೂ ಹಿಮಾಲಯದ ತಪ್ಪಲಿನ ಲಡಾಖ್ ಸೇನಾ ನೆಲೆಯಲ್ಲೂ ಕಾರ್ಯಾಚರಣೆ ನಡೆಸಿದ್ದರು. 1962ರ ಚೀನಾ ಯುದ್ಧ 1965ರ ಪಾಕಿಸ್ತಾನ ಯುದ್ಧ ಹಾಗೂ 1971ರ ಪಾಕಿಸ್ತಾನದ ವಿರುದ್ಧ ಸಮರ ಸೇನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಮೆಡಲ್ಗಳಿಂದ ಪುರಸ್ಕೃತರಾದರು. 1975ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ ನಂತರ ಧಾರ್ಮಿಕ ಸೇವಾರಂಗದಲ್ಲಿ ತೊಡಗಿಸಿಕೊಂಡಿದ್ದರು. ಮೂಳೂರಿನ ಮಸೀದಿಯ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಮೂರು ಭಾರಿ ಮದ್ರಸದ ಹಾಗೂ ಒಂದು ಭಾರಿ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಡುಗೈ ದಾನಿಯೂ ಆಗಿದ್ದ ಇವರು ತಂದೆಯ ಹೆಸರಿನಲ್ಲಿ ಮುಹಮ್ಮದ್ ಶಾಬಾನ್ ಟ್ರಸ್ಟ್ ಸ್ಥಾಪಿಸಿ ಅಶಕ್ತ ಕುಟುಂಬಗಳಿಗೆ ಧನಸಹಾಯ ನೀಡುತ್ತಿದ್ದರು. ಹಾಜಿ ಅಬ್ದುಲ್ ರಝಾಕ್ ಶಾಬಾನ್ ಅವರು ಪತ್ನಿ, ಗಂಡು ಮಕ್ಕಳು, ಬಂಧುಬಳಗವನ್ನು ಅಗಲಿದ್ದಾರೆ.
ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ಹರ್ಷಿತಾ ಇನ್ನಂಜೆ ಆಯ್ಕೆ
Posted On: 12 Oct 2022, 05:54 PM
ಕಾಪು : ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ಶಿವಮೊಗ್ಗದಲ್ಲಿ ಅಕ್ಟೋಬರ್ 10 ರಂದು ನಡೆಸಿದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುಮಾರಿ ಹರ್ಷಿತಾ ಇನ್ನಂಜೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಮುಂಬರುವ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
