Updated News From Kaup
ಕಾಪು : ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ತಾಲೂಕು ಘಟಕದ ಅಧ್ಯಕ್ಷರಾಗಿ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಆಯ್ಕೆ
Posted On: 09 Oct 2022, 06:20 PM
ಕಾಪು : ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಇದರ ಕಾಪು ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಎರ್ಮಾಳು ಪೂಂದಾಡು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಸಾಸ್ ನ ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಧಾಕೃಷ್ಣ ಮೆಂಡನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಾಲಿಗೆ ನೂತನ ಅಧ್ಯಕ್ಷರಾಗಿ ರಘುರಾಮ ಶೆಟ್ಟಿ ಕೊಪ್ಪಲಂಗಡಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಗೌರವ ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಗುರ್ಮೆ, ಮೋಹನ್ ಬಂಗೇರ ಕಾಪು, ಲೀಲಾಧರ ಶೆಟ್ಟಿ ಕರಂದಾಡಿ, ಗೌರವ ಸಲಹೆಗಾರರಾಗಿ ವಿನಯ ಕುಮಾರ ಶೆಟ್ಟಿ ಎಲ್ಲದಡಿ ಎರ್ಮಾಳು, ನಾರಾಯಣ ಗುರುಸ್ವಾಮಿ ಕಾಪು ಪ್ರಧಾನ ಕಾರ್ಯದರ್ಶಿಯಾಗಿ ದಿವಾಕರ್ ಶೆಟ್ಟಿ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಧರ್ ಶೆಟ್ಟಿಗಾರ್ ಕರಂದಾಡಿ ಕೋಶಾಧಿಕಾರಿಯಾಗಿ ಜಿತೇಶ್ ಶೆಟ್ಟಿ ಮಜೂರು, ಉಪಾಧ್ಯಕ್ಷರಾಗಿ ಜಯ ಎರ್ಮಾಳು, ಶಂಕರ ಗಿರಿನಗರ ಕಾರ್ಯದರ್ಶಿಯಾಗಿ ಧನಂಜಯ ಮಲ್ಲಾರು, ನಾಗೇಶ್ ಮಲ್ಲಾರು ಭಜನಾ ಸಹ ಸಂಚಾಲಕರಾಗಿ ಸುರೇಶ್ ಅದಮಾರು ಆಯ್ಕೆಯಾದರು. ಸಾಸ್ ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಧಾಕೃಷ್ಣ ಮೆಂಡನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಸುಂದರ ಗುರುಸ್ವಾಮಿ ನಿಟ್ಟೂರು, ವಿನಯಕುಮಾರ್ ಶೆಟ್ಟಿ ಎಲ್ಲದಡಿ ಎರ್ಮಾಳು, ಮೋಹನ ಬಂಗೇರ ಕಾಪು ಮತ್ತಿತರರು ಉಪಸ್ಥಿತರಿದ್ದರು ದಿವಾಕರ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ರಂಜಿತ್ ಶೆಟ್ಟಿ ವಂದಿಸಿದರು.
ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಹಿತಸಾಧನ ವೇದಿಕೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Posted On: 09 Oct 2022, 04:57 PM
ಉಚ್ಚಿಲ : ಮಹಾಲಕ್ಷ್ಮಿ ವಿದ್ಯಾಸಂಸ್ಥೆ ಸಭಾಭವನದಲ್ಲಿ ನಡೆದ ದಕ್ಷಿಣ ಕನ್ನಡ ಮೊಗವೀರ ಹಿತಸಾಧನ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ಜರಗಿತು. ಈ ಸಂದರ್ಭ ಶಾಸಕರಾದ ಲಾಲಾಜಿ ಆರ್ ಮೆಂಡನ್ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ದ. ಕ ಮೊಗವೀರ ಹಿತಸಾಧನ ವೇದಿಕೆ ಅಧ್ಯಕ್ಷ ಸರ್ವೋತ್ತಮ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್, ಮೋಹನ್ ಬೆಂಗ್ರೆ, ವಿನೀತ್ ಅಮೀನ್, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಪೀಟರ್ ಜೋಸೆಫ್, ವಿಶ್ವನಾಥ್ ಕುರಾಡಿ, ಸುಧಾಕರ್ ಕರ್ಕೇರ, ಸತೀಶ್ ಆರ್ ಸಾಲ್ಯಾನ್, ರವಿ ಕುಂದರ್, ವೇದವ್ಯಾಸ ಬಂಗೇರ ಹಾಗೂ ಮೊಗವೀರ ಹಿತಸಾಧನ ವೇದಿಕೆ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಗಂಗಾಧರ ಕರ್ಕೇರ ಸ್ವಾಗತಿಸಿದರು. ಪುಷ್ಪರಾಜ್ ಕೋಟ್ಯಾನ್ ವಂದಿಸಿದರು. ಲಕ್ಷ್ಮಣ್ ಮೈಂದನ್ ಕಾರ್ಯಕ್ರಮ ನಿರೂಪಿಸಿದರು.
ಉಚ್ಚಿಲ : ಬಾವಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಗೃಹಿಣಿ ಶವ ಪತ್ತೆ ; ದೂರು ದಾಖಲು
Posted On: 09 Oct 2022, 04:40 PM
ಉಚ್ಚಿಲ : ಇಲ್ಲಿನ ಸಮೀಪದ ಎಲ್ಲೂರು ಗ್ರಾಮದ ಹಾಡಿಯಲ್ಲಿರುವ ಪಾಳುಬಿದ್ದ ಬಾವಿಯಲ್ಲಿ ವಿವಾಹಿತ ಗೃಹಿಣಿಯ ಮೃತದೇಹ ರವಿವಾರ ಪತ್ತೆಯಾಗಿದ್ದು ಕೊಲೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎಲ್ಲೂರು ಗ್ರಾಮದ ರಕ್ಷಿತಾ(24) ಮೃತಪಟ್ಟ ಮಹಿಳೆ. ಉಡುಪಿಯ ಫ್ಯಾನ್ಸಿಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತಾ ಅವರು ತಮ್ಮ ಸಹೋದ್ಯೋಗಿ ಸಂಜಯ ಆಚಾರಿ ಎಂಬಾತನೊಂದಿಗೆ 2 ವರ್ಷದ ಹಿಂದೆ ಮದುವೆ ಆಗಿದ್ದರು. ನಂತರ ರಕ್ಷಿತಾಳ ತಾಯಿಗೆ ಹುಷಾರಿಲ್ಲದ ಕಾರಣ ಕಾಪುವಿನ ಎಲ್ಲೂರು ಕಂಚುಗಾರ ಕೇರಿ ಎಂಬಲ್ಲಿರುವ ತಾಯಿ ಮನೆಗೆ ಬಂದು ಗಂಡ ಹಾಗೂ ತಂದೆ ತಾಯಿಯೊಂದಿಗೆ ವಾಸವಾಗಿದ್ದರು. ಈ ನಡುವೆ ರಕ್ಷಿತಾಳ ಗಂಡ ಸಂಜಯ್ ಹಾಗೂ ಅವರ ಜೊತೆ ಕೆಲಸ ಮಾಡುವ 3 ಜನ ಹುಡುಗಿಯರೊಂದಿಗೆ ರಕ್ಷಿತಾ ಅವರ ದೊಡ್ಡಮ್ಮನ ಮಗಳು ಶಕುಂತಳ ಎಂಬವರವರ ಮನೆಗೆ ಬಂದು ರಕ್ಷಿತಾಳ ನಡತೆ ಸರಿ ಇಲ್ಲ ಎಂಬುದಾಗಿ ತಿಳಿಸಿ, ರಕ್ಷಿತಾ ಅವರನ್ನು ಅಲ್ಲಿಯೇ ಬಿಟ್ಟು ನಂತರ ಅದೇ ದಿನ ಸಂಜೆ ಬಂದು ಕರೆದುಕೊಂಡು ಹೋಗಿದ್ದ. ಆ ನಂತರ ರಕ್ಷಿತಾ ಅವರ ಆರೋಗ್ಯ ವಿಚಾರಿಸಲು ಶಕುಂತಳ ಅವರು ಸಂಜಯ್ ಗೆ ಕರೆ ಮಾಡಿದಾಗ ಸರಿಯಾಗಿ ಸ್ಪಂದಿಸದೇ ಪತ್ನಿ ಯಾರೊಂದಿಗೋ ಹೋಗಿರಬೇಕು ಎಂದು ಉತ್ತರಿಸಿದ್ದಾನೆ. ಅಲ್ಲದೆ ಈ ವೇಳೆ ರಕ್ಷಿತಾ ಅವರನ್ನು ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ಆದರೆ ಅ.8 ರ ಸಂಜೆ ವೇಳೆ ಎಲ್ಲೂರು ಗ್ರಾಮದ ದಿ. ಪೊಲ್ಲಶೆಟ್ಟಿ ಎಂಬುವರ ಹಾಡಿಯಲ್ಲಿರುವ ಪಾಳುಬಿದ್ದ ಕೆಸರು ನೀರು ತುಂಬಿರುವ ದೊಡ್ಡ ಬಾವಿಯಲ್ಲಿ ರಕ್ಷಿತಾ ಅವರ ಮೃತದೇಹ ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಂತೆ ರಕ್ಷಿತಾ ಅವರು ಪಾಳು ಬಾವಿಗೆ ಬಿದ್ದಿರುವ ಅಥವಾ ಅವರನ್ನು ಇನ್ಯಾರೋ ದೂಡಿಹಾಕಿರುವ ಕಾರಣದಿಂದ ಆಕೆಯು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದ್ದು, ರಕ್ಷಿತಾರ ಮರಣದ ಬಗ್ಗೆ ಅವಳ ಗಂಡ ಸಂಜಯ ಆಚಾರಿಯ ಮೇಲೆ ಸಂಶಯವಿರುವುದಾಗಿ ಶಕುಂತಳಾ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾದ ಟಿಪ್ಪರ್
Posted On: 09 Oct 2022, 02:34 PM
ಪಡುಬಿದ್ರಿ : ಇಲ್ಲಿನ ಬೀಡಿನ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಮುದ್ರ ತಡೆಗೋಡೆ ಗೆ ಬಳಸುವ ಕಲ್ಲುಗಳನ್ನು ಹೇರಿಕೊಂಡು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಅಡ್ಡಲಾಗಿ ಬಿದ್ದ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ. ಹೆದ್ದಾರಿಯಲ್ಲಿ ಹೆಚ್ಚಿನ ವಾಹನಗಳು ಚಲಿಸದೆ ಇದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಅವಘಡ ಸಂಭವಿಸುವುದು ತಪ್ಪಿದೆ. ಅವಘಡದಲ್ಲಿ ಟಿಪ್ಪರ್ ಚಾಲಕ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾನೆ. ಸ್ಥಳೀಯರು ಚಾಲಕನನ್ನು ಉಪಚರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಸುರತ್ಕಲ್ : ತುಲು ದಿಬ್ಬನ ಕಾರ್ಯಕ್ರಮದ ಪೂರ್ವಭಾವಿ ಸಭೆ
Posted On: 09 Oct 2022, 01:20 PM
ಸುರತ್ಕಲ್ : ಅಕ್ಟೋಬರ್ 16 ರಂದು ನಡೆಯುವ ತುಲು ದಿಬ್ಬನ ಕಾರ್ಯಕ್ರಮದ ಪೂರ್ವಭಾವಿ ಸಭೆ ಸುರತ್ಕಲ್ ಬಿಜೆಪಿ ಯುವ ಮೋರ್ಚಾ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ಮತ್ತು ಜೈ ತುಳುನಾಡ್ ಸಮಿತಿ ವತಿಯಿಂದ ತುಳುಲಿಪಿ ಶಂಶೋಧಕ ಡಾ .ಪುಂಡೂರು ವೆಂಕಟರಾಜ ಪುಣಿಂಚಿತ್ತಾಯವರ ಹುಟ್ಟಿದ ದಿನದ ನೆನಪಿಗಾಗಿ ಆಚರಿಸುವ ವಿಶ್ವ ತುಲು ಲಿಪಿ ದಿನದ ಅಂಗವಾಗಿ ಅಕ್ಟೋಬರ್ 16 ರಂದು ಬೆಳಿಗ್ಗೆ 9.30 ಗಂಟೆಗೆ ಸುರತ್ಕಲ್ ಗೋವಿಂದದಾಸ ಕಾಲೇಜಿನ ಎದುರು ಮೆರವಣಿಗೆಗೆ ಚಾಲನೆ ನೀಡಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಮೆರವಣಿಗೆ ಸಾಗಿ ಸುರತ್ಕಲ್ ಜಂಕ್ಷನ್ ನ ಕರ್ನಾಟಕ ಸೇವಾ ವೃಂದದಲ್ಲಿ ಸಮಾರೋಪಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ತುಲು ಲಿಪಿ ಅಕ್ಷರಗಳು, ತುಳು ಮಾತೆಯ ಭಾವಚಿತ್ರ, ತುಳು ಧ್ವಜದೊಂದಿಗೆ ಮೆರವಣಿಗೆ ಸಾಗಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂಧರ್ಭ ಜೈ ತುಳುನಾಡ್ ಸಮಿತಿಯ ಸದಸ್ಯ ಕಿರಣ್ ತುಳುವ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಮತ್ತು ತುಳು ಲಿಪಿಯ ಬಗ್ಗೆ ಮಾಹಿತಿ ನೀಡಿದರು. ಮ ನ ಪಾ ಸದಸ್ಯ ವರುಣ್ ಚೌಟ, ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಪುರ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂಧರ್ಭದಲ್ಲಿ ಮ ನ ಪಾ ಸದಸ್ಯ ಮನೋಜ್ ಕುಮಾರ್ ಕೋಡಿಕಲ್, ಮ ನ ಪಾ ಸದಸ್ಯೆ ಶ್ವೇತಾ ಪೂಜಾರಿ, ಬಿಜೆಪಿ ಪ್ರಮುಖ ಪುಷ್ಪರಾಜ್ ಮುಕ್ಕ, ಮಹಿಳಾ ಪ್ರಮುಖ್ ಪವಿತ್ರ ನಿರಂಜನ್, ಜೈ ತುಳುನಾಡ್ ಸಮಿತಿಯ ಸದಸ್ಯರು , ರಕ್ಷಿತ್ ಕೋಟ್ಯಾನ್,ವಿನಯ್ ರೈ, ದೀಕ್ಷಿತ ಮಧ್ಯ, ಶ್ವೇತ ಶೆಟ್ಟಿ, ದುರ್ಗಾಪ್ರಸಾದ್ ರೈ ಉಪಸ್ಥಿತರಿದ್ದರು.
ಪಡುಬಿದ್ರಿ : ಬೀಚ್ ಸೂಪರ್ ವೈಸರ್ ಮೇಲೆ ಹಲ್ಲೆ - ದೂರು ದಾಖಲು
Posted On: 08 Oct 2022, 12:58 PM
ಪಡುಬಿದ್ರಿ : ಬೀಚ್ ಸೂಪರ್ ವೈಸರ್ ಆಗಿರುವ ವಿಜೇಶ್ ಆರ್. ಕೋಟ್ಯಾನ್ ಮೇಲೆ ಅವರ ಪರಿಚಯಸ್ಥರೇ ಆಗಿರುವ ಕಿರಣ್ ರಾಜ್, ಎರ್ಮಾಳಿನ ನಿತೇಶ್ ಮತ್ತು ಸುಮನ್ ಅವರು 2 ಸ್ಕೂಟಿಗಳಲ್ಲಿ ಬಂದು ಹಲ್ಲೆ ನಡೆಸಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕಿರಣ್ ರಾಜ್ ನು ವಿಜೇಶ್ ಬಳಿ ಬಂದು ಮುಖ್ಯ ಬೀಚ್ ನಿರ್ವಹಣೆ ಮಾಡುತ್ತಿರುವ ಸುಕೇಶನ ಜತೆ ಕೆಲಸ ಮಾಡುವ ಬಗ್ಗೆ ಆಕ್ಷೇಪಿಸಿದ್ದಾನೆ. ಬಳಿಕ ವಿಜೇಶ್ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಈ ಸಮಯ ಬೀಚ್ ಲೈಫ್ ಗಾರ್ಡ್ ಕೆಲಸ ಮಾಡಿಕೊಂಡಿರುವ ಅಕ್ಷಯ ಕೋಟ್ಯಾನ್ ಗಲಾಟೆ ಬಿಡಿಸಲು ಬಂದಾಗ 2 ಮತ್ತು 3 ನೇ ಆರೋಪಿಗಳು ಅಕ್ಷಯ್ ಕೋಟ್ಯಾನ್ ಗು ಬೈದಿದ್ದು, ಕಿರಣ್ ರಾಜನು ನಿಮ್ಮಿಬ್ಬರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿಜೇಶ್ ಅವರು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.
ಮಂಗಳೂರು : ವೃಷ್ಟಿ ಚಲನಚಿತ್ರದ ಪೋಸ್ಟರ್ ಬಿಡುಗಡೆ
Posted On: 07 Oct 2022, 07:24 PM
ಮಂಗಳೂರು : ವಾಗ್ಮಿ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಸಾಧನಾ ಜಗದೀಶ್ ಶೆಟ್ಟಿ ನಿರ್ಮಾಣದ ಹೊಸ ಕನ್ನಡ ಚಲನಚಿತ್ರ ವೃಷ್ಟಿ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಪ್ರಕಾಶ್ ನಾಥ ಮಂದಿರದಲ್ಲಿ ನಡೆಯಿತು. ಪ್ರಕಾಶ್ ನಾಥ ಮಂದಿರದ ಸುಮಂತ್ ರವರು ಪೋಸ್ಟರ್ ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಧಾರ್ಮಿಕ ಮುಖಂಡ ನಾಗರಾಜ್ ಆಚಾರ್ಯ ಉಪಸ್ಥಿತಿ ಇದ್ದರು. ಈ ಮೊದಲು ಕನಸು ಮಾರಾಟಕ್ಕಿದೆ ಚಲನಚಿತ್ರ ಹಾಗೂ ವನಜಾ ವೆಬ್ ಸೀರಿಸ್, ಮಾಡಿದ ತಂಡವೇ ಈ ವೃಷ್ಟಿ ಚಲನಚಿತ್ರವನ್ನು ಚಿತ್ರೀಕರಿಸಿದ್ದು ನಿಶಿತ್ ಶೆಟ್ಟಿಯವರು ನಿರ್ದೇಶನ ಮಾಡಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಕ್ಯಾಮರ ಕೈಚಳಕ ಈ ಚಿತ್ರದಲ್ಲಿದೆ. ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದು, ಸಂಗೀತ ನಿರ್ದೇಶನವನ್ನು ಮಾನಸ ಹೊಳ್ಳರವರು ನಿರ್ವಹಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಯಶವಂತ್ ಬೆಳ್ತಂಗಡಿ,ಸಿಂಚನಾ ಪಿ.ರಾವ್, ವಿನಿಶಾ, ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ಜೈನ್, ಯುವ ಶೆಟ್ಟಿ, ರಾಕೇಶ್ ಪೂಜಾರಿ, ಅನೀಶ್ ಪೂಜಾರಿ ಮುಂತಾದವರು ಅಭಿನಯಿಸಿದ್ದಾರೆ.
ಪಡುಬಿದ್ರಿ : ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆ ಅಕ್ರಮ - ಜಿಲ್ಲಾಧಿಕಾರಿಗೆ ದೂರು
Posted On: 07 Oct 2022, 04:20 PM
ಪಡುಬಿದ್ರಿ : ಇಲ್ಲಿನ ಎಂಡ್ ಪಾಯಿಂಟ್ನಲ್ಲಿರುವ ಅಂತಾರಾಷ್ಟ್ರೀಯ ಮಾನ್ಯತೆಯ ಬ್ಲೂಫ್ಲ್ಯಾಗ್ ಬೀಚ್ನ ಬಹುತೇಕ ಉದ್ಯೋಗಿಗಳು ಗುರುವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬ್ಲೂಫ್ಲ್ಯಾಗ್ ಬೀಚ್ ನಿರ್ವಹಣೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಕಳೆದ 15 ತಿಂಗಳುಗಳಿಂದ ಕೆಲಸದ ವಾತಾವರಣ ಹದಗೆಟ್ಟಿದೆ. ಬೋಟಿಂಗ್ಗೆ ನಕಲಿ ರಶೀದಿಗಳನ್ನು ಮುದ್ರಿಸಿ ಹಣ ವಸೂಲು ಮಾಡಲಾಗುತ್ತಿದೆ. ವಸೂಲಾದ ಹಣವು ಪ್ರವಾಸೋದ್ಯಮ ಇಲಾಖೆಯ ಖಾತೆಗೆ ಜಮೆಯಾಗದೆ ಓರ್ವರ ಖಾಸಗಿ ಖಾತೆಗೆ ಜಮೆಯಾಗುತ್ತಿದೆ. ಈ ಕುರಿತು ಈ ಹಿಂದೆಯೂ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಿಗೂ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ ಎಂದು ಮನವಿಗೆ ಸಹಿ ಮಾಡಿರುವ ಅಲ್ಲಿನ 22 ಗುತ್ತಿಗೆ ಉದ್ಯೋಗಿಗಳು ದೂರಿದ್ದಾರೆ. ನಾವು 31 ಮಂದಿ ಉದ್ಯೋಗಿಗಳಿದ್ದು ಸೂಪರ್ವೈಸರ್ಗಳಿಬ್ಬರು ನಮಗೆ ಜೀವಭಯವನ್ನೂ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಅವರಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ, ಕಳೆದ ಮೂರು ತಿಂಗಳುಗಳಿಂದ ಬ್ಲೂ ಫ್ಲ್ಯಾಗ್ ಬೀಚ್ನ ಕೆಲಸಗಾರರ ನಡುವೆ ಆಂತರಿಕ ಭಿನ್ನಾಭಿಪ್ರಾಯವು ಕಾಣಸಿಕೊಂಡಿರುವ ಪರಿಣಾಮ ಇದು. ಸ್ಥಳೀಯರಿಗೇ ಉದ್ಯೋಗ ನೀಡಿದ್ದು, ಮಾಸಿಕ ವೇತನವನ್ನೂ ಸಕಾಲದಲ್ಲಿ ಪಾವತಿಸಲಾಗುತ್ತಿದೆ. ಬೋಟಿಂಗ್, ಪ್ರವೇಶಾತಿಗಳಿಂದ ಬರುವ ಆದಾಯಗಳಿಗೆ ಕ್ರಮವತ್ತಾದ ರಶೀದಿಯನ್ನು ನೀಡಲಾಗುತ್ತಿದೆ. ಆಯಾಯ ದಿನ ಸಂಜೆಯ ವೇಳೆಗೆ ಲೆಕ್ಕಾಚಾರವಾಗಿ ಮರುದಿನವೇ ಪ್ರವಾಸೋದ್ಯಮ ಇಲಾಖೆಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಅಪಸ್ವರವೆತ್ತಿರುವ ಉದ್ಯೋಗಿಗಳು ಸೂಕ್ತ ದಾಖಲೆಗಳನ್ನು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಬೋ ತಿಳಿಸಿದ್ದಾರೆ.
ಮೈಸೂರು ದಸರಾದಲ್ಲಿ ಪ್ರಮಖ ಆಕರ್ಷಣೆಯಾದ ತುಳುನಾಡ ಕಂಗಿಲು
Posted On: 07 Oct 2022, 01:27 PM
ಕಾಪು : ವಿಶ್ವವಿಖ್ಯಾತ ಪಡೆದ ಮೈಸೂರು ದಸರಾದಲ್ಲಿ ತುಳುನಾಡ ಜಾನಪದ ಕಲೆಯಾದ ಕಂಗಿಲು ನೃತ್ಯ ಪ್ರಮುಖ ಆಕರ್ಷಣೆಯಾಗಿತ್ತು. ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡ ಕಂಗಿಲು ನೃತ್ಯದ ನೇತೃತ್ವವನ್ನು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಚರಣ್ ಪೊಲಿಪು ವಹಿಸಿದ್ದರು. ಈ ತಂಡದಲ್ಲಿ ಕಾರ್ತಿಕ್ ಬಂಗೇರ ಪಡುಬಿದ್ರಿ, ವಿಖ್ಯಾತ್, ವರುಣ್. ಬಿ.ಕೋಟ್ಯಾನ್, ಕಿರಣ್ ಕಾಪು, ಅಂಕಿತ್ ನಾಯಕ್, ಸಂಧ್ಯ ನಾಯಕ್, ಪ್ರಥ್ವಿ ಹೆಗ್ಡೆ, ಅಂಬಿಕಾ ಸಾಗರ, ಆಕಾಶ್, ವಿನೋದ್, ಕಾರ್ತಿಕ್, ಪ್ರವೀಣ್, ದಿಲೀಪ್, ಅಶ್ವಥ್ ಕುಮಾರ್ (ಆಯುಷ್ ಗ್ರೂಪ್ ) ಭಾಗವಹಿಸಿದ್ದರು.
ಕಾಪು : ಶ್ರೀ ವೆಂಕಟರಮಣ ದೇವಳ - ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ಸಂಪನ್ನ
Posted On: 06 Oct 2022, 11:24 AM
ಕಾಪು : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಒಂಬತ್ತು ದಿನ ನಿತ್ಯ ರಾತ್ರಿ ದುರ್ಗಾ ನಮಸ್ಕಾರ ಸೇವೆಯು ಜರಗಿ ವಿಜಯದಶಮಿ ದಿನದಂದು ಚಂಡಿಕಾ ಯಾಗ ಪೂರ್ಣಾಹುತಿ - ಮಹಾ ಸಮಾರಾಧನೆ ವಿಜೃಂಭಣೆಯಿಂದ ಜರಗಿತು. ವೇದಮೂರ್ತಿ ಕಮಲಾಕ್ಷ ಭಟ್ ಮಾರ್ಗದರ್ಶನ ದಲ್ಲಿ ವೇದಮೂರ್ತಿ ಶ್ರೀನಿವಾಸ ಭಟ್ ರವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಆಡಳಿತ ಮಂಡಳಿಯ ಸರ್ವಸದಸ್ಯರು ಹಾಗೂ ಊರ ಪರವೂರ ನೂರಾರು ಭಜಕರು ಪಾಲ್ಗೊಂಡರು.
