Updated News From Kaup
ಉಡುಪಿ : ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ, ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮ
Posted On: 20 Oct 2022, 11:07 PM
ಉಡುಪಿ : ಸೇವಾಭಾರತಿ - ಸೇವಾಧಾಮ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಹೈಟೆಕ್ ಮೆಡಿಕೇರ್ ಆಸ್ಪತ್ರೆ, ಅಂಬಲಪಾಡಿ ಉಡುಪಿ, ರೋಟರಿ ಕ್ಲಬ್ ಕಾಪು, ಅಮ್ಮ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.), ಕಾಪು ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವುಗಳ ಸಹಯೋಗದಲ್ಲಿ ಅಕ್ಟೋಬರ್ 19ರಂದು ಹೈಟೆಕ್ ಮೆಡಿಕೇರ್ ಆಸ್ಪತ್ರೆ ಅಂಬಲಪಾಡಿ ಉಡುಪಿ ಇಲ್ಲಿ 16ನೇ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು 10 ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮವನ್ನು ರೋಟರಿಯ ಝೋನ್ -5 ಸಹಾಯಕ ಗವರ್ನರ್ ರೊ. ಡಾ| ಶಶಿಕಾಂತ ಕಾರಿಂಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾಭಾರತಿ, ಬೆಳ್ತಂಗಡಿ ಅಧ್ಯಕ್ಷರಾದ ಕೆ. ವಿನಾಯಕ ರಾವ್ ವಹಿಸಿದ್ದರು. ಈ ಸಂದರ್ಭ ಅಮ್ಮ ಚಾರಿಟೇಬಲ್ ಟ್ರಸ್ಟ್ ನ ರಮೇಶ್ ಹೆಗ್ಡೆ ಕಲ್ಯಾ, ವಿಜಯ ಕೊಡವೂರು, ರೊ. ಕೆ. ಸದಾಶಿವ ಭಟ್, ಡಾ. ಟಿ. ಎಸ್. ರಾವ್, ವಾಣಿ ವಿ. ರಾವ್, ಡಾ. ನಾಗಭೂಷಣ ಉಡುಪ, ಡಾ. ಉಮೇಶ್ ಪ್ರಭು, ಡಾ. ಎಸ್. ಪಿ. ಮೋಹಂತಿ, ಡಾ. ಈಶ್ವರ್ ಕೀರ್ತಿ ಸಿ, ರೊ. ಶಾಲೆಟ್ ಲುವಿಸ್, ಕೃಷ್ಣ ಪ್ರಸಾದ್ ಶೆಟ್ಟಿ, ಗಣೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭ : ಸೇವಾಭಾರತಿ - ಸೇವಾಧಾಮ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಹೈಟೆಕ್ ಮೆಡಿಕೇರ್ ಆಸ್ಪತ್ರೆ, ಅಂಬಲಪಾಡಿ ಉಡುಪಿ, ರೋಟರಿ ಕ್ಲಬ್ ಕಾಪು, ಅಮ್ಮ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.), ಕಾಪು ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವುಗಳ ಸಹಯೋಗದಲ್ಲಿ ಅಕ್ಟೋಬರ್ 20 ರಂದು ಹೈಟೆಕ್ ಮೆಡಿಕೇರ್ ಆಸ್ಪತ್ರೆ ಅಂಬಲಪಾಡಿ ಉಡುಪಿ ಇಲ್ಲಿ 16ನೇ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು 10 ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರು, ಕೊಡವೂರು ಮತ್ತು ಸೇವಾಧಾಮದ ನಿರ್ದೇಶಕರಾದ ಕೆ. ವಿಜಯ ಕೊಡವೂರು ವಹಿಸಿದ್ದರು. ಈ ಸಂದರ್ಭ ಸಿಎ ಗುಜ್ಜಾಡಿ ಪ್ರಭಾಕರ್ ನರಸಿಂಹ ನಾಯಕ್, ವೈ. ಸುಧೀರ್ ಕುಮಾರ್, ಗುರುಪ್ರಕಾಶ್ ಶೆಟ್ಟಿ, ಪ್ರಾಣೇಶ್, ವಿಷ್ಣು ಪ್ರಸಾದ್ ತೆಂಕಿಲ್ಲಾಯ, ಸಂಪತ್ ಕುಮಾರ್ ರಾವ್, ರೊ. ವಿದ್ಯಾಧರ ಪುರಾಣಿಕ್, ಹರೀಶ್ ಕೊಪ್ಪಲ್ ತೋಟ, ಸ್ವರ್ಣ ಗೌರಿ, ಸಂತೋಷ್ ಸುವರ್ಣ, ಮನು ಆರ್ ಮತ್ತಿತರರು ಉಪಸ್ಥಿತರಿದ್ದರು.
ನವಂಬರ್ 7 ರಂದು ಉಡುಪಿಗೆ ಬರಲಿರುವ ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆ ಪೂರ್ವ ತಯಾರಿ ಸಭೆ
Posted On: 20 Oct 2022, 10:25 PM
ಉಡುಪಿ : ಅಯೋಧ್ಯ ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆಯ ಪೂರ್ವ ತಯಾರಿ ಬೈಠಕ್ ಅಕ್ಟೋಬರ್ 17 ರಂದು ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ದಿಗ್ವಿಜಯ ಯಾತ್ರೆಯು 26 ರಾಜ್ಯಗಳನ್ನು ಸುತ್ತಾಡಿ ಬರುವ ಯಾತ್ರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಚಾಲನೆಯನ್ನು ನೀಡಿದ್ದು. ಈ ಯಾತ್ರೆಯು ನವಂಬರ್ 7 ರಂದು ಉಡುಪಿ ಜಿಲ್ಲೆಗೆ ಬರಲಿದ್ದು ಇದಕ್ಕೆ ಪೂರ್ವ ತಯಾರಿಗಾಗಿ ಯೋಚನೆ ಮತ್ತು ಯೋಜನೆಗಾಗಿ ಸಮಿತಿಯನ್ನು ರಚನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ವಿಜಯ ಕೊಡವೂರು ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ಮಂದಿರವನ್ನು ನಿರ್ಮಾಣಕ್ಕಾಗಿ ನಮ್ಮ ಹಿರಿಯರು ಜೀವನವನ್ನೇ ನೀಡಿದ್ದಾರೆ. ಜೊತೆಯಾಗಿ ಸಂಘಟಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ವಿಶ್ವ ಹಿಂದೂ ಪರಿಷತ್ ಅವರ ಮುಂದಾಳತ್ವದಲ್ಲಿ ಈ ಒಂದು ಹೋರಾಟಕ್ಕೆ ಕಿಚ್ಚನ್ನು ನೀಡಿ ನಮ್ಮ ಹಿರಿಯರು ಅದನ್ನು ಉಳಿಸುವ ಪ್ರಯತ್ನವನ್ನು ಮಾಡಿದ್ದಾರೆ ಕಾನೂನಾತ್ಮಕವಾಗಿ ಲಕ್ಷಾಂತರ ಜನ ಹೋರಾಟ ಮಾಡಿದ್ದಾರೆ ಹಾಗೂ ಸಾವು ನೋವು ನಮ್ಮ ಮನಸ್ಸಲ್ಲಿ ಇದ್ದು ಈ ಒಂದು ಅಯೋಧ್ಯೆಯ ದಿಗ್ವಿಜಯ ಸಂದರ್ಭದಲ್ಲಿ ನಾವು ಎಲ್ಲಾ ಸಂಘ ಸಂಸ್ಥೆ, ಭಜನಾ ತಂಡ, ಧಾರ್ಮಿಕ ಶ್ರದ್ಧಾ ಕೇಂದ್ರದ ಮುಖಾಂತರ ರಾಮನ ಮೂರ್ತಿಗೆ ಹಾಲನ್ನು ಅಭಿಷೇಕ ಮಾಡುವಂತ ಅವಕಾಶವನ್ನು ನೀಡಿದ್ದಾರೆ ಮತ್ತು ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಶಕ್ತಿ ಶಂತಾನಂದ ಮಹರ್ಷಿ ಇವರ ಮಾರ್ಗದರ್ಶನದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಹಿಂದೂ ಸಮಾಜದ ಎಲ್ಲಾ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಚಂದಕಾಣಿಸಿಕೊಡಬೇಕು ಮತ್ತು ಕೇವಲ ಮಂದಿರ ನಿರ್ಮಾಣ ಮಾತ್ರವಲ್ಲ ಜೊತೆಗೆ ರಾಮಾರಾಜ್ಯದ ನಿರ್ಮಾಣವಾಗಬೇಕಾಗಿದೆ. ರಾಮನ ರೀತಿ ನಾವೆಲ್ಲ ನಡೆದು ರಾಮರಾಜ್ಯ ನಿರ್ಮಾಣ ಮಾಡುವಂತ ಅವಶ್ಯಕತೆ ಇದೆ ಎಂದರು. ಹತ್ತು ಸಾವಿರ ಮಂದಿ ಧಾರ್ಮಿಕ ಸಭೆಗೆ ಸೇರಿ ತದನಂತರ ವಾಹನ ಜಾಥದ ಮುಖಾಂತರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದವರೆಗೆ ಕರೆದುಕೊಂಡು ಹೋಗಿ ಅಲ್ಲಿ ಆಶೀರ್ವಚನ ಪಡೆದು ಅವರನ್ನು ತಲುಪಿಸುವಂತಹ ಜವಾಬ್ದಾರಿ ಉಡುಪಿ ಜಿಲ್ಲೆಯ ಸಮಸ್ತ ನಾಗರಿಕರ ಹೆಗಲಿನಲ್ಲಿದೆ. ಆದ್ದರಿಂದ ಎಲ್ಲಾ ರಾಮಭಕ್ತರು ಈ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಮತ್ತು ಈ ಕಾರ್ಯಕ್ರಮದ ಮುಖಾಂತರ ಸಮಾಜ ಜಾಗ್ರತೆಯಾಗಬೇಕು. ಹಿಂದೂ ಸಮಾಜದಲ್ಲಿ ಇರುವಂತಹ ಕುಂದು ಕೊರತೆಗಳು ನಿವಾರಣೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ಪುರುಷೋತ್ತಮ್ ಶೆಟ್ಟಿ, ಹರಿಯಪ್ಪ ಕೋಟ್ಯಾನ್, ಪಾಂಡುರಂಗ ಮಲ್ಪೆ, ರಾಘವೇಂದ್ರ ಕುಂದರ್ (ವಿಶ್ವ ಹಿಂದೂ ಪರಿಷತ್), ಮನೋಹರ್ ಶೆಟ್ಟಿ ತೊನ್ಸೆ, ರಾಧಾಕೃಷ್ಣ ಮೆಂಡನ್ ಮಲ್ಪೆ, ತೋನ್ಸೆ, ತಾರಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ದಾಮೋದರ್ ಶರ್ಮ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ನಾಡದೋಣಿಗಳಿಗೆ ಸೀಮೆ ಎಣ್ಣೆ ಪೂರೈಸಲು ಕಾಪುವಿನಲ್ಲಿ ಶಾಸಕರಿಗೆ ಮನವಿ
Posted On: 20 Oct 2022, 08:45 PM
ಕಾಪು : ಕಳೆದ 2 ತಿಂಗಳಿಂದ ನಾಡದೋಣಿ ಮೀನುಗಾರರಿಗೆ ಸೀಮೆ ಎಣ್ಣೆ ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ತಕ್ಷಣ ಸೀಮೆ ಎಣ್ಣೆ ಪೂರೈಸುವಂತೆ ಗುರುವಾರ ಹೆಜಮಾಡಿ ಪಟ್ಟೆಬಲೆ ಮತ್ತು ಕಂತಬಲೆ ಯೂನಿಯನ್ ಸದಸ್ಯರು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ರವರಿಗೆ ಕಾಪುವಿನಲ್ಲಿ ಮನವಿ ಸಲ್ಲಿಸಿದ್ದಾರೆ. ವರ್ಷಂಪ್ರತಿ ಮಳೆಗಾಲ ಮುಗಿದ ಬಳಿಕ ನಾಡದೋಣಿಗಳಿಗೆ ಸಬ್ಸಿಡಿಯುಕ್ತ ಸೀಮೆಎಣ್ಣೆ ನೀಡಲಾಗುತ್ತಿತ್ತು. ಮಳೆಗಾಲದ ಬಳಿಕ 2 ತಿಂಗಳು ನಾಡದೋಣಿ ಮೀನುಗಾರರಿಗೆ ಹೆಚ್ಚು ಸಂಪಾದನೆಯ ಸಮಯ. ಅತೀ ಹೆಚ್ಚು ಮತ್ಸ್ಯ ಸಂಪತ್ತು ಇದೇ ಸಮಯದಲ್ಲಿ ದೊರೆಯುತ್ತದೆ. ಆದರೆ ಸೀಮೆಎಣ್ಣೆ ದೊರೆಯದೆ ಮೀನುಗಾರಿಕೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ಮೀನುಗಾರರು ತಲುಪಿದ್ದಾರೆ. ಇದರಿಂದ ಬಡ ಕುಟುಂಬಗಳು ಕಂಗಾಲಾಗಿದ್ದಾರೆ. ಹಾಗಾಗಿ ತಕ್ಷಣ ಮಧ್ಯ ಪ್ರವೇಶಿಸಿ ಸೀಮೆಎಣ್ಣೆ ಪೂರೈಸುವಂತೆ ಮೀನುಗಾರರು ಅವಲತ್ತುಕೊಂಡಿದ್ದಾರೆ. ಈ ಬಗ್ಗೆ ಮನವಿ ಸ್ವೀಕರಿಸಿದ ಶಾಸಕ ಮೆಂಡನ್, ಸರಕಾರದ ಮೇಲೆ ಒತ್ತಡ ತಂದು ಶೀಘ್ರ ಸೀಮೆಎಣ್ಣೆ ಪೂರೈಕೆಗೆ ಅನುವು ಮಾಡಿಕೊಡುವ ಭರವಸೆ ನೀಡಿದ್ದಾರೆ. ಈ ಸಂದರ್ಭ ಯೂನಿಯನ್ ಅಧ್ಯಕ್ಷ ಏಕನಾಥ ಕರ್ಕೇರ, ಉಪಾಧ್ಯಕ್ಷ ಮುಕುಂದ ಕುಂದರ್, ಪ್ರಧಾನ ಕಾರ್ಯದರ್ಶಿ ಗೋವರ್ಧನ ಕೋಟ್ಯಾನ್, ಕೋಶಾಧಿಕಾರಿ ದಿನೇಶ್ ಸುವರ್ಣ, ಸದಸ್ಯ ನಿಖಿಲ್ ಕುಂದರ್ ಉಪಸ್ಥಿತರಿದ್ದರು.
ಕುತ್ಯಾರು ಗ್ರಾ. ಪಂ ವಿವಿಧ ಕಾಮಗಾರಿಗಳಿಗೆ 3 ಕೋಟಿ 27 ಲಕ್ಷ ರೂ ಅನುದಾನ ; ಗುದ್ದಲಿ ಪೂಜೆ ; ಉದ್ಘಾಟನೆ
Posted On: 20 Oct 2022, 10:44 AM
ಕುತ್ಯಾರು : ಕಾಪು ತಾಲೂಕಿನ ಕುತ್ಯಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 3 ಕೋಟಿ 27 ಲಕ್ಷ ರೂಗಳ ವಿವಿಧ ಕಾಮಗಾರಿಗಳಲ್ಲಿ ಸುಮಾರು 19 ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ 3 ಕಾಮಗಾರಿಗಳಿಗೆ ಉದ್ಘಾಟನೆ ಶಾಸಕರಾದ ಲಾಲಾಜಿ ಆರ್ ಮೆಂಡನ್ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬಿಜೆಪಿ ನೇತೃತ್ವದ ಕುತ್ಯಾರು ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದು ಜನಪ್ರತಿನಿಧಿಗಳು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ಈಗಾಗಲೇ 5.33 ಕೋಟಿ ಅನುದಾನ ಹಾಗೂ ಈ ಭಾಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುತ್ಯಾರು ಇದರ ನೂತನ ಕಟ್ಟಡ ನಿರ್ಮಾಣಕ್ಕೆ 18 ಕೋಟಿ ರೂಗಳನ್ನು ಒದಗಿಸಲಾಗಿದೆ ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಶಿಲ್ಪಾ ಜಿ ಸುವರ್ಣ, ಗ್ರಾಮ ಪಂಚಾಯತ್ ಅಧ್ಯಕ್ಷರು ಲತಾ ಎಸ್ ಆಚಾರ್ಯ, ಉಪಾಧ್ಯಕ್ಷರು ರಾಜಾ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಭಟ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಶಶಿಪ್ರಭಾ, ಗ್ರಾಮ ಪಂಚಾಯತ್ ಸದಸ್ಯರಾದ ಜನಾರ್ಧನ ಆಚಾರ್ಯ, ಗಣೇಶ್ ಶೆಟ್ಟಿ ಪಯ್ಯರು, ಸಂಪತ್ ಪೂಜಾರಿ, ಶೈಲೇಶ್, ದಿವ್ಯ ಶೆಟ್ಟಿಗಾರ್, ಭಾರತಿ, ಎವುಜಿನ್ ಲೋಬೊ, ಅಗ್ನೇಯಸ್ ಮಥಯಸ್, ಸ್ಥಳೀಯ ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಪ್ರಸಾದ್ ಶೆಟ್ಟಿ ಕುತ್ಯಾರು, ಧೀರಜ್ ಶೆಟ್ಟಿ, ನವೀನ್ ಶೆಟ್ಟಿ, ವೈ. ಎಸ್ ಭಂಡಾರಿ, ಅಶೋಕ್ ರಾವ್, ಶ್ರೀಕರ ಮಾಸ್ಟರ್, ಪ್ರದೀಪ್ ರಾವ್, ಸದಾಶಿವ ಆಚಾರ್ಯ, ಸುರೇಶ್, ಹರೀಶ್ ಆಚಾರ್ಯ, ರಾಘವೇಂದ್ರ ಹಾಗೂ ಸ್ಥಳೀಯರು, ಗುತ್ತಿಗೆದಾರರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ : ಜೀರ್ಣೋದ್ಧಾರ ಸಮಿತಿಯ ವಿಜ್ಞಾಪನ ಪತ್ರ ಬಿಡುಗಡೆ, ಕೊರಗಜ್ಜ ದೈವದ ನೇಮೋತ್ಸವ, ಸಭಾ ಕಾರ್ಯಕ್ರಮ
Posted On: 20 Oct 2022, 10:36 AM
ಪಡುಬಿದ್ರಿ : ಕಾಪು ತಾಲೂಕಿನ ತಾಲೂಕಿನ ಸಾವಿರಾರು ವರ್ಷಗಳ ಇತಿಹಾಸವಿರುವ ಪಡುಬಿದ್ರಿಯ ಶ್ರೀ ಆದಿಶಕ್ತಿ ಆದಿ ಮಾಯೆ ಅಣ್ಣಪ್ಪ ಪಂಜುರ್ಲಿ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಅಕ್ಟೋಬರ್ 22, ಶನಿವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ವಿಜ್ಞಾಪನ ಪತ್ರ ಬಿಡುಗಡೆ ಹಾಗೂ ಸಂಜೆ 4 ಗಂಟೆಗೆ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಸಭಾ ಕಾರ್ಯಕ್ರಮ ಜರಗಲಿದೆ. ಈ ನಿಮಿತ್ತ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರನ್ನು ಕ್ಷೇತ್ರದ ಪ್ರಮುಖರು ಭೇಟಿಯಾಗಿ ಸಭಾ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದರು. ಈ ಸಂದರ್ಭದಲ್ಲಿ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿಗಳಾದ ಸುಧಾಕರ್ ಮಡಿವಾಳ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಡುಬಿದ್ರಿ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಚ್ಚಿದನಂದ ಶೆಟ್ಟಿ ಉಡುಪಿ, ಜೀರ್ಣೋದ್ಧಾರ ಸಮಿತಿಯ ಸಹ ಸಂಚಾಲಕರಾದ ವಿನೋದ್ ಶೆಟ್ಟಿ ಉಡುಪಿ ಹಾಗೂ ಕುಮಾರ್ ಪಂಬದ ಉಪಸ್ಥಿತಿಯಿದ್ದರು.
ಇನ್ನಂಜೆ : ನರಕ ಚತುರ್ದಶಿಯಂದು ಗೊಳಿಕಟ್ಟೆಯಲ್ಲಿ ಮುಳ್ಳಮುಟ್ಟೆ ಕಾರ್ಯಕ್ರಮ
Posted On: 19 Oct 2022, 03:08 PM
ಇನ್ನಂಜೆ : ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನರಕ ಚತುರ್ದಶಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವ ಮುಳ್ಳಮುಟ್ಟೆ ಕಾರ್ಯಕ್ರಮದಲ್ಲಿ ಜೋಡುಬಂಟ ನರ್ತನ ಸೇವೆಯು ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ವಿಠೋಬಾ ಭಜನಾ ಮಂದಿರ ಗೊಳಿಕಟ್ಟೆ ಇಲ್ಲಿಗೆ ಮೆರವಣಿಗೆಯ ಮೂಲಕ ಸಾಗಿ ಊರಿಗೆ ಬಂದಿರುವ ದುರಿತಗಳು ತೊಲಗಲಿ ಹಾಗೂ ನರಕಾಸುರನ ವಧೆ ಎಂಬ ಉದ್ದೇಶದಿಂದ ಮುಳ್ಳಿನ ರಾಶಿಗೆ ಬೆಂಕಿ ಕೊಡುವುದು ವಾಡಿಕೆಯಾಗಿದೆ. ಈ ಬಾರಿ ಅಕ್ಟೋಬರ್ 24, ಸೋಮವಾರದಂದು ಮುಂಜಾನೆ ಗಂಟೆ 4:45 ರಿಂದ ಮುಳ್ಳಮುಟ್ಟೆ ಕಾರ್ಯಕ್ರಮ ನಡೆಯಲಿದೆ ಎಂದು ವಿಠೋಬಾ ಭಜನಾ ಮಂದಿರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಕಲ ಚೇತನರ ಬಾಳಿನಲ್ಲಿ ಬೆಳಕು ಕಾಣುವ NSCDF ಕಾರ್ಯ ಸ್ತುತ್ಯರ್ಹ : ಲಾಲಾಜಿ ಆರ್ ಮೆಂಡನ್
Posted On: 18 Oct 2022, 11:05 PM
ಕಾಪು : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ಬೆಂಗಳೂರು ಪ್ರಾಯೋಜಕತ್ವದಲ್ಲಿ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮಂಗಳೂರು ಸಾರಥ್ಯದಲ್ಲಿ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದ ವಿಕಲಚೇತನರಿಗೆ ಪರಿಕರ ವಿತರಣಾ ಕಾರ್ಯಕ್ರಮ ಅಕ್ಟೋಬರ್ 18ರಂದು ಕಾಪುವಿನ ಶ್ರೀ ಆದಿಶಕ್ತಿ ವೀರಭದ್ರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪರಿಕರಗಳಿಗೆ ಹೂವಿನ ಎಸಳು ಚೆಲ್ಲುವ ಮೂಲಕ ಚಾಲನೆ ನೀಡಿದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ ಇಂತಹ ಕಾರ್ಯಕ್ರಮಗಳು ಪ್ರತಿ ಕ್ಷೇತ್ರಗಳಲ್ಲಿಯೂ ನಡೆಯಬೇಕು ಆ ಮೂಲಕ ವಿಕಲ ಚೇತನರ ಬಾಳಿನಲ್ಲಿ ಬೆಳಕು ಕಾಣಬಹುದು ಎಂದ ಅವರು NSCDF ಕಾರ್ಯ ಸ್ತುತ್ಯರ್ಹ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಕವಿ, ಲೇಖಕ ಕೆ.ವಿ.ಲಕ್ಷ್ಮಣ ಮೂರ್ತಿ ಮಾತನಾಡಿ ಇದೊಂದು ದೇಶಕ್ಕೆ ಮಾದರಿ ಕಾರ್ಯಕ್ರಮ , ಇದರಿಂದಾಗಿ ಅನೇಕರು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ಅಧ್ಯಕ್ಷತೆವಹಿಸಿದ್ದ NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಮಾತನಾಡಿ ಇದು ಭಾಷಣ ಮಾಡುವ ಕಾರ್ಯಕ್ರಮವಲ್ಲ ಬದಲಿಗೆ ವಿಕಲ ಚೇತನರ ಬಾಳಿನಲ್ಲಿ ಬೆಳಕು ಚೆಲ್ಲುವ ಕಾರ್ಯಕ್ರಮ ಎಂದು ಹೇಳಿದರು. 15 ಹೊಲಿಗೆ ಯಂತ್ರ, 3 ಗಾಲಿ ಕುರ್ಚಿ ಮತ್ತು 1 ಶ್ರವಣ ಸಾಧನ ವಿಕಲ ಚೇತನರಿಗೆ ಹಸ್ತಾಂತರಿಸಲಾಯಿತು. ಡಾ.ನೆಲ್ಲಿಷಾ, ಲಾವಣ್ಯ, KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ , ಶ್ರುತಿ ಎಂಟರ್ಪ್ರೈಸಸ್ ಮಾಲ್ಹಕ ಸುರೇಶ್ ಮತ್ತು NSCDF ಸದಸ್ಯೆ ಹರಿಣಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
ಇನ್ನಂಜೆ : ದಿವಂಗತ ಕೆ. ಸದಾನಂದ ಶೆಟ್ಟಿ - ನುಡಿನಮನ, ಸಂಸ್ಮರಣೆ
Posted On: 18 Oct 2022, 08:16 PM
ಕಾಪು : ಯಸ್. ವಿ.ಯಚ್ ವಿದ್ಯಾಸಂಸ್ಥೆಯ ಸಂಚಾಲಕರಾಗಿದ್ದ, ಶಿಕ್ಷಣ ಪ್ರೇಮಿ ಸಮಾಜಸೇವಕ ಮಂಡೇಡಿ ಹೊಸಮನೆ ದಿವಂಗತ ಕೆ. ಸದಾನಂದ ಶೆಟ್ಟಿ ಅವರಿಗೆ ನುಡಿ ನಮನ ಹಾಗೂ ಸಂಸ್ಮರಣಾ ಕಾರ್ಯಕ್ರಮವು ಶಾಲೆಯ ಹಯವದನ ಸಭಾ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಆಡಳಿತಾಧಿಕಾರಿ ಅನಂತ ಮೂಡಿತ್ತಾಯ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚ, ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ನುಡಿ ನಮನ ಸಮರ್ಪಿಸಿದರು. ವೇದಿಕೆಯಲ್ಲಿ ದಿವಂಗತ ಕೆ.ಸದಾನಂದ ಶೆಟ್ಟಿ ಅವರ ಸಹೋದರರಾದ ಕೆ. ರಮಾನಂದ ಶೆಟ್ಟಿ ಮತ್ತು ಕೆ.ದಯಾನಂದ ಶೆಟ್ಟಿ, ಅಳಿಯಂದಿರಾದ ಬಾಲಕೃಷ್ಣ ಶೆಟ್ಟಿ ಮತ್ತು ವಿಜಯ ಶೆಟ್ಟಿ, ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ.ಶೆಟ್ಟಿ ಮಂಡೇಡಿ, ನಿರ್ದೇಶಕರಾದ ಶಿವರಾಮ ಶೆಟ್ಟಿ ಮಂಡೇಡಿ , ಎಸ್. ವಿ. ಎಚ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯಯ, ಮುಖ್ಯ ಶಿಕ್ಷಕರಾದ ಸುಷ್ಮಾ, ಮಮತಾ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪಾಂಗಾಳ ವಿದ್ಯಾವರ್ಧಕ ಶಾಲೆ, ಪಾಂಗಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಇನ್ನಂಜೆ ಶಾಲಾ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿಗಳನ್ನು ವಿತರಿಸಲಾಯಿತು.
ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇಗುಲಕ್ಕೆ ಕಾಶಿ ಮಠಾಧೀಶರ ಭೇಟಿ ; ಪಾದಪೂಜೆ
Posted On: 18 Oct 2022, 08:00 PM
ಕಾಪು : ಇತಿಹಾಸ ಪ್ರಸಿದ್ಧ ಕಾಪು ಶ್ರೀ ವೆಂಕಟರಮಣ ದೇಗುಲಕ್ಕೆ ಮಂಗಳವಾರ ಕಾಶಿ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ ವೆಂಕಟರಮಣ ದೇವರ ದರ್ಶನ ಪಡೆದರು. ದೇವಳದ ವತಿಯಿಂದ ಸ್ವಾಮೀಜಿಯವರ ಪಾದ ಪೂಜೆ ನೆರವೇರಿಸಲಾಯಿತು. ದೇವಳದ ಪ್ರಧಾನ ಅರ್ಚಕ ಕಮಲಾಲಕ್ಷ ಭಟ್, ಅರ್ಚಕರಾದ ಶ್ರೀನಿವಾಸ್ ಭಟ್ ಮತ್ತು ರವೀಂದ್ರ ಭಟ್ ಶಿರ್ವ ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ, ಮೊಕ್ತೆಸರರಾದ ರಾಮನಾಯಕ್, ಶ್ರೀಕಾಂತ್ ಭಟ್, ರಾಜೇಶ್ ಶೆಣೈ, ಸದಾಶಿವ ಕಾಮತ್, ಸದಸ್ಯರಾದ ಮಜೂರು ರಾಜೇಶ್ ಶೆಣೈ, ಚಂದ್ರಕಾಂತ್ ಕಾಮತ್, ಕೃಷ್ಣಾನಂದ್ ನಾಯಕ್, ಅತುಲ್ ಕುಡ್ವಾ ಮೊದಲಾದವರು ಉಪಸ್ಥಿತರಿದ್ದರು.
ಅಕ್ಟೋಬರ್ 30 : ಕಾಪುವಿನಲ್ಲಿ ಬೃಹತ್ ರಕ್ತದಾನ ಶಿಬಿರ
Posted On: 18 Oct 2022, 06:15 PM
ಕಾಪು : ಧರಣಿ ಸಮಾಜ ಸೇವಾ ಸಂಘ ಕಾಪು, ಜೆಸಿಐ ಕಾಪು ಮತ್ತು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಕಾಪು ವಲಯ ಇವರ ಆಶ್ರಯದಲ್ಲಿ ಸರಕಾರಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು, ಉಡುಪಿ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಅಕ್ಟೋಬರ್ 30, ಆದಿತ್ಯವಾರ ಬೆಳಿಗ್ಗೆ ಗಂಟೆ 9ರಿಂದ ಅಪರಾಹ್ನ ಗಂಟೆ 1ರ ತನಕ ವೀರಭದ್ರ ಸಭಾಭವನ, ಕಾಪು ಇಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
