Updated News From Kaup

ಸ್ಮ್ಯಾಷರ್ಸ್ ವೆಲ್ಫೇರ್ ಆಂಡ್ ಸ್ಫೋಟ್ಸ್೯ ಕ್ಲಬ್ ಪಡುಬಿದ್ರಿ : ಅಧ್ಯಕ್ಷರಾಗಿ ರಮೀಝ್ ಹುಸೇನ್ ಪುನರಾಯ್ಕೆ

Thumbnail
Posted On: 18 Oct 2022, 05:17 PM

ಪಡುಬಿದ್ರಿ : ರಾಜ್ಯಮಟ್ಟದ ‌ಷಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಿ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಕಿಟ್ ವಿತರಣೆ, ಈದ್ ಕಿಟ್ ವಿತರಣೆ, ಸ್ವಚ್ಚತಾ ಕಾರ್ಯ, ಸಮಾಜ ಸೇವೆಯಲ್ಲಿ ತೊಡಗಿರುವ ಸ್ಮ್ಯಾಷರ್ಸ್ ವೆಲ್ಫೇರ್ ಆಂಡ್ ಸ್ಫೋಟ್ಸ್೯ ಕ್ಲಬ್ ಪಡುಬಿದ್ರಿ ಇದರ ವಾರ್ಷಿಕ ಮಹಾಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಮೀಝ್ ಹುಸೇನ್ ಪುನರಾಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಮೊಹಮ್ಮದ್ ಕೌಸರ್, ಉಪಾಧ್ಯಕ್ಷರಾಗಿ ನಸ್ರುಲ್ಲ, ರಾಝಿ, ಅನ್ವರ್. ಕಾರ್ಯದರ್ಶಿಯಾಗಿ ನಿಝಾರ್, ಜೊತೆ ಕಾರ್ಯದರ್ಶಿಯಾಗಿ ರಾಝಿಕ್, ಕೋಶಾಧಿಕಾರಿಯಾಗಿ ಮಿಶೈಲ್, ಕ್ಲಬ್ ಕಾರ್ಯಕಾರಿ‌ ಮಂಡಳಿಯ ಸದಸ್ಯರಾಗಿ ಮುಸ್ತಾಕ್, ಅರ್ಶಾದ್, ಶಾಮಿಲ್, ಅಝ್ಮಾಲ್, ಸಲಹೆಗಾರರಾಗಿ ಅಬ್ದುಲ್ ಮುತ್ತಲಿಬ್, ಕ್ರೀಡಾ ಕಾರ್ಯದರ್ಶಿಯಾಗಿ ರಿಯಾಝ್ ಆಯ್ಕೆಯಾದರು.

ಅಕ್ಟೋಬರ್ 26 : ಕಾಪು ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ಬೃಹತ್ ಸಾರ್ವಜನಿಕ ವಾಹನ ಪೂಜೆ

Thumbnail
Posted On: 18 Oct 2022, 01:00 PM

ಕಾಪು : ವಿಧಾನ ಸಭಾ ಕ್ಷೇತ್ರ ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬೃಹತ್ ಸಾರ್ವಜನಿಕ ವಾಹನ ಪೂಜೆಯು ಕಾಪು ಹೊಸ ಮಾರಿಗುಡಿ ವಠಾರದಲ್ಲಿ 26 ನೇ ಬೆಳ್ಳಿಗೆ 9 ಗಂಟೆಗೆ ನಡೆಯಲಿದೆ ಎಂದು ಕಾಪು ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಪು ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ

Thumbnail
Posted On: 18 Oct 2022, 12:55 PM

ಕಾಪು: ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ಕಾಶಿ ಮಠಾಧೀಶರಾದ ಶ್ರೀಮದ್ ಸಯಮೀಂದ್ರ ತೀರ್ಥ ಸ್ವಾಮೀಜಿ ಅವರು ಭೇಟಿ ನೀಡಿ ದೇವರ ದರುಶನ ಪಡೆದರು. ಪ್ರಪ್ರಥಮ ಬಾರಿಗೆ ಕಾಪು ಹಳೆ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಚಂಡಿಕಯಾಗದ ಪೂರ್ಣಹುತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ‌ ಸಂದರ್ಭದಲ್ಲಿ ಅರ್ಚಕರಾದ ಕಮಾಲಕ್ಷ ಭಟ್, ಶ್ರೀನಿವಾಸ್ ಭಟ್ , ರವೀಂದ್ರ ಭಟ್ ಶಿರ್ವ, ಆಡಳಿತ ಮೊಕ್ತೆಸರ ಪ್ರಸಾದ್ ಶೆಣೈ, ಮೊಕ್ತೆಸರರಾದ ರಾಮ‌ನಾಯಕ್, ಶ್ರೀಕಾಂತ್ ಭಟ್, ರಾಜೇಶ್ ಶೆಣೈ, ಸದಾಶಿವ ಕಾಮತ್, ಸದಸ್ಯರಾದ ಮಜೂರು ರಾಜೇಶ್ ಶೆಣೈ, ಚಂದ್ರಕಾಂತ್ ಕಾಮತ್, ಕೃಷ್ಣಾನಂದ್ ನಾಯಕ್, ಅತುಲ್ ಕುಡ್ವಾ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಮಣ್ : ಉದ್ಯೋಗ ರತ್ನ ಪ್ರಶಸ್ತಿ ಪುರಸ್ಕೃತರಾದ ಸುಧಾಕರ ಪೂಜಾರಿ

Thumbnail
Posted On: 18 Oct 2022, 10:53 AM

ಬೆಳ್ಮಣ್ : ಜೇಸಿಐ ಇಂಡಿಯ ವಲಯದ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಉದ್ಯೋಗ ರತ್ನ - 2022 ಪ್ರಶಸ್ತಿಯನ್ನು ಅಕ್ಟೋಬರ್ 16ರಂದು ಬೆಳ್ಮಣ್ ನಲ್ಲಿ ಜರಗಿದ ವಲಯ 15ರ ವ್ಯವಹಾರ ಸಮ್ಮೇಳನ 'ಸಂಚಲನ' ಸಾಧಕರ ಸಮಾಗಮ ಕಾರ್ಯಕ್ರಮದಲ್ಲಿ ವೃತ್ತಿ ಕ್ಷೇತ್ರದ ಸಾಧನೆ ಪರಿಗಣಿಸಿ ಜೆಸಿಐ ಶಂಕರಪುರ ಜಾಸ್ಮಿನ್ ನ ಸುಧಾಕರ ಪೂಜಾರಿಯವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೆಸಿಐ ಶಂಕರಪುರ ಜಾಸ್ಮಿನ್ ಘಟಕದ ಮೂಲಕ 2007ರಲ್ಲಿ ಜೆಸಿಐ ಅಂದೋಲನಕ್ಕೆ ಪಾದಾರ್ಪಣೆ ಮಾಡಿದ ಇವರು ಘಟಕದಲ್ಲಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ 2018ರಲ್ಲಿ ಘಟಕಾಧ್ಯಕ್ಷರಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ವಲಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಇನ್ನಂಜೆಯಲ್ಲಿ ಪೂರೈಸಿರುವ ತಾವು ಕಳೆದ 24 ವರ್ಷಗಳಿಂದ ಶಂಕರಪುರ ಫ್ರೆಂಡ್ಸ್ ಕ್ಯಾಟರರ್ಸ್ ಎಂಬ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಪು : ಕಲ್ಲಿದ್ದಲು ಸಾಗಾಟದ ಟ್ರಕ್‌ನಲ್ಲಿ ಆಕಸ್ಮಿಕ ಬೆಂಕಿ ; ತಪ್ಪಿದ ಭಾರಿ ಅವಘಡ

Thumbnail
Posted On: 18 Oct 2022, 10:35 AM

ಕಾಪು : ಮಂಗಳೂರು ಬಂದರ್‌ನಿಂದ ಮುನವಳ್ಳಿಗೆ ಕಲ್ಲಿದ್ದಲು ಸಾಗಾಟ ಮಾಡುತ್ತಿದ್ದ ಟ್ರಕ್‌ಗೆ ಸೋಮವಾರ ತಡರಾತ್ರಿ ಕಾಪುವಿನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಸಿಬಂದಿಗಳ‌ ಸಕಾಲಿಕ ಕಾರ್ಯಾಚರಣೆಯಿಂದಾಗಿ ಭಾರಿ ಅವಘಡವೊಂದು ತಪ್ಪಿದಂತಾಗಿದೆ. ಟ್ರಕ್‌ನಲ್ಲಿ ತುಂಬಿದ್ದ ಕಲ್ಲಿದ್ದಲ್ಲಿನಲ್ಲಿ ಘರ್ಷಣೆಯುಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು ಟ್ರಕ್ ಚಾಲಕ ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಉಡುಪಿ ಅಗ್ನಿಶಾಮಕದಳಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಟ್ರಕ್‌ನ ಮೇಲೇರಿ ಹೊಗೆಯನ್ನು ಸಂಪೂರ್ಣವಾಗಿ ನಂದಿಸುವ ಮೂಲಕ ಮುಂದೆ ಸಂಭವಿಸಬಹುದಾಗಿದ್ದ ಭಾರೀ ಅವಘಡವೊಂದನ್ನು ತಪ್ಪಿಸಿದ್ದಾರೆ.

ಇನ್ನಂಜೆ : ಶ್ರೀ ವಿಠೋಭ ಭಜನಾ ಮಂಡಳಿ ಗೋಳಿಕಟ್ಟೆ - ನೂತನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳ ಆಯ್ಕೆ

Thumbnail
Posted On: 17 Oct 2022, 08:01 PM

ಇನ್ನಂಜೆ : ಕಾಪು ತಾಲೂಕಿನ ಶ್ರೀ ವಿಠೋಭ ಭಜನಾ ಮಂಡಳಿ ಗೋಳಿಕಟ್ಟೆ ಇನ್ನಂಜೆ ಇದರ 2022 ರಿಂದ 2024 ರ ಸಾಲಿನ ನೂತನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಇನ್ನಂಜೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ರಾಘವೇಂದ್ರ ಕುಲಾಲ್, ಉಪಾಧ್ಯಕ್ಷರಾಗಿ ಸಂತೋಷ್ ಕುಲಾಲ್, ಕಾರ್ಯದರ್ಶಿಯಾಗಿ ಅಶೋಕ್ ಕುಲಾಲ್, ಕೋಶಾಧಿಕಾರಿಯಾಗಿ ವಿಶ್ವನಾಥ ಕುಲಾಲ್ ಗೋಳಿಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ ಕುಲಾಲ್ ಗೋಳಿಕಟ್ಟೆ ಆಯ್ಕೆಯಾದರು.

ಬೆಳ್ಮಣ್ : ಕೃಷಿ ರತ್ನ - 2022 ಪ್ರಶಸ್ತಿ ಪುರಸ್ಕೃತರಾದ ಕಾಪುವಿನ ಶಾರದೇಶ್ವರಿ ಗುರ್ಮೆ

Thumbnail
Posted On: 17 Oct 2022, 07:50 PM

ಬೆಳ್ಮಣ್ : ಜೇಸಿಐ ಇಂಡಿಯ ವಲಯದ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕೃಷಿ ರತ್ನ - 2022 ಪ್ರಶಸ್ತಿಯನ್ನು ಅಕ್ಟೋಬರ್ 16ರಂದು ಬೆಳ್ಮಣ್ ನಲ್ಲಿ ಜರಗಿದ ವಲಯ 15ರ ವ್ಯವಹಾರ ಸಮ್ಮೇಳನ 'ಸಂಚಲನ' ಸಾಧಕರ ಸಮಾಗಮ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಜೇಸಿಐ ಕಾಪುವಿನ ಶಾರದೇಶ್ವರಿ ಗುರ್ಮೆ ಅವರಿಗೆ ನೀಡಿ ಗೌರವಿಸಲಾಯಿತು. ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಶಾರದೇಶ್ವರಿಯವರು ಸಾವಯವ ಕೃಷಿ ಪದ್ಧತಿಯ ಮೂಲಕ ಭತ್ತದ ಬೇಸಾಯ ಮಾಡುತ್ತಿರುವುದಲ್ಲದೆ, ತೆಂಗು ಮತ್ತು ಅಡಿಕೆ ಕೃಷಿಯಲ್ಲಿಯೂ ತೊಡಗಿಸಿಕೊಂಡು ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ಘಟಕವನ್ನು ಸ್ಥಾಪಿಸಿ ಕೃಷಿಗೆ ಬೇಕಾದ ಗೊಬ್ಬರವನ್ನೂ ತಯಾರಿಸುತ್ತಿದ್ದಾರೆ. ವಿವಿಧ ಬಗೆಯ ತರಕಾರಿಗಳನ್ನು, ವಿವಿಧ ಹಣ್ಣಿನ ಗಿಡಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸುವ ಹವ್ಯಾಸವನ್ನು ಹೊಂದಿರುವ ಇವರು ಅತ್ಯುತ್ತಮ ಕೃಷಿಕರಾಗಿದ್ದಾರೆ. ಜೇಸಿಐ ಸಂಸ್ಥೆ, ಇನ್ನಿತರ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬಂಟಕಲ್ಲು : ಆರ್‌ಎಸ್‌ಬಿ ಯುವವೃಂದದಿಂದ ಧಾರ್ಮಿಕ ಕಾರ್ಯಕ್ರಮ ; ಸಾಧಕರಿಗೆ ಸನ್ಮಾನ

Thumbnail
Posted On: 17 Oct 2022, 06:34 PM

ಬಂಟಕಲ್ಲು : ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವೀ ಸನ್ನಿಧಿಯಲ್ಲಿ ರಾಜಾಪುರ ಸಾರಸ್ವತ ಯುವವೃಂದ ಇದರ ಆಶ್ರಯದಲ್ಲಿ ಅಕ್ಟೋಬರ್ 16ರಂದು 26ನೇ ವರ್ಷದ ದುರ್ಗಾಹೋಮ ಸೇವೆ, ಧಾರ್ಮಿಕ ಅನುಷ್ಠಾನಗಳು ಕಾರ್ಯಕ್ರಮ ಜರಗಿತು. ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಇದರ ಸದಸ್ಯ ಸದಾಶಿವ ಪ್ರಭು ಎಳ್ಳಾರೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ್ ಪ್ರಭು ಗಂಪದಬೈಲು, ನೀರೆ ಗ್ರಾ,ಪಂ.ಅಭಿವೃದ್ಧಿ ಅಧಿಕಾರಿ ಅಂಕಿತಾ ಭಾಗವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ವೈಧ್ಯಾಧಿಕಾರಿ ಡಾ.ಮಧುಸೂದನ ನಾಯಕ್, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ದಿನೇಶ್ ನಾಯಕ್ ಮುದರಂಗಡಿ, ಪಿಎಚ್‌ಡಿ ಗೌರವ ಸಾಧಕ ಪ್ರೊ. ವಿಠಲ್ ನಾಯಕ್, ಪುರಾತತ್ವ ಸಂಶೋಧಕ ಸುಭಾಷ್ ನಾಯಕ್ ಬಂಟಕಲ್ಲು, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಫರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವೃಂದದ ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ ವಹಿಸಿದ್ದರು. ಯುವವೃಂದದ ಗೌರವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಮಿಕಾ ಪಾಟ್ಕರ್ ಪ್ರಾರ್ಥಿಸಿದರು. ದೇವದಾಸ್ ಪಾಟ್ಕರ್ ಮುದರಂಗಡಿ, ರಾಮದಾಸ್ ಪ್ರಭು ನಿರೂಪಿಸಿದರು. ಕಾರ್ಯದರ್ಶಿ ಅನಂತರಾಮ ವಾಗ್ಲೆ ವಂದಿಸಿದರು.

ಸಮಾನ ಮನಸ್ಕರ ತಂಡದಿಂದ ಉಚ್ಚಿಲದ ಅಶಕ್ತ ಕುಟುಂಬಕ್ಕೆ ನೂತನ ಗೃಹ ಹಸ್ತಾಂತರ

Thumbnail
Posted On: 17 Oct 2022, 05:50 PM

ಉಚ್ಚಿಲ : ಸಮಾಜ ಸೇವಕ ಕಟಪಾಡಿ ಶಶಿಧರ್ ಪುರೋಹಿತ್ ನೇತೃತ್ವದ ಸಮಾನ ಮನಸ್ಕರ ತಂಡದ ೧೩ನೇ ಯೋಜನೆಯಡಿ ಬಡ-ಅಶಕ್ತರಾದ ಉಚ್ಚಿಲ ಪೊಲ್ಯದ ಪ್ರೇಮಾ ಆಚಾರ್ಯ ಮತ್ತು ಪುತ್ರಿ ಪ್ರೀತಿಕಾ ಅವರ ವಾಸ್ತವ್ಯಕ್ಕೆ ೬ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಗೃಹವನ್ನು ರವಿವಾರ ಸಂಜೆ ಹಸ್ತಾಂತರಿಸಲಾಯಿತು. ಗಣ್ಯರ ಸಮ್ಮುಖದಲ್ಲಿ ಮನೆಯನ್ನು ಹಸ್ತಾಂತರಿಸಿ ಶುಭ ಸಂದೇಶ ನೀಡಿದ ಕಟಪಾಡಿ ಶಶಿಧರ್ ಪುರೋಹಿತ್ ಅವರು, ಸಮಾನ ಮನಸ್ಕರ ತಂಡದ ಮೂಲಕ ಸಮಾಜದ ಸುಪ್ತವಾಗಿರುವ ಶ್ರೇಷ್ಠ ವ್ಯಕ್ತಿತ್ವವು ಅನಾವರಣಗೊಳ್ಳುತ್ತಿದೆ. ಗೃಹ ನಿರ್ಮಾಣ ಮತ್ತು ನವೀಕರಣ ಸಮಿತಿಯ ೪೯ ಜನರ ತಂಡದಿಂದ ಈ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಗಿದ್ದು, ತಂಡದ ಸಮಸ್ತರ ತ್ಯಾಗ, ಪರಿಶ್ರಮವನ್ನು ಶ್ಲಾಘಿಸಿದರು. ಸ್ಥಳೀಯ ಪ್ರಮುಖರಾದ ಶಾಂತಮೂರ್ತಿ ಭಟ್ ಉಚ್ಚಿಲ, ಸಮಾನ ಮನಸ್ಕರ ತಂಡದ ಶಿಲ್ಪಿ ಮಾಧವ ಆಚಾರ್ಯ ಪುತ್ತೂರು, ಪಡು ಕುತ್ಯಾರು ಸದಾಶಿವ ಎ. ಆಚಾರ್ಯ, ಡಾ| ಪ್ರತಿಮಾ ಜೆ. ಆಚಾರ್ಯ ಮಣಿಪಾಲ, ನಿವೃತ್ತ ಯೋಧ ವಾದಿರಾಜ ಆಚಾರ್ಯ ಅಲೆವೂರು, ಕಾಂತಿ ಸುಬ್ರಹ್ಮಣ್ಯ ಆಚಾರ್ಯ ವೇದಿಕೆಯಲ್ಲಿದ್ದರು. ಈ ಸಂದರ್ಭ ಸಮಾನ ಮನಸ್ಕ ತಂಡದ ಸದಸ್ಯರು ಉಪಸ್ಥಿತರಿದ್ದರು. ಬಿಳಿಯಾರು ರಾಜೇಶ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಯಜ್ನನಾಥ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ವಿಠ್ಠಲ ಆಚಾರ್ಯ ಪಣಿಯೂರು ವಂದಿಸಿದರು.

ತೆಂಕ ಎರ್ಮಾಳು : ಕಳ್ಳತನ ಮಾಡಿ ಸ್ಕೂಟರ್ ಬಿಟ್ಟು ಪರಾರಿಯಾದ ಕಳ್ಳ

Thumbnail
Posted On: 16 Oct 2022, 08:10 PM

ಎರ್ಮಾಳು : ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೊಯ್ದ ಘಟನೆ ಭಾನುವಾರ ಬೆಳಗ್ಗಿನ ಜಾವ ಸಂಭವಿಸಿದೆ. ತೆಂಕ ಎರ್ಮಾಳು ಅಯೆಶಾ ಇಬ್ರಾಹಿಂರವರ ಬಾಡಿಗೆ ರೂಮ್ ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್ ಗೆ ಬೀಗ ಹಾಕಿ ಊರಿಗೆ ತೆರಳಿದ್ದರು. ಭಾನುವಾರ ಮುಂಜಾನೆ 5:30ರ ಸುಮಾರಿಗೆ ಮನೆಗೆ ಬಂದಾಗ, ಮಂದ ಬೆಳಕಿನಲ್ಲಿ ಮನೆ ಮುಂದೆ ವ್ಯಕ್ತಿಯೊಬ್ಬರು ನಿಂತಿದ್ದು, ಇವರನ್ನು ಕಂಡು ತಾನು ತಂದಿದ್ದ ಸ್ಕೂಟರ್ ಬಿಟ್ಟು ಪಲಾಯನ ಮಾಡಿದ್ದಾನೆ. ರೂಮ್ ನ ಬಾಗಿಲು ತೆರೆದುಕೊಂಡಿದ್ದು ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಸಣ್ಣ ಪುಟ್ಟ ಮಕ್ಕಳ ಆಭರಣ ಸಹಿತ ಇಪ್ಪತ್ತು ಸಾವಿರ ನಗದು, ಹೊಸ ಪಾತ್ರೆಗಳು ಸುಮಾರು ಅರವತ್ತು ಕೆ.ಜಿಯಷ್ಟಿದ್ದ ಅಕ್ಕಿ ನಾಪತ್ತೆಯಾಗಿತ್ತು. ಈ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಠಾಣಾ ಕ್ರೈಂ ಎಸ್ಸೈ ಪ್ರಕಾಶ್ ತಂಡ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ ಆಗಮಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಪೋಲಿಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.