Updated News From Kaup
ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ವಿಶ್ವರೂಪ ದರ್ಶನ
Posted On: 30 Oct 2022, 09:56 AM
ಪಡುಬಿದ್ರಿ : ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಕಾರ್ತಿಕ ಮಾಸದಲ್ಲಿ ಜರಗುವ ಒಂದು ತಿಂಗಳ ನಗರ ಭಜನೆ ಮತ್ತು ಪ್ರತಿ ದಿನ ಜರಗುವ ಪಕ್ಷಿಜಾಗರ ಪೂಜಾ ವಿಜ್ರಂಭಣೆಯಿಂದ ಆಚರಿಸಲಾಯಿತು. ರವಿವಾರ ಪ್ರಾತ:ಕಾಲದಲ್ಲಿ ದೇವಳವನ್ನು ದೀಪಾಲಂಕಾರಗೊಳಿಸಿ ವಿಶ್ವರೂಪ ದರ್ಶನವನ್ನು ಕಣ್ತುಂಬ ಕಾಣಲು ಊರ ಪರವೂರ ಭಕ್ತಾದಿಗಳು ಆಗಮಿಸಿದ್ದರು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಪ್ರಶಾಂತ್ ಶೆಣೈ ಮತ್ತು ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
ಉದ್ಯಾವರ : ಗುಡ್ಡೆಯಂಗಡಿ ಫ್ರೆಂಡ್ಸ್ ವತಿಯಿಂದ ಪುನೀತ್ ರಾಜ್ ಕುಮಾರ್ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಸಂಜೆ
Posted On: 29 Oct 2022, 08:47 PM
ಉದ್ಯಾವರ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಉದ್ಯಾವರದಲ್ಲಿ ಅಂಧರ ಗೀತ ಗಾಯನ ನಡೆಯಿತು. ಶೃಂಗೇರಿಯ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘದ ಕಲಾವಿದರನ್ನು ಆಹ್ವಾನಿಸಿದ ಸಾಕಷ್ಟು ಸಮಾಜಮುಖೀ ಚಟುವಟಿಕೆ ನಿರತ ಗುಡ್ಡೆಯಂಗಡಿ ಫ್ರೆಂಡ್ಸ್ ಗುಡ್ಡೆಯಂಗಡಿ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಸಂಜೆ ಕಾರ್ಯಕ್ರಮ ಶನಿವಾರ ಸಂಜೆ ಉದ್ಯಾವರ ಗುಡ್ಡೆಯಂಗಡಿ ಇಮೇಜ್ ಬಿಲ್ಡಿಂಗ್ ಮುಂಭಾಗದಲ್ಲಿ ನಡೆಯಿತು. ಉಡುಪಿ ಉದ್ಯಾವರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹವಾ ಇದ್ದು, ಪ್ರಕರಣವನ್ನು ಗುಡ್ಡೆಯಂಗಡಿ ಸಂಸ್ಥೆಯ ವತಿಯಿಂದ ಪ್ರಥಮ ವರ್ಷದ ಸ್ಮರಣೆ ನಡೆಸಿದ ಬಳಿಕ ಸಂಗೀತ ಸಂಜೆ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕಷ್ಣ ಶ್ರೀಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ್ ಕೋಟ್ಯಾನ್, ದಿವಾಕರ ಬೊಳ್ಜೆ, ಫ್ರೀಡಾ ಡಿಸೋಜ, ಗಿರೀಶ್ ಸುವರ್ಣ, ಜುಡಿತ್ ಪಿರೇರಾ, ವನಿತಾ ಶೆಟ್ಟಿ, ಗುಡ್ಡೆಯಂಗಡಿ ಫ್ರೆಂಡ್ಸ್ ಪ್ರಮುಖರಾದ ಗಿರೀಶ್ ಕುಮಾರ್, ಲಕ್ಷ್ಮಣ ಸಂಪಿಗೆನಗರ, ರೋಯ್ಸ್ ಫೆರ್ನಾಂಡಿಸ್, ಸತೀಶ್ ಬೀರಪ್ಪಾಡಿ, ಕಿಶೋರ್, ಉದಯ, ಸುಧಾಕರ ಮತ್ತಿತ್ತರು ಉಪಸ್ಥಿತರಿದ್ದರು. ಗುಡ್ಡೆಯಂಗಡಿ ಫ್ರೆಂಡ್ಸ್ ಅಧ್ಯಕ್ಷ ಸಚಿನ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ರಿಯಾಝ್ ಪಳ್ಳಿ ವಂದಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
ಕಾಪು : ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಹಾರಾಷ್ಟ್ರದ ಕಂದಾಯ ಸಚಿವರ ಭೇಟಿ
Posted On: 29 Oct 2022, 08:29 PM
ಕಾಪು : ಇಲ್ಲಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಮಹಾರಾಷ್ಟ್ರ ರಾಜ್ಯದ ಕಂದಾಯ ಸಚಿವರು ಮತ್ತು ಶಿರಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಪತ್ನಿ ಶಾಲಿನಿತೈ ವಿಖೆ ಪಾಟೀಲ್ ಇವರು ಜೀರ್ಣೋದ್ಧಾರದ ಮುಂಬೈ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ರವಿ ಸುಂದರ್ ಶೆಟ್ಟಿಯವರೊಂದಿಗೆ ಭೇಟಿ ನೀಡಿದರು. ಶ್ರೀ ದೇವಿಯ ಸನ್ನಿದಾನದಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಪ್ರಾರ್ಥಿಸಿ ಶ್ರೀದೇವಿಯ ಅನುಗ್ರಹ ಪ್ರಸಾದವನ್ನು ನೀಡಲಾಯಿತು. ನಂತರ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿಯವರು ಭರದಿಂದ ಸಾಗುತ್ತಿರುವ ಜೀರ್ಣೋದ್ಧಾರ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ರೀತಿಯಲ್ಲಿ ಇಲ್ಕಲ್ ಶಿಲೆಯಿಂದ ನಿರ್ಮಾಣಗೊಳ್ಳುತ್ತಿರುವ ದೇಗುಲದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಮಹಾರಾಷ್ಟ್ರದ ಹಾಗೂ ಶಿರಡಿಯ ಭಕ್ತರಿಗೂ ಮಾರಿಯಮ್ಮನ ದೇಗುಲ ನಿರ್ಮಾಣದ ಸುದ್ದಿಯನ್ನು ತಲುಪಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಕಲ್ಯಾ, ಆರ್ಥಿಕ ಸಮಿತಿಯ ಸಿದ್ಧಿಧಾತ್ರಿ ತಂಡದ ಸಂಚಾಲಕರಾದ ಸುಲೋಚನಾ ಕೆ ಸುವರ್ಣ, ದೇವಳದ ಸಿಬ್ಬಂದಿಗಳಾದ ಗೋವರ್ಧನ್ ಸೇರಿಗಾರ್ ಮತ್ತು ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.
ಕಾಪು : ಜನ ಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆ
Posted On: 29 Oct 2022, 05:23 PM
ಕಾಪು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಇವರ ನೇತ್ರತ್ವದಲ್ಲಿ ಜನ ಸಂಕಲ್ಪ ಸಮಾವೇಶ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಕಾಪು ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆಯಿತು. ಶಕ್ತಿಕೇಂದ್ರ ಉಸ್ತುವಾರಿಗಳ ಜವಾಬ್ದಾರಿಯನ್ನು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ವಿವರಿಸಿ ಪ್ರತೀ ಬೂತ್ ಗಳಲ್ಲಿ ಇರುವ ಫಲಾನುಭವಿಗಳನ್ನು ಸಂಪರ್ಕಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು. ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಜಿಲ್ಲಾ ಮಹಿಳಾಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಶಕ್ತಿಕೇಂದ್ರಗಳ ಜವಾಬ್ದಾರಿ ಹೊಂದಿರುವ ಪದಾಧಿಕಾರಿಗಳು ಹಾಗೂ ವಿವಿಧ ಪಂಚಾಯತ್ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು.
ಹೆಜಮಾಡಿ : ಬಂದರು ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಲಾಲಾಜಿ ಮೆಂಡನ್
Posted On: 29 Oct 2022, 04:43 PM
ಹೆಜಮಾಡಿ :ಇಲ್ಲಿನ 181 ಕೋಟಿ ರೂಗಳ ಮೊತ್ತದಲ್ಲಿ 70 ಎಕ್ರೆ ಪ್ರದೇಶದಲ್ಲಿ ಬಂದರು ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಬಂದರು ಸಮಿತಿ, ಸ್ಥಳೀಯರೊಂದಿಗೆ ಶಾಸಕ ಲಾಲಾಜಿ ಆರ್ ಮೆಂಡನ್ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರಿಗೆ ಇರುವ ಗೊಂದಲವನ್ನು ಶಾಸಕರು ಬಗೆಹರಿಸಿದರು ಹಾಗೂ ಕಾಮಗಾರಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಗಣೇಶ್, ಸಹಾಯಕ ನಿರ್ದೇಶಕರು ದಿವಾಕರ್ ಖಾರ್ವಿ, ಬಂದರು ಹಾಗೂ ಮೀನುಗಾರಿಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯಕುಮಾರ್, ಸಹಾಯಕ ಇಂಜಿನಿಯರ್ ಜಯರಾಜ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಾಂಡುರಂಗ ಕರ್ಕೇರ, ಬಂದರು ಸಮಿತಿ ಅಧ್ಯಕ್ಷ ಸದಾಶಿವ ಕೋಟ್ಯಾನ್, ಕಾರ್ಯದರ್ಶಿ ವಿಜಯ ಎಸ್ ಬಂಗೇರ, ಪ್ರಮುಖರಾದ ವಿನೋದ್ ಕೋಟ್ಯಾನ್, ಹರಿಶ್ಚಂದ್ರ ಮೆಂಡನ್, ಎಕನಾಥ ಕರ್ಕೇರ, ರವಿ ಕುಂದರ್, ಶರಣ್ ಹೆಜಮಾಡಿ, ಲಲಿತ್ ಕುಮಾರ್, ಅರುಣ್ ಕುಮಾರ್, ರಘುವೀರ್ ಸುವರ್ಣ, ಜನಾರ್ಧನ ಕೋಟ್ಯಾನ್, ರೋಷನ್ ಕುಂದರ್, ಶೈಲೇಶ್ ಕುಂದರ್, ಭರತ್ ಕಾಂಚನ್, ಶೇಖರ್ ಕೋಟ್ಯಾನ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಕಾಪು : ನೂತನ ಗೃಹ ರಕ್ಷಕ ದಳ ಪದಾಧಿಕಾರಿಗಳ ಕಚೇರಿ ಉದ್ಘಾಟನೆ
Posted On: 28 Oct 2022, 11:33 PM
ಕಾಪು : ಗೃಹ ರಕ್ಷಕ ದಳ ಕಾಪು ಘಟಕದ ಪದಾಧಿಕಾರಿಗಳ ನೂತನ ಕಚೇರಿಯನ್ನು ಉಡುಪಿ ಜಿಲ್ಲಾ ಸಮಾದೇಷ್ಟ ಡಾ. ಪ್ರಶಾಂತ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಗೃಹ ರಕ್ಷಕ ದಳದ ಕಚೇರಿಯು ಈ ಹಿಂದೆ ಇದ್ದ ಕಚೇರಿಯಿಂದ ನೂತನ ಕಚೇರಿಗೆ ಸ್ಥಳಾಂತರವಾಗಿದೆ. ಇದಕ್ಕೆ ಸಹಕರಿಸಿದ ಶಾಸಕರು, ಪಂಚಾಯತ್ ಹಾಗೂ ಪುರಸಭೆಯ ಸರ್ವರಿಗೂ ಕೃತಜ್ಞತೆಗಳನ್ನು ಹೇಳಿದರು. ಉಡುಪಿ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಮಾತನಾಡಿ ನಾಲ್ಕು ವರ್ಷಗಳ ಹಿಂದೆ ಕಾಪುವಿನಲ್ಲಿ ಗೃಹರಕ್ಷಕ ದಳದ ಕಚೇರಿ ಉದ್ಘಾಟನೆಯಾಗಿತ್ತು. ಇದೀಗ ನೂತನ ಕಚೇರಿಯ ಸದುಪಯೋಗ ಎಲ್ಲಾ ಗೃಹರಕ್ಷಕರು ಪಡೆಯುವಂತಾಗಲಿ ಎಂದರು. ಈ ಸಂದರ್ಭ ಕಾಪು ಘಟಕಾಧಿಕಾರಿ ಲಕ್ಷೀನಾರಾಯಣ ರಾವ್, ಗೃಹರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಪುವಿನಿಂದ ಮೂಲ್ಕಿವರೆಗೆ - ರಾಮ ನಾಮ ಸಂಕೀರ್ತನಾ ಪಾದಯಾತ್ರೆ
Posted On: 28 Oct 2022, 03:53 PM
ಕಾಪು : ರಾಮ ನಾಮ ಸಂಕೀರ್ತನಾ ಪಾದಯಾತ್ರೆ ಯು ಅಕ್ಟೋಬರ್ 30, ಆದಿತ್ಯವಾರದಂದು ಕಾಪು ಶ್ರೀ ವೆಂಕಟರಮಣ ದೇವಳದಿಂದ ಬೆಳಿಗ್ಗೆ ಗಂಟೆ 5:30 ಕ್ಕೆ ಪ್ರಾರಂಭಗೊಂಡು, ಹಳೇ ಮಾರಿಯಮ್ಮ ದೇವಳ ಭೇಟಿಯಾಗಿ, ಪಡುಬಿದ್ರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳ, ಹೆಜಮಾಡಿ ಶ್ರೀ ಲಕ್ಷ್ಮೀ ನಾರಾಯಣ ದೇವಳ ಭೇಟಿಯಾಗಿ ತದನಂತರ ಹೆಜಮಾಡಿ ಟೋಲ್ ಗೇಟ್ ನಿಂದ ಹೊರೆಕಾಣಿಕೆ ಸಹಿತ ಮೂಲ್ಕಿ ಶ್ರೀ ವೆಂಕಟರಮಣ ದೇವಳ ತಲುಪಿ ರಾಮ ನಾಮ ಸಂಕೀರ್ತನ ಪಾದ ಯಾತ್ರೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಪ್ರಾತಃ ಜಾಗರ ಪೂಜೆ ನಂತರ ಸಾಮೂಹಿಕ ಪ್ರಾರ್ಥನೆ, ಉಪಹಾರ, ಸಂಕೀರ್ತನ ಯಾತ್ರೆ ಆರಂಭ. ಹಳೇ ಮಾರಿಯಮ್ಮ ದೇವಳ ಭೇಟಿ, ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳ ಭೇಟಿಯಾಗಿ ವಿಶ್ರಾಂತಿ, ಉಪಹಾರ, ಹೆಜಮಾಡಿ ಶ್ರೀ ಲಕ್ಷ್ಮೀ ನಾರಾಯಣ ದೇವಳ ಭೇಟಿ , ವಿಶ್ರಾಂತಿ ನಂತರ ಮೂಲ್ಕಿ ಶ್ರೀ ವೆಂಕಟರಮಣ ದೇವಳ ತಲುಪಲಿದೆ.
ಅದಮಾರು : ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು : ಕೋಟಿ ಕಂಠ ಗಾಯನ
Posted On: 28 Oct 2022, 03:25 PM
ಅದಮಾರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದ ವತಿಯಿಂದ ರಾಜ್ಯದಾದ್ಯಾಂತ ಆಯೋಜಿಸಲಾದ 67ನೇ ಕರ್ನಾಟಕ ರಾಜ್ಯೋತ್ಸವ ದ ಅಂಗವಾಗಿ ನನ್ನ ನಾಡು - ನನ್ನ ಹಾಡು ಸಮೂಹ ಗೀತೆ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವು ಶುಕ್ರವಾರ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಅದಮಾರಿನಲ್ಲಿ ನಡೆಯಿತು. ಉಚ್ಚಾರ ಸ್ಪಷ್ಟತೆಯೊಂದಿಗೆ ಬರೆದಂತೆ ಓದುವ ಹಾಗೂ ಓದಿದಂತೆ ಬರೆಯಲ್ಪಡುವ ಭಾಷೆ ಕನ್ನಡ. ನಾಡು ನುಡಿಯ ಬಗ್ಗೆ ಅಭಿಮಾನವನ್ನು ಮೂಡಿಸುವ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಗೌರವ ಮೂಡಿಸುವ ಗೀತೆ, ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದಾರೆ. ಇವುಗಳನ್ನು ಹಾಡುವುದರಿಂದ ಮತ್ತು ಆಲಿಸುವುದರಿಂದ ನಮ್ಮಲ್ಲಿ ನಾಡು ನುಡಿಯ ಬಗೆಗಿರುವ ಅಭಿಮಾನ ಹೆಚ್ಚಾಗುತ್ತದೆ. ಈ ದೃಷ್ಟಿಯಿಂದ ಈ ಗೀತೆಗಳು ಕನ್ನಡದ ಶಕ್ತಿ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಕಲಿಯಲು ಹಲವು ಭಾಷೆಗಳಿದ್ದರೂ, ವ್ಯವಹರಿಸಲು ಮಾತೃ ಭಾಷೆಯೇ ಇರಲಿ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಂ. ರಾಮಕೃಷ್ಣ ಪೈಯವರು ನುಡಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಕಾಂತ್ ರಾವ್ರವರು ಸಂಕಲ್ಪ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ನಾಯಕ್ ಮತ್ತು ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನಿಶ್ಮಿತಾ ಶೆಟ್ಟಿ, ಸಂಸ್ಥೆಯ ಬೋಧಕ-ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೈ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ, ಬಾರಿಸು ಕನ್ನಡ ಡಿಂಡಿಮವ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಕನ್ನಡದ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಸಂಸ್ಕೃತ ಉಪನ್ಯಾಸಕರಾದ ಡಾ. ಜಯಶಂಕರ್ ಕಂಗಣ್ಣಾರು ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ದೇವಿಪ್ರಸಾದ್ ಬೆಳ್ಳಿಬೆಟ್ಟು ನಿರೂಪಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಸಂಜೀವ ನಾಯ್ಕ್ ರವರು ವಂದಿಸಿದರು.
ಕಾಪು : ಮರದ ದಿಮ್ಮಿಯಿದ್ದ ಲಾರಿಯ ಟೈಯರ್ ಸ್ಫೋಟ ; ಉರಿದ ದಿಮ್ಮಿ ; ತಪ್ಪಿದ ಭಾರೀ ಅನಾಹುತ
Posted On: 28 Oct 2022, 01:18 PM
ಕಾಪು : ತೀರ್ಥಹಳ್ಳಿಯಿಂದ ಮಂಗಳೂರು ಕಡೆ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯೊಂದರ ಟೈರ್ ಸ್ಫೋಟಗೊಂಡು ಮರದ ದಿಮ್ಮಿ ಸಮೇತ ಲಾರಿ ಹೊತ್ತಿ ಉರಿದ ಘಟನೆ ಗುರುವಾರ ತಡ ರಾತ್ರಿ ಕಾಪು ದಂಡ ತೀರ್ಥ ಮಠದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ನಡೆದಿದೆ. ಘಟನೆಯಿಂದಾಗಿ ಲಾರಿಯ ಹಿಂಭಾಗ ಟಯರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಮರದ ದಿಮ್ಮಿಗಳು ಕೂಡ ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಅಕ್ಟೋಬರ್ 30 : ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಆರ್ ಸಿ ಸಿ ಜಂಟಿ ಆಶ್ರಯದಲ್ಲಿ ಭಜನಾ ಸ್ಪರ್ಧೆ -2022
Posted On: 28 Oct 2022, 01:06 PM
ಕಾಪು : ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ರೋಟರಿ ಸಮುದಾಯದಳ ಪಡುಬಿದ್ರಿ ಜಂಟಿ ಆಶ್ರಯದಲ್ಲಿ ನಶಿಸಿ ಹೋಗುವ ಭಜನೆ ಕಲೆಯನ್ನು ಯುವ ಜನತೆಗೆ ಪ್ರೇರೇಪಿಸುವ ನಿಟ್ಟಿನಲ್ಲಿ 6ನೇ ಬಾರಿಗೆ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ -2022 ಅಕ್ಟೋಬರ್ 30, ಆದಿತ್ಯವಾರ ಬೆಳಿಗ್ಗೆ 9 ರಿಂದ ಸಂಜೆ 6:30ರ ತನಕ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರಗಲಿದೆ. ಭಜನಾ ಸ್ಪರ್ಧಾ ಕಾರ್ಯಕ್ರಮವನ್ನು ಬೆಂಗಳೂರು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ರೇಖಾ ಮೋಹನ್ ಉದ್ಘಾಟಿಸಲಿದ್ದಾರೆ ಎಂದು ರೋಟರಿ ಕ್ಲಬ್ ಪಡುಬಿದ್ರಿ ಸ್ಥಾಪಕ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಶುಕ್ರವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅವಿಭಜಿತ ಜಿಲ್ಲೆಯ 12 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಪ್ರಥಮ ಬಹುಮಾನ ರೂ.10,000 ಶಾಶ್ವತ ಫಲಕ ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ ರೂ. 7,000 ಶಾಶ್ವತ ಫಲಕ ಹಾಗೂ ಪ್ರಶಸ್ತಿ ಪತ್ರ, ತೃತೀಯ ರೂ.5,000 ಶಾಶ್ವತ ಫಲಕ ಹಾಗೂ ಪ್ರಶಸ್ತಿ ಪತ್ರ ಹಾಗೂ ಉತ್ತಮ ಗಾಯಕ, ಗಾಯಕಿ, ಉತ್ತಮ ತಬಲ ವಾದಕ, ಹಾರ್ಮೋನಿಯಂ ವಾದಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಮಾಜ ಸೇವಕ ರವಿ ಕಟಪಾಡಿ ಮತ್ತು ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಸಂಗೀತ ಕಲಾವಿದ ಸಂದೇಶ ನಿರುಮಾರ್ಗ, ವೈದ್ಯಕೀಯ ಕ್ಷೇತ್ರದಲ್ಲಿ ಡಾ| ಸುರೇಶ್ ಕೋಟ್ಯಾನ್ ಚಿತ್ರಾಪುರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಡುಬಿದ್ರಿ ರೋಟರಿ ಸ್ಥಾಪಕ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಅಧ್ಯಕ್ಷರಾದ ಗೀತಾ ಅರುಣ್, ಕಾರ್ಯದರ್ಶಿ ಜ್ಯೋತಿ ಮೆನನ್, ರೋಟರಿ ಸಮುದಾಯದಳದ ಅಧ್ಯಕ್ಷೆ ದೀಪಾಶ್ರೀ ಕರ್ಕೇರ, ಕಾರ್ಯದರ್ಶಿ ತನಿಷಾ ಜಿ. ಕುಕ್ಯಾನ್, ರೋಟರಿ ಕ್ಲಬ್ ಸದಸ್ಯರಾದ ಸುನಿಲ್ ಕುಮಾರ್, ಸುಧಾಕರ್, ಸಂತೋಷ್ ಉಪಸ್ಥಿತರಿದ್ದರು.
