Updated News From Kaup
ಬಂಟಕಲ್ಲು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 18ನೇ ವರ್ಷದ ಧಾರ್ಮಿಕ ಸಭಾ ಕಾರ್ಯಕ್ರಮ ಸಂಪನ್ನ
Posted On: 06 Sep 2022, 07:03 PM
ಬಂಟಕಲ್ಲು : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 18ನೇ ವರ್ಷದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರದಾನ ಅರ್ಚಕರಾದ ಮಧ್ವರಾಜ್ ಭಟ್ ರವರು ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ. ಮೊದಲಾಗಿ ಗಡಿಯ ರಕ್ಷಣೆ ಮಾಡುವ ಸೈನಿಕರಿಗೆ ನಮಿಸೋಣ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಉಡುಪಿ ದೊಡ್ಡಣ್ಣಗುಡ್ಡೆ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ರಾಮಾನಂದ ಗುರೂಜಿ ಸಾಧಕರಾದ ರಾಮಕೃಷ್ಣ ಶರ್ಮಾ ಬಂಟಕಲ್ಲು, ಜಯಪ್ರಕಾಶ್ ರಾವ್ ಹೇರೂರ್, ರಮೇಶ್ ಆಚಾರ್ಯ ಬಂಟಕಲ್ಲು, ಗಣೇಶ್ ಕುಲಾಲ್ ಪಂಜಿಮಾರ್, ಸುಭಾಸ್ ನಾಯಕ್ ಸಡಂಬೈಲ್, ಕು. ಪ್ರಿಯಾಂಕಾ ಆಚಾರ್ಯ ಹೇರೂರು ಇವರನ್ನು ಸನ್ಮಾನಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಆಶೀರ್ವದಿಸಿದರು. ಬಂಟಕಲ್ಲು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಎಡ್ವರ್ಡ್ ಮೆನೆಜಸ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೌರವಾಧ್ಯಕ್ಷ ಶಂಕರ್ ನಾಯಕ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕು. ಸುರಭಿ ಮತ್ತು ಕು. ಖುಷಿ ಪ್ರಾರ್ಥಿಸಿದರು. ವಿಘ್ನೇಶ್ ಶೆಟ್ಟಿ ಪೊಡಮಲೆ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ದಿನೇಶ್ ದೇವಾಡಿಗ ಬಹುಮಾನದ ಪಟ್ಟಿ ವಾಚಿಸಿ ಧನ್ಯವಾದ ನೀಡಿದರು. ಅಧ್ಯಕ್ಷರಾದ ಮಾಧವ ಕಾಮತ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಮಾಧವ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ : ಬನ್ನಂಜೆಯ ನವೀಕೃತ ನಾರಾಯಣಗುರು ಆಡಿಟೋರಿಯಂ ಲೋಕಾರ್ಪಣೆ
Posted On: 05 Sep 2022, 07:49 PM
ಉಡುಪಿ : ಬಿಲ್ಲವ ಸೇವಾ ಸಂಘ ಉಡುಪಿ (ರಿ.) ಇದರ ಬನ್ನಂಜೆಯ ನವೀಕೃತ ನಾರಾಯಣಗುರು ಆಡಿಟೋರಿಯಂ ಲೋಕಾರ್ಪಣೆ ಸೆಪ್ಟೆಂಬರ್ 03 ರಂದು ನೆರವೇರಿತು. ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ನವೀಕೃತ ನಾರಾಯಣಗುರು ಆಡಿಟೋರಿಯಂ ಲೋಕಾರ್ಪಣೆಗೊಳಿಸಿ ಆಶೀರ್ವಚಿಸಿದರು. ಶಾಸಕ ಕೆ ರಘುಪತಿ ಭಟ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲ (ರಿ.) ಮೂಲ್ಕಿ ಅಧ್ಯಕ್ಷರಾದ ರಾಜಶೇಖರ್ ಕೋಟ್ಯಾನ್, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಅಧ್ಯಕ್ಷರಾದ ಬಿ.ಎನ್ ಶಂಕರ ಪೂಜಾರಿ, ಸ್ಥಳೀಯ ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ಬಿಲ್ಲವ ಸೇವಾ ಸಂಘ ಉಡುಪಿ (ರಿ.) ಬನ್ನಂಜೆ ಅಧ್ಯಕ್ಷರಾದ ಆನಂದ ಪೂಜಾರಿ ಕಿದಿಯೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಂಟಕಲ್ಲು : ರಾಜಾಪುರ ಸಾರಸ್ವತ ಯುವ ವೃಂದದಿಂದ ಶಿಕ್ಷಕರ ದಿನಾಚರಣೆ
Posted On: 05 Sep 2022, 07:43 PM
ಬಂಟಕಲ್ಲು : ಇಲ್ಲಿನ ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರಿ ಹಿರಿಯ ಪ್ರಾರ್ಥಮಿಕ ಶಾಲೆಯ 6 ಮಂದಿ ಗೌರವ ಶಿಕ್ಷಕಿಯರು ಹಾಗೂ ಇಬ್ಬರು ಅಂಗನವಾಡಿ ಶಿಕ್ಷಕಿಯರನ್ನು ಶಿಕ್ಷಕರ ದಿನಾಚರಣೆ ಅಂಗವಾಗಿ ಗೌರವಿಸಲಾಯಿತು. ಸರ್ವೆಪಲ್ಲಿ ರಾಧಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಶಿಕ್ಷಕಿಯರನ್ನು ಗೌರವಪೂರ್ವಕವಾಗಿ ವೇದಿಕೆ ಬರಮಾಡಿಕೊಳ್ಳಲಾಯಿತು. ಯುವ ವೃಂದದ ಗೌರವಾಧ್ಯಕ್ಷ ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರ ದಿನಾಚರಣೆ ಬಗ್ಗೆ ಮಾತನಾಡಿ ಇಂದಿನ ದಿನಗಳಲ್ಲಿ ಕನ್ನಡ ಅನುದಾನಿತ ಶಾಲೆಗಳು ಗೌರವ ಶಿಕ್ಷಕಿಯರಿಂದಲೇ ನಡೆಯುತ್ತಿವೆ. ವಿದ್ಯಾರ್ಥಿಗಳಿದ್ದರೂ ಶಿಕ್ಷಕರ ನೇಮಕವಾಗುತ್ತಿಲ್ಲವಾದುದರಿಂದ ಅತೀ ಕಡಿಮೆ ಗೌರವಧನ ಪಡೆಯುತ್ತಿರುವ ಗೌರವ ಶಿಕ್ಷಕಿಯರನ್ನು ಇಂದು ಅಭಿನಂದಿಸಲು ರಾಜಾಪುರ ಸಾರಸ್ವತ ಯುವ ವೃಂದವು ಹೆಮ್ಮೆ ಪಡುತ್ತದೆ ಎಂದರು. ಗೌರವ ಶಿಕ್ಷಕಿಯರಾದ ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್ , ಶಾಲಿನಿ ಆಚಾರ್ಯ, ವಿನುತ ಆಚಾರ್ಯ, ಶ್ವೇತಾ ಪಾಟ್ಕರ್, ಸೌಮ್ಯ ಹಾಗೂ ಅಂಗನವಾಡಿ ಶಿಕ್ಷಕಿಯರಾದ ವಿನಯಾ ಹರೀಶ್, ಉಷಾ ಪಾಟ್ಕರ್ ರವರನ್ನು ಮುಖ್ಯ ಅತಿಥಿಗಳು ಶಾಲು ಹೊದಿಸಿ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು. ಯುವ ವೃಂದದ ವತಿಯಿಂದ ಶಾಲೆಗೆ ಸರ್ವೇಪಲ್ಲಿ ರಾಧಕೃಷ್ಣನ್ ರವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಬಂಟಕಲ್ಲು ದೇವಸ್ದಾನದ ಆಡಳಿತ ಮಂಡಳಿಯ ಮೋಕ್ತೇಸರರಾಗಿರುವ ಶಶಿಧರ ವಾಗ್ಲೆ, ಶಾಲಾ ಸಂಚಾಲಕ ಜಯರಾಮ ಪ್ರಭು, ಆಡಳಿತ ಮಂಡಳಿಯ ಉಮೇಶ್ ಪ್ರಭು, ಸುರೇಂದ್ರ ನಾಯಕ್ ಹಳೇ ವಿದ್ಯಾರ್ಥಿ ರಿಚಾರ್ಡ್ ಡಿ'ಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಯ ಕೋರಿದರು. ಶಿಕ್ಷಕಿಯರಿಗೆ ಹಾಡು, ಭಾಷಣ ಸ್ಪರ್ಧೆಯನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಯುವ ವೃಂದದ ಉಪಾಧ್ಯಕ್ಷ ಅಭಿಷೇಕ್ ನಾಯಕ್ ಹಾಗೂ ವಿಶ್ವನಾಥ ಬಾಂದೇಲ್ಕರ್, ಸಂಕೇತ್, ಸುಮಲತ, ಪ್ರಶಾಂತ್, ಸುಬ್ರಹ್ಮಣ್ಯ ವಾಗ್ಲೆ ಉಪಸ್ಥಿತರಿದ್ದರು. ಯುವ ವೃಂದದ ಅಧ್ಯಕ್ಷ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿ ಅನಂತರಾಮ ವಾಗ್ಲೆ ವಂದಿಸಿದರು.
ಪಡುಬಿದ್ರಿ : ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಹಾಜಿ ಪಿ. ಕೆ. ಮುಹಿಯುದ್ದೀನ್ ಲಚ್ಚಿಲ್ ಆಯ್ಕೆ
Posted On: 04 Sep 2022, 10:22 PM
ಪಡುಬಿದ್ರಿ : ಇಲ್ಲಿನ ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಹಾಜಿ ಪಿ. ಕೆ. ಮುಹಿಯುದ್ದೀನ್ ಲಚ್ಚಿಲ್ ಆಯ್ಕೆಯಾಗಿದ್ದಾರೆ. ಪಡುಬಿದ್ರೆಯ ಉರ್ದು ಶಾಲಾ ಸಂಚಾಲಕ ಶಬ್ಬೀರ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ಶುಕೂರ್, ಕಾರ್ಯದರ್ಶಿ ಶೇಖ್ ಇಸ್ಮಾಯಿಲ್, ಜೊತೆ ಕಾರ್ಯದರ್ಶಿ ಹಾಜಿ ಎಸ್. ಪಿ. ಉಮರ್ ಫಾರೂಕ್, ಕೋಶಾಧಿಕಾರಿ ಹಾಜಿ ಎ. ಎಚ್. ಮುಹಮ್ಮದ್, ಸದಸ್ಯರಾಗಿ ನಝೀರ್ ಸಿ. ಪಿ. , ಅಕ್ಬರ್ ಪಿ. ಎಂ. , ಇಂತಿಯಾರ್, ಬೇಂಗ್ರೆ ಬಾಷಾ, ಮಜಲಕೋಡಿ ಮಯ್ಯದ್ದಿ, ಹಂಝ ಅಬ್ಬಾಸ್, ಲೆಕ್ಕ ಪರಿಶೋಧಕರಾಗಿ ಹಾಜಿ ಹಮ್ಮಬ್ಬ ಮೊಯ್ದಿನ್ ಆಯ್ಕೆಯಾಗಿದ್ದಾರೆ. ಪಡುಬಿದ್ರೆ ಜುಮಾ ಮಸೀದಿಯ ಖತೀಬ್ ಹಾಜಿ ಎಸ್. ಎಂ, ಅಬ್ದುಲ್ ರಹಿಮಾನ್ ವಂದಿಸಿದರು.
ಕಳತ್ತೂರು : 32 ನೇ ವರ್ಷದ ಗಣೇಶೋತ್ಸವ ವಿಜೃಂಭಣೆಯಿಂದ ಸಂಪನ್ನ
Posted On: 04 Sep 2022, 10:18 PM
ಕಳತ್ತೂರು : ಕಾಪು ತಾಲೂಕಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುಂಚಲಕಾಡು ಕಳತ್ತೂರು ಇವರ ನೇತೃತ್ವದಲ್ಲಿ ಶ್ರೀ ಶೈಲಾ ಮಂಟಪ ಪುಂಚಲಕಾಡು ಇಲ್ಲಿ ಶ್ರೀ ಕೇಶವ ತಂತ್ರಿ ಪೌರೋಹಿತ್ಯದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ನಂತರ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ವತಿಯಿಂದ ಯಕ್ಷಗಾನ ಬಯಲಾಟ ನಡೆಯಿತು. ಸಾಯಂಕಾಲ ಚಿಂತನ ಚೆಂಡೆ ಬಳಗ ಮುಂಡ್ಕೂರು ಹಾಗೂ ವಾಸು ಪಣಿಯೂರು ಅವರಿಂದ ಬ್ಯಾಂಡ್ ಸೆಟ್, ಕ್ರೀಡಾ ಸ್ಪರ್ಧಿಗಳಿಗೆ ಬಹುಮಾನ ವಿತರಣೆ, ಸನ್ಮಾನ ಕಾರ್ಯಕ್ರಮ ಜರಗಿತು. ಶ್ರೀ ದೇವರಿಗೆ ಸಂಜೆ ಪೂಜೆ ಮುಗಿದು ಅಪಾರ ಸಂಖ್ಯೆಯ ಭಕ್ತರೊಂದಿಗೆ ವಿಸರ್ಜನಾ ಮೆರವಣಿಗೆ ನಡೆಯ ನಂತರ ಗಣಪತಿ ವಿಗ್ರಹವನ್ನ ಕಳತ್ತೂರು ಅರಬಿಕಟ್ಟೆ ಹೊಳೆಯಲ್ಲಿ ಜಲ ಸ್ತಂಭನಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಶಿರ್ವ ರೋಟರಿ ಕ್ಲಬ್ : ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ, ಪ್ರತಿಭಾ ಪುರಸ್ಕಾರ
Posted On: 04 Sep 2022, 10:11 PM
ಶಿರ್ವ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಭಾನುವಾರ ಸಂಜೆ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭ ನೆರವೇರಿತು. ಕಾರ್ಯಕ್ರಮವನ್ನು ಶಿರ್ವ ಸಂತಮೇರಿ ಕಾಲೇಜಿನ ಪ್ರಾಚಾರ್ಯ ಡಾ. ಹೆರಾಲ್ಡ್ ಐವನ್ ಮೋನಿಸ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದ್ದು, ನಿಸ್ವಾರ್ಥ ಸೇವೆಗೆ ಉತ್ತಮ ಅವಕಾಶವನ್ನು ನೀಡುತ್ತದೆ. ವಿದ್ಯಾರ್ಥಿಗಳನ್ನು ಸಮಾಜದ ನಿರ್ಮಾತೃರನ್ನಾಗಿ ರೂಪಿಸುವವರು ಶಿಕ್ಷಕರು. ಶಿಕ್ಷಕರ ಕರ್ತವ್ಯಪ್ರಜ್ಞೆ, ಬದ್ಧತೆ ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರುಗಳಾದ ಸಂತಮೇರಿ ಪದವಿ ಪೂರ್ವ ಕಾಲೇಜಿನ ಗಿಲ್ಬರ್ಟ್ ಪಿಂಟೊ, ಕ್ಲಾರಾ ಕುಟಿನ್ಹಾ, ಪ್ರೆಸಿಲ್ಲಾ ಮಚಾದೋ, ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಲಾವಣ್ಯವತಿಯವರನ್ನು ಸನ್ಮಾನಿಸಲಾಯಿತು. ಉಪಸ್ಥಿತರಿದ್ದ ಸರ್ವ ಶಿಕ್ಷಕ ಶಿಕ್ಷಕಿಯರನ್ನು ಸ್ಮರಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು. ಶಿರ್ವ ಸಂತಮೇರಿ ಕಾಲೇಜಿನ ಬಿ.ಕಾಂ ರ್ಯಾಂಕ್ ವಿಜೇತೆ ವಿದ್ಯಾರ್ಥಿನಿ ಕುಮಾರಿ ರಕ್ಷಾ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತೆಯರಾದ ದೀಪಾಲಿ ಪಿ.ಕೊಟ್ಯಾನ್, ರವಿತೇಜ ಆರ್ ಕುಲಾಲ್, ಯತಿನ್ ಮೂಲ್ಯ, ಕುಮಾರಿ ಐಶ್ವರ್ಯ ಆಂಗ್ಲ ಮಾಧ್ಯಮ ಪಡುಬೆಳ್ಳೆ ಇವರನ್ನು ರೋಟರಿ ವಲಯ ಸಹಾಯಕ ಗವರ್ನರ್ ಡಾ. ಶಶಿಕಾಂತ ಕರೀಂಕರವರು ಅಭಿನಂದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಿರ್ವ ಎಸ್ಬಿಐ ಶಾಖಾ ಹಿರಿಯ ಪ್ರಬಂಧಕ ನಿತ್ಯಾನಂದಮೂರ್ತಿ ಕೆ.ಎನ್ರವರನ್ನು ನೂತನ ಸದಸ್ಯರನ್ನಾಗಿ ಸ್ವಾಗತಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್ ವಹಿಸಿದ್ದರು. ವೃತ್ತಿಸೇವಾ ನಿರ್ದೇಶಕ ಲೂಕಾಸ್ ಡಿಸೋಜ ಸ್ವಾಗತಿಸಿದರು.ಜಗದೀಶ ಶೆಟ್ಟಿ, ಮೆಲ್ವಿನ್ ಡಿಸೋಜ, ಅಶ್ವಿನಿ ಅರಾನ್ಹಾ, ವಿಲಿಯಮ್ ಮಚಾದೋ, ಮೈಕಲ್ ಮತಾಯಸ್ ಪರಿಚಯಿಸಿದರು. ಹಿಲ್ಡಾ ಮತಾಯಸ್ ನಿರೂಪಿಸಿದರು. ಸಾರ್ಜಂಟ್ ರೊನಾಲ್ಡ್ ಡಿಸೋಜ ಸಹಕರಿಸಿದರು. ಸಹ ಕಾರ್ಯದರ್ಶಿ ಅಮಿತ್ ಅರಾನ್ಹಾ ವಂದಿಸಿದರು.
2021-22ನೇ ಸಾಲಿನಲ್ಲಿ ಉಡುಪಿ ತಾಲೂಕಿಗೆ ಪ್ರಥಮ ಅತ್ಯುತ್ತಮ ಸಂಘ ಪ್ರಶಸ್ತಿ ಪುರಸ್ಕೃತ ಇನ್ನಂಜೆ ಹಾಲು ಉತ್ಪಾದಕರ ಸಂಘ
Posted On: 04 Sep 2022, 05:04 PM
ಕಾಪು : ಇನ್ನಂಜೆ ಹಾಲು ಉತ್ಪಾದಕರ ಸಂಘವು 2021 - 22ನೇ ಸಾಲಿನಲ್ಲಿ ಉಡುಪಿ ತಾಲೂಕಿಗೆ ಪ್ರಥಮ ಅತ್ಯುತ್ತಮ ಸಂಘವೆಂದು ಪ್ರಶಸ್ತಿ ಪಡೆದಿರುತ್ತದೆ. ಮಂಗಳೂರಿನ ಕೊರ್ಡೆಲ್ ಹಾಲ್, ಚಚ್೯ಗೇಟ್ ಕುಲಶೇಖರದಲ್ಲಿ ನಡೆದ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ನಿ.) ಮಂಗಳೂರು ಇದರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇನ್ನಂಜೆ, ಹಾಲು ಉತ್ಪಾದಕರ ಸಹಕಾರ ಸಂಘವನ್ನು 2021-2022ನೇ ಸಾಲಿನ ಅತ್ಯುತ್ತಮ ಸಂಘವೆಂದು ಘೋಷಿಸಿ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ಕೆ ಪಿ ಸುಚರಿತ ಶೆಟ್ಟಿಯವರಿಂದ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕೆ ಶೆಟ್ಟಿ ಹಾಗೂ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರಾದ ಎಸ್ ಬಿ ಜಯರಾಮ್ ರೈ, ಕೆ ಎಂ ಎಫ್ ನಿರ್ದೇಶಕರಾದ ದಿವಾಕರ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಕೆ ರವಿರಾಜ್ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕರಾದ ಡಿ ಅಶೋಕ, ವ್ಯವಸ್ಥಾಪಕರಾದ ಡಾ.ನಿತ್ಯಾನಂದ ಭಕ್ತ, ಮಾಜಿ ಅಧ್ಯಕ್ಷರು, ನಿರ್ದೇಶಕರು, ಉಪ ವ್ಯವಸ್ಥಾಪಕರು, ಒಕ್ಕೂಟದ ಅಧಿಕಾರಿ ವರ್ಗ, ಸಿಬ್ಬಂದಿ ಉಪಸ್ಥಿತರಿದ್ದರು.
ಪಡುಬಿದ್ರಿ : ಶ್ರೀ ಸಾಯಿ ಹಾರ್ಡ್ವೇರ್ಸ್ ಶುಭಾರಂಭ
Posted On: 04 Sep 2022, 03:30 PM
ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿರುವ ಕಾಮತ್ ಪೆಟ್ರೋಲ್ ಪಂಪ್ ಬಳಿಯ ನಬೀಲ್ ಕಾಂಪ್ಲೆಕ್ಸ್ ನಲ್ಲಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಮಾಲೀಕತ್ವದ ಶ್ರೀ ಸಾಯಿ ಹಾರ್ಡ್ವೇರ್ಸ್ ನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಗುರ್ಮೆ ಫೌಂಡೇಶನ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆ, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಪಡುಬಿದ್ರಿ ಉದ್ಯಮಿ ವೈ ಗೋಪಾಲ್ ಶೆಟ್ಟಿ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಲ್ಲವಿ ಬಾರ್ ಆಂಡ್ ರೆಸ್ಟೋರೆಂಟ್ ಮಾಲಕರಾದ ಸಂತೋಷ್ ಕುಮಾರ್ ಶೆಟ್ಟಿ, ಎರ್ಮಾಳು ಪಂಚಾಯತ್ ಅಧ್ಯಕ್ಷರಾದ ಕಸ್ತೂರಿ ಪ್ರವೀಣ್, ಪುಣೆಯ ಉದ್ಯಮಿ ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉಚ್ಚಿಲ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಡೆಗೋಡೆ ನಿರ್ಮಾಣಕ್ಕೆ ಧನಸಹಾಯ
Posted On: 04 Sep 2022, 01:27 PM
ಉಚ್ಚಿಲ : ಕಾಪು ತಾಲೂಕಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಬಡಾ ಉಚ್ಚಿಲದ ತಡೆಗೋಡೆ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2,50,000 ರೂಪಾಯಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಯೋಜನಾಧಿಕಾರಿಯಾದ ಜಯಂತಿ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಬ್ರಹ್ಮಬೈದರ್ಕಳ ಗರೋಡಿ ಎರ್ಮಾಳು, ತೆಂಕ : ಕಾಲಾವಧಿ ಹೂವಿನ ಪೂಜೆ
Posted On: 04 Sep 2022, 12:58 PM
ಎರ್ಮಾಳು : ಶ್ರೀ ಬ್ರಹ್ಮಬೈದರ್ಕಳ ಗರೋಡಿ ಎರ್ಮಾಳು, ತೆಂಕ ಇಲ್ಲಿ ರವಿವಾರ ಕಾಲಾವಧಿ ಹೂವಿನ ಪೂಜೆಯು ವಿಜ್ರಂಭಣೆಯಿಂದ ಜರಗಿತು. ಈ ಸಂದರ್ಭ ಆಡಳಿತ ಮೊಕ್ತೇಸರರಾದ ವೈ ಜಯಕರ , ಸೇವಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
