Updated News From Kaup

ಬಂಟಕಲ್ಲು : ಶ್ರೀ ಗಾಯತ್ರಿ ಬಳಗದ ಸದಸ್ಯರಿಂದ ವರ ಮಹಾಲಕ್ಷ್ಮಿ ಪೂಜೆ ; ಯಕ್ಷಗಾನ ತಾಳ ಮದ್ದಳೆ

Thumbnail
Posted On: 05 Aug 2022, 10:41 PM

ಬಂಟಕಲ್ಲು : ಇಲ್ಲಿನ ಶ್ರೀ ವಿಶ್ವಕರ್ಮ ಸಂಘ (ರಿ) ಇದರ ಆಶ್ರಯದಲ್ಲಿ ಶ್ರೀ ಗಾಯತ್ರಿ ಬಳಗದ ಸದಸ್ಯರಿಂದ ವರ ಮಹಾಲಕ್ಷ್ಮಿ ಪೂಜೆ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ಮುರಳೀಧರ ಆಚಾರ್ಯ, ಯುವಕ ಸೇವಾದಳದ ಅಧ್ಯಕ್ಷ ಬಿಳಿಯಾರು ರಾಜೇಶ್ ಆಚಾರ್ಯ, ಗಾಯತ್ರಿ ಮಹಿಳಾ ಬಳಗದ ಅಧ್ಯಕ್ಷೆ ಮಾಲತಿ ರವೀಂದ್ರ ಆಚಾರ್ಯ ಮತ್ತು ಎಲ್ಲಾ ಪೂಜಾ ವ್ರತಾಧಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕ ಅನ್ನ ಪ್ರಸಾದದ ಬಳಿಕ ಬಡಾನಿಡಿಯೂರು ಕೇಶವ ರಾವ್ ಇವರ ನಿರ್ದೇಶನದಲ್ಲಿ ಮಹಿಳಾ ಬಳಗದ ಸದಸ್ಯರಿಂದ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳ ಮದ್ದಳೆ ಜರಗಿತು.

ಪಡು ಕುತ್ಯಾರು : ಶ್ರೀ ದುರ್ಗಾ ಮಂದಿರದಲ್ಲಿ ವರಮಹಾಲಕ್ಷ್ಮಿ ಪೂಜೆ

Thumbnail
Posted On: 05 Aug 2022, 09:19 PM

ಕಾಪು : ಇಲ್ಲಿನ ಪಡು ಕುತ್ಯಾರು,ಶ್ರೀ ದುರ್ಗಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯು ಪಡುಕುತ್ಯಾರು ಶ್ರೀಮದ್ ಆನೆಗುಂದಿ ಸಂಸ್ಥಾನದ ಶಿಷ್ಯವೃಂದದವರ ಪೌರೋಹಿತ್ಯದಲ್ಲಿ ಇಂದು ಜರಗಿತು. ಈ ಸಂದರ್ಭ ಶ್ರೀ ದುರ್ಗಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಆಚಾರ್ಯ, ಕಾರ್ಯಧ್ಯಕ್ಷರಾದ ಜಯರಾಮ ಆಚಾರ್ಯ, ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಮಾನಿಗಳು,ಭಾಗವಹಿಸಿ ಶ್ರೀ ವರ ಮಹಾಲಕ್ಷ್ಮಿಯ ಪ್ರಸಾದವನ್ನು ಸ್ವೀಕರಿಸಿದರು.  

ಕಾಪು : ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸದ ಅಂಗವಾಗಿ ಕಾಲ್ನಡಿಗೆ ಜಾಥಾ

Thumbnail
Posted On: 05 Aug 2022, 09:09 PM

ಕಾಪು : ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮಾಚರಣೆಯನ್ನು ವೈಭವಪೂರ್ಣವಾಗಿ ಆಚರಿಸುವ ಸಲುವಾಗಿ, ಸ್ವಾತಂತ್ರ್ಯ ಸಂಗ್ರಾಮದ ವೀರ-ಯೋಧರ ತ್ಯಾಗ, ಬಲಿದಾನ ಮತ್ತು ಶಾಂತಿ, ಸಾಮರಸ್ಯ ಹಾಗೂ ದೇಶಪ್ರೇಮದ ಸಂದೇಶವನ್ನು ಸಾರುವ ನಿಟ್ಟಿನಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಕಾಲ್ನಡಿಗೆ-ಜಾಥಾ ಹಮ್ಮಿಕೊಂಡಿದ್ದು ಈ‌ ನಿಟ್ಟಿನಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಕಟಪಾಡಿ ಮಟ್ಟುನಿಂದ ಪ್ರಾರಂಭಗೊಂಡು, ಕಟಪಾಡಿ -ಸುಭಾಸ್ ನಗರ/ಕುರ್ಕಾಲು - ಶಂಕರಪುರ - ಬಂಟಕಲ್ಲು - ಪಾಂಬೂರು - ಪಂಜಿಮಾರ್ ಮೂಲಕ ಸಾಗಿ, ಶಿರ್ವ ಪೇಟೆಯಲ್ಲಿ ಸಮಾಪಣೆಗೊಂಡಿತು. ತದನಂತರ, ಶಿರ್ವ ಪೇಟೆಯಲ್ಲಿರುವ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಸಮಾರೋಪ ಸಭೆ ನಡೆಯಿತು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಭಯ ಚಂದ್ರ ಜೈನ್ ,ಮಯೂರ್ ಜಯಕುಮಾರ್ ,ಧ್ರುವ ನಾರಾಯಣ್, ಮಂಜುನಾಥ್ ಭಂಡಾರಿ, ನವೀನ್ ಚಂದ್ರ ಶೆಟ್ಟಿ, ಎಂ ಎ ಗಪೂರ್, ನವೀನ್ ಚಂದ್ರ ಸುವರ್ಣ, ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರೀಶ್ ನಾಯಕ್ ಕಾಪು ಮತ್ತಿತರರು ಉಪಸ್ಥಿತರಿದ್ದರು.

ವರಮಹಾಲಕ್ಷ್ಮಿ ವ್ರತ : "ಸೌಭಾಗ್ಯ"ದ ಅಧಿದೇವತೆಯ ಆರಾಧನೆ

Thumbnail
Posted On: 04 Aug 2022, 08:52 PM

ಲಕ್ಷ್ಮೀ ಸಮುದ್ರ ಮಥನದಲ್ಲಿ ಹುಟ್ಟಿದಳು. ನಾರಾಯಣನನ್ನು ವರಿಸಿ ತಾನು ಮಹಾಲಕ್ಷ್ಮೀ ಯಾದಳು. ನಾರಾಯಣನು ಲಕ್ಷ್ಮೀನಾರಾಯಣನಾದ, ಶ್ರೀಮನ್ನಾರಾಯಣನಾದ. ಸ್ಥಿತಿಕರ್ತನಾಗಿ-ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಂದರೆ ಭಾಗ್ಯದ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ, ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ ಲಕ್ಷ್ಮೀ ಬಹುಮಾನ್ಯಳಾದಳು. ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ. ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು, ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ . ಆದಿನದಂದು ಲಕ್ಷ್ಮೀಯು ವರಗಳನ್ನು ಕೊಡುವವಳು ಅಥವಾ ಅನುಗ್ರಹಿಸುವವಳು ಎಂಬ ಅನುಸಂಧಾನದೊಂದಿಗೆ ವರಮಹಾಲಕ್ಷ್ಮೀಯನ್ನಾಗಿ ಪರಿಕಲ್ಪಸಿಕೊಂಡು ಆರಾಧಿಸುವುದು. ಕಟ್ಟು, ಕಟ್ಟಳೆ, ನಿಯಮ, ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ, ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ : "ವರಮಹಾಲಕ್ಷ್ಮೀವ್ರತ". ನಾರಾಯಣ - ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು. ಪರಶುರಾಮನಾದಾಗ ಈಕೆ ಭೂದೇವಿ. ರಾಮಾವತಾರದಲ್ಲಿ ಸೀತಾದೇವಿ. ಕೃಷ್ಣಾವತಾರದಲ್ಲಿ ರುಕ್ಮಿಣಿ. ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ. ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ. ಈ ಲಕ್ಷ್ಮೀ ಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ ತಿರುಪತಿ- ಶ್ರೀಪತಿ, ಭೂವೈಕುಂಠ. ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ ಶ್ರೀಸೂಕ್ತದ ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ, ಜೊತೆಯಲ್ಲೇ ಇರುವ ಶ್ರೀಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು, ರೂಪಗಳನ್ನು ವರ್ಣಿಸುತ್ತದೆ. ಲಕ್ಷ್ಮೀಯು ಚತುರ್ಭಾಹುವುಳ್ಳವಳು ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು. ಕೆಳಗಿನ ಕೈಗಳಿಂದ ವರದ ಮತ್ತು ಅಭಯ ಮುದ್ರೆಗಳನ್ನು ತೋರಿಸುತ್ತಿರುವವಳು. ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು. ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯಗಳನ್ನು ದಯಪಾಲಿಸುವವಳು. ಆದುದರಿಂದ ಜನಪ್ರಿಯಳು, ಅದೇ ತಾನೇ ಬಹುಮಾನ್ಯತೆ. ದೇವರುಗಳೆಷ್ಟು ? : ಭಾರತೀಯರಿಗೆ ದೇವರುಗಳು ಎಷ್ಟು? ನಂಬಿಕೆ, ಉಪಾಸನೆಗಳಲ್ಲಿ ಗೊಂದಲವಿಲ್ಲವೇ? ಹೀಗೆಂದು ವಿದೇಶಿಯೊಬ್ಬ ಕೇಳುತ್ತಾನೆ. ಹೌದಲ್ಲ....ನಮ್ಮ ದೇವತೆಗಳು, ದೇವರುಗಳನ್ನು ಲೆಕ್ಕ ಹಾಕಿದಾಗ ಅದು ಮೂವತ್ತಮೂರು ಕೋಟಿಗೂ ಹೆಚ್ಚು. ಆದರೆ ನಮಗೆ ಆರಾಧನೆಯಲ್ಲಿ ಗೊಂದಲವೇ ಇಲ್ಲ. ಒಂದೊಂದು ಉದ್ದೇಶಕ್ಕೆ, ಇಷ್ಟಾರ್ಥ ಸಿದ್ಧಿಗೆ ಒಂದೊಂದು ದೇವರು. ಮೊನ್ನೆ ನಾಗನನ್ನು ಪೂಜಿಸಿದೆವು, ಈಗ ಲಕ್ಷ್ಮೀಯನ್ನು ಆರಾಧಿಸುತ್ತೇವೆ, ಮುಂದೆ ಕೃಷ್ಣನನ್ನು ಬಳಿಕ ಗಣಪತಿಯನ್ನು, ನವದುರ್ಗೆಯರನ್ನು, ಬಲೀಂದ್ರನನ್ನು, ಶಿವನನ್ನು ಪೂಜಿಸುತ್ತೇವೆ. ವರ್ಷಪೂರ್ತಿ ಪೂಜೆ, ವ್ರತಗಳು ನಮ್ಮ ಶ್ರಮದ ಬದುಕಿನ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಸಾಗಿಬಂದಿವೆ. ತುಳುವರಿಗೆ ದೇವತೆ - ದೇವರುಗಳೊಂದಿಗೆ ಸಾವಿರಮಾನಿ ದೈವಗಳು, ನೂರೆಂಟು ಗಂಡಗಣಗಳನ್ನು ವಿಧಿಯಂತೆ ಪೂಜಿಸುವ ಸಹಜ ನಂಬಿಕೆ. ಇವುಗಳಲ್ಲದೆ ಕೃಷಿ ಸಂಸ್ಕೃತಿಯೊಂದಿಗೆ ಆಚರಿಸಲ್ಪಡುವ ಆಚರಣೆಗಳು. ಇತ್ತೀಚೆಗೆ ನಮ್ಮದಲ್ಲದ ಹತ್ತಾರು ಆರಾಧನೆಗಳು ಸೇರಿಕೊಂಡಿವೆ ಆದರೆ ಗೊಂದಲವಿಲ್ಲ, ಮನಃಪೂರ್ವಕವಾದ ಒಪ್ಪಿಗೆಗಳಿವೆ. ಇದು ಈ ದೇಶದ, ತುಳುನಾಡಿನ, ಮಣ್ಣಿನ ಆಸ್ತಿಕತೆ. ಇದು ನಮ್ಮ ಪರಂಪರೆಯಾಗಿ ವಂಶವಾಹಿನಿಯಲ್ಲಿದೆ. ಬಹುತೇಕ ಆರಾಧನೆ, ನಂಬಿಕೆಗಳೆಲ್ಲ ಏನನ್ನೊ ಪ್ರಾಪ್ತಿಸಿಕೊಳ್ಳಲೇ ಆಗಿದೆ. ಸಮೃದ್ಧಿಯನ್ನು ಬಯಸಿಯೇ ಇರುತ್ತದೆ. ಲಕ್ಷ್ಮೀ ಶಬ್ದದ ಅರ್ಥಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡಾಗ ನಾವು ಬದುಕಿನಲ್ಲಿ ಬಯಸುವುದು ಪ್ರಭೆ, ಶೋಭೆ, ಕೀರ್ತಿ, ಕಾಂತಿ, ವಿಭೂತಿ, ಮತಿ, ವರ್ಚಸ್, ತೇಜಸ್, ಸೌಂದರ್ಯ, ವೃದ್ಧಿ, ಸಿದ್ಧಿ, ಸೌಭಾಗ್ಯಗಳನ್ನೇ ತಾನೆ? ಇದೇ ಲಕ್ಷ್ಮೀಯ ಆರಾಧನೆ. ಬರಹ : ಕೆ.ಎಲ್‌.ಕುಂಡಂತಾಯ

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ

Thumbnail
Posted On: 03 Aug 2022, 09:48 PM

ಶಿರ್ವ : ಮಂಗಳೂರಿನ ಪ್ರತಿಷ್ಠಿತ ಗ್ಲೋಟಚ್ ಟೆಕ್ನಾಲಜೀಸ್ (ದಿಯಾ ಸಿಸ್ಟಮ್ ಸಂಸ್ಥೆ)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವೂ ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್, ಸ್ಟಾಟಿಸ್ಟಿಕ್ಸ್, ಎಲೆಕ್ಟ್ರಾನಿಕ್ಸ್), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ( ಸಿ.ಎಸ್),ಎಂಎಸ್ಸಿ, ಎಂಸಿಎ, ಬಿಇ,ಬಿಟೆಕ್ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಶಿರ್ವ ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗ,ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶ ವತಿಯಿಂದ ಆಗಸ್ಟ್ 03ರಂದು ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ನಡೆಯಿತು. ಇದು ಸ್ಪರ್ಧಾತ್ಮಕ ಯುಗ ಎಂದು ತಿಳಿದಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಗೆದ್ದವರು ಒಂದು ಸ್ಪೂರ್ತಿದಾತರಾದರೆ ಸೋತವರು ಅನುಭವಗಳ ಮೂಲಕ ಸವಾಲುಗಳನ್ನು ಎದುರಿಸಿ ಗೆಲ್ಲಬೇಕು ಹಾಗೆ ಶಿಕ್ಷಣದ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಕೌಶಲಗಳನ್ನು ಕಲಿತು ಉದ್ಯೋಗವನ್ನು ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಗ್ಲೋಟಚ್ ಟೆಕ್ನಾಲಜೀಸ್ ಮ್ಯಾನೇಜರ್ ಎಚ್.ಆರ್ ಶ್ರೀ ಎಬಿನೇಜರ್ ರಾಜಾರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ | ಹೆರಾಲ್ಡ್ ಐವನ್ ಮೋನಿಸ್ ರವರು ಇಂದಿನ ಕಾಲದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಳು ಲಭ್ಯವಿದ್ದು ಅದರ ಮಾಹಿತಿಯನ್ನು ಸೂಕ್ತವಾಗಿ ಪಡೆದು - ಸೂಕ್ತ ತಯಾರಿಕೆಯನ್ನು ಮಾಡಿಕೊಂಡು ಇಂತಹ ಕ್ಯಾಂಪಸ್ ಸಂದಶ೯ಗಳು ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆಯನ್ನು ಕ್ಲಪ್ತ ಸಮಯದಲ್ಲಿ ಒದಗಿಸಿ ಕೊಡುವ ಮೂಲಕ ವೃತ್ತಿ ಬದುಕಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಇದರ ಸದುಪಯೋಗವನ್ನು ಹೆಚ್ಚು ಅಭ್ಯರ್ಥಿಗಳು ಪಡೆದುಕೊಳ್ಳ ಬೇಕೆಂದು ಕಿವಿ ಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಗ್ಲೋಟಚ್ ಟೆಕ್ನಾಲಜೀಸ್ ಸಂಸ್ಥೆಯ ಸೀನಿಯರ್ ರೆಕ್ರೂಟ್ಮೆಂಟ್ ಟೀಮ್ ಏಂಜೆಲಾ ಅಲ್ವಾರೆಸ್, ಶ್ರದ್ಧ ರಾಯ್ಕರ್, ಟೆಕ್ನಿಕಲ್ ಇಂಟರ್ವ್ಯೂವರ್ ಸುರೇಶ್ ರೈ , ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಉಪನ್ಯಾಸಕಿ ದಿವ್ಯಶ್ರೀ ಬಿ, ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಅನುಪ್ ನಾಯಕ್, ಎಲ್ಲ ತೃತಿಯ ಬಿಸಿಎ ವಿದ್ಯಾರ್ಥಿಗಳು ಸಹಕರಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಪ್ಲೇಸ್‌ಮೆಂಟ್ ಸೆಲ್ಲಿನ ಸಂಯೋಜಕಿ ತನುಜ ಎನ್ ಸುವರ್ಣ ವಂದಿಸಿದರು.

ದಾಂಪತ್ಯದಲ್ಲಿ ಜೊತೆಯಾಗಿ ಸಾವಿನಲ್ಲೂ ಜೊತೆಯಾದ ದಂಪತಿ

Thumbnail
Posted On: 03 Aug 2022, 07:43 PM

ಕಾಪು‌ : ಮಾನವ ಜೀವನದಲ್ಲಿ ಸಾವು ನಿಶ್ಚಿತ. ಆದರೆ ತಮ್ಮ ಪ್ರೀತಿ ಪಾತ್ರರ ಜೊತೆಗೆ ಸಾವು ವಿರಳ. ಅಂತಹ ಘಟನೆ ಬೆಳಪುವಿನಲ್ಲಿ ನಡೆದಿದೆ. ಬೆಳಪು ಗ್ರಾಮದ ಧೂಮಪ್ಪ ಶೆಟ್ಟಿ ಮನೆ ಕೃಷ್ಣ ಯಾನೆ ಕುಟ್ಟಿ ಶೆಟ್ಟಿ (80) ಮತ್ತು ಅವರ ಪತ್ನಿ ಮುಂಡೂರು ಅಂಗಡಿಗುತ್ತು ರೇವತಿ ಕೆ. ಶೆಟ್ಟಿ (75) ಸಾವಿನಲ್ಲೂ ಜೊತೆಯಾದ ದಂಪತಿ. ಸಾವಿನಲ್ಲೂ ಜೊತೆಯಾದ ದಂಪತಿಯ ಮೃತದೇಹವನ್ನು ಮಕ್ಕಳು ಮತ್ತು ಕುಟುಂಬಸ್ಥರು ಜೊತೆ ಸೇರಿ ಸಾಮಾಜಿಕ ಕಾರ್ಯಕರ್ತ ಸೂರಿ ಶೆಟ್ಟಿ ನೇತೃತ್ವದಲ್ಲಿ ಬೆಳಪು ಧೂಮಪ್ಪ ಶೆಟ್ಟಿ ಮನೆ ಬಳಿಯ ಜಮೀನಿನಲ್ಲಿ ಸಿದ್ಧಪಡಿಸಿದ ಚಿತೆಯಲ್ಲಿ ಜೋಡಿಯಾಗಿಯೇ ಅಂತ್ಯಕ್ರಿಯೆ ನಡೆಸಲಾಯಿತು.

92 ಹೇರೂರು ಗ್ರಾಮದಲ್ಲಿ ಗಿಡಬೆಳೆಸಿ ಬಹುಮಾನ ಗೆಲ್ಲಿ ಕಾರ್ಯಕ್ರಮ

Thumbnail
Posted On: 02 Aug 2022, 10:10 PM

ಕಾಪು : ಲಯನ್ಸ್ ಕ್ಲಬ್ ಬಂಟಕಲ್ಲು ಬಿ.ಸಿ.ರೋಡ್ ಇವರ ನೇತೃತ್ವದಲ್ಲಿ ಕಾಪು ತಾಲೂಕಿನ ಮಜೂರು ಪಂಚಾಯತ್ ವ್ಯಾಪ್ತಿಯ 92 ಹೇರೂರು ಗ್ರಾಮದಲ್ಲಿ ಗಿಡ ಬೆಳೆಸಿ ಮೂರು ವರ್ಷಗಳ ನಂತರ ಬಹುಮಾನ ಗೆಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್ ಮತ್ತು ಮುಂಬಯಿ ಉದ್ಯಮಿ ಉದಯ ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ನೆರವೇರಿದ ಈ ಕಾರ್ಯಕ್ರಮ ಗ್ರಾಮದ ಜನರ ಪ್ರಶಂಸೆಗೆ ಪಾತ್ರವಾಯಿತು. ಗ್ರಾಮದ ಮನೆಗಳಿಗೆ ಲಕ್ಷ್ಮಣ ಫಲವನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ಮಾಜಿ ‌ಅಧ್ಯಕ್ಷರಾದ ಎಡ್ವರ್ಡ್ ಮೆನೇಜಸ್, ಪ್ರಸ್ತುತ ಅಧ್ಯಕ್ಷರಾದ ವಿಲ್ಫಡ್೯ ಪಿಂಟೊ ಜನರಿಗೆ ಗಿಡದ ಮಹತ್ವ, ಅದರ ಪೋಷಣೆಯ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ವಿಜಯ್ ಧೀರಜ್ ಮಾತನಾಡಿ ಮೂರು ವರ್ಷಗಳ ಕಾಲ ಮಕ್ಕಳಂತೆ ಗಿಡವನ್ನು ಬೆಳೆಸಿ ತದನಂತ ಆ ಗಿಡವೇ ನಿಮಗೆ ಆಸರೆಯಾಗುತ್ತದೆ. ಮೂರು ವರ್ಷಗಳ ನಂತರ ಚೆನ್ನಾಗಿ ಪಾಲನೆ ಪೋಷಣೆ ಮಾಡಿದ ಗ್ರಾಮದ 10 ಜನರನ್ನು ಗೌರವಿಸಲಾಗುವುದು ಎಂದು ಹೇಳಿದರು. ಲಯನ್ಸ್ ಕ್ಲಬ್ ಬಂಟಕಲ್ಲು ಕಾರ್ಯದರ್ಶಿ ಉಮೇಶ್ ಕುಲಾಲ್ ವಂದಿಸಿದರು. ಲಯನ್ಸ್ ಕ್ಲಬ್ ಬಂಟಕಲ್ಲು ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಮಿಸ್ ಇಂಡಿಯಾ ಸಿನಿ ಶೆಟ್ಟಿ - ಉಂಡಾರು ದೇವಳಕ್ಕೆ ಭೇಟಿ

Thumbnail
Posted On: 02 Aug 2022, 06:09 PM

ಕಾಪು : ಮಿಸ್ ಇಂಡಿಯಾ ಪಟ್ಟವನ್ನು ಗೆದ್ದು ಮನೆಮಾತಾಗಿರುವ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬುವಿನ ಸದಾನಂದ ಶೆಟ್ಟಿ ಮತ್ತು ಹೇಮ ಶೆಟ್ಟಿ ದಂಪತಿಗಳ ಪುತ್ರಿ ಸಿನಿ ಶೆಟ್ಟಿಯವರು ತನ್ನ ಹುಟ್ಟೂರಿನ ಗ್ರಾಮ ದೇವರಾಗಿರುವ ಉಂಡಾರು ವಿಷ್ಣುಮೂರ್ತಿ ದೇವರ ಸನ್ನಿಧಾನಕ್ಕೆ ಆಗಮಿಸಿ ದೇವರ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿನಿ ಶೆಟ್ಟಿ ಕುಟುಂಬಸ್ಥರು, ಗ್ರಾಮಸ್ಥರು ಸೇರಿದಂತೆ ದೇವಳದ ಕಮಿಟಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು

ರೋಟರಾಕ್ಟ್ ಕ್ಲಬ್ ಸುಭಾಷ್ ನಗರ ಪದಗ್ರಹಣ

Thumbnail
Posted On: 01 Aug 2022, 11:02 PM

ಶಿರ್ವ : ರೋಟರಾಕ್ಟ್ ಕ್ಲಬ್ ಸುಭಾಷ್ ನಗರದ 2022-23 ನೇ ವರ್ಷಕ್ಕೆ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 30ರಂದು ರೋಟರಿ ಭವನ ಶಂಕರಪುರ ಇಲ್ಲಿ ಜರಗಿತು. ನೂತನ 2022-23ನೇ ಸಾಲಿನ ಅಧ್ಯಕ್ಷರಾಗಿ‌ ಶ್ವೇತ ಪೂಜಾರಿ, ಕಾರ್ಯದರ್ಶಿ ಯಜ್ಞೇಶ್ ಎಂ ಹೆಗ್ಡೆ ಇವರಿಗೆ ರೋಟರಿ ಶಂಕರಪುರದ ಅಧ್ಯಕ್ಷರಾದ ಗ್ಲಾಡ್ಸನ್ ಕುಂದರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ ಮಹಾಲಸಾ ಕಿಣಿ, ಉಪ DRCC RI DIST 3182 ಇದರ ಚಂದ್ರ ಪೂಜಾರಿ, DRCC RI DIST 3182 ಜೈ ವಿಠ್ಠಲ್, ಕ್ಲಬ್ ಅಧ್ಯಕ್ಷರಾದ ‌ಡೇನಿಯಲ್ ಸಿ ಅಮ್ಮಣ್ಣ, 2020-21ನೇ ಸಾಲಿನ ಕವನ್ ಪೂಜಾರಿ, ಕಾರ್ಯದರ್ಶಿ ಪ್ರೀತೇಶ್ ನೊರೊನ್ಹಾ ಉಪಸ್ಥಿತರಿದ್ದರು.

ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ

Thumbnail
Posted On: 01 Aug 2022, 10:53 PM

ಶಿರ್ವ : ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರ್ಗಳನ್ನು ಬಳಸಲಾಗಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಹೊಂದುವುದು ಅವಶ್ಯಕ. ವಿದ್ಯಾರ್ಥಿಗಳು ಕಂಪ್ಯೂಟರ್‌ಗಳ ಸದುಪಯೋಗ ದಿಂದ ಉತ್ತಮ ಉಪಾದಿ ಹಾಗೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಇವತ್ತು ಕಂಪ್ಯೂಟರ್ ಒಂದು ಮೂಲಭೂತ ಅಗತ್ಯ ವಸ್ತುವಾಗಿದೆ. ಶಿಕ್ಷಣ ,ಆರೋಗ್ಯ ,ಪ್ರಾಕೃತಿಕ ಹಿನ್ನಲೆಯಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಆದ ಕೊಡುಗೆಯನ್ನು ಈ ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ಇಲ್ಲಿನ ಶಿರ್ವ ಸೈಂಟ್ ಮೇರಿಸ್ ಕಾಲೇಜಿಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಲಾದ 5 ಕಂಪ್ಯೂಟರ್ ಗಳನ್ನು ಕರ್ಣಾಟಕ ಬ್ಯಾಂಕ್ ಉಡುಪಿ ರೀಜನಲ್ ಆಫೀಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಾಜ್ ಗೋಪಾಲ್ ಬಿ. ಅವರು ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಚಾರ್ಯ ಡಾ| ಹೆರಾಲ್ಡ್ ಐವನ್ ಮೋನಿಸ್ ಅವರು ಸಮಾಜ ಕಾಯ೯ ಕೆಲಸಗಳಲ್ಲಿ ಕರ್ಣಾಟಕ ಬ್ಯಾಂಕ್ ಸದಾ ಮುಂದು ಎಂದು ನಮ್ಮ ಕಾಲೇಜಿಗೆ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಮ್ಯಾನೇಜರ್ ಮತ್ತು ಅವರ ಸಿಬ್ಬಂದಿ ವಗ೯ದವರನ್ನು ಅಭಿನಂದಿಸಿದರು ಸಂತಮೇರಿ ಮತ್ತು ಡಾನ್ ಬಾಸ್ಕೋ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿವಂದನೀಯ ಡಾ| ಲೆಸ್ಲಿ ಸಿ.ಡಿಸೋಜ ರವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ತಮಗೆ ಪ್ರತ್ಯೇಕ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಸಮಾಜದ ಋಣವನ್ನು ಸದಾ ತಮ್ಮ ಗಮನದಲ್ಲಿಟ್ಟುಕೊಂಡು ಮುಂದೆ ಸಮಾಜಕ್ಕೆ ತಮ್ಮಿಂದ ಎಷ್ಟು ಸಾಧ್ಯವೊ ಅಷ್ಟನ್ನು ಸಮಾಜಕ್ಕೆ ಹಿಂತಿರುಗಿಸಬೇಕು ಹಾಗೂ ಸಮಾಜಮುಖಿ ಕೆಲಸದಲ್ಲಿ ಒಂದು ಹೆಜ್ಜೆ ಮುಂದಿರಬೇಕೆಂದೂ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕೆಂದು ತಮ್ಮ ಆಶಿವ೯ಚನದಲ್ಲಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಶಿರ್ವ ಬ್ರಾಂಚಿನ ಮ್ಯಾನೇಜರ್ ಜನಾರ್ಧನ್, ಕ್ಲೆರಿಕಲ್ ಸ್ಟಾಫ್ ಶ್ರೀನಿವಾಸ ಪೈ, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಧಾತ್ ಶೆಟ್ಟಿ, ಅಲಿಸ್ಟರ್ ಸುಜಾಯ್ ಡಿಸೋಜಾ ಮತ್ತು ಅರುಣ್ ಸಹಕರಿಸಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಪ್ರಕಾಶ್ ವಂದಿಸಿದರು. ಉಪನ್ಯಾಸಕಿ ದಿವ್ಯಶ್ರೀ ಬಿ ಕಾರ್ಯಕ್ರಮ ಸಂಯೋಜಿಸಿದರು.