Updated News From Kaup
ಫ್ರೆಂಡ್ಸ್ ಗ್ರೂಪ್ ಕಳತ್ತೂರು : ಮುದ್ದುಕೃಷ್ಣ, ಆಟೋಟ ಸ್ಪರ್ಧೆ
Posted On: 21 Aug 2022, 01:36 PM
ಕಾಪು :ಫ್ರೆಂಡ್ಸ್ ಗ್ರೂಪ್ ಕಳತ್ತೂರು ವತಿಯಿಂದ ಕುಶಲ ಶೇಖರ ಶೆಟ್ಟಿ ಇಂಟರ್ನಾಷನಲ್ ಆಡಿಟೋರಿಯಂನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪ್ರಥಮ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆಯು ಜರಗಿತು. ಕಾರ್ಯಕ್ರಮವನ್ನು ವಾಸು ಶೆಟ್ಟಿ ದಂಪತಿಗಳು ಉದ್ಘಾಟಿಸಿದರು. ಮುದ್ದುಕೃಷ್ಣ ಸ್ಪರ್ಧೆ ಫಲಿತಾಂಶ : ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಅನಿಕಾ, ಅಗಸ್ತ್ಯ, ಜಿಯಾ ಸುವರ್ಣ ಸಮಾನ ಬಹುಮಾನ ಗಳಿಸಿದರು. 2ರಿಂದ 4 ವರ್ಷದ ವಿಭಾಗದಲ್ಲಿ ಶ್ರೀವತ್ಸ ಪ್ರಥಮ, ನೈರಿತಿ ರಾವ್ ದ್ವಿತೀಯ ಬಹುಮಾನ ಗಳಿಸಿದರು. 5ರಿಂದ 7 ವರ್ಷದ ವಿಭಾಗದಲ್ಲಿ ಮನಸ್ವಿ ದೇವಾಡಿಗ ಪ್ರಥಮ, ದೃತಿನ್ ದ್ವಿತೀಯ ಬಹುಮಾನ ಗಳಿಸಿದರು. 8ರಿಂದ 13 ವರ್ಷದ ವಿಭಾಗದಲ್ಲಿ ಜನ್ವಿತ್ ದೇವಾಡಿಗ ಪ್ರಥಮ, ತಾನಿಯಾ ಮತ್ತು ಸನ್ವಿತ್ ದ್ವಿತೀಯ ಬಹುಮಾನ ಗಳಿಸಿದರು. ಒಂದರಿಂದ ಏಳು ವರ್ಷದವರೆಗಿನ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶೇಖರ ಶೆಟ್ಟಿ, ರಂಗನಾಥ ಶೆಟ್ಟಿ, ಅನಿತಾ ಉಪಾಧ್ಯಾಯ, ಹರಿಣಿ ರೈ, ಫ್ರೆಂಡ್ಸ್ ಗ್ರೂಪ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಅನಿತಾ ಉಪಾಧ್ಯಾಯ, ಪ್ರತಿಭಾ ಶೆಟ್ಟಿ, ಪ್ರತಿಮಾ ಶೆಟ್ಟಿ ಸಹಕರಿಸಿದರು. ಪ್ರೀತಂ ಶಿರ್ವ ಕಾರ್ಯಕ್ರಮ ನಿರೂಪಿಸಿದರು.
ಯುವವಾಹಿನಿ : ಅಂತರ್ ಘಟಕಗಳ ಸಾಂಸ್ಕೃತಿಕ ಕಾರ್ಯಕ್ರಮ -ಡೆನ್ನಾನ ಡೆನ್ನನ -2022ಕ್ಕೆ ಸಚಿವ ಸುನಿಲ್ ಕುಮಾರ್ ಚಾಲನೆ
Posted On: 21 Aug 2022, 10:58 AM
ಕಟಪಾಡಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಉಡುಪಿ ಯುವವಾಹಿನಿ ಘಟಕದ ಅತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಆದಿತ್ಯವಾರ ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಗಿರಿ ಸಭಾಗ್ರಹದಲ್ಲಿ ಯುವವಾಹಿನಿಯ ಅಂತರ್ ಘಟಕಗಳ ಸಾಂಸ್ಕೃತಿಕ ಕಾರ್ಯಕ್ರಮ ಡೆನ್ನಾನ ಡೆನ್ನನ ಕಾರ್ಯಕ್ರಮವನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಪ್ರತಿಭೆಗಳಿಗೆ ಅವಕಾಶ ಕಡಿಮೆ. ಸೂಕ್ತ ಅವಕಾಶದ ಅನಿವಾರ್ಯವಿದೆ. ಯುವವಾಹಿನಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಪ್ರತಿಭೆಗಳನ್ನು ಅಣಿಗೊಳಿಸುತ್ತಿದೆ. ಭಾಷೆ, ಸಂಸ್ಕೃತಿಯಿಂದ ಉತ್ತಮ ನಡವಳಿಕೆ ಮೂಡಲು ಸಾಧ್ಯ. ಸಮಾಜವನ್ನು ಸಾಂಸ್ಕೃತಿಕ ಚಟುವಟಿಕೆಯಿಂದ ತಿದ್ದಬಹುದು. ನಮ್ಮ ನಡವಳಿಕೆಯನ್ನು ರೂಪಿಸಲು ಸಾಂಸ್ಕೃತಿಕ ಚಟುವಟಿಕೆಗಳು ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಯುವವಾಹಿನಿ ಸಂಘಟನೆ ಮುಂಚೂಣಿಯಲ್ಲಿದೆ ಎಂದರು. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಮಂಗಳೂರು ಇದರ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತ ಗುರುರಾಜ್ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪ ಸುವರ್ಣ, ಉಡುಪಿ ಯುವವಾಹಿನಿ ಘಟಕದ ಕಾರ್ಯದರ್ಶಿ ದಯಾನಂದ ಕರ್ಕೇರ, ಕಾರ್ಯಕ್ರಮ ಸಂಚಾಲಕರಾದ ಮಹಾಬಲ ಅಮೀನ್, ಅಶೋಕ್ ಕೋಟ್ಯಾನ್ ಉಪಸ್ಥಿತರಿದ್ದರು. ಉಡುಪಿ ಘಟಕದ ಅಧ್ಯಕ್ಷರಾದ ಪ್ರವೀಣ್ ಡಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿಯ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾದ ಜಗದೀಶ್ ಸ್ವಾಗತಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಪ್ರಸ್ತಾವಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಕಾರವಾರ : ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯಿಂದ ಮಾನಸ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರ ಭೇಟಿ
Posted On: 19 Aug 2022, 11:56 PM
ಕಾಪು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಕಾರವಾರ ಇದರ ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯ ಮುಖೇನ ಮಾನಸ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರ ಪಾಂಬೂರು, ಇಲ್ಲಿಯ ಸುಮಾರು 110 ವಿದ್ಯಾರ್ಥಿಗಳಿಗೆ ಸೊಲಾಪುರ ಚಾದರ್ ಮತ್ತು ಸಿಹಿತಿಂಡಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ರವರು ಸಂಸ್ಥೆಯು ಕಾರವಾರ ಮಾತ್ರವಲ್ಲದೆ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಅನೇಕ ಶಾಖೆಗಳನ್ನು ಹೊಂದಿದ್ದು ವಿವಿಧ ಸಮಾಜಸೇವಾ ಕಾರ್ಯಕ್ರಮಗಳ ಮುಖೇನ ಗುರುತಿಸಿಕೊಂಡಿದೆ. ಇಂದು ಮಾನಸ ಸಂಸ್ಥೆಯ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಬೆಡ್ಶೀಟ್ ಮತ್ತು ಸಿಹಿತಿಂಡಿ, ವಿತರಿಸಿ, ಮಾನವೀಯ ಮೌಲ್ಯಗಳಿಗೆ ಉತ್ತೇಜನ ನೀಡಿದ್ದು, ಶ್ಲಾಘನೀಯವಾಗಿದೆ ಎಂದು ಶುಭ ಹಾರೈಸಿ ಎಲ್ಲರಿಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಶುಭಾಶಯ ಕೋರಿದರು. ಮತ್ತೋರ್ವ ಮುಖ್ಯ ಅತಿಥಿ ಹೋಲಿಕ್ರಾಸ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾ| ಹೆನ್ರಿ ಮಸ್ಕರೇನಸ್ ಮಾತನಾಡಿ, 'ಮಿಲಾಗ್ರಿಸ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು ವಿಶೇಷ ಚೇತನ ಅಂದರೆ ದೇವರ ಮಕ್ಕಳನ್ನು ಸಂತೋಷಪಡಿಸುವ ಮೂಲಕ ದೇವರಿಗೆ ಅತ್ಯಂತ ಪ್ರಿಯವಾದ ಕೆಲಸ ಮಾಡಿದ್ದು ಅಭಿವಂದನಾರ್ಹವೆಂದು ಹೇಳಿದರು. ಉಡುಪಿ ವಿಭಾಗದ ಅಭಿವೃದ್ಧಿ ಅಧಿಕಾರಿಯಾದ ಜೀವನ್ ಡಿಸೋಜರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಮಿಲಾಗ್ರಿಸ್ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಾರ್ಜ್ ಫೆರ್ನಾಂಡಿಸ್ ರವರ ಸಾಮಾಜಿಕ ಕಳಕಳಿಯ ಭಾಗವಾಗಿ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯದಲ್ಲಿರುವ ೧೧೧ ಶಾಖೆಗಳ ಮೂಲಕ ಸುಮಾರು 3000 ವಿಶೇಷ ಚೇತನ ಮತ್ತು ಅನಾಥ ಮಕ್ಕಳಿಗೆ ಸೋಲಾಪುರ ಚಾದರ ಮತ್ತು ಸಿಹಿತಿಂಡಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ಮಾನಸದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹೆನ್ರಿ ಮಿನೇಜಸ್ ಮತ್ತು ಟ್ರಸ್ಟಿಗಳಾ ಸಿ|ಜಾನ್ ಮಾರ್ಟಿಸ್, ಶಾಖೆಯ ಪ್ರಾಂಶುಪಾಲರಾದ ಸಿ| ಅನ್ಸಿಲ್ಲಾ, ಶಿರ್ವ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾದ ಗ್ರೇಸಿ ಕರ್ಡೋಜ, ಶಿರ್ವ ಮತ್ತು ಮೂಡುಬೆಳ್ಳೆ ಶಾಖೆಯ ಶಾಖಾ ವ್ಯವಸ್ಥಾಪಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆನ್ರಿ ಮಿನೇಜಸ್ ಸ್ವಾಗತಿಸಿದರು. ಶಿರ್ವ ಶಾಖಾ ವ್ಯವಸ್ಥಾಪಕಿ ಪ್ರಮಿಳಾ ಲೋಬೊ ವಂದಿಸಿದರು. ಶಾಲೆಯ ಶಿಕ್ಷಕ ಶಿಕ್ಷಕೇತರ ವರ್ಗ ಹಾಗೂ ಎರಡೂ ಶಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಳತ್ತೂರು ಪೈಯಾರು ಅಂಗನವಾಡಿ :ಕೃಷ್ಣ ವೇಷ ಸ್ಪರ್ಧೆ
Posted On: 19 Aug 2022, 10:43 PM
ಕಾಪು : ಕುತ್ಯಾರು ಗ್ರಾಮ ಪಂಚಾಯತ್ ಭಾಗದ ಪೈಯಾರು ಅಂಗನವಾಡಿಯಲ್ಲಿ ಕೃಷ್ಣ ವೇಷ ಸ್ಪರ್ಧೆ ಆಗಸ್ಟ್ 19ರಂದು ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಕಮಲಾಕ್ಷಿ, ಸಹಾಯಕಿ ಅನಿತಾ, ಯುವಕ ಮಂಡಲ ಸದಸ್ಯ ರಾಜೇಶ್ ಪೈಯಾರು, ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ, ಆಶಾ ಕಾರ್ಯಕರ್ತರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಕಾಪು ಜೆಸಿಐ ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆ
Posted On: 19 Aug 2022, 10:36 PM
ಕಾಪು : ಜೆಸಿಐ ನೇತೃತ್ವದಲ್ಲಿ ದಿ. ಜಗದೀಶ್ ಆಚಾರ್ಯ ಇವರ ಸ್ಮರಣಾರ್ಥ ಕಾಪು ಜಯಲಕ್ಷ್ಮೀ ಜ್ಯುವೆಲ್ಲಸ್೯ ಪ್ರಾಯೋಜಕತ್ವದಲ್ಲಿ ಆಗಸ್ಟ್ 19ರಂದು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಕಾಪು ಪರಿಸರದಲ್ಲಿ ನಿರಂತರ ಸೇವಾ ಚಟುವಟಿಕೆಗಳನ್ನು ನಡೆಸುವ ಮೂಲಕ ಜೇಸಿಐ ಕಾಪು ಜನಮಾನಸದಲ್ಲಿ ಉತ್ತಮ ಹೆಸರು ಗಳಿಸಿದೆ. ರಜತ ವರ್ಷದ ಸಂಭ್ರಮದಲ್ಲಿರುವ ಸಂಸ್ಥೆಯು ಪ್ರತೀ ವರ್ಷ ನಡೆಸುತ್ತಿರುವ ಮುದ್ದುಕೃಷ್ಣ ವೇಷ ಸ್ಪರ್ಧೆಯು ಭಾಂಧವ್ಯ ವೃದ್ಧಿಗೆ ಕಾರಣವಾಗಲಿ ಎಂದರು. ಜೇಸಿಐ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕ ಮಂಜುನಾಥ ದೇವಾಡಿಗ ಉಪ್ಪುಂದ, ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಸುರೇಖಾ ಜೆ. ಆಚಾರ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ನಿರ್ದೇಶಕ ಜಗದೀಶ್ ಬಂಗೇರ, ಮಹಿಳಾ ಜೇಸಿ ನಿರ್ದೇಶಕಿ ಶ್ರುತಿ ಶೆಟ್ಟಿ, ಯುವ ಜೇಸಿ ಅಧ್ಯಕ್ಷ ಆದಿತ್ಯ ಗುರ್ಮೆ ಹಾಗೂ ಕಾಪು ಜೇಸಿಐನ ಪೂರ್ವಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾಪು ಜೇಸಿಐ ಅಧ್ಯಕ್ಷ ಸುಜಿತ್ ಶೆಟ್ಟಿ ಸ್ವಾಗತಿಸಿದರು. ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದರು. ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ ವಂದಿಸಿದರು. 3 ವರ್ಷಕ್ಕಿಂತ ಕೆಳಗಿನ ವಿಭಾಗ, ಅಂಗನವಾಡಿ, ಎಲ್ ಕೆ ಜಿ ಮತ್ತು ಯು ಕೆ ಜಿ ವಿಭಾಗ ಹಾಗೂ 1 ನೇ ಮತ್ತು 2 ನೇ ತರಗತಿಯ ಮಕ್ಕಳಿಗಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ ಜರಗಿತು. ಪ್ರಕಾಶ್ ಸುವರ್ಣ ಕಟಪಾಡಿ, ಅಶ್ವಿನಿ ಬಂಗೇರ, ಗಾಯತ್ರಿ ಆಚಾರ್ಯ ತೀರ್ಪುಗಾರರಾಗಿ ಸಹಕರಿಸಿದರು.
ಡಾ| ಅಣ್ಣಯ್ಯ ಕುಲಾಲ್ ಗೆ ಡಿ. ದೇವರಾಜ ಅರಸು ಪ್ರಶಸ್ತಿ
Posted On: 19 Aug 2022, 10:27 PM
ಉಡುಪಿ : ಜಿಲ್ಲೆಯ ಕೋಟ ಬಳಿಯ ತೆಕ್ಕಟ್ಟೆ ಗ್ರಾಮದ ಡಾ| ಅಣ್ಣಯ್ಯ ಕುಲಾಲ್ ಸಮಾಜಮುಖಿ, ಜಾತ್ಯತೀತ ಚಿಂತನೆಯಿಂದ ಬಡವರು, ವೈದ್ಯಕೀಯ ಸೇವೆ ನೀಡುವ ಮೂಲಕ ಕರಾವಳಿ-ಮಲೆನಾಡು ಭಾಗವಲ್ಲದೆ ರಾಜ್ಯವ್ಯಾಪಿ ಉತ್ತಮ ವೈದ್ಯ ಹಾಗೂ ಸಮಾಜ ವಿಜ್ಞಾನಿ ಎಂದು ಗುರುತಿಸಿಕೊಂಡಿದ್ದಾರೆ. ಇವರು 2022-23 ಸಾಲಿನ ಡಿ. ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಪುರಸ್ಕಾರವನ್ನು ಒಳಗೊಂಡಿದೆ. ಆಗಸ್ಟ್ 20ರಂದು ವಿಧಾನ ಸೌಧದಲ್ಲಿ ಆಯೋಜಿಸಲಾಗಿರುವ ದೇವರಾಜ ಅರಸು 107ನೇ ಜನ್ಮದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇವರು ಶ್ರೀನಿವಾಸ್ ಯೂನಿವರ್ಸಿಟಿ ಹಾಗೂ ಶ್ರೀನಿವಾಸ್ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಕೇಂದ್ರ ಸರಕಾರದ ಆರೋಗ್ಯ ಯೋಜನೆಯಡಿ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಬಂಧಿತ ಪ್ಯಾಲಿಯೇಟೀವ್ ವಿಭಾಗದಲ್ಲಿ ಬಡವರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನಂಜೆ : ಶ್ರೀಕೃಷ್ಣ ಲೀಲೋತ್ಸವದ ಪ್ರಯುಕ್ತ ಮೊಸರು ಕುಡಿಕೆ ಕ್ರೀಡಾಕೂಟ 2022 "ಮುದ್ದು ಕೃಷ್ಣ ವೇಷ ಸ್ಪರ್ಧೆ"
Posted On: 19 Aug 2022, 07:29 PM
ಕಾಪು : ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆ ಇವರ ಆಶ್ರಯದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಇನ್ನಂಜೆ ಒಕ್ಕೂಟ, ನಿಸರ್ಗ ಫ್ರೆಂಡ್ಸ್ (ರಿ.) ಪಾದೆಕೆರೆ, ರೋಟರಿ ಸಮುದಾಯ ದಳ ಇನ್ನಂಜೆ, ಬಿಲ್ಲವ ಸೇವಾ ಸಂಘ ಇನ್ನಂಜೆ ಇವರ ಸಹಕಾರದೊಂದಿಗೆ ಶ್ರೀಕೃಷ್ಣ ಲೀಲೋತ್ಸವದ ಪ್ರಯುಕ್ತ ಮೊಸರು ಕುಡಿಕೆ ಕ್ರೀಡಾಕೂಟ 2022 "ಮುದ್ದು ಕೃಷ್ಣ ವೇಷ ಸ್ಪರ್ಧೆ" ಆಗಸ್ಟ್ 20 ರಂದು ಇನ್ನಂಜೆ ದಾಸ ಭವನದಲ್ಲಿ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆ
Posted On: 19 Aug 2022, 06:57 PM
ಶಿರ್ವ: ಕೆ ಆರ್ ಪಾಟ್ಕರ್ ರವರು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ವೈಯುಕ್ತಿಕ ಕಾರಣಗಳಿಗಾಗಿ ರಾಜಿನಾಮೆ ನೀಡಿದ್ದು ಪಂಚಾಯತ್ ಸದಸ್ಯನಾಗಿ ಮುಂದುವರಿಯುವುದಾಗಿ ತಿಳಿಸಿರುವ ಅವರು ತನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲಾ ಗ್ರಾಮಸ್ಥರಿಗೆ, ದಾನಿಗಳಿಗೆ, ಹಿತೈಷಿಗಳಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ. ಸಹಾಯಕ ಕಮಿಷನರ್ ಉಪ ವಿಭಾಗ ಕುಂದಾಪುರ ಇವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದು ಇದೀಗ ಅದು ಅಂಗೀಕಾರಗೊಂಡಿದೆ ಎಂದು ತಿಳಿಸಿದ್ದಾರೆ.
ಕಟಪಾಡಿ : ಟಿಕ್ಕಾ ಅಂಗಡಿಯೊಳಕ್ಕೆ ಕಾರು : ಇಬ್ಬರಿಗೆ ಗಾಯ
Posted On: 18 Aug 2022, 11:08 PM
ಕಟಪಾಡಿ : ನಿಂತಿದ್ದ ಕಾರಿಗೆ ಮತ್ತೊಂದು ಕಾರು ಢಿಕ್ಕಿ ಹೊಡೆದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಟಿಕ್ಕಾ ಅಂಗಡಿಗೆ ಕಾರು ನುಗ್ಗಿ ಅಂಗಡಿಯವ ಮತ್ತು ಗ್ರಾಹಕ ಗಾಯಗೊಂಡ ಘಟನೆ ಗುರುವಾರ ರಾತ್ರಿ ಕಟಪಾಡಿಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಗ್ರಾಹಕ ಕಟಪಾಡಿ ಕಟಪಾಡಿ ನಿವಾಸಿಯಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಟಿಕ್ಕಾ ಅಂಗಡಿಯವ ಉತ್ತರಪ್ರದೇಶ ಮೂಲದವನಾಗಿದ್ದು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಂಕರಪುರ ರೋಟರಿ, ಅಂಗಸಂಸ್ಥೆಗಳಿಂದ ಇಂಟರ್ನ್ಯಾಷನಲ್ ಯೂತ್ ಡೇ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ
Posted On: 18 Aug 2022, 09:44 PM
ಕಾಪು : ರೋಟರಿ ಶಂಕರಪುರ ಹಾಗೂ ಅಂಗ ಸಂಸ್ಥೆಗಳಾದ ರೋಟರಿ ಸಮುದಾಯದಳ ಇನ್ನಂಜೆ, ರೋಟರಾಕ್ಟ್ ಕ್ಲಬ್ ಸುಭಾಸ್ ನಗರ, ಇನ್ನರ್ ವೀಲ್ ಕ್ಲಬ್ ಶಂಕರಪುರ ಜೊತೆಯಾಗಿ ಇಂಟರ್ನ್ಯಾಷನಲ್ ಯೂತ್ ಡೇ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಇಂಟರ್ನ್ಯಾಷನಲ್ ಯೂತ್ ಡೇ ಬಗ್ಗೆ ಡಾ| ರಾಯನ್ ಮತಾಯಸ್ ರವರು ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದರು. ರಕ್ಷಾ ಬಂಧನ ಕಾರ್ಯಕ್ರಮದ ಮಹತ್ವದ ಬಗ್ಗೆ ರೊ. ನಂದನ್ ಕುಮಾರ್ ಮಾತನಾಡಿದರು. ಹುಟ್ಟುಹಬ್ಬವನ್ನು ಆಚರಿಸಲಿರುವ ಮಾಲಿನಿ ಶೆಟ್ಟಿ ಹಾಗೂ ನವೀನ್ ಅಮೀನ್ ಗೆ ಶುಭ ಕೋರಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಶಂಕರಪುರ, ರೋಟರಾಕ್ಟ್ ಸುಭಾಷ್ ನಗರ, ಇನ್ನರ್ ವೀಲ್ ಶಂಕರಪುರ, ರೋಟರಿ ಸಮುದಾಯದಳದ ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಅಧ್ಯಕ್ಷರಾದ ರೊ.ಗ್ಲಾಡಸನ್ ಕುಂದರ್ ರವರು ಸ್ವಾಗತ ಮಾಡಿದರು. ರೋಟರಿಯ ಕಾರ್ಯದರ್ಶಿ ರೊ.ಸಿಲ್ವಿಯಾ ಕಸ್ಟಲೀನೋ ವಂದಿಸಿದರು.
