Updated News From Kaup
ಪಡುಬಿದ್ರಿ : ಮಾದಕ ವ್ಯಸನಿಗಳು ಪೊಲೀಸ್ ವಶಕ್ಕೆ
Posted On: 03 Sep 2022, 10:09 PM
ಪಡುಬಿದ್ರಿ : ಕಾಪು ತಾಲೂಕಿನ ಬಡಾ ಗ್ರಾಮದ ಬಾಂಗ್ಲ ಎಂಬಲ್ಲಿ ಈರ್ವರನ್ನು ಮತ್ತು ನಡ್ಸಾಲು ಗ್ರಾಮದ ಕಂಚಿನಡ್ಕದಲ್ಲಿ ಒರ್ವನನ್ನು ಮಾದಕ ವಸ್ತು ಸೇವಿಸಿ ಅಮಲಿನಲ್ಲಿ ತೂರಾಡುತ್ತಿದ್ದ ಬಗ್ಗೆ ಅನುಮಾನಗೊಂಡು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗಸ್ಟ್ 30ರಂದು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪುರುಷೋತ್ತಮ ಎ ಕಾಪು ತಾಲೂಕು ಬಡಾ ಗ್ರಾಮದ ಬಾಂಗ್ಲ ಎಂಬಲ್ಲಿ ಮಹಮ್ಮದ್ ಫವಾಜ್ (18), ಮಹಮ್ಮದ್ ಅಫ್ಜಲ್(22) ಮತ್ತು ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಗುರುನಾಥ ಆರ್ (23) ಎಂಬುವವರ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದುಕೊಂಡು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು ಮೂವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ಸೆಪ್ಟೆಂಬರ್ 02 ರಂದು ವೈದ್ಯರು ದೃಢಪಡಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾರ್ಕಳ : ಕ್ರಿಯೇಟಿವ್ ಪಿ ಯು ಕಾಲೇಜಿನ ಸುಜ್ಞಾನ್ ಎಂ ಆರ್ ಗೆ ಆರ್.ಐ.ಇ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ
Posted On: 02 Sep 2022, 04:35 PM
ಕಾರ್ಕಳ : ಇಲ್ಲಿನ ಕ್ರಿಯೇಟಿವ್ ಪಿ ಯು ಕಾಲೇಜಿನ ಸುಜ್ಞಾನ್ ಎಂ ಆರ್ ಗೆ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಆರ್.ಐ.ಇ)ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಲಭಿಸಿದೆ. ಮೂಲವಿಜ್ಞಾನ ಶಿಕ್ಷಣಕ್ಕೆ ಸೇರಬಯಸುವವರಿಗಾಗಿ ನಡೆಸಲಾಗುವ ರಾಷ್ಟ್ರಮಟ್ಟದ ಪರೀಕ್ಷೆಯಾದ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಬಿ ಎಸ್ ಸಿ ಪದವಿ ವಿದ್ಯಾಭ್ಯಾಸಕ್ಕೆ ನಡೆಸಲಾಗುವ ಪರೀಕ್ಷೆಯಲ್ಲಿ ಸುಜ್ಞಾನ್ ಎಂ ಆರ್ ಈ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಪದವಿ ನಂತರ ಉಪನ್ಯಾಸಕರಾಗುವವರಿಗಾಗಿಯೇ ತರಬೇತಿ ನೀಡುವ ಸಂಸ್ಥೆಯಾಗಿರುವ ಆರ್ ಐ ಇ ನ ಅಡಿಯಲ್ಲಿ ಅತ್ಯುತ್ತಮ ತರಬೇತಿಯನ್ನು ನೀಡುವ ಸಂಸ್ಥೆಯಾಗಿದೆ. ಸುಜ್ಞಾನ್ ಎಂ.ಆರ್ ನ ಈ ಅಪೂರ್ವ ಸಾಧನೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು,ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ. ಸುಜ್ಞಾನ್ ತೀರ್ಥಹಳ್ಳಿಯ ರಾಜೇಂದ್ರ ಮತ್ತು ಸುಮಾ ದಂಪತಿಯ ಪುತ್ರ.
ಮಹಾರಾಷ್ಟ್ರ ಲೀಡರ್ಶಿಪ್ ಆವಾರ್ಡ್-2022 ಪುರಸ್ಕೃತರಾದ ತೋನ್ಸೆ ಆನಂದ್ ಎಂ.ಶೆಟ್ಟಿ
Posted On: 02 Sep 2022, 03:59 PM
ಕಾಪು : ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷರು-ಆಡಳಿತ ನಿರ್ದೇಶಕರಾದ ತೋನ್ಸೆಯ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಫೆಡರೇಶನ್ ಆಫ್ ವರ್ಲ್ಡ್ ಬಂಟ್ಸ್ ಅಸೋಸಿಯೇಶನ್ಸ್ನ ಟ್ರಸ್ಟಿ ಆಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ತೋನ್ಸೆ ಆನಂದ್ ಎಂ.ಶೆಟ್ಟಿಯವರು ಪುಣೆ ಟೈಮ್ಸ್ ಮಿರರ್ ಪ್ರಾಯೋಜಿತ ಮಹಾರಾಷ್ಟ್ರ ಲೀಡರ್ಶಿಪ್ ಆವಾರ್ಡ್-2022 ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ತೋನ್ಸೆ ಆನಂದ್ ಎಂ.ಶೆಟ್ಟಿಯವರಿಗೆ ಮಹಾರಾಷ್ಟ್ರ ಲೀಡರ್ಶಿಪ್ ಆವಾರ್ಡ್-2022 ನೀಡಿ ಪುರಸ್ಕರಿಸಿದರು.
ಉಡುಪಿಯಲ್ಲಿ ನಡೆಯಲಿರುವ ಬೃಹತ್ ದುರ್ಗಾ ದೌಡ್ ಕಾರ್ಯಕ್ರಮದ ಸ್ಟಿಕ್ಕರ್ ಬಿಡುಗಡೆ
Posted On: 02 Sep 2022, 03:47 PM
ಕಾಪು : ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ಅಕ್ಟೋಬರ್ 2 ರಂದು ಉಡುಪಿಯಲ್ಲಿ ನಡೆಯಲಿರುವ ಬೃಹತ್ "ದುರ್ಗಾ ದೌಡ್" ಕಾರ್ಯಕ್ರಮದ ಸ್ಟಿಕ್ಕರ್ ಗಳನ್ನು ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
ಕಾಪು ಪೇಟೆಯಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ರಿಂದ ಹೈಮಾಸ್ಕ್ ದೀಪ ಉದ್ಘಾಟನೆ
Posted On: 02 Sep 2022, 03:31 PM
ಕಾಪು : ಇಲ್ಲಿನ ಪುರಸಭಾ ವತಿಯಿಂದ ಮೂರು ಲಕ್ಷ ರೂ. ಅನುದಾನದಲ್ಲಿ ಕಾಪು ಪೇಟೆಯಲ್ಲಿ ನೂತನವಾಗಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಗುರುವಾರ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಾಪು ಪೇಟೆಯ ಮಾರುಕಟ್ಟೆಗೆ ಪ್ರವೇಶಿಸುವ ಪ್ರದೇಶವು ಸಂಪೂರ್ಣ ಕತ್ತಲಿನಲ್ಲಿದ್ದ ಈ ಬಗ್ಗೆ ಸ್ಥಳೀಯ ವ್ಯಾಪಾರಸ್ಥರು ಮತ್ತು ಪುರಸಭಾ ಸದಸ್ಯರ ಬೇಡಿಕೆಯಿತ್ತು. ಅದರಂತೆ ಪುರಸಭೆ ಅಧಿಕಾರಿಗಳು ಕೂಡಾ ಪ್ರಸ್ತಾವನೆ ಸಲ್ಲಿಸಿದ್ದು ಅದರಂತೆ ಹೈಮಾಸ್ಕ್ ದೀಪ ಅಳವಡಿಸಲಾಗಿದೆ. ಕಾಪು ಪುರಸಭೆ ವ್ಯಾಪ್ತಿಯ ಇನ್ನೂ ಎರಡು ಪ್ರದೇಶಗಳಲ್ಲಿ ಹೈಮಾಸ್ಕ್ ದೀಪ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ ಮಲ್ಲಾರು, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಅರುಣ್ ಶೆಟ್ಟಿ ಪಾದೂರು, ಶೈಲೇಶ್ ಅಮೀನ್, ರತ್ನಾಕರ ಶೆಟ್ಟಿ, ನಾಗೇಶ್, ಫರ್ಜಾನ, ಶೋಭಾ ಬಂಗೇರ, ರಾಧಿಕಾ ಸುವರ್ಣ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷ ಯೋಗೀಶ್ ರೈ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಇಂಜಿನಿಯರ್ ನಯನ್ ತಾರಾ, ಕಾಪು ಪುರಸಭೆ ವ್ಯಾಪ್ತಿ ಬಿಜೆಪಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಸ್ಥಳೀಯರಾದ ಎಚ್. ಅಬ್ದುಲ್ಲಾ, ಅಬ್ದುಲ್ ನಜೀರ್, ಪಿ.ಕೆ. ಹೈದರ್ ಮಲ್ಲಾರು, ಜಗದೀಶ್ ಮೆಂಡನ್, ರಮೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಮಂಗಳೂರು ಭೇಟಿ ; ಸಂಚಾರ ಬದಲಾವಣೆ ; ಸಾಲುಗಟ್ಟಿ ನಿಂತ ಘನ ವಾಹನಗಳು
Posted On: 02 Sep 2022, 12:39 PM
ಪಡುಬಿದ್ರಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಮಂಗಳೂರಿಗೆ ಭೇಟಿ ಹಿನ್ನೆಲೆಯಲ್ಲಿ ಪಡುಬಿದ್ರಿ ಜಂಕ್ಷನ್ ಬಳಿ ಎಲ್ಲಾ ಸಾರ್ವಜನಿಕ ವಾಹನಗಳನ್ನು, ಘನ ವಾಹನಗಳನ್ನು ಕಾರ್ಕಳ ರಸ್ತೆಯ ಮೂಲಕ ಸಾಗಲು ತಿಳಿಸಲಾಗುತ್ತಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸರು ಸಾರ್ವಜನಿಕರಿಗೆ ತಿಳಿಯಲು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಡುಬಿದ್ರೆ ಜಂಕ್ಷನ್ ಮುಖಾಂತರ ಬೆಂಗಳೂರು ಮತ್ತು ಕೇರಳಕ್ಕೆ ಸಂಚರಿಸುವ ವಾಹನಗಳು ಬೆಳ್ಳಣ್ಣು - ಕಾರ್ಕಳ -ಬೆಳುವಾಯಿ- ಮೂಡಬಿದ್ರೆ– ಬಿ.ಸಿ.ರೋಡ್ ಮುಖೇನ ಸಂಚರಿಸಬೇಕೆಂದು ಪಡುಬಿದ್ರಿ ಜಂಕ್ಷನ್ ಬಳಿ ಬ್ಯಾನರ್ ಅಳವಡಿಸಿದ್ದಾರೆ. ಹಲವಾರು ಚಾಲಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುವುದು ಕಂಡು ಬಂದಿದೆ. ಕಾರ್ಕಳ ರಸ್ತೆಯ ಇಕ್ಕೆಲಗಳಲ್ಲಿ ಘನವಾಹನಗಳು ಜಾಮ್ ಆಗಿದ್ದು, ವಾಹನ ಚಾಲಕರು ಬದಲಿ ಮಾರ್ಗವಾಗಿ ಸಂಚರಿಸುವುದು ವಿಳಂಬವಾಗುವುದರಿಂದ ಸಂಜೆ 6 ಗಂಟೆಯವರೆಗೆ ಕಾದು ನಂತರ ಮುಂದುವರಿಯುವ ನಿರೀಕ್ಷೆಯಲ್ಲಿದ್ದಾರೆ. ಪಡುಬಿದ್ರಿ ಪಿಎಸ್ಐ ಪ್ರಕಾಶ್, ಸಾಲಿಯಾನ್ ದಿವಾಕರ್, ಹರೀಶ್, ರಾಜೇಶ್, ಹೈವೇ ಪಟ್ರೋಲ್ ಮತ್ತು ಗೃಹರಕ್ಷಕ ಸಿಬ್ಬಂದಿ ಹೆದ್ದಾರಿಯಲ್ಲಿ ಬಂದೋಬಸ್ತ್ ಮಾಡುತ್ತಿದ್ದಾರೆ.
ಕಾಪು : ಅನಾರೋಗ್ಯದಿಂದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಯುವಕರು
Posted On: 02 Sep 2022, 09:32 AM
ಕಾಪು : ಇಲ್ಲಿನ ಮಲ್ಲಾರು ಕೊಂಬ ಗುಡ್ಡೆಯಲ್ಲಿ ವಾಸವಾಗಿದ್ದ ಅನಾರೋಗ್ಯದಿಂದ ಇದ್ದ ಒಂಟಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಕಾಪುವಿನ ಯುವಕರು ಮಾನವೀಯತೆ ಮೆರೆದಿದ್ದಾರೆ. ಆಶಾ ಕಾರ್ಯಕರ್ತೆ ಉಷಾ ಮಲ್ಲಾರು ಮಾಹಿತಿಯ ಮೇರೆಗೆ ಕಾಪುವಿನ ಮಲ್ಲಾರು ಕೊಂಬ ಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಲೀಲಾವತಿ ಪೂಜಾರಿಯವರನ್ನು ಸಮಾಜ ಸೇವಕರಾದ ಪ್ರಶಾಂತ್ ಪೂಜಾರಿ ಮತ್ತವರ ತಂಡ ಉಡುಪಿಯ ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳಿಲ್ಲದ ಲೀಲಾವತಿ ಪೂಜಾರಿಯವರ ಪತಿ ತೀರಿಕೊಂಡಿದ್ದು, ಕೊಂಬಗುಡ್ಡೆಯ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಇದೀಗ ಅವರು ಅನಾರೋಗ್ಯಗೊಂಡಿದ್ದು, ವಾರೀಸುದಾರರಿಲ್ಲದ ಲೀಲಾವತಿಯವರನ್ನು ಪ್ರಶಾಂತ್ ಪೂಜಾರಿ ಮತ್ತು ಅವರ ಸಂಗಡಿಗರು ಉಡುಪಿಯ ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂದರ್ಭ ಪುರಸಭಾ ಸದಸ್ಯ ಉಮೇಶ್ ಪೂಜಾರಿ ಮಲ್ಲಾರು, ಸಚಿನ್ ಶೆಟ್ಟಿ, ಶಿವಾನಂದ ಪೂಜಾರಿ, ಶ್ಯಾರೊನ್ ನಿಶಿತ ಮಲ್ಲಾರು, ಆಶಾ ಕಾರ್ಯಕರ್ತೆ ಉಷಾ ಮಲ್ಲಾರು, ಉಮೇಶ್ ಕರ್ಕೇರ, ಮಲ್ಲಾರು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಸಹಕರಿಸಿದ್ದಾರೆ.
ಅದಮಾರು :ಶಾಲೆಗೆ ಸಿಡಿಲು ಬಡಿದು ಲಕ್ಷಾಂತರ ರೂ. ನಷ್ಟ
Posted On: 01 Sep 2022, 05:16 PM
ಅದಮಾರು : ಇಲ್ಲಿನ ೯೮ ವರ್ಷ ಪೂರೈಸಿರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ರಾತ್ರಿ ಸಿಡಿಲು ಬಡಿದಿದ್ದು, ಬುಧವಾರ ಚೌತಿ ಪ್ರಯುಕ್ತ ರಜೆ ಇದ್ದ ಕಾರಣ ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಹಿಂಬದಿಯ ಗೋಡೆಗೆ ಸಿಡಿಲು ಬಡಿದಿದ್ದು, ಸಿಡಿಲಿನ ಆಘಾತಕ್ಕೆ ವಿದ್ಯುತ್ ವಯರಿಂಗ್, ಸಿ ಸಿ ಕ್ಯಾಮರಾ, ಇನ್ವರ್ಟರ್, ಅಕ್ವಾಗಾರ್ಡ್ ಸಹಿತ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ನೀರಿನ ನಳ್ಳಿಗೆ ಹಾನಿ ಉಂಟಾಗಿ ಶಾಲೆಯಲ್ಲಿ ನೀರಿಲ್ಲದ ಪರಿಸ್ಥಿತಿ ಉಂಟಾಗಿ ಮದ್ಯಾಹ್ನದ ಬಿಸಿಯೂಟ ಮಾಡುವಂತಿಲ್ಲ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿಯವರು ದೂರವಾಣಿಯ ಮೂಲಕ ವಿದ್ಯಾಂಗ ಇಲಾಖಾಧಿಕಾರಿ ಶಂಕರ ಸುವರ್ಣರವರನ್ನು ಸಂಪರ್ಕಿಸಿ, ಸಮಗ್ರ ಮಾಹಿತಿ ನೀಡಿದರು. ಅಧಿಕಾರಿಯವರು ಗುರುವಾರ ಶಾಲೆಗೆ ರಜೆ ಘೋಷಿಸಿದ್ದಾರೆ. ಸ್ಥಳೀಯರಾದ ಸದಾನಂದ ಆಚಾರ್ಯರವರು ಮಕ್ಕಳನ್ನು ಅವರವರ ಮನೆಗೆ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಎಲ್ಲೂರು ಗ್ರಾಮಕರಣಿಕ ಸುನಿಲ್ ಭೇಟಿ ನೀಡಿ ನಷ್ಟದ ಅಂದಾಜನ್ನು ಕಾಪು ತಹಶಿಲ್ದಾರ್ ಅವರಿಗೆ ಕಳುಹಿಸಿದ್ದಾರೆ. ಈ ಸಂದರ್ಭ ಮುಖ್ಯ ಶಿಕ್ಷಕಿ ದೇವಿಕಾ, ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ಕುಂಜೂರು, ಸ್ಥಳೀಯರಾದ ಸಂತೋಷ್ ಶೆಟ್ಟಿ ಬರ್ಪಾಣಿ, ಮತ್ತಿತರರು ಉಪಸ್ಥಿತರಿದ್ದರು.
ಉದ್ಯಾವರ : ಸೌಹಾರ್ದತೆಯ ಗಣೇಶೋತ್ಸವ
Posted On: 31 Aug 2022, 09:52 PM
ಉದ್ಯಾವರ : ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಫ್ರೆಂಡ್ಸ್ ಗಾರ್ಡನ್ ಅರೂರುತೋಟ ಸಂಪಿಗೆ ನಗರದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಧರ್ಮಗುರುಗಳು ಮತ್ತು ಕ್ರೈಸ್ತ ಬಾಂಧವರು ಭಾಗವಹಿಸಿ ಸೌಹಾರ್ದತೆ ಮೆರೆದರು. ಇಪ್ಪತ್ತೈದು ವರ್ಷಕ್ಕೂ ಅಧಿಕ ಇತಿಹಾಸವಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿ ಉದ್ಯಾವರ ಮತ್ತು ಫ್ರೆಂಡ್ಸ್ ಗಾರ್ಡನ್ ಅರೂರುತೋಟದ ಸದಸ್ಯರು ಈ ಬಾರಿಯೂ ಅತ್ಯಂತ ವಿಜ್ರಂಭಣೆಯಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸಿದ್ದರು. ಸದಾ ಸೌಹಾರ್ದತೆಯಿಂದಿರುವ ಇಲ್ಲಿಯ ಕಾರ್ಯಕ್ರಮಕ್ಕೆ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ ಲೋಬೊ ಮತ್ತು ಸಹಾಯಕ ಧರ್ಮಗುರು ವಂ. ಲಿಯೋ ಪ್ರವೀಣ್ ಡಿಸೋಜ ಅವರು ಭಾಗವಹಿಸಿದ್ದರು. ಹಿಂದೂ ಸಮಾಜ ಬಾಂಧವರಿಗೆ ಶುಭ ಹಾರೈಸಿ, ಗೌರವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಮೆಲ್ವಿನ್ ನೊರೊನ್ಹಾ, ಕಾರ್ಯದರ್ಶಿ ಮೈಕಲ್ ಡಿಸೋಜ, 20 ಆಯೋಗಗಳ ಸಂಯೋಜಕರಾದ ಜೆರಾಲ್ಡ್ ಪಿರೇರಾ, ಸೌಹಾರ್ದ ಸಮಿತಿಯ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ರೊನಾಲ್ಡ್ ಡಿಸೋಜ, ರೋಯ್ಸ್ ಫೆರ್ನಾಂಡಿಸ್, ಜೋನ್ ಗೋಮ್ಸ್, ಅನಿಲ್ ಡಿಸೋಜ, ಸುನಿಲ್ ಡಿಸೋಜ, ಸ್ಟೀವನ್ ಕುಲಾಸೊ ಮತ್ತಿತರರು ಉಪಸ್ಥಿತರಿದ್ದರು. ಫ್ರೆಂಡ್ಸ್ ಗಾರ್ಡನ್ ಅರೂರುತೋಟ ಇಲ್ಲಿಯ ಪ್ರಮುಖರಾದ ದಿನೇಶ್ ಜತ್ತನ್ನ, ಪ್ರದೀಪ್ ಸುವರ್ಣ, ಯೋಗೀಶ್ ಕೋಟ್ಯಾನ್, ಹರೀಶ್ ಕುಮಾರ್ ಸೌಂದರ್ಯ, ಗಣೇಶ್ ಕುಮಾರ್, ರಿಯಾಝ್ ಪಳ್ಳಿ, ಗಿರೀಶ್ ಕುಮಾರ್, ಉದ್ಯಾವರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಮುಖರಾದ ಚೇತನ್ ಕುಮಾರ್ ಪಿತ್ರೋಡಿ, ಪ್ರಸಾದ್, ಸುಧೀರ್ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಸೇವಕ ಮತ್ತು ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಶಂಕರಪುರ : 30ನೇ ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಣೆ
Posted On: 30 Aug 2022, 08:56 PM
ಕಾಪು : 30ನೇ ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಣೆ ಕಾರ್ಯಕ್ರಮವನ್ನು ರೋಟರಿ ಶಂಕರಪುರದ ವತಿಯಿಂದ ಆಗಸ್ಟ್ 30ರಂದು ರೋಟರಿ ಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಲೀನಾ ಸಿಕ್ವೇರಾ ( principal Manipal School of nursing Manipal ) ರವರು ಸ್ತನ್ಯಪಾನ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವು ರೋಟರಿ ಅಧ್ಯಕ್ಷರಾದ ಗ್ಲಾಡಸನ್ ಕುಂದರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಗ್ಲಾಡಿಸ್, ಕಾಂತಿ, ರೋಹಿಣಿ, ಯಮುನಾ. ಆಶಾ ಕಾರ್ಯಕರ್ತರಾದ ಗಾಯತ್ರಿ, ಪ್ರತಿಮಾ, ಸುಷ್ಮಾ ಹಾಗೂ ರೋಟರಿ ಸದಸ್ಯರುಗಳಾದ ಫ್ರಾನ್ಸಿಸ್ ಡೇಸ, ಜಾರ್ಜ್ ಡಿಸಿಲ್ವ, ಫ್ಲಾವಿಯ ಮೆನೇಜಸ್, ಅನಿಲ್ದಾ, ಇನ್ನರ್ವಿಲ್ ಸದಸ್ಯರುಗಳು, ಅಂಗನವಾಡಿ ಮಕ್ಕಳ ತಾಯಂದಿರುಗಳು ಉಪಸ್ಥಿತರಿದ್ದರು.
