Updated News From Kaup
ಶಿರ್ವ : ಸುನೀಲ್ ಮಿಶ್ರಾಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ
Posted On: 27 Aug 2022, 07:41 AM
ಶಿರ್ವ : ಕರ್ನಾಟಕ ಲಲಿತಕಲಾ ಅಕಾಡೆಮಿಯ ೨೦೨೧-೨೨ನೇ ಸಾಲಿನ ಪ್ರಶಸ್ತಿಗೆ ಶಿರ್ವದ ಯುವ ಚಿತ್ರ ಕಲಾವಿದ ಸುನೀಲ್ ಮಿಶ್ರಾ ಆಯ್ಕೆಯಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಂಸ್ಥೆಯ ೫೦ನೇ ವರ್ಷದ ಸುವರ್ಣ ಸಂಭ್ರಮದ ಆಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿಯು ೨೫ ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಇವರ ಕಲಾಕೃತಿ ಹಾಗೂ ಪ್ರಶಸ್ತಿ ವಿಜೇತರಾದ ನಾಡಿನ ಇತರ ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಇಡಲಾಗಿದ್ದು, ಬಳಿಕ ಮುಂಬಯಿಯ ಜೆ.ಜೆ.ಸ್ಕೂಲ್ ಆಫ್ ಆಟ್ಸ್೯ನಲ್ಲಿ ಪ್ರದರ್ಶನಗೊಳ್ಳಲಿದೆ. ಒಟ್ಟು ೮೫ ಕಲಾಕೃತಿಗಳ ಪೈಕಿ ಸುನೀಲ್ ಮಿಶ್ರಾ ಅವರ ಕಲಾಕೃತಿ ಸೇರಿದಂತೆ ೧೦ ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಕಲಾವಿದ, ಕೇಂದ್ರ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್.ಬಿ. ಭಾಸ್ಕರನ್, ಹಿರಿಯ ಬರಹಗಾರ, ವಿಮರ್ಶಕ ಎಸ್.ದಿವಾಕರ್, ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ, ರಿಜಿಸ್ಟಾçರ್ ಆರ್. ಚಂದ್ರಶೇಖರ್ ಮತ್ತು ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ನಿರ್ದೇಶಕ ಪ್ರಕಾಶ್ ಜಿ. ಟಿ. ನಿಟ್ಟಾಲಿ ಉಪಸ್ಥಿತರಿದ್ದರು. ಸುನೀಲ್ ಮಿಶ್ರಾ ಅವರ ಕಂಚಿನ ಕಲಾಕೃತಿ ( ಹ್ಯೂಮನ್ ಮಾನ್ಯುಮೆಂಟ್ಸ್ ಫಾರ್ ಸೇಲ್) ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ೨೦೧೯ನೇ ಸಾಲಿನ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಬಹುಮಾನಕ್ಕೆ ಆಯ್ಕೆಯಾಗಿತ್ತು. ೨೦೧೬ರಲ್ಲಿ ಯುನೆಸ್ಕೋ ವತಿಯಿಂದ ನಡೆದ ಇಂಟರ್ನ್ಯಾಷನಲ್ ಆರ್ಟ್ವೀಕ್ ಪ್ರದರ್ಶನದಲ್ಲಿ ಭಾಗವಹಿಸಿರುವುದಲ್ಲದೆ, ಅವರ ಕಲಾಕೃತಿ ಯುನೆಸ್ಕೋ ಮೂಲ ಸಂಸ್ಥೆಗೆ ಆಯ್ಕೆಯಾಗಿತ್ತು. ಬೆಂಗಳೂರು ಮಹಾನಗರದಲ್ಲಿದ್ದುಕೊಂಡು ಚಿತ್ರಕಲೆಯನ್ನೇ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿರಿಸಿ ಕೊಂಡಿರುವ ಸುನೀಲ್ ಮಿಶ್ರಾ ಉಡುಪಿ ಜಿಲ್ಲೆಯ ಶಿರ್ವದಂತಹ ಗ್ರಾಮೀಣ ಪ್ರದೇಶದಲ್ಲಿ ಅರಳಿದ ಅಪ್ಪಟ ಗ್ರಾಮೀಣ ಪ್ರತಿಭೆ. ವಿದ್ಯಾರ್ಥಿ ದೆಸೆಯಿಂದಲೇ ಏಕವ್ಯಕ್ತಿ ಕಲಾ ಪ್ರದರ್ಶನ, ಗುಂಪು ಪ್ರದರ್ಶನ ನಡೆಸಿ ಯಶಸ್ವಿಯಾದ ಅವರು ರೇಖಾ ಚಿತ್ರ, ಶಿಲ್ಪಕಲೆ, ತೈಲವರ್ಣ, ಕಾಷ್ಠಶಿಲ್ಪ, ಟರ್ರಾ ಕೋಟಾ, ಮುಖವಾಡ ತಯಾರಿಕೆ, ಅಕ್ರಿಲಿಕ್ ಮಾಧ್ಯಮ, ಲೋಹ ಶಿಲ್ಪ (ಮಿಶ್ರಲೋಹ) ರಚಿಸುವುದರಲ್ಲಿ ಸಿದ್ಧ ಹಸ್ತರೆನಿಸಿಕೊಂಡಿದ್ದಾರೆ. ಶಿರ್ವದ ಹಿಂದೂ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ , ಶಿರ್ವ ಸಂತ ಮೇರಿ ಶಿಕ್ಷಣಸಂಸ್ಥೆಯಲ್ಲಿ ಪ.ಪೂ.ಶಿಕ್ಷಣ ಪಡೆದು, ಉಡುಪಿಯ ಸಿ.ಕೆ.ಎಂ ಕಲಾಶಾಲೆಯಲ್ಲಿ ಕಲಾ ವ್ಯಾಸಂಗ ಮಾಡಿದ್ದರು. ಕೆಲಕಾಲ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು.
ಆಗಸ್ಟ್ 27 : ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ರಾಜಕೀಯ ರಹಿತ ಪ್ರಾಮಾಣಿಕ ಸೇವೆ ನೀಡಿದ ಕೆ. ಆರ್. ಪಾಟ್ಕರ್ ಗೆ ಅಭಿನಂದನಾ ಕಾರ್ಯಕ್ರಮ
Posted On: 25 Aug 2022, 11:14 PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷರಾಗಿ ಅತ್ಯುತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸಿ ತಮ್ಮ ಅಧಿಕಾರ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶಿರ್ವ ಗ್ರಾಮದ ಅಭಿವೃದ್ಧಿಯ ಹರಿಕಾರ, ಜಾತಿ, ಧರ್ಮ, ರಾಜಕೀಯ ರಹಿತವಾಗಿ ಪ್ರಾಮಾಣಿಕ ಸೇವೆ ನೀಡಿದ ಕೆ. ಆರ್. ಪಾಟ್ಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಗಸ್ಟ್ 27, ಶನಿವಾರ ಸಂಜೆ 4ಕ್ಕೆ ಸಾರ್ವಜನಿಕ ಗಣೇಶೋತ್ಸವ ವೇದಿಕೆ, ಬಂಟಕಲ್ಲು ಇಲ್ಲಿ ನಡೆಯಲಿದೆ. ಕೆ.ಆರ್. ಪಾಟ್ಕರ್ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಾದ ಬಸ್ಸು ನಿಲ್ದಾಣ, 4 ಸಣ್ಣ ಬಸ್ಸು ನಿಲ್ದಾಣಗಳು, 7 ಸಿಸಿ ಕ್ಯಾಮರಾ ಅಳವಡಿಕೆ, ಸ್ಮಶಾನ, ಧ್ವಜಸ್ತಂಭ, ಆರೋಗ್ಯ ಉಪಕೇಂದ್ರ, ಡಿಜಿಟಲ್ ಪಾವತಿ ವ್ಯವಸ್ಥೆ, ಸಂಜೀವೀನಿ ಸಂತೆಗಳ ಆರಂಭ, ಕಛೇರಿಯಲ್ಲಿ ಆಸನ ಸೌಲಭ್ಯ, ಬಸ್ಸು ನಿಲ್ದಾಣ ದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಬಸ್ಸು ವೇಳಾಪಟ್ಟಿ ವ್ಯವಸ್ಥೆ, ಗ್ರಾಮಸಭೆ ನೇರ ಪ್ರಸಾರ, 8 ಹೈ ಮಾಸ್ಟ್ ದೀಪಗಳು, ಎಸ್ ಎಲ್ ಆರ್ ಎಮ್ ಘಟಕಕ್ಕೆ 12 ಲಕ್ಷ ಮೌಲ್ಯದ ದೊಡ್ಡ ವಾಹನ ಇತ್ಯಾದಿ ಸುಮಾರು ಒಂದು ಕೋಟಿ ರೂಪಾಯಿಯಷ್ಟು ಮೌಲ್ಯದ ಕೆಲಸ ಕಾರ್ಯಗಳಾಗಿವೆ. ಅದೇ ದಿನ ಸಂಜೆ 3 :30 ರಿಂದ ಭಕ್ತಿ ರಸಮಂಜರಿ ಪ್ರಕಾಶ್ ಸುವರ್ಣ ಮತ್ತು ಬಳಗ ಕಟಪಾಡಿ ಇವರಿಂದ, ಸಂಜೆ 4:15 ರಿಂದ ಶ್ರೀ ಕೆ ಆರ್ ಪಾಟ್ಕರ್ ರವರಿಗೆ ಅಭಿನಂದನ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಎಂ ಎಸ್ ಆರ್ ಎಸ್ ಕಾಲೇಜು ಶಿರ್ವದ ಉಪ ಪ್ರಾಂಶುಪಾಲರಾದ ಪ್ರೊ. ಕೆ. ಜಿ. ಮಂಜುನಾಥ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ. ಸಂಜೆ 5:30 ರಿಂದ ಕುಂದಾಪುರದ ಮೂರು ಮುತ್ತು ತಂಡದವರಿಂದ " ಹಾಸ್ಯ ಸಂಜೆ " ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕ್ರಿಯೇಟಿವ್ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳ ಕೈಗಾರಿಕಾ, ಸಾಂಸ್ಕೃತಿಕ ಭೇಟಿ
Posted On: 25 Aug 2022, 10:36 PM
ಕಾರ್ಕಳ : ಕ್ರಿಯೇಟಿವ್ ಪಿ.ಯು ಕಾಲೇಜು, ಕಾರ್ಕಳ ಇದರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಗಸ್ಟ್ 23 ರಂದು ಕೈಗಾರಿಕಾ ಭೇಟಿ ಆಯೋಜಿಸಿತ್ತು. ಕೈಗಾರಿಕೆಯಲ್ಲಿನ ಹಾಲು ಉತ್ಪಾದನಾ ಘಟಕದ ಪ್ರಕ್ರಿಯೆಗಳು, ಹಂತಗಳು, ಉತ್ಪಾದನಾ ವಿಧಾನಗಳು ಹಾಗೂ ಉತ್ಪನ್ನಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಂಗ್ರಹಿಸಿದರು. ಬದುಕಿನಲ್ಲಿ ಪಠ್ಯದ ಜ್ಞಾನದ ಜೊತೆಗೆ ಪಠ್ಯದಲ್ಲಿನ ವಿಷಯಗಳ ಪ್ರಾಯೋಗಿಕ ಜ್ಞಾನವು ಮಹತ್ತರವಾದದ್ದು ಹಾಗೂ ಒಬ್ಬ ಯಶಸ್ವಿ ಉದ್ಯಮದಾರರನ್ನಾಗಿಸಲು ಸಹಾಯವಾಗಬಹುದು ಎಂಬ ಉದ್ದೇಶದಿಂದ ಈ ಭೇಟಿ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭ ಹಳೆಯ ಸಂಪ್ರದಾಯಕ ಕೃಷಿ ಮತ್ತು ಕೃಷಿಯೇತರ ಸಲಕರಣೆಗಳನ್ನು ವೀಕ್ಷಿಸುವ ಸಲುವಾಗಿ ವಿದ್ಯಾರ್ಥಿಗಳನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿನ ಗುತ್ತಿನ ಮನೆಗೆ ಭೇಟಿ ನೀಡಲಾಗಿತ್ತು. ಇಲ್ಲಿನ ಹಳೆಯ ಗುತ್ತಿನ ಮನೆ, ದೈವದ ಮೂರ್ತಿಗಳು, ಕತ್ತಿ, ಅಕ್ಕಿಮುಡಿ, ತಿರಿ, ಜನಪದ ಕಲೆಗಳಾದ ಕೋಲ, ಯಕ್ಷಗಾನ ಇವುಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ವಿವರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಉಪನ್ಯಾಸಕರಾದ ರಾಘವೇಂದ್ರ ಬಿ ರಾವ್, ಉಮೇಶ್, ಚಂದ್ರಕಾಂತ್, ರಾಜೇಶ್ ಶೆಟ್ಟಿ, ಅಕ್ಷತಾ ಜೈನ್ ಹಾಗೂ ಭೋಧಕೇತರ ವೃಂದದವರು ಪಾಲ್ಗೊಂಡಿದ್ದರು.
ಕಟಪಾಡಿ ಜೋಕಾಲಿ ಫ್ರೆಂಡ್ಸ್ : ವೇಷ ಧರಿಸಿ ಬಂದ ಹಣ ಹಸ್ತಾಂತರ ; ಸನ್ಮಾನ
Posted On: 25 Aug 2022, 09:30 PM
ಕಟಪಾಡಿ : ಇಲ್ಲಿಯ ಪಳ್ಳಿಗುಡ್ಡೆಯ ಜೋಕಾಲಿ ಫ್ರೆಂಡ್ಸ್ ಸಂಸ್ಥೆಯು ಶ್ರೀಕೃಷ್ಣ ಜನ್ಮಾಷ್ಟಮಿಯಂದು 4 ವರುಷದಿಂದ ವೇಷಧರಿಸಿ ಮಕ್ಕಳಿಗೆ ಸಹಾಯ ಮಾಡುತ್ತಿದ್ದು ಈ ಬಾರಿಯೂ ಸಹಾಯಹಸ್ತ ನೀಡಿದೆ. ಈ ಬಾರಿಯ ವೇಷದಿಂದ 1 ಲಕ್ಷ 75 ಸಾವಿರ ಸಂಗ್ರಹಿತವಾಗಿದ್ದು ಅದನ್ನು ಹೆಜಮಾಡಿ ಮತ್ತು ಕಟಪಾಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಮಕ್ಕಳಿಗೆ ಹಸ್ತಾಂತರಿಸಲಾಯಿತು. ಕೃಷಿ ಬಗ್ಗೆ ಅಸಡ್ಡೆ ತೋರುತ್ತಿರುವ ಈ ಕಾಲಘಟ್ಟದಲ್ಲಿ ಕೃಷಿ ಕಾಯಕದಲ್ಲಿ ತೊಡಗಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು. ಸ್ಥಳೀಯವಾಗಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಯುವ ಮುಖಂಡ ಯಶವಂತ್ ಸುವರ್ಣ, ಗೀತಾಂಜಲಿ ಸುವರ್ಣ, ಪೇಟೆಬೆಟ್ಟು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಮುಖ್ಯಸ್ಥ ತುಕಾರಾಮ ಕಟ್ಪಾಡಿ, ರಾಜೇಶ್ ಕಟ್ಪಾಡಿ, ಸ್ಥಳೀಯ ಮಸೀದಿಯ ಖತೀಬರಾದ ಜೋಹರಿ, ಜೋಕಾಲಿ ಫ್ರೆಂಡ್ಸ್ ಅಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಗಣೇಶ್, ಪ್ರಭಾಕರ ಕೋಟೆ ಮತ್ತಿತರರು ಉಪಸ್ಥಿತರಿದ್ದರು.
ಕಾಪು : ಟೀಮ್ ಮೋದಿ ವತಿಯಿಂದ ಯಶ್ಪಾಲ್ ಸುವರ್ಣ ಹುಟ್ಟು ಹಬ್ಬದ ಪ್ರಯುಕ್ತ ಹೂವಿನ ಪೂಜೆ
Posted On: 24 Aug 2022, 08:48 PM
ಕಾಪು : ಟೀಮ್ ಮೋದಿ ಕಾಪು ವತಿಯಿಂದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಇದರ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಇವರ ಹುಟ್ಟು ಹಬ್ಬದ ಪ್ರಯುಕ್ತ ಬುಧವಾರ ಹೂವಿನ ಪೂಜೆ ಜರಗಿತು. ಈ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯ್ ಕೊಡವೂರು, ಟೀಮ್ ಮೋದಿ ಕಾಪು ತಂಡದ ಅಧ್ಯಕ್ಷರಾದ ಯೋಗೀಶ್ ಪೂಜಾರಿ, ಉದ್ಯಮಿ ಪ್ರಭಾಕರ ಪೂಜಾರಿ ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಟೀಮ್ ಮೋದಿ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾಪು : ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಎರಡನೇ ವರ್ಷದ ಡಿಪ್ಲೋಮಾ ಪ್ರವೇಶಾತಿ ಅವಧಿ ವಿಸ್ತರಣೆ
Posted On: 24 Aug 2022, 08:03 PM
ಕಾಪು : ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಎರಡನೇ ವರ್ಷದ ಡಿಪ್ಲೋಮಾ ಕೋರ್ಸುಗಳಿಗೆ ಕಡಿಮೆ ಪ್ರವೇಶ ಶುಲ್ಕದೊಂದಿಗೆ ಪ್ರವೇಶ ದಾಖಲಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ್ 30 ರ ವರೆಗೆ ವಿಸ್ತರಿಸಲಾಗಿದೆ. ಎರಡನೇ ವರ್ಷದ ಮೂರನೇ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಾತಿಗೆ ಎರಡು ವರ್ಷಗಳ ಐ.ಟಿ.ಐ, ದ್ವಿತೀಯ ಪಿ.ಯು.ಸಿ ವಿಜ್ಞಾನ ಹಾಗೂ ತಾಂತ್ರಿಕ ವಿಷಯಗಳಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಆಟೋಮೇಷನ್ ಅಂಡ್ ರೊಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಅಂಡ್ ಬಿಗ್ ಡೇಟಾ ಎಂಬ ಕೋರ್ಸುಗಳಲ್ಲಿ ಬಾಕಿ ಉಳಿದಿರುವ ಸೀಟುಗಳಿಗೆ ಸೂಕ್ತ ದಾಖಲಾತಿಗಳೊಂದಿಗೆ ನೇರವಾಗಿ ಸಂಸ್ಥೆಯಲ್ಲಿ ಆಫ್ಲೈನ್ ಮೂಲಕ ಪ್ರವೇಶ ಪಡೆಯಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಪಾಲಿಟೆಕ್ನಿಕ್, ಕಾಪು : ಮೊಬೈಲ್ ಸಂಖ್ಯೆ : 9480773870, 9945759720 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಂತ ಮೇರಿ ಕಾಲೇಜು, ಶಿರ್ವ : "ಜಾವ ಮೇಡ್ ಈಜಿ” - ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆ
Posted On: 24 Aug 2022, 07:51 PM
ಶಿವ೯: ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರಿನ ಯುನೈಟೆಡ್ ಏಜೆನ್ಸಿ ಇದರ ಸಂಪಾದಕರಾದ ಕೃಷ್ಣನ್ ಅಯ್ಯರ್ ಅವರು ಉಪನ್ಯಾಸಕ ಕೆ.ಪ್ರವೀಣ್ ಕುಮಾರ್ ರವರ “ಜಾವ ಮೇಡ್ ಈಜಿ" - ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಿದರು. ಪರೀಕ್ಷಾ ತಯಾರಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಹೊಸ ಹೊಸ ಸವಾಲುಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಪರೀಕ್ಷಾ ಪೂವ೯ ತಯಾರಿಯಾಗಿ ಇಂತಹ ಪ್ರಶ್ನೋತ್ತರ ಮಾಲಿಕೆ ಪುಸ್ತಕಗಳು ವಿದ್ಯಾರ್ಥಿಯ ಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸಲು ಸಹಕಾರಿಯೆಂದು ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ್ ರವರು ಪುಸ್ತಕದ ಬಗ್ಗೆ ಲೇಖಕರನ್ನು ಪ್ರಶಂಸೆಯ ಮಾತುಗಳೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಿ.ಸಿ.ಎ. ವಿಭಾಗದ ಮುಖ್ಯಸ್ಥ ಹಾಗೂ ಮಾಹಿತಿ ತಂತ್ರಜ್ಞಾನದ ಸಂಯೋಜಕರಾದ ಲೆಫ್ಟಿನೆಂಟ್ ಕೆ.ಪವೀಣ್ ಕುಮಾರ್ ರವರು ಇಂತಹ ಪುಸ್ತಕಗಳನ್ನು ತಯಾರು ಮಾಡಲು ನನ್ನ ಗಣಕ ವಿಜ್ಞಾನದ ವಿದ್ಯಾರ್ಥಿಗಳೆ ಪ್ರೇರಕ ಶಕ್ತಿ, ಅವರಿಗೆ ನಾನು ಅಭಾರಿಯಾಗಿದ್ದೇನೆ. ಪುಸ್ತಕದ ಬಗ್ಗೆ ಮಾತನಾಡುತ್ತಾ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ದ್ವಿತೀಯ ಬಿ.ಸಿ.ಎ. ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಈ ಪುಸ್ತಕ ಹೆಚ್ಚು ಸಹಕಾರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯುನೈಟೆಡ್ ಏಜೆನ್ಸಿಯ ಪ್ರಸನ್ನ ಅಯ್ಯರ್, ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿಯ ಜೂನಿಯರ್ ಅಸೋಸಿಯೇಟ್ಸ್ ರಾಮ್ದಾಸ್ ಭಟ್ , ಪೂಜಾರಿ ಪ್ರತೀಕ್ ಪ್ರಭಾಕರ್, ಉಪನ್ಯಾಸಕರುಗಳಾದ ಪ್ರಕಾಶ್ , ದಿವ್ಯಾಶ್ರೀ, ಪ್ರಣಿತ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಧಾತ್ ಶೆಟ್ಟಿ , ಅನುಕ್ ನಾಯಕ್ ಸಹಕರಿಸಿದ್ದರು. ದೀಪಿಕಾ ಮತ್ತು ಬಳಗ ಪಾರ್ಥಿಸಿದರು. ವರ್ಷ ಬಂಗೇರ ಸ್ವಾಗತಿಸಿದರು. ಸೃಷ್ಟಿ ಕಾರ್ಯಕ್ರಮ ನಿರೂಪಿಸಿದರು. ಶಮಿತಾ ಶೆಟ್ಟಿ ವಂದಿಸಿದರು.
ಎಸ್ ಕೆ ಪಿ ಎ ಕಾಪು ವಲಯ : ಉಚಿತ ನಿಕಾನ್ ಕಾರ್ಯಗಾರ
Posted On: 24 Aug 2022, 07:41 PM
ಕಾಪು : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾಪು ವಲಯದ ವತಿಯಿಂದ ಕಾಪುವಿನ ಪ್ಯಾಲೇಸ್ ಗಾರ್ಡನ್ ಸಭಾ ಭವನದಲ್ಲಿ ನಿಕಾನ್ ಸಂಸ್ಥೆಯ ಉಚಿತ ಕಾರ್ಯಗಾರ ಜರಗಿತು. ಕಾರ್ಯಾಗಾರವನ್ನು ನಿಕೊನ್ ಸಂಸ್ಥೆಯ ಸೂರಜ್ ಪ್ರಭುರವರು ಉದ್ಘಾಟಿಸಿದರು. ನಿಕೊನ್ ಸಂಸ್ಥೆಯಿಂದ ಖ್ಯಾತ ಛಾಯಾಗ್ರಾಹಕ ಉಡುಪಿಯ ಫೋಕಸ್ ರಾಘುರವರು ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾಪು ಸಹಿತ ಬೇರೆ ಬೇರೆ ವಲಯಗಳ ನೂರಕ್ಕೂ ಅಧಿಕ ಛಾಯಾಗ್ರಹಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಕಾಪು ವಲಯಾಧ್ಯಕ್ಷ ವಿನೋದ್ ಕಾಂಚನ್, ಉಪಾಧ್ಯಕ್ಷ ಸಚಿನ್ ಉಚ್ಚಿಲ, ಗೌರವಾಧ್ಯಕ್ಷ ರವಿಕುಮಾರ್ ಕಟ್ಪಾಡಿ, ಕಾರ್ಯದರ್ಶಿ ರಾಜೇಶ್ ಶಂಕರಪುರ, ಕೋಶಾಧಿಕಾರಿ ರಾಘವೇಂದ್ರ ಭಟ್, ಛಾಯಾ ಕಾರ್ಯದರ್ಶಿ ಅರುಣ್ ಡಿಸೋಜ ಮತ್ತಿತರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ರಜತ ಮಹೋತ್ಸವ : ಮ್ಯಾರಥಾನ್ ಓಟಕ್ಕೆ ಬಂಟಕಲ್ಲ್ ನಲ್ಲಿ ಸ್ವಾಗತ
Posted On: 24 Aug 2022, 07:39 PM
ಬಂಟಕಲ್ಲು : ಉಡುಪಿ ಜಿಲ್ಲೆ ರಚನೆಯಾಗಿ ೨೫ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅದ್ದೂರಿ ಆಚರಣೆಯ ಅಂಗವಾಗಿ ಕಾರ್ಕಳದ ಭುವನೇಂದ್ರ ಕಾಲೇಜಿನಿಂದ ಬೆಳ್ಮಣ್ ವರೆಗೆ ಮ್ಯಾರಥಾನ್ ಓಟ ಪ್ರಾರಂಭಗೊಂಡಿದ್ದು, ಬುಧವಾರ ಸಂಜೆ ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಕಾಲೇಜು ಎದುರು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್, ಬಿಜೆಪಿ ನಾಯಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ವೀಣಾ ಶೆಟ್ಟಿ. ಗೀತಾಂಜಲಿ ಸುವರ್ಣ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಗಿರೀಶ್ ಕಾಂಚನ್, ಅರುಣ್ ಶೆಟ್ಟಿ ಪಾದೂರು, ಶ್ರೀ ಕಾಂತ್ ನಾಯಕ್, ನವೀನ್ ಶೆಟ್ಟಿ ಕುತ್ಯಾರು, ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಳತ್ತೂರು : ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಸಭೆ
Posted On: 24 Aug 2022, 05:49 PM
ಕಳತ್ತೂರು : ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯ ಸಭೆಯು ಗ್ರಾಮ ಆರೋಗ್ಯ ಸಮಿತಿ ಅಧ್ಯಕ್ಷ ಜನಾರ್ಧನ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಜರಗಿತು. ಸಮಾಜಸೇವಾ ವೇದಿಕೆಯ ಅಧ್ಯಕ್ಷ ಫಾರೂಕ್ ಚಂದ್ರನಗರ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಅವರು ಮಾತನಾಡಿ ಕಳತ್ತೂರು ಚಂದ್ರ ನಗರದ ಆರೋಗ್ಯ ಕೇಂದ್ರಗಳಿಗೆ ಕೊರೋನಾ ಸಂದರ್ಭ ಸಂಸ್ಥೆ ಸಹಕಾರ ನೀಡಿದ್ದು ಮುಂದಿನ ದಿನಗಳಲ್ಲಿಯೂ ಸಹಕಾರ ಮುಂದುವರಿಯಲಿದೆ ಎಂದರು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯೆ ದಿವ್ಯ ಶೆಟ್ಟಿಗಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ ಸುಧಾವತಿ, ಜಾನ್ಸನ್ ಕರ್ಕಡ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶ್ರೀ ಶಕ್ತಿ ಗುಂಪಿನ ಸದಸ್ಯರು, ಗ್ರಾಮ ನೈರ್ಮಲ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
