Updated News From Kaup
ಬೆಳಪು : ಜಮಾ ಅತೆ ಇಸ್ಲಾಮಿ ಕಾಪು ವರ್ತುಲದ ವತಿಯಿಂದ ಉಚಿತ ಹಿಜಾಮ ಶಿಬಿರ
Posted On: 14 Aug 2022, 06:11 PM
ಕಾಪು : ಸೃಷ್ಟಿಕರ್ತನು ಮಾನವನನ್ನು ಭೂಮಿಯ ಮೇಲೆ ತನ್ನ ಪ್ರತಿನಿಧಿಯಾಗಿ ಕಳುಹಿಸಿ , ಕೆಡುಕನ್ನು ಅಳಿಸಿ ಒಳಿತನ್ನು ಸ್ಥಾಪಿಸಲು ಆದೇಶಿಸಿ , ಸ್ವಸ್ಥ ಸುಂದರ , ಆರೋಗ್ಯಪೂರ್ಣ ಸಮಾಜ ನಿರ್ಮಿಸಿ ರೋಗ ರುಜಿನ ಪೀಡಿತರ ಸೇವೆಗೈಯ್ಯಲು ತಿಳಿಸಿರುವನು. ನಿಮ್ಮಲ್ಲಿರುವ ಸಂಪತ್ತನ್ನು ಸೃಷ್ಟಿಕರ್ತನ ಸಂಪ್ರೀತಿ ಗಳಿಸಲು ಬಡವರ ಉದ್ಧಾರಕ್ಕೆ ಬಳಸಿದರೆ ಅದು ದೇವ ಮಾರ್ಗದಲ್ಲಿ ಬಳಸಿದಂತೆ ಎಂದು ಅನ್ವರ್ ಅಲಿ ಕಾಪು ಹೇಳಿದರು. ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ ಜಮಾ ಅತೆ ಇಸ್ಲಾಮಿ ಕಾಪು ವರ್ತುಲದ ವತಿಯಿಂದ ಬೆಳಪು ಮಸ್ಜಿದ್ ಎ ತೈಬಾ ದಲ್ಲಿ ಉಚಿತ ಹಿಜಾಮ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಹಿಜಾಮ ಚಿಕಿತ್ಸೆ ನೀಡಲು ಬಂದಿರುವ ಆಯುಷ್ ಸರಕಾರಿ ಆಸ್ಪತ್ರೆ ಉಡುಪಿಯ ವೈದ್ಯಾಧಿಕಾರಿಯಾದ ಡಾಕ್ಟರ್ ರುಕ್ಸಾರ್ ಅಂಜುಮ್ ರವರು, ಈ ಚಿಕಿತ್ಸೆಯಿಂದ ಹಲವಾರು ಕಾಯಿಲೆಗಳು ಶಸ್ತ್ರ ಚಿಕಿತ್ಸೆ, ಮಾತ್ರೆ, ಔಷಧಿ ಸೇವಿಸದೆ ಗುಣ ಪಡಿಸಬಹುದಾಗಿದೆ ಹಾಗೂ ಇನ್ನೂ ಹಲವಾರು ಪ್ರಯೋಜನಗಳು ಇವೆ ಎಂದು ತಿಳಿಸಿದರು. 61 ಮಹಿಳೆಯರು 53 ಪುರುಷರು ಶಿಬಿರದಲ್ಲಿ ಹಿಜಾಮ ಚಿಕಿತ್ಸೆಯ ಪ್ರಯೋಜನ ಪಡೆದರು. ವೇದಿಕೆಯಲ್ಲಿ ರಫೀಕ್ ಖಾನ್, ಮುಸ್ತಾಕ್ ಇಬ್ರಾಹೀಮ್ ಉಪಸ್ಥಿತರಿದ್ದರು. ಮಸೀದಿಯ ಗುರುಗಳಾದ, ಮೌಲಾನಾ ಮುಹಮ್ಮದ್ ಫಾರೂಕ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭ ಆಯಿತು. ಶೇಹೆನಾಜ್ , ಬೀಬಿ ಬತುಲ್, ಸಕ್ಲೇನ್ ಪಾಷ , ಅಬ್ದುಲ್ ಅಹದ್, ಸರ್ಫರಾಜ್ ಸಹಕರಿಸಿದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತಿಸಿದರು. ಇಬ್ರಾಹೀಮ್ ಸಯೀದ್ ಉಮರಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕುದ್ರೋಳಿ : 18 ಗಂಟೆಗಳ ಶ್ರಮದಿಂದ ಧಾನ್ಯ, ತರಕಾರಿ, ಅಕ್ಕಿ ಇತ್ಯಾದಿ ವಸ್ತುಗಳಿಂದ ಮೂಡಿದ ತಿರಂಗ
Posted On: 14 Aug 2022, 03:14 PM
ಮಂಗಳೂರು : ಸ್ವಾತಂತ್ರ್ಯದ 75ರ ಅಮೃತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಗುರುಬೆಳದಿಂಗಳು ಸೇವಾ ಸಂಸ್ಥೆಯ ಆಶ್ರಯದಲ್ಲಿ ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಳ ಮುಂಭಾಗ ಧಾನ್ಯ, ತರಕಾರಿ, ಅಕ್ಕಿ, ಕಳಶ, ಬಾಳೆ ಎಲೆ, ವೀಳ್ಯದೆಲೆ ಇತ್ಯಾದಿ ವಸ್ತುಗಳಿಂದ ಭಾರತದ ತ್ರಿವರ್ಣ ಧ್ವಜವನ್ನು ರಚಿಸಲಾಗಿದೆ. ಕಲಾವಿದ, ಛಾಯಾಗ್ರಾಹಕ ಪುನೀಕ್ ಶೆಟ್ಟಿ ನೇತೃತ್ವದಲ್ಲಿ 30 ಗುರುಬೆಳದಿಂಗಳು ಸದಸ್ಯರು ಹಾಗೂ ಕ್ಷೇತ್ರದ ಸಿಬ್ಬಂದಿ ವರ್ಗದ ಸಹಕಾರದಿಂದ 18 ಗಂಟೆಗಳ ನಿರಂತರ ಕಾರ್ಯದಿಂದ ಮೂಡಿದೆ. ಇದಕ್ಕಾಗಿ 900 ಕೆಜಿ ಧಾನ್ಯ, 100 ಕೆಜಿ ತರಕಾರಿ, 38 ಅಡಿ ವೃತ್ತ, 54 ಕಳಶ, 108 ಬಾಳೆ ಎಲೆ, 500 ವೀಳ್ಯದೆಲೆ, 100 ಕೆಜಿ ಬೆಳ್ತಿಗೆ ಅಕ್ಕಿ ಉಪಯೋಗಿಸಲಾಗಿದೆ.
ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ಕಾಪು ಟು ಪಡುಬಿದ್ರಿ : ದೇಶಕ್ಕಾಗಿ ಓಟ
Posted On: 14 Aug 2022, 11:52 AM
ಪಡುಬಿದ್ರಿ : ಸ್ವಾತಂತ್ರ್ಯದ 75ರ ಅಮೃತ ಮಹೋತ್ಸವದ ಅಂಗವಾಗಿ ಕಾಪು ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ದೇಶಕ್ಕಾಗಿ ಓಟ ಕಾರ್ಯಕ್ರಮವು ಕಾಪು ರಾಷ್ಟ್ರೀಯ ಹೆದ್ದಾರಿ ಸಮೀಪದ ಸರಕಾರಿ ಶಾಲೆಯ ಸಮೀಪದಿಂದ ಪ್ರಾರಂಭಗೊಂಡು ಪಡುಬಿದ್ರಿ ಬೋಡ್೯ ಶಾಲಾ ಮೈದಾನದಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ಮಾತನಾಡಿದ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಅವಕಾಶವಿದೆ. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಸವಾಲನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಸತತ ಪರಿಶ್ರಮದಿಂದ ಮುಂದೆ ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವಂತಾಗಲಿ ಎಂದು ಭಾಗವಹಿಸಿದ ಸ್ಪಧಾರ್ಥಿಗಳಿಗೆ ಶುಭ ಹಾರೈಸಿದರು. ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ದೇಶವು ಯಾವ ರೀತಿ ಇರಬೇಕೆಂದು ಹಿರಿಯರು ನಿಶ್ಚಯಿಸಿದ್ದಾರೆ. ಪ್ರಧಾನಿಯವರ ಕರೆಯಂತೆ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಜನ ಸಂಭ್ರಮಿಸುತ್ತಿದ್ದಾರೆ. ದೇಶವನ್ನು ತುಂಡರಿಸಿದವರು ಮತ್ತು ರಾಷ್ಟ್ರ ಧ್ವಜದ ಬಣ್ಣವನ್ನೂ ತಿಳಿಯದವರು ಬಿಜೆಪಿಗೆ ಪಾಠ ಮಾಡುತ್ತಿದ್ದಾರೆ. ಮುಂದಿನ 25 ವರ್ಷ ಭಾರತದ ಅಮೃತಕಾಲ ಎಂದು ಪ್ರಧಾನಿಯವರ ಕರೆ ನೀಡಿದ್ದಾರೆ ಎಂದರು. ಸುಮಾರು 11 ಕಿ.ಮೀ ಜರಗಿದ ಓಟದಲ್ಲಿ ಹಿರಿಯ ವಿಭಾಗದಲ್ಲಿ ಪುರುಷರು, ಮಹಿಳೆಯರು, ಯುವಕ, ಯುವತಿಯರು ಪಾಲ್ಗೊಂಡಿದ್ದರು. ಯುವಕರ ವಿಭಾಗದಲ್ಲಿ ಪ್ರಥಮ ಅನಿಲ್ ಕೋಟ, ದ್ವಿತೀಯ ಸಚಿನ್, ತೃತೀಯ ಲಾರ ಫ್ರಾನ್ಸಿಸ್, ಚತುರ್ಥ ದಿನೇಶ್ ಉಡುಪಿ, ಪಂಚಮ ಸ್ಥಾನವನ್ನು ವಿಜಯಕುಮಾರ್ ನಗದು, ಪ್ರಶಸ್ತಿ ಪತ್ರದೊಂದಿಗೆ ಪಡೆದುಕೊಂಡರು. ಯುವತಿಯರ ವಿಭಾಗದಲ್ಲಿ ಪ್ರಥಮ ಗಾಯತ್ರಿ, ದ್ವಿತೀಯ ಜಸ್ಮಿತ ಕೊಡಂಕಿಲ, ತೃತೀಯ ಕಾವೇರಿ, ಚತುರ್ಥ ಪವಿತ್ರ, ಪಂಚಮ ಸ್ಥಾನವನ್ನು ಪ್ರಿಯಾಂಕ ನಗದು, ಪ್ರಶಸ್ತಿ ಪತ್ರದೊಂದಿಗೆ ಪಡೆದುಕೊಂಡರು. ಈ ಸಂದರ್ಭ ಶ್ರೀಶ ನಾಯಕ್, ನಯನ ಗಣೇಶ್, ಶಿಲ್ಪ ಸುವರ್ಣ, ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್ ಪಡುಬಿದ್ರಿ, ನೀತಾ ಗುರುರಾಜ್, ರವಿ ಶೆಟ್ಟಿ ಪಡುಬಿದ್ರಿ, ಯಶೋಧ, ಸಂತೋಷ್, ಸುರೇಂದ್ರ ಪಣಿಯೂರು, ಸುಮಂಗಳ ಮತ್ತಿತರರು ಉಪಸ್ಥಿತರಿದ್ದರು.
ಹೇರೂರು : ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ; ಧಾರ್ಮಿಕ ಸಭಾ ಕಾರ್ಯಕ್ರಮ
Posted On: 14 Aug 2022, 10:28 AM
ಕಾಪು : ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ಮತ್ತು ಮಹಿಳಾ ಬಳಗ ಹೇರೂರು ಇವರ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಭಜನಾ ಮಂಡಳಿಯ ಮುಂಭಾಗದ ಇಂಟರ್ಲಾಕ್ ಉದ್ಘಾಟನೆಯನ್ನು ಮಜೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರ್ಮಿಳ ಆಚಾರ್ಯ ಉದ್ಘಾಟಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ದಕ್ಷಿಣ ಕನ್ನಡ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ, ಸನಾತನ ಸಂಸ್ಥೆ ಉಡುಪಿಯ ವಿಜಯಣ್ಣ ಅತಿಥಿಗಳಾಗಿ ಭಾಗವಹಿಸಿದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ 85 ಶೇಕಡಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ ಪ್ರಿಯಾಂಕ ಆಚಾರ್ಯ ಹೇರೂರು ಇವರನ್ನು ಅಭಿನಂದಿಸಲಾಯಿತು. ಮಜೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಧುಸೂಧನ ಸಾಲ್ಯಾನ್, ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀನಿವಾಸ ದೇವಾಡಿಗ, ಮಹಿಳಾ ಬಳಗದ ಅಧ್ಯಕ್ಷರಾದ ಶಶಿಕಲಾ ದೇವಾಡಿಗ, ಮಜೂರು ಗ್ರಾಮ ಪಂಚಾಯತ್ ಸದಸ್ಯರಾದ ಮಂಜುಳಾ ಆಚಾರ್ಯ, ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂದೀಪ್ ರಾವ್, ಗಣೇಶ್ ಶೆಟ್ಟಿ, ಸದಸ್ಯರಾದ ಪ್ರಸಾದ್ ಶೆಟ್ಟಿ ಒಳ ದೂರು, ವಿಜಯ ಧೀರಜ್, ಜಿತೇಶ್ ಶೆಟ್ಟಿ, ಮಜೂರು ಗ್ರಾಮ ಪಂಚಾಯತ್ ಪಿಡಿಒ ವಿಲಾಸಿನಿ ಉಪಸ್ಥಿತರಿದ್ದರು. ಶ್ರೀ ಗುರು ರಾಘವೇಂದ್ರ ಮಹಿಳಾ ಬಳಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸುನಿತಾ ಸೇರಿ ಗಾರ್ ಮತ್ತು ಕುಮಾರಿ ಸುರಭಿ ಪ್ರಾರ್ಥಿಸಿದರು. ದಿನೇಶ್ ದೇವಾಡಿಗ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಉದಯ ದೇವಾಡಿಗ ಮತ್ತು ಸುಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಪ್ರಭು ವಂದಿಸಿದರು.
ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ
Posted On: 13 Aug 2022, 10:25 PM
ಕಾಪು : ತಾಲೂಕಿನ ಕಟಪಾಡಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಒಂದು ಮಗುಚಿ ಬಿದ್ದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ಮರದ ತುಂಡುಗಳನ್ನು ಹೇರಿಕೊಂಡು ಸಾಗುತ್ತಿದ್ದ ಟೆಂಪೋ ಪಲ್ಟಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪಡುಬಿದ್ರಿ : ಹಿಂದು ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ
Posted On: 13 Aug 2022, 10:13 PM
ಪಡುಬಿದ್ರಿ : ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಶನಿವಾರ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು. ಪಡುಬಿದ್ರಿಯ ಕಂಚಿನಡ್ಕದ ಮಿಂಚಿನ ಬಾವಿ ಕ್ಷೇತ್ರದಲ್ಲಿ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಪಂಜಿನ ಮೆರವಣಿಗೆಯು ಪಡುಬಿದ್ರಿ ಪೇಟೆಯಲ್ಲಿ ಸಮಾಪನಗೊಂಡಿತು. ಕಾರ್ಯಕ್ರಮವನ್ನು ಹಿಂದು ಮುಖಂಡ ಗಣರಾಜ್ ಭಟ್ ಕೆದಿಲ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ತಾಯಿ ಭಾರತಿ ಘೋಷಣೆ, ಕೈಯಲ್ಲಿ ಪಂಜು ಅಖಂಡ ಭಾರತದ ಕಲ್ಪನೆಗೆ ನಾಂದಿ. ದೇಶಕ್ಕಾಗಿ ಶ್ರಮಿಸಿದ ಮಹನೀಯರ ಶ್ರಮ, ಬಲಿದಾನ ನಮ್ಮ ಜೀವನಕ್ಕೆ ನಾಂದಿ ಬುನಾದಿ ಎಂಬ ಸತ್ಯ ಸಂಗತಿಯನ್ನು ಅರಿವು ಮಾಡುವುದಕ್ಕೆ ಈ ಅಖಂಡ ಭಾರತ ಸಂಕಲ್ಪ ದಿನ. ಇಂದಿನ ಪಠ್ಯ ಪುಸ್ತಕದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬ್ರಿಟಿಷರಿಂದ ಬಂತೆಂದಿದೆ. ಆದರೆ ಈ ಸ್ವಾತಂತ್ರ್ಯ ಯಾರ ಸೊತ್ತು ಅಲ್ಲ. ಇದು ಬ್ರಿಟಿಷರ ಭಿಕ್ಷೆಯಲ್ಲ ನಮ್ಮವರ ರಕ್ತ ಹರಿಸಿ ಗಳಿಸಿದ ಸ್ವಾತಂತ್ರ್ಯ. ಸ್ವಾತಂತ್ರ್ಯವೆಂದರೆ ಬ್ರಿಟಿಷರೊಂದಿಗಿನ ಹೋರಾಟವೆಂದು ಪಠ್ಯ ಪುಸ್ತಕ ತೋರಿಸುತ್ತದೆ. ಸತ್ಯ ಸಂಗತಿಗಳನ್ನು ಮರೆಮಾಚಲಾಗಿದೆ. ಅದನ್ನು ಲೋಕಕ್ಕೆ ಸಾರ ಬೇಕಾಗಿದೆ. ಇದನ್ನೆಲ್ಲ ನೆನಪಿಸಲು ಅಖಂಡ ಭಾರತ ಸಂಕಲ್ಪ ಎಂದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾರಾಯಣ್ ರಾವ್ ಶಿವಾಲಯ, ಶಂಕರ್ ಕಂಚಿನಡ್ಕ, ರಿಕೇಶ್ ಕಡೆಕಾರು, ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರಸಾದ್ ಪಲಿಮಾರು ಸ್ವಾಗತಿಸಿದರು. ಸಂತೋಷ್ ನಂಬಿಯಾರ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ : ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಪ್ಪೆ ಚಿಪ್ಪಲ್ಲಿ ಅರಳಿದ ಭಾರತ
Posted On: 13 Aug 2022, 02:20 PM
ಉಡುಪಿ : ಇಲ್ಲಿಯ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅವರು ತಮ್ಮ ಮನೆಯಲ್ಲಿ ಕಪ್ಪೆಚಿಪ್ಪುಗಳ ಮೂಲಕ ಭಾರತ ಭೂಪಟವನ್ನು ರಚಿಸಿ, ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಸ್ಥಳೀಯವಾಗಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ, ಅತ್ಯಂತ ವಿಶಿಷ್ಟ , ಆಕರ್ಷಕ ಮತ್ತು ಎಲ್ಲರಿಗೂ ಮಾದರಿಯಾಗುವಂತೆ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಆಚರಿಸಿದ್ದಾರೆ.
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಅಂತಾರಾಷ್ಟ್ರೀಯ ಯುವ ದಿನ ಆಚರಣೆ
Posted On: 13 Aug 2022, 02:06 PM
ಉಡುಪಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಉಡುಪಿಯ ಸಂತ ಸಿಸಿಲಿ ಪದವಿಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ದೇಶದ ಸ್ವಾತಂತ್ರ್ಯದ ಅಮೃತೋತ್ಸವದ ಸಂಭ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ನಾಯಕ ಮತ್ತು ನಾಯಕಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಾತನಾಡಿದ ಭಾರತೀಯ ಜೀವ ವಿಮಾ ನಿಗಮ ಕಾಪು ಶಾಖೆಯ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಎನ್ ಕೆ, ವಿದ್ಯಾರ್ಥಿಗಳು ದೇಶದ ಬೆನ್ನೆಲುಬು. ದೇಶ ಅಭಿವೃದ್ಧಿ ಪಥಕ್ಕೆ ಸಾಗುವಂತಾಗಲು ನಾವೆಲ್ಲರೂ ಕೈಜೋಡಿಸಬೇಕು. ನಮ್ಮ ದೇಶದಲ್ಲಿ ರೈತರು ಮತ್ತು ಸೈನಿಕರಂತೆ ನಾವು ನಮ್ಮ ದೇಶಕ್ಕೆ ಸೇವೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿ ಮಣಿಪಾಲ ಎಚ್ ಪಿ ಆರ್ ವಿದ್ಯಾಸಂಸ್ಥೆಯ ಪ್ರೊಫೆಸರ್ ಹರಿಪ್ರಸಾದ್ ರೈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯವನ್ನು ತಿಳಿಸಿದರು. ಸಂಪನ್ಮೂಲ ಅತಿಥಿ ಜೆಸಿಐ ಇಂಡಿಯಾ ಇದರ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮೌಲ್ಯಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ವಲಯ ಎರಡರ ಅಧ್ಯಕ್ಷ ಜೋನ್ ಫೆರ್ನಾಂಡಿಸ್, ಕಾಲೇಜಿನ ಪ್ರಾಂಶುಪಾಲೆ ಸಿ. ರಚನ, ಕಾರ್ಯಕ್ರಮದ ನಿರ್ದೇಶಕ ವಿವೇಕ್ ಮೆಂಡೋನ್ಸಾ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿದರೆ, ಕಾರ್ಯದರ್ಶಿ ಸ್ಟೀವನ್ ಕುಲಾಸೊ ನಿರೂಪಿಸಿದರು. ಉಪನ್ಯಾಸಕಿ ವಸಂತಿ ಅಂಬಲ್ಪಾಡಿ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಸದಸ್ಯರಾದ ಹೆನ್ರಿ ಡಿಸೋಜಾ, ಗೋಡ್ ಫ್ರಿ ಡಿಸೋಜ, ಜೆರಾಲ್ಡ್ ಪಿರೇರಾ, ರೊನಾಲ್ಡ್ ರೆಬೆಲ್ಲೋ, ರೋಶನ್ ಕ್ರಾಸ್ತಾ, ಅನಿಲ್ ಮಿನೇಜಸ್, ಪ್ರೇಮ್ ಮಿನೇಜಸ್, ಫ್ರಾಂಕಿ ಕರ್ಡೋಜಾ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಶೇಷ ಬಹುಮಾನ
Posted On: 12 Aug 2022, 11:39 PM
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯ 2021-22ನೇ ವಾರ್ಷಿಕ ಸಾಲಿನ ಬ್ಯಾಂಕಿಂಗ್ ವ್ಯವಹಾರದಲ್ಲಿ ಗಳಿಸಿದ ಪ್ರಗತಿಯನ್ನು ಗುರುತಿಸಿ ಆಗಸ್ಟ್ 5ರಂದು ಮಂಗಳೂರು ಕೊಡಿಯಾಲ್ ಬೈಲ್ ನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ಜರಗಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2021-22 ನೇ ಸಾಲಿನ ಮಹಾಸಭೆಯಲ್ಲಿ 2021-22 ನೇ ಸಾಲಿನ ಜಿಲ್ಲಾ ಬ್ಯಾಂಕಿನ ವಿಶೇಷ ಪ್ರೋತ್ಸಾಹಕ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಉಡುಪಿ ಜಿಲ್ಲೆಯಲ್ಲಿಯೇ ಹಲವಾರು ವರ್ಷಗಳಿಂದ ಸತತವಾಗಿ 25% ಡಿವಿಡೆಂಡ್ ನೀಡುತ್ತಿರುವ ಏಕೈಕ ಸಂಸ್ಥೆಯಾಗಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯು 2021-22 ನೇ ಸಾಲಿನಲ್ಲಿ 100 ಕೋಟಿ ಠೇವಣಿ ಗುರಿ ಸಾಧನೆಯನ್ನು ತಲುಪಿದ್ದು ಪ್ರಪಥಮವಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ರೂಪಾಯಿ 1,00,000/ ವಿಶೇಷ ಬಹುಮಾನವನ್ನು ಕೂಡ ಪಡೆಯಿತು. ಮಂಗಳೂರು ಕೊಡಿಯಾಲ್ ಬೈಲ್ ನ ಉತ್ಕೃಷ್ಟ ಸಹಕಾರಿ ಸೌಧದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಪರವಾಗಿ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಿಶ್ಚಿತಾ ಪಿ.ಎಚ್. ರವರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಹಾಗೂ ವಿಶೇಷ ಬಹುಮಾನವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಕ್ಷ್ಮೀ ನಾರಾಯಣ ಜಿ.ಎನ್., ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಲಾವಣ್ಯ ಕೆ.ಆರ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ಇದರ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮ-1 : ತಿರಂಗ ಧ್ವಜ ವಿತರಣೆ
Posted On: 12 Aug 2022, 11:20 PM
ಉಡುಪಿ :ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರಲು ಖಾಸಗಿ ಸಹಭಾಗಿತ್ವದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಅನುಷ್ಟಾನಗೊಳಿಸಲು ಗ್ರಾಮ-1 ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದ್ದು, ಉಡುಪಿ ಜಿಲ್ಲೆಯಲ್ಲೂ ಸಹ ಹಲವು ಗ್ರಾಮ-1 ಕೇಂದ್ರಗಳು ಪ್ರಾರಂಭಗೊಂಡು ಸಕ್ರಿಯವಾಗಿರುತ್ತದೆ. 75 ನೇ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವದ ಅಂಗವಾಗಿ "ಹರ್ ಘರ್ ತಿರಂಗ್" ಯೋಜನೆಯನ್ನು ಭಾರತ ಸರ್ಕಾರವು ರೂಪಿಸಿದ್ದು, ಉಡುಪಿ ಜಿಲ್ಲೆ ಅಲೆವೂರು, ಶಿರ್ವ, ವಾರಂಬಳ್ಳಿ, ವರಂಗ, ಯೆಡ್ತಾಡಿ, 80- ಬಡಗಬೆಟ್ಟು, ಮುದ್ರಾಡಿ ಹಾಗೂ ಕೆಮ್ಮಣ್ಣು ಗ್ರಾಮ-1 ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ತಿರಂಗ ಧ್ವಜವನ್ನು ವಿತರಣೆ ಮಾಡಲಾಯಿತು.
