Updated News From Kaup
ಅದಮಾರಿನ ಆದರ್ಶ ಯುವಕ ಸಂಘದ ಗೌರವ ಸ್ವೀಕಾರಕ್ಕಾಗಿ ಯೋಧ ಬಾಲಕೃಷ್ಣ ಟಿ. ಭಂಡಾರಿಗೆ ಆಮಂತ್ರಣ
Posted On: 26 Jul 2022, 10:24 PM
ಅದಮಾರು : ದೇಶದ ಗಡಿ ಪ್ರದೇಶವಾದ ಕಾರ್ಗಿಲ್ ನಲ್ಲಿ ಭೂಸೇನೆಯಲ್ಲಿ ಸೇವೆಗೈದ ಕಾಪು ತಾಲೂಕಿನ ಅದಮಾರಿನ ಹೆಮ್ಮೆಯ ಯೋಧ ಬಾಲಕೃಷ್ಣ ಟಿ.ಭಂಡಾರಿ ಅವರಿಗೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯ ಸಂದರ್ಭದಲ್ಲಿ ಶುಭಹಾರೈಸಿ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಗೌರವಿಸಲು ಅದಮಾರಿನ ಆದರ್ಶ ಯುವಕ ಸಂಘದ ವತಿಯಿಂದ ಜುಲೈ 26ರಂದು ಆಮಂತ್ರಿಸಲಾಯಿತು.
ಕಟಪಾಡಿ : ಕಸದ ರಾಶಿ - ಸಾರ್ವಜನಿಕರಿಗೆ ತೊಂದರೆ ; ಸಮಸ್ಯೆ ಬಗೆಹರಿಸಲು ಸ್ಥಳೀಯ ನಿವಾಸಿಗಳ ಆಗ್ರಹ
Posted On: 26 Jul 2022, 05:12 PM
ಕಟಪಾಡಿ : ಇಲ್ಲಿನ ಏಣಗುಡ್ಡೆ ಪಂಚಾಯತ್ ವ್ಯಾಪ್ತಿಯ ಹಳೆ ರಸ್ತೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ನಾಗಬನ ಸಮೀಪ ಇರುವ ಸ್ಥಳದಲ್ಲಿ ಪ್ಲಾಸ್ಟಿಕ್, ಮಧ್ಯದ ಬಾಟಲು,ಮಲ ಮೂತ್ರದ ಪ್ಯಾಡ್,ಮಾಂಸದ ಮೂಳೆ ಮುಂತಾದವುಗಳಿಂದ ಕಸದ ರಾಶಿ ಆಗಿ ಮಾರ್ಪಾಡು ಆಗಿದೆ. ಈಗಾಗಲೇ ಪಂಚಾಯತ್ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಪ್ರಯೋಜನವಿಲ್ಲ. ಇಲ್ಲಿನ ಕಸ ವಿಲೇವಾರಿ ಮಾಡಬೇಕಾಗಿದೆ. ಹತ್ತಿರದ ಫ್ಲಾಟ್, ಮನೆಯಲ್ಲಿಯ ಒಟ್ಟಾದ ಕಸ, ಪ್ಲಾಸ್ಟಿಕ್ ಹಾಗೆ ಮಲ ಮೂತ್ರದ ಪ್ಯಾಡ್ಗಳನ್ನು ಬಿಸಾಡುವುದು ಗಮನಕ್ಕೆ ಬಂದಿದೆ. ನಾಯಿಗಳು ಒಟ್ಟಾಗಿ ಎಲ್ಲವನ್ನು ರಸ್ತೆಯಲ್ಲಿ ಹರಡಿ ಹಾಕುತ್ತಿದ್ದು ಸ್ಥಳೀಯ ಮನೆಯವರಿಗೂ, ದಾರಿ ಹೋಕರಿಗೂ ನಡೆದಾಡಲು ಅಸಹ್ಯ ಉಂಟಾಗಿದೆ. ಅಲ್ಲದೆ ಆರೋಗ್ಯ ಸಮಸ್ಯೆಯಾಗಿದೆ. ದಯವಿಟ್ಟು ಈ ಕೂಡಲೇ ಕಸವನ್ನು ವಿಲೇವಾರಿ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮರವನ್ನು ಇಟ್ಟು ಯಾರು ಕಸ ಹಾಕುತ್ತಾರೋ ಅವರ ಮನೆ ಅಥವಾ ಫ್ಲಾಟ್ ಗೆ ಅಲ್ಲಿ ಒಟ್ಟಾದ ಎಲ್ಲ ಕಸಗಳನ್ನು ತಂದು ವಾಪಸ್ ಹಾಕಲಾಗುವುದು. ಇಲ್ಲದಿದ್ದಲ್ಲಿ ಅವರಿಂದಲೇ ದಂಡ ಸಮೇತ ಕಸ ವಿಲೇವಾರಿ ಮಾಡಿಸಲಾಗುವುದು ಎಂದು ನೊಂದ ಕಟಪಾಡಿ ಹಳೆ ರಸ್ತೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ : ಒಂದು ಜಿಜ್ಞಾಸೆ
Posted On: 26 Jul 2022, 04:45 PM
ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಈ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವರಾದ ಶ್ರೀಯುತ ನಾಗೇಶ್ ಬಿ ಸಿ ರವರು ಮತ್ತು ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಡಾ. ಅಶ್ವಥ್ ನಾರಾಯಣ್ ಎಂಬ ಇಬ್ಬರು ಶಿಕ್ಷಣ ಸಚಿವರನ್ನು ಎಲ್ಲಿಂದ ಕರೆದುಕೊಂಡು ಬಂದರು ಎಂಬುದು ಕರ್ನಾಟಕದ ಜನತೆಗೆ ತಲೆನೋವಿನ ವಿಷಯವಾಗಿದೆ. ಈ ಇಬ್ಬರು ಶಿಕ್ಷಣ ಸಚಿವರು ಕೈಗೊಂಡಂತಹ ನಿರ್ಧಾರಗಳಿಂದಾಗಿ ಇಂದು ಕರ್ನಾಟಕ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಒಂದು ರೀತಿಯ ಅಶಾಂತಿಯ ವಾತವರಣವೇ ನಿರ್ಮಾಣವಾಗಿದೆ. ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ಶ್ರೀಯುತ ಸುರೇಶ್ ಕುಮಾರ್ರವರು ತಮ್ಮದೇ ಬಿಜೆಪಿ ಪಕ್ಷದ ಐಟಿ ಸೆಲ್ನ ಸದಸ್ಯರು ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದ ಶ್ರೀಯುತ ರೋಹಿತ್ ಚಕ್ರತೀರ್ಥ ಅವರನ್ನು ಪ್ರಾಥಮಿಕ ಹಾಗು ಪ್ರೌಢ ಶಾಲಾ ಶಿಕ್ಷಣದ ಪಠ್ಯಪುಸ್ತಕಗಳಲ್ಲಿದ್ದ ಸರಿ ತಪ್ಪುಗಳ ವಿಶ್ಲೇಷಣೆಗಾಗಿ ಅವರೇ ಹೇಳಿದಂತೆ ಮೌಖಿಕವಾಗಿ ಸೂಚಿಸಿದ್ದರಂತೆ. ಈ ಕಾರ್ಯದಲ್ಲಿ ಮಗ್ನರಾದ ಶ್ರೀಯುತ ರೋಹಿತ್ ಚಕ್ರತೀರ್ಥರವರು ಪಠ್ಯಪುಸ್ತಕಗಳಲ್ಲಿದ್ದ ಸರಿ ತಪ್ಪುಗಳ ವಿಶ್ಲೇಷಣೆಯ ಸಂಪೂರ್ಣ ಮಾಹಿತಿಯನ್ನು ಶಿಕ್ಷಣ ಸಚಿವರಿಗೆ ತಿಳಿಸಬೇಕಾದ ಸಮಯಕ್ಕೆ ಸರಿಯಾಗಿ ಸರ್ಕಾರದ ಆಡಳಿತ ಚಕ್ರದಲ್ಲಿ ಉಂಟಾದ ಏರುಪೇರುಗಳ ಹಠಾತ್ ಬದಲಾವಣೆಯಿಂದಾಗಿ ಹಾಗು ಸರ್ಕಾರದ ಅನಿಶ್ಚಿತತೆಯಿಂದಾಗಿ ಶ್ರೀಯುತ ನಾಗೇಶ್ ಬಿ ಸಿ ಯವರು ಶಿಕ್ಷಣ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡರು. ಈ ಶ್ರೀಯುತ ನಾಗೇಶ್ ಬಿ ಸಿ ಯವರು ಶಿಕ್ಷಣ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರವೇ ಈ ಪಠ್ಯಪುಸ್ತಕಗಳು ಪರಿಶೀಲನೆಗೆ ರೆಕ್ಕೆ ಪುಕ್ಕ ಬಂದಿತ್ತೆನ್ನಬಹುದು. ಈ ಶಿಕ್ಷಣ ಸಚಿವರಾದ ಶ್ರೀಯುತ ನಾಗೇಶ್ ಬಿ ಸಿ ಯವರು, ಮಾಜಿ ಶಿಕ್ಷಣ ಸಚಿವರಾದ ಶ್ರೀಯುತ ಸುರೇಶ್ ಕುಮಾರ್ರವರು ನೇಮಿಸಿದ್ದ ಈ ಶ್ರೀಯುತ ರೋಹಿತ್ ಚಕ್ರತೀರ್ಥ ಅವರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚಿಸಿ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲು ಅವಕಾಶವನ್ನು ನೀಡಿದರು, ಜೊತೆಗೆ ಶಿಕ್ಷಣ ಸಚಿವರು ಹಾಗು ಈ ಪಠ್ಯಪುಸ್ತಕಗಳ ಪರಿಷ್ಕರಣೆಯ ಅಧ್ಯಕ್ಷರು ಮತ್ತು ಬಹುಪಾಲು ಸದಸ್ಯರಾಗಿ ನೇಮಕಗೊಂಡ ವ್ಯಕ್ತಿಗಳು ಒಂದೇ ರಾಜಕೀಯ ಪಡಶಾಲೆಯಿಂದ ಬಂದವರಾದರಿಂದ ಈ ಪಠ್ಯಪುಸ್ತಕಗಳ ಪರಿಷ್ಕರಣೆ ಕಾರ್ಯವು ಎಗ್ಗಿಲ್ಲದೆ ಅವ್ಯಾಹತವಾಗಿ ತಮ್ಮಿಷ್ಟಕ್ಕೆ ಬಂದಂತೆ ತಮ್ಮ ಪಕ್ಷದ ಹಾಗು ತಮ್ಮ ವೈಯಕ್ತಿಕ ನಿಲುವು, ಮೌಲ್ಯ ಮತ್ತು ಸಿದ್ಢಾಂತಗಳನ್ನು ಪ್ರತಿಪಾದಿಸುವಂತಹ ಅಂಶಗಳನ್ನು ಸೇರಿಸುವುದರೊಂದಿಗೆ ಸಂಪೂರ್ಣ ಪಠ್ಯಪುಸ್ತಕಗಳ ರೂಪವನ್ನೇ ಬದಲಾಯಿಸಿದರು. ಈ ರೋಹಿತ್ ಚಕ್ರತೀರ್ಥರವರು ಹಲವಾರು ಸಾರ್ವಜನಿಕ ವೇಧಿಕೆಗಳು, ಚರ್ಚಾ ಗೋಷ್ಟಿಗಳು ಸಭೆ ಸಮಾರಂಭಗಳು ಸಮೂಹ ಮಾಧ್ಯಮಗಳು ಹಾಗು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ತಮ್ಮದೇಯಾದ ವಾದ ನಿಲುವು ಸಿದ್ದಾಂತಗಳನ್ನು ಪ್ರತಿಪಾದಿಸುತ್ತಾ ಈ ಹಿಂದೆ ಪಠ್ಯಪುಸ್ತಕಗಳಲ್ಲಿದ್ದ ವಸ್ತು ವಿಷಯಗಳನ್ನು ತಮ್ಮದೇಯಾದ ರೀತಿಯಲ್ಲಿ ಸಾರ್ವಜನಿಕವಾಗಿಯೇ ವಿರೋಧವನ್ನು ವ್ಯಕ್ತಪಡಿಸಿದರು. ಇದು ಸಾರ್ವಜನಿಕ ವಲಯದಲ್ಲಿ ಹಲವಾರು ಪರ ವಿರೋಧಗಳ ನಿಲುವನ್ನು ಅನೇಕ ಬುದ್ದಿಜೀವಿಗಳು, ಶೈಕ್ಷಣಿಕ ತಜ್ಞರು ಹಾಗು ಸಾಮಾಜಿಕ ಕಾರ್ಯಕರ್ತರು ವಾದ ವಿವಾದವನ್ನು ಮಂಡಿಸಲು ಕಾರಣವಾಯಿತು. ಇದರಿಂದಾಗಿ ಭುಗಿಲೆದ್ದ ಪಠ್ಯಪುಸ್ತಕಗಳ ಪರಿಷ್ಕರಣೆಯೂ ಪಠ್ಯಪುಸ್ತಕಗಳಲ್ಲಿದ್ದ ಈ ಹಿಂದೆ ಇದ್ದ ಪಾಠಗಳು ಮತ್ತು ಪದ್ಯಗಳನ್ನು ತೆಗೆದು ಹಾಕಿ ತಮ್ಮ ನಿಲುವು ಮೌಲ್ಯ ಸಿದ್ಧಾಂತಗಳನ್ನು ಪ್ರತಿಪಾಧಿಸುವಂತಹ ಅಂಶಗಳನ್ನೇ ಸೇರಿಸಿ ಪಠ್ಯಪುಸ್ತಕಗಳನ್ನು ರಚಿಸಲಾಯಿತು. ಇದರೊಂದಿಗೆ ಈ ಪಠ್ಯಪುಸ್ತಕಗಳ ಪಾಠಗಳಲ್ಲಿದ್ದ ಅದ್ವಾನಗಳು ಆ ರೋಹಿತ್ ಚಕ್ರತೀರ್ಥ ಪ್ರತಿಪಾಧಿಸುವ ವೇದ ಮಂತ್ರಗಳಿಗೂ ಸನಾತನ ಧರ್ಮ ಎಂಬ ಹುಚ್ಚಿನ ಅಮಲಿನಲ್ಲಿ ಅವರು ಪೂಜಿಸುವ ದೇವರುಗಳಿಗೂ, ಅವರ ಅಭಿಮಾನಿಗಳಿಗೆ ಬೆಂಬಲಿಗರಿಗೆ ಜೊತೆಗೆ ಸರ್ಕಾರಕ್ಕೂ ಇರಿಸು ಮುರಿಸನ್ನು ತಂದವು. ಇವರು ರೂಪಿಸಿದ ಪಠ್ಯಕ್ರಮಗಳಲ್ಲಿ ನಾಡಿನ ಮಹನೀಯರ ಬಗ್ಗೆ ಅತ್ಯಂತ ವಿವಾದಾಸ್ಪಾದವಾದ ರೀತಿಯಲ್ಲಿ ಅವರನ್ನು ಚಿತ್ರಿಸಿ ತೇಜೋವಧೆಗೊಳಿಸಲಾಗಿತ್ತು. ಅದರ ಮಟ್ಟ ಎಷ್ಟಿತ್ತೆಂದರೆ ಈ ನೂತನ ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಿರುವ ಹೇಳಿಕೆಗಳು ಒಂದು ವಿಷಜಗತ್ತನ್ನೇ ಪರಿಚಯಿಸಲು ಸಿದ್ಧವಾಗಿ ನಿಂತಿದ್ದವು. ಇಂತಹ ಸಂಧರ್ಭದಲ್ಲಿ ರೋಹಿತ್ ಚಕ್ರತೀರ್ಥರವರ ಶಿಕ್ಷಣ ಮತ್ತು ಅರ್ಹತೆಗೆ ಸಂಬಂಧಿಸಿದಂತೆ ಉಂಟಾದ ವಿವಾದವನ್ನು ಬಗೆಹರಿಸಲು ಸ್ವತಃ ಶಿಕ್ಷಣ ಸಚಿವರೇ ಮುಂದಾಗಿ ಅವರು ದೇಶದ ಒಂದು ಪ್ರತಿಷ್ಠಿತ ಐ ಐ ಟಿ ಯಲ್ಲಿ ಪ್ರಾಧ್ಯಾಪಕರು ಎಂಬ ಹಸಿ ಸುಳ್ಳನ್ನು ಪತ್ರಿಕಾ ಗೋಷ್ಠಿಯಲ್ಲಿಯೇ ಸಾರ್ವಜನಿಕವಾಗಿ ಘೋಷಿಸಿದಾಗ, ಇದರಿಂದ ಉಂಟಾದ ವಿವಾದವನ್ನು ಬಗೆಹರಿಸಲು ಸ್ವತಃ ರೋಹಿತ್ ಚಕ್ರತೀರ್ಥರವರೇ ಬಂದು ತಮ್ಮ ವಿದ್ಯಾರ್ಹತೆಯೆ ಬಗ್ಗೆ ಸ್ವಷ್ಟನೆ ನೀಡಬೇಕಾಯಿತು. ಈ ವೇಳೆಗಾಗಲೇ ಅದು ಎಷ್ಟು ವಾದ ವಿವಾದವಾಯಿತು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇದರಿಂದಾಗಿ ಕರ್ನಾಟಕದ ರಾಜ್ಯದಾದ್ಯಂತ ಭುಗಿಲೆದ್ದ ಹೋರಾಟಗಳು ಹಾಗು ಚಳುವಳಿಗಳ ಆರ್ಭಟಕ್ಕೆ ಮಣಿದ ಸರ್ಕಾರ ಹಾಗು ಮಾನ್ಯ ಸಚಿವರು ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಾದ ಬದಲಾವಣೆಗಳ ಬಗ್ಗೆ ಹಲವು ರೀತಿಯ ವಿವರಣೆಗಳನ್ನೂ ನೀಡಿದರೂ ಸಹ ಅವರ ದ್ವಂದ್ವ ನೀತಿಯಿಂದಾಗಿ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಸಹ ಸಿಗದೆ ಮತ್ತೇ ಹೋರಾಟಗಳು ಮುಂದುವರೆದವು. ಆದರೂ ಶೈಕ್ಷಣಿಕ ತಜ್ಞರ, ಬುದ್ದಿಜೀವಿಗಳ ಹಾಗು ಹೋರಾಟಗಾರರ ಮಾತನ್ನು ಸಹ ತಿರಸ್ಕರಿಸಿ, ಸರ್ಕಾರವು ಹಠಕ್ಕೆ ಬಿದ್ದು ಅವರದೇ ಸರ್ಕಾರದ ಮೌಲ್ಯಗಳೆಂದು ಬಿಂಬಿಸುವ ಅಂಶಗಳನ್ನೇ ಹೆಚ್ಚಾಗಿ ಪ್ರತಿಪಾದಿಸುವಂತಹ ಉದ್ದೇಶದಿಂದ ರಚಿತವಾದ ಪಠ್ಯಪುಸ್ತಕಗಳನ್ನೇ ಶಾಲೆಗ ತಲುಪಿಸಿ, ಹೋರಾಟಗಾರರ ಮೂಗಿಗೆ ತುಪ್ಪವನ್ನು ಸವರಿದಂತೆ ಅಲ್ಲಲ್ಲಿ ತಪ್ಪಾಗಿರುವಂತಹ ಅಂಶಗಳನ್ನು ಸರಿಪಡಿಸುವುದಾಗಿ ಒಪ್ಪಿಕೊಂಡಿದ್ದರಿಂದಾಗಿ ಸ್ವಲ್ಪವೇ ಸ್ವಲ್ಪ ಪರಿಹಾರ ದೊರೆತಂತಾಯಿತು ಅಷ್ಟೇ. ಆದರೂ ಕೂಡ ಈ ಪಠ್ಯಪುಸ್ತಕಗಳ ಪರಿಷ್ಕರಣೆಯು ಬಗ್ಗೆ ಎದ್ದಿರುವ ವಿವಾದವು ಅಲ್ಪ ಸ್ವಲ್ಪ ತಾತ್ಕಾಲಿಕ ಪರಿಹಾರವಾಗಿದ್ದರೂ ಶಾಶ್ವತ ಪರಿಹಾರಕ್ಕಾಗಿ ಹೋರಾಟಗಳು ಹಾಗು ಚಳುವಳಿಗಳ ಅಲ್ಲಲ್ಲಿ ಹೊಗೆಯಾಡುತ್ತಿರುವುದು ಕಂಡುಬರುತ್ತಿದೆ. ಇದರ ಜೊತೆಗೆ ಈ ಪಠ್ಯಪುಸ್ತಕಗಳ ಪರಿಷ್ಕರಣೆಯ ಸದಸ್ಯರುಗಳಲ್ಲಿಯೇ ಅವರವರ ಬೆನ್ನ ಹಿಂದೆಯೇ ಕೆಸರೆರಚಾಟ ನಡೆಯುತ್ತಿರುವುದರಿಂದ ಸರ್ಕಾರದ ನಡೆಯ ಬಗ್ಗೆ ಇಂದಿಗೂ ಆಕ್ರೋಶಗಳು ಹೊರಬೀಳುತ್ತಿವೆ. ಈ ಪಠ್ಯಪುಸ್ತಕಗಳ ಪರಿಷ್ಕರಣೆಯಿಂದಾಗಿ ಶಿಕ್ಷಣದ ಮಹತ್ವವನ್ನು ಮಾನವನ್ನು ಬೀದಿಗೆ ತಂದು ಹರಾಜು ಹಾಕಿಸಿಕೊಂಡರು. ಜೊತೆಗೆ ವಿವಿಧ ಮಠಾಧೀಶರು ಹಾಗು ಸಾಮಾಜಿಕ ಹೋರಾಟಗಾರರು ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಧಿಸಿದಂತೆ ಸರ್ಕಾರದ ಮೇಲೆ ವಿವಿಧ ರೀತಿಯಲ್ಲಿ ಒತ್ತಡವನ್ನು ತಂದುದ್ದರ ಪರಿಣಾಮವಾಗಿ ಆ ಒತ್ತಡವನ್ನು ನಿಯಂತ್ರಿಸಲು ವಿಫಲವಾದ ಸರ್ಕಾರವು ಪಠ್ಯಪುಸ್ತಕಗಳ ಪರಿಷ್ಕರಣೆಯ ಸಮಿತಿಯನ್ನೇ ವಿಸರ್ಜನೆ ಮಾಡಿದರು. ಆದರೆ ಈ ಪಠ್ಯಪುಸ್ತಕಗಳ ಪರಿಷ್ಕರಣೆಯಿಂದಾಗಿ ಇಂದು ಇವರು ಸಿದ್ಧಪಡಿಸಿದ ವಿಷವುಗುಳುವ ಪಠ್ಯಕ್ರಮವನ್ನೇ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ. ಅದರ ಫಲವನ್ನೂ ಇನ್ನೂ ಕೆಲವೇ ವರ್ಷಗಳಲ್ಲಿ ಕಾಣಬಹುದಾಗಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಮತ್ತೇ ಎರಡು ನೂತನ ಅಂಶಗಳು ಹೆಚ್ಚಿನ ಗಮನ ಸೆಳೆಯುತ್ತಿವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಮಾನ್ಯ ಶಿಕ್ಷಣ ಸಚಿವರಾದ ನಾಗೇಶ್ ಬಿ ಸಿ ಯವರು ಅಂಗನವಾಡಿಗಳನ್ನು ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲಾ ಸಾಂಸ್ಥಿಕ ರೂಪ ನೀಡಲು ನಿರ್ಧರಿಸಿ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಿ ಅವರನ್ನು ಶಾಲಾ ಹಂತಕ್ಕೆ ತರುವುದಾಗಿದೆ. ಇದರಿಂದಾಗಿ ಇವರ ಪ್ರಕಾರ ಅಂಗನಾವಾಡಿ ಕಾರ್ಯಕರ್ತೆಯರನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಶಿಕ್ಷಕರೆಂದು ಪರಿಗಣಿಸಿ ಅವರು ಪಡೆಯುತ್ತಿರುವ ಹತ್ತು ಸಾವಿರ ಗೌರವ ಧನವು ವೇತನ ಎಂದು ಬದಲಾಗುತ್ತದೆ ಹಾಗೂ ಅವರಿಗೆ ಸೇವಾ ಭದ್ರತೆಯು ದೊರಕುತ್ತದೆ ಎನ್ನುತ್ತಿದ್ದಾರೆ. ಇಂತಹ ನಿರ್ಧಾರ ಒಳ್ಳೆಯದೆ ಆದರೆ ಇದರಿಂದ ಉದ್ಬವವಾಗುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾದ ಅನಿವಾರ್ಯತೆ ಇದೆ. ಈ ಅಂಗನವಾಡಿ ಕಾರ್ಯಕರ್ತೆಯರು ಕರ್ನಾಟಕ ರಾಜ್ಯದಾದ್ಯಂತ ಕೆಲವೇ ತಿಂಗಳುಗಳ ಹಿಂದೆ ತಮ್ಮ ಬೇಡಿಕೆಗಳು ಹಾಗು ಗೌರವಧನದ ಹೆಚ್ಚಳಕ್ಕಾಗಿ ಸರ್ಕಾರದ ಗಮನವನ್ನು ಸೆಳೆಯಲು ಹಲವು ರೀತಿಯ ಪ್ರತಿಭಟನೆ, ಹೋರಾಟಗಳನ್ನು, ಹಾಗು ಮುಷ್ಕರಗಳನ್ನು ಮಾಡಿದ್ದರು. ಈ ಅಂಗನವಾಡಿ ಕಾರ್ಯಕರ್ತೆಯರ ನಿರಂತರ ಹೋರಾಟದ ಮುಷ್ಕರದ ಪರಿಣಾಮದ ಬಿಸಿಗೆ ಮಣಿದು ಅವರ ಮನವಿಗೆ ಸ್ಪಂದಿಸಿದ ಸರ್ಕಾರವು ಕೆಲವು ದಿನಗಳ ನಂತರ ಕನಿಷ್ಠ ಮಟ್ಟದ ಗೌರವ ಧನವನ್ನು ಹೆಚ್ಚಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಬಹುಪಾಲು ಅಂಗನವಾಡಿ ಕೇಂದ್ರಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಬಹುಷಃ ಅದೇ ಗ್ರಾಮದ ಅಥವಾ ಪಕ್ಕದ ಊರಿನ ಮಹಿಳೆಯರೇ ಆಗಿರುತ್ತಾರೆ. ಈ ನೇಮಕಾತಿ ಹೇಗೆ ನಡೆಯುತ್ತದೆ ಎಂದು ಜಗಜ್ಜಾಹೀರವಾಗಿದೆ. ಏಕೆಂದರೆ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಅದೇ ಗ್ರಾಮದ ಸ್ಥಳೀಯ ನಾಯಕರ, ಪಟ್ಟಭದ್ರ ಹಿತಾಶಕ್ತಿಗಳ ಅಥವಾ ರಾಜಕೀಯ ಪುಡಾರಿಗಳ ಕೈವಾಡದಿಂದಾಗಿ ರಾಜಕೀಯದ ನೆರಳು ಸುಳಿಯದೇ ಇರಲಾರದು. ಅಂದರೆ ಇಂತಹ ಪಟ್ಟಭದ್ರ ಹಿತಾಶಕ್ತಿಗಳ, ಪ್ರಬಲ ವ್ಯಕ್ತಿಗಳ ಪಕ್ಷಪಾತಕ್ಕೆ ಒಳಗಾಗಿ ಪ್ರಭಾವಿಗಳ ಕಡೆಯವರೇ ಆಯ್ಕೆಯಾಗುವ ಸಂಧರ್ಭಗಳು ಹೆಚ್ಚಿವೆ. ಈ ಅಂಗನವಾಡಿ ಕಾರ್ಯಕರ್ತೆಯರು ಸಾಮಾನ್ಯವಾಗಿ ಆ ಗ್ರಾಮದ ಪ್ರಬಲ ಜಾತಿಯಿಂದ ಬಂದಂತಹ ಮಹಿಳೆಯರೇ ಆಗಿರುತ್ತಾರೆ. ಕೆಲವೇ ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ದಲಿತ, ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರಾಗಿರುತ್ತಾರೆ. ಜೊತೆಗೆ ದಲಿತ, ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರು ಅಂಗನವಾಡಿ ಕಾರ್ಯಕರ್ತೆಯರಾಗಿರುವ ಅಂಗನವಾಡಿ ಕೇಂದಗಳಲ್ಲಿ ಜಾತಿಪದ್ಡತಿಯ ವ್ಯವಸ್ಥೆಯಿಂದ ಯಾವ ಯಾವ ರೀತಿಯ ಶೋಷಣೆಗಳು ನಡೆದು ನೂರಾರು ಪ್ರಕರಣಗಳು ಪ್ರತಿದಿನವು ಬೆಳಕಿಗೆ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ಅಂಗನವಾಡಿ ಕಾರ್ಯಕರ್ತೆಯರನ್ನು ಪೂರ್ವ ಪ್ರಾಥಮಿಕ ಶಿಕ್ಷಣದ ಶಿಕ್ಷಕಿಯರಾಗಿ ನೇಮಿಸಿದರೆ ಇದೇ ಪ್ರಬಲ ವರ್ಗದ ಮಹಿಳೆಯರೇ ಹೆಚ್ಚಾಗಿ ಶಿಕ್ಷಕಿಯರಾಗಿ ಪದನ್ನೋತಿ ಹೊಂದುವ ಅವಕಾಶವನ್ನು ತಳ್ಳಿಹಾಕಲಾಗದು. ಅಂತಹ ಸಂಧರ್ಭದಲ್ಲಿ ಸರ್ವರಿಗೂ ಅವಕಾಶ ಸಿಗದೆ ಉಳ್ಳವರ ಪಾಲಾಗಿ ಸಾಮಾಜಿಕ ನ್ಯಾಯ ಹಾಗು ಸರ್ವರು ಪಾಲ್ಗೊಳ್ಳುವ ಅವಕಾಶವನ್ನು ತಪ್ಪಿಸಿದಂತಾಗುತ್ತದೆ. ಇದರಿಂದ ಸಾಮಾಜಿಕ ನ್ಯಾಯದ ಕೊಲೆಯಾಗುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ಈ ಪೂರ್ವ ಹಾಗು ಕಿರಿಯ ಪ್ರಾಥಮಿಕ ಶಿಕ್ಷಣದ ಶಾಲೆಗಳಿಗೆ ಶಿಕ್ಷಕರಾಗಲು ಪಿಯುಸಿ ಅಥವಾ ಪದವಿ ವಿದ್ಯಾರ್ಹತೆಯ ಜೊತೆಗೆ ಡಿ ಎಡ್ / ಬಿ ಎಡ್ ಪದವಿ ಗಳಿಸಿರಬೇಕು. ನಂತರ ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಾವಿರಾರು ಆಕಾಂಕ್ಷಿಗಳು ಎದುರಿಸಿ ಅದರಲ್ಲಿ ಉತ್ತಮ ಸಾಧನೆಯನ್ನು ಮೆರೆದವರು ಮಾತ್ರ ಶಿಕ್ಷಕರಾಗಿ ನೇಮಕವಾಗಬೇಕಾಗುತ್ತದೆ. ಅದೇ ರೀತಿಯಲ್ಲಿ ಪೂರ್ವ ಹಾಗು ಕಿರಿಯ ಪ್ರಾಥಮಿಕ ಶಿಕ್ಷಣದ ಶಿಕ್ಷಕ - ಶಿಕ್ಷಕಿಯರಾಗಲೂ ಎಷ್ಟೋ ಶಿಕ್ಷಣಾಕಾಂಕ್ಷಿಗಳು ಶಿಕ್ಷಣವನ್ನು ಪಡೆಯುತ್ತಿದ್ದರೆ, ಈಗಾಗಲೇ ಶಿಕ್ಷಣವನ್ನು ಮುಗಿಸಿರುವಂತಹ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿರುವ ಅಂಗನವಾಡಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗು ಪ್ರಾಥಮಿಕ ಶಾಲೆಗಳ ಸಂಖ್ಯೆಯನ್ನು ಗಮನಿಸಬೇಕಾದ ಅವಶ್ಯಕತೆ ಇದೆ. ಕರ್ನಾಟಕ ಆರ್ಥಿಕ ಸಮೀಕ್ಷೆ 2020- 21 ರ ಪ್ರಕಾರ ಕರ್ನಾಟಕದಾದ್ಯಂತ 62,580 ಅಂಗನವಾಡಿ ಕೇಂದ್ರಗಳು ಹಾಗು 3,331 ಮಿನಿ ಅಂಗನವಾಡಿ ಕೇಂದ್ರಗಳು ಹಾಗು ರಾಜ್ಯ ಸರ್ಕಾರದ ವತಿಯಿಂದ 450 ಹೊಸ ಅಂಗನವಾಡಿ ಕೇಂದ್ರಗಳನ್ನು ನಗರ ಮತ್ತು ಕೊಳಗೇರಿ ಪ್ರದೇಶಗಳಲ್ಲಿ ತೆರೆಯಲಾಗಿದ್ದು, ಇವುಗಳಲ್ಲಿ ಒಟ್ಟು 64,816 ಅಂಗನವಾಡಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಂತೆಯೇ ಕರ್ನಾಟಕದ ಒಟ್ಟು 62,431 ಶಾಲೆಗಳಲ್ಲಿ 24,391 ಕಿರಿಯ ಪ್ರಾಥಮಿಕ ಶಾಲೆಗಳು, 38,040 ಹಿರಿಯ ಪ್ರಾಥಮಿಕ ಶಾಲೆಗಳಾಗಿದ್ದು ಹಾಗು ಈ ಪ್ರಾಥಮಿಕ ಶಾಲೆಗಳ ಜೊತೆಗೆ 16,850 ಪ್ರೌಢಶಾಲೆಗಳಿವೆ. ಪ್ರಸ್ತುತ ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾಗಿರುವ 3,15,557 ಶಿಕ್ಷಕರಲ್ಲಿ 3,04,097 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು 11,460 ಶಿಕ್ಷಕರ ಹುದ್ದೆಗಳು ಮಾತ್ರ ಭರ್ತಿಯಾಗಿದೆ ಖಾಲಿ ಉಳಿದಿವೆ. ಈಗ ಉಳಿದಿರುವ 11,460 ಶಿಕ್ಷಕರ ಹುದ್ದೆಗಳಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ 64,816 ಅಂಗನವಾಡಿ ಕಾರ್ಯಕರ್ತೆಯರನ್ನು ಪದನ್ನೋತಿ ಅಥವಾ ಶಿಕ್ಷಕರಾಗಿ ನೇಮಿಸಿದರೆ ಪ್ರಾಥಮಿಕ ಶಿಕ್ಷಣದ ಶಿಕ್ಷಕ ಹಾಗು ಶಿಕ್ಷಕಿಯಾಗಬೇಕೆಂಬ ಉದ್ದೇಶದಿಂದಲೇ ಡಿ ಎಡ್ ಅಥವಾ ಬಿ ಎಡ್ ಶಿಕ್ಷಕ ತರಬೇತಿಯನ್ನು ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಅವರೆಲ್ಲರೂ ಅತಂತ್ರರಾಗಿ ಮುಂದಿನ ದಿನಗಳಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಹಾಗು ಸಮರ್ಥ ನೈಜ ಪದವಿಯನ್ನು ಗಳಿಸಿದವರಿಗೆ ನೀವು ಯಾವ ರೀತಿಯ ನ್ಯಾಯವನ್ನು ನೀಡಿದಂತಾಗುತ್ತದೆ. ಕರ್ನಾಟಕದ ಸರ್ಕಾರಿ ಶಾಲೆಗಳ ಮೂಲ ಸೌಲಭ್ಯಗಳನ್ನು ಆಧರಿಸಿ ಅವುಗಳು ಯಾವ ಶಾಲೆಗಳು ಮೂಲ ಸೌಲಭ್ಯಗಳನ್ನು ಹೊಂದಿಲ್ಲವೋ ಅವುಗಳನ್ನು ಮೂಲ ಸೌಲಭ್ಯಗಳನ್ನು ಹೊಂದಿರುವ ಶಾಲೆಗಳೊಂದಿಗೆ ಶಾಲೆಗಳ ವಿಲೀನ ಪ್ರಕ್ರಿಯೆಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಶಾಲೆಗಳ ಮೂಲ ಸೌಲಭ್ಯಗಳನ್ನು ಆಧರಿಸಿ ಅವುಗಳನ್ನು ವಿಲೀನೀಕರಣ ಮಾಡಲು ಮುಂದಾಗುವುದಕ್ಕಿಂತ ಅಂತಹ ಶಾಲೆಗಳನ್ನು ಗುರುತಿಸಿ ಅವುಗಳ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕಾದುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕೆ ವಿನಃ ಯಾವುದೋ ಒಂದು ನೆಪ ಹೇಳಿ ಅವುಗಳ ವಿಲೀನಕರಣಕ್ಕೆ ಮುಂದಾಗುವುದು ಅಥವಾ ಅವುಗಳನ್ನು ಮುಚ್ಚುವುದು, ಒಂದು ಸರ್ಕಾರದ ಬೇಜವಾಬ್ದಾರಿತನವನ್ನು ಅಸಮರ್ಥತೆಯನ್ನು, ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕಿರುವ ಅಸಡ್ಡೆಯನ್ನು ಸೂಚಿಸುತ್ತದೆಯೇ ವಿನಃ ಅದರ ಸಮರ್ಥತೆಯನ್ನಲ್ಲ. ಹೀಗೆ ಶಾಲೆಗಳ ವಿಲೀನ ಪ್ರಕ್ರಿಯೆಯ ಯೋಜನೆಯನ್ನು ಜಾರಿಗೆ ತಂದು ಗ್ರಾಮೀಣ ಪ್ರದೇಶದಲ್ಲಿರುವ ಚಿಕ್ಕ ಚಿಕ್ಕ ಕಿರಿಯ ಹಾಗು ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಶಾಲಗೆಳ ವಿಲೀನೀಕರಣದ ಹೆಸರಿನಲ್ಲಿ ಸಂಪೂರ್ಣವಾಗಿ ಮುಚ್ಚುವುದರಿಂದ ಮುಂದಿನ ದಿನಗಳಲ್ಲಿ ಶಾಲೆಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಜೊತೆಗೆ ಕಡಿಮೆ ಜನಸಂಖ್ಯೆಯನ್ನು ಹೊಂದಿದ ಚಿಕ್ಕದಾದ ಗ್ರಾಮೀಣ ಪ್ರದೇಶವನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಎಳೆಯ ಹಾಗು ಪುಟ್ಟ ಮಕ್ಕಳು ದೂರದ ಊರುಗಳಿಗೆ ಸರ್ಕಾರಿ ಶಾಲೆಗೆ ಹೋಗಲು ಸಾಧ್ಯವಾಗದೇ ಅಥವಾ ಬಡ, ಮದ್ಯಮ ವರ್ಗದ ಕುಟುಂಬಗಳ ಪೋಷಕರು ಅವರ ಮಕ್ಕಳ ಖಾಸಗಿ ಶಾಲೆಗಳ ಶಿಕ್ಷಣದ ಶುಲ್ಕವನ್ನು ಭರಿಸಲಾಗದೇ ಶಿಕ್ಷಣದಿಂದ ವಂಚಿತರಾಗುತ್ತಾರೆ. ಈ ಪ್ರಕರಣಕ್ಕೆ ನನ್ನ ಸ್ವಂತ ಹಳ್ಳಿಯನ್ನೇ ಉದಾಹರಣೆಗೆ ತೆಗೆದುಕೊಳ್ಳಬಹುದು. ನಾವು ವಿದ್ಯಾಭ್ಯಾಸ ಮಾಡುವಾಗ ನನ್ನ ಹಳ್ಳಿಯಲ್ಲೇ ಇದ್ದ ಕಿರಿಯ ಪ್ರಾಥಮಿಕ ಶಾಲೆ, ಈ ಪ್ರಸ್ತುತ ವರ್ಷದಿಂದ ಬೇರೊಂದು ಊರಿಗೆ ಸ್ಥಳಾಂತರಗೊಂಡಿದೆ. ಇದರಿಂದಾಗಿ ನಮ್ಮ ಹಳ್ಳಿಯ ಮಕ್ಕಳು ಇಂದು ಖಾಸಗಿ ಶಾಲೆಗಳಿಗೆ ಮೊರೆಹೋಗುತ್ತಿದ್ದಾರೆ. ಈ ಖಾಸಗಿ ಶಾಲೆಗಳು ಮಕ್ಕಳನ್ನು ತಮ್ಮ ಶಾಲೆಗೆ ಸೆಳೆಯುವ ಉದ್ದೇಶದಿಂದ ಪ್ರತಿಯೊಂದು ಚಿಕ್ಕ ಪುಟ್ಟ ಹಳ್ಳಿಗಳಿಗೂ ವಾಹನದ ವ್ಯವಸ್ಥೆಯನ್ನು ಮಾಡುವುದರಿಂದ ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಕೆಲಸವನ್ನು ಬಿಟ್ಟು ತಮ್ಮ ಮಕ್ಕಳನ್ನು ತಾವೇ ದೂರದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಪ್ರತಿದಿನವೂ ಕರೆದುಕೊಂಡು ಹೋಗಿ ಬರಲು ಸಾಧ್ಯವಾಗದ ಕಾರಣದಿಂದಾಗಿ ಸಾಮಾನ್ಯವಾಗಿ ಖಾಸಗಿ ಶಾಲೆಗಳತ್ತ ಆಕರ್ಷಿತಗೊಳ್ಳುತ್ತಾರೆ. ಹೀಗೆ ಶಾಲೆಗಳ ಸ್ಥಳಾಂತರ ಅಥವಾ ಶಾಲೆಗಳ ವಿಲೀನದ ಪ್ರಕ್ರಿಯೆಯಿಂದಾಗಿ ಖಾಸಗಿ ಶಾಲೆಗಳಿಗೆ ಹೆಚ್ಚಿನ ಅವಕಾಶವನ್ನು ಕೊಟ್ಟಂತೆ ಆಗುತ್ತದೆಯೇ ವಿನಃ ಸರ್ಕಾರಿ ಶಾಲೆಗಳಿಗೆ ಪೂರಕವಾದ ಯೋಜನೆಯಾಗಿರುವುದಿಲ್ಲ. ಹೀಗೆ ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆಯಿಂದಾಗಿ ಶಾಲೆಗಳು ಮುಚ್ಚುತಾ ಹೋದಂತೆ ಶಿಕ್ಷಕರ ಹುದ್ದೆಗಳು ಸಹ ಕಡಿಮೆಯಾಗುತ್ತಾ ಹೋಗುತ್ತದೆ. ಈ ಕಾರಣದಿಂದಾಗಿ ಸರ್ಕಾರವು ಶಾಲೆಗಳ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗುವುದಿಲ್ಲ. ಅಂತಹ ಸಂಧರ್ಭದಲ್ಲಿ ಶಿಕ್ಷಕರ ಹುದ್ದೆಗಳಿಗಾಗಿಯೇ ಶಿಕ್ಷಣ ಪಡೆದ ಯುವಜನಾಂಗ ಉದ್ಯೋಗವಿಲ್ಲದೆ ನಿರೋದ್ಯೋಗಕ್ಕೆ ಒಳಗಾಗುವ ಸನ್ನಿವೇಶ ಉಂಟಾಗುತ್ತದೆ. ಈ ಶಾಲೆಗಳ ವಿಲೀನದ ಜೊತಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವಂತೆ ಪದವಿ ಹಂತದ ಶಿಕ್ಷಣವನ್ನು ಮೂರು ವರ್ಷದಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಿದ್ದು ಜೊತೆಗೆ ಈ ಪದವಿಯ ಹಂತದಲ್ಲೇ ಶಿಕ್ಷಕರ ತರಬೇತಿಯನ್ನು ಸಹ ಸೇರಿಸಲಾಗಿದೆ. ಇದರಿಂದಾಗಿ ಈ ನಾಲ್ಕು ವರ್ಷಗಳಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದುಕೊಂಡರೆ ಅವರು ಶಿಕ್ಷಕ ಹುದ್ದೆಗಳಿಗೆ ಬೇಕಾದ ಅರ್ಹತೆಯನ್ನು ಗಳಿಸಿಕೊಳ್ಳುತ್ತಾರೆ. ಇತ್ತೀಚಿನ ವರಧಿಯಂತೆ ಈ ಡಿ ಎಡ್ / ಬಿ ಎಡ್ ಪದವಿಯನ್ನು ಈ ಹಿಂದೆ ಇದ್ದಂತೆ ಎರಡು ವರ್ಷಗಳಲ್ಲೇ ಮುಂದುವರೆಸುವುದು ಜೊತೆಯಲ್ಲಿಯೇ ಈ ನಾಲ್ಕು ವರ್ಷಗಳ ಪದವಿ ಹಂತದ ಶಿಕ್ಷಣವನ್ನು ಸಹ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮುಂದವರೆಸುವುದು ಹಾಗು ಸಂಪೂರ್ಣವಾಗಿ 2032 ರವರಗೆ ಕರ್ನಾಟಕದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಿಲ್ಲ ಎಂದು ಕರ್ನಾಟಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡ ಪ್ರತಿಯಲ್ಲಿರುವಂತೆ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಯುವಜನತೆ ತಮ್ಮ ಪದವಿ ಹಂತದ ನಂತರದ ಶಿಕ್ಷಣದಲ್ಲಿ ಗೊಂದಲ ಉಂಟಾದರೂ ಸಹ ಎಲ್ಲರೂ ಗರಿಷ್ಠ ಸಂಖ್ಯೆಯಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದುಕೊಂಡು ಅವರು ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳಾದರೆ ಶಿಕ್ಷಕರ ಹುದ್ದೆಗಳು ಕಡಿಮೆಯಿರುವುದರಿಂದ ಅವರು ಸರ್ಕಾರಿ ಶಾಲೆ ಶಿಕ್ಷಕರಾಗಲು ಸಾದ್ಯವಿಲ್ಲದಂತಾಗುತ್ತದೆ. ಇದರ ಜೊತೆಗ ಸಾಮಾನ್ಯವಾಗಿ ಈ ಪದವಿ ಹಂತದ ನಂತರ ಶಿಕ್ಷಕರ ತರಬೇತಿಯ ಶಿಕ್ಷಣವನ್ನು ಪಡೆಯುವಲ್ಲಿ ಗ್ರಾಮೀಣ ಯುವಜನತೆಯೇ ಹೆಚ್ಚಿನ ಪಾಲನ್ನು ಹೊಂದಿರುತ್ತಾರೆ. ಈ ಗ್ರಾಮೀಣ ಯುವಜನತೆಗೆ ಬೇರೆ ಶಿಕ್ಷಣದ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯಬೇಕಾದರೆ ಅವರಿಗೆ ಮೂಲ ಸೌಲಭ್ಯಗಳು ಹಾಗು ಹಣಕಾಸಿನ ಕೊರೆತೆಯಿಂದಾಗಿ ತಮಗೆ ಕೈಗೆಟುಕುವ ಶಿಕ್ಷಣ ಪದವಿಯನ್ನು ಅವರು ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಮುಗಿಸಿ ಉದ್ಯೋಗಾವಕಾಶಗಳಿಗಾಗಿ ಸರ್ಕಾರವನ್ನೇ ಅವಲಂಬಿಸಿದಾಗ ಅವರಿಗೆ ಉದ್ಯೋಗಾವಕಾಶಗಳ ಕೊರತೆಯುಂಟಾಗುತ್ತದೆ. ಈ ಮೇಲಿನ ಎಲ್ಲಾ ಕಾರಣಗಳನ್ನು ಪರಿಶೀಲಿಸಿದರೆ ನೀವು ಈಗ ಅಂಗನವಾಡಿ ಕಾರ್ಯಕರ್ತೆಯರು ಹಾಗು ಶಾಲೆಗಳ ವಿಲೀನ ಪ್ರಕ್ರಿಯೆಯಿಂದಾಗಿ ಶೈಕ್ಷಣಿಕ ವಲಯದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರಿಂದ ನೀವು ಈಗ ತೆಗೆದುಕೊಂಡಿರುವ ನಿರ್ಧಾರವು ಅಷ್ಟು ಸಮಂಜಸವಾಗಿಲ್ಲದ ಕಾರಣದಿಂದ ಈ ಪ್ರಕ್ರಿಯೆಯನ್ನು ಕೈ ಬಿಟ್ಟು ಬೇರೆ ರೀತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗಾಗಿಯೇ ಬೇರೆ ಯೋಜನೆಗಳನ್ನು ಜಾರಿಗೆ ತಂದರೆ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತದೆ. ಇಲ್ಲದಿದ್ದರೆ ಈ ನೀತಿಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಅಡ್ಡ ಕತ್ತರಿಯಲ್ಲಿ ಸಿಕ್ಕಿ ಬೀಳುವ ಸಂಭವ ಎದುರಾಗುತ್ತದೆ. ಅಂದರೆ ಕೆಲವೇ ಕೆಲವು ಶಿಕ್ಷಕ ಹುದ್ದೆಗಳು ಖಾಲಿಯಿರುವುದರಿಂದ ಸಂಪೂರ್ಣವಾಗಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರನ್ನೂ ಶಿಕ್ಷಕರಾಗಿ ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಕೆಲವು ಅಂಗನವಾಡಿಗಳ ಕಾರ್ಯಕರ್ತೆಯರು ಅದೇ ಉದ್ಯೋಗದಲ್ಲಿ ನಿರತರಾದರೇ ಕೆಲವರು ಮಾತ್ರವೇ ಶಿಕ್ಷಕರರಾಗಲೂ ಸಾಧ್ಯವಾಗುತ್ತದೆ. ಇದು ಅಂಗನಾಡಿ ಕಾರ್ಯಕರ್ತೆಯರ ಭಿನ್ನ ವಿಭಿನ್ನವಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶಿಕ್ಷಕರಾಗಿ ಪದನ್ನೋತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಯರಿಗೂ ಸಿಗುವ ಸೌಲಭ್ಯಗಳ ನಡುವಿನ ವೇತನ ಹಾಗು ಇನ್ನೀತರ ಅಂಶಗಳಲ್ಲಿ ವಿಭಿನ್ನತೆಯು ಕಂಡುಬರುತ್ತದೆ. ಇದರಿಂದಾಗಿ ಅಂಗನವಾಡಿಗಳು ಸಮಸ್ಯೆಯ ಆಗರವಾಗಿ ಪರಿಣಮಿಸುತ್ತದೆ. ಈ ರೀತಿಯಲ್ಲಿ ನೀವು ಕೈಗೊಂಡ ನಿರ್ಧಾರಗಳ ಹಿಂದಿನ ಎಲ್ಲಾ ಘಟನೆಗಳನ್ನು ಮೆಲುಕು ಹಾಕಿ ನೋಡಿದರೆ ನೀವು ತರುವಂತಹ ಯಾವುದೇ ಯೋಜನೆಯು ಸಾಮಾನ್ಯ ಜನವರ್ಗಕ್ಕೆ ಅನುಕೂಲವಾಗುವುದಿಲ್ಲ ಇದಕ್ಕೆ ಉದಾಹರಣೆ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನೀವು ತಂದ ಬದಲಾವಣೆಗಳನ್ನು ಎಲ್ಲರೂ ಗಮನಿಸಿದ್ದಾರೆ. ಇದರಿಂದಾಗಿ ಎಷ್ಟೋ ಅತಿಥಿ ಉಪನ್ಯಾಸಕರು ತಮ್ಮ ಕೆಲಸವನ್ನು ಕಳೆದುಕೊಂಡು ಈಗ ಅವರೆಲ್ಲ ನಿರುದ್ಯೋಗಿಗಳಾಗಿದ್ದಾರೆ. ಯಾವುದೇ ಒಂದು ರಾಷ್ಟ್ರದ ಹಾಗು ರಾಜ್ಯದ ಸರ್ಕಾರದ ಉದ್ದೇಶ ಗುರಿ ಮತ್ತು ನೀತಿಗಳು ಯಾವಾಗಲೂ ಜನಪರವಾಗಿದ್ದು ಸಮಾಜ ಮತ್ತು ಆರ್ಥಿಕತೆಯಲ್ಲಿ ಉದ್ಯೋಗಾವಕಾಶಗಳನ್ನು ಸೃಜನೆ ಮಾಡುವಂತಹ ಮನೋಸ್ಥಿತಿಯನ್ನು ಹೊಂದಿರಬೇಕೆ ವಿನಃ ಇರುವಂತಹ ಉದ್ಯೋಗಾವಕಾಶಗಳನ್ನು ಕಿತ್ತು ಕೊಳ್ಳುವಂತಹ, ವಿಲೀನ ಮಾಡುವಂತಹ ಯೋಜನೆಗಳಿಗೆ ಮುಂದಾಗಬಾರದು. ಇದರಿಂದಾಗಿ ಯುವ ಜನತೆ ಶಿಕ್ಷಣದತ್ತ ನಕರಾತ್ಮಕವಾದ ಮನೋಭಾವವನ್ನು ಬೆಳೆಸಿಕೊಳ್ಳುವಂತಹ ಅನಿವಾರ್ಯ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ. ಇದು ಒಂದು ರಾಜ್ಯಕ್ಕೆ ಮಾರಕವೇ ವಿನಃ ಪೂರಕವಲ್ಲ ಈ ಮೇಲಿನ ಉದ್ದೇಶದಂತೆಯೆ ಘನತವೆತ್ತ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ ಎನ್ ಅಶ್ವಥ್ ನಾರಾಯಣ್ರವರು ರಾಜ್ಯದ ಪ್ರಥಮ ದರ್ಜೆ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರಿಗೆ ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರತಿ ಕಾಲೇಜಿನಲ್ಲೂ 1500 ರಿಂದ 2000 ವಿದ್ಯಾರ್ಥಿಗಳು ಇರುವಂತೆ ನೋಡಿಕೊಳ್ಳುವುದು ಪ್ರಾಂಶುಪಾಲರ ಹೊಣೆ ಎಂದು ಹೇಳುತ್ತಾ ಒಂದು ವರಧಿಯಂತೆ 84 ಸರ್ಕಾರಿ ಕಾಲೇಜುಗಳಲ್ಲಿ ಶೇಕಡ ನೂರರಷ್ಟು, 115 ಕಾಲೇಜುಗಳಲ್ಲಿ ಶೇಕಡ ನಲವತ್ತರಷ್ಟು ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ 2022-2021 ರ ವರದಿಯ ಪ್ರಕಾರ 134 ಸರ್ಕಾರಿ ಹಾಗು 407 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆಯನ್ನು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಹೋಲಿಕೆ ಮಾಡಿ ನೋಡಿದರೆ ಶೇಕಡ 300 ರಷ್ಟು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕದಲ್ಲಿ ಹೆಚ್ಚಾಗಿರುವುದು ಕಂಡುಬರುತ್ತದೆ. ಒಂದು ಇಂಜಿನಿಯರಿಂಗ್ ಕಾಲೇಜಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ದನದ ತೊಟ್ಟಿಯಂತೆ ನಿರ್ವಹಣೆ ಮಾಡುವುದರ ಜೊತಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಿಗೆ ಸೇರುವಂತೆ ಮಾಡುವ ಮೂರ್ಖರು ಯಾರು? ನಿಮ್ಮದೇ ಸರ್ಕಾರವಲ್ಲವೇ. ನಾಯಿಕೊಡೆಯಂತೆ ರಾಜ್ಯದಾದ್ಯಂತ ಹಬ್ಬಿಕೊಂಡಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮೇಲೆ ನಿಯಂತ್ರಣ ಹೇರದೆ ಸರ್ಕಾರಿ ಕಾಲೇಜುಗಳ ಮೇಲೆ ಹಿಡಿತ ಸಾಧಿಸಲು ನಿಮಗೆ ಯಾವ ನೈತಿಕತೆ ಇದೆ. ಪ್ರತಿಯೊಂದು ಜಿಲ್ಲಾ ಹಾಗು ತಾಲೂಕು ಮಟ್ದದಲ್ಲಿ ಅಲ್ಲಿನ ರಾಜಕಾರಣಿಗಳದ್ದೇ ಒಂದು ಎರಡು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಿಕೊಂಡು ಅದರಿಂದ ಬಡವರ ರಕ್ತ ಹೀರುತ್ತಿರುವ ನೀವು ಸರ್ಕಾರಿ ಕಾಲೇಜುಗಳ ಮೇಲೆ ಹಿಡಿತ ಸಾಧಿಸುತ್ತೀರಿ. ಅದೇ ಖಾಸಗಿ ಕಾಲೇಜುಗಳಿಗೆ ಎಷ್ಟು ಬೇಕಾದರೂ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅನುಮತಿ ನೀಡುತ್ತೀರಿ ಅದರ ಬದಲು ಖಾಸಗಿ ಕಾಲೇಜುಗಳ ಮೇಲೆ ವಿದ್ಯಾರ್ಥಿಗಳ ಪ್ರವೇಶಕ್ಕೆ ನಿಯಂತ್ರಣ ಹೇರಿದ್ದರೆ ಆಗ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ಸೇರುತ್ತಿದ್ದರು ಇಂತಹ ದ್ವಂದ್ವ ನೀತಿಯಿಂದಾಗಿ ಇಂದು ಕೇವಲ ಇಂಜಿನಿಯರಿಂಗ್ ಕಾಲೇಜುಗಳಲ್ಲದೆ ಎಲ್ಲಾ ರೀತಿಯ ಶೈಕ್ಷಣಿಕ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಮೊದಲು ಸರ್ಕಾರಿ ಕಾಲೇಜುಗಳಿಗೆ ಬೇಕಾದ ಮೂಲಭೂತ ಅವಶ್ಯಕತೆ ಗಳನ್ನು ದೊರಕಿಸಿಕೊಡಿ ನಂತರ ವಿದ್ಯಾರ್ಥಿಗಳನ್ನು ಸರ್ಕಾರಿ ಕಾಲೇಜುಗಳಿಗೆ ಸೇರುವಂತೆ ಮನವೊಲಿಸುವ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ದೊರೆಯುವ ಉತ್ತಮ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ ಈ ರೀತಿಯ ಮಾರ್ಪಾಟು ಮಾಡದೆ ಕೇವಲ ಬೋಧಕರ ಮೇಲೆ ಒತ್ತಡ ಏರುವುದು ಒಬ್ಬ ಶಿಕ್ಷಣ ಸಚಿವರ ಅಸಮರ್ಥತೆಯನ್ನು ಬಿಂಬಿಸುತ್ತದೆ ವಿನಹ ಸಮರ್ಥತೆಯನ್ನು ಪ್ರತಿನಿಧಿಸುವುದಿಲ್ಲ. ಈಗಾಗಿ ಪ್ರಸ್ತುತ ಕರ್ನಾಟಕದ ಶೈಕ್ಷಣಿಕ ವಲಯವು ಅಡ್ಡಕತ್ತರಿಯಲ್ಕಿ ಸಿಕ್ಕಿಕೊಂಡಿದ್ದು ತನ್ನ ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಪ್ರಜ್ಞಾವಂತ ಶೈಕ್ಷಣಿಕ ತಜ್ಞರು, ಬುದ್ದಿಜೀವಿಗಳು ಇಂದಿನ ಸರ್ಕಾರಕ್ಕೆ ಹಾಗು ಶಿಕ್ಷಣ ಸಚಿವರಿಗೆ ಕಿವಿ ಹಿಂಡಬೇಕಾದ ಕೆಲಸವನ್ನು ಅತ್ಯಂತ ಜರೂರಾಗಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಈಗಾಗಲೇ ಕೊರೋನಾ ಹಾವಳಿಯಿಂದ ಹಲವು ವಿದ್ಯಾವಂತ ವರ್ಗ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದೆ. ಇಂತಹ ಸಂಧರ್ಭದಲ್ಲಿ ರಾಜಕೀಯ ಹಾಗು ಸ್ವಜನ ಪಕ್ಷಪಾತವನ್ನು ಮರೆತು ಎಲ್ಲರೂ ಒಕ್ಕೊರಲನಿಂದ ಸರ್ಕಾರಕ್ಕೆ ತಿಳಿ ಹೇಳಬೇಕಾದ ಪರಿಸ್ಥಿತಿಯಿದ್ದು ಈಗ ಏನಾದರೂ ಅಸಡ್ಡೆ ತೋರಿದರೆ ಇನ್ನೂ ಮುಂದಿನ ದಿನಗಳಲ್ಲಿ ಸಮಸ್ಯೆಯು ಹೆಚ್ಚಿನ ಗಂಬೀರ ಪರಿಣಾಮವನ್ನು ರಾಜ್ಯವು ಎದುರಿಸಬೇಕಾದ ಪರಿಸ್ಥಿತಿಗೆ ಬರಬಲ್ಲದು ಎಂಬುದರಲ್ಲಿ ಸಂಶಯವಿಲ್ಲ. ಲೇಖನ : ದಿವಾಕರ್. ಡಿ ಮಂಡ್ಯ Email: dvkrd1212@gmail.com
ಭಾರತ ಸೇನೆಯಲ್ಲಿ ಯುವಕರಿಗೆ ವಿಪುಲ ಅವಕಾಶ -ಡಾ| ಹೆರಾಲ್ಡ್ ಐವನ್ ಮೋನಿಸ್
Posted On: 26 Jul 2022, 01:14 PM
ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ 23ನೇ ಕಾರ್ಗಿಲ್ ವಿಜಯ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು. ನಮ್ಮ ಭಾರತಾಂಬೆಯ ರಕ್ಷಕರು ವೀರಯೋಧರರು. ಆಂತರಿಕ ಮತ್ತು ಬಾಹ್ಯ ರಾಷ್ಟ್ರ ಭದ್ರತೆಯನ್ನು ಯಶಸ್ವಿಯಾಗಿ ಕಾಪಾಡಲು ಸೇನಾ ತನ ನೆಲೆಯಲ್ಲಿ ತನ್ನ ಹದ್ದಿನ ಕಣ್ಣಿನ ಹಾಗೆ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ಸೈನಿಕರ ಸಾಹಸ ಮತ್ತು ಪ್ರಾಣ ತ್ಯಾಗ ಅವಿ ಸ್ಮರಣೀಯ. ಇಂದು ಯುವಕರು ನಮ್ಮ ದೇಶದ ಬೆಲೆ ಕಟ್ಟಲಾಗದ ಆಸ್ತಿ, ಹಾಗೂ ಶಿಸ್ತು ಬದ್ಧವಾದ ಜೀವನ ಅವರದಾಗಿದೆ. ದೇಶಕ್ಕೆ ಬಹು ದೊಡ್ದ ಕೊಡುಗೆ ಇವರ ಸೇವೆಯಲ್ಲಿ ಅವರ ಮನೆಯವರ ತ್ಯಾಗವು ಮಹತ್ವಪೂರ್ಣವಾದುದು. ಯಶಸ್ವಿನ ಉಪಾದಿಯನ್ನು ಪಡೆಯಲು ಯುವಕರಿಗೆ ಇಂದು ಸೇನಾ ನೆಲೆಯಲ್ಲಿ ಅನೇಕ ಅವಕಾಶಗಳಿವೆ ,ಉದಾಹರಣೆಗೆ ಎನ್.ಸಿ.ಸಿ ಮಾರ್ಗಗಳಿಂದ ದೇಶ ಸೇವೆ ಮಾಡಲು ಕೆಡೆಟ್ಗಳು ಮುಂದಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ,ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಭಾವಚಿತ್ರಕ್ಕೆ ನುಡಿ ನಮನ ಸಲ್ಲಿಸಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿಸಿದರು ಮತ್ತು ಶುಭ ಹಾರೈಸಿದರು. ಆಕ್ರಮಣಕಾರಿ ಶತ್ರುಗಳ ವಿರುದ್ಧ ವಿಜಯ ಸಾಧಿಸಲು ಮುಂಚೂಣಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರ ಜೀವನವನ್ನು ಗೌರವಿಸಲು ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. ಜುಲೈ 26 ರಂದು ಭಾರತೀಯ ಸೇನೆಯು ಪಾಕಿಸ್ತಾನದ ಸೇನೆಯು ಆಕ್ರಮಿಸಿಕೊಂಡಿದ್ದ ಎಲ್ಲಾ ಭಾರತೀಯ ಪೋಸ್ಟ್ಗಳನ್ನು ವಶಪಡಿಸಿಕೊಂಡಿತು. ಅಂದಿನಿಂದ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಶ್ರಮ ಮತ್ತು ತ್ಯಾಗವನ್ನು ಸ್ಮರಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಜೂನಿಯರ್ ಅಂಡರ್ ಆಫೀಸರ್ ಹರ್ಷಿತ ಈ ದಿನದ ಪ್ರಾಮುಖ್ಯತೆಯನ್ನು ಮತ್ತು ಉದ್ದೇಶವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೂಡಬಿದ್ರೆಯ ಮಹಾವೀರ ಕಾಲೇಜಿನಲ್ಲಿ ನಡೆದ ಥಾಲ್ ಸೈನಿಕ್ ತರಬೇತಿಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜಿನ ಕಿತಿ೯ಯನ್ನು ಉಜ್ವಲ ಗೊಳಿಸಿದ ವಿಜೇತರಾದ ಕೆಡೆಟ್ ಮೋಹಿತ ಎನ್ ಸಾಲಿಯಾನ, ಆಶಿಶ್ ಪ್ರಸಾದ್, ಧೀರಜ್ ಆಚಾರ್ಯ, ಪೂಜಾ, ವಾಣಿ ಯೂ ಸಾಲಿಯಾನ್, ಹುಲಿದ್ರ ಖುಷಿ, ಸೋನಾಲಿ ಕುಲಾಲ್, ಶೆಟ್ಟಿಗಾರ್ ಹೇಮಶ್ರೀ ಸುದರ್ಶನ್, ಆಶಿಕಾ, ಸುಶ್ಮಿತಾ ಎಸ್ ಅಮೀನ್, ಪ್ರಿಯಾಂಕ ಇವರನ್ನುಅಭಿನಂದಿಸಲಾಯಿತು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಯಶೋದಾ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎಲ್ಲಾ ಕೆಡೆಟ್ಗಳು ಉಪಸ್ಥಿತರಿದ್ದರು.ಕೆಡೆಟ್ ಅಲಿಸ್ಟರ್ ಸುಜಾಯ್ ಡಿಸೋಜಾ ಮತ್ತು ಅರುಣ್ ಸಹಕರಿಸಿದರು. ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ ಸರ್ವರನ್ನೂ ಸ್ವಾಗತಿಸಿ , ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ ವಂದಿಸಿದರು. ಕೆಡೆಟ್ ವರ್ಷಿತ ಮತ್ತು ಬಳಗ ಪ್ರಾರ್ಥಿಸಿ, ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾಪು : ಶೀನ ದೇವಾಡಿಗ ನಿಧನ
Posted On: 25 Jul 2022, 11:27 PM
ಕಾಪು : ಪರಿಸರದಲ್ಲಿ ಉತ್ತಮ ಕಾರ್ಯವೈಖರಿಯ ವ್ಯಕ್ತಿತ್ವದ ಶೀನ ದೇವಾಡಿಗ ಜುಲೈ 25ರಂದು ಹೃದಯಾಘಾತದಿಂದ ನಿಧನರಾದರು. ಉಡುಪಿ ಜಿಲ್ಲಾ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೊಗೀಶ್ ಶೆಟ್ಟಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
ಹೆದ್ದಾರಿ ಹೊಂಡ ಮುಚ್ಚದಿದ್ದಲ್ಲಿ ವಿನೂತನ ರೀತಿಯ ಪ್ರತಿಭಟನೆ - ೧೦ ದಿನಗಳ ಗಡುವು : ಕಾಪು ಬ್ಲಾಕ್ ಯುವ ಕಾಂಗ್ರೆಸ್
Posted On: 25 Jul 2022, 10:31 PM
ಪಡುಬಿದ್ರಿ: ಉಡುಪಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಹೊಂಡಗಳು ಉಂಟಾಗಿರುವುದರಿಂದ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದೆ. ಹೆದ್ದಾರಿಯಲ್ಲಿ ಉಂಟಾಗಿರುವ ಈ ಹೊಂಡಗಳನ್ನು ಮುಚ್ಚಲು ೧೦ ದಿನಗಳ ಗಡುವು ನೀಡಲಾಗುವುದು. ಇಲ್ಲದಿದ್ದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ೬೬ ಹೆಜಮಾಡಿಯಿಂದ ಉದ್ಯಾವರದವರೆಗೆ ವಿನೂತನ ರೀತಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಎಚ್ಚರಿಸಿದೆ. ಈ ಮಳೆಗಾಲ ಆರಂಭದಿಂದ ಇದುವರೆಗೆ ಹಲವಾರು ಅಪಘಾತಗಳು ನಡೆದಿದ್ದು, ಹೆಚ್ಚಿನ ಅಪಘಾತಗಳು ಹೊಂಡ ತಪ್ಪಿಸಲು ಹೋಗಿ ನಡೆದಿದೆ. ಅಲ್ಲದೆ ಈ ಅಪಘಾತಗಳಲ್ಲಿ ಹೆಚ್ಚಿನ ಸಾವು ನೋವು ಉಂಟಾಗಿದೆ. ಮೂರು ಮೂರು ಕಡೆ ಟೋಲ್ ಪಾವತಿಸಿಯೂ ಹೊಂಡಗಳಿಗೆ ಮುಕ್ತಿ ನೀಡದೆ ಇರುವುದು ದುರಾದೃಷ್ಟ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರವು ಎಚ್ಚೆತ್ತು ಕೂಡಲೇ ಹೊಂಡಗಳನ್ನು ಮುಚ್ಚಿಸಿ ಅಮಾಯಕ ವಾಹನ ಸವಾರರ ಜೀವ ರಕ್ಷಿಸುವಂತೆ ಯುವಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಆಗ್ರಹಿಸಿದ್ದಾರೆ.
ಪಡುಬಿದ್ರಿ : ಅನಧಿಕೃತ ಅಪಾಯಕಾರಿ ಗ್ಯಾಸ್ ಗೋಡೌನ್ ತೆರವಿಗೆ ಪ್ರತಿಭಟನೆ ; ತಹಶಿಲ್ದಾರರಿಂದ ತೆರವಿನ ಭರವಸೆ
Posted On: 25 Jul 2022, 09:55 PM
ಪಡುಬಿದ್ರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದ ಗ್ರಾಮ ಶಾಖೆ ಪಡುಬಿದ್ರಿ ಇದರ ವತಿಯಿಂದ ಪಡುಬಿದ್ರಿಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಅಪಾಯಕಾರಿ ಗ್ಯಾಸ್ ಗೋಡೌನನ್ನು ತೆರವುಗೊಳಿಸಲು ಬ್ರಹತ್ ಪ್ರತಿಭಟನೆ ಹಾಗೂ ಧರಣಿ ಜುಲೈ 25ರಂದು ಜರುಗಿತು. ಪಡುಬಿದ್ರಿ ಪಾದೆಬೆಟ್ಟು ಗ್ರಾಮದಲ್ಲಿ ಪಂಚಾಯತ್ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿರುವ ಅಪಾಯಕಾರಿ ಗ್ಯಾಸ್ ಗೋಡೌನನ್ನು ತೆರವುಗೊಳಿಸಿ ದಲಿತ ಕುಟುಂಬಗಳನ್ನು ಹಾಗೂ ಪಾದೆಬೆಟ್ಟು ಗ್ರಾಮಸ್ಥರನ್ನು ಅಪಾಯದಿಂದ ರಕ್ಷಿಸುವಂತೆ ಒತ್ತಾಯಿಸಿ ಪಾದೆಬೆಟ್ಟು ಎಸ್.ಸಿ.ಕಾಲೊನಿಯಿಂದ ಪಡುಬಿದ್ರಿ ಪಂಚಾಯತ್ ತನಕ ಜಾಥಾ ಹೊರಟು ಪಂಚಾಯತ್ ವಠಾರದಲ್ಲಿ ಧರಣಿ ಕುಳಿತುಕೊಳ್ಳಲಾಯಿತು. ಸ್ಥಳಕ್ಕೆ ಕಾಪು ತಹಶಿಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣ, ಪಿಡಿಒ ಪಂಚಾಕ್ಷರಿ ಹಿರೆಮಠ್, ಪಡುಬಿದ್ರಿ ಗ್ರಾಮ ಪಂಚಾಯತಿ ಅಧ್ಯಕ್ಷ ರವಿಶೆಟ್ಟಿ ಧರಣಿ ನಿರತರೊಂದಿಗೆ ಮಾತುಕತೆ ನಡೆಸಿದರು. ದ.ಸ.ಅಂ ಅಧ್ಯಕ್ಷರು ಮನವಿ ಕೊಟ್ಟು ಆದಷ್ಟು ಶೀಘ್ರವಾಗಿ ಅಲ್ಲಿಂದ ಗೋಡೌನನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಹಶಿಲ್ದಾರರು ಕಾನೂನು ಚೌಕಟ್ಟಿನೊಳಗೆ ಏನು ಮಾಡಲು ಸಾಧ್ಯವಿದೆ ಎಂದು ನೋಡಿ ಆದಷ್ಟು ಬೇಗ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು.
ಉಡುಪಿ ಜೆಡಿಎಸ್ ಸಾಂಸ್ಥಿಕ ಚುನಾವಣೆಯ ಪಟ್ಟಿ ಹಸ್ತಾಂತರ
Posted On: 25 Jul 2022, 09:45 PM
ಉಡುಪಿ : ಜಿಲ್ಲೆಯ ಜೆಡಿಎಸ್ ಪಕ್ಷದ ಸಾಂಸ್ಥಿಕ ಚುನಾವಣೆಯ ಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಯಾದ ಎಂ.ಸಿ.ನೀರಾವರಿಯವರಿಗೆ ಇತ್ತೀಚೆಗೆ ಬೆಂಗಳೂರು, ರಾಜ್ಯ ಪಕ್ಷ ಕಚೇರಿಯಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಚುನಾವಣಾಧಿಕಾರಿಯಾದ ಜಯರಾಮ ಆಚಾರ್ಯ ರವರಿಂದ ಹಸ್ತಾಂತರಿಸಿದರು.
ಕಾಪು ಹರೀಶ್ ನಾಯಕ್ ಅವರಿಗೆ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯಿಂದ ಸನ್ಮಾನ
Posted On: 25 Jul 2022, 09:31 PM
ಉಚ್ಚಿಲ : ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಆಶ್ರಯದಲ್ಲಿ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟನಾ ಕಾರ್ಯಕ್ರಮ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಂಕೀರ್ಣದ ಮಾಧವಮಂಗಳ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಈ ಕಾರ್ಯಕ್ರಮದ ಜವಾವ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾಪು ಹರೀಶ್ ನಾಯಕ್ ಅವರನ್ನು ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಭಾರತ ಸರಕಾರದ ನ್ಯಾಶನಲ್ ಬ್ಯಾಂಕ್ ಆಫ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ನ ಅಧ್ಯಕ್ಷರಾದ ಪದ್ಮಭೂಷಣ ಕೆ.ವಿ ಕಾಮತ್ ಬೆಳ್ಳಿಯ ಶಂಖದ ಗೌರವದೊಂದಿಗೆ ಸನ್ಮಾನಿಸಿದರು. ಈ ಸಂದರ್ಭ ಮುಂಬಯಿಯ ಖ್ಯಾತ ಸುಪ್ರೀಂ ಕೋರ್ಟ್ ವಕೀಲರಾದ ರವಿಚಂದ್ರ ಕಿಣಿ, ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್ಸ್ ಪ್ರೈವೆಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕರಾದ ಪಿ ರವೀಂದ್ರ ದಯಾನಂದ ಪೈ, ಉಡುಪಿಯ ಅನಂತ ವೈದಿಕ ಕೇಂದ್ರದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್, ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಪ್ರೈವೆಟ್ ಲಿಮಿಟೆಡ್ ಮೈಸೂರು ಇದರ ಪಾಲುದಾರರಾದ ಗೋವಿಂದ ಜಗನ್ನಾಥ ಶೆಣೈ, ಅಮೇರಿಕದ ವಾಷಿಂಗ್ಟನ್ ಡಿಸಿಯ ಇಂಡಿಯನ್ ಸಿಎ ಎಸೋಸಿಯೇಷನ್ ನ ಸ್ಥಾಪಕಾಧ್ಯಕ್ಷರು, ಹಾಗೂ ವಿಶ್ವ ಬ್ಯಾಂಕ್ ನ ಕಾರ್ಯನಿರ್ವಾಹಕರಾಗಿರುವ ಸಿಎ ಗೋಕುಲ್ದಾಸ್ ಪೈ, ಮುಂಬಯಿ ನ್ಯಾಚುರಲ್ ಐಸ್ ಕ್ರೀಂನ ಆಡಳಿತ ನಿರ್ದೇಶಕರಾದ ರಘುನಂದನ್ ಎಸ್. ಕಾಮತ್, ಮುಂಬಯಿಯ ಎಮ್.ವಿ. ಕಿಣಿ ಲಾ-ಫರ್ಮ್ ನ ಸಂಸ್ಥಾಪಕರಾದ ಖ್ಯಾತ ಸುಪ್ರೀಂ ಕೋರ್ಟ್ ನ ವಕೀಲರಾದ ಮಣಿಪುರ ವಸಂತ ಕಿಣಿ, ಭಾರತ ಸರಕಾರದ ನ್ಯಾಶನಲ್ ಬ್ಯಾಂಕ್ ಆಫ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ನ ಅಧ್ಯಕ್ಷರಾದ ಪದ್ಮಭೂಷಣ ಕೆ.ವಿ ಕಾಮತ್, ಎಂ ವಿ ಕಿಣಿ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಇದರ ವಿಶ್ವಸ್ಥರಾದ ರತ್ನಾಕರ ಕಾಮತ್, ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಪಿ ರಾಮಚಂದ್ರ ಶೆಣೈ, ಕಾರ್ಗಿಲ್ ಹುತಾತ್ಮ ಲೆ|ಕ|ಶೌರ್ಯಚಕ್ರ ಪುರಸ್ಕೃತ ಅಜಿತ್ ವಿ ಭಂಡಾರ್ಕಾರ್ ರವರ ಧರ್ಮಪತ್ನಿ ಶಕುಂತಲಾ ಎ. ಭಂಡಾರ್ಕಾರ್, ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಹಳೆ ಮಾರಿಗುಡಿಯ ಆಡಳಿತ ಮೊಕ್ತೇಸರರಾದ ಶ್ರೀ ಪ್ರಸಾದ ಶೆಣೈ, ರಾಯಚೂರಿನ ಹೆಸರಾಂತ ಲೆಕ್ಕ ಪರಿಶೋಧಕರಾದ ಉಪ್ಪುಂದ ರಾಮಚಂದ್ರ ಪ್ರಭು, ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷರಾದ ಜಿ. ಸತೀಶ್ ಹೆಗ್ಡೆ ಕೊಟ, ಸಿಎ ಎಸ್ ಎಸ್ ನಾಯಕ್, ವಿಜಯಕುಮಾರ್ ಶೆಣೈ, ಸಿಎ ಗೋಪಾಲಕೃಷ್ಣ ಭಟ್, ಮುರಳೀದರ ಜಿ ಶೆಣೈ, ಸಾಣೂರು ನರಸಿಂಹ ಕಾಮತ್, ಸಿಎ ಎಸ್ ಎಸ್ ನಾಯಕ್ ಉಪಸ್ಥಿತರಿದ್ದರು.
ಪಲಿಮಾರು : ಬಿಜೆಪಿ ವತಿಯಿಂದ ಆಟಿಡೊಂಜಿ ಕಮಲ ಕೂಟ
Posted On: 25 Jul 2022, 12:18 AM
ಪಲಿಮಾರು : ಇಲ್ಲಿನ ಬಿಜೆಪಿ ಹಿಂದುಳಿದ ವರ್ಗ ಮೋರ್ಚ, ಪಲಿಮಾರು ಮತ್ತು ನಂದಿಕೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆಟಿಡೊಂಜಿ ಕಮಲ ಕೂಟ ಕಾರ್ಯಕ್ರಮ ಪಲಿಮಾರಿನಲ್ಲಿ ನಡೆಯಿತು. ಕಾಪು ಮಂಡಲ ಹಿಂದುಳಿದ ವರ್ಗ ಮೋರ್ಚ ಅಧ್ಯಕ್ಷರಾದ ಸಂತೋಷ್ ಮೂಡುಬೆಳ್ಳೆ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಹಿಂದುಳಿದ ವರ್ಗ ಮೋರ್ಚ ಅಧ್ಯಕ್ಷರಾದ ನೆ ಲ ನರೇಂದ್ರ ಬಾಬು, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶ ನಾಯಕ್, ರಾಜ್ಯ ಮಹಿಳಾಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಮಹಿಳಾಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಜಿಲ್ಲಾ ಹಿಂದುಳಿದ ವರ್ಗ ಮೋರ್ಚ ಅಧ್ಯಕ್ಷರಾದ ಸುರೇಂದ್ರ ಪಣಿಯೂರು, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಪಲಿಮಾರು ಶಕ್ತಿಕೇಂದ್ರ ಪ್ರಮುಖರಾದ ಗಾಯತ್ರಿ ಪ್ರಭು, ಸೌಮ್ಯಲತಾ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚ ವಕ್ತಾರರಾದ ವಿಠ್ಠಲ ಪೂಜಾರಿ, ಕಾಪು ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಕಾಪು ಯುವಮೋರ್ಚ ಅಧ್ಯಕ್ಷರಾದ ಸಚಿನ್ ಸುವರ್ಣ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮತ್ತಿತರರು ಉಪಸ್ಥಿತರಿದ್ದರು. ರವಿ ಕೋಟ್ಯಾನ್ ಉದ್ಯಾವರ ಹಾಗೂ ಕಾಪು ಮಂಡಲ ಹಿಂದುಳಿದ ವರ್ಗ ಮೋರ್ಚ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪಲಿಮಾರು ಕಾರ್ಯಕ್ರಮ ನಿರೂಪಿಸಿದರು. ಆಟಿ ವಿಶಿಷ್ಟತೆ ಹಾಗೂ ಪಕ್ಷದ ವಿಚಾರಗಳ ಬಗ್ಗೆ ಮಾತನಾಡಲಾಯಿತು. ಸುಮಾರು 45 ಜನ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು.
