Updated News From Kaup
ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್ನಿಂದ ಖಾಲಿ ಕಮರ್ಷಿಯಲ್ ಸಿಲಿಂಡರ್ ಗೆ ಕೃತಕವಾಗಿ ತುಂಬಿಸಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಪೋಲಿಸ್ ಧಾಳಿ ; ಆರೋಪಿ ಪರಾರಿ
Posted On: 07 Feb 2022, 10:51 PM
ಮಂಗಳೂರು : ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿನ ನಿವಾಸಿ ಫ್ರಾನ್ಸಿಸ್ ಎಂಬವರು ತನ್ನ ವಾಸದ ಮನೆಗೆ ತಾಗಿಕೊಂಡು ತಗಡು ಶೀಟಿನಿಂದ ನಿರ್ಮಿಸಿದ ಕೋಣೆಯಲ್ಲಿ ತುಂಬಿದ ಅಡುಗೆ ಅನಿಲದ (ಡೊಮೆಸ್ಮಿಕ್) ಸಿಲಿಂಡರ್ ನಿಂದ ಖಾಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಗೆ ತಾನೇ ಕೃತಕವಾಗಿ ರೆಗ್ಯುಲೇಟರ್ ಮುಖೇನ ತುಂಬಿಸಿ ಗಿರಾಕಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಹಾಯಕ ಪೊಲೀಸ್ ಆಯುಕ್ತರು, ಮಂದ,ಉ,ವಿಭಾಗ ರವರ ಮಾರ್ಗದರ್ಶನದಲ್ಲಿ ಮಂಗಳೂರು ಗಿರಾಕಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಹಾಯಕ ಪೊಲೀಸ್ ಆಯುಕ್ತರು, ಮಂ,ಉ,ವಿಭಾಗ ರವರ ಮಾರ್ಗದರ್ಶನದಲ್ಲಿ ಮಂಗಳೂರು ತಾಲೂಕು ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂದೀಪ್,ಜಿ.ಎಸ್.ಪೊಲೀಸ್ ಉಪ-ನಿರೀಕ್ಷಕರಾದ ಶಿವಕುಮಾರ್,ಕೆ, ಹಾಗೂ ಸಿಬ್ಬಂದಿಗಳಾದ ಮಹೇಶ, ರೆಜಿ, ಉದಯ, ಸಾಗರ್ ರವರು ಮತ್ತು ಉಳ್ಳಾಲ ವಲಯದ ಆಹಾರ ನಿರೀಕ್ಷಕರಾದ ಹಾರಿಸ್, ಪ್ರಭಾರ ಆಹಾರ ನಿರೀಕ್ಷಕರಾದ ರೇಖ ಹಾಗೂ ಅವರ ತಂಡದವರೊಂದಿಗೆ ಫೆಬ್ರವರಿ 5ರಂದು ಸ್ಥಳಕ್ಕೆ ಗಂಟೆಗೆ ಧಾಳಿ ನಡೆಸಲಾಗಿದೆ. ಆರೋಪಿ ಫ್ರಾನ್ಸಿಸ್ ಎಂಬಾತನು ಸದ್ರಿ ಕೋಣೆಯಲ್ಲಿ ಖಾಲಿ ಗ್ಯಾಸ್ ಸಿಲಿಂಡರ್ನ್ನು ನೆಲದಲ್ಲಿ ಇಟ್ಟು ಅದರ ಮೇಲ್ಗಡೆ ತುಂಬಿದ ಗ್ಯಾಸ್ ಸಿಲಿಂಡರ್ನ್ನು ಕವುಚಿ ಹಾಕಿ ಖಾಲಿ ಗ್ಯಾಸ್ಸಿಲಿಂಡರ್ಗೆ ಪೈಪು ಮುಖೇನ ಕೃತಕವಾಗಿ ತಾನೇ ತುಂಬಿಸುತ್ತಿದ್ದನು ಸ್ಥಳದಿಂದ ಓಡಿ ಪರಾರಿಯಾಗಿದ್ದು, ಸ್ಥಳದಲ್ಲಿ, ದೊರೆತ ವಿವಿಧ ಕಂಪೆನಿಗಳ ಸಣ್ಣ ಹಾಗೂ ದೊಡ್ಡ ಮಾದರಿಯ ಡೊಮೆಸ್ಟಿಕ್ ಹಾಗೂ ಕಮರ್ಷಿಯಲ್ ನ ಗ್ಯಾಸ್ ಒಟ್ಟು ಮೌಲ್ಯ ರೂ.1,92,000 ಹಾಗೂ ಅದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ಫ್ರಾನ್ಸಿಸ್ನು ಎಸಗಿದ ಕೃತ್ಯದ ಕುರಿತು ಆಹಾರ ನಿರೀಕ್ಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಉಳ್ಳಾಲ ಠಾಣಾ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಆರೋಪಿಯ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ.
ಪಾಂಗಾಳ : ಫೆಬ್ರವರಿ 15 ರಂದು ವೈಭವದ ಸಿರಿಜಾತ್ರೆ
Posted On: 07 Feb 2022, 10:33 PM
ಪಾಂಗಾಳ : ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ವೈಭವದ ಸಿರಿಜಾತ್ರೆಯು ಫೆಬ್ರವರಿ 15, ಮಂಗಳವಾರದಂದು ಜರಗಲಿರುವುದು. ಅಂದು ಬೆಳಗ್ಗೆ 11 ಗಂಟೆಗೆ ಧ್ವಜಾರೋಹಣದಿಂದ ಪ್ರಾರಂಭಗೊಂಡು ಮಧ್ಯಾಹ್ನ 12-30 ಕ್ಕೆ ಮಹಾಪೂಜೆ , 12-45 ಕ್ಕೆ ಬ್ರಾಹ್ಮಣ ಸುಹಾಸಿನಿ ಆರಾಧನೆ , ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ. ರಾತ್ರಿ 08:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಟು ರಾತ್ರಿ 09-30 ಕ್ಕೆ ವೈಭವ್ ಬೈಗಿನ ಬಲಿ ನಡೆಯಲಿರುವುದು. ರಾತ್ರಿ 11 ಕ್ಕೆ ಕುಮಾರ ದರ್ಶನ , ರಾತ್ರಿ 1 ಕ್ಕೆ ರಂಗಪೂಜೆ , ರಾತ್ರಿ 2:30 ಕ್ಕೆ ಬ್ರಹ್ಮಮಂಡಲ ,ರಾತ್ರಿ 3:30 ಕ್ಕೆ ಭೂತಬಲಿ , ರಾತ್ರಿ 4:30 ರಿಂದ ತುಲಾಭಾರ ಸೇವೆಗಳು ನಡೆಯಲಿದೆ. ಫೆಬ್ರವರಿ 16, ಬುಧವಾರ ಬೆಳಿಗ್ಗೆ 11ಕ್ಕೆ ಮಹಾಪೂಜೆ ,ಸಂಜೆ 7 ಕ್ಕೆ ತಪ್ಪಂಗಾಯಿ ಬಲಿ , ರಾತ್ರಿ 8:30 ಕ್ಕೆ ದೂಳು ಮಂಡಲ ,ನಂತರ ಭೂತಬಲಿ , ಕವಾಟಬಂಧನ ,ಶಯನೋತ್ಸವ ಫೆಬ್ರವರಿ 17, ಗುರುವಾರ ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ , ನಂತರ ಮಹಾಪೂಜೆ ,ಸಾಯಂಕಾಲ 5ಕ್ಕೆ ಬಲಿ ಹೊರಟು ಕಟ್ಟೆಪೂಜೆ , ಅವಭೃತ ಸ್ನಾನ ನಡೆದು ಧ್ವಜಾವರೋಹಣಗೊಳ್ಳುವುದರ ಮೂಲಕ ಮೂರು ದಿನಗಳ ಗೌಣೋತ್ಸವು ಸಮಾಪ್ತಿಯಾಗುತ್ತದೆ. ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ , ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ , ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ದೇವಸ್ಥಾನದ ಪತ್ರಿಕಾ ಪ್ರಕಟಣೆಯು ತಿಳಿಸಿದೆ.
ಗೂಗಲ್ ಪೇ, ಫೋನ್ ಪೇ ಬಳಸುವವರೇ ಜಾಗೃತರಾಗಿರಿ ಇಂತಹ ಕೆಲಸಗಳನ್ನು ಎಂದಿಗೂ ಮಾಡಬೇಡಿ..!
Posted On: 06 Feb 2022, 10:42 AM
ನೀವು ಫೋನ್ ಪೇ ಬಳಸುತ್ತಿರುವಿರಾ? ಗೂಗಲ್ ಪೇ ಬಳಸುತ್ತೀರಾ? ನೀವು Paytm ಬಳಸುತ್ತೀರಾ..? ಅಗಾದರೆ, ನೀವು ಖಂಡಿತವಾಗಿಯೂ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ತೊಂದರೆಗೆ ಸಿಲುಕುತ್ತೀರಿ. ತಪ್ಪಿದಲ್ಲಿ ಖಾತೆಯಿಂದ ಹಣ ಕಳೆದುಕೊಳ್ಳಬಹುದು. ಹಾಗಾಗಿ ಯುಪಿಐ ಆ್ಯಪ್ ಬಳಸುವವರು ಜಾಗರೂಕರಾಗಿರಬೇಕು. ಆನ್ಲೈನ್ ವಂಚನೆಗಳು ಹೆಚ್ಚುತ್ತಿದ್ದು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ವಂಚನೆಗಳ ಜೊತೆಗೆ ಯುಪಿಐ ವಂಚನೆಗಳೂ ಹೆಚ್ಚುತ್ತಿವೆ. ಆದ್ದರಿಂದ ನೀವು ಎಚ್ಚರಿಕೆಯಿಂದ ಇರಬೇಕು. PhonePay, Google Pay ಮತ್ತು Paytm ನ ಬಳಕೆದಾರರು ಮೋಸದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬಹುದು. ವಂಚಕರು ಸಂದೇಶ ಅಥವಾ WhatsApp ಮೂಲಕ ಇದೇ ರೀತಿಯ ಲಿಂಕ್ಗಳನ್ನು ಕಳುಹಿಸುತ್ತಾರೆ. ಇವುಗಳ ಮೇಲೆ ಕ್ಲಿಕ್ ಮಾಡಬೇಡಿ. ಅಲ್ಲದೆ ವಂಚಕರು ಕರೆ ಮಾಡಿ ಲಕ್ಕಿಡ್ರಾದಲ್ಲಿ ಹಣ ಗೆದ್ದಿರುವುದಾಗಿ ಹೇಳುತ್ತಾರೆ. UPI ಪಿನ್ ನಮೂದಿಸುವುದರಿಂದ ನಿಮ್ಮ ಖಾತೆಗೆ ಹಣ ಬರುತ್ತದೆ ಎಂದು ನಿಮ್ಮನ್ನು ವಂಚಿಸುತ್ತದೆ. ಈ ರೀತಿ ಪಿನ್ ನಮೂದಿಸಿದರೆ.. ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತದೆ. ಜಾಗರೂಕರಾಗಿರಿ. ಹಣವನ್ನು ಕಳುಹಿಸಲು ನೀವು UPI ಪಿನ್ ಅನ್ನು ನಮೂದಿಸುವ ಅಗತ್ಯವಿದೆ. ಹಣ ನೀಡಲು ಯಾವುದೇ ಪಿನ್ ಬಯಸುವುದಿಲ್ಲ. ವ್ಯಕ್ತಿಯು PIN ಅನ್ನು ನಮೂದಿಸಿದ್ದರೆ ನಿಮಗೆ ಹಣವನ್ನು ಕಳುಹಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಬ್ಯಾಂಕಿಂಗ್ ಮತ್ತು ವೈಯಕ್ತಿಕ ವಿವರಗಳನ್ನು ಸಾಮಾಜಿಕ ಮಾಧ್ಯಮ ಅಥವಾ WhatsApp ಮತ್ತು ಇತರ ವಿಧಾನಗಳಲ್ಲಿ ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಂಚಿಕೊಂಡಲ್ಲಿ ಮಾತ್ರ, ನೀವು ಮೋಸ ಹೋಗಬಹುದು. ಅಲ್ಲದೆ ಫೋನ್ನಲ್ಲಿ ರಿಮೋಟ್ ಆಕ್ಸೆಸ್ ಆಪ್ಗಳನ್ನು ಬಳಸಬೇಡಿ. ಇವುಗಳ ಮೂಲಕವೂ ಹಲವು ಹಗರಣಗಳು ನಡೆದಿವೆ. ಆದ್ದರಿಂದ ನೀವು ಮೋಸಹೋಗುವ ಅಪಾಯವನ್ನು ಸಹ ಎದುರಿಸುತ್ತೀರಿ. ಇಂತಹ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು, ಸ್ಕ್ರೀನ್ ಲಾಕ್ ಮಾಡಬೇಕು. ಫೋನ್ ಮಾತ್ರವಲ್ಲದೆ ಹಣಕಾಸು ಆಪ್ ಗಳನ್ನೂ ಲಾಕ್ ಮಾಡುವುದು ಒಳ್ಳೆಯದು. ನಿಮ್ಮ ಪಿನ್ ವಿವರಗಳನ್ನು ಇನ್ನೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಲ್ಲದೆ ನಕಲಿ ಕರೆಗಳಿಗೆ ಪ್ರತಿಕ್ರಿಯಿಸಬೇಡಿ. ನಕಲಿ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ. UPI ಅಪ್ಲಿಕೇಶನ್ಗಳನ್ನು ಕಾಲಕಾಲಕ್ಕೆ ನಿಯಮಿತವಾಗಿ ನವೀಕರಿಸಬೇಕು. ಬಹು ಪಾವತಿ ಅಪ್ಲಿಕೇಶನ್ಗಳಿಗೆ ಇನ್ನೂ ಬಳಸಬೇಡಿ. ನಿಮ್ಮ ಫೋನ್ನಲ್ಲಿ ವಿಶ್ವಾಸಾರ್ಹ ಅಪ್ಲಿಕೇಶನ್ಗಳನ್ನು ಮಾತ್ರ ಸ್ಥಾಪಿಸಿ.
ಕ್ಯಾನ್ಸರ್ ಆರಂಭದಲ್ಲೇ ಪತ್ತೆ ಹಚ್ಚಿದರೆ ಗುಣಮುಖರಾಗಲು ಸಾಧ್ಯ : ಸುಮಿತ್ರಾ ನಾಯಕ್
Posted On: 06 Feb 2022, 10:23 AM
ಉಡುಪಿ : ಕ್ಯಾನ್ಸರ್ನ ಲಕ್ಷಣಗಳ ಬಗ್ಗೆ ಅರಿತುಕೊಂಡು, ಖಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದಲ್ಲಿ, ಕ್ಯಾನ್ಸರ್ನಿಂದ ಗುಣಮುಖವಾಗಲು ಸಾಧ್ಯವಿದೆ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದರು. ಅವರು ಇಂದು, ಅಜ್ಜರಕಾಡು ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಸ್ಪತ್ರೆ (ಎನ್.ಸಿ.ಡಿ ವಿಭಾಗ), ಜಿಲ್ಲಾ ಸರ್ವೇಕ್ಷಣಾ ಘಟಕ (ಎನ್.ಸಿ.ಡಿ&ಎನ್.ಟಿ.ಸಿ.ಪಿ ಘಟಕ), ದಂತ ವೈದ್ಯಕೀಯ ವಿಭಾಗ ಜಿಲ್ಲಾ ಆಸ್ಪತ್ರೆ, ಭಾರತೀಯ ದಂತ ವೈದ್ಯಕೀಯ ಮಂಡಳಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ, ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಹಯೋಗದಲ್ಲಿ ನಡೆದ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಯಾನ್ಸರ್ ಬಂದರೆ ಅವರ ಜೀವನ ಕೊನೆಯಾಯಿತು ಎಂಬ ಭಾವನೆ ಇದೆ. ಆದರೆ ಎಲ್ಲಾ ಕ್ಯಾನ್ಸರ್ ಮಾರಣಾಂತಿಕವಲ್ಲ. ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ, ಗುಣಮುಖರಾಗಲು ಸಾಧ್ಯವಿದೆ. ಸಾರ್ವಜನಿಕರಿಗೆ ಕ್ಯಾನ್ಸರ್ನ ಲಕ್ಷಣಗಳ ಬಗ್ಗೆ ಸಂಪೂರ್ಣ ಅರಿವು ಹಾಗೂ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಿದೆ. ಆರೋಗ್ಯಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ನಗರಸಭೆ ಆಧ್ಯಕ್ಷರು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ, ಜಿಲ್ಲೆಯ ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಗಳ ಸಹಕಾರದಿಂದ ಜಿಲ್ಲೆಯಾದ್ಯಂತ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲಾಗುವುದು. ಕ್ಯಾನ್ಸರ್ ಖಾಯಿಲೆಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಖಾಯಿಲೆಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದರಿಂದ, ರೋಗ ಉಲ್ಬಣವಾಗುವುದನ್ನು ತಡೆಯಲು ಮತ್ತು ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಜಾಗೃತಿ ಕುರಿತು ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಸಿ. ಮಣಿಪಾಲದ ಕ್ಯಾನ್ಸರ್ ತಜ್ಞ ಡಾ.ನವೀನ್ ಉಪನ್ಯಾಸ ನೀಡಿದರು. ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಐ.ಎಂ.ಎ ಅಧ್ಯಕ್ಷ ಡಾ.ವಿನಾಯಕ ಶೆಣ್ಯೆ, ಜಿಲ್ಲಾ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ.ಬೀಸು ನಾಯಕ್ ಉಪಸ್ಥಿತರಿದ್ದರು. ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ರಾಜೇಂದ್ರ ಕೆ. ಸ್ವಾಗತಿಸಿದರು. ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್.ಬಿ. ಕಾರ್ಯಕ್ರಮ ಸಂಘಟಿಸಿ ವಂದಿಸಿದರು. ಆಪ್ತ ಸಮಾಲೋಚಕ ದಿನೇಶ್ ನಿರೂಪಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ವ್ಯವಸ್ಥೆಗೆ ಆದ್ಯತೆ: ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭುಶೆಟ್ಟಿ
Posted On: 06 Feb 2022, 09:49 AM
ಉಡುಪಿ : ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ವ್ಯವಸ್ಥೆಯ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಚುನಾವಣಾ ಪ್ರಕ್ರಿಯೆಯ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಬಗ್ಗೆ ಹೆಚ್ಚಿನ ತಾಂತ್ರಿಕ ಕೌಶಲ್ಯವನ್ನು ಪಡೆದುಕೊಳ್ಳುವಂತೆ ರಾಜ್ಯದ ಜಂಟಿ ಮುಖ್ಯ ಚುನಾವಣಾಧಿಕಾರಿ ಡಿ.ಶಂಭು ಶೆಟ್ಟಿ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ, ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ನೋಂದಣಿ ಅಭಿಯಾನದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳಾದ ಮತದಾರರ ನೊಂದಣಿ, ತಿದ್ದುಪಡಿಗಳನ್ನು ಆನ್ಲೈನ್ ಮೂಲಕ ಮಾಡಲು ಅವಕಾಶ ನೀಡಿದ್ದು, ಮತಗಟ್ಟೆ ಅಧಿಕಾರಿಗಳಿಗೆ ವಿವಿಧ ಆಪ್ಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ತರಬೇತಿಗಳನ್ನೂ ಸಹ ಆನ್ಲೈನ್ ಮೂಲಕವೇ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ, ಚುನಾವಣೆಯ ವಿವಿಧ ಹಂತದಲ್ಲಿ ಅತ್ಯಂತ ಸುಲಭ ಮತ್ತು ನಿಖರ ಹಾಗೂ ತ್ವರಿತ ಕಾರ್ಯನಿರ್ವಹಣೆಗಾಗಿ ಚುನಾವಣಾ ಆಯೋಗವು ಮತ್ತಷ್ಟು ವಿದ್ಯುನ್ಮಾನ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದ್ದು, ಎಲ್ಲಾ ಆಧಿಕಾರಿಗಳು ಮತ್ತು ಸಿಬ್ಬಂದಿಗಳು ಇವುಗಳನ್ನು ಬಳಸುವ ಬಗ್ಗೆ ತಾಂತ್ರಿಕವಾಗಿ ತಿಳಿದುಕೊಳ್ಳಬೇಕು. ಈ ಬಗ್ಗೆ ಚುನಾವಣಾ ಆಯೋಗದಿಂದ ತರಬೇತಿಯನ್ನೂ ಸಹ ನೀಡಲಾಗುವುದು ಎಂದರು. ಉಡುಪಿ ಜಿಲ್ಲೆಯಲ್ಲಿ ಮತದಾರರ ವಿಶೇಷ ನೋಂದಣಿ ಆಭಿಯಾನವನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಆಯೋಗದಿಂದ ಕೋರುವ ಯಾವುದೇ ವರದಿಯನ್ನು ಅತ್ಯಂತ ನಿಖರವಾಗಿ ಮತ್ತು ಶೀಘ್ರದಲ್ಲಿ ಉಡುಪಿ ಜಿಲ್ಲೆಯಿಂದ ನೀಡುತ್ತಿದ್ದು, ಇದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು. ಮತದಾರರ ವಿಶೇಷ ನೋಂದಣಿ ಅಭಿಯಾನದ ನಂತರ ಜಿಲ್ಲೆಯಲ್ಲಿ 487676 ಪುರುಷರು, 525155 ಮಹಿಳೆಯರು, ಇತರೆ 11 ಸೇರಿ ಒಟ್ಟು 1012842 ಮಂದಿ ಮತದಾರರಿದ್ದು, ಇದರಲ್ಲಿ 18-19 ವಯೋಮಾನದ 8392 ಯುವ ಮತದಾರರಿದ್ದಾರೆ. ಯುವ ಮತದಾರರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸುವ ಅಗತ್ಯವಿದ್ದು, 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರವಹಿಸುವಂತೆ ತಿಳಿಸಿದ ಅವರು, ಒಬ್ಬನೇ ವ್ಯಕ್ತಿ ಎರಡು ಕಡೆಯಲ್ಲಿ ನೋಂದಣಿ ಆಗದಂತೆ ಮತ್ತು ಎರಡು ಎಪಿಕ್ ಕಾರ್ಡ್ಗಳನ್ನು ಪಡೆಯದಂತೆ ನೋಡಿಕೊಳ್ಳಿ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈ ಬಿಡುವ ಮುಂಚೆ ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ಎಂದರು. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಡೀ ರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಮಾತ್ರ ಚುನಾವಣೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಈಗಿನಿಂದಲೇ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಮತದಾನ ಕೇಂದ್ರಗಳನ್ನು ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗದ ತಂಡ ಭೇಟಿ ನೀಡಲಿದೆ ಎಂದ ಅವರು, ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಗಳಾಗದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮಾನಿಟರಿಂಗ್ ಸೆಲ್ನ ಹಿರಿಯ ಸಮಾಲೋಚಕ ಬಿ.ಎಸ್.ಹಿರೇಮಠ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗಳು ಹಾಗೂ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಬನ್ನಂಜೆ ವರ್ತೆಕಾಳಿ ಕಲ್ಕುಡ ದೈವಸ್ಥಾನ - ಸಿರಿ ಸಿಂಗಾರದ ಕಾಲಾವಧಿ ನೆಮೋತ್ಸವ
Posted On: 05 Feb 2022, 02:50 PM
ಉಡುಪಿ : ಜಿಲ್ಲೆಯ ಹಲವಾರು ವರ್ಷಗಳ ವರ್ಷಗಳ ಇತಿಹಾಸವಿರುವ ಶ್ರೀ ಬನ್ನಂಜೆ ವರ್ತೆಕಾಳಿ ಕಲ್ಕುಡ ದೈವಸ್ಥಾನ - ಬನ್ನಂಜೆ ಕಲ್ಕುಡ ಮನೆ , ಉಡುಪಿ ಇಲ್ಲಿ ಫೆಬ್ರವರಿ 8, ಮಂಗಳವಾರದಂದು ರಾತ್ರಿ 9 ಗಂಟೆಯಿಂದ ವರ್ತೆ ಕಲ್ಕುಡ ದೈವಗಳಿಗೆ ಸಿರಿ ಸಿಂಗಾರದ ಕಾಲಾವಧಿ ನೆಮೋತ್ಸವ ಜರಗಲಿದೆ. ಮಧ್ಯಾಹ್ನ 12 ಗಂಟೆಗೆ ದರ್ಶನ ಸೇವೆ ಹಾಗೂ 12.30ರಿಂದ ಮಹಾಅನ್ನಸಂತರ್ಪಣೆ ಹಾಗೂ ಸಂಜೆ 6 ಗಂಟೆಯಿಂದ ಭಜನೆ ಕಾರ್ಯಕ್ರಮ ಹಾಗೂ 7 ಗಂಟೆಯಿಂದ ದೈವ ದರ್ಶನ ಹಾಗೂ ಹೂವಿನ ಪೂಜೆ ನಡೆಯಲಿದೆ. ನಮ್ಮ ಉಡುಪಿ ಟಿವಿ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 6ರಿಂದ ನೆಮೋತ್ಸವದ ನೇರಪ್ರಸಾರವನ್ನು ವೀಕ್ಷಿಸಬಹುದು ಎಂದು ವಿಠಲ್ ಶೆಟ್ಟಿ ಹಾಗೂ ಕುಟುಂಬಸ್ಥರು ಬನ್ನಂಜೆ ಕಲ್ಕುಡ ಮನೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣವು ಮನುಷ್ಯನ ಮೂಲಭೂತ ಹಕ್ಕು. ವಸ್ತ್ರಧಾರಣೆಯ ಆಧಾರದಲ್ಲಿ ಈ ಮೂಲಭೂತ ಹಕ್ಕಿನಿಂದ ವಂಚಿತಗೊಳಿಸುವುದು ಆಘಾತಕಾರಿ ಮತ್ತು ಸ್ವೀಕಾರಾರ್ಹವಲ್ಲ :ಎಸ್.ಐ.ಓ ಕರ್ನಾಟಕ
Posted On: 05 Feb 2022, 02:37 PM
ಉಡುಪಿ :ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದಂತೆ ಕಾಲೇಜು ಪ್ರಾಂಶುಪಾಲರು ಗೇಟ್ಗಳನ್ನು ಮುಚ್ಚಿದ ಘಟನೆ ಕುಂದಾಪುರದಲ್ಲಿ ನಡೆದಿದ್ದು, ಇದು ಅತ್ಯಂತ ಕಳವಳಕಾರಿಯಾಗಿದೆ. ಈ ರೀತಿಯ ಹಠಾತ್ ಮತ್ತು ಅನಿಯಂತ್ರಿತ ಕ್ರಮಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಈ ವಿಚಾರಕ್ಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನ ಖಂಡನೀಯ. ಕಾಲೇಜು ಅಧಿಕಾರಿಗಳು ಯಾವುದೇ ಗುಂಪಿನ ಒತ್ತಡದಲ್ಲಿ ಕಾರ್ಯನಿರ್ವಹಿಸಬಾರದು ಮತ್ತು ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಬೇಕು. ಅದೇ ಸಮಯ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಅವರ ಮೇಲಿದೆ. ಕೇವಲ ಹಿಜಾಬ್ ಧರಿಸುವುದಕ್ಕೆ ಯಾರೂ ಅಸಹನೆ ವ್ಯಕ್ತ ಪಡಿಸಬಾರದು. ಅದು ವ್ಯಕ್ತಿಯೋರ್ವರ ವೈಯುಕ್ತಿಕ ಹಕ್ಕಾಗಿ ಉಳಿಯಬೇಕು. ಶಿಕ್ಷಣವು ಮೂಲಭೂತ ಹಕ್ಕಾಗಿದೆ ಮತ್ತು ಆ ಬಗ್ಗೆ ನಿರ್ಬಂಧ ವಿಧಿಸಕೂಡದು. ತರಗತಿ ಕೊಠಡಿಗಳು ಕೇವಲ ಪಠ್ಯಕ್ರಮದಲ್ಲಿ ಸೂಚಿಸಲಾದ ವಿಷಯಗಳ ಕಲಿಕೆಗೆ ಮಾತ್ರ ಸೀಮಿತವಲ್ಲ ಬದಲಾಗಿ ಸಂವಹನದ ಮಾಡುವ ಸ್ಥಳವಾಗಿದೆ. ಪರಸ್ಪರ ಗೌರವದ ಆಧಾರದ ಮೇಲೆ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವ ಮೂಲಕ ಪರಸ್ಪರ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಸ್ಥಳವಾಗಿದೆ. ವಿವಿಧ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಚರ್ಚೆಯ ಮೂಲಕ ಪರಸ್ಪರ ಗೌರವವನ್ನು ಬೆಳೆಸುವುದಕ್ಕೆ ವಾತಾವರಣವನ್ನು ಒದಗಿಸಿ ಕೊಡುವ ಜವಾಬ್ದಾರಿ ಕಾಲೇಜುಗಳದ್ದು. ಸಂಕುಚಿತ, ಪಂಥೀಯ ಅಜೆಂಡಾ ಮತ್ತು ಪಕ್ಷಪಾತವು ವಸ್ತುನಿಷ್ಠ ಶಿಕ್ಷಣವನ್ನು ನಿಗ್ರಹಿಸಬಾರದು. ನಾವು ನಿರ್ಮಿಸಲು ಬಯಸುವ ಸಮಾಜದಲ್ಲಿ ಶಿಕ್ಷಣದ ಪಾತ್ರವು ಅವಿಭಾಜ್ಯವಾಗಿದೆ. ವೈವಿಧ್ಯಮಯ ಮತ್ತು ಬಹುತ್ವದ ಸಮಾಜಕ್ಕೆ ಮುಕ್ತ ಮನಸ್ಸಿನ ಮತ್ತು ಸಹನಶೀಲ ವ್ಯಕ್ತಿಗಳ ಅಗತ್ಯವಿದೆ. ತಾರತಮ್ಯದ ಅಭ್ಯಾಸಗಳು ಯಾವುದೇ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯ ಭಾಗವಾಗಬಾರದು. ಏಕರೂಪತೆಯನ್ನು ಹೇರಲು ಸಮವಸ್ತ್ರ ಅಥವಾ ಡ್ರೆಸ್ ಕೋಡ್ ಅನ್ನು ಬಳಸಬಾರದು. ಅಲ್ಲದೆ, ಸಮವಸ್ತ್ರ/ಡ್ರೆಸ್ ಕೋಡ್ ಯಾರಿಗೂ ತಾರತಮ್ಯ ಮಾಡಬಾರದು ಮತ್ತು ಅದನ್ನು ಧರಿಸಬೇಕಾದವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವಷ್ಟು ಕಠಿಣವಾದ ಉಡುಪಾಗಿರಬಾರದು. ಕೂಡಲೇ ಆ ವಿದ್ಯಾರ್ಥಿನಿಯರನ್ನು ತರಗತಿಗೆ ಅನುಮತಿಸುವಂತೆ ಎಸ್.ಐ ಓ ಕರ್ನಾಟಕವು ಕಾಲೇಜಿನ ಆಡಳಿತ ಮಂಡಳಿಗೆ ಆಗ್ರಹಿಸುತ್ತದೆ. ಅವರು ಕಲಿಕೆಯನ್ನು ಮುಂದುವರಿಸಲಿ ಮತ್ತು ಅವರು ಏನು ಧರಿಸುತ್ತಾರೆ ಎಂಬುದನ್ನು ಸ್ವತಃ ಅವರೇ ನಿರ್ಧರಿಸಲಿ. ಸಂಬಂಧಪಟ್ಟ ಅಧಿಕಾರಿಗಳು ವ್ಯಕ್ತಿಗಳ ಸಾಂವಿಧಾನಿಕ ಹಕ್ಕುಗಳನ್ನು ಗೌರವಿಸುವುದು ಮತ್ತು ಪ್ರಸ್ತಾವಿತ ಸಮವಸ್ತ್ರ ಮಾರ್ಗಸೂಚಿಯ ಏಕರೂಪತೆಯನ್ನು ಜಾರಿಗೊಳಿಸುವ ಅಥವಾ ಸಂವಿಧಾನ ಖಾತರಿಪಡಿಸಿರುವ ಹಕ್ಕುಗಳನ್ನು ಉಲ್ಲಂಘಿಸುವ ಕಾರ್ಯ ಮಾಡುವುದಿಲ್ಲ ಎಂದು SIO ಕರ್ನಾಟಕವು ಇಲಾಖೆಯಿಂದ ನಿರೀಕ್ಷಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಎಸ್ ಐ ಓ ಕರ್ನಾಟಕವು ಪ್ರಯತ್ನಿಸಲಿದೆ ಎಂದು ಎಸ್ ಐ ಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ನಾಸೀರ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಕಲ್ಯಾಣಪುರ ರೋಟರಿ ಕ್ಲಬ್ : ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ
Posted On: 05 Feb 2022, 02:30 PM
ಉಡುಪಿ: ಕಲ್ಯಾಣಪುರದ ಟಿ.ಎಂ.ಎ ಪೈ ಪ್ರೌಢ ಶಾಲೆಯ ಇಂಟರ್ಯಾಕ್ಟ್ ಕ್ಲಬ್ (Interact Club) ಹಾಗೂ ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು. ದೊಡ್ಡಣಗುಡ್ಡೆ ಎ.ವಿ ಬಾಳಿಗಾ ಆಸ್ಪತ್ರೆಯ ಮಾನಸಿಕ ಆರೋಗ್ಯ ಸಲಹೆಗಾರರಾಗಿರುವ ಪದ್ಮ ರಾಘವೇಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷ ಶಂಭುಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಕಾಶ್, ಸದಸ್ಯರಾದ ರಾಮ ಪೂಜಾರಿ, ವಿದ್ಯಾಧರ ಕಿಣಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಶೇಖರ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುರೇಖ ವಂದಿಸಿದರು. ಸತ್ಯ ಶಂಕರ್ ಭಟ್ ನಿರೂಪಿಸಿದರು.
ಓಮಸತ್ವ ನೀಡುವ ನೆಪದಲ್ಲಿ ಒಂಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ
Posted On: 04 Feb 2022, 05:09 PM
ಮಂಗಳೂರು : ಇಲ್ಲಿನ ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ವಿಧವೆ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಗೂಸಾ ತಿಂದು ಪೋಲಿಸರ ಅತಿಥಿಯಾದ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಇಕ್ಬಾಲ್ ಕೆಂಚನಕೆರೆ ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಬಜ್ಪೆ ಠಾಣಾ ವ್ಯಾಪ್ತಿಯ ಕಂದಾವರ ಗ್ರಾಮ ಪಂಚಾಯತ್ ನ ಕಜೆಪದವು ಎಂಬಲ್ಲಿ ಔಷಧಿ ಮಾರುವ ನೆಪದಲ್ಲಿ ಮನೆಗೆ ಬಂದ ಆರೋಪಿ ಓಮಸತ್ವ ನೀಡುವ ನೆಪದಲ್ಲಿ ಮನೆಯಲ್ಲಿದ್ದ ವಿಧವೆ ಒಂಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆ ಒಂಟಿ ಮಹಿಳೆ ಕಿರುಚಿದ್ದು, ಸಾರ್ವಜನಿಕರು ಕೂಡಲೇ ಮನೆ ಬಳಿ ಜಮಾಯಿಸಿದ್ದಾರೆ ಎನ್ನಲಾಗಿದೆ. ನಂತರ ಕಾಮುಕನಿಗೆ ಧರ್ಮದೇಟು ಬಿದ್ದಿದ್ದು, ಬಜ್ಪೆ ಪೋಲಿಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಮಹಿಳಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಒಬ್ಬಂಟಿಯಾಗಿರುವ ಮಹಿಳೆಯರು ಅಪರಿಚಿತರಿಗೆ ವ್ಯಾಪಾರದ ನೆಪದಲ್ಲಿ ಮನೆಯ ಆವರಣ ಪ್ರವೇಶಿಸಲು ಬಿಡದೇ ಜಾಗೃತವಾಗಿರಬೇಕು ಎಂಬ ಒಕ್ಕಣೆಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಶ್ವ ಹಿಂದು ಪರಿಷದ್ ಬಜರಂಗದಳ ಕೊಡಿಬೆಟ್ಟು ಘಟಕದಿಂದ ಪಾದಯಾತ್ರೆ - ನಮ್ಮ ನಡಿಗೆ ಅಮ್ಮನೆಡೆಗೆ
Posted On: 03 Feb 2022, 10:05 PM
ಉಡುಪಿ : ವಿಶ್ವ ಹಿಂದು ಪರಿಷದ್ ಬಜರಂಗದಳ ಪೆರ್ಣಂಕಿಲ, ಕೊಡಿಬೆಟ್ಟು ಘಟಕದಿಂದ ಪ್ರಥಮ ವರ್ಷದ ಸಾಮೂಹಿಕ ಪಾದಯಾತ್ರೆ ಕಾರ್ಯಕ್ರಮವಾದ ನಮ್ಮ ನಡಿಗೆ ಅಮ್ಮನೆಡೆಗೆ ಫೆಬ್ರವರಿ 6, ಆದಿತ್ಯವಾರ ಬೆಳಗ್ಗೆ 7.30ಕ್ಕೆ ಪೆರ್ಣಂಕಿಲ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಕುಂಜಾರುಗಿರಿ ದುರ್ಗಾದೇವಿ ಸನ್ನಿಧಾನದವರೆಗೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
