Updated News From Kaup
ಇನ್ನಂಜೆ : ಮುದ್ದು ಪೂಜಾರಿ ಕಲ್ಲಿ ಮಾರು ನಿಧನ
Posted On: 30 Jan 2022, 10:35 PM
ಕಾಪು : ಇನ್ನಂಜೆ ಬಿಲ್ಲವ ಸೇವಾ ಸಂಘದ ಹಿರಿಯರಾದ ಮುದ್ದು ಪೂಜಾರಿ ಕಲ್ಲಿ ಮಾರು ಇನ್ನಂಜೆ ಇವರು ಇಂದು ದೈವಾದೀನರಾಗಿದ್ದಾರೆ. ಮೃತರು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಕೆಎಸ್ಎಸ್ಎಪಿ ಮಂಗಳೂರು ಆಶ್ರಯದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಜನ್ಮದಿನದ ಅಂಗವಾಗಿ ಮಲ್ಲಿಗೆ ಕಂಪು, ವಿಚಾರ ಗೋಷ್ಠಿ, ಕವಿಗೋಷ್ಠಿ
Posted On: 30 Jan 2022, 07:08 PM
ಮಂಗಳೂರು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಆಶ್ರಯದಲ್ಲಿ ರಾಣಿ ಪುಷ್ಪಲತಾ ದೇವಿ ಸಾರಥ್ಯದಲ್ಲಿ ಕನ್ನಡದ ಅದ್ವಿತೀಯ ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಜನ್ಮದಿನದ ಅಂಗವಾಗಿ "ಮಲ್ಲಿಗೆ ಕಂಪು, ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿ ನಗರದ ಮಹಿಳಾ ಪದವಿಪೂರ್ವ ಕಾಲೇಜಿನ ಸರಸ್ವತಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕನ್ನಡ ಕಟ್ಟೆ ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಉಲ್ತೂರು ಮಾತನಾಡಿ " ಅನೇಕರು ಪ್ರಾಸ ಇರಬೇಕು ಎಂಬ ಕಾರಣಕ್ಕೆ ಏನೆಲ್ಲಾ ಶಬ್ದಗಳನ್ನು ಬಳಸಿ ಕವನಗಳನ್ನು ಕಟ್ಟುತ್ತಾರೆ ಆದ್ರೆ ಕವನಗಳು ಮನಸ್ಸಿನ ಭಾವನೆಯಿಂದ ಹುಟ್ಟಬೇಕು ಆಗ ಮಲ್ಲಿಗೆ ಕಂಪಿನಂತ ಸಾಹಿತ್ಯ ಪ್ರಕಾರ ಸಾದ್ಯ" ಎಂದು ಹೇಳಿದ ಅವರು ಕೆ.ಎಸ್.ನರಸಿಂಹಸ್ವಾಮಿ ತನ್ನ ಹೃದಯದ ಭಾವನೆಗಳಿಗೆ ಅಕ್ಷರ ರೂಪ ನೀಡಿರುದರಿಂದ ಇಂದಿಗೂ ಎಂದಿಂದಿಗೂ ಮೈಸೂರು ಮಲ್ಲಿಗೆ ಕಂಪು ಜೀವಂತವಾಗಿ ಇರುತ್ತದೆ ಎಂದು ಹೇಳಿದರು. ಉಪನ್ಯಾಸಕ ಮತ್ತು ಕವಿ ಡೊಂಬ್ಬಯ್ಯ ಇಡ್ಕಿದು ಮಾತನಾಡಿ ಕೆ.ಎಸ್.ನರಸಿಂಹಸ್ವಾಮಿಯವರದು ಪ್ರೇಮ ಗೀತೆ ಅಲ್ಲ. ದಾಂಪತ್ಯ ಗೀತೆ ಪ್ರೇಮದ ಚಿತ್ರಣವನ್ನು ಆದರ್ಶಿ ಕರಿಸಿರುವ ಜತೆಗೆ ಮನುಷ್ಯ ಸಹಜ ಭಾವನೆಗಳ ಬೆಲೆಯನ್ನು ಎತ್ತಿ ಹಿಡಿದ ಶ್ರೇಯಸ್ಸು ಅವರದು. ಅವರ ಪ್ರಕಾರ ಬದುಕಿನಲ್ಲಿ ಇರುವುದು ಸುಖವೊಂದೆ. ದು:ಖ ಎಂಬುವುದಿಲ್ಲ ಎಂಬುದು ಅವರ ನಿಲುವು. ಅವರ ಕವನಗಳು ಸಮಾಜದ ಕೌಟುಂಬಿಕ ಜೀವನದಲ್ಲಿ ಆದ ಮುಖ್ಯ ಬದಲಾವಣೆ ಯನ್ನು ಸೂಚಿಸುತ್ತದೆ ಎಂದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸತ್ವ ತತ್ವ ಭರಿತವಾಗಿ ಕವನ ಹುಟ್ಟುವ ಬಗೆಯ ವಿಶ್ಲೇಷಣೆ ಮಾಡುತ್ತಾ ಕವನ ಹುಟ್ಟದೇ ಬರೆಯಲಾಗದು. ಕಥೆ ಕಟ್ಟದೇ ಹುಟ್ಟಲಾರದು ಎಂದರು. ಕವಿಗಳ ಕವನದ ಸಾಧಕ ಬಾಧಕ ಚುಟುಕು ವಿಮರ್ಶೆ ಮಾಡಿದ ಚಿದಂಬರ ಬೈಕಂಪಾಡಿ ಕವಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಿದರು. ಡಾ. ಸುರೇಶ್ ನೆಗಳಗುಳಿ, ಎನ್ಎಸ್.ಸಿ.ಡಿ.ಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಕವಿಗೋಷ್ಠಿಯ ಸಂಚಾಲಕಿ ಶಾಂತ ಪುತ್ತೂರು, ಪಿ.ವಿ.ಪ್ರದೀಪ್ ಕುಮಾರ್ ಹಾಗೂ ಖ್ಯಾತ ಸಾಹಿತಿ ಲಕ್ಷಣ್ ರಾವ್ ಉಪಸ್ಥಿತರಿದ್ದರು. ಕೆಎಸ್ಎಸ್ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾದೇವಿ ಸ್ವಾಗತಿಸಿದರು. ಕವಿಗಳಾದ ಡಾ. ವಾಣಿಶ್ರೀ ಕಾಸರಗೋಡು, ಗೀತಾ ಲಕ್ಷ್ಮೀಶ, ವಾಣಿ ಲೋಕಯ್ಯ, ರೇಮಂಡ್ ಡಿ ಕೂನ ತಾಕೊಡೆ, ಹಿತೇಶ್ ಕುಮಾರ್, ಕಾಸರಗೋಡು, ರೇಖಾ ಸುದೇಶ ರಾವ್, ಸೌಮ್ಯಾಗೋಪಾಲ್, ಶಿವರಾಜ್ ದೇವರ ಗುಡಿ, ಗೋಪಾಲಕೃಷ್ಣ ಶಾಸ್ತ್ರಿ, ಪ್ರೇಮಾ ಮುಲ್ಕಿ, ತಲ್ಲೂರು ಶರಣ, ಉಮೇಶ್ ಶಿರಿಯಾ, ದಿಯಾ ಉದಯ್ ಡಿ.ಯು, ಮರವಂತೆ ಪ್ರಕಾಶ ಪಡಿಯಾರ, ಅನುರಾಧಾ ರಾಜೀವ್ ಸುರತ್ಕಲ್, ಗುರುರಾಜ್ ಎಂ ಆರ್, ನವೀನ ಕುಲಾಲ್ ಚಿಪ್ಪಾರು, ಕು .ಸುಹಾನ ಸಯ್ಯದ್, ಬದ್ರುದ್ದೀನ್ ಕುಳೂರು, ಸೌಮ್ಯಾ ಆರ್ ಶೆಟ್ಟಿ, ಮಾನಸ ಪ್ರವೀಣ್ ಮೂಡು ಬಿದಿರೆ, ಮಹಮ್ಮದ್ ಮನ್ಸೂರ್ ಮುಲ್ಕಿ, ಬಾಲಕೃಷ್ಣ ಕೇಪುಳು, ಜಯಾನಂದ ಪೆರಾಜೆ, ಸುಮಂಗಳಾ ದಿನೇಶ್ ಶೆಟ್ಟಿ ಕುಂಪಲ, ಜಯಲಕ್ಷ್ಮಿ ಶರತ್ ಶೆಟ್ಟಿ ಕತ್ತರಿಕೋಡಿ, ಉಮೇಶ ಕಾರಂತ, ಲತೀಶ್ ಎಂ ಸಂಕೊಲಿಗೆ, ಸಂಭ್ರಮ ಕರ್ತಿಕ್ ಭಟ್, ಸೋಮಲಿಂಗ ಎಚ್ ಹಿಪ್ಪರಗಿ, ಮನೋಜ್ ಕುಮಾರ್ ಶಿರ್ಲ, ಶಿವಪ್ರಸಾದ್ ಕೊಕ್ಜಡ, ನಾರಾಯಣ ಕುಂಬ್ರ, ವಿಂಧ್ಯಾ ಎಸ್ ರೈ, ಗಳಿಂದ ಕವನ ವಾಚನ ನಡೆದುವು. ರಶ್ಮಿ ಸನಿಲ್ ರವರು ಕರ್ಯಕ್ರಮ ನಿರೂಪಿಸಿದರು. ಬಳಿಕ ಸಕಲ ಕವಿಗಳಿಗೂ ಅಭಿನಂದನಾ ಪತ್ರ ಸಹಿತ ಕೃತಿಗಳನ್ನು ನೀಡಲಾಯಿತು.
ಉಡುಪಿ- ದ.ಕ ಜಿಲ್ಲೆಯಲ್ಲಿ 1400 ಕಿಂಡಿ ಅಣೆಕಟ್ಟು ನಿರ್ಮಾಣ : ಸಚಿವ ಮಾಧುಸ್ವಾಮಿ
Posted On: 30 Jan 2022, 06:49 PM
ಉಡುಪಿ : ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಲ್ಲಿ 1400 ಕಿಂಡಿ ಅಣೆಕಟ್ಟುಗಳನ್ನು ಗುರುತಿಸಲು ಸ್ಥಳಗಳನ್ನು ಗುರುತಿಸಲಾಗಿದ್ದು ಈ ವರ್ಷ ಇದಕ್ಕಾಗಿ 500 ಕೋಟಿ ರೂ ಗಳನ್ನು ಬಿಡುಗಡೆ ಮಾಡಿ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು. ಅವರು ಇಂದು ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 560 ಲಕ್ಷ ರೂ ವೆಚ್ಚದಲ್ಲಿ 4 ಕಿಂಡಿ ಅಣೆಕಟ್ಟುಗಳನ್ನು ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಲ್ಲಿ ಹರಿದು ಸಮುದ್ರ ಸೇರುವ ನೀರನ್ನು ತಡೆದು ಕೃಷಿ, ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಅನುಕೂಲವಾಗುವಂತೆ ಪಶ್ಚಿಮ ವಾಹಿನಿ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದ್ದು , 1400 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಅಂರ್ತಜಲ ವೃದ್ಧಿಯ ಜೊತೆಗೆ ,ಮಣ್ಣಿನ ಫಲವತ್ತತೆ ವೃಧ್ದಿ ಸಹ ಸಾಧ್ಯವಾಗಲಿದೆ ಎಂದು ಸಚಿವರು, ರಾಜ್ಯದಲ್ಲಿ ನೀರು ಹರಿಯುವ ಹಳ್ಳಗಳಲ್ಲಿ ಶೇಖರಣೆಯಾಗುವ ಹೂಳು ತೆಗೆಯಲೂ ಸಹ ಯೋಜನೆ ರೂಪಿಸಲಾಗುವುದು ಹೇಳಿದರು ಈ ಭಾಗದ ಡ್ರೀಮ್ಡ್ ಅರಣ್ಯ ಸಮಸ್ಯೆಗೆ ಸಂಬಂದಿಸಿದಂತೆ ಈಗಾಗಲೇ ರಾಜ್ಯದಲ್ಲಿ 7.70 ಲಕ್ಷ ಹೆಕ್ಟೇರ್ ಭೂಮಿಯನ್ನು ಡ್ರೀಮ್ಡ್ ವ್ಯಾಪ್ತಿಯಿಂದ ಕೈಬಿಡುವಂತೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಾಗಿದೆ. ಈ ಭೂಮಿಯನ್ನು ಅರ್ಹ ಭೂ ರಹಿತರಿಗೆ ನೀಡಲಾಗುವುದು ಎಂದು ಸಚಿವರು, ಈಗಾಗಲೇ ಅರಣ್ಯ ವ್ಯಾಪ್ತಿಯಲ್ಲಿನ ಸಣ್ಣ ಹಿಡುವಳಿದಾರರು ಮತ್ತು ಮನೆ ಕಟ್ಟಿಕೊಂಡಿರುವವರು ಎದುರಿಸುತ್ತಿರುವ ಡ್ರೀಮ್ಡ್ ಅರಣ್ಯದ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಈ ಭಾಗದಲ್ಲಿ ಅಂರ್ತಜಲ ವೃದ್ಧಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದ್ದು, 2018 ರಿಂದ 2023 ರ ಅವಧಿಯೊಳಗೆ 100 ಕಿಂಡಿ ಅಣೆಕಟ್ಟು ನಿರ್ಮಿಸುವ ಯೋಜನೆಯಿದೆ ಎಂದು ಅವರು, ಡ್ರೀಮ್ಡ್ ಫಾರೆಸ್ಟ್ ನಿಂದ ಈ ಭಾಗದಲ್ಲಿ ಅಭಿವೃದ್ದಿ ಕುಂಠಿತವಾಗಿದ್ದು, ಪ್ರಸ್ತುತ ಸರಕಾರ ಡ್ರೀಮ್ಡ್ ಫಾರೆಸ್ಟ್ ನಿಂದ ಭೂಮಿಯನ್ನು ಕೈಬಿಡುವ ಕುರಿತಂತೆ ಸುಪ್ರೀಂಕೋಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಈ ಬಗ್ಗೆ ಶೀಘ್ರದಲ್ಲಿ ಸರ್ಕಾರದ ಸುತ್ತೋಲೆ ಆಗಲಿದೆ, ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು. ಶಿವಪುರ ಗ್ರಾಮದ ದೇವಸ್ಥಾನಬೆಟ್ಟು ನಲ್ಲಿ 150 ಲಕ್ಷ ರೂ, ಪುತ್ತಿಬೆಟ್ಟು ನಲ್ಲಿ 150 ಲಕ್ಷ ರೂ , ಮುಕ್ಕಾಣಿ ಗೋನುಮಾರು ನಲ್ಲಿ 155 ಲಕ್ಷ ರೂ, ಕುಂಟೆಬೆಟ್ಟು ನಲ್ಲಿ 105 ಲಕ್ಷ ರೂ ಸೇರಿದಂತೆ ಒಟ್ಟು 560 ಲಕ್ಷ ರೂ ಗಳ ಕಿಂಡಿ ಆಣೆಕಟ್ಟು ಕಾಮಗಾರಿಗಳನ್ನು ಸಚಿವ ಮಾಧುಸ್ವಾಮಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ, ವರಂಗ ಗ್ರಾ.ಪಂ.ಅಧ್ಯಕ್ಷೆ ಉಷಾ ಹೆಬ್ಬಾರ್, ಸಣ್ಣ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ , ಮೆಸ್ಕಾಂನ ನಿರ್ದೇಶಕ ದಿನೇಶ್ ಪೈ ಮತ್ತಿತರರು ಉಪಸ್ಥಿತರಿದ್ದರು.
ಗೋವುಗಳ ಕಳ್ಳ ಸಾಗಾಣಿಕೆ ; ರಕ್ಷಣೆ : ಹಿಂದೂ ಸಂಘಟನೆಯ ಮಾಹಿತಿ, ಪೊಲೀಸರ ಕಾರ್ಯಾಚರಣೆ
Posted On: 30 Jan 2022, 04:48 PM
ಕಾರ್ಕಳ : ಗೋವುಗಳ ಕಳ್ಳ ಸಾಗಾಣಿಕೆಯ ಬಗ್ಗೆ ಹಿಂದೂ ಸಂಘಟನೆಯ ಕಾರ್ಯಕರ್ತರ ಖಚಿತ ಮಾಹಿತಿಯನ್ನು ಆಧರಿಸಿ ಅಜೆಕಾರು ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಹಲವಾರು ಗೋವುಗಳನ್ನು ರಕ್ಷಿಸಿದ ಘಟನೆ ನಡೆದಿದೆ. ಉದ್ಯಾವರ ಪಿತ್ರೋಡಿಯ ಚೇತು ಯಾನೆ ಚೇತನ್ ಎಂಬುವವನು ಗೋವುಗಳ ಸಾಗಾಟದ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂದರ್ಭ ವಾಹನದಲ್ಲಿದ್ದ ಗೋವುಗಳನ್ನು ರಕ್ಷಿಸಲಾಗಿದೆ.
ಶಿರ್ವ :ಗ್ರಾಮ ಒನ್ ಉದ್ಘಾಟನೆ
Posted On: 30 Jan 2022, 02:21 PM
ಶಿರ್ವ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಯೋಜನೆಯು ಶಿರ್ವ ಗ್ರಾಮದ ವ್ಯಾಪ್ತಿಯಲ್ಲಿ ಉದ್ಘಾಟನೆಗೊಂಡಿತು. 750ಕ್ಕೂ ಹೆಚ್ಚಿನ ಸೇವೆಗಳನ್ನು ಒಳಗೊಂಡ ಗ್ರಾಮ ಒನ್ ಕೇಂದ್ರವಾಗಿದ್ದು ಆಧಾರ್ , ಇ-ಸ್ಟ್ಯಾಂಪ್ ಹಾಗು ಸೇವಾ ಸಿಂಧುವಿನ ಎಲ್ಲ ಸೇವೆಗಳನ್ನು ಗ್ರಾಮೀಣ ಭಾಗದ ನಾಗರಿಕರಿಗೆ ಹಲವು ಸೇವೆಗಳನ್ನು ಒದಗಿಸುವ ಸೇವಾ ವೇದಿಕೆಯಾಗಿದೆ. ಕಾರ್ಯಕ್ರಮವನ್ನು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ಉದ್ಘಾಟಿಸಿದರು . ಮುಖ್ಯ ಅಥಿತಿಗಳಾಗಿ ಶಿರ್ವ ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿ ವಿಜಯ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಕಟ್ಟಡ ಮಾಲೀಕರಾದ ಸ್ಟಾನ್ಲಿ ಡಯಾಸ್, ರವಿರಾಜ್ ಸಾಲ್ಯಾನ್ ಮಲ್ಪೆ, ಹಿರಿಯ ವಿ.ಎಲ್. ಇ. ಉಡುಪಿ,ಶಿರ್ವ ಗ್ರಾಮ ಒನ್ ವ್ಯವಸ್ಥಾಪಕರಾದ ಪ್ರಜ್ವಲ್ ಬಿ ಕುಲಾಲ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಹೆಜಮಾಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಹಾಗೂ ಯುವ ಜನತೆಗೆ ಜಲ ಜಾಗೃತಿ ಅಭಿಯಾನದ ತರಬೇತಿ ಕಾರ್ಯಕ್ರಮ
Posted On: 29 Jan 2022, 07:49 PM
ಹೆಜಮಾಡಿ : ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಉಡುಪಿ ಮತ್ತು ಗ್ರಾಮ ಪಂಚಾಯತ್, ಹೆಜಮಾಡಿ, ಕರಾವಳಿ ಯುವಕ-ಯುವತಿ ವೃಂದ (ರಿ.) ಹೆಜಮಾಡಿ, ವಿಜಯಾ ಕಾಲೇಜು, ಮುಲ್ಕಿ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎನ್ಸಿಸಿ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ, ಯೂತ್ ರೆಡ್ ಕ್ರಾಸ್ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹೆಜಮಾಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಹಾಗೂ ಯುವ ಜನತೆಗೆ ಜಲ ಜಾಗೃತಿ ಅಭಿಯಾನದ ತರಬೇತಿ ಕಾರ್ಯಕ್ರಮ ಜನವರಿ 30, ಆದಿತ್ಯವಾರ ಬೆಳಿಗ್ಗೆ ಗಂಟೆ 9ಕ್ಕೆ ಹೆಜಮಾಡಿಯ ಅಮಾವಾಸ್ಯೆ ಕರಿಯ ಕಡಲ ಕಿನಾರೆಯಲ್ಲಿ ಜರಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್. ಮೆಂಡನ್ ಮಾಡಲಿದ್ದು, ಅಭಿಯಾನಕ್ಕೆ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಚಾಲನೆ ನೀಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ, ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ತರಬೇತುದಾರಾದ ಜೋಸಫ್ ಜಿ. ಎಮ್ ರಬೆಲ್ಲೊ, ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ
Posted On: 29 Jan 2022, 07:28 PM
ಮಂಗಳೂರು : ಇಲ್ಲಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭ ವು ಜನವರಿ 27ರಂದು ಜರಗಿತು. ದೇವಾಲಯ ನಿರ್ಮಾಣಕ್ಕೆ ಜಿಲ್ಲಾ ಕುಲಾಲ ಸಂಘದ ನೇತೃತ್ವದಲ್ಲಿ, ದೇವಸ್ಥಾನದ ಆಡಳಿತ ಮಂಡಳಿ, ಜಿರ್ಣೋದ್ದಾರ ಸಮಿತಿ ಹಾಗು ಸಮಸ್ತ ಕುಲಾಲ ಸಮಾಜ ಹಾಗು ಸರ್ವ ಭಕ್ತಾದಿಗಳ ಸಹಭಾಗಿತ್ವದಲ್ಲಿ, ಮಾಣಿಲ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ, ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ಸ್ವಾಮೀಜಿಗಳ ದಿವ್ಯಾಸ್ತದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡಿತು. ಈ ಸಂದರ್ಭದಲ್ಲಿ ಕುಲಾಲ ಸಮಾಜದ ಗಣ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕಾಪು : ಕರಾವಳಿ ವಾರ್ಡ್ನ ಗಟ್ಟಿ ಧ್ವನಿ ಕಿರಣ್ ಆಳ್ವ
Posted On: 29 Jan 2022, 07:13 PM
ಕಾಪು : ಈಗಾಗಲೇ ಕಾಪು ಪುರಸಭೆಯ ಚುನಾವಣಾ ಕಾವು ಮುಗಿದು ಗೆದ್ದವರೆಲ್ಲಾ ಗದ್ದುಗೆಯ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲೊಬ್ಬ ಜನಪರ ಕಾರ್ಯದಲ್ಲಿ ತೊಡಗಿದ್ದಾರೆ ಅವರೇ ಕರಾವಳಿ ವಾರ್ಡ್ ಇದರ ಸದಸ್ಯ ಕಿರಣ್ ಆಳ್ವ. ಕಾಪು ಪುರಸಭೆಯ ಗಟ್ಟಿ ಧ್ವನಿಯಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಸಾರ್ವಜನಿಕರ ಮಾತು. ಶಾಸಕ ಲಾಲಾಜಿ ಮೆಂಡನ್ ಮತ್ತು ಉದ್ಯಮಿ ಸರ್ವೋತ್ತಮ್ ಕುಂದರ್ ಅವರ ಮಾರ್ಗದರ್ಶನದಲ್ಲಿ ನರೇಶ್, ಯೋಗಿಶ್, ಪ್ರತೀಕ್, ನಾಗೇಶ್ ಯುವಕರ ತಂಡವನ್ನು ಕಟ್ಟಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ. ಕರಾವಳಿ ವಾರ್ಡ್ ಮತ್ತು ಬೀಚ್ ರಸ್ತೆಯಲ್ಲಿ ವಿನೂತನ ಯೋಜನೆಗಳ ಮೂಲಕ ಪ್ರವಾಸಿಗರ ಸ್ವರ್ಗವಾಗುತ್ತಿದೆ. ಇದೆಲ್ಲವೂ ಸಾಧ್ಯವಾಗಿರುವುದು ಕಿರಣ್ ಆಳ್ವ ಎಂಬ ಸಾಮಾನ್ಯ ಜನಪ್ರತಿನಿಧಿಯಿಂದಾಗಿ. ಇವರ ಕಾರ್ಯ ವೈಖರಿಯನ್ನು ಉಳಿದ ಸದಸ್ಯರು ಪಾಲಿಸಿದರೇ ಕಾಪು ಪುರಸಭಾ ವ್ಯಾಪ್ತಿಯು ಸಂಪೂರ್ಣ ಅಭಿವೃದ್ಧಿ ಹೊಂದುವುದು ಖಚಿತ.
ಬಿರುವೆರ್ ಕಾಪು ಸೇವಾ ಸಮಿತಿ ಉದ್ಘಾಟನೆ, ಸಮ್ಮಾನ ಸಮಾರಂಭ, ಸಹಾಯ ಹಸ್ತಾಂತರ
Posted On: 28 Jan 2022, 10:26 PM
ಮೂಳೂರು : ನಾರಾಯಣಗುರುಗಳ ತತ್ವಾದರ್ಶಗಳು ಅಜರಾಮರ. ಅವುಗಳನ್ನು ಸಂಘ ಸಂಸ್ಥೆಗಳು ಪ್ರಚುರಪಡಿಸಬೇಕಾದ ಅನಿವಾರ್ಯತೆಯಿದೆ. ಬಿರುವೆರ್ ಕಾಪು ಸೇವಾ ಸಮಿತಿಯು ಸಮಾಜಮುಖಿ ಚಿಂತನೆಯ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹೇಳಿದರು. ಅವರು ಮೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ಜರಗಿದ ಬಿರುವೆರ್ ಕಾಪು ಸೇವಾ ಸಮಿತಿಯ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಮೂಳೂರಿನ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಪೂಜಾರಿ ರಾಜಮನೆ ಮೂಳೂರು ಬಿರುವೆರ್ ಕಾಪು ಸೇವಾ ಸಮಿತಿಯನ್ನು ಉದ್ಘಾಟಿಸಿದರು. ಬಿರುವೆರ್ ಕಾಪು ಸೇವಾ ಸಮಿತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ದುಂದು ವೆಚ್ಚಗಳಿಗಳಿಗೆ ಕಡಿವಾಣ ಹಾಕಿ ಅದರಿಂದ ಉಳಿಸಿದ ಹಣವನ್ನು ಸಮಾಜಕಾರ್ಯಗಳಿಗೆ ಉಪಯೋಗಿಸುವ ಬಗ್ಗೆ ಚಿಂತಿಸಬೇಕಾಗಿದೆ. ಸಂಘಟನೆಗಳ ಮೂಲಕ ನಮ್ಮ ಸಂಸ್ಕೃತಿ, ಆಚರಣೆಗಳ ಬಗೆಗೂ ಬೆಳಕು ಚೆಲ್ಲುವ ಅನಿವಾರ್ಯತೆಯಿದೆ ಎಂದರು. ವಕೀಲರಾದ ಸಂಕಪ್ಪ ಅಮೀನ್ ಮಾತನಾಡಿ ಸಂಘ ಸಂಸ್ಥೆಗಳು ಶಾಶ್ವತ. ಸಂಘಟನೆಗಳು ನಿಂತ ನೀರಾಗದೆ ಹರಿಯುವಂತಾಗಬೇಕು ಆಗ ಮಾತ್ರ ಅದರ ಉದ್ದೇಶ ಈಡೇರಿದಂತೆ ಎಂದರು. ಸಮ್ಮಾನ : 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಡುಪಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಉಡುಪಿಯ ವಕೀಲರಾದ ಸಂಕಪ್ಪ ಅಮೀನ್, ಕಾಪುವಿನ ವೃತ್ತ ನಿರೀಕ್ಷಕರಾದ ಪ್ರಕಾಶ್ ರನ್ನು ಸನ್ಮಾನಿಸಲಾಯಿತು. ಸಹಾಯ ಹಸ್ತ : ಆರೋಗ್ಯ, ಮನೆ ನಿರ್ಮಾಣ ಇತ್ಯಾದಿ ಫಲಾನುಭವಿಗಳಿಗೆ ಒಟ್ಟು 60 ಸಾವಿರ ರೂಪಾಯಿ ಸಹಾಯ ಧನ ಹಸ್ತಾಂತರಿಸಲಾಯಿತು. ಇದೆ ಸಂರ್ಭದಲ್ಲಿ ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯನ್ನು ಮೂಳೂರು ಬಿಲ್ಲವ ಸಂಘದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷರಾದ ಗಣೇಶ್ ಕೋಟ್ಯಾನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘದ ಗೌರವ ಅಧ್ಯಕ್ಷರಾದ ಪ್ರಭಾಕರ್ ಎಸ್ ಪೂಜಾರಿ, ಮೂಳೂರು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಮುಂಬಯಿ ಸಮಿತಿ ಅಧ್ಯಕ್ಷ ಎನ್.ಜಿ. ಪೂಜಾರಿ, ಬಿರುವೆರ್ ಕಾಪು ಸೇವಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಮೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಬಿರುವೆರ್ ಕಾಪು ಸೇವಾ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪುರುಷೋತ್ತಮ ಸಾಲ್ಯಾನ್ ಸ್ವಾಗತಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವಿಸಿದರು. ಜೊತೆ ಕಾರ್ಯದರ್ಶಿ ಅತಿಥ್ ಸುವರ್ಣ ಪಾಲಮೆ ನಿರೂಪಿಸಿದರು. ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು ವಂದಿಸಿದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ
Posted On: 27 Jan 2022, 08:06 PM
ಶಿರ್ವ : 73 ನೇ ಗಣರಾಜ್ಯೋತ್ಸವ ದಿನದಂದು ಶಿರ್ವ-ಮಂಚಕಲ್ ಲಯನ್ಸ್ ಕ್ಲಬ್ ಹಾಗೂ ಶಿರ್ವ ಸಂತ ಮೇರಿ ಕಾಲೇಜಿನ ಎನ್ ಸಿ ಸಿ, ಎನ್ ಎಸ್ ಎಸ್, ರೆಂಜರ್ಸ್ ಮತ್ತು ರೋವರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ಶಿರ್ವದ ಪ್ರವಾಸಿ ಮಂದಿರ ವಠಾರವನ್ನು ಸ್ವಚ್ಛಗೊಳಿಸುವ ಶ್ರಮದಾನ ಕಾರ್ಯಕ್ರಮ ನಡೆಯಿತು. ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತ, ಸುರಕ್ಷ , ಕಂಪನಿ ಸಾರ್ಜೆಂಟ್ ಕ್ವಾಟರ್ಮಸ್ಟರ್ ಮೋಹಿತ್ ಎನ್ ಸಾಲಿಯಾನ್, ಕಾರ್ಪೊರಲ್ ಧೀರಜ್ ಆಚಾರ್ಯ, ಲ್ಲ್ಯಾನ್ಸ್ ಕಾರ್ಪೊರಲ್ ಲೋಬೋ ಆನ್ ರಿಯಾ ನೇವಿಲ್,ಎನ್ಎಸ್ಎಸ್ ಸ್ವಯಂಸೇವಕರು- ವೈಷ್ಣವಿ, ಮಿನಾಜ್, ಸಿಂಚನಾ, ಶ್ರೇಯಸ್, ಮೊಹಮ್ಮದ್ ಅಫ್ನಾನ್, ರೋವರ್ ಸ್ವಯಂಸೇವಕ - ಡಾರಿಲ್, ಜಾನ್ಸಿ ಸಹಕರಿಸಿದ್ದರು. ಒಟ್ಟು 50 ವಿದ್ಯಾರ್ಥಿಗಳು ಭಾಗವಹಿಸಿ ಪರಿಸರವನ್ನು ಸ್ವಚ್ಛಗೊಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಾ. ಹೆರಾಲ್ಡ್ ಐವನ್ ಮೋನಿಸ್, ಪ್ರಾದ್ಯಾಪಕರುಗಳಾದ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ಕುಮಾರ್, ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೇಮನಾಥ್, ರಕ್ಷಾ , ರೋವರ್ಸ್ ಸ್ಕೌಟ್ ಲೀಡರ್ ಪ್ರಕಾಶ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯಶೋದ, ಶಿರ್ವ- ಮಂಚಕಲ್ ಲಯನ್ಸ್ ಕ್ಲಬಿನ ಅಧ್ಯಕ್ಷ ಅನಿಲ್ ಡಿ'ಸೋಜ ಕಾರ್ಯದರ್ಶಿ ಚಾರ್ಲ್ಸ್ ಮೋಹನ್ ನೊರೊನ್ಹ ಹಾಗೂ ಕ್ಲಬ್ಬಿನ ಸದಸ್ಯರು ಭಾಗವಹಿಸಿದ್ದರು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರಾಯ ಪಾಟ್ಕರ್ ಭಾಗವಹಿಸಿ ಗ್ರಾಮದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ಕೈ ಜೋಡಿಸಬೇಕೆಂದು ಕರೆಯಿತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಶಿರ್ವ ಗ್ರಾಮ ಪಂಚಾಯತ್ ಸದಸ್ಯ ನ್ಯಾಯವಾದಿ ವಿಲ್ಸನ್ ರೋಡ್ರಿಗಸ್ ರವರು ಕಾರ್ಯಕ್ರಮದ ಮೇಲ್ವಿಚಾರಿಕೆಯನ್ನು ವಹಿಸಿದ್ದರು.
