Updated News From Kaup

ಕುಂತಳನಗರ ಭಾರತೀ ಹಿ.ಪ್ರಾ. ಶಾಲೆಯ ಬಯಲು ರಂಗ ಮಂಟಪಕ್ಕೆ ಶಿಲಾನ್ಯಾಸ

Thumbnail
Posted On: 15 Jan 2022, 05:32 PM

ಕಟಪಾಡಿ : ಕರಾವಳಿ ಅಭಿವೃದ್ಧಿ ಪ್ರಾಧಿಕಾರಿಂದ 25 ಲಕ್ಷ ರೂಪಾಯಿ ಮತ್ತು ಮಣಿಪುರ ಗ್ರಾಮ ಪಂಚಾಯತ್ ಶೇ.5ರ ಜಂಟಿ ಅನುದಾನದಲ್ಲಿ ಕುಂತಳನಗರ ಭಾರತೀ ಹಿ.ಪ್ರಾ. ಶಾಲೆಯ ಬಯಲು ರಂಗ ಮಂಟಪಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಶಿಲಾನ್ಯಾಸಗೈದರು. ಈ ಸಂದರ್ಭ ಮಾತನಾಡಿದ ಅವರು ಮಣಿಪುರ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಡಿ 10 ಲಕ್ಷ ರೂ. ಅನುದಾನವನ್ನು ಒದಗಿಸಲು ಬದ್ಧ ಎಂದರು. ಶಂಕುಸ್ಥಾಪನೆ ನಡೆಸಿದ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಮಾತನಾಡಿ, ಜನರ ನಿರೀಕ್ಷೆಗೆ ಆದ್ಯತೆಯನ್ನು ನೀಡಿ 19 ಶಾಸಕರ ವಿಶ್ವಾಸಗಳಿಸಿ ಬಯಲು ರಂಗಮಂಟಪಕ್ಕೆ 23.75 ಲಕ್ಷ ರೂ. ಅನುದಾನವನ್ನು ಹೊಂದಿಸಿಕೊಳ್ಳಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಅವಶ್ಯಕವಾದ ಬಯಲು ರಂಗ ಮಂಟಪ ಗ್ರಾಮದ ಕೇಂದ್ರವಾಗಿ ಬೆಳೆದು ಬರಲಿದೆ. ಮಣಿಪುರ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೂ ಅನುದಾನ ಒದಗಿಸಲು ಬದ್ಧ ಎಂದರು. ಶಾಲಾಡಳಿತ ಮಂಡಳಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಬಯಲು ರಂಗ ಮಂಟಪ ನಿರ್ಮಾಣಕ್ಕೆ ಅನುದಾನ ಒದಗಿಸಲು ಸಹಕರಿಸಿದ ಮಟ್ಟಾರು ರತ್ನಾಕರ್ ಹೆಗ್ಡೆ, ಕ್ಷೇತ್ರ ಶಾಸಕ ಲಾಲಾಜಿ ಆರ್ ಮೆಂಡನ್, ಮಣಿಪುರಗ್ರಾಮ ಪಂಚಾಯತ್‌ಗೆ ಕೃತಜ್ಞತೆ ಸಲ್ಲಿಸಿದರು. ಮಣಿಪುರ ಗ್ರಾ.ಪಂ. ಅಧ್ಯಕ್ಷ ಹಸನ್ ಶೇಕ್ ಅಹಮದ್‌, ಪ್ರಮುಖರಾದ ರಾಘು ಪೂಜಾರಿ ಕಲ್ಮಂಜೆ, ನ್ಯಾಯವಾದಿ ಎನ್.ಕೆ. ಆಚಾರ್ಯ ಮಾತನಾಡಿದರು. ಅರ್ಚಕ ವೇ|ಮೂ|ಗಣೇಶ್ ಭಟ್ ಶಿಲಾನ್ಯಾಸ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಕರಾಮ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷೆ ವಿನ್ನಿಫ್ರೆಡ್ ಡಿಸೋಜ, ಸದಸ್ಯರುಗಳಾದ ಸಂತೋಷ್ ಶೆಟ್ಟಿ, ಆಶಾ ಶೇಖರ್, ಡೆನ್ಜಿಲ್ ಡಿಸೋಜ, ಜಾನ್ ಸಿಕ್ವೇರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಸಲಹೆಗಾರ ಭೂವರಾಹ ಆಚಾರ್ಯ, ಗುರುರಾಜ್ ಭಟ್, ಮುಂಬಯಿ ಉದ್ಯಮಿ ಅಶೋಕ್ ಶೆಟ್ಟಿ ತೋಟದಮನೆ ವೇದಿಕೆಯಲ್ಲಿದ್ದರು. ಮಣಿಪುರ ಗ್ರಾ.ಪಂ ಪಿಡಿಓ ಮೋಹನ್ ರಾವ್ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಆಚಾರ್ಯ ವಂದಿಸಿದರು. ಪ್ರಧಾನ ಅಧ್ಯಾಪಕಿ ಶ್ರೀಮತಿ ವೈ. ನಿರೂಪಿಸಿದರು.

ಉಚ್ಚಿಲದ ಕುಂಜೂರು ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ

Thumbnail
Posted On: 15 Jan 2022, 12:49 PM

ಕಾಪು : ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲದ ಕುಂಜೂರು ಸಮೀಪದ ರೈಲ್ವೆ ಹಳಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ರಾಜೇಶ್ ಶೆಟ್ಟಿ (35) ಎಂದು ಗುರುತಿಸಲಾಗಿದ್ದು, ರೈಲ್ವೆ ಹಳಿಯ ಸಮೀಪದಲ್ಲಿಯೇ ಈತನ ಮನೆಯಿದ್ದು, ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪಡುಬಿದ್ರಿ ಪೋಲೀಸರು ಆಗಮಿಸಿ ತನಿಖೆ ಮುಂದುವರಿಸಿದ್ದಾರೆ, ಛಿದ್ರ ಛಿದ್ರವಾದ ಮೃತ ಶರೀರವನ್ನು ಆಸಿಫ್ ಆಪದ್ಬಾಂಧವರವರ ತಂಡ ಕಾರ್ಯಾಚರಿಸಿ ಪಡುಬಿದ್ರಿ ಶವಾಗಾರಕ್ಕೆ ರವಾನಿಸಲಾಗಿದೆ.

ಕಲ್ಯಾಣಪುರ ರೋಟರಿ ಕ್ಲಬ್ ವತಿಯಿಂದ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷ ಆಚರಣೆ

Thumbnail
Posted On: 15 Jan 2022, 10:44 AM

ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ನ ಸದಸ್ಯರು ಮತ್ತು ಕುಟುಂಬದವರಿಂದ ಇತ್ತೀಚೆಗೆ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಕೆ. ಪದ್ಮನಾಭ ಕಾಂಚನ್ ರವರು ಕ್ರಿಸ್ಮಸ್ ಹಬ್ಬದ ಆಚರಣೆಯ ಹಿನ್ನೆಲೆ ಮತ್ತು ಸಂಪ್ರದಾಯಗಳ ಕುರಿತು ಮಾತನಾಡಿ ವಿಶ್ವ ಶಾಂತಿ, ಸೌಹಾರ್ದತೆ ಬಗ್ಗೆ ಮಾತನ್ನಾಡಿದರು. ಇನ್ನೋರ್ವ ಮುಖ್ಯ ಅತಿಥಿ, ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜರಾಮ ಭಟ್ ಅವರು ಮಾತನಾಡಿ ಕ್ಲಬ್ ನ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕ್ಲಾರೆನ್ಸ್ ಡಿಸೋಜ ಮತ್ತು ಸೇವಾಧಾಮ ವಿಶೇಷ ಪುನರ್ವಸತಿ ಸಂಸ್ಥೆಯ ರಾಯನ್ ಫೇರ್ನಾಂಡಿಸ್ ಇವರನ್ನು ಸನ್ಮಾನಿಸಲಾಯಿತು ಹಾಗೂ ಸಂಸ್ಥೆಯ ಚಟುವಟಿಕೆಗೆ ರೂ.5000 ದೇಣಿಗೆ ವಿತರಿಸಲಾಯಿತು. ರೀನಾ ಶೆಟ್ಟಿ ಹಾಗೂ ಲಿಯೋ ಅಂದ್ರಾದೆಯವರು, ಸದಸ್ಯರಿಗೆ ವಿವಿಧ ಮನೋರಂಜನಾ ಆಟಗಳನ್ನು ನಡೆಸಿಕೊಟ್ಟರು. ಕ್ಲಬ್ ನ ಅಧ್ಯಕ್ಷ ಶಂಭು ಶಂಕರ್ ರವರು ಸ್ವಾಗತಿಸಿದರು. ಅಲೆನ್ ಲೂವಿಸ್ ಮತ್ತು ಗಿರೀಶ್ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ವಂದಿಸಿದರು.

ಜಿಲ್ಲೆಯ ಪ.ಜಾತಿ, ಪಂಗಡದ ಎಲ್ಲಾ ವಸತಿ ರಹಿತರಿಗೆ ಭೂಮಿ ನೀಡಲು ಕ್ರಮ

Thumbnail
Posted On: 14 Jan 2022, 09:12 PM

ಉಡುಪಿ : ಉಡುಪಿ ಜಿಲ್ಲೆಯಲ್ಲಿರುವ ವಸತಿ ರಹಿತ ಪ.ಜಾತಿ ಮತ್ತು ಪಂಗಡದ ಅರ್ಹ ಎಲ್ಲಾ ಕುಟುಂಬಗಳಿಗೆ ಭೂಮಿ ನೀಡುವ ಕುರಿತಂತೆ, ಲಭ್ಯವಿರುವ ಭೂಮಿಯ ಪ್ರಮಾಣ ಕುರಿತು 15 ದಿನದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ಹಾಲ್ನಲ್ಲಿ, ಉಡುಪಿ ಜಿಲ್ಲೆಯ ಡಿಸಿ ಮನ್ನಾ ಜಾಗದ ಸಮಸ್ಯೆ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಪ.ಜಾತಿ ಮತ್ತು ಪಂಗಡದ ಕುಟುಂಬ ತಮಗೆ ಸ್ವಂತ ಜಾಗ ಇಲ್ಲ ಎನ್ನುವಂತಾಗಬಾರದು. ಆದ್ದರಿಂದ ಜಿಲ್ಲೆಯಲ್ಲಿ ಲಭ್ಯವಿರುವ ಡಿಸಿ ಮನ್ನಾ ಭೂಮಿ, ಕಂದಾಯ ಭೂಮಿಯ ವಿವರಗಳನ್ನು ಸಂಗ್ರಹಿಸಿ ಅದರಲ್ಲಿ ಪ.ಜಾತಿ ಪಂಗಡದ ಜನತೆಗೆ ನೀಡಬಹುದಾದ ಭೂಮಿಯ ಪ್ರಮಾಣ ಮತ್ತು ಖಾಸಗಿಯವರಿಂದ ಖರೀದಿಸಿ ನೀಡಬಹುದಾದ ಭೂಮಿ ಮತ್ತು ಭೂ ಒಡೆತನ ಯೋಜನೆಯ ಮೂಲಕ ನೀಡಬಹುದಾದ ಭೂಮಿಯ ಬಗ್ಗೆ ಎಲ್ಲಾ ತಾಲೂಕುವಾರು ಸಮಗ್ರ ವಿವರಗಳನ್ನು ನೀಡುವಂತೆ ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ಭೂಮಿಯ ಅಗತ್ಯತೆ ಇರುವ ಪ.ಜಾತಿ, ಪಂಗಡದದರ ಸಂಖ್ಯೆ, ಈಗಾಗಲೇ ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಪ.ಜಾತಿ ಪಂಗಡದವರ ವಿವರ, ಇವರಿಗೆ ನೀಡಲು ಅಗತ್ಯವಿರುವ ಭೂಮಿಯ ಪ್ರಮಾಣ ಕುರಿತಂತೆ ಎಲ್ಲಾ ಗ್ರಾಮ ಮತ್ತು ತಾಲೂಕುವಾರು ವಿವರಗಳನ್ನು ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಪ.ಜಾತಿ ಮತ್ತು ಪಂಗಡದವರಿಗೆ ಖಾಸಗಿಯವರಿಂದ ಭೂಮಿ ಖರೀದಿಸಿ ನೀಡುವ ಕುರಿತಂತೆ ಹಣದ ಕೊರತೆ ಇಲ್ಲ. ಇದಕ್ಕಾಗಿ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆದ್ದರಿಂದ ಶೀಘ್ರದಲ್ಲಿ ಭೂಮಿಯನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪಂಗಡದ ಯಾವುದೇ ಕುಟುಂಬ ಸ್ವಂತ ಭೂಮಿಯಿಲ್ಲದಂತೆ ಇರಬಾರದು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅನಿತಾ ಮಡ್ಲೂರು, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಹೊರ ಜಿಲ್ಲೆಗಳಿಂದ ಭತ್ತ ಖರೀದಿಗೆ ಅನುಮತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Thumbnail
Posted On: 14 Jan 2022, 09:06 PM

ಉಡುಪಿ : ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿನ ಜಿಲ್ಲೆಯ ಸ್ಥಳೀಯ ಕುಚ್ಚಲಕ್ಕಿ ಪ್ರಬೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಯ ಭತ್ತವನ್ನು ಜಿಲ್ಲೆಯ ಬಹುತೇಕ ರೈತರು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿದ್ದು, ಸ್ಥಳೀಯ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಈ ಭತ್ತವನ್ನು ರಾಜ್ಯದ ಬೇರೆ ಜಿಲ್ಲೆಗಳಿಂದ ಖರೀದಿಸುವ ಕುರಿತಂತೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಿರ್ದೇಶನ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಮೂಲಕ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿಯನ್ನು ನೀಡುವ ಕುರಿತಂತೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರವು ಭತ್ತ ಸಾಮಾನ್ಯ ದರ 1,940 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ 1,960 ರೂ. ದರ ನಿಗದಿಪಡಿಸಿ, ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಸ್ಥಳೀಯ ಕುಚ್ಚಲಕ್ಕಿ ಪ್ರಬೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಸ್ಥಳೀಯವಾಗಿ ಖರೀದಿಸಿ, ಸಂಸ್ಕರಿಸಿ, ಸ್ಥಳೀಯ ಪಡಿತರ ವ್ಯವಸ್ಥೆಯಲ್ಲಿ ಬಳಸಲು ಅನುಮತಿ ನೀಡಿದ್ದು, ಇದು ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದು, ಸ್ಥಳೀಯ ರೈತರಿಗೆ ಸಹ ತಮ್ಮ ಬೆಳೆಗೆ ಉತ್ತಮ ದರ ಪಡೆಯಲು ಸಾಧ್ಯವಾಗಿದೆ. ಆದರೆ ಪ್ರಸ್ತುತ ವರ್ಷದಲ್ಲಿ ಕೇಂದ್ರದ ಆದೇಶ ಬರುವ ವೇಳೆಗೆ ಜಿಲ್ಲೆಯ ಬಹುತೇಕ ರೈತರು ತಾವು ಬೆಳೆದ ಭತ್ತವನ್ನು ಮಾರಾಟ ಮಾಡಿದ್ದು, ಇದರಿಂದ ಸ್ಥಳೀಯವಾಗಿ ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡಲು ಭತ್ತದ ಕೊರತೆಯಾಗುವುದರಿಂದ, ಇದೇ ತಳಿಯನ್ನು ಬೆಳೆದಿರುವ ರಾಜ್ಯದ ಶಿವಮೊಗ್ಗ, ಮಂಡ್ಯ, ಮೈಸೂರು ಮತ್ತಿತರ ಜಿಲ್ಲೆಗಳಿಂದ ಬೆಂಬಲ ಬೆಲೆ ಖರೀದಿಗೆ ಅನುಮತಿ ನೀಡುವ ಬಗ್ಗೆ ತಕ್ಷಣವೇ ಕೇಂದ್ರದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಜಿಲ್ಲೆಯ ರೈತರು ತಮ್ಮಲ್ಲಿನ ಭತ್ತವನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಫ್ರೂಟ್ಸ್ ತಂತ್ರಾಂಶದಲ್ಲಿ ತಕ್ಷಣದಿಂದಲೇ ನೊಂದಣಿಯನ್ನು ಮಾಡಿಕೊಳ್ಳುವಂತೆ ತಿಳಿಸಿದ ಸಚಿವರು, ಭತ್ತವನ್ನು ಸಂಸ್ಕರಿಸುವ ಕುರಿತಂತೆ ಸ್ಥಳೀಯ ಅಕ್ಕಿ ಗಿರಣಿಗಳ ಮಾಲೀಕರೊಂದಿಗೆ ಶೀಘ್ರದಲ್ಲಿ ಚರ್ಚೆ ನಡೆಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯಲ್ಲಿ ವರ್ಷಕ್ಕೆ ಅಗತ್ಯವಿರುವ ಸ್ಥಳಿಯ ಭತ್ತದ ಪ್ರಮಾಣ, ಇಲ್ಲಿ ಬೆಳೆಯುವ ಭತ್ತದ ಪ್ರಮಾಣ, ಕೊರತೆಯಾಗುವ ಭತ್ತದ ಪ್ರಮಾಣ ಮತ್ತು ಹೊರ ಜಿಲ್ಲೆಗಳಿಂದ ಖರೀದಿಗೆ ಅಗತ್ಯವಿರುವ ಭತ್ತದ ಪ್ರಮಾಣದ ಕುರಿತು ಸಮಗ್ರ ಅಂಕಿ ಅಂಶಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ರೈತರಿಂದ ಸಂಗ್ರಹಿಸುವ ಭತ್ತವನ್ನು ಸಂಗ್ರಹಿಸಲು ಮತ್ತು ಅದನ್ನು ಅಕ್ಕಿಯನ್ನಾಗಿ ಮಾರ್ಪಡಿಸಿ, ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಜಿಲ್ಲೆಯಲ್ಲಿಯೇ ದಾಸ್ತಾನು ಮಾಡಲು ಅಗತ್ಯವಿರುವ ಸುಸಜ್ಜಿತ ಖಾಯಂ ಅಕ್ಕಿ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಸೂಕ್ತ ಸ್ಥಳ ಗುರುತಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ರೈತರು ಬೆಳೆದ ಭತ್ತವನ್ನು ಸ್ಥಳೀಯವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸುವುದರಿಂದ ರೈತರಿಗೂ ಲಾಭವಾಗುವ ಜೊತೆಗೆ ಸ್ಥಳೀಯ ಪಡಿತರ ಚೀಟಿದಾರರಿಗೆ ಉತ್ತಮ ಗುಣಮಟ್ಟದ ಕುಚ್ಚಲಕ್ಕಿಯನ್ನು ನೀಡಬಹುದಾಗಿದ್ದು, ಇದರಿಂದ ಮುಂದಿನ ದಿನದಲ್ಲಿ ರೈತರಿಗೆ ಸಹ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲು ಉತ್ತೇಜನ ದೊರೆಯುತ್ತದೆ ಎಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅವಿಭಜಿತ ಜಿಲ್ಲೆಯ ಜನತೆಯ ಬಹುವರ್ಷಗಳ ಈ ಬೇಡಿಕೆಯನ್ನು ಈಡೇರಿಸುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ನಡಹಳ್ಳಿ, ಉಪಾಧ್ಯಕ್ಷ ಕಿರಣ್ ಕೊಡ್ಗಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ನಿರ್ದೇಶಕಿ ಶಮ್ಲಾ ಇಕ್ಬಾಲ್, ಉಡುಪಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಆಹಾರ ಇಲಾಖೆಯ ಉಪ ನಿರ್ದೇಶಕ ಮೊಹಮದ್ ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.

ಕುಖ್ಯಾತ ಆರೋಪಿ ಆಕಾಶಭವನ ಶರಣ್ ಹಾಗೂ ಇತರ ನಾಲ್ವರ ಸೆರೆ

Thumbnail
Posted On: 14 Jan 2022, 02:17 PM

ಮಂಗಳೂರು : ಇಲ್ಲಿನ ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿ 2 ತಿಂಗಳ ಹಿಂದೆ ಜೈಲ್ ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆಕಾಶಭವನ ಶರಣ್ ಅಲಿಯಾಸ್ ರೋಹಿದಾಸ್ ಹಾಗೂ ಆತನ ಇತರ 4 ಸಹಚರರನ್ನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ‌. ಪ್ರಕರಣದ ವಿವರ : ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರಿಡ್ಜ್ ಬಳಿಯಲ್ಲಿ ಡಿಸೆಂಬರ್‌ 12 ರಂದು ರಾತ್ರಿ ಸುಮಾರು 11-30ಕ್ಕೆ ಹಳೆಯಂಗಡಿ ನಿವಾಸಿಯೊಬ್ಬರು ತನ್ನ ದ್ವಿಚಕ್ರ ವಾಹನದಲ್ಲಿ ಚೇಳಾರು ನಂದಿನಿ ಬ್ರಿಡ್ಜ್ ಪರಿಸರದಲ್ಲಿ ಹೋಗುತ್ತಿದ್ದ ಸಮಯ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ಮೊಬೈಲ್ ಫೋನ್, ನಗದು ರೂ. 3000/- ಹಾಗೂ ಕೆಎ-19-ಹೆಚ್ ಎ-3016 ಟಿವಿಎಸ್ ದ್ವಿಚಕ್ರವನ್ನು ಸುಲಿಗೆ ಮಾಡಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಈ ಪ್ರಕರಣದಲ್ಲಿ ಭಾಗಿಯಾದ ಮಂಗಳೂರಿನ ಆಕಾಶಭವನ ನಿವಾಸಿ ರೋಹಿದಾಸ್ ಅಲಿಯಾಸ್ ಶರಣ್ ಆಕಾಶಭವನ (38), ಕಂಕನಾಡಿ ನಿವಾಸಿ ಅನಿಲ್ ಕುಮಾರ್ ಸಾಲ್ಯಾನ್ @ ಅನಿಲ್ ಪಂಪ್ ವೆಲ್ (40), ಬಜ್ಪೆ ನಿವಾಸಿ ಸೈನಾಲ್ ಡಿ ಸೋಜಾ (22), ಬಂಟ್ವಾಳದ ಫರಂಗಿಪೇಟೆ ನಿವಾಸಿ ಪ್ರಸಾದ್ (39), ಜೆಪ್ಪಿನಮೊಗರು ನಿವಾಸಿ ಚೇತನ್ ಕೊಟ್ಟಾರಿ (35) ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ಪೈಕಿ ಆಕಾಶಭವನ ಶರಣ್ ಎಂಬಾತನು ಈ ಪ್ರಕರಣದ ಪ್ರಮುಖ ಸೂತ್ರದಾರಿಯಾಗಿದ್ದು, ಈತನು ಇತ್ತೀಚೆಗೆ ಜೈಲ್ ನಿಂದ ಜಾಮೀನು ಪಡೆದು ಬಿಡುಗಡೆಗೊಂಡವನು ತನ್ನ ಸಹಚರರೊಂದಿಗೆ ಸೇರಿ ಈ ಕೃತ್ಯವನ್ನು ಎಸಗಿರುವುದಾಗಿದೆ. ಈ ಕೃತ್ಯಕ್ಕೆ ಉಪಯೋಗಿಸಿದ ಬಿಳಿ ಬಣ್ಣದ ಮಹೇಂದ್ರ ಎಕ್ಸ್ ಯುವಿ ಕಾರು, 3 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಆಕಾಶಭವನ ಶರಣ್ ಅಲಿಯಾಸ್ ರೋಹಿದಾಸ್ ತನ್ನ ಸಹಚರರ ಮೂಲಕ ವಿರೋಧಿ ತಂಡದ ವ್ಯಕ್ತಿಯನ್ನು ಕೊಲೆ ಮಾಡಲು ಸಂಚು ರೂಫಿಸುತ್ತಿದ್ದ ವಿಚಾರಣೆ ವೇಳೆ ತಿಳಿದುಬಂದಿರುತ್ತದೆ. ಈತನ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದಾಖಲಾದ ಸುಲಿಗೆ ಪ್ರಕರಣದಲ್ಲಿ ಸುಲಿಗೆ ಮಾಡಿದ ಮೊಬೈಲ್ ಫೋನ್ ನಿಂದ ಆಕಾಶಭವನ ಶರಣ್ ನು ಬೆದರಿಕೆ ಹಾಕಿರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರಿದಿದೆ.

ಕಾಪು : ಜನತಾದಳದ ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರಿಗೆ ಅಭಿನಂದನಾ ಸಮಾರಂಭ

Thumbnail
Posted On: 13 Jan 2022, 10:37 PM

ಕಾಪು : ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಜನತಾದಳ (ಜಾತ್ಯತೀತ)ಪಕ್ಷದ ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರವರಿಗೆ ಅಭಿನಂದನಾ ಸಮಾರಂಭ ಹಾಗೂ ಪಕ್ಷದ ಅಭ್ಯರ್ಥಿಯಾಗಿ ಇತರೆ ವಾಡ್೯ಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಾಗರಿಕರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭವು ಜನವರಿ 12ರಂದು ಕೊಂಬಗುಡ್ಡೆ ವಾರ್ಡಿನಲ್ಲಿ ನಡೆಯಿತು. ಸಮಾರಂಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ವಾಸುದೇವರಾವ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ರಾಜ್ಯ ನಾಯಕರಾದ ಉದಯ ಹೆಗ್ಡೆ ಮತ್ತು ರಾಜ್ಯ ಯುವ ಜನತಾದಳದ ಉಪಾಧ್ಯಕ್ಷರಾದ ಸೈಯದ್ ಶಾಹಿದ್ ರವರು ಮಾತನಾಡಿದರು. ವಿಜೇತ ಅಭ್ಯರ್ಥಿ ಉಮೇಶ್ ಕರ್ಕೇರರವರು ಸನ್ಮಾನವನ್ನು ಸ್ವೀಕರಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ, ತನ್ನ ವಾರ್ಡಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುವ ಬಗ್ಗೆ ಭರವಸೆ ನೀಡಿದರು. ತನ್ನನ್ನು ಚುನಾಯಿಸಿದ ಮತದಾರರೆಲ್ಲರಿಗೂ, ಕಾರ್ಯಕರ್ತರಿಗೂ, ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರು ಮಾತನಾಡಿ ಜನತಾದಳ ಪಕ್ಷದ ಈವರೆಗಿನ ಸಾಧನೆ, ಮುಂದಿನ ಯೋಜನೆ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ದೇವೇಗೌಡರು ಈ ರಾಜ್ಯಕ್ಕೆ ಕೊಟ್ಟಂತಹ ಕಾರ್ಯಕ್ರಮಗಳು, ಪ್ರಾದೇಶಿಕ ಪಕ್ಷಗಳು ನಮಗೆ ಯಾವ ರೀತಿ ಅಗತ್ಯವಿದೆ ಎಂಬುದರ ಬಗ್ಗೆ ಮತ್ತು ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳು ಮತ್ತು ಕುಮಾರಸ್ವಾಮಿಯವರು 2023ಕ್ಕೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತನ್ನು ಹೇಳುತ್ತಾ, ಇನ್ನು ಮುಂದೆ ಕೊಂಬಗುಡ್ಡೆ ವಾರ್ಡಿನ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಉಮೇಶ್ ಕರ್ಕೇರರವರ ಒಟ್ಟಿಗೆ ತಾನು ಕೂಡ ಇದ್ದು ತಮ್ಮೆಲ್ಲರ ಕೆಲಸಮಾಡುತ್ತೇನೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಸಹಕರಿಸಿದ ಕಾರ್ಯಕರ್ತರಿಗೆ, ಮತದಾರ ಬಾಂಧವರಿಗೆ, ಊರಿನವರಿಗೆ ಧನ್ಯವಾದಗಳನ್ನು ಸಲ್ಲಿಸಿ ಯಾವತ್ತೂ ನಿಮ್ಮೆಲ್ಲರ ಸಹಕಾರ ನಮ್ಮ ಪಕ್ಷಕ್ಕೆ ಇರಲಿ ನಾವು ನಿಮ್ಮೊಂದಿಗಿದ್ದೇವೆ ಮುಂದಿನ ದಿನಗಳಲ್ಲಿ ಕಾಪು ಪುರಸಭೆಯ 23 ವಾರ್ಡ್ ಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಸ್ಪರ್ಧಾ ಕಣಕ್ಕೆ ಇಳಿಸಿ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಷ್ಟೇ ಅಲ್ಲದೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿ ಪಕ್ಷವನ್ನು ಅಧಿಕಾರ ತರುವಲ್ಲಿ ನಾವು ಪ್ರಯತ್ನ ಮಾಡುತ್ತೇವೆ ನಮಗೆ ವಿಶ್ವಾಸ ಇದೆ ಎಂದರು. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಬದಿಗಿರಿಸಿ ಪ್ರಾದೇಶಿಕ ಪಕ್ಷಕ್ಕೆ ಮತದಾರರು ಮನ್ನಣೆ ಕೊಡುತ್ತಾರೆ. ನಮಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಊರಿನ ಪ್ರಮುಖ ಹಿರಿಯರು, ಪಕ್ಷದ ರಾಜ್ಯ, ಜಿಲ್ಲಾ ನಾಯಕರುಗಳು ಉಡುಪಿ ಜಿಲ್ಲೆಯ ವೀಕ್ಷಕರಾದ ಸುಧಾಕರ ಶೆಟ್ಟಿ, ಕಾಪು ಬ್ಲಾಕ್ ಕಾರ್ಯಾಧ್ಯಕ್ಷರಾದ ರಾಜು ಆರ್ ಪುತ್ರನ್, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಯರಾಮ ಆಚಾರ್ಯ ವಂದಿಸಿದರು.

ಉದ್ಯಾವರ : ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದ 77ನೇ ವಾರ್ಷಿಕ ಮಂಗಲೋತ್ಸವ

Thumbnail
Posted On: 13 Jan 2022, 08:50 PM

ಉದ್ಯಾವರ : ಇಲ್ಲಿನ ಬಿಲ್ಲವ ಮಹಾಜನ ಸಂಘ (ರಿ.) ಇದರ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ 77ನೇ ವಾರ್ಷಿಕ ಮಂಗಲೋತ್ಸವವು ಜರಗಲಿದೆ. ಜನವರಿ 3ರಿಂದ ಮೊದಲ್ಗೊಂಡು 12ರ ತನಕ ನಗರಭಜನೆ, 13ರಂದು ಮಧ್ಯಾಹ್ನ ಗಂಟೆ 12-15ಕ್ಕೆ ಕಲಶ ಪ್ರತಿಷ್ಠೆಯಾಗಿ ಮರುದಿನ 14, ಶುಕ್ರವಾರ ಪೂರ್ವಾಹ್ನ ಗಂಟೆ 9ರ ಪರ್ಯಂತ ನಡೆಯಲಿರುವ ಸಪ್ತಝಾಮದ ಶ್ರೀ ದೇವಿ ಭಜನಾ ಸಪ್ತಾಹ ಮಹೋತ್ಸವ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ‌.

ಮಕರ ಸಂಕ್ರಮಣ ಆಧ್ಯಾತ್ಮಿಕ ಪುಣ್ಯಕಾಲ - ದೇವಯಾನದ ಆರಂಭ

Thumbnail
Posted On: 13 Jan 2022, 06:39 PM

ಸಾಂಸ್ಕೃತಿಕ ಸಂಭ್ರಮಗಳಿಗೆ ಕಾಂತಿ ಹೆಚ್ಚುವ, ಧಾರ್ಮಿಕ ಆಚರಣೆಗಳಿಗೆ ಪ್ರಶಸ್ತವೆನಿಸುವ, ಆಧ್ಯಾತ್ಮಿಕವಾಗಿ ’ಪುಣ್ಯಕಾಲ’ ಎಂದು ನಂಬಲಾಗುವ ’ಉತ್ತರಾಯಣ’ವು ಮಕರ ಸಂಕ್ರಮಣದಿಂದ ಆರಂಭವಾಗುತ್ತದೆ. ಮಿಥುನ ಮಾಸ ಕಳೆದು ಕರ್ಕಾಟಕ ಮಾಸ ಪ್ರಾರಂಭವಾಗುವಾಗ ದಕ್ಷಿಣಾಯನ ಮೊದಲಿಡುತ್ತದೆ. ಆರು ತಿಂಗಳ ಬಳಿಕ ಧನುರಾಶಿಯಿಂದ ಸೂರ‍್ಯ ಮಕರ ರಾಶಿಗೆ ಪ್ರವೇಶಿಸುತ್ತಿರುವಂತೆಯೇ ಉತ್ತರಾಯಣ ಸನ್ನಿಹಿತವಾಗುತ್ತದೆ. ದಕ್ಷಿಣಾಯನವು ’ಪಿತೃಯಾನ’ವೆಂದೂ, ಉತ್ತರಾಯಣವು ’ದೇವಯಾನ’ವೆಂದೂ ವಿಭಾಗಿಸಲ್ಪಟ್ಟಿವೆ. ಉಪನಿಷತ್ತು, ಭಗವದ್ಗೀತೆ, ಮಹಾಭಾರತಗಳಲ್ಲಿ ದೇವಯಾನದ ಉಲ್ಲೇಖವಿದೆ. ಪ್ರಾಶಸ್ತ್ಯದ ವಿವರಣೆ ಇದೆ. ಭೀಷ್ಮರಂತಹ ಮಹನೀಯರು ಶರಶಯ್ಯೆಯಲ್ಲಿ ಮಲಗಿಯೇ ತನ್ನ ನಿಷ್ಕ್ರಮಣಕ್ಕೆ ಉತ್ತರಾಯಣವನ್ನು ನಿರೀಕ್ಷಿಸುತ್ತಾ ಕಾಲ ಕಳೆದರು. ಪ್ರಕೃತಿಯ ರಮ್ಯಾದ್ಭುತ ಸ್ಥಿತ್ಯಂತರಗಳನ್ನು ಗಮನಿಸುತ್ತಲೇ ತನ್ನ ಬದುಕಿಗೊಂದು ಸುಂದರ ಸಂವಿಧಾನವನ್ನು ರೂಪಿಸಿಕೊಂಡ ಮಾನವ ಈ ನಿಷ್ಕರ್ಷೆಗೆ ಶತಮಾನ ಶತಮಾನಗಳಷ್ಟು ದೀರ್ಘ ಅವಧಿಯಲ್ಲಿ ಅಧ್ಯಯನ (ಗಮನಿಸಿ ಪಡೆದ ಅನುಭವ) ನಡೆಸಿರಬೇಕು, ಕೊನೆಗೊಂದು ನಿರ್ಧಾರಕ್ಕೆ ಬಂದಿರಬೇಕು. ಆದರೆ ಕಾಲಗಣನೆಗೆ ವ್ಯವಸ್ಥೆ ಒದಗಿದರೂ ಕಾಲದ ಗತಿಯನ್ನು ನಿರ್ಧರಿಸಲಾಗದೆ, ಪಥವನ್ನು ನಿಖರವಾಗಿ ನಿರೀಕ್ಷಿಸಲಾಗದೆ, ’ಕಾಲಯ ತಸ್ಮೈ ನಮಃ’ ಎಂದಿರಬೇಕು. ಎಲ್ಲ ಕಾಲವು ಸಂದರ್ಭಾನುಸಾರ, ಸಂಭವ ವಿಧಾನದಿಂದ ಪ್ರಶಸ್ತವೇ ಆದರೂ ಕೆಲವು ತಿಂಗಳು, ಪರ್ವ ದಿನಗಳು, ಸಂಕ್ರಮಣ, ಅಮಾವಾಸ್ಯೆ, ಹುಣ್ಣಿಮೆಗಳು ಹೆಚ್ಚು ಪ್ರಶಸ್ತವೆಂದು ನಮ್ಮ ಪೂರ್ವಸೂರಿಗಳು ನಿರ್ಧರಿಸಿದ ಆಚರಣೆಗಳಿರುತ್ತವೆ ಅಥವಾ ಸಂಭ್ರಮದ ಹಬ್ಬಗಳಿರುತ್ತವೆ. ಭೂಮಿ, ಆಕಾಶ ಈ ನಡುವೆ ಹೇಗೆ ಪ್ರಕೃತಿಯನ್ನು ಅನುಸರಿಸುತ್ತಾ ಮಾನವನು ಭೂಮಿಯನ್ನು ವಾಸಯೋಗ್ಯವಾಗುವಂತೆ ಬಳಸಿಕೊಂಡನೊ ಅಂತೆಯೇ ಆಕಾಶವನ್ನು ಗಮನಿಸುತ್ತಾ ನಿತ್ಯ ಉದಯಿಸಿ ಅಸ್ತಮಿಸುವ ಸೂರ‍್ಯನನ್ನು ತಲೆಎತ್ತಿ ನೋಡುತ್ತಲೆ ಖಗೋಳ ಜ್ಞಾನವನ್ನು ಪಡೆದ. ಈ ನಿರಂತರ ಅಧ್ಯಯನವೇ ಆದಿಮದಿಂದ ಶಿಷ್ಟದವರೆಗೆ ಸಾಗಿ ಬಂದು ಮನುಕುಲದ ವ್ಯವಸ್ಥಿತ ಜೀವನ ವಿಧಾನ ಸ್ಥಾಯಿಯಾಯಿತು ಎನ್ನಬಹುದು. ಕಳೆ ಏರುವುದು : ದೀಪಾವಳಿಯಿಂದ ಆಚರಣೆಗಳು ಆರಂಭವಾಗುತ್ತದೆ. ಕೋಲ-ನೇಮಗಳು, ಉತ್ಸವ ಮಹೋತ್ಸವಗಳು, ನಾಗ-ದೈವಗಳ ಪೂಜೆಗಳು ವೈಭವದಿಂದ ಪ್ರಾರಂಭವಾಗುತ್ತವೆ. ಆದರೆ ಮಕರ ಸಂಕ್ರಮಣದ ಬಳಿಕ ಮಳೆ ಆರಂಭದ ತನಕ (ಬೇಶದ ೧೦ನೇ ದಿನದ ಪತ್ತನಾಜೆಯವರೆಗೆ) ಈ ಆಚರಣೆಗಳಲ್ಲಿ ಹೆಚ್ಚಿನ ಉತ್ಸಾಹ ಎದ್ದು ಕಾಣುತ್ತದೆ. ಶುಭ್ರ ಆಕಾಶ, ವಾತಾವರಣದ ಪೂರಕ ಪ್ರೋತ್ಸಾಹ, ಕೃಷಿಯ ಧಾವಂತಕ್ಕೆ ಸ್ವಲ್ಪ ವಿರಾಮವೂ ಇರುವುದರಿಂದ ಕರಾವಳಿಯ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಸಂಭ್ರಮಗಳಿಗೆ ಕಳೆ ಏರುವುದೇ ಮಕರಸಂಕ್ರಮಣದಿಂದ. ಮದುವೆ, ನೂತನಗೃಹ ಪ್ರವೇಶ, ದೇವಾಲಯಗಳಲ್ಲಿ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕ, ಹೊಸತಾಗಿ ನಿರ್ಮಿಸಲಾಗುವ ದೈವಸ್ಥಾನಗಳ ಒಕ್ಕಲು, ದೈವಸಾನ್ನಿಧ್ಯ ವಿಜೃಂಭಣೆಗೆ ಉತ್ತರಾಯಣ ಪ್ರಶಸ್ತವೆಂಬುದು ಪ್ರಾಚೀನ ಒಡಂಬಡಿಕೆ. ಈಗ ಗಮನಿಸಿದರೆ ದಕ್ಷಿಣಾಯನದಲ್ಲಿ ಒಂದು ಕಾಲಕ್ಕೆ ನಿಷಿದ್ದವಾಗಿದ್ದ ಎಲ್ಲ ಶುಭ ಶೋಭನಾದಿಗಳು, ಸತ್ಕಾರ್ಯಗಳು ನೆರವೇರುತ್ತದೆ. ಮಾನವ ಸ್ವೀಕರಿಸಿದ ವೇಗದ ಜೀವನ ಶೈಲಿಗೆ, ಆಧುನಿಕ ಚಿಂತನೆಗೆ ಎಲ್ಲವೂ ಸಕಾಲ. ಬೇಕು ಎನ್ನಿಸಿದಾಗ ಪಡೆಯುವುದು ಅಥವಾ ಆಚರಿಸುವುದು. ನಿಧಾನವಾದರೆ ಏನೋ ಆದೀತೆಂಬ ಆತಂಕ ಅಥವಾ ಅಂತಹ ಚಿಂತನೆಗಳ ಅಗತ್ಯವೇ ಇಲ್ಲದಿರುವುದು ಇಂದಿನ ಬದುಕು. ಆದರೂ ಉಳಿದು ಬಂದಿವೆ ಕೆಲವು ಆಚರಣೆಗಳು, ನೆನಪುಗಳು, ಪೂರ್ವ ನಿರ್ಧರಿತ ಕಟ್ಟುಪಾಡುಗಳು, ಮಕರ ಸಂಕ್ರಮಣ ಅಂತಹ ಒಂದು ನೆನಪಾಗಿ ಉಳಿದಿದೆ, ಆಚರಿಸಲ್ಪಡುತ್ತಿದೆ. ತೀರ್ಥಸ್ನಾನ , ಸಪ್ತೋತ್ಸವ : ಕದ್ರಿಯ ಗೋ ಮುಖದಲ್ಲಿ ವಿಶೇಷ ತೀರ್ಥಸ್ನಾನಕ್ಕೆ ಮಕರಸಂಕ್ರಮಣ ಪುಣ್ಯಕಾಲ. ನಿತ್ಯೋತ್ಸವದ ದೇವಾಲಯಗಳ ನಗರ ಉಡುಪಿಯಲ್ಲಿ ಸಪ್ತೋತ್ಸವದ ಭವ್ಯ ಅನಾವರಣ. ಉಡುಪಿಯ ರಥಬೀದಿ ನಿಜ ಅರ್ಥದ ನಡೆ ದೇಗುಲಗಳು ಗಂಭೀರವಾಗಿ ಹಾದುಹೋಗುವ ದೃಶ್ಯಾವಳಿಗೆ ಸಾಕ್ಷಿಯಾಗುತ್ತದೆ. ಎಳ್ಳು-ಬೆಲ್ಲ ಬೀರುವ ಸಂಪ್ರದಾಯ ಮೂಲತಃ ತುಳು ನಾಡಿನಲ್ಲಿಲ್ಲ, ಆದರೆ ಈಗ ಈ ಶಿಷ್ಟಾಚಾರವೂ ರೂಢಿಯಲ್ಲಿದೆ. ಮಕರಸಂಕ್ರಮಣದಿಂದ ಮುಂದೆ ಧರೆಗಿಳಿಯುವ ದೇವ ದೇವರುಗಳು, ನೆಲದ ಸತ್ಯಗಳು ಎದ್ದು ಬರುವ ದೈವಲೋಕದ ಅನಾವರಣ, ನಾಗ-ಬ್ರಹ್ಮರ ಅಲೌಕಿಕ ಸೃಷ್ಟಿಗಳಿಗೆಲ್ಲ ಅಮಿತ ಉತ್ಸಾಹ. ಕಾರಣ ಪರಿಸರ; ಮಾವು, ಗೇರು ಮುಂತಾದ ಮರಗಳು ಹೂ ಬಿಡುತ್ತವೆ; ವಾತಾವರಣ ’ಪ್ರಚೋದಕವಾಗಿರುತ್ತದೆ. ಹೊಸ ಹರುಷ ತುಂಬಿರುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ ಶಬರಿಮಲೆ ಯಾತ್ರೆ ಜನಪ್ರಿಯವಾಗುತ್ತಿದೆ. ಪ್ರತಿ ಮನೆಯಿಂದಲೋ ಒಂದು ಕುಟುಂಬದಿಂದಲೋ ಓರ್ವ ಭಕ್ತ ವ್ರತಸ್ಥನಾಗಿ ’ಸ್ವಾಮಿ’ ಎನಿಸಿ ಅಯ್ಯಪ್ಪ ದರ್ಶನಕ್ಕೆ ಸಾಗಿ ಮಕರ ಸಂಕ್ರಮಣದ ದಿನ ಗೋಚರಿಸುವ ’ಮಕರಜ್ಯೋತಿ’ಯನ್ನು ಕಂಡು, ಧನ್ಯತಾಭಾವದೊಂದಿಗೆ ಮರಳಿ ಬಂದು ಪ್ರಸಾದ ಹಂಚುವ ಧಾರ್ಮಿಕ ಮನೋಭಾವ ಈ ಕಾಲದಲ್ಲಿ ಪ್ರತಿ ಊರಿನಲ್ಲೂ ಕಾಣುತ್ತೇವೆ. ಒಂದು ಸ್ಥಿತ್ಯಂತರ ಉತ್ಕರ್ಷಗಾಮಿಯಾಗಿ ಸಾಗಬೇಕು.ಹಾಗೆ ಮಕರಸಂಕ್ರಮಣ ಸ್ವೀಕರಿಸಲ್ಪಡುತ್ತಿದೆ. ಬಡಕಾಯಿ ಪೋಪಿನಿ : ತುಳುವರಿಗೆ ಈ ಪರ್ವಕಾಲ ಪ್ರಾಕೃತಿಕ ಸ್ಥಿತ್ಯಂತರದ ಜ್ಞಾನವಿದೆ ಎಂಬ ನೆನಪಾಗಿ ಮಾತ್ರ ಇರುತ್ತದೆ. ಸಂಭ್ರಮದ ಆಚರಣೆಗಳಲ್ಲಿ ಸುಮಾರು ಮೂಲ್ಕಿ ಹೊಳೆಯವರೆಗೆ ರೂಢಿಯಲ್ಲಿರುವ ಒಂದು ವಿಧಿಯಾಚರಣೆ ಮಾರಣಕಟ್ಟೆಗೆ ಹೋಗುವುದು ಅಥವಾ ’ಬಡಕಾಯಿ ಪೋಪಿನಿ’. ಅಲ್ಲಿ ಹೂ ಒಪ್ಪಿಸುವುದು, ಹರಿವಾಣ ನೈವೇದ್ಯ ಸಮರ್ಪಿಸುವುದು. ಪ್ರಸಾದ ತಂದು ಮನೆಯಲ್ಲಿ ’ಗಡಿ ಆಹಾರ’ ಕೊಡುವ ಒಂದು ವಿಶೇಷ ಪದ್ಧತಿ ರೂಢಿಯಲ್ಲಿದೆ. ’ಎಡೆಬಡಿಸಿ’ ಇಟ್ಟು ಕುಟುಂಬಸ್ಥರು, ನೆಂಟರಿಷ್ಟರು ಸೇರಿ ನಡೆಯುವ ಈ ಆಚರಣೆ ಇಂದಿಗೂ ಶ್ರದ್ಧೆ ಭಕ್ತಿಯಿಂದ ವಾರ್ಷಿಕವೆಂಬಂತೆ ನೆರವೇರುತ್ತದೆ. ಇದಕ್ಕೆ ಮಕರ ಸಂಕ್ರಮಣ ಪ್ರಶಸ್ತಕಾಲ. ಮಾರಣಕಟ್ಟೆಯ ಹೆಸರು ಹೇಳಿ ಯಾರೂ ಶಾಪ ಹಾಕಲಾರರು. ವಾಕ್‌ದೋಷ ನಿವಾರಣೆ ಈ ಸಂದರ್ಭದಲ್ಲಿ ಮಾಡಿಸಿಕೊಳ್ಳುವ ಪರಿಪಾಠವಿದೆ. ಲೇಖನ :ಕೆ.ಎಲ್.ಕುಂಡಂತಾಯ

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ

Thumbnail
Posted On: 13 Jan 2022, 06:29 PM

ಶಿರ್ವ: ಮಂಗಳೂರಿನ ಪ್ರತಿಷ್ಠಿತ ದಿಯಾ ಸಿಸ್ಟಮ್ ಸಂಸ್ಥೆ(ಗ್ಲೋಟಚ್ ಟೆಕ್ನಾಲಜೀಸ್) ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವೂ ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್),ಬಿಇ(ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ(ಸಿಎಸ್),ಎಂಎಸ್ಸಿ (ಸಿಎಸ್), ಎಂಸಿಎ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಶಿರ್ವ ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗ,ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶ ವತಿಯಿಂದ ಜನವರಿ 13 ರಂದು ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ನಡೆಯಿತು. ಇದು ಸ್ಪರ್ಧಾತ್ಮಕ ಯುಗ ಎಂದು ತಿಳಿದಿದೆ ಶಿಕ್ಷಣದ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಕೌಶಲಗಳನ್ನು ಕಲಿತು ಉದ್ಯೋಗವನ್ನು ಪಡೆಯಲು ಹಾಗೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ದಿಯ ಸಿಸ್ಟಮ್ಸ್ ಮ್ಯಾನೇಜರ್ ಎಚ್.ಆರ್ ಶ್ರೀ ಎಬಿನೇಜರ್ ರಾಜಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ | ಹೆರಾಲ್ಡ್ ಐವನ್ ಮೋನಿಸ್ ರವರು ಇಂದು ಸಂವಹನ ಕೌಶಲ್ಯಗಳ ಮಹತ್ವವನ್ನು ಅಭ್ಯರ್ಥಿಗಳು ಅರಿತುಕೊಂಡು ಇಂತಹ ಸಂದರ್ಶನಕ್ಕೆ ಭಾಗವಹಿಸಿ ಉದ್ಯೋಗ ಪಡೆಯಬೇಕು ಎಂದು ಶುಭ ಹಾರೈಸಿದರು. ಇಂದಿನ ಕಾಲದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಳು ಲಭ್ಯವಿದ್ದು ಅದರ ಮಾಹಿತಿಯನ್ನು ಸೂಕ್ತವಾಗಿ ಪಡೆದು - ಸೂಕ್ತ ತಯಾರಿಕೆಯನ್ನು ಮಾಡಿಕೊಂಡು ಇಂತಹ ಸಂದರ್ಶನಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬೇಕಾಗಿದೆ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಶ್ರೀ ಲೆಫ್ಟಿನೆಂಟ್ ಪ್ರವೀಣ್ ಕುಮಾರ್ ಅವರು ಮಾಹಿತಿ ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ದಿಯಾ ಸಿಸ್ಟಮ್ ಸಂಸ್ಥೆಯ ಸೀನಿಯರ್ ಅನಲಿಸ್ಟ್ ಎಚ್.ಆರ್ ಶೀತಲ್ ಭಂಡಾರಿ, ಅನಲಿಸ್ಟ್ ಎಚ್.ಆರ್ ಸುರೇಶ್, ತನುಜ ಎನ್ ಸುವರ್ಣ, ಉಪನ್ಯಾಸಕರಾದ ಸುಷ್ಮಾ, ಪ್ರಕಾಶ್ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಯ್, ದೀಕ್ಷಾ ಪಿಜಿ, ದ್ಯುತಿಶ್ರೀ, ಹಾರ್ದಿಕ್ ಸಾಲಿಯಾನ್, ಸನತ್ ಕುಮಾರ್ ಶೆಟ್ಟಿ ಸಹಕರಿಸಿದರು. ದೀಪಿಕಾ ಮತ್ತು ಬಳಗ ಪ್ರಾರ್ಥಿಸಿ, ಪ್ರಿಯಾಂಕ ಸ್ವಾಗತಿಸಿ, ಸುರೇಖಾ ಕಾರ್ಯಕ್ರಮ ನಿರೂಪಿಸಿದರು. ರಮಿಜಿಯಾ ವಂದಿಸಿದರು.