Updated News From Kaup
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಇನ್ ಸ್ಟಾಗ್ರಾಂ ಟ್ರೋಲ್ ಕಿಂಗ್ 193 ಪೇಜ್ ಅಡ್ಮಿನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
Posted On: 27 Feb 2022, 03:54 PM
ಮಂಗಳೂರು : ಇನ್ ಸ್ಟಾಗ್ರಾಂ ಖಾತೆಯಲ್ಲಿ ವ್ಯಕ್ತಿಯೋರ್ವ ಪ್ರಾರ್ಥನಾಲಯ ಗೋಪುರದ ಮೇಲೆ ಅನ್ಯಧರ್ಮದ ಬಾವುಟ ಹಾರಾಟ ನಡೆಸುವಂತೆ ಎಡಿಟ್ ಮಾಡಿದ ಮೂರು ವಿಡಿಯೋಗಳನ್ನು ಅಪ್ ಲೋಡ್ ಮಾಡಿರುವುದನ್ನು ಕಂಡು ಈ ಪೇಜ್ ನ ವಿರುದ್ಧ ಮಂಗಳೂರಿನ ನಿವಾಸಿಯೋರ್ವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಿಳಿಸಿದಂತೆ ಫೆಬ್ರವರಿ 24ರಂದು ಬೆಳಿಗ್ಗೆ ಸುಮಾರು 8ಗಂಟೆಗೆ ತನ್ನ ಸ್ನೇಹಿತರೊಂದಿಗೆ ಇನ್ ಸ್ಟಾ ಗ್ರಾಂ ಖಾತೆಯನ್ನು ಪರಿಶೀಲಿಸುತ್ತಿರುವಾಗ troll_king_193 ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಯಾರೋ ವ್ಯಕ್ತಿಯು ಪ್ರಾರ್ಥನಾಲಯ ಗೋಪುರದ ಮೇಲೆ ಅನ್ಯಧರ್ಮದ ಬಾವುಟ ಹಾರಾಟ ನಡೆಸುವಂತೆ ಎಡಿಟ್ ಮಾಡಿದ ಮೂರು ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಮಾಡುತ್ತಿರುವುದು ಕಂಡು ಬಂದು ತಮ್ಮ ಮನಸ್ಸಿಗೆ ನೋವುಂಟಾಗಿರುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಮಂಗಳೂರಿನಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಕೋಮು ಗಲಭೆ ನಡೆದು ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ troll_king_193 ಎಂಬ ಇನ್ ಸ್ಟಾಗ್ರಾಂ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಮಂಗಳೂರು ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅ.ಕ್ರ. 29/2022 ಕಲಂ 66(ಸಿ)66(ಡಿ), ಐಟಿ ಕಾಯ್ದೆ ಮತ್ತು ಕಲಂ 153(ಎ), 505(2) ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣಕ್ಕೆ ಸಂಬಂಧಿಸಿ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಬಾಲಕನೊಬ್ಬನನ್ನು ವಿಚಾರಿಸಿಕೊಂಡು ಸಿಇಎನ್ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.
ಬಂಟಕಲ್ಲು : ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
Posted On: 27 Feb 2022, 12:14 PM
ಕಾಪು : ಬಂಟಕಲ್ಲು ಶಾಲೆಯಲ್ಲಿ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮೀನ್ ಸಹಕಾರದೊಂದಿಗೆ ನಡೆದ ಪೋಲಿಯೋ ಲಸಿಕಾ ಶಿಬಿರಕ್ಕೆ ಶಿರ್ವ ಗ್ರಾ.ಪಂ ಅಧ್ಯಕ್ಷ ಕೆ ಆರ್ ಪಾಟ್ಕರ್ ಚಾಲನೆ ನೀಡಿದರು. ಬೆಳಗ್ಗೆ 11 ಗಂಟೆ ಹೊತ್ತಿಗೆ ನೂರಕ್ಕೂ ಅಧಿಕ ಮಕ್ಕಳು ಲಸಿಕೆ ಪಡೆದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯ ಲಸಿಕಾ ಕೇಂದ್ರಗಳ ಸಿಬ್ಬಂದಿಯವರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ತಿಳಿಸಿದರು. ಲಯನ್ಸ್ ಕಾರ್ಯದರ್ಶಿ ಅನಿತಾ ಮೆಂಡೋನ್ಸಾ, ರೀನಾ, ಐರಿನ್, ಅಂಗನವಾಡಿ ಕಾರ್ಯಕರ್ತೆ ವಿನಯಾ, ಆಶಾ ಕಾರ್ಯಕರ್ತೆಯರಾದ ಸವಿತಾ, ಕಮಲ, ರೆಹಮತ್ ಉಪಸ್ಥಿತರಿದ್ದರು.
ಉಕ್ರೇನ್ನಲ್ಲಿ ಇರುವವರು, ಅಲ್ಲಿ ಸಿಲುಕಿಕೊಂಡಿರುವ ಜನರ ಕುಟುಂಬಸ್ಥರು ನೇರವಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಮನವಿ
Posted On: 24 Feb 2022, 10:10 PM
ಮಂಗಳೂರು: ರಷ್ಯಾ-ಉಕ್ರೇನ್ ಸಂಘರ್ಷವು ಸಮರದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಜನರು ನೆಲೆಸಿದ್ದರೆ ಅಥವಾ ಅಲ್ಲಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ನೀಡುವಂತೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನತೆಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಯಾರಾದರೂ ನಮ್ಮವರು ಅಲ್ಲಿ ಸಮಸ್ಯೆಗೆ ಸಿಲುಕಿದ್ದರೆ ಮಾಹಿತಿ ನೀಡಿ, ಅಲ್ಲಿ ಇರುವವರು ಹಾಗೂ ಅಲ್ಲಿ ಸಿಲುಕಿಕೊಂಡಿರುವ ಜನರ ಕುಟುಂಬಸ್ಥರು ನೇರವಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ರವರು ಜಿಲ್ಲಾಧಿಕಾರಿಯವರ ಕಚೇರಿ, ರಜತಾದ್ರಿ ಮಣಿಪಾಲದಲ್ಲಿ ತೆರೆದಿರುವ ಕಂಟ್ರೋಲ್ ರೂಂ. ಸಂಖ್ಯೆ 1077 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಭಾರತದ ದೂತಾವಾಸ ಮತ್ತು ಸರ್ಕಾರದ ಜೊತೆ ಸಂಪರ್ಕದಲ್ಲಿರಲು ವಿದೇಶಾಂಗ ಇಲಾಖೆಯ 1800118797 (Toll free), +91-11-23012113, +91-11 23014104, +91-11-23017905 ಸಂಪರ್ಕ ಸಂಖ್ಯೆಗೆ ಕರೆ Fax: +91-11-23088124, Email: situationroom@mea.gov.in ಮೂಲಕ ಮಾಹಿತಿ ನೀಡಲು ಸರ್ಕಾರ ಸೂಚಿಸಿದೆ.
ರಶ್ಮಿ ಸನಿಲ್ ರಿಗೆ ಚಂದನ ಸಾಹಿತ್ಯ ಜ್ಯೋತಿ ರಾಜ್ಯ ಪ್ರಶಸ್ತಿ
Posted On: 24 Feb 2022, 05:24 PM
ಮಂಗಳೂರು : ಲೇಖಕಿ, ಬರಹಗಾರ್ತಿ, ನೃತ್ಯಪಟು, ನಿರೂಪಕಿ ರಶ್ಮಿ ಸನಿಲ್ ಇವರ ಗಣನೀಯ ಸೇವೆಯನ್ನು ಗುರುತಿಸಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ ಫೆಬ್ರವರಿ 20ರಂದು ಚಂದನ ಸಾಹಿತ್ಯ ಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂ. ಕಾಮ್ ಪದವೀಧರೆಯಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಸನಿಲ್ ಅವರು, ಕನ್ನಡ ತುಳು ಭಾಷೆಯಲ್ಲಿ ಹಿಡಿತವನ್ನು ಹೊಂದಿದ್ದು ನೂರಾರು ಕವನ ರಚಿಸಿ ಮನೆ ಮಾತಾದವರು, 70 ಕ್ಕೂ ಹೆಚ್ಚು ಅಂತರ್ಜಾಲ ಹಾಗೂ ನೇರ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರೌಢಿಮೆ ತೋರಿರುವ ಇವರು ತನ್ನ ಕವನಗಳಿಗಾಗಿ 300 ಕ್ಕೂ ಅಧಿಕ ಬಹುಮಾನ ಪಡೆದುಕೊಂಡವರು. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವರು. ಯುವವಾಹಿನಿ, ರೋಟರಿ, ಮಹಿಳಾ ಮಂಡಳಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ಕಥಾಬಿಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ, ಪುತ್ತೂರು ಸಾಹಿತ್ಯ ವೇದಿಕೆ, ಚಂದನ ಸಾಹಿತ್ಯ ವೇದಿಕೆ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಸದಸ್ಯೆ ಕೂಡ ಆಗಿದ್ದಾರೆ. ಈ ಸಂದರ್ಭದಲ್ಲಿ ಭೀಮರಾವ್ ವಾಷ್ಟರ್ , ನಾರಾಯಣ ಕುಕ್ಕುವಳ್ಳಿ , ವೈಲೇಶ್ ಪಿ. ಕೊಡಗು, ಹಾಜಿ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಭಾರತ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ್ ಬಸ್ರೂರು
Posted On: 24 Feb 2022, 04:37 PM
ಉಡುಪಿ : ಸುದ್ದಿ ಕಿರಣ ಟಿವಿ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕ್ರತ ಇಲಾಖೆಯ ವತಿಯಿಂದ ಕೊಡ ಮಾಡಲ್ಪಡುವ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ಚಂದ್ರಶೇಖರ ಬಸ್ರೂರು ಇವರಿಗೆ ನೀಡಿ ಗೌರವಿಸಲಾಯಿತು. ಫೆಬ್ರವರಿ 20ರಂದು ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣ ಬೆಂಗಳೂರು ರಲ್ಲಿ ನಡೆದ ಸುದ್ದಿ ಕಿರಣ ಟಿ.ವಿ ವಾಹಿನಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವತಿಯಿಂದ ಭಾರತ ಸೇವಾ ರತ್ನ ಪ್ರಶಸ್ತಿ ೨೦೨೨ ನ್ನು ಚಂದ್ರಶೇಖರ ಬಸ್ರೂರು ಇವರಿಗೆ ನೀಡಿ ಗೌರವಿಸಲಾಯಿತು. ರಂಗಭೂಮಿ ಕಲಾವಿದರಾಗಿ, ನಾಟಕ ರಚನೆ ಹಾಗೂ ನಿದೇ೯ಶಕರು, ಸಿನಿಮಾ ನಟ, ನಿದೇ೯ಶಕ,ವನಿಮಾ೯ಪಕರಾಗಿ, ಸಾವ೯ಜನಿಕ ಹೋರಾಟದಲ್ಲಿ ಮುಂಚೂಣಿಯಾಗಿ ಸೇವೆ ಸಲ್ಲಿಸಿರುತ್ತಾರೆ.
ಜಿಲ್ಲೆಯಲ್ಲಿ 73995 ಮಕ್ಕಳಿಗೆ ಪೋಲಿಯೋ ಲಸಿಕೆ : ಕೂರ್ಮಾರಾವ್ ಎಂ
Posted On: 22 Feb 2022, 08:11 PM
ಉಡುಪಿ : ಫೆಬ್ರವರಿ 27 ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜಿಲ್ಲೆಯ 0-5 ವರ್ಷದೊಳಗಿನ 73995 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 0-5 ವರ್ಷದೊಳಗೆ ಗ್ರಾಮೀಣ ಪ್ರದೇಶದ 61105 ಮತ್ತು ನಗರ ಪ್ರದೇಶದ 12890 ಸೇರಿದಂತೆ ಒಟ್ಟು 73995 ಮಕ್ಕಳಿಗೆ ಫೆಬ್ರವರಿ 27 ರಂದು ಪಲ್ಸ್ ಪೋಲಿಯೋ ಲಸಿಕೆ ನೀಡಲು, ಗ್ರಾಮೀಣ ಪ್ರದೇಶದಲ್ಲಿ 571 ಹಾಗೂ ನಗರ ಪ್ರದೇಶದಲ್ಲಿ 91 ಸೇರಿದಂತೆ ಒಟ್ಟು 662 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಇದಲ್ಲದೆ 6 ಮೊಬೈಲ್ ಟೀಮ್ ಮತ್ತು 36 ಟ್ರಾನ್ಸಿಟ್ ಬೂತ್ಗಳನ್ನು ಹಾಗೂ ಎಲ್ಲಾ ಟೋಲ್ಗೇಟ್ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾಗುವುದು ಎಂದರು. ಲಸಿಕಾ ಕಾರ್ಯಕ್ರಮದಲ್ಲಿ 2794 ಲಸಿಕಾ ಸ್ವಯಂಸೇವಕರು ಮತ್ತು 125 ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದು, ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳು, ರೋಟರಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದರು. ಜಿಲ್ಲೆಯ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಉದ್ಘಾಟಣೆಯನ್ನು ಫೆಬ್ರವರಿ 27 ರಂದು ಬೆಳಗ್ಗೆ 8 ಗಂಟೆಗೆ ಸರಕಾರಿ ಕೂಸಮ್ಮ ಶಂಭುಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆ ಉಡುಪಿಯಲ್ಲಿ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು, ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹಾಕಿಸಿ, ಮಕ್ಕಳನ್ನು ಪೋಲಿಯೋದಿಂದ ರಕ್ಷಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಮನವಿ ಮಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ.ರಾಮ, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪಡುಬಿದ್ರಿ : ಈಜಾಡಲು ಸಮುದ್ರಕ್ಕಿಳಿದ ವಿದ್ಯಾರ್ಥಿ ನೀರು ಪಾಲು, ಇಬ್ಬರ ರಕ್ಷಣೆ
Posted On: 19 Feb 2022, 10:57 PM
ಪಡುಬಿದ್ರಿ : ಇಲ್ಲಿನ ಬೀಚ್ನಲ್ಲಿ ಈಜಾಡಲು ಹೋದ ಮೂವರು ಯುವಕರಲ್ಲಿ ಓರ್ವ ವಿದ್ಯಾರ್ಥಿ ನೀರುಪಾಲದ ಘಟನೆ ಶನಿವಾರ ಸಂಜೆ ಕಾಡಿಪಟ್ನ ಎಂಬಲ್ಲಿ ನಡೆದಿದ್ದು, ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೂವರು ಯುವಕರು ಸ್ನೇಹಿತರಾಗಿದ್ದು, ಸಂಜೆ ಸಮುದ್ರಕ್ಕೆ ಇಳಿದ್ದಿದ್ದು, ಸಮುದ್ರದ ಬೃಹತ್ ಅಲೆಗೆ ಸಿಕ್ಕಿ ಮೂವರೂ ಕೂಡ ನೀರುಪಾಲಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಮೀನುಗಾರರು ಇಬ್ಬರನ್ನು ರಕ್ಷಿಸಿದ್ದಾರೆ. ನೀರು ಪಾಲದ ಯುವಕ ಧನುಷ್ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಬಳಿಯ ನಿವಾಸಿಯಾಗಿದ್ದು, ಈತ ನಿಟ್ಟೆ ಕಾಲೇಜಿನ ಡಿಗ್ರಿ ವಿದ್ಯಾರ್ಥಿ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತತ ಹಡುಕಾಟದ ತರುವಾಯ ಇಂದು ಸಂಜೆ ವಿದ್ಯಾರ್ಥಿಯ ಮೃತದೇಹ ದೊರೆತಿದ್ದು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.
ಯು.ಟಿ ಖಾದರ್ ಮತ್ತು ಎಸ್.ಐ.ಓ ಕರ್ನಾಟಕದ ನಿಯೋಗದಿಂದ ಉನ್ನತ ಶಿಕ್ಷಣ ಸಚಿವರ ಭೇಟಿ
Posted On: 17 Feb 2022, 10:02 PM
ಮಂಗಳೂರು : ವಿಧಾನಸಭೆಯ ವಿಪಕ್ಷ ಉಪನಾಯಕ ಯು. ಟಿ. ಖಾದರ್ ಮತ್ತು ಎಸ್.ಐ.ಓ ಕರ್ನಾಟಕದ ನಿಯೋಗದಿಂದ ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಅಶ್ವಥ್ ನಾರಾಯಣ ಅವರನ್ನು ವಿಧಾನಸಭೆಯ ಕಚೇರಿಯಲ್ಲಿ ಭೇಟಿ ಮಾಡಿ ಪದವಿ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸುತ್ತಿರುವುದರ ಕುರಿತು ಚರ್ಚಿಸಲಾಯಿತು. ರಾಜ್ಯದಲ್ಲಿ ನಡೆಯುತ್ತಿರುವ ಸಮವಸ್ತ್ರದ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟಿನ ಮಧ್ಯಂತರ ಆದೇಶವು ತಳಮಟ್ಟದಲ್ಲಿ ವಿವಿಧ ಗೊಂದಲಗಳಿಗೆ ಕಾರಣವಾಗಿದ್ದು, ರಾಜ್ಯದ ಕೆಲವು ಪದವಿ ಕಾಲೇಜುಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುತ್ತಿರುವ ಬಗ್ಗೆ ವರದಿಯಾಗಿದ್ದು ಅದರ ಬಗ್ಗೆ ಉನ್ನತ ಶಿಕ್ಷಣದ ಇಲಾಖೆಯಿಂದ ಸ್ಪಷ್ಟವಾದ ಮಾರ್ಗದರ್ಶನವನ್ನು ಕಾಲೇಜುಗಳಿಗೆ ನೀಡುವಂತೆ ಆಗ್ರಹಿಸಲಾಯಿತು. ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಘನತೆಯ ವ್ಯಕ್ತಿತ್ವವನ್ನು ಇದು ಉಲ್ಲಂಘಿಸುತ್ತದೆ ಹಾಗೂ ಈ ಪ್ರಕ್ರಿಯೆಯೂ ಸಾಮಾಜಿಕವಾಗಿ ಸಭ್ಯತೆಯನ್ನು ಮೀರುವ ನಡೆಯಾಗಿದ್ದು ಇದು ಖಂಡನೀಯವಾಗಿದೆ. ಈ ಸಂದರ್ಭದಲ್ಲಿ ಸಚಿವ ಅಶ್ವಥ್ ನಾರಾಯಣ ರವರು ನಿರ್ದಿಷ್ಟ ಸಮವಸ್ತ್ರ ನಿಗದಿಪಡಿಸಿರುವ ಕಾಲೇಜುಗಳನ್ನು ಹೊರತು ಪಡಿಸಿ ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಿಜಾಬ್ ಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಮೂಡಿಸಬಾರದೆಂದು ಸ್ಪಷ್ಟವಾಗಿ ತಿಳಿಸಿದ್ದು ಕೆಲವು ಕಾಲೇಜುಗಳಲ್ಲಿ ಅಲ್ಲಿನ ಆಡಳಿತ ಮಂಡಳಿಯು ಸಮವಸ್ತ್ರ ನಿಗದಿಪಡಿಸಿದ್ದಲ್ಲಿ ಕೋರ್ಟ್ ಆದೇಶವನ್ನು ಪರಿಗಣಿಸಿ ಸೌಹಾರ್ದಯುತವಾಗಿ ಅನುಷ್ಠಾನ ಮಾಡಬೇಕು ಎಂದರು, ಶಾಲಾ ಅಥವಾ ಕಾಲೇಜಿನ ಗೇಟಿನ ಬಳಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ತಡೆಯುವಂತಿಲ್ಲ, ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರವೇಶಿಸಬಹುದಾಗಿದೆ, ಅಲ್ಲದೇ ಈ ಆದೇಶವು ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು. ಇದೇ ವೇಳೆ ಯು.ಟಿ ಖಾದರ್ ನೇತೃತ್ವದ ಶಾಸಕರ ನಿಯೋಗವು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರನ್ನು ಭೇಟಿ ಮಾಡಿ ಸಮವಸ್ತ್ರದ ವಿವಾದದ ಬಗ್ಗೆ ಮಾತುಕತೆ ನಡೆಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ಸಾಗಾಟ ಮಾಡುತ್ತಿದ್ದ ಕಾರು ಸಹಿತ ಇಬ್ಬರ ಸೆರೆ 2.220 ಕೆಜಿ ಗಾಂಜಾ ವಶಕ್ಕೆ
Posted On: 17 Feb 2022, 11:34 AM
ಮಂಗಳೂರು :ಕೇರಳದ ಕುಂಜತ್ತೂರು ಪರಿಸರದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಫೆಬ್ರವರಿ 16ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ಕಾರಿನಲ್ಲಿ ಅಕ್ರಮ ಮಾದಕ ವಸ್ತುವಾದ ಗಾಂಜಾವನ್ನು ಕೇರಳದಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತ್ರತ್ವದ ತಂಡ ದಾಳಿ ನಡೆಸಿ ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಮಿಂಜ ಗ್ರಾಮ, ಹೊಸಂಗಡಿಯ ಪ್ರಫುಲ್ ರಾಜ್ (23), ಮತ್ತು ಬಂಟ್ವಾಳ ತಾಲೂಕಿನ ಬೊಳಿಯಾರು, ಸಜಿಪ ಗ್ರಾಮದ ಅವಿನಾಶ್ (24) ಎಂಬವರನ್ನು ದಸ್ತಗಿರಿ ಮಾಡಿ ಅವರ ವಶದಿಂದ 2.220 ಕೆಜಿ ತೂಕದ ಗಾಂಜಾ, ನಗದು ರೂ. 1200/- 2 ಮೊಬೈಲ್ ಫೋನ್ ಗಳು ಹಾಗೂ ಮಾರುತಿ ಸ್ವಿಪ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಒಟ್ಟು ಮೌಲ್ಯ ರೂ. 5,50,400/-ಆಗಬಹುದು. ಆರೋಪಿಗಳ ಪೈಕಿ ಅವಿನಾಶ್ ಎಂಬಾತನು ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಾರಿ ವಾಹನಕ್ಕೆ ಹಾನಿಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ಯವರಾದ ರಾಜೇಂದ್ರ ಬಿ, ಪ್ರದೀಪ ಟಿ ಆರ್ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಕಟಪಾಡಿ : ಮಕ್ಕಳ ಗ್ರಾಮ ಸಭೆಯಲ್ಲಿ ಬಾಲ ಪ್ರತಿಭೆಗಳಿಗೆ ಸನ್ಮಾನ
Posted On: 16 Feb 2022, 05:11 PM
ಕಟಪಾಡಿ : ಇಲ್ಲಿನ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷರಾದ ಇಂದಿರಾ ಎಸ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಜರಗಿತು. ಮಕ್ಕಳ ಆರೋಗ್ಯಕರ ಬೆಳವಣಿಗೆಯಲ್ಲಿ ಪೌಷ್ಟಿಕ ಆಹಾರ ಸೇವನೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಅಪೌಷ್ಟಿಕತೆ ನಿವಾರಣೆಗೆ ಕ್ರಮ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪ್ರೇಮಾನಂದ ಕಲ್ಮಾಡಿ ಯವರು ಆಗಮಿಸಿದ್ದರು. ಮಕ್ಕಳ ರಕ್ಷಣಾ ಘಟಕದ ಕಪಿಲ, ಮಕ್ಕಳ ಸಹಾಯವಾಣಿಯಿಂದ ತ್ರಿವೇಣಿ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕಿ ಪ್ರಭಾಕಲಾ, ಮಕ್ಕಳ ನಾಯಕ ರಾದ ಸಮೀಕ್ಷಾ, ಗಣ್ಯ, ಅಂಜಲಿ, ಕವನ, ರೋಷನಿ ಹಾಗೂ ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನ : ಸಭೆಯಲ್ಲಿ ಹಲವು ಪ್ರಶಸ್ತಿ ಗಳನ್ನು ಪಡೆದ ಬಾಲ ಪ್ರತಿಭೆಗಳಾದ ಕೆ.ಪ್ರಥಮ ಕಾಮತ್ ( ಜಾದೂ, ಕ್ಲೇ ಮಾಡೆಲಿಂಗ್), ಯಶಸ್ ಪಿ. ಸುವರ್ಣ (ಕೊಳಲು ವಾದನ), ಮಾಣಿಕ್ ಸುವರ್ಣ ( ಕರಾಟೆ) ಹಾಗೂ ಎಸ್. ಎಸ್. ಎಲ್. ಸಿ. ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಕುಮಾರಿ ಅನುಶ್ರೀ ಇವರನ್ನು ಸನ್ಮಾನಿಸ ಲಾಯಿತು. ಸದಸ್ಯರಾದ ಪ್ರಭಾ ಶೆಟ್ಟಿ, ಫ್ಲಾವಿಯಾ, ಶಾಲಿನಿ, ಆಗ್ನೇಸ್ ರವರು ಸನ್ಮಾನ ಪತ್ರ ವಾಚಿಸಿದರು. ಪಂಚಾಯತ್ ಉಪಾಧ್ಯಕ್ಷರಾದ ಅಬುಬಕರ್ ಎ. ಆರ್. ಸಾಂದರ್ಭಿಕವಾಗಿ ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು. ಪಂಚಾಯತ್ ಸದಸ್ಯರಾದ ಫ್ಲಾವಿಯಾ ಮಿನೇಜಸ್ ಸ್ವಾಗತಿಸಿದರು. ಪಂಚಾಯಿತಿ ಕಾರ್ಯದರ್ಶಿ ವಸಂತಿಯವರು ವಂದಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು.
