Updated News From Kaup

ಪೊಲಿಪು ಶಾಲೆಯ ಶಾಲಾಭಿವೃದ್ಧಿ ಸಮಿತಿಗೆ ತಡೆ: ಕಾಪುವಿನಲ್ಲಿ ಪತ್ರಿಕಾಗೋಷ್ಠಿ

Posted On: 17-09-2021 10:10PM

ಕಾಪು : ಪೊಲಿಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯು ಶಿಕ್ಷಣ ಇಲಾಖೆ ನಿಯಮಾನುಸಾರ ರಚನೆಯಾಗಿದ್ದು, ಯಾವುದೇ ಸ್ಪಷ್ಟ ಕಾರಣ ನೀಡದೆ ತಡೆಹಿಡಿಯಲಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಜಿ. ಮೆಂಡನ್ ಬುಧವಾರ ಕಾಪು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಪಾಲಕರಲ್ಲದವರು ಸಮಿತಿಯಲ್ಲಿದ್ದುಕೊಂಡು ಉಸ್ತುವಾರಿ ನಡೆಸುತ್ತಿದ್ದು, ೨೦೦೮ರ ಬಳಿಕ ಶಾಲೆಯಲ್ಲಿ ಯಾವುದೇ ಎಸ್‌ಡಿಎಂಸಿ ರಚನೆಯಾಗಲಿಲ್ಲ. ಪೋಷಕರ ಒತ್ತಾಯದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ೨೦೨೧ ಮಾರ್ಚ್ ೧೦ರಂದು ಶಿಕ್ಷಣ ಇಲಾಖೆ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನೂತನ ಎಸ್‌ಡಿಎಂಸಿ ರಚಿಸಲಾಗಿದೆ. ಈ ಮಧ್ಯೆ ಪಾಲಕರಲ್ಲದ ವ್ಯಕ್ತಿಯೊಬ್ಬರು ನೂತನ ಎಸ್‌ಡಿಎಂಸಿ ರಚನೆ ಬಗ್ಗೆ ಆಕ್ಷೇಪಿಸಿ ಶಿಕ್ಷಣ ಇಲಾಖೆಗೆ ದೂರು ನೀಡಿದ್ದು, ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಮಗ್ರ ತನಿಖೆಯನ್ನೂ ನಡೆಸಿದ್ದರು.

ಆದರೆ ತನಿಖೆಯ ಬಳಿಕ ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ. ಈ ಕುರಿತಂತೆ ಉಪನಿರ್ದೇಶಕರಲ್ಲಿ ಹಲವು ಬಾರಿ ವಿಚಾರಿಸಿದರೂ ಸ್ಪಷ್ಟ ಉತ್ತರ ದೊರೆತಿಲ್ಲ. ಆದರೆ ಕಾನೂನು ಬದ್ದವಾಗಿ ರಚನೆಯಾಗಿರುವ ಎಸ್‌ಡಿಎಂಸಿಗೆ ಈವರೆಗೆ ಯಾವುದೇ ಅವಕಾಶ ನೀಡದಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಶಾಲಾಭಿವೃದ್ಧಿ ದೃಷ್ಟಿಯಿಂದ ಈಗ ರಚನೆಯಾಗಿರುವ ಎಸ್‌ಡಿಎಂಸಿಯನ್ನು ಮಾನ್ಯ ಮಾಡಬೇಕು. ನಾವು ಎಲ್ಲರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡುವ ಮೂಲಕ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಬದ್ದರಿರುವುದಾಗಿ ರಾಜೇಶ್ ಜಿ ಮೆಂಡನ್ ತಿಳಿಸಿದ್ದಾರೆ. ಎಸ್‌ಡಿಎಂಸಿ ಉಪಾಧ್ಯಕ್ಷೆ ಪ್ರೇಮಾ ರಮೇಶ್, ಪಾಲಕರಾದ ಜಲಜಾಕ್ಷಿ, ಸೌಮ್ಯಾ ಆರ್ ಮೆಂಡನ್, ಹರೀಶ್ ಉಪಸ್ಥಿತರಿದ್ದರು.

ಪ್ರಧಾನ ಮಂತ್ರಿಗಳ ಜನ್ಮದಿನದ ಅಂಗವಾಗಿ ಗಿಡಗಳನ್ನು ನೆಟ್ಟು, ಗೋಪೂಜೆ ನೆರವೇರಿಸಿದ ಸುರೇಶ್ ಶೆಟ್ಟಿ ಗುರ್ಮೆ

Posted On: 17-09-2021 09:51PM

ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವಾ ಕಾರ್ಯ ನಡೆಸುವಂತೆ ಪಕ್ಷದ ವರಿಷ್ಟರು ನೀಡಿದ ಸೂಚನೆಯಂತೆ ಕರ್ನಾಟಕ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ ಫಲ ನೀಡುವ ಗಿಡಗಳನ್ನು ನೆಟ್ಟು, ಗೋಪೂಜೆಯನ್ನು ನೆರವೇರಿಸಿದರು.

ಪ್ರಧಾನಮಂತ್ರಿಯವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಅಂಧರಿಗೆ ನೆರವು, ಉಚಿತ ಕಣ್ಣಿನ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ

Posted On: 17-09-2021 09:06PM

ಉಡುಪಿ : ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ, ಕುಂದಾಪುರ ಮಹಿಳಾ ಮೋರ್ಚಾ, ಪ್ರಶಾಂತ್ ನೇತ್ರಾಲಯ ಇವರ ಸಹಯೋಗದಲ್ಲಿ ಅಂಧರಿಗೆ ನೆರವು, ಉಚಿತ ಕಣ್ಣಿನ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲಾ ಪಕ್ಷದ ಹಿರಿಯ ನಾಯಕರೊಂದಿಗೆ ಕರ್ನಾಟಕ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಕಟನೆ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲ ವಿಶೇಷ ಕಾರ್ಯಕಾರಿಣಿ ಸಭೆ

Posted On: 17-09-2021 08:56PM

ಕಾಪು : ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲ ಇದರ ವಿಶೇಷ ಕಾರ್ಯಕಾರಿಣಿ ಸಭೆಯು ನಾಳೆ (ಸೆಪ್ಟೆಂಬರ್ 18) ಬೆಳಿಗ್ಗೆ 9 ಗಂಟೆಗೆ ಕಟಪಾಡಿ ಪಳ್ಳಿ ಗುಡ್ಡೆಯ ಜೇಸಿ ಭವನದಲ್ಲಿ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಮೋರ್ಚಾ ಕಾಪು ಮಂಡಲದ ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್ ಉದ್ಯಾವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾ-ಕರ್ನಾಟಕದಿಂದ ಫೇಸ್ಬುಕ್ ನಲ್ಲಿ ನಾರಾಯಣಗುರುಗಳ ಭಾವಚಿತ್ರದೊಂದಿಗೆ ಅಸಭ್ಯ ಭಾಷೆ ಬಳಸಿದ ಪತ್ರಕರ್ತನ ವಿರುದ್ಧ ದೂರು ದಾಖಲು

Posted On: 17-09-2021 08:57AM

ಉಡುಪಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಬಾವ ಚಿತ್ರ ದೊಂದಿಗೆ ಅಸಂವಿಧಾನಾತ್ಮಕ ಪದ ಬಳಸಿ ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಸಂಖ್ಯಾತ ಬಿಲ್ಲವ ಸಮಾಜದ ಅವರ ಅನುಯಾಯಿಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ವಿಷಯವಾಗಿ ಕುಂಭಾಶಿಯ ಪತ್ರಿಕಾ ಸಂಪಾದಕರೋರ್ವರ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ-ಕರ್ನಾಟಕದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ. ಮಹಾಲಕ್ಷ್ಮಿ ಲೇಔಟ್ ಬೆಂಗಳೂರು ಅಧ್ಯಕ್ಷರಾದ ಎಸ್. ಮುರಳಿ ಬೆಂಗಳೂರಿನ ಬಸವೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಾರಾಯಣಗುರುಗಳು ಒಂದೇ ಜಾತಿ, ಒಂದೇ ಮತ, ದೇವರೊಬ್ಬನೇ ಅನ್ನೋ ತತ್ವ ಸಿದ್ಧಾಂತ ಪ್ರತಿಪಾದಕರಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಅವರ ಜೀವಿತಾವಧಿಯಲ್ಲಿ ಸಮಾಜದಲ್ಲಿದ್ದ ಮೇಲು ಕೀಳೆಂಬ ಜಾತಿ ಪದ್ಧತಿ ವಿರುದ್ಧ ಹೋರಾಡಿ,ಜನಜಾಗ್ರತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತಂದ ಮಹಾನ್ ಚೇತನರಾಗಿದ್ದಾರೆ. ಅವರ ಗೌರವಾರ್ಥವಾಗಿ ಕೇರಳ ರಾಜ್ಯ ಸರಕಾರ ಅಗೋಸ್ಟ್ 23ರಂದು ನಾರಾಯಣ ಗುರುಗಳ ಜಯಂತಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿ ಸರಕಾರಿ ಮಟ್ಟದಲ್ಲಿ ಗೌರವ ಸೂಚಿಸಿದೆ. ಅಲ್ಲದೇ ಕರ್ನಾಟಕ ಸರಕಾರ ಸಹ ಸೆಪ್ಟೆಂಬರ್ 16ರಂದು ನಾರಾಯಣಗುರು ಜಯಂತಿಯನ್ನು ಸರಕಾರಿ ಮಟ್ಟದಲ್ಲಿ ಆಚರಣೆಯನ್ನು ಮಾಡುವುದರ ಮೂಲಕ ಅವರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಿದೆ.

ಭಾರತ ದೇಶದಾದ್ಯಂತ ಅವರ ತತ್ವ ಆದರ್ಶವನ್ನು ಒಪ್ಪಿ ಬಿಲ್ಲವ ಸಮುದಾಯ ಅವರಿಗೆ ದೇವಸ್ಥಾನ ನಿರ್ಮಿಸಿ ದಿನನಿತ್ಯ ಪೂಜೆ ಸಲ್ಲಿಸುವ ಮೂಲಕ ಅವರನ್ನು ಗೌರವಿಸಲಾಗುತ್ತಿದೆ ಅಂತಹ ಮಹಾನ್ ಸುಧಾರಕರ ಭಾವಚಿತ್ರದೊಂದಿಗೆ ಓರ್ವ ಪ್ರಜ್ಞಾವಂತ ಪತ್ರ ಕರ್ತ ಅಸಭ್ಯ ಭಾಷೆ ಬಳಸಿ ಗುರು ಜಯಂತಿಗೆ ಫೇಸ್ ಬುಕ್ ಸಾಮಾಜಿಕ ಜಾಲ ತಾಣದಲ್ಲಿ ಸಾರ್ವಜನಿಕವಾಗಿ ಪೋಸ್ಟ್ ಹಾಕಿದ್ದು ಖಂಡಿಸುತ್ತೇವೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಬೃಹತ್ ಜನ ಜಾಗೃತಿ ಸಭೆಗೆ ರಾಮ್ ಸೇನಾ ಕುಂಟಾಡಿ ಘಟಕ ಬೆಂಬಲ

Posted On: 17-09-2021 08:05AM

ಕಾರ್ಕಳ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡದ ಆಶ್ರಯದಲ್ಲಿ ಮತಾಂಧತೆಯ ವಿರುದ್ಧ ನಡೆಯಲಿರುವ ಬೃಹತ್ ಜನ ಜಾಗೃತಿ ಸಭೆಗೆ ರಾಮ್ ಸೇನಾ ಕುಂಟಾಡಿ ಘಟಕ ಬೆಂಬಲ ನೀಡಿದೆ.

ಈ ಬೃಹತ್ ಜನ ಜಾಗೃತಿ ಸಭೆ ಸೆಪ್ಟೆಂಬರ್ 19, ಭಾನುವಾರ ಬೆಳಿಗ್ಗೆ 9 ಗಂಟೆಗೆ ನಿಟ್ಟೆಯ ಲೆಮಿನಾ ಕ್ರಾಸ್ ಬಳಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶಿರ್ವ : ಡೊರಿನ್ ಡಿ'ಸಿಲ್ವಗೆ ಪದೋನ್ನತಿ

Posted On: 16-09-2021 10:53PM

ಕಾಪು : ಸಂತ ಮೇರಿ ಕಾಲೇಜು ಶಿವ೯ ಇಲ್ಲಿಯ ಆಡಳಿತ ಕಛೇರಿಯ ಸಿಬ್ಬಂದಿಯಾದ ಶ್ರೀಮತಿ ಡೊರಿನ್ ಡಿ'ಸಿಲ್ವ ಇವರನ್ನು ಕಾಲೇಜು ಆಡಳಿತ ಮಂಡಳಿಯಾದ, ಕ್ಯಾಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ (CESU) ಇವರು ಪದೋನ್ನತಿಗೊಳಿಸಿ ಕಾಲೇಜು ಆಡಳಿತ ಕಛೇರಿಯ ಅಧೀಕ್ಷಕರನ್ನಾಗಿ ನೇಮಕಗೊಳಿಸಿದೆ.

ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರಕ್ಕೆ ಕಾಪು ಕ್ಷೇತ್ರದಲ್ಲಿ ಗ್ರಾಮ ಸಮಿತಿ ರಚನೆ ಮಾಡಲು ಪ್ರಮುಖರ ಸಭೆ

Posted On: 16-09-2021 10:39PM

ಕಾಪು : ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಕಾಪು ವಿಧಾನ ಸಭಾ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಗ್ರಾಮ ಸಮಿತಿ ರಚನೆ ಮಾಡಲು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಸಭಾಂಗಣದಲ್ಲಿ ಸಭೆ ನಡೆಯಿತು.

ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ ಕಲ್ಯಾ ಸ್ವಾಗತಿಸಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್. ವಿ. ಶೆಟ್ಟಿ ಬಾಲಾಜಿ ದೇವಳದ ಇವರೆಗಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ದೇವಳದ ಅಭಿವೃದ್ಧಿ ಕಾರ್ಯಕ್ಕೆ ಕಾಪು ಕ್ಷೇತ್ರದ ಜನರ ಸಹಬಾಗಿತ್ವ ಮುಖ್ಯ ಎಂದರು.

ಸಭಾಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆಯವರು ಮಾತನಾಡಿ ಈಗಾಗಲೇ ದೇವಳದ 20% ಕಾಮಗಾರಿ ನಡೆದಿದ್ದು ಇನ್ನುಳಿದ 80% ಕಾಮಗಾರಿ ಆಗಬೇಕಿದೆ, ತಾಯಿಯ ಸೇವೆ ಮಾಡಲು ತಾಯಿ ನಮಗೆ ಅವಕಾಶ ಕೊಟ್ಟಿದ್ದಾರೆ ಆದ್ದರಿಂದ ಗ್ರಾಮ ಸಮಿತಿ ರಚನೆ ಮಾಡಿ ಪಕ್ಷಾತೀತ, ಜಾತ್ಯತೀತವಾಗಿ ಪಾಲ್ಗೊಂಡು ನಾವೆಲ್ಲರೂ ಸೇರಿ ಒಂದೇ ತಾಯಿಯ ಮಕ್ಕಳಂತೆ ಅಮ್ಮನ ಸೇವೆ ಮಾಡೋಣ ಎಂದರು. ನಂತರ ಪ್ರತೀ ಗ್ರಾಮದ ಮುಖಂಡರಿಂದ ಗ್ರಾಮ ಸಮಿತಿ ರಚನೆ ಮಾಡಲು ಅಭಿಪ್ರಾಯ ಸಂಗ್ರಹ ಮಾಡಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಮನೋಹರ್ ಶೆಟ್ಟಿ, ಗಂಗಾಧರ ಸುವರ್ಣ, ಮಾಧವ್ ಪಾಲನ್, ಸಾಂಸ್ಕೃತಿಕ ಸಮಿತಿಯ ಪ್ರಧಾನ ಸಂಚಾಲಕರಾದ ಲೀಲಾಧರ.ಕೆ. ಶೆಟ್ಟಿ, ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡೀಕೆರೆ, ಪುರಸಭಾ ವ್ಯಾಪ್ತಿಯ ಗ್ರಾಮ ಸಮಿತಿಯ ಮುಖ್ಯ ಸಂಚಾಲಕರಾದ ಶ್ರೀಕರ ಶೆಟ್ಟಿ ಕಲ್ಯಾ, ಗ್ರಾಮ ಸಮಿತಿಯ ಮುಖ್ಯ ಸಂಚಾಲಕರಾದ ಅರುಣ್ ಶೆಟ್ಟಿ ಪಾದೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.

ಕಾಣೆಯಾಗಿದ್ದ ನಿಟ್ಟೆ ನಿವಾಸಿ ಶವವಾಗಿ ಪತ್ತೆ

Posted On: 16-09-2021 10:32PM

ಕಾಪು : ಕಾಣೆಯಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಜಾಲು ದರ್ಕಾಸ್ ಮನೆಯ ಶ್ಯಾಮ ಕೋಟ್ಯಾನ್ (65) ಇವರ ಮೃತ ದೇಹ ಇಂದು ಎಣ್ಣೆಹೊಳೆ ನದಿಯಲ್ಲಿ ಪತ್ತೆಯಾಗಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಶಾಲಾ ಕಾಲೇಜುಗಳಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ ಪರಿಶೀಲನೆ

Posted On: 16-09-2021 10:26PM

ಉಡುಪಿ : ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಪಾಲನೆ ಮಾಡುತ್ತಿರುವ ಕುರಿತಂತೆ, ಕರ್ನಾಟಕ ಲೋಕಾಯುಕ್ತರು, ಬೆಂಗಳೂರು ಇವರ ಸೂಚನೆಯಂತೆ, ಮಂಗಳೂರಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ, ಉಡುಪಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಜಗದೀಶ್ ಎಂ, ಪೊಲೀಸ್ ನಿರೀಕ್ಷಕ ಜಯರಾಮ ಡಿ ಗೌಡ, ರಾಜಶೇಖರ ಎಲ್ ಹಾಗೂ ಸಿಬ್ಬಂದಿಗಳು ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂಜಿಬೆಟ್ಟುವಿನ ಮಹಾತ್ಮಗಾಂಧೀ ಮೆಮೋರಿಯಲ್ ಕಾಲೇಜು, ಇಂದ್ರಾಳಿ ಪ್ರೈಮರಿ ಮತ್ತು ಹೈಯರ್ ಪ್ರೈಮರಿ ಸ್ಕೂಲ್, ಉಡುಪಿಯ ಸರಕಾರಿ ಬೋರ್ಡ್ ಹೈಸ್ಕೂಲ್ ಗಳಿಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಶಾಲಾ ಭೇಟಿ ವೇಳೆ, ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸೇಶನ್ ಮಾಡುವುದು ಮತ್ತು ಮನೆಯಿಂದಲೇ ಬಿಸಿ ನೀರು ಮತ್ತು ಆಹಾರ ಪದಾರ್ಥಗಳನ್ನು ತರುವ ಬಗ್ಗೆ ಮತ್ತು ಶಾಲೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಜಾಗೃತಿ ಮೂಡಿಸಿ, ಸರ್ಕಾರದ ಮಾರ್ಗಸೂಚಿಯಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಶಾಲಾ ಮುಖ್ಯಸ್ಥರಿಗೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ಕುಮಾರಸ್ವಾಮಿ ಸೂಚಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಭೇಟಿ ವೇಳೆ, ಶಾಲಾ ಕಾಲೇಜುಗಳಿಗೆ ಭೇಟಿ ನೀಡಲಿದ್ದು, ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು ಸರ್ಕಾರದ ಸುತ್ತೋಲೆಯಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಕೋವಿಡ್ ನಿಯಮ ಪಾಲಿಸುವಂತೆ ಸೂಚಿಸಿದರು.