Updated News From Kaup

ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ, ಪೋಸ್ಟ್ ಕಾರ್ಡ್ ಅಭಿಯಾನ

Posted On: 19-09-2021 04:43PM

ಕಾಪು : ಬಿಜೆಪಿ ಯುವಮೋರ್ಚಾ ಕಾಪು ಮಂಡಲ ಹಾಗೂ ಬಿಜೆಪಿ ಯುವಮೋರ್ಚಾ ಪಡುಬಿದ್ರಿ ಮಹಾಶಕ್ತಿ ಕೇಂದ್ರದ ವತಿಯಿಂದ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಸೇವೆ ಹಾಗೂ ಸಮರ್ಪಣಾ ಅಭಿಯಾನದ ಪ್ರಯುಕ್ತ "ರಕ್ತದಾನ ಶಿಬಿರ" ಹಾಗೂ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಹುಟ್ಟು ಹಬ್ಬದ ಶುಭಹಾರೈಕೆಯನ್ನು ಸಲ್ಲಿಸಲು "ಪೋಸ್ಟ್ ಕಾರ್ಡ್ " ಅಭಿಯಾನವನ್ನು ಹೆಜಮಾಡಿಯ ಬಿಲ್ಲವ ಸಭಾಭವನ ದಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಪಡುಬಿದ್ರೆ ಯುವಮೋರ್ಚಾ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಕೀರ್ತನ್ ಪೂಜಾರಿ ವಹಿಸಿದ್ದರು ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ಶ್ವೇತ ಪೂಜಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶ ನಾಯಕ್ ಪೆರ್ಣಂಕಿಲ, ಬಿಜೆಪಿ ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ,ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪ್ರಜ್ವಲ್ ಹೆಗಡೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ, ಪಡುಬಿದ್ರಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶಿವಪ್ರಸಾದ್ ಪಡುಬಿದ್ರಿ ,ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣರಾವ್ ಹಾಗೂ ಅನಿಲ್ ಶೆಟ್ಟಿ ,ಮಂಡಲ ಉಪಾಧ್ಯಕ್ಷರಾದ ಚಂದ್ರಶೇಖರ್ ಕೋಟ್ಯಾನ್, ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಪಲಿಮಾರ್ ಹಾಗೂ ರವಿ ಕೋಟ್ಯಾನ್ ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ನಯನ ಗಣೇಶ್, ಹೆಜಮಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನೀತಾ ಗುರುರಾಜ್, ಅಜ್ಜರಕಾಡು ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ ವೀಣಾಕುಮಾರಿ, ಉದ್ಯಮಿಗಳಾದ ಸಂದೇಶ್ ಶೆಟ್ಟಿ ಹೆಜಮಾಡಿ, ಜಿಲ್ಲಾ ಹಾಗು ಕಾಪು ಮಂಡಲದ ಯುವ ಮೋರ್ಚಾ ಪದಾಧಿಕಾರಿಗಳು ಪಂಚಾಯತ್ ಸದಸ್ಯರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಕ್ತದಾನ ಶಿಬಿರದಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ 71 ವರುಷದ ಜನ್ಮದಿನಕ್ಕೆ ಸರಿಸಾಟಿಯಾಗಿ 71 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಕಾರ್ಯಕ್ರಮವನ್ನು ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್ ಅಡ್ವೆ ಅವರು ನಿರೂಪಿಸಿ ವಂದಿಸಿದರು.

ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದಿಂದ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Posted On: 19-09-2021 02:17PM

ಉಡುಪಿ : ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಜಿಲ್ಲೆ ವತಿಯಿಂದ ವೃತ್ತಿ ಭಾಂದವರ ಮಕ್ಕಳಿಗೆ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಭಾಧ್ಯಕ್ಷತೆಯನ್ನು ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯು. ಮೋಹನ್ ಉಪಾಧ್ಯ ಹಾಗೂ ಅತಿಥಿಯಾಗಿ ಬಿ. ಜಿ. ಸುಬ್ಬರಾವ್, ಗೌರವ ಸಲಹೆಗಾರ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸುಮಂತ್ ಕಾರಂತ್, ಸುಹಾಸ್ ಸಿ ನೈರಿ, ಯಶ್ಮಿತಾ ಎಮ್ ಬಂಗೇರ. ತ್ರಿಷಾ ಎಸ್ ಶೆಟ್ಟಿ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅತಿಥಿ ಬಿ ಜಿ ಸುಬ್ಬರಾವ್ ಅದೃಷ್ಟ ವ್ಯಕ್ತಿ ಸುಮಂತ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಪ್ರಾರ್ಥನೆಯನ್ನು ಸುಮಂತ್ ಕಾರಂತ್ ನೆರವೇರಿಸಿದರು. ಎಮ್. ಮಹೇಶ್ ಕುಮಾರ್ ರವರು ಎಲ್ಲರನ್ನು ಸ್ವಾಗತಿಸಿ, ಅಶೋಕ್ ಶೆಟ್ಟಿ ಯವರು ಪ್ರಸ್ತಾವಿಸಿ, ರಮೇಶ್ ಕುಂದರ್ ಕಾರ್ಯಕ್ರಮ ನಿರ್ವಹಿಸಿ , ಕೋಶಾಧಿಕಾರಿ ಸುಧೀರ್ ಡಿ. ಬಂಗೇರ ವಂದಿಸಿದರು.

ಶಿರ್ವ : ಹಿಂದೂ ಜೂನಿಯರ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದಿಂದ 2 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ, 50 ಸಾವಿರ ಆರ್ಥಿಕ ಸಹಾಯ, ಅಭಿನಂದನೆ, ಸನ್ಮಾನ

Posted On: 19-09-2021 02:02PM

ಕಾಪು : ಶಿರ್ವದ ಹಿಂದೂ ಜೂನಿಯರ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದಿಂದ ಸತತ ಏಳನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಜರಗಿತು. ಈ ಸಂದರ್ಭದಲ್ಲಿ 8ನೆ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಸಮವಸ್ತ್ರ ವಿತರಿಸುವ ಸಲುವಾಗಿ ರೂಪಾಯಿ 50 ಸಾವಿರ ವನ್ನು ಮುಖ್ಯೋಪಾಧ್ಯಾಯಿನಿ ವಸಂತಿ ಬಾಯಿಯವರಿಗೆ ಹಸ್ತಾ0ತರಿಸಲಾಯಿತು.

ಪಿಯುಸಿಯಲ್ಲಿ ಕಲಿಯುತ್ತಿರುವ ಆಯ್ದ ವಿದ್ಯಾರ್ಥಿ ಗಳಿಗೆ ಸುಮಾರು 2.00 ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಳೆದ ಸಾಲಿನ ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿರುವ ನಮ್ಮ ಶಾಲಾ ವಿದ್ಯಾರ್ಥಿನಿ ಕು.ಶ್ರಾವ್ಯ ಸಹಿತ 90℅ ಕ್ಕಿಂತ ಹೆಚ್ಚು ಗರಿಷ್ಠ ಅಂಕ ಗಳಿಸಿದ 10ನೇ ತರಗತಿ ಹಾಗೂ ಪಿ.ಯು.ಸಿ ಯ ಎಲ್ಲಾ ಮೂರು ವಿಭಾಗಗಳ ತಲಾ 3 ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಪ್ರೌಢಶಾಲೆಯಲ್ಲಿ ಸುಧೀರ್ಘ 35 ವರ್ಷಗಳ ಸೇವೆಯನ್ನು ಸಲ್ಲಿಸಿ ಈ ವರ್ಷ ನಿವೃತ್ತರಾಗಿರುವ ಶಕಿಲ ಟೀಚರ್ ಅವರಿಗೆ ಸನ್ಮಾನದ ಗೌರವವನ್ನು ಸಲ್ಲಿಸಲಾಯಿತು.

ನಿತ್ಯಾನಂದ ಹೆಗ್ಡೆ, ಪ್ರೊ. ವೈ.ಭಾಸ್ಕರ್ ಶೆಟ್ಟಿ ಅಂಬರೀಷ್ ರಾವ್ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ,ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಪ್ರಸ್ತುತ ಬ್ಯಾ0ಕ್ ಅಧಿಕಾರಿಯಾಗಿರುವ ಹಳೆವಿದ್ಯಾರ್ಥಿ ಅಂಬರೀಷ್ ರಾವ್, ನಿವೃತ್ತ ಪ್ರಾಂಶುಪಾಲರೂ ಸಂಘದ ಮಾರ್ಗದರ್ಶಕರಾದ ರಾಜಗೋಪಾಲ್, ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಭಾಸ್ಕರ್, ಪೌಢಶಾಲಾ ಮುಖ್ಯೋಪಾಧ್ಯಾ ಯಿನಿ ವಸಂತಿ ಭಾಯಿ, ಸಂಘದ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಮತ್ತು ಅಧ್ಯಕ್ಷನಾಗಿ ಕುತ್ಯಾರು ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭ ನಿವೃತ್ತ ಅಧ್ಯಾಪಕರಾದ ಪ್ರಭಾಕರ್, ಸಂಘದ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ಗಂಗಾಧರ್ ಶೆಟ್ಟಿ ಪಿಲಾರು, ಸದಾನಂದ ಶೆಟ್ಟಿ ಕಳತ್ತೂರು, ಹಳೆವಿದ್ಯಾರ್ಥಿಗಳಾದ ವೀರೇಂದ್ರ ಶೆಟ್ಟಿ, ಸದಾನಂದ ಎಸ್, ನವೀನ್ ಶೆಟ್ಟಿ, ಉಮೇಶ್ ಆಚಾರ್ಯ, ಹರಿಣಾಕ್ಷ ಶೆಟ್ಟಿ, ಜಿನೇಶ್ ಬಲ್ಲಾಳ್, ರಾಜೇಶ್ ಶೆಟ್ಟಿ ಮತ್ತು ದೀಪಿಕಾ ಹೆಗ್ಡೆ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿ, ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ರಾಜಗೋಪಾಲ್ ಶುಭ ಹಾರೈಸಿ, ಲಕ್ಷ್ಮೀದೇವಿ ಮತ್ತು ಸುಪ್ರೀತ ಶೆಟ್ಟಿ ನಿರೂಪಿಸಿ, ಸದಾನಂದ ಎಸ್ ವಂದಿಸಿದರು.

ಪ್ರಕಟನೆ : ನಮ್ಮ ಜವನೆರ್ ವಾಟ್ಸಾಪ್ ಗ್ರೂಪ್ ಮೂಡುಬೆಳ್ಳೆ ಮತ್ತು ರಾಮ್ ಸೇನಾ ತಂಡದ ಸಭೆ

Posted On: 18-09-2021 06:47PM

ಕಾಪು : ನಮ್ಮ ಜವನೆರ್ ವಾಟ್ಸಾಪ್ ಗ್ರೂಪ್ ಮೂಡುಬೆಳ್ಳೆ ಮತ್ತು ರಾಮ್ ಸೇನಾ ಕಾರ್ಯಕರ್ತರು ತಂಡದ ಸಭೆಯನ್ನು ಸೆಪ್ಟೆಂಬರ್ 19 (ಭಾನುವಾರ) ಸಂಜೆ 3 ಗಂಟೆಗೆ ನಿಗದಿಪಡಿಸಲಾಗಿದ್ದು ತಂಡದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುತೀಶ್ ಕಾರ್ಕಳ ಇವರು ಕಾಪು ನ್ಯೂಸ್ ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ಮೂರು ದಿನ ವರುಣನ ಆರ್ಭಟ : ಹವಾಮಾನ ಇಲಾಖೆ ಮುನ್ಸೂಚನೆ

Posted On: 18-09-2021 01:17PM

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಸೆಪ್ಟೆಂಬರ್ 21ರವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.

ಶಿರ್ವ : ಸ್ಪರ್ಧೆಗಳ ಮೂಲಕ ವ್ಯಕ್ತಿತ್ವ ವಿಕಸನ ವೃದ್ಧಿ- ಡಾ| ಹೆರಾಲ್ಡ್ ಐವನ್ ಮೋನಿಸ್

Posted On: 18-09-2021 01:10PM

ಶಿರ್ವ: ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆಯ ಹೆಚ್ಚುತ್ತಿರುವ ಕಾರಣ ಕಂಪ್ಯೂಟರ್ ಕಲಿಕೆಯ ಅವಶ್ಯಕತೆ ಇಂದು ಅಗತ್ಯವಾಗಿದೆ ಜೊತೆಗೆ ಶೈಕ್ಷಣಿಕ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸಿ, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.ಇತ್ತೀಚೆಗೆ ಬದಲಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉದ್ದೇಶಿಸಿ, ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಕಂಪ್ಯೂಟರ್ಗಳನ್ನು ಹೆಚ್ಚಾಗಿ ಬಳಸಿಕೊಂಡು ಸಮಾಜಕ್ಕೆ ಬೇಕಾಗುವ ತಂತ್ರಜ್ಞಾನವನ್ನು ರೂಪಿಸಿ, ಸಂಶೋಧನಾ ಮನಸ್ಥಿತಿ ಬೆಳೆಸಿಕೊಂಡು ಉತ್ತಮ ಉದ್ಯೋಗ ಪಡೆಯಬೇಕೆಂದು ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಮತ್ತು ಐಟಿ ಕ್ಲಬ್ ಸಂಯುಕ್ತವಾಗಿ ಏರ್ಪಡಿಸಿದ್ದ ಐಟಿ ಸ್ಪರ್ಧೆಗಳು-ಬಹುಮಾನ ವಿತರಣೆ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿ ಅಡಗಿರುವ ಕೌಶಲ, ಸೃಜನಶೀಲತೆ, ಕ್ರಿಯಾಶೀಲತೆ, ತಮ್ಮ ವ್ಯಕ್ತಿತ್ವ ವಿಕಸನವನ್ನು ವೃದ್ಧಿಸಿಕೊಳ್ಳುವುದು ಮಾತ್ರವಲ್ಲದೆ ಸ್ಪರ್ಧಾ ಜಗತ್ತಿನ ಸವಾಲುಗಳನ್ನು ಸುಲಭವಾಗಿ ನಿಭಾಯಿಸಲು ಹಾಗೂ ಉತ್ತಮ ಪ್ರಜೆಯಾಗಲು ಪ್ರತಿಯೊಂದು ಸ್ಪರ್ಧೆಯು ಸಹಾಯಕಾರಿ ಎಂದು ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ಡೈರೆಕ್ಟರ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಐಟಿಕ್ಲಬ್ ವತಿಯಿಂದ ಬಿಸಿಎ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 14ರಿಂದ 18 ರವರೆಗೆ ವಿವಿಧ ಐಟಿ ಕಾಂಪಿಟೇಶನ್ಗಳನ್ನು ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಾದ ಪ್ರಿಯಾಂಕಾ,ಸುರೇಖಾ, ಲಿಖಿತಾ ಶೆಟ್ಟಿ, ಕ್ರಿಪಾ, ಶ್ರುತಿ, ಪ್ರಜ್ವಲ್, ಸನತ್ ಕುಮಾರ್ ಶೆಟ್ಟಿ, ಪ್ರೀತಿಕಾ, ದೀಕ್ಷಾ, ಸಾತ್ವಿಕ್ , ತರುಣ್ ರಮೇಶ್ ಶೆಟ್ಟಿ, ದೀಕ್ಷಿತ್, ಅಪೇಕ್ಷ, ಚಾಯ ಕರ್ಕೆರ, ಹಾರ್ದಿಕ ಸಾಲಿಯಾನ್, ಡೆನ್ಸನ್ ಬ್ರೈನ್ ನಜರೆತ್, ರಿಯಾನ್ ರಿಷಿ ಅಲ್ಫೋನ್ಸೋ, ನಿವೇದಿತಾ ನಿಖಿಲ್ ಪೂಜಾರಿ, ಬಂಗೇರ ತುಷಾರ್ ರಾಜೇಶ್, ಸುಕೇಶ್ ಪೂಜಾರಿ, ಡೊನಾಲ್ಡ್ ಅಶ್ವಿನ್ ಡಿಸೋಜ, ಶೆಟ್ಟಿ ಸಾಯಿರಾಮ್ ಜಯರಾಮ್ ಇವರಿಗೆ ಪ್ರಮಾಣ ಪತ್ರದ ಜೊತೆಗೆ ಬಹುಮಾನಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಯಾಂಪಸ್ ಪ್ಲೇಸ್ಮೆಂಟ್ ನಲ್ಲಿ ಭಾಗವಹಿಸಿ ಆಯ್ಕೆಯಾದ ಮೇಘ ಕುಲಾಲ್, ಮಹಿಮಾ ಭಟ್, ಲಿಖಿತಾ ಶೆಟ್ಟಿ,ಡಿಲ್ಸನ್ ನಿಜಾರ್,ರಿಯಾನ್ ರಿಷಿ ಅಲ್ಫೋನ್ಸೋ,ಭಟ್ ರಾಮದಾಸ ಸತೀಶ್, ಪ್ರಜ್ವಲ್ ಬಿಸಿಎ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಿವ್ಯ ಶ್ರೀ, ಸುಷ್ಮಾ,ಪ್ರಕಾಶ್, ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಶ್ರೀ ಚೆನ್ನ ಬಸವಯ್ಯ ಬಹುಮಾನ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿ ನಾಯಕರಾದ ದಾಕ್ಷಾಯಿಣಿ,ಭಟ್ ರಾಮದಾಸ ಸತೀಶ್, ಡಿಲ್ಸನ್ ನಿಜಾರ್, ಪ್ರತೀಕ್ ಪೂಜಾರಿ, ವಿಜ್ಞೇಶ್, ಅಭಿಷೇಕ್, ಮಹಿಮಾ, ರಿಯಾನ್ ರಿಷಿ ಅಲ್ಫೋನ್ಸೋ ಸ್ಪರ್ಧೆಯನ್ನು ನಡೆಸಲು ಸಹಕರಿಸಿದ್ದರು. ಶೃತಿ ಸಿ ಪುಜಾರಿ ಸ್ವಾಗತಿಸಿ, ಕ್ರಿಪಾ ಬಿ. ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸಿಯಾನಾ ಬಾನು ವಂದಿಸಿದರು.

ಇಂದು : ಶ್ರೀ ವೆಂಕಟರಮಣ ದೇವಸ್ಥಾನ ಕಾಪುವಿಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿ

Posted On: 18-09-2021 12:59PM

ಕಾಪು : ಇಂದು (ಸೆಪ್ಟೆಂಬರ್18) ಶನಿವಾರ ಸಂಜೆ 6 ಗಂಟೆಗೆ ಶ್ರೀ ವೆಂಕಟರಮಣ ದೇವಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಲಿರುವರು.

ಶ್ರೀ ದೇವರ ಭೇಟಿ ನಂತರ, ಸಭಾಕಾರ್ಯಕ್ರಮ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು : ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ, ಆರೋಗ್ಯ ಮಾಹಿತಿ ಶಿಬಿರ

Posted On: 18-09-2021 11:09AM

ಕಾಪು : ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಕೆ ಎಮ್ ಸಿ ಮಣಿಪಾಲ ಇದರಲ್ಲಿ ಅಂಗನವಾಡಿ ಕಾರ್ಯಕರ್ತೆ ಶಾರದಾ ಇವರಿಗೆ ಸನ್ಮಾನ ಹಾಗೂ ಆರೋಗ್ಯ ಮಾಹಿತಿ ಶಿಬಿರದಲ್ಲಿ ಕೆ ಎಮ್ ಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾರ್ವಜನಿಕರಿಗೆ ಉಚಿತವಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಸೇವಾ ಕಾರ್ಯ ಶ್ಲಾಘನೀಯ.

ಆರೋಗ್ಯ ಕ್ಷೇತ್ರದಲ್ಲಿ ಇವರು ನೀಡುತ್ತಿರುವ ಕೊಡುಗೆ ಅಪಾರ. ಇಂದು ಸರಕಾದ ಎಲ್ಲ ಸವಲತ್ತುಗಳನ್ನು, ಯೋಜನೆಗಳನ್ನು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒದಗಿಸುವಲ್ಲಿ ಮತ್ತು ಮಕ್ಕಳಿಗೆ ಪ್ರಾರಂಭದಲ್ಲಿ ಉತ್ತಮ ಸಂಸ್ಕಾರವನ್ನು ನೀಡುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ಸಮ್ಮಾನಿಸಿ ಗೌರವ ಸಲ್ಲಿಸಿರುವುದು ಬಹಳ ಉತ್ತಮವಾದುದು ಎಂದು ಕಾಪು ಬಿಜೆಪಿ ಕಾರ್ಯ ಕ್ಷೇತ್ರದ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್ ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಅಖಿಲಾ, ಪುರಸಭಾ ಮಾಜಿ ಸದಸ್ಯರಾದ ಗುಲಾಬಿ ಪಾಲನ್, ಡಾ.ವರ್ಷ, ಉದ್ಯಮಿ ಸಮಾಜಸೇವಕರಾದ ಪ್ರಸಾದ್ ಶೆಣೈ ಕಾಪು, ರೊಟೇರಿಯನ್ ಜೇಮ್ಸ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕಿ ನೀಲಾವತಿ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಆರೋಗ್ಯ ಮಾಹಿತಿ ನೀಡಲಾಯಿತು.

ಪ್ರಧಾನಿ ಜನ್ಮದಿನದಂದು ತನ್ನ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಯಾಣ ಒದಗಿಸಿದ ಚಂದ್ರ ಮಲ್ಲಾರ್ : ಗಣ್ಯರಿಂದ ಶುಭಾಶಯ

Posted On: 18-09-2021 10:34AM

ಕಾಪು : ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿ, ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಚಂದ್ರ ಮಲ್ಲಾರ್ ಇವರು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಪ್ರತೀ ವರ್ಷ 5 ಕಿಮೀ ವ್ಯಾಪ್ತಿಯಲ್ಲಿ ತನ್ನ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರಯಾಣ ಒದಗಿಸುತ್ತಿದ್ದು ನಿನ್ನೆಯ ದಿನ ಬೆಳಿಗ್ಗೆ ಅದರ ಚಾಲನಾ ಕಾರ್ಯಕ್ರಮ‌ ನಡೆಸಲಾಯಿತು.

ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಮೋದಿಯವರ ಆದರ್ಶ ವ್ಯಕ್ತಿತ್ವ ಕೊಂಡಾಡಿ ಚಂದ್ರ ಮಲ್ಲಾರ್ ನೀಡುತ್ತಿರುವ ಉಚಿತ ಸೇವೆ ನಮ್ಮೆಲ್ಲರಿಗೂ ಆದರ್ಶವಾಗಿದ್ದು ನಾವೆಲ್ಲರೂ ಯಾವುದಾದರೊಂದು ಸೇವಾ ಚಟುವಟಿಕೆಯಲ್ಲಿ ಭಾಗವಹಿಸಿ ಮೋದಿಗೆ ಶುಭ ಕೋರಬೇಕು ಎಂದರು.

ಈ ಸಂದರ್ಭದಲ್ಲಿ ಕಾಪು ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ರಾಜ್ಯ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಮಂಡಲ ಉಪಾಧ್ಯಕ್ಷರಾದ ನವೀನ್ ಎಸ್. ಕೆ, ಪಕ್ಷದ ಪ್ರಮುಖರಾದ ಗಂಗಾಧರ ಸುವರ್ಣ, ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ನೋಂಪು - ಅನಂತವ್ರತ

Posted On: 18-09-2021 10:21AM

| ಅನಂತಾನಂತ ದೇವೇಶ ......| ' ಕ್ಷೀರಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣ' ಈ ನೋಟ ಅಥವಾ ದೃಶ್ಯದ ಯಥಾವತ್ತಾದ ಪರಿಕಲ್ಪನೆ - ಅನುಸಂಧಾನದೊಂದಿಗೆ ನೆರವೇರುವ ಉಪಾಸನೆಯೇ 'ಶ್ರೀಮದನಂತವ್ರತ' , 'ಅನಂತವ್ರತ, ಅಥವಾ 'ನೋಂಪು'. ಭಾದ್ರಪದ ಶುದ್ಧ ಚತುರ್ದಶಿ ತಿಥಿಯಲ್ಲಿ 'ಅನಂತ ಚತುರ್ದಶಿ' ಆಚರಣೆ .ಇದು ವ್ರತವಾಗಿ ನೆರವೇರುತ್ತದೆ . ಕ್ಷೀರ ಸಾಗರವನ್ನು ಸಾಂಕೇತಿಸುವ ಜಲ ಪೂರಿತ ಕಲಶ . ಅದರ ಮೇಲೆ ದರ್ಭೆಯಿಂದ ನಿರ್ಮಿಸಿರುವ ಏಳು ಹೆಡೆಯುಳ್ಳ ಶೇಷಾಕೃತಿ . ಈ ಶೇಷಾಕೃತಿಯ ಮೇಲೆ ಶಾಲಗ್ರಾಮ .ಈ ಕಲ್ಪನೆಯಲ್ಲಿ ಅನಂತನಾಮಕನಾದ ಶೇಷನ ಮೇಲೆ ಶಯನ ಮಾಡಿದ ಅನಂತಪದ್ಮನಾಭನ ಚಿಂತನೆಯೊಂದಿಗೆ ಆರಾಧನೆ ನೆರವೇರುವುದು .ವೈಕುಂಠವನ್ನೆ ಸಾಕಾರ ಗೊಳಿಸುವ , ವಾಸ್ತವದ ಸ್ಥಾಪನೆಯಾಗಿ ವ್ರತ ನಡೆಯುವುದು . ಲೌಕಿಕದಲ್ಲಿ ಅಲೌಕಿಕವನ್ನು ನಿರ್ಮಿಸುವ ವೈದಿಕದ ಉಪಾಸನಾ ವಿಧಾನ ಅದ್ಭುತ.

ಹದಿನಾಲ್ಕು ಗಂಟುಗಳುಳ್ಳ ಕೆಂಪು ಬಣ್ಣದ "ದಾರ ಅಥವಾ ದೋರ"ವನ್ನು ಪ್ರತಿಷ್ಠಾಪಿತ ಕಲಶದಲ್ಲಿ ಪ್ರಧಾನ ಪೂಜಾಕಾಲದಲ್ಲಿ ಇರಿಸಿ ಪೂಜಾನಂತರದಲ್ಲಿ ಧರಿಸಿಕೊಳ್ಳುವುದು ಅನಂತವ್ರತದ ಮುಖ್ಯ ಅಂಗ .ಪುರುಷರಾದರೆ ಬಲಕೈಯ ತೋಳಿನಲ್ಲಿ , ಸ್ತ್ರೀಯರಾದರೆ ಎಡಕೈಯ ತೋಳಿನಲ್ಲಿ ಕಟ್ಟಿಕೊಳ್ಳುವುದು ಸಂಪ್ರದಾಯ . ಪೂಜೆ - ದೋರ ಬಂಧನ‌ ಶ್ರೀಮದನಂತವ್ರತ ಕಲ್ಪೋಕ್ತ ಪೂಜಾವಿಧಿಯು ಹಂತಹಂತವಾಗಿ ಸಂಪನ್ನಗೊಳ್ಳುತ್ತದೆ. ‌‌ ಯಮುನಾ ಪೂಜೆ , ಅಂಗಪೂಜೆ , ಪತ್ರಪೂಜೆ , ಪುಷ್ಪಪೂಜೆ ,ನಾಮಪೂಜೆ , ಧೂಪದೀಪಾದಿ ಸಮರ್ಪಣೆ .ಕಲಶಸ್ಥಾಪನೆ , ಶೇಷ ಪೂಜೆ , ಧ್ಯಾನಾವಾಹನಾದಿ , ಅಭಿಷೇಕ ,ವಸ್ತ್ರಯುಗ್ಮ ಸಮರ್ಪಣೆ , ಅಂಗಪೂಜೆ , ಅನಂತಪೂಜೆ ,ಧ್ಯಾನಮ್ ,ಮಂಟಪ ಧ್ಯಾನಮ್ , ಪೀಠಪೂಜೆ , ನವಶಕ್ತಿಪೂಜೆ , ಆವಾಹನಮ್ , ನವದೋರ ಸ್ಥಾಪನೆ ,ಷೋಡಶೋಪಚಾರ ಪೂಜೆ , ಅಂಗಪೂಜೆ ,ಷೋಡಶಾವರಣ ಪೂಜೆ ,ಶಕ್ತಿಪೂಜೆ , ದೋರಪೂಜೆ ,ಪತ್ರಪೂಜೆ, ಪುಷ್ಪಪೂಜೆ , ಅಷ್ಟೋತ್ತರನಪೂಜೆ ,ಧೂಪದೀಪ ನೈವೇದ್ಯ, ಫಲನಿವೇದನೆ , ನೀರಾಜನ ,ಪ್ರಸನ್ನಾರ್ಘ್ಯ, ಪ್ರದಕ್ಷಿಣ ನಮಸ್ಕಾರ, ಪ್ರಾರ್ಥನೆ, ದೋರಪ್ರಾರ್ಥನೆ , ದೋರನಮಸ್ಕಾರ - ಬಂಧನ ,ಜೀರ್ಣದೋರ ವಿಸರ್ಜನೆ ,ಉಪಾಯನದಾನಮ್ ,........... ಉದ್ವಾಸನ ,ಕ್ಷಮಾಪಣ ,ಸಮಾಪನ .ಹೀಗೆ ವಿವಿಧ ಹಂತಗಳಲ್ಲಿ ಪೂಜೆ ನೆರವೇರಿ ಒಂದು ಭಕ್ತಿ ಭಾವದ ವ್ರತಾಚಾರಣೆಯ ಸಾರ್ಥಕತೆ ಸನ್ನಿಹಿತವಾಗುತ್ತದೆ . ಜಲಸಂಗ್ರಹ - ಯಮುನಾಪೂಜೆಯಿಂದ‌ ಕಲಶ ಪ್ರತಿಷ್ಠೆ , ಶೇಷ ಕಲ್ಪನೆ , ಮತ್ತೆ ಶಾಲಗ್ರಾಮ ಸ್ಥಾಪನೆಯ ಚಿಂತನೆ ಬಳಿಕ ದೋರದ ಮಹತ್ವ - ಧಾರಣೆ . ಇವು ಅನಂತವ್ರತದಲ್ಲಿ ವ್ಯಕ್ತವಾಗುವ ಮುಖ್ಯ ಅಂಶಗಳು .

ಸಂಕ್ಷಿಪ್ತ ಅನಂತವ್ರತ ಕಥಾ ಅನಂತವ್ರತಕಥೆಯು ಯಾರಿಂದ ಯಾರಿಗೆ ಹೇಳಲ್ಪಟ್ಟಿತು ,ಕಲ್ಪೋಕ್ತ ಪೂಜಾವಿಧಾನದೊಂದಿಗೆ ದೋರ (ದಾರ) ಬಂಧನದ ಮಹತ್ವ.....ಇತ್ಯಾದಿ. ಕಪಟ ದ್ಯೂತದ ಪರಿಣಾಮವಾಗಿ ವನವಾಸಕ್ಕೆ ದ್ರೌಪದಿ ಸಹಿತ ಪಂಡವರು ಹೊರಡುತ್ತಾರೆ . ವಿಷಯ ತಿಳಿದ ಕೃಷ್ಣ ಕಾಡಿಗೆ ಬರುತ್ತಾನೆ .ಒದಗಿದ ಕಷ್ಟ ಪರಂಪರೆಗೆ ನಿವೃತ್ತಿ ಹೇಗೆ ಎಂದು ಧರ್ಮರಾಯನು ಕೇಳಲು , ಶ್ರೀಕೃಷ್ಣನು 'ಅನಂತವ್ರತ'ವನ್ನು ಮಾಡುವಂತೆ ಸೂಚಿಸುತ್ತಾನೆ . "ಅನಂತನೆಂದರೆ" ನಾನೆ ಆಗಿದ್ದೇನೆ ,ಆ ಅನಂತ ಸ್ವರೂಪವು ನನ್ನದೇ ಆಗಿದೆ ಎಂದು ತಿಳಿ" ಎಂದು ಅವತಾರದ ಸೂಕ್ಷ್ಮವನ್ನು ತಿಳಿಸುತ್ತಾನೆ .ಇಂತಹ ಅನಂತಸ್ವರೂಪವೇ ತಾನು ಎಂದು ಹೇಳುತ್ತಾನೆ ಕೃಷ್ಣ : ಕೃತಯುಗದಲ್ಲಿದ್ದ ಸುಮಂತನೆಂಬ ಬ್ರಾಹ್ಮಣನ ಕತೆಯನ್ನು ಹೇಳುವ ಮೂಲಕ ಅನಂತ ವ್ರತದ ಫಲಪ್ರಾಪ್ತಿಯ ವಿವರಣೆಯನ್ನು ನೀಡುತ್ತಾನೆ ಶ್ರೀಕೃಷ್ಣ. ಸುಮಂತನು ತನ್ನ ಮಗಳನ್ನು ಕೌಂಡಿನ್ಯನೆಂಬ ಮಹರ್ಷಿಗೆ ಗೃಹ್ಯಸೂತ್ರದ ಕ್ರಮದಲ್ಲಿ ಮದುವೆಮಾಡಿ ಕೊಡುತ್ತಾನೆ . ನವವಧೂವರರಿಗೆ ಬಳುವಳಿಯಾಗಿ ಉತ್ತಮ ವಸ್ತುವನ್ನು ಕೊಡಬೇಕೆಂದು ಬಯಸಿ ಪತ್ನಿಯಲ್ಲಿ ಹೇಳಲು ,ಆಕೆ ಕೋಪಗೊಂಡು ಮನೆಯಲ್ಲಿದ್ದ ಸುವಸ್ತುಗಳನ್ನೆಲ್ಲ ಪೆಟ್ಟಿಗೆಯಲ್ಲಿ ಹಾಕಿ ಬಚ್ಚಿಡುತ್ತಾಳೆ . ಕೌಂಡಿನ್ಯನು‌ ತನ್ನ ಶಿಷ್ಯರ ಸಹಿತ ನವ ವಧುವಿನೊಂದಿಗೆ ಹೊರಡುತ್ತಾನೆ. ಬರಬರುತ್ತಾ ಯಮುನಾ ನದಿಯ ದಡದಲ್ಲಿ ಮಧ್ಯಾಹ್ನದ ಆಹ್ನಿಕಕ್ಕಾಗಿ‌ ಪ್ರಯಾಣವನ್ನು ನಿಲ್ಲಿಸಿ ಅನುಷ್ಠಾನ ಪೂರೈಸಲು ನದಿ ಬದಿಗೆ ಹೋಗುತ್ತಾನೆ . ನವ ವಧು ಶೀಲೆಯು ಹೊಳೆ ಬದಿ ಹೋಗುತ್ತಾ ಕೆಂಪುಬಟ್ಟೆಯನ್ನು ಧರಿಸಿದ ಹೆಂಗಸರ ಗುಂಪು ಅನಂತ ವ್ರತದಲ್ಲಿ ತೊಡಗಿರುವುದನ್ನು ಕಾಣುತ್ತಾಳೆ . ವ್ರತದ ವಿವರವನ್ನು ತಿಳಿದುಕೊಂಡ ಶೀಲೆ ತಾನು ವ್ರತ ಮಾಡಲು ಸಿದ್ಧಳಾಗುತ್ತಾಳೆ . ಆಗ ಹೆಂಗಸರು ವ್ರತವಿಧಿಯನ್ನು ಹೇಳುತ್ತಾರೆ. ಈ ವ್ರತ ವಿಧಿಯಲ್ಲಿ ಅನಂತನು ಪೂಜಿಸಲ್ಪಡುತ್ತಾನೆ . ‌‌ ಒಂದು ಸೇರು ಅಕ್ಕಿಯಿಂದ ಪುರುಷನಾಮಕನಾದ ಪರಮಾತ್ಮನ ನಿಮಿತ್ತದಿಂದ ಪಾಕಮಾಡಿ ಅನಂತನಿಗರ್ಪಿಸಿ‌ ಅರ್ಧವನ್ನು ಬ್ರಾಹ್ಮಣನಿಗೆ ದಾನಮಾಡಿ ಉಳಿದರ್ಧವನ್ನು‌ ತಾನು ಭೋಜನಮಾಡಬೇಕು .ದ್ರವ್ಯದಲ್ಲಿ‌ ವಂಚನೆಮಾಡದೆ ತನ್ನ ಶಕ್ತಿಯಿದ್ದಷ್ಟು ದಕ್ಷಿಣೆ ಕೊಡಬೇಕು .ನದಿಯ ದಡದಲ್ಲಿ‌‌ ಅನಂತನನ್ನು‌ ಪೂಜಿಸಬೇಕು . ದರ್ಭೆಯಿಂದ ಶೇಷನ ಪ್ರತಿಮೆಯನ್ನುಮಾಡಿ ಬಿದಿರಿನ ಪಾತ್ರದಲ್ಲಿಟ್ಟು ಸ್ನಾನಮಾಡಿ‌ ಮಂಡಲದ ಮೇಲೆ ಗಂಧ ,ಪುಷ್ಪ‌, ,ಧೂಪ‌,ದೀಪ‌ಗಳಿಂದ ಅನೇಕ‌ವಿಧ ಪಕ್ವಾನ್ನಗಳಿಂದೊಡಗೂಡಿದ ನೈವೇದ್ಯಗಳಿಂದ ದೇವರ ಮುಂಭಾಗದಲ್ಲಿ‌ ಕುಂಕುಮದಿಂದ ಕೆಂಪಾದ ದೃಢವಾದ ಹದಿನಾಲ್ಕು ಗಂಟುಗಳುಳ್ಳ‌ ದೋರವನ್ನಿಟ್ಟು‌ ಪೂಜಿಸಬೇಕು . ಅನಂತರ ದೋರವನ್ನು ಮೇಲೆ ಹೇಳಿದಂತೆ ಕಟ್ಟಿಕೊಳ್ಳಬೇಕು . " ಸಂಸಾರವೆಂಬ ಮಹಾಸಮುದ್ರದಲ್ಲಿ‌ ಮುಳುಗಿದ್ದ ನನ್ನನ್ನು ,ಎಲೈ ,ಅನಂತನೆ‌, ವಾಸುದೇವನೆ ಉದ್ಧರಿಸು ,ನಾಶವಿಲ್ಲದ ನಿನ್ನ ರೂಪದಲ್ಲಿ ನನ್ನನ್ನು ವಿನಿಯೋಗಿಸು , ಸಾರೂಪ್ಯವೆಂಬ ಮೋಕ್ಷವನ್ನು ಕೊಡು . ಅನಂತರೂಪಿಯಾದ ನೀನು‌ ಈ ಸೂತ್ರದಲ್ಲಿ ಸನ್ನಿಹಿತನಾಗಿರುವೆ ,ನಿನಗೆ ನಮಸ್ಕಾರ " ಎಂಬ ಮಂತ್ರದಿಂದ ದೋರವನ್ನು ಕಟ್ಟಿಕೊಳ್ಳಬೇಕು . ಹೀಗೆ ದೋರವನ್ನು ಕಟ್ಟಿಕೊಂಡ ಶೀಲೆಯು ಮನೆಗೆ ಬರಲಾಗಿ ಮನೆಯು ಧನ ದಾನ್ಯಗಳಿಂದ ತುಂಬಿತ್ತು, . ಒಂದು ದಿನ ಕೌಂಡಿನ್ಯನು ಶೀಲೆಯ ತೋಳಿನಲ್ಲಿದ್ದ ದೋರವನ್ನು‌ ಕಂಡು ಕುಪಿತನಾಗಿ "ನನ್ನನ್ನು ವಶೀಕರಿಸಿಕೊಳ್ಳಲು‌ ಇದನ್ನು ಕಟ್ಟಿಕೊಂಡಿರುವೆಯಾ" ಎಂದು ಮೂದಲಿಸುತ್ತಾ ದೋರವನ್ನು ಕಿತ್ತು ಬೆಂಕಿಗೆ ಹಾಕುತ್ತಾನೆ .‌ ಆ ಕ್ಷಣ ಶೀಲೆಯು ದೋರವನ್ನು ಬೆಂಕಿಯಿಂದ ತೆಗೆದು ಹಾಲಿಗೆ ಹಾಕುತ್ತಾಳೆ . [ಪ್ರಸ್ತುತ ವ್ರತಾಚರಣೆಯಲ್ಲಿ ತೊಡಗುವವರು , ಕಳೆದ ವರ್ಷ ಆರಾಧಿಸಿ ಕಟ್ಟಿಕೊಂಡ ದೋರವನ್ನು ಮತ್ತೆ ಕಟ್ಟಿಕೊಂಡು ,ಕಲ್ಪೋಕ್ತಪೂಜೆಯನ್ನು ನೆರವೇರಿಸಿ ಬಳಿಕ‌ ನೂತನವಾಗಿ ಪೂಜಿಸಲ್ಪಟ್ಟ ದೋರವನ್ನು‌ ಕಟ್ಟಿಕೊಂಡು ಹಳೆದೋರವನ್ನು‌ ಬಿಚ್ಚಿ ಹಾಲಿಗೆ ಹಾಕುವ ವಿಧಿ ಪೂಜಾಕ್ರಮದ ಅವಿಭಾಜ್ಯ ಅಂಗವಾಗಿದೆ.] ಇಂತಹ ಘಟನೆಯಿಂದ ಸಕಲ‌ಸಂಪತ್ತನ್ನು ಕೌಂಡಿನ್ಯನು‌ ಕಳೆದುಕೊಂಡು ನಿರ್ಗತಿಕನಾದನು . ಎಂದು ಶ್ರೀಕೃಷ್ಣನು ಧರ್ಮರಾಯನಿಗೆ ವಿಸ್ತಾರವಾದ ಕಥೆಯನ್ನು ಹೇಳುತ್ತಾ ಕೌಂಡಿನ್ಯನು ಅನಂತನನ್ನು ಹುಡುಕಿ ಹೊರಟು ಕೊನೆಗೆ ಹೇಗೆ ಮರಳಿ ವ್ರತವನ್ನು ಮಾಡಿ ಅನಂತನ ಅನುಗ್ರಹದಿಂದ ಕಳಕೊಂಡ ಸಂಪತ್ತನ್ನು ಪಡೆದು ಬಾಳಿ ಬದುಕಿ ವೈಕುಂಠವನ್ನು ಸಿದ್ಧಿಸಿಕೊಂಡ ಎಂಬ ವಿವರವನ್ನು ಹೇಳುತ್ತಾನೆ . ಯಾರು ಸಂಸಾರಿಯಾಗಿ ಸುಖಿಗಳಾಗಿ ಋಜುಮಾರ್ಗಿಗಳಾಗಿ ಬದುಕಲು ಬಯಸುವರೋ ಅವರು ಮೂರುಲೋಕಕ್ಕೂ ಸ್ವಾಮಿಯಾದ ಅನಂತದೇವನ್ನು ಭಕ್ತಿಯಿಂದ ಪೂಜಿಸಿ ಉತ್ತಮ ದೋರವನ್ನು ಬಲತೋಳಿನಲ್ಲಿ ಕಟ್ಟಿಕೊಳ್ಳುತ್ತಾರೆ. ಬಹಳಷ್ಟು ಮನೆಗಳಲ್ಲಿ ನೋಂಪು ವ್ರತಾಚರಣೆ ಶತಮಾನಗಳಿಂದ ನಡೆದುಬಂದಿದೆ , ಶ್ದಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಪರ್ವ ವ್ರತವಾಗಿ ನೆರವೇರುತ್ತದೆ .ಪ್ರಸಿದ್ಧ ವಿಷ್ಣು ದೇವಾಲಯಗಳಲ್ಲಿ ,ಅನಂತ ಪದ್ಮನಾಭ ದೇವಳಗಳಲ್ಲಿ ಅನಂತವ್ರತ ಸಂಭ್ರಮದಿಂದ ನಡೆಯುತ್ತದೆ.

|ಹದಿನಾಲ್ಕು | ಚತುರ್ದಶಿ ತಿಥಿಯಂದು ಅನಂತವ್ರತ‌ ಆಚರಣೆ . ಶುದ್ಧ ಪಕ್ಷದ ಹದಿನಾಲ್ಕನೇ ದಿನ . ಮರುದಿನ ಹುಣ್ಣಿಮೆ .ಅಂದರೆ ವೃದ್ಧಿ ಪಕ್ಷದ ಪರಿಪೂರ್ಣ ವೃದ್ಧಿಯ ಹಿಂದಿನ ದಿನ .‌ಚತುರ್ದಶಿಗೆ ದ್ವಿತೀಯ‌ ಹುಣ್ಣಿಮೆ . ಇದು ಬಹಳ ಪ್ರಸ್ತುತ. ಇದಕ್ಕೆ ಪೂರಕವಾಗಿ ದೋರದಲ್ಲಿ ಹದಿನಾಲ್ಕು ಗಂಟುಗಳು .ವ್ರತದ ಅನುಷ್ಠಾನ ಕ್ರಮದಂತೆ ನಿರಂತರ ಹದಿನಾಲ್ಕು ವರ್ಷ ನೆರವೇರಿಸಬೇಕು . ಇದು ಶ್ರೀಕೃಷ್ಣನು ಧರ್ಮರಾಯನಿಗೆ ಉಪದೇಶಿಸಿದ ಅನಂತವ್ರತದ ಸೂಕ್ಷ್ಮ ವಿವರಗಳು. ಹದಿನಾಲ್ಕು ಲೋಕಗಳೆಂದು ಒಂದು ತಿಳಿವಳಿಕೆ , ಅದರಂತೆ ಏಳು + ಏಳು ಲೋಕಗಳು.ಲೋಕಗಳ ಎಣಿಕೆ.ಭುವನ ,ಅತಳ ,ವಿತಳ ..ಇತ್ಯಾದಿ. ಚತುರ್ದಶ ವಿದ್ಯೆ : ನಾಲ್ಕು ವೇದ , ಆರು ವೇದಾಂಗ ,ಧರ್ಮ ಶಾಸ್ತ್ರ ,ಪುರಾಣ ನ್ಯಾಯ, ಮೀಮಾಂಸೆ. ಚತುರ್ದಶ ರತ್ನ : ಲಕ್ಷ್ಮೀ ,ಕೌಸ್ತುಭ, ಪಾರಿಜಾತ, ಸುರಾ,ಧನ್ವಂತರಿ,ಚಂದ್ರಮ ,ಐರಾವತ, ಉಚ್ಚೈಃಶ್ರವ,ಶಂಖ ,ಹರಿಧನುಸ್ಸು,ಅಪ್ಸರೆ, ವಿಷ,ಅಮೃತ,ಕಾಮಧೇನು. ಹೀಗೆ ಹದಿನಾಲ್ಕರ ನಿರೂಪಣೆಗಳಿವೆ. (ಸಂಗ್ರಹ) ಲೇಖನ : ಕೆ .ಎಲ್ .ಕುಂಡಂತಾಯ