Updated News From Kaup

ರಾಷ್ಟ್ರಮಟ್ಟದ ದಾಖಲೆ ನಿರ್ಮಿಸಿದ ರೇಣುಕಾ ಗೋಪಾಲಕೃಷ್ಣ ಪೆರಂಪಳ್ಳಿಗೆ ಸನ್ಮಾನ

Thumbnail
Posted On: 11 Mar 2021, 10:22 AM

ಉಡುಪಿ : ವಿಶ್ವ ಮಹಿಳಾ ದಿನಾಚರಣೆಯಂದು ಕಡಿಮೆ ಅವಧಿಯಲ್ಲಿ 108 ಸೂರ್ಯ ನಮಸ್ಕಾರಗಳನ್ನು ಪೂರ್ಣಗೊಳಿಸಿ ಕರ್ನಾಟಕ ಎಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ರಾಷ್ಟ್ರಮಟ್ಟದ ದಾಖಲೆ ನಿರ್ಮಿಸಿದ ಶ್ರೀಮತಿ ರೇಣುಕಾ ಗೋಪಾಲಕೃಷ್ಣರವರನ್ನು ಸಿ ಎಸ್ ಪಿ ಪೊಲೀಸ್ ಅಧೀಕ್ಷಕ ಚೇತನ್ ಆರ್. ಐಪಿಎಸ್ ಸನ್ಮಾನಿಸಿದರು. ಈ ಸಂದರ್ಭ ರೇಣುಕಾ ಗೋಪಾಲಕೃಷ್ಣ ಅವರ ಕುಟುಂಬ ವರ್ಗ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಶಿವರಾತ್ರಿ : ಶಿವಸ್ಮರಣೆ - ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ...!

Thumbnail
Posted On: 11 Mar 2021, 09:54 AM

{ ಮಾಘ ಮಾಸದಲ್ಲಿ‌ ಸನ್ನಿಹಿತವಾಗುವ ಬಹುಳ ಚತುರ್ದಶಿಯಂದು "ಶಿವರಾತ್ರಿ" . ಇದು ಹಬ್ಬವಲ್ಲ ವ್ರತ. ಅಭಿಷೇಕ - ಅರ್ಚನೆಗಳೇ ಪ್ರಧಾನವಾಗಿರುವ ಆರಾಧನೆ. ಉಪವಾಸದ ಶ್ರದ್ಧೆ , ದಿನಪೂರ್ತಿ ಮಹೇಶ್ವರನ ಸನ್ನಿಧಾನದಲ್ಲಿ ಕಾಲಕಳೆಯುವ ವ್ರತ ನಿಷ್ಠೆಗಳ ಸಂಕಲ್ಪ .ಇದೇ ಶಿವರಾತ್ರಿ.} ಸೃಷ್ಟಿ ಕರ್ತನಾದ ಬ್ರಹ್ಮನ ಸತ್ಯಲೋಕ ಎಲ್ಲಿದೆ ,ಪಾಲನಾ ಕರ್ತನಾದ ನಾರಾಯಣನ ವೈಕುಂಠ ಎಲ್ಲಿದೆ,ಇಂದ್ರನ ಸ್ವರ್ಗ ಎಲ್ಲಿದೆ, ಯಮನ ಶೈಮಿನಿ ಎಲ್ಲಿದೆ . ಇವೆಲ್ಲ ಪುರಾಣದ ವರ್ಣನೆಗಳಿಂದ ಋಷಿ ವಾಕ್ಯಗಳಿಂದ ಕಲ್ಪನೆಯಲ್ಲಿ ಸಂಭವಿಸುವ ಅಥವಾ ಅರ್ಥೈಸಿಕೊಳ್ಳಬಹುದಾದ ಲೋಕಗಳು.ಆದರೆ ಲಯಾಧಿಕಾರಿಯಾದ ಮಹಾದೇವನ ವಾಸಸ್ಥಾನ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಸರಳ .ಅದು ಭರತವರ್ಷದ ಉತ್ತರದಲ್ಲಿರುವ ಬೆಳ್ಳಿಬೆಟ್ಟ ,ಗೌರಿಶಂಕರ ಅಥವಾ ಕೈಲಾಸ.ಈ ನೆಲೆಯನ್ನು ಕಲ್ಪಿಸಬೇಕಾಗಿಲ್ಲ , ಭೂಮಿಯಲ್ಲಿ ಬದುಕುವ ಪ್ರತಿಯೊಬ್ಬನೂ ಆಲೋಚಿಸಿ ನಿರ್ಧರಿಸಬಹುದಾದ ನೆಲೆಯಾಗಿದೆ ಮಹಾದೇವನ ವಾಸಸ್ಥಾನ.‌ಆದುದರಿಂದಲೇ ಮಹಾರುದ್ರದೇವರು ಸುಲಭ ಗ್ರಾಹ್ಯರು, ಜನಮಾನಸಕ್ಕೆ ಸಮೀಪದ ದೇವರು. ಜನಪದರ ಆರಾಧ್ಯ ಮೂರ್ತಿ, ಶಿಷ್ಟ ಚಿಂತನೆಯಲ್ಲಿ 'ಅಧ್ಯಾತ್ಮದ ಒಂದು ಬೆರಗು'. ಜಗತ್ತಿಗೆ ಮಾತೃ - ಪಿತೃ ಸ್ಥಾನದಲ್ಲಿರುವ ಪಾರ್ವತಿ ಸಮೇತನಾದ ಮಹೇಶ್ವರ ; ಇವರ ದಾಂಪತ್ಯ ಆದರ್ಶ ಎಂದೇ ಮನುಕುಲ‌ ಸ್ವೀಕರಿಸಿದೆ. • ಪಾರ್ವತಿಯ ಶಿವತಪಸ್ಸು , ಶಿವಭಕ್ತ ಮಾರ್ಕಾಂಡೇಯ ,ಬೇಡರ ಕಣ್ಣಪ್ಪ , ಶ್ವೇತಕುಮಾರ ಮುಂತಾದ ಪುರಾಣ ಹೇಳುವ ಶಿವಭಕ್ತರ ಕಥೆಗಳು ಜನಜನಿತ . ಸರಳ - ಸಹಜ ಭಕ್ತಿಗೆ ಒಲಿಯುವ ಶಿವ ಕಪಟವರಿಯದ ಮುಗ್ಧನೆಂದೂ ಭಸ್ಮಾಸುರನ ಪ್ರಕರಣವನ್ನು ಉಲ್ಲೇಖಿಸಿ ವಿಮರ್ಶಕರು ವ್ಯಾಖ್ಯಾನಿಸುತ್ತಾರೆ. • ರಾಕ್ಷಸರಿಗೆ ವರ ಕೊಡುವಲ್ಲಿ ಶಿವನ ಹೃದಯವಂತಿಕೆ ಮಿಡಿಯುವ ಕ್ರಮ ಗಮನಸೆಳೆಯುತ್ತದೆ .ಭವಿಷ್ಯದ ಯೋಚನೆ ಇಲ್ಲದೆ 'ತಪಸ್ಸು ,ತಾನು ಒಲಿಯಬೇಕು' ಎಂಬ ಮುಗ್ಧತೆ ಮಾತ್ರ ಪ್ರಧಾನವಾಗುವ ಮಹಾದೇವನ ಚರ್ಯೆ ಬಹುತೇಕ ಮನುಷ್ಯ ಸಹಜವಾಗಿಯೇ ವ್ಯಕ್ತವಾಗುತ್ತದೆ . • ಶಿವ ಶರಣರು , ದಾಸರು ಶಿವನನ್ನು ಕಂಡ ಬಗೆಯೂ ವಿಶಿಷ್ಟ. - 'ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ಜಗವು ಶಿವನಿಂದ ಬೇರಿಲ್ಲ ಈ ಬೆಡಗ ಅಘಹರನೇ ಬಲ್ಲ ಸರ್ವಜ್ಞ' 'ತ್ರಿಪದಿ ಕವಿ ಸರ್ವಜ್ಞನ ನಿರೂಪಣೆಯಂತೆ ಜಗವು ಶಿವನಿಂದ ಬೇರಿಲ್ಲ'. ‌‌‌ - 'ರಾತ್ರಿಯೊಳು ಶಿವರಾತ್ರಿ' ಎಂದೂ ಸರ್ವಜ್ಞ ಉದ್ಗರಿಸಿದ್ದಿದೆ . - ಶಿವರಾತ್ರಿಯ ಜಾಗರಣೆಯಲ್ಲಿ ತನಗೆ ಶಿವ ದರ್ಶನವಾದುದನ್ನು ದಾಸವರೇಣ್ಯ ಪುರಂದರದಾಸರು ಹಾಡುತ್ತಾರೆ . - ಭಕ್ತಿ ಭಂಡಾರಿ ಬಸವಣ್ಣನವರಿಗೆ ಶಿವ ಎಲ್ಲೆಲ್ಲೂ ಕಾಣುತ್ತಾನೆ ,ವಿಶ್ವವೇ ಶಿವಮಯವಾಗಿ ಭಾಸವಾಗುತ್ತದೆ . ತ್ರಿನಯನನ ಕಣ್ಣಿನ ಕಾಂತಿಯ ಬೆಳಕಿನಿಂದಲೇ ಓಡಾಡುತ್ತಾರೆ ಬಸವಣ್ಣನವರು. - 'ಚೆನ್ನಮಲ್ಲಿಕಾರ್ಜುನಯ್ಯ ,ಆತ್ಮ ಸಂಗಾತಕ್ಕೆ ನೀನೆನಗುಂಟು', ಎನ್ನುತ್ತಾ ಸಂಸಾರ ತ್ಯಾಗ ಮಾಡಿ ಹೊರಟಳು ಮಹಾಶಿವಶರಣೆ ಅಕ್ಕಮಹಾದೇವಿ. • ನಮ್ಮ ದೈವ - ಬೂತಗಳ ನಡುವಣ ಲೋಕದಲ್ಲಿ ಅಬ್ಬರಿಸುವ ಸತ್ಯಗಳ ಕಥೆಗಳು ರೋಚಕ. - ಪಂಜುರ್ಲಿ ಪಾಡ್ದನವು ಶಿವನು ಹೇಗೆ ಈ ದೈವೀಶಕ್ತಿ ಪ್ರಕಟಗೊಳ್ಳುವಂತೆ ಮಾಡಿ ಭೂಮಿಗೆ ಕಳುಹಿಸಿದನೆಂಬ ಕಥೆಯನ್ನು ವಿವರಿಸುತ್ತದೆ . - ಮುಂಡತ್ತಾಯ ದೈವವು ಶಿವ ದೇವರ ಹಣೆಯಿಂದ ಜನಿಸಿತಂತೆ . - ಜೋಗಿ ಪುರುಷರಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಕದಿರೆಯ ಮಂಜುನಾಥ ದೇವರನ್ನು ಉಲ್ಲೇಖಿಸಿವೆ . - ಗುಳಿಗ ದೈವವು ಶಿವಾಂಶವೆಂಬ ವರ್ಣನೆ ಇದೆ . - ಗಣಪತಿಯ ಜನನದ ಕುರಿತಾದ ಜಾನಪದ ಪಾಡ್ದನವೊಂದರಲ್ಲಿ‌ ಶಿವನ ಪ್ರೇಮ ವಿಲಾಸದ ವರ್ಣನೆ ಇದೆ .ಬಾಮಕುಮಾರನೆ ಗಣಪತಿ . - ಶಿವಪಾರ್ವತಿಯರು ಬೇಡರಾಗಿಯೋ , ಕೊರವಂಜಿಗಳಾಗಿಯೋ 'ಮೇಗಿ' ಲೋಕದಿಂದ ಭೂಲೋಕಕ್ಕೆ ಇಳಿಯುವಂತಹ ಕಥಾನಕಗಳಿವೆ . - ಶಿವ - ಪಾರ್ವತಿಯರ ಭೂಲೋಕ ಸಂಚಾರದ ಕತೆಗಳು ಮತ್ತು ಆ ಸಂದರ್ಭಗಳ‌ಲ್ಲಿ ಸಂಭವಿಸಿದ ಘಟನೆಗಳಿಂದ ಕೆಲವೊಂದು ಕ್ಷೇತ್ರಗಳು ನಿರ್ಮಾಣವಾಗುವುದನ್ನು ಕೇಳಬಹುದು - ನೋಡಬಹುದು. ಈ ಮೇಲಿನ ವಿವರಣೆಗಳಿಂದ ಶಿವ ಮನುಷ್ಯನ ಬದುಕಿಗೆ ಸಮೀಪದ ದೇವರಾಗಿ ಒಮ್ಮೆ ನಮ್ಮೊಂದಿಗೆ ನಮ್ಮವನಾಗಿ ನಮ್ಮಂತೆಯೇ ನಮ್ಮ ಕಷ್ಟಸುಖ ವಿಚಾರಿಸುವ; ಮತ್ತೊಮ್ಮೆ ದೇವತ್ವದ ತುತ್ತತುದಿಗೇರುತ್ತಾ ಮಹನೀಯನಾಗುವ ಆ ಮೂಲಕ ಭವ ಬಂಧನದಿಂದ ಮುಕ್ತಿಕೊಡುವ ಮಹಾದೇವನಾಗಿ ಅನಾವರಣಗೊಳ್ಳುತ್ತಾನೆ . ಈ ದೇಶದಲ್ಲಿ ಶಿವನು ಆದಿಮದಿಂದ ವೈದಿಕ ಸಂಸ್ಕೃತಿಯ ವರೆಗೆ ವಿವಿಧ ರೂಪಗಳಿಂದ ,ಅನುಸಂಧಾನ ವಿಧಾನಗಳಿಂದ , ಸ್ವೀರಿಸಲ್ಪಟ್ಟ ದೇವರು. ತುಳುನಾಡಿನಲ್ಲಂತೂ ಬಹುಪುರಾತನದಿಂದ ಪೂಜೆಗೊಂಡ ದೇವರು. ವಿರಕ್ತಿ - ಅನುರಕ್ತಿ : ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು. ಸರ್ವಸಂಗ ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೆ ತೀವ್ರವಾದ ಪ್ರವೃತ್ತಿಯು ಶಂಕರನಲ್ಲಿ ಕಾಣಬಹುದು . ಗೊಂದಲಗಳ ಗೂಡಾಗಿ ಕಾಣುವ , ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ - ಶಿವ ಪರಿವಾರ ಸ್ವತಃ ದೇವದೇವನೇ ಮಾನವಕೋಟಿಗೆ ಒಂದು ಆದರ್ಶದ ಸಂದೇಶವನ್ನು ನೀಡುವಂತಿದೆ .ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದುದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ ,ಸ್ತುತಿ ಇತ್ಯಾದಿ. ಶಿವರಾತ್ರಿ : ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷ ಪ್ರಾಶನ ಮಾಡಿದ ಸುಂದರ್ಭ , ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲ ; ಹೀಗೆ ಹಲವು ನಿರೂಪಣೆಗಳಿವೆ . ರುದ್ರ - ಪರ್ಜನ್ಯ : ವೇದವು ವಿದ್ಯೆಗಳಲ್ಲಿ ಶ್ರೇಷ್ಠ ವಾದುದು . ವೇದದಲ್ಲಿ ಹನ್ನೊಂದು ಅನುವಾಕಗಳಿರುವ 'ರುದ್ರನಮಕ'ವು ಉತ್ಕ್ರಷ್ಟವಾದುದು .ಅದರಲ್ಲಿರುವ ಮಂತ್ರಗಳಲ್ಲಿ 'ನಮಃ ಶಿವಾಯ ಶಿವ ತರಾಯಚ' ಎಂಬ ವಾಕ್ಯವಿದೆ . ಇದರಿಂದ ಆಯ್ದ ಮಂತ್ರ ಪಂಚಾಕ್ಷರೀ. ಆದುದರಿಂದ ಪಂಚಾಕ್ಷರೀ ವೇದೋಕ್ತ ಮಂತ್ರ ಎಂಬುದು ವಿದ್ವಾಂಸರ ಅಭಿಪ್ರಾಯ .ಶಿವ ಶಬ್ದವು ಶುಭ ಕಲ್ಯಾಣ ,ಮಂಗಳ ಮುಂತಾದ ಅರ್ಥಗಳನ್ನು ಧ್ವನಿಸುತ್ತದೆ .'ಅಚ್' ಪ್ರತ್ಯಯವು ಸೇರಿ ಕಲ್ಯಾಣ ಗುಣಗಳುಳ್ಳವ ಎಂಬ ಅರ್ಥದಲ್ಲಿ ನಿಷ್ಪನ್ನವಾಗುತ್ತದೆ . ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನ ಸಂಭವಃ | ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಭವಃ|| ಅನ್ನ - ಜೀವರಾಶಿ ,ಅನ್ನ- ಮಳೆ , ಮಳೆ - ಯಜ್ಞ ಈ ಸಂಬಂಧವನ್ನು ವಿವರಿಸುವ ಈ ಶ್ಲೋಕವು ಯಜ್ಞದ ಪರಮ ಲಕ್ಷ್ಯವನ್ನು ಹೇಳುತ್ತದೆ . ಸಕಾಲಿಕ ಮಳೆಗೆ ಯಜ್ಞಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ . ಶಿವ ,ಸದಾಶಿವ , ಪರಶಿವ , ಇವು ಪರಮಾತ್ಮನ ಮನೋಜ್ಞ ಹೆಸರುಗಳು .ಇವನು ರುದ್ರನೂ ಹೌದು .ಮಳೆ ಸುರಿಸಿ ನೀರುಕೊಡುವವನು ಅಧಿಕ ಶಬ್ದ ಮಾಡುತ್ತಾ ನೀರನ್ನು ಕೊಡುವವನು‌ ಎಂಬುದು 'ರುದ್ರ' ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ. ಮಳೆ ಸುರಿಸುವ ಶಿವ ,ಮಳೆಗೆ ಪೂರಕವಾದ ಯಜ್ಞ ಕರ್ಮ : ಈ ಎರಡು ಸಿದ್ಧಾಂತಗಳಿಂದ ರುದ್ರ ದೇವರನ್ನು ಅಗ್ನಿ‌ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ .ಮಳೆಯಿಂದ ಬೆಳೆ ,ಬೆಳೆಯಿಂದ ಸಮೃದ್ಧಿ ತಾನೆ? ಲೋಕ ಸುಭಿಕ್ಷಗೆ ರುದ್ರದೇವರನ್ನು ಆರಾಧಿಸುವುದು ,ಆಮೂಲಕ‌ ಕ್ಷೋಭೆಗಳಿಲ್ಲದ ,ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೆ . ಮಂಗಳಕರ ಮಹಾದೇವನನ್ನು‌ ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಬಿಲ್ವ ದಳವನ್ನು ಅರ್ಪಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ . (ಓದಿದ್ದು ,ಕೇಳಿದ್ದು) ಲೇಖನ : ಕೆ.ಎಲ್.ಕುಂಡಂತಾಯ

ಶಂಕರಪುರ ಸೆಂಟ್ ಜೋನ್ಸ್ ಶಾಲೆಗಳ ಹಳೆವಿದ್ಯಾರ್ಥಿ ಸಂಘದಿಂದ ಮಕ್ಕಳಿಗಾಗಿ ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮ

Thumbnail
Posted On: 09 Mar 2021, 10:47 PM

ಕಾಪು : ಸೆಂಟ್ ಜೋನ್ಸ್ ಶಾಲೆಗಳ ಹಳೆವಿದ್ಯಾರ್ಥಿ ಸಂಘವು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸೈಂಟ್ ಜೋನ್ಸ್ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗಾಗಿ ಹದಿಹರೆಯದ ಸಮಸ್ಯೆಗಳು ಮತ್ತು ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಾಯನ್ ಫೆರ್ನಾಂಡಿಸ್ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಶ್ರೀ ಅಶ್ವಿನ್ ರೋಡ್ರಿಗಸ್, ಸೈಂಟ್ ಜೋನ್ಸ್ ಅಕಾಡೆಮಿ ಮುಖ್ಯಸ್ಥೆ ಸಿಸ್ಟರ್ ಜ್ಯುಲಿಯಾನ ಉಪಸ್ಥಿತರಿದ್ದರು. ಶಿಕ್ಷಕಿ ಸುನೀತಾ ಡಿಸೋಜ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಸ್ಥೆ ಶ್ರೀಮತಿ ಐರಿನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ, ಡೊಮಿಯನ್ ನೊರೊನ್ನಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಸಮೀರ ರೆಬೆಲ್ಲೋ ವಂದಿಸಿದರು.

ಕಾಪು ಲಯನ್ಸ್ ಕ್ಲಬ್ ವತಿಯಿಂದ ಸ್ವಾಗತ, ಸಂದೇಶ ಸಾರುವ ಫಲಕ

Thumbnail
Posted On: 09 Mar 2021, 10:35 PM

ಕಾಪು : ಕಾಪು ಲಯನ್ಸ್ ಕ್ಲಬ್ ವತಿಯಿಂದ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಪಾಂಗಳ ಸೇತುವೆ ಹತ್ತಿರ ಬೀಚ್ ಸಿಟಿ ಕಾಪುವಿಗೆ ಪುರಸಭಾ ವ್ಯಾಪ್ತಿಗೆ ಸ್ವಾಗತ ಹಾಗೂ ರಸ್ತೆ ಮೇಲೆ ಕಸ ಹಾಕಬೇಡಿ ಎಂಬ ಸಂದೇಶ ಸಾರುವ ಫಲಕ ಲಯನ್ಸ್ ನ ಜಿಲ್ಲಾ ಗವರ್ನರ್ ಯನ್.ಎಮ್. ಹೆಗ್ಡೆ ಹಾಗೂ ಕಾಪು ಪುರಸಭಾ ಅಧಕ್ಷ ರಾದ ಅನಿಲ್ ಕುಮಾರ್ ರವರು ಜಂಟಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಪು ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ್ ನಾವಡ ರವರು ಕಾಪುವಿಗೆ ಸ್ವಾಗತ ಕೋರುವ ಈ ಫಲಕ ಒಂದು ಒಳ್ಳೆಯ ಸಂದೇಶ ಸಾರುವ ಫಲಕವಾಗಿದು ಮುಂದಿನ ದಿನಗಳಲ್ಲಿ ಪುರಸಭೆಯಿಂದ ಇನ್ನಷ್ಟು ಫಲಕಗಳು ಅಳವಡಿಸಲಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಪು ಠಾಣೆಯ ಎ.ಯಸ್.ಐ ಜಯ ಪ್ರಕಾಶ್ ,ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ , ಕಾಪು ಲಯನ್ಸ್ ನ ಅಧ್ಯಕ್ಷ ವರುಣ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಜಿಲ್ಲಾ ಸಂಯೋಜಕ ರಾದ ವಿ. ಟಿ ಹೆಗ್ಡೆ, ಜಯಕುಮಾರ್, ನಡಿಕೆರೆ ರತ್ನಾಕರ ಶೆಟ್ಟಿ, ಕೆ. ಯಂ. ಲುತುಫುಲ್ಲ, ನಾಗರಾಜ್ ರಾವ್ ,ಕಾಪು ಲಯನ್ಸ್ ನ ಪಿ ಆರ್ ಓ ಹರೀಶ್ ನಾಯಕ್ ಕಾಪು ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀಮತಿ ಬೇಬಿ ರಮೇಶ್ ಪೂಜಾರಿಯವರಿಗೆ ಸಮ್ಮಾನ

Thumbnail
Posted On: 09 Mar 2021, 10:29 AM

ಉಡುಪಿ‌ : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ.) ಉಡುಪಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗ ವಾಗಿ ತೆರೆಮರೆಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಶ್ರೀಮತಿ ಬೇಬಿ ರಮೇಶ್ ಪೂಜಾರಿಯವರನ್ನು ಬ್ರಹ್ಮಾವರ ಗ್ರಂಥಾಲಯದಲ್ಲಿ ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಲ್ಲಾಧ್ಯಕ್ಷರಾದ ಪ್ರವೀಣ್ ಎಮ್ ಪೂಜಾರಿ, ಗೌರವಧ್ಯಕ್ಷರಾದ ದಿವಾಕರ್ ಸನಿಲ್, ಉಪಾಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ವರಾಂಬಳ್ಳಿ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಪಂಚಾಯತ್ ಸದಸ್ಯರಾದ ನಿತ್ಯಾನಂದ ಬಿ. ಆರ್, ವರಾಂಬಳ್ಳಿ ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪೂಜಾರಿ, ವೇದಿಕೆಯ ಗೌರವ ಸಲಹೆಗಾರರು ಹಾಗೂ ಪಂಚಾಯತ್ ಸದಸ್ಯರಾದ ವಿಶು ಕಲ್ಯಾಣಪುರ, ಜತೆ ಕಾರ್ಯದರ್ಶಿ ವಿಜಯ ಕೋಟಿಯನ್, ಸದಸ್ಯರಾದ ನಿತೀಶ್ ಪೂಜಾರಿ ಹಾಗೂ ಮಹಿಳಾ ಸದಸ್ಯರು ಭಾಗವಹಿದ್ದರು.

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಗೆ ಬಜೆಟ್ ನಲ್ಲಿ ಯಾವುದೇ ಘೋಷಣೆ ಇಲ್ಲ : ಉಡುಪಿ ಜಿಲ್ಲಾ NSUI ಉಪಾಧ್ಯಕ್ಷ ಮೊಹಮ್ಮದ್ ಝಮೀರ್

Thumbnail
Posted On: 09 Mar 2021, 10:23 AM

ಕೊರೊನ ಸಂಕಷ್ಟ ನಂತರ ಶಾಲಾ ಕಾಲೇಜು ಒಪನ್ ಆಗಿದೆ ಆದರೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಾಲಾ ಫೀಸ್ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ. ಬಸ್ ನಲ್ಲಿ ಬರುವ ಸಾಮರ್ಥ್ಯವು ಇಲ್ಲ ಹಾಗೂ ಕೊರೊನ ಸಂಕಷ್ಟದಿಂದ ಅನೇಕ ವಿಧ್ಯಾರ್ಥಿಗಳು ಶಾಲಾ ಕಾಲೇಜ್ ಗೆ ಹೋಗುವುದಕ್ಕೂ ಕಷ್ಟವಾಗಿದೆ. ಬಹುದಿನಗಳ ಬೇಡಿಕೆ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಕೂಡ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಘೋಷಣೆ ಮಾಡದೆ ಶಾಲಾ ಕಾಲೇಜು ವಿದ್ಯಾರ್ಥಿಗಳಾದ ನಮ್ಮ ಮನವಿಗೆ ಸ್ಪಂದಿಸದೇ ಇರುವುದು ಈ ಸರ್ಕಾರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಇಲ್ಲದಿದ್ದರೆ ಉಡುಪಿ ಜಿಲ್ಲಾದ್ಯಾಂತ NSUI ವತಿಯಿಂದ ಪ್ರತಿಭಟನೆಯನ್ನು ಮಾಡಲಿದ್ದೇವೆ ಎಂದು ಉಡುಪಿ ಜಿಲ್ಲಾ NSUI ವಿಧ್ಯಾರ್ಥಿ ಸಂಘಟನೆ ಉಪಾಧ್ಯಕ್ಷ ಮೊಹಮ್ಮದ್ ಝಮೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೋಂ ಡಾಕ್ಟರ್ ಫೌಂಡೇಶನ್ : ವೈಶಿಷ್ಟ್ಯ ಪೂರ್ಣ ವಿಶ್ವ ಮಹಿಳಾ ದಿನಾಚರಣೆ

Thumbnail
Posted On: 08 Mar 2021, 10:48 PM

ಉಡುಪಿ : 64 ರ ಇಳಿ ವಯಸ್ಸಲ್ಲೂ ಚರ್ಮುರಿ ಮಾರಿ ಒಳ್ಳೆಯ ರೀತಿಯಲ್ಲಿ ಇನ್ನೊಬ್ಬರ ಕೈ ನೋಡದೆ ಜೀವನ ನಡೆಸುತ್ತಿರುವ ಅಜ್ಜರಕಾಡು ಪಾರ್ಕ್ ಬಳಿ ಕಳೆದ 27 ವಷ೯ದಿಂದ ಚರ್ಮುರಿ ಮಾರಿ ಉಡುಪಿಯಲ್ಲಿ ಬಾಡಿಗೆ ಮನೆ ಯಲ್ಲಿ ಒಬ್ಬಂಟಿ ವಾಸ ವಿರುವ ಧೀರ ಮಹಿಳೆ ಶಿಕಾರಿಪುರ ಮೂಲದ ಶಾಕುಂತಲ ರವರನ್ನು ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಮಾ.8ರಂದು ಸ್ಪಂದನ ವಿಶೇಷ ಚೇತನ ಮಕ್ಕಳ ಶಾಲೆ ಉಪ್ಪುರುನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾಯ೯ಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಜೇಸಿಐ ಉಡುಪಿ ಸಿಟಿ ವತಿಯಿಂದ ವೈದ್ಯಕೀಯ ರಂಗದಲ್ಲಿ ಸಾಧನೆ ಮಾಡಿದ ಡಾll ಸುಮಾ ಶೆಟ್ಟಿ, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸವಿತಾ ಶೆಟ್ಟಿ ಯವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ಪಂದನಸಂಸ್ಥೆಯ ಮುಖ್ಯಸ್ಥರಾದ ಜನಾರ್ದನ್, ಉಮೇಶ್ ರಾಘವೇಂದ್ರಪೂಜಾರಿ , ಬಂಗಾರಪ್ಪ , ನಯನ ,ಶಶಿ ,ಕೀರ್ತಿರಾಜ್ ಸ್ವಚ್ಚ ಭಾರತ್ ಫ್ರೆಂಡ್ಸ್ ಸ್ಥಾಪಕ ಸಂಚಾಲಕ ಗಣೀಶ್ ಪ್ರಸಾದ್.ಜಿ ನಾಯಕ್, ಜಗದೀಶ್ ಶೆಟ್ಟಿ, ವಿಕ್ಷೀತ್ ಪೂಜಾರಿ, ನಯನಾ ಮಂತಾದವರುಉಪಸ್ಥಿತರಿದ್ದರು. ಡಾ|| ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.

ಮಕ್ಕಳ ಕೃಷಿ ಆಸಕ್ತಿಗೆ ನೆರವಾದ ಉಡುಪಿಯ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡ

Thumbnail
Posted On: 07 Mar 2021, 10:58 PM

ಉಡುಪಿ, ಮಾ.7 : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬ್ರಹ್ಮಾವರದ ಮಠಪಾಡಿಯಲ್ಲಿ ಇರುವ ಕೂಲಿ ಕಾರ್ಮಿಕರ ವಸತಿ ಗೃಹಕ್ಕೆ ಭೇಟಿ ನೀಡಿದರು. ಈ ಸಂದರ್ಭ ಕಳೆದ ವರ್ಷ ಮಾಡಿದ ಕೃಷಿ -ಖುಷಿ ಕಾರ್ಯಕ್ರಮದ ಮಕ್ಕಳ ಉತ್ಸಾಹ ನೋಡಿ ಇಂದು ಅವರ ಅನುಕೂಲಕ್ಕೆ ಬೇಕಾದಂತೆ ಅಲ್ಲಿಯ ಜಾಗವನ್ನು ತರಕಾರಿ ಬೆಳೆ ಬೆಳೆಯಲು ಹದತಟ್ಟು ಮಾಡಿಕೊಡಲಾಯಿತು. ಈ ಕಾರ್ಯಕ್ರಮ ಆಸರೆ ತಂಡದ ಸ್ಥಾಪಕಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯಿತು. ಮಕ್ಕಳ ಉತ್ಸಾಹಕ್ಕೆ ಮುಂದಿನ ದಿನಗಳಲ್ಲಿ ನಮ್ಮ ಬೆಳೆ ನಾವು ಅನ್ನುವ ಮುಂದಿನ ಶೀರ್ಷಿಕೆಗೆ ಹೆಜ್ಜೆ ಇಡಲು ನಮ್ಮ ಆಸರೆ ತಂಡವು ಮುಂದಾಗಿದೆ. ಈ ಕಾರ್ಯಕ್ರಮದಲ್ಲಿ ಆಸರೆ ತಂಡದ ಸಂಸ್ಥಾಪಕಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಅವರ ನೇತೃತ್ವದಲ್ಲಿ ನಡೆದಂತಹ ಈ ಕಾರ್ಯಕ್ರಮದಲ್ಲಿ ಜಯರಾಮ್ ನೈರಿ ಮಟಪಾಡಿ, ಸೂರ್ಯ ಗಾಣಿಗ,ಅಜಯ್ ರಾವ್, ವಿಜಯ ಬಾಲನಿಕೇತನ ಮಟಪಾಡಿಯ ಮಕ್ಕಳು ಉಪಸ್ಥಿತರಿದ್ದರು.

ಸುಳ್ಳು ಆರೋಪ ಹೊರಿಸಿದವರನ್ನು ಸತ್ಯ ಪ್ರಮಾಣಕ್ಕಾಗಿ ಆಹ್ವಾನಿಸಿದ ಶಂಕರ್ ಶಾಂತಿ

Thumbnail
Posted On: 06 Mar 2021, 08:19 PM

ಬ್ರಹ್ಮಾವರ : ಕಾಳಿಕಾಂಬಾ ದೇವಸ್ಥಾನದೊಳಗೆ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿಲ್ಲ ಎನ್ನುವ ಮೊಕ್ತೇಸರ ಶ್ರೀಧರ ಆಚಾರ್ಯ ಅವರು ಹೇಳಿರುವ ಹೇಳಿಕೆಯನ್ನು ಸಾಮಾಜಿಕ ಕಾರ್ಯಕರ್ತ ಶಂಕರ ಶಾಂತಿ ಅವರು ಸಂಪೂರ್ಣ ಸುಳ್ಳಿನ ಆರೋಪವೆಂದು ಬಲವಾಗಿ ಖಂಡಿಸಿದ್ದು, ಇವಾಗ ಅವರು ಉಡುಪಿ, ದಕ್ಷಿಣ ಕನ್ನಡದ ಕಾರಣಿಕ ಕ್ಷೇತ್ರಗಳ ದೈವ ದೇವರುಗಳಲ್ಲಿ ಪ್ರಮಾಣ ಮಾಡಲು ಆಹ್ವಾನಿಸಿದ್ದಾರೆ. ಕಚ್ಚೂರು ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಮಾಹಿತಿ ಹಕ್ಕು ಕಾರ್ಯಕರ್ತ ಶಂಕರ್ ಶಾಂತಿ ಯವರಿಗೆ ಕಾಳಿಕಾಂಬಾ ದೇವಸ್ಥಾನದೊಳಗೆ ಹಲ್ಲೆಯಾಗಿದೆ ಎನ್ನುವ ವಿಚಾರ ಹರಿದಾಡುತ್ತಿದ್ದು ಇದು ಆಧಾರ ರಹಿತವಾಗಿದೆ. ಈ ಘಟನೆಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ, ಅನಾವಶ್ಯಕವಾಗಿ ವಿಶ್ವಕರ್ಮ ಸಮಾಜದ ಮೇಲೆ ಆರೋಪ ಮಾಡುತ್ತಿರುವುದು, ನಮ್ಮ ಸಮಾಜದ ಯುವಕರ ಮೇಲೆ ಕೇಸು ದಾಖಲಿಸಿರುವುದು ಸರಿಯಲ್ಲ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ವಡೇರಹೋಬಳಿ ಶ್ರೀಧರ ಆಚಾರ್ಯ ಅವರು ಮಾ.5, ರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಗಂಭೀರ ಸ್ವರೂಪದ ಗಾಯಾಳಾಗಿ ಚಿಕಿತ್ಸೆ ಪಡೆಯುತ್ತಿರುವ, ಸಾಮಾಜಿಕ ಕಾರ್ಯಕರ್ತ ಶಂಕರಶಾಂತಿ ಅವರು, ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಅಡುಗೆ ಕೋಣೆಯಲ್ಲಿ ಹಲ್ಲೆ ನಡೆಸಿ,ನಮ್ಮ ದೇವಸ್ಥಾನದಲ್ಲಿ ಯಾವುದೇ ಘಟನೆ ನಡೆದಿಲ್ಲ ಎಂದು ದೇವಸ್ಥಾನದ ಒಂದನೇ ಹಾಗೂ 3 ನೇ ಆಡಳಿತ ಮೊಕ್ತೇಸರ ಸುಳ್ಳು ಹೇಳಿಕೆ ಪತ್ರಿಕೆಗೆ ನೀಡಿರುತ್ತಾರೆ. ಈ ವಿಷಯದಲ್ಲಿ ಧರ್ಮಸ್ಥಳ ಮಂಜುನಾಥಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯಲ್ಲಿ ಇಡೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮಂಡಳಿಯನ್ನು ಸತ್ಯ ಪ್ರಮಾಣಕ್ಕೆ ಕರೆಯುತ್ತಿದ್ದೇನೆ. ಕಾಳಿಕಾಂಬೆ ಹಾಗೂ ಕಲ್ಕುಡ ಸನ್ನಿಧಿಯಲ್ಲಿ ಸತ್ಯ ಪ್ರಮಾಣ ನಡೆಯಲಿ, ತಾವು ಬಾರದೆ ಇದ್ದಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಹಾಗೂ ಶಂಕರನಾರಾಯಣ ಕಲ್ಕುಡ ದೈವದಲ್ಲಿ ಇಡೀ ಕಾಳಿಕಾಂಬ ದೇವಸ್ಥಾನದ ವಿರುದ್ಧ ಹುಯಿಲು (ದೂರು)ಕೊಡುತ್ತೇನೆಂದು ಹೇಳಿದ್ದಾರೆ.

ಇನ್ನಂಜೆ : ಪುರಾತನˌ ಕಂಚಿನಕೆರೆˌ ನಾಗಬನದ ಪ್ರಶ್ನಾಚಿಂತನೆ

Thumbnail
Posted On: 05 Mar 2021, 10:08 PM

ಇನ್ನಂಜೆ ಗ್ರಾಮದ ಉಂಡಾರು ದೇವಸ್ಡಾನ ದ ಈಶಾನ್ಯ ದಿಕ್ಕಿನಲ್ಲಿರುವ ಅತೀ ಪುರಾತನˌ ಕಂಚಿನಕೆರೆˌ ನಾಗಬನ ದ ಪ್ರಶ್ನಾಚಿಂತನೆಯು ಮಾಚ್೯ 14 ಆದಿತ್ಯವಾರ ಕಂಚಿನಕೆರೆ ಬನದ ಮುಂಭಾಗದಲ್ಲಿ ಜರಗಲಿರುವುದು. ನಾಗಬನಕ್ಕೆ ಸಂಬಂಧಿಸಿದವರು, ಊರ ಹತ್ತು ಸಮಸ್ತರು ಹಾಗೂ ನಾಗಬನ ಇಲ್ಲದೆ ಇರುವವರು ಈ ಪ್ರಶ್ನಾ ಚಿಂತನೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.