Updated News From Kaup
ಕನಾ೯ಟಕ ರಾಜ್ಯೋತ್ಸವ ನಮ್ಮ ಮನೆ ಮನದಲ್ಲಿ ದಿನಂಪ್ರತಿ ನಡೆಯಲಿ

Posted On: 01-11-2020 10:26AM
ಈ ದಿನ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾದ ಸಂದರ್ಭಒದಗಿ ಬಂದಿದೆ. ಆದರೇನಾಗಿದೆ? ರಾಜ್ಯೋತ್ಸವವೆನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ಸರಿಯಲ್ಲ. ನವೆಂಬರ್ ತಿಂಗಳು ಮುಗಿದ ಬಳಿಕ ಕನ್ನಡ- ನಾಡು ನುಡಿಯ ಕುರಿತು ನಾವ್ಯಾರೂ ತಲೆಕೆಡಿಸಿಕೊಳ್ಳಲು ಹೋಗದಿರುವುದು ದುರದೃಷ್ಟಕರ. ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ನಡೆಯಲಿ, ಅದಕ್ಕೆ ಯಾರದೂ ತಕರಾರಿಲ್ಲ. ಆದರೆ ಕನ್ನಡ ನಾಡು- ನುಡಿ ಕುರಿತ ಎಚ್ಚರ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಅದು ವರ್ಷ ಪೂರ್ತಿ ಎಚ್ಚರವಾಗಿರಲಿ. ಕನ್ನಡ ಕುರಿತ ಕಾಳಜಿ, ಕಳವಳ ಹೀಗೆ ನಿರಂತರವಾಗಿ ನಮ್ಮೆದೆಯೊಳಗಿದ್ದರೆ ನಮ್ಮ ನಾಡು- ನುಡಿಗೆ ಈ ರೀತಿಯ ಸ್ಥಿತಿ ಒದಗುವ ಸಾಧ್ಯತೆ ಖಂಡಿತಾ ಬರಲಾರದು.
ಕನ್ನಡ ಭಾಷೆಯ ಉಳಿವಿಗಾಗಿ ಇಂದು ಬೀದಿ ಹೋರಾಟ, ಮುಖಕ್ಕೆ ಮಸಿ ಬಳಿಯುವ ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರು ಖಂಡಿತ ಅಲ್ಲ. ಈ ಕುರಿತು ಪ್ರಾಮಾಣಿಕವಾಗಿ ಆಲೋಚಿಸಿದರೆ ಹೊಳೆಯುವ ಸತ್ಯಸಂಗತಿ ಏನೆಂದರೆ ಕನ್ನಡದ ಅಳಿವಿಗೆ , ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ ಕನ್ನಡಿಗರೇ ಕಾರಣ. ನಾವು ಮಾತ್ರ ಸುಮ್ಮಸುಮ್ಮನೆ ಅನ್ಯರನ್ನು ನಿಂದಿಸುತ್ತಲೇ ರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ನಮ್ಮ ಜನರು ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಕಾಳಜಿ ಹೊಂದಿದ್ದಾರೆಯೆ? ಜನ ಮನಸ್ಸು ಮಾಡಿದರೆ ಕನ್ನಡ ಭಾಷೆಯ ಅಭಿವೃದ್ಧಿ, ಕನ್ನಡ ಪುಸ್ತಕಗಳ ಮಾರಾಟದ ಭರಾಟೆಗೆ ವೇಗೋತ್ಕರ್ಷ ತಂದುಕೊಡಲು ಸಾಧ್ಯವಿಲ್ಲವೆ? ಹೆಚ್ಚಿನ ಕನ್ನಡಿಗರು ಕನ್ನಡವೂ ಅಲ್ಲದ ಇತ್ತ ಇಂಗ್ಲಿಷ್ ಕೂಡ ಅಲ್ಲದ `ಕಂಗ್ಲಿಷ್ ‘ ಭಾಷೆಗೆ ಮೊರೆ ಹೋಗಿರುವುದು ಯಾವ ಪುರುಷಾರ್ಥಕ್ಕಾಗಿ? ನಮ್ಮ ನಮ್ಮ ಮನೆಗಳಲ್ಲಿ ದಿನ ಬೆಳಗಾದರೆ ಕೇಳಿಬರುವ ಭಾಷೆಯ ಇಂಪು ಯಾವುದು? ಅದು ಕನ್ನಡದ ಕಂಪನ್ನು ಹೊರಸೂಸುತ್ತಿದೆಯೆ? ನಾವೆಲ್ಲರೂ ಯೋಚನೆ ಮಾಡಬೇಕಾದ ಸಂಗತಿಯಾಗಿದೆ. ಅಪ್ಪ, ಅಮ್ಮ, ಅಣ್ಣತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಅತ್ತಿಗೆ, ಅತ್ತೆ, ಮಾವ , ಭಾವ, ನಾದಿನಿ, ಮೈದುನ,ಅಜ್ಜ ಅಜ್ಜಿ, ದೊಡ್ಡಪ್ಪ , ಮೊಮ್ಮಗ, ಷಡ್ಕ ಮುಂತಾದ ಅಪ್ಪಟ ಕನ್ನಡದ ಮನುಷ್ಯ ಸಂಬಂಧವನ್ನು ಗುರುತಿಸುವ ಪದಗಳು ಈಗಿನ ಹೊಸ ಪೀಳಿಗೆಗೆ ಅಪರಿಚಿತ ಶಬ್ದಗಳಾಗಿರುವುದಕ್ಕೆ ಯಾರು ಹೊಣೆ? ಡ್ಯಾಡಿ, ಮಮ್ಮಿ (ಈಗ ಅದು ಡ್ಯಾಡ್, ಮಾಮ್) ಅಂಕಲ್, ಆಂಟಿ, ಕಸಿನ್ , ಗ್ರ್ಯಾಂಡ್ಪಾ, ಕೋ-ಬ್ರದರ್ , ಫಾದರ್ ಇನ್ ಲಾ, ಸಿಸ್ಟರ್ ಇನ್ ಲಾ, ನೀಸ್ ಶಬ್ದಗಳು ನಮ್ಮ ಮನೆಯನ್ನು ಆಕ್ರಮಿಸಿಕೊಳ್ಳಿದೆ.
ಆಂಗ್ಲ ಭಾಷೆ ಯನ್ನು ಭಾಷೆಯನ್ನಾಗಿ ಕಲಿಯಬೇಕು ಆದರೆ ಕನ್ನಡ ಮರೆಯದಿರಿ :- ಇಂಗ್ಲಿಷ್ ಬೇಡವೇ ಬೇಡ ಎಂದಲ್ಲ. ಇಂಗ್ಲಿಷನ್ನು ದ್ವೇಷಿಸಬೇಕು ಎಂದೂ ಅಲ್ಲ. ಇಂಗ್ಲಿಷನ್ನು ಕಲಿಯೋಣ. ಜಗತ್ತಿನ ಜ್ಞಾನ- ವಿಜ್ಞಾನಗಳನ್ನು ಅರಗಿಸಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಇಂಗ್ಲಿಷ್ ಒಂದು ಬೆಳಕಿಂಡಿಯಿದ್ದಂತೆ . ಆದರೆ ಇಂಗ್ಲಿಷ್ ಎಲ್ಲಿ ಅವಶ್ಯಕವೋ ಅಲ್ಲಿ ಮಾತ್ರ ಬಳಸೋಣ. ಅದಕ್ಕೊಂದು ಪರಿ ಹಾಕೋಣ.
ಕನ್ನಡದ ದಾಸವರೇಣ್ಯರಾದ ಪುರಂದರದಾಸರು, ಕನಕದಾಸರು ಭಕ್ತಿಪಂಥದ ಮೂಲಕ, ತಮ್ಮ ಕೀರ್ತನೆಗಳ ಮೂಲಕ ಅದ್ಭುತವಾದ ಕ್ರಾಂತಿ ಮಾಡಿದರು. ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಖಂಡಿತ ಸರಿಯಲ್ಲ. ಭಾರತದಂಹ ವಿಶಾಲ ದೇಶದಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ ಹಲವು ಭಾಷೆಗಳ ವೈವಿದ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಹೈದಾರಾಬಾದ್ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ತರ. ಅಸ್ಸಾಂ ರಾಜ್ಯದಲ್ಲಂತೂ ಜಿಲ್ಲೆಗೊಂದು ಭಾಷೆ ಇದೆ. ಅದಕ್ಕೇ ಅದನ್ನೂ ಅಸಮ ಯಾವುದರಲ್ಲೂ ಸಮಾನತೆ ಇಲ್ಲ ಎಂಬ ಹೆಸರು ಬಂದಿದೆ. ಇವೆಲ್ಲವನ್ನೂ ಮನಗಂಡೇ ರಾಷ್ಟ್ರಕವಿ ಕುವೆಂಪು ತಮ್ಮ ಕವನದಲ್ಲಿ ಹೇಳಿರೋದು – ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ: ಭಾರತಾಂಬೆಯ ಪುತ್ರಿ ಕರ್ನಾಟಕ ಮಾತೆ . ಭಾರತವೇ ತಾಯಿ- ಆಕೆಯ ಪುತ್ರಿ ಕರ್ನಾಟಕ ಮಾತ್ರ ಕನ್ನಡಾಂಬೆ. ತಾಯಿ ಭಾರತಾಂಬೆಗೆ ಕನ್ನಡಾಂಬೆ ಹೇಗೆ ಮಗಳೋ ಅದೇ ರೀತಿ ತೆಲುಗು,ತಮಿಳು, ಮಲಯಾಳಂ, ಮರಾಠಿ, ಅಸ್ಸಾಂ, ಹಿಂದಿ, ಬೆಂಗಾಲಿ , ಒರಿಯಾ,ಬಿಹಾರಿ, ಗುಜರಾತಿ, ಭೋಜ್ಪುರಿ ಎಲ್ಲ ಭಾಷೆಗಳು ಮಕ್ಕಳು. ನಮಗೆ ಅವೆಲ್ಲಾ ಸೋದರ ಭಾಷೆಗಳು. ಕರ್ನಾಟಕ ಹಿತ ರಕ್ಷಣೆ ಪ್ರಶ್ನೆ ಬಂದಾಗ ನಾವು ಸ್ವಾಭಿಮಾನವನ್ನು ಪ್ರಕಟಿಸುವುದರ ಜತೆಗೆ ನಾವು ಭಾರತಾಂಬೆಯ ಮಕ್ಕಳು, ಆಕೆಯ ಸತ್ಪುತ್ರರು ಎಂಬುದನ್ನು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಹಾಗೆ ನೆನಪಿಟ್ಟುಕೊಂಡರೆ, ನಮ್ಮ ಮನದಲ್ಲಿ ಆ ವಿಶಾಲ ಭಾವನೆಯಿದ್ದರೆ ಯಾವುದೇ ಸಂಘರ್ಷಕ್ಕೆ ಅವಕಾಶ ಇರುವುದಿಲ್ಲ. ಈಗ ಬೇಕಾಗಿರುವುದು ಸಂಘರ್ಷವಲ್ಲ, ಸಾಮರಸ್ಯ. ಇಡೀ ಭಾರತದಲ್ಲಿ ಕೋಮುಸಾಮರಸ್ಯ , ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ರಾಜ್ಯಹಿತ ರಕ್ಷಣೆಯ ಜೊತೆಗೆ ರಾಷ್ಟ್ರಹಿತದ ರಕ್ಷಣೆಯೂ ಆಗುತ್ತದೆ. ಕನ್ನಡಕ್ಕಾಗಿ ಕೈಯೆತ್ತೋಣ ಅದು ಕಲ್ಪವೃಕ್ಷವಾಗಲಿ, ಕಾಮಧೇನುವಾಗಲಿ ಕನ್ನಡಕ್ಕಾಗಿ ಕೈಯೆತ್ತೋಣ ✍️ ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗೀಕರಣ - ಅದಾನಿ ಪಾಲು

Posted On: 31-10-2020 05:49PM
ಕೇಂದ್ರ ಸರಕಾರದ ಮೊದಲ ಹಂತದ ಖಾಸಗಿಕರಣ ಭಾಗವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್ ಆಫ್ ಕಂಪನಿಯ ಪಾಲಾಗಿದ್ದು. ಇಂದಿನಿಂದ ಅದಾನಿ ಗ್ರೂಪ್ ನ ಕೆಲಸ ಕಾರ್ಯಗಳು ಆರಂಭವಾಗಿವೇ.
ಅದಾನಿ ಕಂಪೆನಿಯು ಬಿಡ್ ಮೂಲಕ ವಿಮಾನ ನಿಲ್ದಾಣದ ಒಡೆತನವನ್ನು ಪಡೆದಿದೆ. ಮಂಗಳೂರು ವಿಮಾನ ನಿಲ್ದಾಣ ಇದೀಗ ಖಾಸಗೀ ಆಡಳಿತಕ್ಕೆ ಒಳಪಟ್ಟಿದೆ.
ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಗೊಂಡ 6ನೇ ವಿಮಾನ ನಿಲ್ದಾಣವಾಗಿದೆ. ನವೆಂಬರ್ 2ರಂದು ಲಕ್ನೋ ವಿಮಾನ ನಿಲ್ದಾಣ ಹಾಗೂ ನವೆಂಬರ್ 6ರಂದು ಅಹಮ್ಮದಾಬಾದ್ ವಿಮಾನ ನಿಲ್ದಾಣ ಅದಾನಿಗೆ ಗ್ರೂಪ್ ಒಡೆತನಕ್ಕೆ ಸೇರುವ ನಿರೀಕ್ಷೆಯಿದೆ.

ರೋಟರಿ ಶಂಕರಪುರದ 200ನೇ ತಿಂಗಳ ವಿಶೇಷ ಮಾನಸಿಕ ಶಿಬಿರ

Posted On: 31-10-2020 05:28PM
ರೋಟರಿ ಶಂಕರಪುರ ಮತ್ತು ರೋಟರಿ ಟ್ರಸ್ಟ್ನ ಉಚಿತ ಮಾನಸಿಕ ಶಿಬಿರವು 17 ವರ್ಷಗಳಿಂದ ನಡೆಯುತ್ತಾ ಬಂದಿದ್ದು.
01/11/2020 ರ ಆದಿತ್ಯವಾರದಂದು 200 ನೇ ತಿಂಗಳ ಶಿಬಿರಕ್ಕೆ ಕಾಲಿಟ್ಟ ಪ್ರಯುಕ್ತವಾಗಿ ಒಂದು ವಿಶೇಷ ಕಾರ್ಯಕ್ರಮವು ಶಿಬಿರಾರ್ಥಿಗಳ ಜೊತೆಗೆ ನಡೆಯಲಿದೆ, ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೇ ಫಾ.ರೊನಾಲ್ಡ್ ಫೆರ್ನಾಂಡಿಸ್ (St Louis church dahisar mumbai) ಮಾಡಲಿದ್ದು. ಮುಖ್ಯ ಅತಿಥಿಗಳಾಗಿ ಶ್ರೀ ಎ. ಜಿ. ಕೊಡ್ಗಿ (Ex MLA and president Amasebail Charitable Trust kundapura) ಅತಿಥಿಗಳಾಗಿ ಡಾ.ಪಿ. ವಿ.ಭಂಡಾರಿ (Medical Director, Dr, A.V. Baliga Hospital Udupi) ಡಾ.ಶ್ರೀನಿವಾಸ್ ಭಟ್ ಯು (Head of Psychiatric Department KEHEMA Hospital Manglore), ರೋ ನವೀನ್ ಅಮೀನ್ (Assistant Governor Rotary District 3182 Zone 5). ಇವರು ಭಾಗವಹಿಸುತ್ತಿದ್ದು ಕಾರ್ಯಕ್ರಮವು ರೋಟರಿ ಭವನ ಶಂಕರಪುರದಲ್ಲಿ ಬೆಳ್ಳಿಗ್ಗೆ 10:30 ಕ್ಕೆ ಸರಿಯಾಗಿ ನಡೆಯಲಿದೆ.
ಹದಿನೇಳು ವರ್ಷಗಳಿಂದ ಶಂಕರಪುರದಲ್ಲಿ ಉಚಿತ ಮಾನಸಿಕ ಶಿಬಿರವನ್ನು ರೋಟರಿ ಶಂಕರಪುರವು ನಡೆಸಿಕೊಂಡು ಬರುತ್ತಿದ್ದು ಜಿಲ್ಲಾದ್ಯಂತ ಬಹಳಷ್ಟು ಶಿಬಿರಾರ್ಥಿಗಳನ್ನು ಒಳಗೊಂಡಿದೆ.
ಈ ಉತ್ತಮ ಕಾರ್ಯಕ್ಕೆ ಸಹಕರಿಸುತ್ತಿರುವ ದಾನಿಗಳಿಗೆ ರೋಟರಿ ಪ್ರಮುಖರು ಕೃತಜ್ಞತೆ ಸಲ್ಲಿಸುವ ಮುಖೇನ ಮುಂದೆಯೂ ಸಹಕಾರ ಹೀಗೆ ಇರಲಿ ಎಂದು ನಮ್ಮ ಕಾಪು ವೆಬ್ ಪೋರ್ಟಲ್ ನಲ್ಲಿ ಧನ್ಯವಾದಗಳನ್ನು ತಿಳಿಸಿದರು.
ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಬಾಲಕಿಯ ಅಪಹರಣ - ಹಿರಿಯಡ್ಕದಲ್ಲಿ ಆರೋಪಿಯನ್ನು ಬಂಧಿಸಲು ಹಿಂದೂ ಸಂಘಟನೆಯ ಪ್ರತಿಭಟನೆ

Posted On: 31-10-2020 04:09PM
ಕಾಪು ವಿಧಾನಸಭಾ ವ್ಯಾಪ್ತಿಯ ಹಿರಿಯಡ್ಕದಲ್ಲಿ ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಬಾಲಕಿ ಅಪಹರಣಕ್ಕೆ ಸಂಶಯಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಅಕ್ಟೋಬರ್ 28 ರಂದು ಪೇರ್ಡೂರಿನ ಅಪ್ರಾಪ್ತ ಬಾಲಕಿಯನ್ನು ಅದೇ ಗ್ರಾಮದ ಅನ್ಯಕೋಮಿನ ಯುವಕನೋರ್ವ ಅಪಹರಿಸಿದ್ದು.. ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಹಿರಿಯಡ್ಕ ಪೊಲೀಸ್ ಠಾಣೆಯ ಎದುರಿಗೆ ಹಿಂದೂ ಸಂಘಟನೆಗಳು ಪ್ರತಿಭಟನೆಯ ಮೂಲಕ ಆಗ್ರಹಿಸಿದವು..

ಕಷ್ಟದಲ್ಲಿ ನೇರವಾದ ಕಾಪು ಪೊಲೀಸ್ ಗೆ ಮೊಮ್ಮಗನ ಮದುವೆಯಲ್ಲಿ ಸಮ್ಮಾನಿಸಿದ ಅಜ್ಜಿ

Posted On: 31-10-2020 12:44PM
ಕಾಪು ಪೊಲೀಸ್ ಠಾಣಾ ಹೆಡ್ ಕಾನ್ಸ್ ಟೇಬಲ್ ಸುಧಾಕರ ಭಂಡಾರಿ ಇವರು COVID 19 ಕೊರೊನಾ ಪಾಸಿಟಿವ್ ಬಂದು ಜುಲೈ 17 ರಂದು ಉಡುಪಿ ಯ TMA pai ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿದ್ದರು.

ಅದೇ ವೇಳೆ ಸಾಸ್ತನದ ಎಡಬೆಟ್ಟು ಚೆಂಪಿಯ ನಿವೃತ್ತ VO ಗೋಪಾಲ ಆಚಾರ್ಯ ರವರ ಕುಟುಂಬದ ಸದಸ್ಯರು ಅದೇ ಹಾಸ್ಪಿಟಲ್ ನಲ್ಲಿ ದಾಖಲಾಗಿ ಕುಟುಂಬದ ಎಲ್ಲಾ ಸದಸ್ಯರು ಗುಣಮುಖರಾಗಿ ಹೋಗುವ ವೇಳೆ ಗೋಪಾಲ ಆಚಾರ್ಯ ರವರ ತಾಯಿಯವರಾದ ಶ್ರೀ ಮತಿ ಜಾನಕಿ ಆಚಾರ್ತಿ (87 ವರ್ಷ ) ರವರನ್ನು ಇನ್ನು ಮೂರು ದಿನಗಳ ಕಾಲ ಅಸ್ವತ್ರೆಯಲ್ಲಿ ಉಳಿಯುವಂತೆ ವೈದ್ಯರು ತಿಳಿಸಿದಾಗ ಕಂಗಾಲಾದ ಗೋಪಾಲ ಆಚಾರ್ಯ ರವರಿಗೆ ಕಾಪು ಠಾಣಾ ಸುಧಾಕರ ರವರು ಜಾನಕಿ ರವರನ್ನು ಮೂರು ದಿನಗಳ ವರೆಗೆ ನಾನು ನೋಡಿಕೊಳ್ಳುವುದಾಗಿ ಧೈರ್ಯ ಹೇಳಿದರು.

ಮೂರು ದಿನಗಳ ವರೆಗೆ ಅವರೊಂದಿಗಿದ್ದು ದಿನಾಂಕ 23/07/2020 ರಂದು Discharge ಮಾಡಿಸಿದರು. ನಂತರ ಅವರನ್ನು 4 ನೇ ಮಹಡಿಯ ಅಸ್ವತ್ರೆ ಯಿಂದ ಹೊರಗೆ ಕರೆದು ಕೊಂಡು ಬಂದು ಮನೆಯವರಿಗೆ ಒಪ್ಪಿಸಿದರು.
ಕಷ್ಟ ಕಾಲದಲ್ಲಿ ತನಗೆ ಸಹಕರಿಸಿದ ಸುಧಾಕರ್ ಅವರನ್ನು ಶ್ರೀಮತಿ ಜಾನಕಿರವರು ನೆನಪಿನಲ್ಲಿ ಇರಿಸಿಕೊಂಡು 3 ತಿಂಗಳ ನಂತರ ಸ್ವತಃ ತಾನೇ ಕರೆ ಮಾಡಿ ದಿನಾಂಕ 30/10/2020 ರಂದು ನಡೆಯಲಿದ್ದ ತನ್ನ ಮೊಮ್ಮಗ ನಿತೀಶ್ ಆಚಾರ್ಯ ರವರ ಮದುವೆಗೆ ಆಹ್ವಾನಿಸಿ ಮದುವೆ ಸಮಾರಂಭದ ನಡುವೆ ಸುಧಾಕರ ರವರು ಮಾಡಿದ 3 ದಿನದ ಸೇವೆ ಗೆ ಸಮ್ಮಾನ ಮಾಡಿ ನೀನು ಕೂಡಾ ನನ್ನ ಮಗನೆ ಎಂದು ಆಶೀರ್ವದಿಸಿರುತ್ತಾರೆ.
ಶಿರ್ವ ಕಲ್ಲು ಸಾಗಾಟದ ಟೆಂಪೋ ಪಲ್ಟಿ - ಚಾಲಕ ಆಸ್ಪತ್ರೆಗೆ ದಾಖಲು

Posted On: 31-10-2020 12:07PM
ಶಿರ್ವ ಸೈಂಟ್ ಮೇರಿಸ್ ಶಾಲಾ ಸಮೀಪದಲ್ಲಿ ಶಿರ್ವದಿಂದ ಕಟಪಾಡಿ ಕಡೆಗೆ ಕಲ್ಲು ಸಾಗಿಸುತ್ತಿದ್ದ ಟೆಂಪೋವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಟೆಂಪೋ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು.
ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾಪು ಪ್ರಖಂಡ ವತಿಯಿಂದ ಬೃಹತ್ ರಕ್ತದಾನ ಶಿಬಿರ

Posted On: 30-10-2020 09:01PM
ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾಪು ಪ್ರಖಂಡ ಇವರ ಸಹಯೋಗದಲ್ಲಿ ದಿನಾಂಕ 02-11-2020ನೇ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಸರಸ್ವತಿ ಮಂದಿರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆ ಉಚ್ಚಿಲ ಇಲ್ಲಿ ಅಯೋಧ್ಯಾ ಬಲಿದಾನ್ ದಿವಸ್ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಜರುಗಲಿದೆ.
ಆ ಪ್ರಯುಕ್ತ ಹಿಂದೂ ಬಾಂದವರೆಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡುವ ಮೂಲಕ ಅಯೋಧ್ಯಾ ಶ್ರೀ ರಾಮ ಜನ್ಮ ಭೂಮಿಯ ಆಂದೋಲನದಲ್ಲಿ ಬಲಿದಾನಗೈದ ಕರಸೇವಕರಿಗೆ ಗೌರವಾರ್ಪಣೆ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ನಮ್ಮ ಕಾಪು ವೆಬ್ ಪೋರ್ಟಲ್ ನ ಮೂಲಕ ಕೇಳಿಕೊಳ್ಳುತ್ತಿದೆ.
ಬೆಳಪುವಿನಲ್ಲಿ ಸೋಲಾರ್ ದೀಪಗಳ ಬ್ಯಾಟರಿ ಕಳ್ಳನ ಬಂಧಿಸಿದ ಸ್ಥಳೀಯ ಯುವಕರು

Posted On: 30-10-2020 08:48PM
ಬೆಳಪು ಗ್ರಾಮ ಪಂಚಾಯತಿ ವತಿಯಿಂದ ದಾರಿ ದೀಪಕ್ಕಾಗಿ ಅಳವಡಿಸಿರುವ ಸೋಲಾರ್ ದೀಪಗಳ ಬ್ಯಾಟರಿ ಕಳ್ಳತನ ಸವಾಲಾಗಿತ್ತು. ಇದನ್ನು ಅರಿತ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರು ಸ್ಥಳೀಯ ಯುವಕರ ತಂಡ ರಚಿಸಿದ್ದರು. ಅದರಂತೆ ಇಂದು ಮುಂಜಾನೆ ಸ್ಥಳೀಯರಿಗೆ ಕಳವು ಮಾಡುತ್ತಿದ್ದಾತ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. ಈತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಉಡುಪಿಯ ಸ್ವಚ್ಛ ಭಾರತ್ ತಂಡ ಈ ಬಾರಿಯ ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

Posted On: 30-10-2020 08:26PM
ಕಳೆದ ಆರು ವರ್ಷಗಳಿಂದ ಸ್ವಚ್ಛ ಭಾರತ, ಸ್ವಸ್ಥ ಭಾರತ, ಗ್ರಾಮ ಭಾರತ ಮತ್ತು ಡಿಜಿಟಲ್ ಭಾರತ ಎಂಬ ನಾಲ್ಕು ವಿಭಾಗಗಳ ಅಡಿಯಲ್ಲಿ ಪೂರಕವಾದ ಯೋಜನೆಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ.
ನಿರಂತರವಾಗಿ 50 ವಾರಗಳ ಕಾಲ ಪ್ಲಾಸ್ಟಿಕ್ ವಿರೋಧಿ ಅಭಿಯಾನವನ್ನು ಮಲ್ಪೆ ಹಾಗೂ ಹೂಡೆ ಕಡಲ ತೀರದಲ್ಲಿ ನಡೆಸಿದೆ.ಅಜ್ಜರಕಾಡು ಉದ್ಯಾನವನವನ್ನು ದಾನಿಗಳ ಸಹಾಯದಿಂದ ಅಭಿವೃದ್ಧಿ ಪಡಿಸುವ ಕಾಯ೯ ನಡೆಸಿದೆ.
ಚೆನ್ನೈ ಚಂಡಮಾರುತ, ಮಡಿಕೇರಿ ಭೂಕುಸಿತ, ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡದಲ್ಲಿ ಸಂಭವಿಸಿದ ನೆರೆಯ ಸಂದರ್ಭದಲ್ಲಿ ಈ ತಂಡ ಸ್ಥಳಕ್ಕೆ ಅಧಿಕಾರಿಗಳ ಜೊತೆಗೆ ತೆರಳಿ ಅಗತ್ಯ ಪರಿಹಾರವನ್ನು ದಾನಿಗಳ ನೆರವಿನಿಂದ ನೀಡಿದೆ.
ಸಂಚಾಲಕರಾಗಿ ಗಣೇಶ್ ಪ್ರಸಾದ್ ನಾಯಕ್ ಅದೇ ರೀತಿ ಸಂಯೋಜಕರಾಗಿ ರಾಘವೇಂದ್ರ ಪ್ರಭು, ಕವಾ೯ಲು ಕಾಯ೯ ನಿವ೯ಹಿಸುತ್ತಿದ್ದಾರೆ.
ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಸಮ್ಮುಖದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳಿಂದ ಶ್ರೀ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಇವರಿಗೆ ಸನ್ಮಾನ

Posted On: 30-10-2020 08:16PM
ಬ್ಯಾಂಕ್ ಆಫ಼್ ಇಂಡಿಯಾದ ಅನ್ನ ಪೂರ್ಣೇಶ್ವರೀ ಕ್ಯಾಟರರ್ಸ್ ನ ಮಾಲಕರಾದ ಆನಂದ್ ಶೇಟ್ ಅವರ ಉಪಹಾರಗ್ರಹದಲ್ಲಿ ಇತ್ತೀಚೆಗೆ ದೇಶದಾದ್ಯಂತ ಕೊರೋನಾ ಮಹಾಮಾರಿ ವಕ್ಕರಿಸಿದ ಹಿನ್ನಲೆ ಲಾಕ್ ಡೌನ್ ಎಂಬ ಅಸ್ರ್ತದಿಂದ ಜನರು ಕಂಗಾಲಾಗಿ ಹೊಟ್ಟೆಗೆ ಹಿಟ್ಟಿಲ್ಲದ ಪರಿಸ್ಥಿತಿಯ ಸಂದರ್ಭ ಮಾರ್ಚ್23ರಿಂದ ಲಾಕ್ ಡೌನ್ ಮುಗಿಯುವವರೆಗೂ ಫ಼ೋರ್ಟ್ ನ ಬ್ಯಾಂಕ್ ಆಫ಼್ ಇಂಡಿಯಾದ ಎಲ್ಲಾ ಸಿಬ್ಬಂಧಿಗಳಿಗೂ ಒಳ್ಳೆಯ ರೀತಿಯ ಊಟ ಉಪಚಾರ ನೀಡಿ ಸಹಕರಿಸಿದ ಶ್ರೀ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಇವರನ್ನು ಬ್ಯಾಂಕ್ ಮ್ಯಾನೇಜರ್ ಜಾನ್ಸಲ್ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಹಾಗೂ ದಿಲ್ಲಿಯಿಂದ ಆಗಮಿಸಿದ ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಇವರ ಉಪಸ್ಥಿತಿಯಲ್ಲಿ ಪ್ರೀತಿಪೂರ್ವಕವಾಗಿ ಸನ್ಮಾನಿಸಿದರು. ಹಲವಾರು ವರ್ಷಗಳಿಂದ ಬ್ಯಾಂಕ್ ಆಫ಼್ ಇಂಡಿಯಾದ ಕ್ಯಾಂಟೀನ್ ಉದ್ಯಮವನ್ನು ನಡೆಸುತ್ತಾ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ,ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ಇನ್ನಂಜೆ ಶ್ರೀ ಚಂದ್ರಹಾಸ್ ಗುರುಸ್ವಾಮಿಯವರು ಹಲವಾರು ಶಿಷ್ಯವೃಂದವನ್ನೂ ಹೊಂದಿದ್ದಾರೆ.ಲಾಕ್ ಡೌನ್ ಸಮಯದಲ್ಲಿ ತನ್ನ ಉದ್ಯಮವಾದ ಬ್ಯಾಂಕ್ ಆಫ಼್ ಇಂಡಿಯಾ ಉಪಹಾರ ಗ್ರಹದಲ್ಲಿ ಸಿಲುಕಿರುವ ಬ್ಯಾಂಕ್ ಸಿಬ್ಬಂದಿಗಳಿಗೆ ಊಟೋಪಚಾರ ನೀಡುವುದರ ಮೂಲಕ ಇವರ ಈ ಸೇವೆಗೆ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಇವರನ್ನು ಸನ್ಮಾನಿಸಿದ್ದಾರೆ.ದಿಲ್ಲಿಯಿಂದ ಆಗಮಿಸಿದ ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಕೂಡ ಈ ಹೊತ್ತಿನಲ್ಲಿ ಉಪಸ್ಥಿತರಿದ್ದು ಇವರ ಈ ಕಾರ್ಯಕ್ಕೆ ಸನ್ಮಾನಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.