Updated News From Kaup
ಪೆರ್ಡೂರು ಟು ಗೋವಾ : ದಾರಿ ಮಧ್ಯೆ ಹಣ್ಣಿನ ಗಿಡಗಳ ನೆಟ್ಟು ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ ಮಾಡಿದ ಯುವಕರು
Posted On: 18 Apr 2021, 11:32 AM
ಕಾಪು : ಕಾಡಿನ ನಾಶ, ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಪರಿಸರ ಜಾಗೃತಿಗಾಗಿ ಫೆಡಲ್ ಫಾರ್ ಗ್ರೀನ್ ಎಂಬ ಘೋಷವಾಕ್ಯದೊಂದಿಗೆ ಪೆರ್ಡೂರಿಂದ ಗೋವಾದ ಪೊಂಡಕ್ಕೆ ಸುಮಾರು 320 ಕಿಲೋಮೀಟರ್ ಸೈಕಲ್ ಜಾಥಾದ ಮೂಲಕ ಕೃಷ್ಣಾನಂದ ನಾಯಕ್, ವಿಜ್ಞೇಶ್ ನಾಯಕ್, ವಿಜೇತ ನಾಯಕ್ ಆದಿತ್ಯವಾರದಿಂದ ಬುಧವಾರದವರೆಗೆ ಜಾಗೃತಿ ಮೂಡಿಸಿದರು. ದಾರಿ ಮಧ್ಯೆ ಸಿಗುವ ನರ್ಸರಿಯಲ್ಲಿ ಸುಮಾರು 15 ಬಗೆಯ ಹಣ್ಣುಗಳನ್ನು ನೀಡುವ ಗಿಡಗಳನ್ನು ಅಲ್ಲಲ್ಲಿ ನೆಡುವ ಮೂಲಕ ಸ್ಥಳೀಯರಿಗೂ ಇದರ ಬಗ್ಗೆ ತಿಳಿಸಿ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಯಿತು. ಕೃಷ್ಣಾನಂದ ನಾಯಕ್ ರೆಗಲಿಕ್ಸ್ ನಲ್ಲಿ ಡಿಸೈನರ್ ಆಗಿ, ವಿಜ್ಞೇಶ್ ನಾಯಕ್ ಕೊಕ್ ಇಂಡಸ್ಟ್ರಿಯಲ್ಲಿ ಅಕೌಂಟೆಂಟ್ ಆಗಿ, ವಿಜೇತ್ ನಾಯಕ್ ಉಡುಪಿ ಪ್ರವಾಸೋದ್ಯಮ ಇಲಾಖೆಯಲ್ಲಿ ಇಂಟನ್೯ಶಿಪ್ ಮಾಡುತ್ತಿದ್ದಾರೆ. ಇವರ ಪರಿಸರ ಜಾಗೃತಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಾದೇಶಿಕ ಭಾಷೆಗಳ ಬೆಳವಣಿಗೆಗೆ ಸಂಪೂರ್ಣ ಪ್ರೋತ್ಸಾಹ : ಜಿ. ಜಗದೀಶ್
Posted On: 18 Apr 2021, 11:07 AM
ಪ್ರಾದೇಶಿಕ ಭಾಷೆಗಳ ಬೆಳವಣಿಗೆಯು ಈ ಮಣ್ಣಿನ ಸಂಸ್ಕೃತಿ,ಆಚಾರ, ವಿಚಾರಗಳನ್ನು ಉಳಿಸಿ,ಬೆಳೆಸಲು ಪೂರಕವಾಗಬಲ್ಲದು. ಸಾವಿರಾರು ವರ್ಷಗಳ ಇತಿಹಾಸವಿರುವ,ಪಂಚದ್ರಾವಿಡಭಾಷೆಗಳಲ್ಲೇ ಅತ್ಯಂತ ಶ್ರೇಷ್ಠಭಾಷೆಯೆಂದು ಪರಿಗಣಿಸಲ್ಪಟ್ಟಿರುವ ತುಳು ಭಾಷೆಯ ಬೆಳವಣಿಗೆಗೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಆಕಾಶರಾಜ್ ಜೈನ್ ಇವರು ಜಿಲ್ಲಾಧಿಕಾರಿ ಜಿ ಜಗದೀಶ್ ರವರಿಗೆ ತುಳುಲಿಪಿ ಹೊಂದಿರುವ ನಾಮಫಲಕವನ್ನು ಕೊಟ್ಟು, ತುಳು ಭಾಷೆ ಮತ್ತು ತುಳು ಲಿಪಿಯ ಬಗ್ಗೆ ತಿಳುವಳಿಕೆ ಮೂಡಿಸಿದರು ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾದ ತಾರಾ ಉಮೇಶ್ ಆಚಾರ್ಯ ಇವರು ಉಡುಪಿ ಜಿಲ್ಲೆಯಲ್ಲಿ ಕನ್ನಡ ನಾಮಫಲಕದ ಜೊತೆಗೆ ತುಳುಲಿಪಿಯ ನಾಮಫಲಕ ಬಳಕೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿರುವುದರಿಂದ ತುಳುವರಿಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಬೇಕು ಮತ್ತು ಉಡುಪಿ ಜಿಲ್ಲೆಯಲ್ಲಿ ತುಳುಭಾಷೆಗೆ ಮಾನ್ಯತೆ ಕೊಡಬೇಕು ಎಂದು ಜೈ ತುಳುನಾಡ್(ರಿ) ಸಂಘಟನೆಯ ಪರವಾಗಿ ತುಳು ಲಿಪಿ ಶಿಕ್ಷಕಿಯಾದ ಅಕ್ಷತಾ ಕುಲಾಲ್ ಇವರು ಮನವಿ ಸಲ್ಲಿಸಿದರು ಮತ್ತು ಜೈ ತುಳುನಾಡ್(ರಿ) ಸಂಘಟನೆಯ ತುಳುಲಿಪಿ ಮೇಲ್ವಿಚಾರಕರಾದ ಶರತ್ ಕೊಡವೂರು ಇವರು ತುಳು ಲಿಪಿ ಕಲಿಕಾ ತರಬೇತಿಯ ಬಗ್ಗೆ ಮತ್ತು ಆನ್ಲೈನ್ ನಲ್ಲಿ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರದಿಂದ ಸುಮಾರು 8000ಕ್ಕೂ ಅಧಿಕ ತುಳುವರು ತುಳು ಲಿಪಿ ಕಲಿತಿರುವ ಬಗ್ಗೆ ಮಾಹಿತಿ ನೀಡಿದರು. ಹಳೆ ವಿದ್ಯಾರ್ಥಿ ಸಂಘ , ಕೊಡವೂರು ಅಧ್ಯಕ್ಷರಾದ ಸತೀಶ್ ಕೊಡವೂರು ಇವರು ತುಳು ಲಿಪಿ ಕಲಿತ ಕಾರ್ಯಗಾರದಲ್ಲಿ ತುಳುವರ ಉತ್ತಮ ಸ್ಪಂದನೆ ಇರುವುದಾಗಿ ತಿಳಿಸಿದರು. ತುಳುಕೂಟ ಉಡುಪಿ (ರಿ) ಇದರ ಕಾರ್ಯದರ್ಶಿ,ಶ್ರೀಯುತ ಗಂಗಾಧರ್ ಕಿದಿಯೂರು,ತುಳುಕೂಟ ಉಡುಪಿ ಯ ಸ್ಥಾಪಕ ಸದಸ್ಯರಾದ ಶ್ರೀಯುತ ಯು.ಜಿ. ದೇವಾಡಿಗ ಇವರು ತುಳುಕೂಟ ಉಡುಪಿ (ರಿ) ನ ಪರವಾಗಿ ಮನವಿಯನ್ನು ಸಲ್ಲಿಸಿದರು.ಮತ್ತು ಶ್ರೀಯುತ ಗಂಗಾಧರ ಕಿದಿಯೂರು ರವರು ತಾವು ಬರೆದು ತುಳುಲಿಪಿಯಲ್ಲೇ ಪ್ರಕಟಿಸಿದ "ಪಿಂಗಾರದ ಬಾಲೆ ಸಿರಿ" ಪುಸ್ತಕವನ್ನು ಜಿಲ್ಲಾಧಿಕಾರಿಗಳಿಗೆ ಗೌರವ ಪ್ರತಿಯಾಗಿ ನೀಡಿದರು. ಈ ಸಂದರ್ಭದಲ್ಲಿ ಜೈ ತುಳುನಾಡ್(ರಿ) ತುಳು ಲಿಪಿ ಶಿಕ್ಷಕರಾದ ಕಿನ್ನು ಭಂಡಾರಿ ಮತ್ತು ಸ್ವಾತಿ ಸುವರ್ಣ ಉಪಸ್ಥಿತರಿದ್ದರು.
ಕುಂಜ, ಕಲ್ಲುಗುಡ್ಡೆ : ಸಾರ್ವಜನಿಕ ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನದಲ್ಲಿ ಸಪ್ತಮ ವರ್ಷದ ಪ್ರತಿಷ್ಠಾ ವರ್ಧಂತಿ, ಭಜನಾ ಮಂಗಳೋತ್ಸವ
Posted On: 17 Apr 2021, 09:09 PM
ಕಾಪು : ಏಪ್ರಿಲ್ 18 ಆದಿತ್ಯವಾರದಂದು ಕಾಪು ಸಮೀಪದ ಕುಂಜ, ಕಲ್ಲುಗುಡ್ಡೆಯ ಬ್ರಹ್ಮಸ್ಥಾನದಲ್ಲಿ ಸಪ್ತಮ ವರ್ಷದ ಪ್ರತಿಷ್ಠ ವರ್ಧಂತಿ , ನಾಗಬ್ರಹ್ಮ ಹಾಗೂ ಸಪರಿವಾರ ಶಕ್ತಿಗಳಿಗೆ ತನುತಂಬಿಲಾದಿ ಸೇವೆಗಳು , ಭಜನಾ ಮಂಗಳೋತ್ಸವವು ನೆರವೇರಲಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ಜರುಗಲಿದೆ. ಈ ಎಲ್ಲಾ ದೇವತಾ ಕಾರ್ಯಗಳು ಸರಕಾರದ ಕೋವಿಡ್ ನಿಯಂತ್ರಣ ನಿಬಂಧನೆಗೊಳಪಟ್ಟು ಆಯೋಜಿಸಲಾಗಿದೆ. ಆದ್ದರಿಂದ ಭಕ್ತಾಧಿಗಳ ಸ್ವಯಂ ಸುರಕ್ಷತೆ ಹಾಗೂ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ನಾಗಬನದ ಮೇಲೆ ಅಶ್ವಥ ಮರ ಬಿದ್ದು ಅಪಾರ ಹಾನಿ
Posted On: 15 Apr 2021, 04:21 PM
ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲಿರುವ ನಾಗಬನವೊಂದರ ಮೇಲೆ ಬೃಹತ್ ಅಶ್ವಥ ಮರವೊಂದು ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ. ಪೊಲಿಪು ಕೇಸಪ್ಪು ಕುಟುಂಬಸ್ಥರ ನಾಗಬನದಲ್ಲಿದ್ದ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ನಾಗಬನ ಸಂಪೂರ್ಣ ಹಾನಿಗೊಳಗಾಗಿದ್ದು, ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ. ನಾಗ ದೇವರ ಕಟ್ಟೆ ಮತ್ತು ಕಲ್ಲುಗಳಿಗೂ ಹಾನಿಯುಂಟಾಗಿದೆ. ಮರ ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿಯಿಂಟಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಪೂರೈಕೆಯಲ್ಲೂ ವೃತ್ಯಯ ಉಂಟಾಗಿದೆ. ಮೆಸ್ಕಾಂ ಸಿಬಂದಿಗಳು ಬೆಳಗ್ಗಿನಿಂದಲೂ ಮರ ತೆರವುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದು, ಸ್ಥಳೀಯರೂ ಕೂಡಾ ಕೈ ಜೋಡಿಸಿದ್ದಾರೆ.
ಕುತ್ಯಾರು : ಎಸ್. ಟಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮ ರಾವ್ ಅಂಬೇಡ್ಕರ್ ಜಯಂತಿ ಆಚರಣೆ
Posted On: 14 Apr 2021, 10:32 PM
ಕಾಪು: ಕುತ್ಯಾರು ಗ್ರಾಮ ವ್ಯಾಪ್ತಿ ಯ ಎಸ್. ಟಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಭೀಮ ರಾವ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಉಡುಪಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರು ಲತಾ ಆಚಾರ್ಯ, ಉಪ ಅಧ್ಯಕ್ಷರು ರಾಜ ಶೆಟ್ಟಿ, ಪಂಚಾಯತ್ ಸದಸ್ಯರಾದ ಸಂಪತ್ ಪೂಜಾರಿ,ಅಗ್ನೇಸ್ ಮತಾಯಸ್, ಆರ್ ಎಸ್ ಎಸ್ ಪ್ರಮುಖ ಸತೀಶ್ ಕುತ್ಯಾರು,ವಾರ್ಡ್ ಕಾರ್ಯದರ್ಶಿ ರೂಪ ಆಚಾರ್ಯ ಕುತ್ಯಾರು, ಸ್ಥಾನಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ಕುತ್ಯಾರು ಉಪಸ್ಥಿತಿ ಇದ್ದರು. ನಂತರ ಕಾಲೋನಿ ಯ ಜನರೊಂದಿಗೆ ಲಘು ಉಪಹಾರ ಸೇವಿಸಲಾಯಿತು.
ಹೆಜಮಾಡಿ ಗ್ರಾಮಪಂಚಾಯತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
Posted On: 14 Apr 2021, 08:58 PM
ಕಾಪು : ನಾವೆಲ್ಲ ಇಂದು ರಾಜಕೀಯದ ಜ್ಞಾನವನ್ನು ಪಡೆಯಲು, ನಮ್ಮ ಹಕ್ಕು ಗಳ ಬಗ್ಗೆ ಕೂಲಂಕುಷವಾಗಿ ತಿಳಿಯಲು ಸಂವಿಧಾನ ಅತಿ ಮುಖ್ಯವಾಗಿದೆ .ಇದರ ನಿರ್ಮಾತೃ ಅಂಬೇಡ್ಕರ್. ಹೆಜ್ಜೆ ಹೆಜ್ಜೆಗೂ ಸವಾಲು, ಅವಮಾನಗಳನ್ನು ಮೆಟ್ಟಿನಿಂತ ಮಹಾನೀಯ. ಸಂವಿಧಾನವನ್ನು ತಿಳಿಯುವ ಮೊದಲು ಅಂಬೇಡ್ಕರರ ಜೀವನ ಚರಿತ್ರೆಯನ್ನು ತಿಳಿಯಬೇಕಾಗಿದೆ. ಆಗ ಮಾತ್ರ ಸಂವಿಧಾನದ ಮೂಲ ಆಶಯವನ್ನು ತಿಳಿಯಬಹುದು ಎಂದು ಮಂಗಳೂರಿನ ಬೆಸೆಂಟ್ ಎಂಬಿಎ ಕಾಲೇಜಿನ ಪ್ರಾಧ್ಯಾಪಕ ಸುರೇಶ್ ಹೆಜಮಾಡಿ ತಿಳಿಸಿದರು. ಹೆಜಮಾಡಿ ಗ್ರಾಮಪಂಚಾಯತ್ ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪೌರ ಕಾರ್ಮಿಕರಾದ ರವಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ ವಹಿಸಿದ್ದರು. ಈ ಸಂದರ್ಭ ಹೆಜಮಾಡಿ ಪಂಚಾಯತ್ನ ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಪಂಚಾಯತ್ ನ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಕ್ಸ್ ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿದ ಮಹೇಶ್ ಮರ್ಣೆ
Posted On: 13 Apr 2021, 06:40 AM
2015ರಲ್ಲಿ 3500 ಐಸ್ ಕ್ರೀಮ್ ಕಡ್ಡಿ ಮತ್ತು 750 ಬೆಂಕಿಕಡ್ಡಿ ಯಿಂದ ರಚಿಸಿದ ಗಣಪತಿಯ ಕಲಾಕೃತಿ ಯ ಮೂಲಕ 'ಇಂಡಿಯಾ ಬುಕ್ ಆಫ್ ರೆಕಾರ್ಡ್ 'ಗೆ ಸೇರ್ಪಡೆ ಯಾಗಿ ಸುದ್ದಿಯಾಗಿದ್ದ ಉಡುಪಿ ಯ ಮರ್ಣೆ ಗ್ರಾಮದ ಯುವ ಕಲಾವಿದ ಮಹೇಶ್ ಮರ್ಣೆಯವರು ಇದೀಗ ದೇವಾಲಯಗಳ ಮುಂದೆ ಪೂಜನೀಯವಾಗಿ ಗುರುತಿಸಲ್ಪಡುವ ಅಶ್ವಥ ಎಲೆಯಲ್ಲಿ ಅತ್ಯಂತ ಸೂಕ್ಷ್ಮ ವಾಗಿ ಬ್ಲೇಡ್ ಸಹಾಯದಿಂದ ಕ್ರಿಕೆಟ್ ನ ದಂತಕತೆ ಕತೆ ಎಂದೇ ಖ್ಯಾತಿ ಪಡೆದ ಸಚಿನ್ ತೆಂಡುಲ್ಕರ್ ರವರ ಭಾವ ಚಿತ್ರವನ್ನು ಕೇವಲ 7ನಿಮಿಷದಲ್ಲಿ ರಚಿಸಿ ಉತ್ತರ ಪ್ರದೇಶದ ಬರೇಲಿಯ ಲಾಟಾ ಪ್ರತಿಷ್ಠಾನಕ್ಕೆ ಈ ತಿಂಗಳ 24 ರಂದು ವೀಡಿಯೋ ಚಿತ್ರೀಕರಿಸಿ ಪಟ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ಪ್ರಭು ,ವಕೀಲರು ಗಳಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ,ಅರೂರು ಸುಕೇಶ್ ಶೆಟ್ಟಿ ಇವರ ಸಾಕ್ಷಿಗಳೊಂದಿಗೆ ಕಳುಹಿಸಿದ್ದರು .ಅದನ್ನು ವೀಕ್ಷಿಸಿ ಸೂಕ್ಷ್ಮ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಕ್ಸ್ ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಗೆ ಮಹೇಶ್ ರವರ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.
ಕಟಪಾಡಿ : ನಾಪತ್ತೆಯಾದ ಯುವಕನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
Posted On: 12 Apr 2021, 07:47 PM
ಕಾಪು : ಕಟಪಾಡಿ ಸರ್ವಿಸ್ ರಸ್ತೆಯ ನಾಗಬನದ ಹತ್ತಿರ ಮರಕ್ಕೆ ಬೆಲ್ಟಿನಿಂದ ನೇಣು ಹಾಕಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ. ಮೃತ ದೇಹವು ಕೊಳೆತ ಸ್ಥಿತಿಯಲ್ಲಿದ್ದು ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕಾಪು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಟಪಾಡಿ : ನಾಪತ್ತೆಯಾದ ಯುವಕನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
Posted On: 12 Apr 2021, 07:44 PM
ಕಾಪು : ಕಟಪಾಡಿ ಸರ್ವಿಸ್ ರಸ್ತೆಯ ನಾಗಬನದ ಹತ್ತಿರ ಮರಕ್ಕೆ ಬೆಲ್ಟಿನಿಂದ ನೇಣು ಹಾಕಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ. ಮೃತ ದೇಹವು ಕೊಳೆತ ಸ್ಥಿತಿಯಲ್ಲಿದ್ದು ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕಾಪು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯನ್ನು ಸಂದೀಪ್ ದೇವಾಡಿಗ ಕಟಪಾಡಿ ಮಟ್ಟು ನಿವಾಸಿ ಎಂದು ತಿಳಿದು ಬಂದಿದ್ದು, ಈ ಯುವಕನ ಬಗ್ಗೆ ಏಪ್ರಿಲ್ 7ರಂದು ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿರುತ್ತದೆ. ಘಟನೆಯ ಬಗ್ಗೆ ಮುಂದಿನ ತನಿಖೆಯಿಂದ ನಿಖರ ಮಾಹಿತಿ ತಿಳಿದು ಬರಬೇಕಾಗಿದೆ. ಘಟನಾ ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಪು ಎಸ್ಐ ರಾಘವೇಂದ್ರ, ಆಸ್ಟಿನ್ ಹಾಗೂ ಆಪತ್ಬಾಂಧವ ಸೂರಿ ಶೆಟ್ಟಿ ಕಾಪು ಅವರು ಮೃತದೇಹವನ್ನು ಇಳಿಸಲು ಸಹಕರಿಸಿದರು.
ಉಡುಪಿ ಜಿಲ್ಲೆಯನ್ನು ಕುರುಡು ಮುಕ್ತ ಜಿಲ್ಲೆಯನ್ನಾಗಿಸಲು ಪ್ರಯತ್ನ : ಡಾ. ಕೃಷ್ಣಪ್ರಸಾದ್
Posted On: 12 Apr 2021, 11:55 AM
ಉಡುಪಿ : ಉಚಿತ ನೇತ್ರ ತಷಾಸಣಾ ಶಿಬಿರಗಳ ಮೂಲಕ ಉಡುಪಿ ಜೆಲ್ಲೆಯನ್ನು ಕುರುಡುಮುಕ್ತ ಜೆಲ್ಲೆಯನ್ನಾಗಿಸಲು ಪ್ರಯತ್ನಿಸುತ್ತಿರುವುದಾಗಿ ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ನಾಡೋಜ ಗೌರವ ಪಡೆದ ಡಾ ಕೃಷ್ಣ ಪ್ರಸಾದ್ ತಿಳಿಸಿದರು. ಅವರು ಬಂಟಕಲ್ಲು ಜಿಝೊ ಎಜುಕೇಶನ್ ಸಭಾಂಗಣದಲ್ಲಿ ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಲಯನ್ಸ್ ಕ್ಲಬ್ ಬಂಟಕಲ್ಲು - ಬಿ.ಸಿ ರೋಡು, ರಾಜಾಪುರ ಸಾರಸ್ವತ ಯುವ ವೃಂದ ಬಂಟಕಲ್ಲು , ಶ್ರೀ ಗುರುರಾಘವೇಂದ್ರ ಸಮಾಜಸೇವಾ ಮಂಡಳಿ (ರಿ.) ಹೇರೂರು, ಕಥೋಲಿಕ್ ಸ್ತ್ರೀ ಸಂಘಟನೆ ಪಾಂಬೂರು ಘಟಕ, ಉಡುಪಿ ಜಿಲ್ಲಾ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಬಂಟಕಲ್ಲು ಘಟಕ, ಸ್ವಾಸ್ಥ್ಯ ಆಯೋಗ ಪಾಂಬೂರು ಚರ್ಚ್ ಇವರ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ತಪಾಸಣೆ ಶಿಬಿರ, ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರದ ಆಯುಷ್ಮಾನ್ ಯೋಜನೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿ, ಎಲ್ಲರೂ ಕರೋನಾ ಲಸಿಕೆಯನ್ನು ಪಡೆಯುವಂತೆ ತಿಳಿಸಿದರು. ಅಭಿನಂದನೆ : ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ ಪಡೆದ ಡಾ. ಕೃಷ್ಣಪ್ರಸಾದ್ ರವರನ್ನು ನಾಗರಿಕ ಸಮಿತಿ ಪರವಾಗಿ ಕೆ.ಆರ್ ಪಾಟ್ಕರ್ ರವರು ಶಾಲು ಹೊದಿಸಿ ಅಭಿನಂದಿಸಿದರು. ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ , ಶಿರ್ವ ಗ್ರಾ.ಪಂ ಸದಸ್ಯ ಕೆ. ಆರ್. ಪಾಟ್ಕರ್ ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲ. ವಿಜಯ್ ಧೀರಾಜ್, ರಾಜಾಪುರ ಸಾರಸ್ವತ ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಹೇರೂರು ಶ್ರೀ ಗುರುರಾಘವೇಂದ್ರ ಸಮಾಜಸೇವಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ದೇವಾಡಿಗ, ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಕ್ಯಾಬ್ ಎಸೋಷಿಯೇಶನ್ ಬಂಟಕಲ್ಲು ಘಟಕದ ಅಧ್ಯಕ್ಷ ಉಮೇಶ್ ರಾವ್, ಪಾಂಬೂರ್ ಕಥೋಲಿಕ್ ಸ್ತ್ರಿ ಸಂಘಟನೆ ಅಧ್ಯಕ್ಷೆ ಶ್ರೀಮತಿ ಜೂಲಿಯೆಟ್ ರೀಟಾ ಮೋನಿಸ್, ಪಾಂಬೂರ್ ಸ್ವಾಸ್ಥ್ಯ ಆಯೋಗದ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಸಲ್ಡಾನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಗರಿಕ ಸಮಿತಿ ಕೋಶಾಧಿಕಾರಿ ಜಗದೀಶ ಆಚಾರ್ಯ, ಗ್ರಾ ಪಂ ಸದಸ್ಯೆ ವೈಲೆಟ್ ಕಸ್ತಲಿನೊ, ಯುವ ವೃಂದದ ಕಾರ್ಯದರ್ಶಿ ಆಶಿಷ್ ಪಾಟ್ಕರ್, ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಪ್ರಭು, ಪ್ರಸಾದ್ ನೇತ್ರಾಲಯದ ಪಿ.ಆರ್ ಓ ಶ್ರೀ ಹರ್ಷ, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂಧಿ ವರ್ಗ, ಉಪಸ್ಥಿತರಿದ್ದರು. ಸುಮಾರು 125 ನಾಗರಿಕರು ಶಿಬಿರದ ಪ್ರಯೋಜನ ಪಡೆದರು. ರೋಹಿಣಿ ನಾಯಕ್ ಪ್ರಾರ್ಥಿಸಿ, ನಾಗರಿಕ ಸೇವಾ ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ವಿರೇಂದ್ರ ಪಾಟ್ಕರ್ ಧನ್ಯವಾದವಿತ್ತರು.
