Updated News From Kaup
92 ಹೇರೂರು : ಉಚಿತ ಚೆಂಡೆ ತರಬೇತಿ ತರಗತಿ ಶುಭಾರಂಭ
Posted On: 28 Feb 2021, 07:44 PM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 92ನೇ ಹೇರೂರು ಒಕ್ಕೂಟ ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ಹೇರೂರು, ಶ್ರೀ ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ ಹೇರೂರು, ದೇವಾಡಿಗರ ಸಂಘ ಹೇರೂರು ಬಂಟಕಲ್ಲು ಇವರ ಆಶ್ರಯದಲ್ಲಿ ಉಚಿತ ಚೆಂಡೆ ತರಬೇತಿ ತರಗತಿ ಇಂದು ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಶ್ರೀ ಪುಂಡಲೀಕ ಮರಾಠ ನಿವೃತ್ತ ಶಿಕ್ಷಕರು ಹಾಗೂ ಹಿರಿಯ ಪತ್ರಕರ್ತರು ಬಂಟಕಲ್ಲು ಉದ್ಘಾಟಿಸಿ ಶುಭಹಾರೈಸಿದರು. ಹೇರೂರು ಗ್ರಾಮದ ಸುಮಾರು 60 ಜನ ಮಕ್ಕಳು ಮಹಿಳೆಯರು ಪುರುಷರು ಚೆಂಡೆ ತರಬೇತಿ ತರಗತಿಯಲ್ಲಿ ತರಗತಿಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರ್ವ ವಲಯ ಮೇಲ್ವಿಚಾರಕರಾದ ಶ್ರೀಮತಿ ಪಲ್ಲವಿ ಶೆಟ್ಟಿ, ಚಂಡೆ ಹಾಗೂ ಭಜನಾ ತರಬೇತುದಾರರಾದ ರಾಘವೇಂದ್ರ ಭಟ್ ಮುಲ್ಕಾಡಿ ಪಂಜಿಮಾರು, ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ ಅಧ್ಯಕ್ಷರಾದ ಶ್ರೀ ಸುಜಿತ್ ಕುಮಾರ್, ದೇವಾಡಿಗರ ಸಂಘ 92 ಹೇರೂರು ಬಂಟಕಲ್ಲು ಅಧ್ಯಕ್ಷರಾದ ಶ್ರೀ ಜಯ ಸೇರಿಗಾರ್, ಶ್ರೀ ಗುರುರಾಘವೇಂದ್ರ ಮಹಿಳಾ ಭಜನಾ ಮಂಡಳಿ ಹೇರೂರು ಅಧ್ಯಕ್ಷರಾದ ಶ್ರೀಮತಿ ವಸಂತಿ ಆಚಾರ್ಯ ಶುಭಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 92 ಹೇರೂರು ಒಕ್ಕೂಟದ ಅಧ್ಯಕ್ಷರಾದ ಶ್ರೀ ದಿನೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದಿನೇಶ್ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಪ್ರೀತಿ ಆಚಾರ್ಯರವರು ಪ್ರಾರ್ಥಿಸಿ, ಶ್ರೀಮತಿ ಸುಕನ್ಯಾ ಜೋಗಿಯವರು ಕಾರ್ಯಕ್ರಮ ನಿರೂಪಿಸಿ, ಉದಯ ದೇವಾಡಿಗ ವಂದಿಸಿದರು.
ಮಾನವೀಯ ನ್ಯಾಯಕ್ಕಾಗಿ ಪ್ರತಿಭಟನೆ : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ
Posted On: 28 Feb 2021, 05:56 PM
ಉಡುಪಿ : ಸಾಮಾಜಿಕ ಹೋರಾಟವನ್ನು ಮಾಡುತ್ತಾ ಪತ್ನಿ, ಮೂವರು ಚಿಕ್ಕ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಶಂಕರ ಶಾಂತಿಗೆ ಮಾರಣಾಂತಿಕ ಹಲ್ಲೆಯಾಗಿದ್ದು ಈ ಕುರಿತು ಪೋಲಿಸ್ ಠಾಣೆಗೆ ಹಾಗೂ ವರಿಷ್ಠಾಧಿಕಾರಿಗೆ ದೂರು ದಾಖಲಿಸಿದ್ದರೂ ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಆದುದರಿಂದ ಸಮಾನ ಮನಸ್ಕ ಬಿಲ್ಲವರನ್ನು ಕೂಡಿಕೊಂಡು ಮಾನವೀಯ ನೆಲೆಯಲ್ಲಿ ಶಂಕರ ಶಾಂತಿಗೆ ನ್ಯಾಯವನ್ನು ಆಗ್ರಹಿಸಿ ಮಾಚ್೯ 1, ಸಂಜೆ 3 ಗಂಟೆಗೆ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಬನ್ನಂಜೆ ಬಿಲ್ಲವ ಸಂಘದ ವಠಾರದಿಂದ ಎಸ್ಪಿ ಕಚೇರಿಯತ್ತ ತೆರಳಿದ್ದೇವೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು ಜೇಸಿಐನ ವತಿಯಿಂದ ಮೆಸ್ಕಾಂನ ಹಿರಿಯ ಲೈನ್ ಮ್ಯಾನ್ ಸತೀಶ್ ರವರಿಗೆ ಸಮ್ಮಾನ
Posted On: 27 Feb 2021, 06:01 PM
ಕಾಪು : ಜೇಸಿಐ ಭಾರತದ ನಿರ್ದೇಶನದಂತೆ ಸೆಲ್ಯೂಟ್ ದಿ ಸೈಲಂಟ್ ವರ್ಕರ್ ಕಾರ್ಯಕ್ರಮದಡಿ ಕಾಪು ಜೇಸಿಐನ ವತಿಯಿಂದ ಮೆಸ್ಕಾಂನ ಹಿರಿಯ ಲೈನ್ ಮ್ಯಾನ್ ಸತೀಶ್ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಮೆಸ್ಕಾಂನ ಸಹಾಯಕ ಕಾರ್ಯ ನಿವಾರ್ಹಕ ಇಂಜಿನಿಯರ್ ಹರೀಶ್ ಕುಮಾರ್, ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮದ ರಾಷ್ಟ್ರೀಯ ಸಂಯೋಜಕಿ ಸೌಮ್ಯ ರಾಕೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಪು ಜೇಸಿಐ ಅಧ್ಯಕ್ಷೆ ಅರುಣಾ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐನ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ನಿಕಟಪೂರ್ವ ಅಧ್ಯಕ್ಷ ವಿನೋದ್ ಕಾಂಚನ್, ಕಾರ್ಯದರ್ಶಿ ಶ್ರುತಿ ಶೆಟ್ಟಿ, ಜೇಸಿರೆಟ್ ಅಧ್ಯಕ್ಷೆ ಗಾಯತ್ರಿ ಆಚಾರ್ಯ, ಪದಾಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಸಿಬಂದಿಗಳು ಉಪಸ್ಥಿತರಿದ್ದರು.
ಕಾಪು ಲೈಟ್ ಹೌಸ್ ಗೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಭೇಟಿ
Posted On: 27 Feb 2021, 05:54 PM
ಬ್ರಿಟಿಷ್ ಕಾಲದಲ್ಲಿ ಸ್ಥಾಪನೆಯಾದ ಕಾಪು ಲೈಟ್ ಹೌಸ್ ಗೆ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಭೇಟಿ ನೀಡಿ ಬೀಚ್ನ ಮುಂದಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಪ್ರವಾಸೋದ್ಯಮ ಇಲಾಖೆಯ ಉಪ ಕಾರ್ಯದರ್ಶಿ ಸೋಮಶೇಖರ್ ಬಿ.ಕೆ, ಕೃಷಿ ಇಲಾಖೆಯ ಚಂದ್ರಶೇಖರ್, ಅಧಿಕಾರಿವರ್ಗ ಮತ್ತಿತರರು ಉಪಸ್ಥಿತರಿದ್ದರು.
ಜೈನ ಸಮುದಾಯದಿಂದ ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿ ಹಲ್ಲೆಯ ಖಂಡನೆ
Posted On: 27 Feb 2021, 04:53 PM
ಸರಳ ವ್ಯಕ್ತಿತ್ವದ ಆರ್ ಟಿ ಐ ಕಾರ್ಯಕರ್ತ ಶಂಕರ್ ಶಾಂತಿಯವರು ಭೃಷ್ಟಾಚಾರವನ್ನು ವಿರೋಧಿಸಿದವರು ಅವರ ಮೇಲೆ ಸುಳ್ಳು ಆರೋಪ ಹೊರಿಸಿರುವುದು ಅಕ್ಷಮ್ಯ. ಶಂಕರ್ ರವರ ಸಾಮಾಜಿಕ ಕಳಕಳಿಗೆ ಜೈನ ಬಸದಿಯ ಹೋರಾಟವು ಸಾಕ್ಷಿಯಾಗಿದೆ. ಅವರ ಮೇಲೆ ಹಲ್ಲೆಗೈದವರನ್ನು ಇಷ್ಟರವರೆಗೆ ಬಂಧಿಸದಿರುವುದು ದುರಂತ. ಈ ನಿಟ್ಟಿನಲ್ಲಿ ಜೈನ ಸಮುದಾಯದ ಒಂದಷ್ಟು ಜನ ಒಟ್ಟಾಗಿ ಸದ್ಯದಲ್ಲಿಯೇ ಜಿಲ್ಲಾಧಿಕಾರಿ, ತಹಶೀಲ್ದಾರರಿಗೆ ಮನವಿ ನೀಡಲಿದ್ದೇವೆ ಎಂದು ಜೈನ ಸಮುದಾಯದ ಮುಖಂಡರಾದ ಡಾ. ಆಕಾಶ್ ಜೈನ್ ತಿಳಿಸಿದ್ದಾರೆ.
ಇನ್ನಂಜೆ : ಮಾಚ್೯ 20, 21 ಇನ್ನಂಜೆ ಪ್ರೀಮಿಯರ್ ಲೀಗ್, ಮಾಚ್೯ 27 ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ
Posted On: 27 Feb 2021, 02:52 PM
ಕಾಪು : ಇನ್ನಂಜೆ ಯುವಕ ಮಂಡಲ ಇನ್ನಂಜೆ ಇವರ ಆಶ್ರಯದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟವರಿಗೆ ಮಾರ್ಚ್ 20, 21 ರಂದು ಇನ್ನಂಜೆ ಶಾಲಾ ಮೈದಾನದಲ್ಲಿ ಇನ್ನಂಜೆ ಪ್ರೀಮಿಯರ್ ಲೀಗ್ ಸೀಮಿತ ಓವರ್ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಇನ್ನಂಜೆ ಯುವಕ ಮಂಡಲ ಟ್ರೋಫಿ - 2021ರೊಂದಿಗೆ ಪ್ರಥಮ ಬಹುಮಾನವಾಗಿ ₹ ಇಪ್ಪತ್ತು ಸಾವಿರ ಮತ್ತು ದ್ವಿತೀಯ ₹ ಹತ್ತು ಸಾವಿರ ಇರಲಿದೆ. ಮಾರ್ಚ್ 27ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು ಪ್ರಥಮ ಬಹುಮಾನ ₹ ಹದಿನೈದು ಸಾವಿರ, ದ್ವಿತೀಯ ₹ ಹತ್ತು ಸಾವಿರ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8884565769
ಹಗ್ಗ ಜಗ್ಗಾಟ : ಬೆಳ್ಳೆಯ ಯುವಸ್ಫೂರ್ತಿ ಕಲಾ ಮತ್ತು ಕ್ರೀಡಾ ಸಂಘಕ್ಕೆ ಬಹುಮಾನ.
Posted On: 27 Feb 2021, 02:15 PM
ಕಾಪು : ಬೆಳ್ತಂಗಡಿ ವಿಧಾನ ಸಭಾ ವ್ಯಾಪ್ತಿಯ ಪಾಲಡ್ಕದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರೀಡಾ ಕೂಟದಲ್ಲಿ ಸಾಮಾಜಿಕವಾಗಿ ಕಾಪು ತಾಲೂಕು ಬೆಳ್ಳೆ ಪರಿಸರದಲ್ಲಿ ಜನಾನುರಾಗಿರುವ ಯುವ ಸ್ಫೂರ್ತಿ ಕಲಾ ಹಾಗೂ ಕ್ರೀಡಾ ಸಂಘವು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಚತುರ್ಥ ಸ್ಥಾನ ಪಡೆದುಕೊಂಡಿದೆ. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಭೂತಪೂರ್ವ ಸಾಧನೆಗೈದಿರುವ ಬೆಳ್ಳೆಯ ಈ ತಂಡಕ್ಕೆ ನಮ್ಮ ಕಾಪು ನ್ಯೂಸ್ ತಂಡದ ವತಿಯಿಂದ ಅಭಿನಂದನೆಗಳು.
ಕುಂಜೂರು : ಶ್ರೀದುರ್ಗಾಮಾತೆಯ ಸನ್ನಿಧಿಯಲ್ಲಿ ತ್ರಿಕಾಲ ಪೂಜೆ, ಅನ್ನಸಂತರ್ಪಣೆ
Posted On: 27 Feb 2021, 02:05 PM
ಕಾಪು ತಾಲೂಕಿನ ಶ್ರೀ ದುರ್ಗಾ ಸೇವಾ ಸಮಿತಿ ಕುಂಜೂರು ಇವರ ಮುಂದಾಳತ್ವದಲ್ಲಿ ಮಾರ್ಚ್ 1, ಸೋಮವಾರದಂದು ಶ್ರೀದುರ್ಗಾಮಾತೆಯ ಸನ್ನಿಧಿಯಲ್ಲಿ ದಿನದ ತ್ರಿಸಂಧ್ಯಾ ಕಾಲಗಳಲ್ಲಿ ಶ್ರೀ ದುರ್ಗಾಮಾತೆಗೆ ವಿಸ್ತೃತ ವಿಧಿ-ವಿಧಾನ, ಅರ್ಚನೆ-ಪಾರಾಯಣ, ವಿಶೇಷ ಸಮರ್ಪಣೆ, ಬಾಗಿನದಾನ-ಕನ್ನಿಕಾ ಪೂಜೆ, ಅನ್ನಸಂತರ್ಪಣೆ ಮುಂತಾದ ವಿವಿಧ ಉಪಾಸನಾ ಅನುಷ್ಠಾನಗಳೊಂದಿಗೆ ನೆರವೇರುವ ಆರಾಧನೆಯಾದ ತ್ರಿಕಾಲ ಪೂಜೆ ನಡೆಯಲಿದೆ. ಅದೇ ರೀತಿ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
