Updated News From Kaup
ಅಂದು ಕೊರೊನ ಲಾಕ್ಡೌನ್ ಸಮಯ ಇಂದು ತಾರಸಿ ತುಂಬಾ ತರಕಾರಿಮಯ...
Posted On: 12 Apr 2021, 10:58 AM
ಕಾಪು : ಕೊರೊನ ಸಮಯ ಕಷ್ಟಮಯವಾಗಿದ್ದಂತು ನಿಜ. ಆದರೆ ಆ ಸಮಯವನ್ನು ಒಂದಷ್ಟು ಉಪಯುಕ್ತವಾಗಿಸಿಕೊಂಡು ಇಷ್ಟಮಯವಾಗಿಸಿ ತರಕಾರಿಗಳನ್ನು ಬೆಳೆಸಿದ ಕಟಪಾಡಿಯ ನಾಟಕ ಕಲಾವಿದ ನಾಗೇಶ್ ಕಾಮತ್ ಮತ್ತು ಅವರ ಮಗ ಬಾಲ ಜಾದುಗಾರ ಪ್ರಥಮ್ ಕಾಮತ್. ಬಹಳಷ್ಟು ಮಂದಿಗೆ ತರಕಾರಿ ಬೆಳೆಯಲು ಜಾಗದ ಸಮಸ್ಯೆ ಎದುರಾಗಬಹುದು ಆದರೆ ಇವರು ಆಯ್ದುಕೊಂಡದ್ದು ಮನೆಯ ತಾರಸಿ ಹಾಗೂ ಅಂಗಳ. ಕೊರೋನ ಸಮಯದಲ್ಲಿ ಮೊದಲು ಬೇಸತ್ತು ಏನಾದರೂ ಸಾಧನೆ ಮಾಡಬೇಕೆಂದು ತಮ್ಮಲ್ಲಿರುವ ತೋಟದಲ್ಲಿ ಗಿಡಗಳನ್ನು ನೆಟ್ಟರು ಆದರೆ ನೆರಳು ಜಾಸ್ತಿ ಇದ್ದ ಕಾರಣ ಯಾವುದೇ ಫಲ ಕೊಡಲಿಲ್ಲ ಆನಂತರ ಛಲಬಿಡದೆ ತಮ್ಮ ಮನೆಯ ತಾರಸಿಯಲ್ಲಿ ಹಳೆ ಪ್ಲಾಸ್ಟಿಕ್ ಚೀಲ ಸಿಮೆಂಟ್ ಚೀಲಗಳಲ್ಲಿ ಕೆಂಪು ಮಣ್ಣು ತುಂಬಿ ಸಾವಯವ ಗೊಬ್ಬರ ತಯಾರಿಸಿ ಬೆಂಡೆ, ಮಟ್ಟುಗುಳ್ಳ, ಕುಂಬಳಕಾಯಿ, ಹರಿವೆ ಸೊಪ್ಪು, ಬಸಳೆ ಸೊಪ್ಪು, ಟೊಮೆಟೊ, ಮೆಣಸಿನಕಾಯಿ, ಕಲ್ಲಂಗಡಿ ಇನ್ನಿತರ ಮನೆಗೆ ಬೇಕಾಗುವ ತರಕಾರಿಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಒಂದು ಅರ್ಧ ಗಂಟೆ ಗಿಡದ ನಿರ್ವಹಣೆಯ ಕೆಲಸ ಹಾಗೆಯೇ ಸಂಜೆ ಗಿಡಕ್ಕೆ ಒಂದು ಗಂಟೆ ನೀರು ಉಣಿಸುವ ಕಾರ್ಯವನ್ನು ತಂದೆ ಮತ್ತು ಮಗ ನಿರ್ವಹಿಸುತ್ತಿದ್ದಾರೆ. ಇದೀಗ ಡಿಸೆಂಬರ್ ಜನವರಿಯಲ್ಲಿ ನೆಟ್ಟ ಗಿಡಗಳು ಒಳ್ಳೆಯ ಕಾಯಿಗಳನ್ನು ಕೊಟ್ಟು ಮನೆಗೆ ಬೇಕಾದಷ್ಟು ತರಕಾರಿ ಗಳನ್ನೂ ಬೆಳೆಸಿ ಇತರರಿಗೂ ಕೊಡುವಷ್ಟು ತರಕಾರಿ ಬೆಳೆಯುತ್ತಿದ್ದಾರೆ. ತಾರಸಿ ಕೃಷಿ ಮಾಡುವುದರಿಂದ ದೇಹಕ್ಕೆ ವ್ಯಾಯಾಮ ಅಲ್ಲದೆ ಮನಸಿಗೆ ಖುಷಿಯಾಗುತ್ತೆ ಅಲ್ಲದೆ ಮನೆಯಲ್ಲೇ ಬೆಳೆದ ತಾಜಾ ಸಾವಯವ ತರಕಾರಿ ತಿನ್ನುವುದರಿಂದ ಆರೋಗ್ಯದ ವಿಚಾರದಲ್ಲೂ ಬಹಳ ಉತ್ತಮ ಎಂದು ಹೇಳುತ್ತಾರೆ ನಾಗೇಶ್ ಕಾಮತ್. ಇವರ ಈ ವ್ಯವಸ್ಥೆ ಇತರರಿಗೂ ಮಾದರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ನಾಗೇಶ್ ಕಾಮತ್ : 9886432197
ಶಿರ್ವ : ಉಚಿತ ಕೊರೊನಾ ಲಸಿಕಾ ಕಾರ್ಯಕ್ರಮ
Posted On: 12 Apr 2021, 09:47 AM
ಕಾಪು : ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇವರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ಮಟ್ಟಾರು ಸಹಯೋಗದಲ್ಲಿ ಉಚಿತ ಕೊರೊನಾ ಲಸಿಕಾ ಕಾರ್ಯಕ್ರಮವು ಮಟ್ಟಾರು ಉಪ ಆರೋಗ್ಯ ಕೇಂದ್ರದಲ್ಲಿ ಜರಗಿತು. ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇದರ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ರಾವ್,ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಧರ್ಮಾಚಾರ್ಯ ಪ್ರಮುಖರಾದ ವೇದಮೂರ್ತಿ ಪ್ರಸನ್ನ ಭಟ್,ಕಾರ್ಯದರ್ಶಿ ಜಯಪ್ರಕಾಶ್ ಪ್ರಭು,ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾ ಆಚಾರ್ಯ,ಕಿರಿಯ ಆರೋಗ್ಯ ಸಹಾಯಕಿಯರಾದ ಶ್ರೀಮತಿ ಕಲ್ಪನಾ ನಾಯಕ್,ಶ್ರೀಮತಿ ಗೀತಾ,ಆಶಾ ಕಾರ್ಯಕರ್ತರಾದ ನಿರ್ಮಲಾ ನಾಯಕ್,ಸಂಧ್ಯಾ,ಸುಮತಿ,ಬಜರಂಗದಳ ಶಿರ್ವ ವಲಯ ಗೋರಕ್ಷಾ ಪ್ರಮುಖರಾದ ರಮೇಶ್ ಶೆಟ್ಟಿ, ರಂಜಿತ್ ಪ್ರಭು,ಭರತ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು. 45 ವರ್ಷ ಮೇಲ್ಪಟ್ಟ ನಾಗರಿಕ ಬಂಧುಗಳು ಆಗಮಿಸಿ ಕೊರೊನಾ ಲಸಿಕೆ ಹಾಕಿಸಿಕೊಂಡರು.
ಕಾಪು : ಉಂಡಾರು ಶ್ರೀವಿಷ್ಣುಮೂರ್ತಿ ದೇವರ ವಾರ್ಷಿಕ ಶ್ರೀಮನ್ಮಹಾರಥೋತ್ಸವ, ಶ್ರೀಮದ್ಭಾಗವತ ಸಪ್ತಾಹ
Posted On: 11 Apr 2021, 04:01 PM
ಕಾಪು : ಏಪ್ರಿಲ್ 12, ಸೋಮವಾರ ಮೊದಲ್ಗೊಂಡು ಏಪ್ರಿಲ್ 18, ಭಾನುವಾರ ಪರ್ಯಂತ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ಪರಮಪೂಜ್ಯ ಶ್ರೀಶ್ರೀಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಪುತ್ತೂರು ಮಧುಸೂದನ ತಂತ್ರಿಯವರ ನೇತೃತ್ವದಲ್ಲಿ ಅಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು. ಏಪ್ರಿಲ್ 09 ರಿಂದ ಏಪ್ರಿಲ್ 15 ರ ವರೆಗೆ ಶ್ರೀಮದ್ಭಾಗವತ ಸಪ್ತಾಹ ನಡೆಯಲಿದೆ. ಏಪ್ರಿಲ್ 09 ರಿಂದ ಏಪ್ರಿಲ್ 15 ರ ವರೆಗೆ ಪ್ರತಿದಿನ ಸಾಯಂಕಾಲ 4.30 ರಿಂದ 6.30ರ ವರೆಗೆ ವಿದ್ವಾನ್ ಡಾ.ಉದಯಕುಮಾರ್ ಸರಳತ್ತಾಯ ರಿಂದ ಶ್ರೀಮದ್ಭಾಗವತ ಕಥಾ ಪ್ರವಚನ ನಡೆಯಲಿರುವುದು. ಏಪ್ರಿಲ್ 12, ಸೋಮವಾರ ಸಾಯಂಕಾಲ 6ರಿಂದ ಫಲನ್ಯಾಸಪೂರ್ವಕ ಮುಹೂರ್ತ ಬಲಿ, ಅಂಕುರಾರೋಪಣ, ಸಂಜೆ: 6.30 ರಿಂದ 7.30 ಶ್ರೀ ವಿಷ್ಣು ಭಗಿನಿ ಭಜನಾ ಮಂಡಳಿ ಉಂಡಾರು ಹಾಗೂ 7.30 ರಿಂದ 8.30 ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉಂಡಾರು, ಇವರಿಂದ ಭಜನೆ. ಏಪ್ರಿಲ್ 13, ಮಂಗಳವಾರ ಮೇಷ ಸಂಕ್ರಮಣ: ಪ್ರಾತ: 8-15ಕ್ಕೆ ಧ್ವಜಾರೋಹಣ. ಸಾಯಂಕಾಲ 7-30ಕ್ಕೆ ಬಲಿ. ರಾತ್ರಿ 9 ಕ್ಕೆ ಮಹಾರಂಗಪೂಜೆ, ಭೂತಬಲಿ, ಸಂಜೆ: 6.30 ರಿಂದ 7.30 ಶ್ರೀವಿಷ್ಣುವಲ್ಲಭ ವಿಶ್ವಹಿಂದೂ ಪರಿಷತ್ ಇನ್ನಂಜೆ ಘಟಕ ಹಾಗೂ 7.30 ರಿಂದ 8.30 ಶ್ರೀ ಧೂಮಾವತಿ ಭಜನ ಮಂಡಳಿ ಕಲ್ಯಾಲು, ಇವರಿಂದ ಭಜನೆ, ರಾತ್ರಿ 9ಕ್ಕೆ ವಿಧಾತ್ರಿ ಕಲಾವಿದೆರ್ ಕೈಕಂಬ-ಕುಡ್ಲ ಅವರಿಂದ ವಿಜಯಕುಮಾರ್ ಕೊಡಿಯಾಲ್ಬೈಲ್ ರಚನೆ ಮತ್ತು ನಿರ್ದೇಶನದ ತುಳು ಹಾಸ್ಯ ನಾಟಕ ಒರಿಯರ್ದೊರಿ ಅಸಲ್, ಶಶಿಧರ ಕೆ.ಶೆಟ್ಟಿ ಮಂಡೇಡಿ ಮತ್ತು ಕಲಾಭಿಮಾನಿಗಳ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಏಪ್ರಿಲ್ 14, ಬುಧವಾರ ಸಾಯಂಕಾಲ 7-30ಕ್ಕೆ ತಪ್ಪಂಗಾಯಿ ಬಲಿ, ಕಟ್ಟೆಪೂಜೆಗಳು ಸಂಜೆ 6.30 ರಿಂದ 7.30 ಶ್ರೀ ನಾರಾಯಣ ಗುರು ಭಜನಾ ಮಂಡಳಿ ಇನ್ನಂಜೆ ಹಾಗೂ 7.30 ರಿಂದ 8.30 ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ, ಮಡುಂಬು, ಅವರಿಂದ ಭಜನೆ. ಸಂಜೆ 6.30 ಶ್ರೀ ರವಿಶಂಕರ ಗುರೂಜಿಯವರ ಶಿಷ್ಯರಾದ ಸ್ವಾಮಿ ಸೂರ್ಯಪಾದರಿಂದ ಸತ್ಸಂಗ (ಸಹಯೋಗ: ಜೀವನಕಲಾ ಸಂಸ್ಥೆ, ಇನ್ನಂಜೆ) ರಾತ್ರಿ 9 ರಿಂದ ಶಾಂಭವೀ ನೃತ್ಯನಿಕೇತನ ಕಾಪು ಇದರಿಂದ ನೃತ್ಯ ವೈವಿಧ್ಯ. ಪ್ರಾಯೋಜಕರು: ಶ್ರೀ ಉದಯ ಟಿ. ಮತ್ತು ಸಹೋದರರು ಇನ್ನಂಜೆ. ಏಪ್ರಿಲ್ 15, ಗುರುವಾರ ಪ್ರಾತ: 9ಕ್ಕೆ ಆಶ್ಲೇಷಾ ಬಲಿ, ಸಾಯಂಕಾಲ 7-30ಕ್ಕೆ ಬಲಿ, ಕಟ್ಟೆಪೂಜೆಗಳು. ಸಂಜೆ 6.30 ರಿಂದ 7.30 ಶ್ರೀ ಅಶ್ವತ್ಥನಾರಾಯಣ ಭಜನಾ ಮಂಡಳಿ, ಮಜಲು ಹಾಗೂ 7.30 ರಿಂದ 8.30 ಶ್ರೀದೇವಿ ಭಜನಾ ಮಂಡಳಿ ಮಂಡೇಡಿ, ಅವರಿಂದ ಭಜನೆ ರಾತ್ರಿ 7-30ಕ್ಕೆ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮಗಳು.ರಾತ್ರಿ 9 ಕ್ಕೆ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಶುಕ್ರನಂದನೆ. ಏಪ್ರಿಲ್ 16, ಶುಕ್ರವಾರ ಪ್ರಾತ: 8-30ಕ್ಕೆ ಶ್ರೀಶ್ರೀಗಳವರಿಂದ ಸಂಸ್ಥಾನ ದೇವರಿಗೆ ಮಹಾಪೂಜೆ 9ಕ್ಕೆ 108 ಕಾಯಿ ಗಣಯಾಗದ ಪೂರ್ಣಾಹುತಿ ಪೂರ್ವಾಹ್ನ 10-30ಕ್ಕೆ ಮಹಾಪೂಜೆ, 11-45 ಕ್ಕೆ ರಥಾರೋಹಣ, ಮಧ್ಯಾಹ್ನ 12-30ಕ್ಕೆ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ಕ್ಕೆ ಉಡುಪಿಯ ಪ್ರಸಿದ್ಧ ಕಲಾವಿದರಾದ ವಿ. ಓಬು ಸೇರಿಗಾರರ ಮೊಮ್ಮಗಳು ಅಕ್ಷತಾ ದೇವಾಡಿಗ ರಿಂದ ಸ್ಯಾಕ್ರೋಫೋನ್ ವಾದನ, ಸಂಜೆ 7 ಶ್ರೀಭೂತರಾಜರಿಗೆ ವಿಶೇಷ ಪೂಜೆ ಶ್ರೀಮನ್ಮಹಾರಥೋತ್ಸವ ಮಹಾಭೂತಬಲಿ, ಶಯನೋತ್ಸವ, ಕವಾಟಬಂಧನ. ಏಪ್ರಿಲ್ 17, ಶನಿವಾರ ಪ್ರಾತ 7 ಕ್ಕೆ ಕವಾಟೋದ್ಘಾಟನೆ, ಸಾಯಂಕಾಲ 6-30ಕ್ಕೆ ಅವಚ್ಛತಾನ-ಧ್ವಜಾವರೋಹಣ-ಪೂರ್ಣಾಹುತಿ- ಮಹಾಮಂತ್ರಾಕ್ಷತೆ ಸಂಜೆ 6.30 ರಿಂದ 7.30 ಇನ್ನಂಜೆ ಯುವತಿಮಂಡಳಿ, ಇನ್ನಂಜೆ ಹಾಗೂ 7.30 ರಿಂದ 8.30 ಶ್ರೀ ವಿಠೋಭ ಭಜನಾ ಮಂಡಳಿ, ಗೋಳಿಕಟ್ಟೆ, ಇವರಿಂದ ಭಜನೆ, ರಾತ್ರಿ 9 ಕ್ಕೆ ಇನ್ನಂಜೆ ಯುವಕ ಮಂಡಳಿಯ ಸದಸ್ಯರಿಂದ ಸಾಮಾಜಿಕ ಹಾಸ್ಯ ತುಳು ನಾಟಕ ಅಮ್ಮೆರ್ ನೆರ್ಪೆರ್ ಪ್ರದರ್ಶನವಾಗಲಿದೆ. ಏಪ್ರಿಲ್ 18, ಭಾನುವಾರ ಬೆಳಗ್ಗೆ 6 ರಿಂದ ಗಣಯಾಗ ಮಹಾಸಂಪ್ರೋಕ್ಷಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 10, ಶನಿವಾರ : ಶ್ರೀ ಗುರು ನಾಸಿಕ್ ಗ್ರೂಪ್ ಶಿರ್ವ ಇದರ 13ನೇ ವರ್ಷದ ವಾರ್ಷಿಕೋತ್ಸವ
Posted On: 07 Apr 2021, 03:14 AM
ಕಾಪು : ಶ್ರೀ ಗುರು ನಾಸಿಕ್ ಗ್ರೂಪ್ ಶಿರ್ವ ಇದರ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಏಪ್ರಿಲ್ 10, ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಚೆಕ್ ಪಾದೆ, ಶಿರ್ವ ಇಲ್ಲಿ ನಡೆಯಲಿದೆ. ಬೆಳಿಗ್ಗೆ 10 ರಿಂದ ಶನಿಕಥಾಪಾರಾಯಣ, ಮಧ್ಯಾಹ್ನ 12:30 ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 7.30ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು ಉದ್ಘಾಟಕರಾಗಿ ಮಹೇಶ್ ಶಾಂತಿ ಹೆಜಮಾಡಿ, ಮುಖ್ಯ ಅತಿಥಿಗಳಾಗಿ ಬಿಲ್ಲವ ಪರಿಷತ್ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನವೀನ್ ಆಮೀನ್ ಶಂಕರಪುರ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಮಿತಿ ಶಿರ್ವ ಇದರ ಅಧ್ಯಕ್ಷರಾದ ದೇವಿಪ್ರಸಾದ್ ಪೂಜಾರಿ, ದಿಕ್ಸೂಚಿ ಭಾಷಣಕಾರರಾಗಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸರ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಗುರುವಂದನಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದ್ದು, ರಾತ್ರಿ 9:30 ರಿಂದ ನಮ್ಮ ಕಲಾವಿದೆರ್ ಬೆದ್ರ ತಂಡದ ಸಾಮಾಜಿಕ ಹಾಸ್ಯಮಯ ನಾಟಕ ಕುಸಲ್ದ ಗೊಬ್ಬು ಪ್ರದರ್ಶನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಬೆಳ್ಮಣ್ಣು : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೋತ್ಸವ, ಸಭಾಕಾರ್ಯಕ್ರಮ, ಸನ್ಮಾನ
Posted On: 06 Apr 2021, 11:30 AM
ಕಾಪು : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಬೆಳ್ಮಣ್ಣು ಸಭಾಭವನದಲ್ಲಿ ಏಪ್ರಿಲ್ 11, ಆದಿತ್ಯವಾರ ಪೂರ್ವಾಹ್ನ ಘಂಟೆ 9.00ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೋತ್ಸವ, ಸಭಾಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 11, ಆದಿತ್ಯವಾರ ಬೆಳಿಗ್ಗೆ ಘಂಟೆ 9 ರಿಂದ ಪೂಜಾರಂಭ, ಬೆಳಿಗ್ಗೆ ಘಂಟೆ 10-30ಕ್ಕೆ ಮಹಾಪೂಜೆ, ಬೆಳಿಗ್ಗೆ ಘಂಟೆ 11ರಿಂದ ಸಭಾಕಾರ್ಯಕ್ರಮ, ಮಧ್ಯಾಹ್ನ ಘಂಟೆ 1ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಸತೀಶ್ ಎರ್ಮಾಳ್ ಅಧ್ಯಕ್ಷರು, ಬ್ರಹ್ಮಶ್ರೀ ನಾ.ಗು.ಸ. ಸೇವಾ ಸಂಘ (ರಿ.) ಬೆಳ್ಳಣ್ಣು, ಎಸ್. ಕೆ. ಸಾಲ್ಯಾನ್ ಉದ್ಯಮಿ, ಶ್ರೀ ಕೃಷ್ಣ ಸಮೂಹ ಸಂಸ್ಥೆಗಳು, ಸುನೀಲ್ ಕುಮಾರ್ ಶಾಸಕರು ಕಾರ್ಕಳ ವಿಧಾನ ಸಭಾ ಕ್ಷೇತ್ರ, ಡಾ| ವಿಜಯ ಕುಮಾರ್ ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞರು, ಕೆ.ಎಂ.ಸಿ. ಮಣಿಪಾಲ್, ಶ್ರೀ ಪರಮಾನಂದ ಸಾಲ್ಯಾನ್ ರಂಗ ನಿರ್ದೇಶಕರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಡಾ| ಬಾಲಕೃಷ್ಣ ರಾವ್ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಣ್ಣು, ಡಾ| ಶ್ವೇತಾ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಂದಳಿಕೆ, ಡಾ| ಸತೀಶ್ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಚೇರಿಪೇಟೆ, ಡಾ| ಗುರುದತ್ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನಾ, ಜನಪ್ರತಿನಿಧಿಗಳಾಗಿ ಆಯ್ಕೆಗೊಂಡ ಬೆಳ್ಳಣ್ಣು ಪಂಚಾಯತ್ನ ಎಲ್ಲಾ ಸದಸ್ಯರಿಗೂ ಹಾಗೂ ಬೆಳ್ಮಣ್ಣು ಸಂಘದ ವ್ಯಾಪ್ತಿಯ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಬಿಲ್ಲವ ಸಮಾಜ ಬಾಂಧವರಿಗೂ ಅಭಿನಂದನಾಪೂರ್ವಕ ಗೌರವ ಸಮರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ : ಪಕ್ಷಿ ರಕ್ಷಿಸಿ ಅಭಿಯಾನ
Posted On: 05 Apr 2021, 09:50 PM
ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಹಕ್ಕಿಗಳಿಗೆ ಕಾಳು ನೀರು ಒದಗಿಸುವ ಪಕ್ಷಿ ರಕ್ಷಿಸಿ ಅಭಿಯಾನ ಇಂದು ಅಜ್ಜರಕಾಡು ಭುಜಂಗ ಪಾರ್ಕ್ ಪರಿಸರದಲ್ಲಿ ನಡೆಯಿತು. ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮನುಷ್ಯನ ರಕ್ಷಣೆಗೆ ಬೇರೆ ಬೇರೆ ಇಲಾಖೆಗಳಿವೆ. ಆದರೆ ನಿಸರ್ಗದಲ್ಲಿ ಅತ್ಯಂತ ಸುಂದರ ಜೀವಿಗಳಾದ ಪಕ್ಷಿ ಸಂಕುಲವನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ಬುದ್ಧಿವಂತ ಜೀವಿಗಳಾದ ನಮ್ಮೆಲ್ಲರ ಮೇಲಿದೆ. ಅವುಗಳ ರಕ್ಷಣೆ ಮತ್ತು ಸಂತತಿ ವೃದ್ಧಿಯಾಗುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಿಸರ್ಗವನ್ನು ರಕ್ಷಿಸಿದರೆ ನಿಸರ್ಗವೇ ನಮ್ಮನ್ನು ರಕ್ಷಿಸುತ್ತದೆ ಎಂದರು. ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಸ್ಥಾಪಕ ಅಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಅಭಿಯಾನದ ಬಗ್ಗೆ ವಿಸ್ತ್ರತವಾಗಿ ಮಾಹಿತಿ ನೀಡಿದರು. ಸ್ವಯಂ ಸೇವಕರು ಗಿಡಮರಗಳಲ್ಲಿ ಹಕ್ಕಿಗಳಿಗೆ ಕಾಳು ಮತ್ತು ನೀರು ಇಡಲು ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಮ್ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ವಿಜಯ್ ನೆಗಳೂರು, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ನ್ಯಾಯವಾದಿ ರಫೀಕ್ ಖಾನ್, ಜಗದೀಶ್ ಶೆಟ್ಟಿ, ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಉದಯ ನಾಯ್ಕ್, ಕಾರ್ಯದರ್ಶಿ ವೀಕ್ಷಿತ್, ಮಾಜಿ ಸೈನಿಕ ವಾದಿರಾಜ ಹೆಗ್ಡೆ, ಜಗದೀಶ್ ಬಂಟಕಲ್, ಬೇಬಿ ಶೆಟ್ಟಿ, ಕಾರ್ತಿಕ್ ಆಚಾರ್ಯ, ಸಂಗೀತ, ಮೋಕ್ಷಾ, ಶ್ಲೋಕ ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ನಿರೂಪಿಸಿದರು.
ಕುಲಾಲ ಸಂಘ ಪೆರ್ಡೂರು ಹಾಗೂ ಕಾಪು ಕುಲಾಲ ಯುವ ವೇದಿಕೆಯಿಂದ ವೈದ್ಯಕೀಯ ಚಿಕಿತ್ಸೆಗೆ ನೆರವು
Posted On: 05 Apr 2021, 10:44 AM
ಕಾಪು : ಮಹೇಶ ಕುಲಾಲ್ ಗೋರೆಲು ಇವರ ಶಸ್ತ್ರಚಿಕಿತ್ಸೆ ಗೆ ನೆರವು ನೀಡುವಂತೆ ಕುಲಾಲ ಸಂಘ ಪೆರ್ಡೂರು(ರಿ) ಮತ್ತು ಕುಲಾಲ ಯುವವೇದಿಕೆ ಕಾಪು ಘಟಕ ಮಾಡಿಕೊಂಡ ವಾಟ್ಸಾಪ್ ಮನವಿಗೆ ಸ್ಪಂದಿಸಿ ಒಟ್ಟುಗೂಡಿದ ನಗದು ಮೊತ್ತವನ್ನು ಏಪ್ರಿಲ್ 4, ಆದಿತ್ಯವಾರ ಕುಲಾಲ ಸಂಘದ ಕಾರ್ಯಕಾರಿ ಮಂಡಳಿಯ ಮಾಸಿಕ ಸಭೆಯಲ್ಲಿ ಅವರ ಮನೆಯವರಿಗೆ ಅಧ್ಯಕ್ಷರಾದ ಐತು ಕುಲಾಲ್ ಕನ್ಯಾನ ಮತ್ತು ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾ0ತರಿಸಲಾಯಿತು. ವಿವಿಧ ಸಂಘಸಂಸ್ಥೆಗಳಿಂದ 80,000₹ ,google pay/account pay,ನಗದು ರೂಪದಲ್ಲಿ 1,05,174₹ ಇದುವರೆಗೆ ಒಟ್ಟುಗೂಡಿದ್ದು, ಒಟ್ಟು 1,85,174₹ ಧನ ಸಹಾಯವನ್ನು ಮಾಡಿದ ಎಲ್ಲ ಸಹೃದಯರನ್ನು ಕುಲಾಲ ಸಂಘ ಪೆರ್ಡೂರು ಆತ್ಮೀಯವಾಗಿ ಧನ್ಯವಾದವನ್ನು ಅರ್ಪಿಸುತ್ತಿದೆ. ಇನ್ನು ಮುಂದೆ ಧನಸಹಾಯ ನೀಡುವವರು ನೇರವಾಗಿ ಮಹೇಶ್ ಕುಲಾಲ್ ಅಕೌಂಟ್ ಗೆ ನೆರವು ನೀಡಬಹುದು ಎಂದು ಕುಲಾಲ ಸಂಘ ಪೆರ್ಡೂರು(ರಿ.) ಕುಲಾಲ ಯುವವೇದಿಕೆ ಕಾಪು ಘಟಕ ವಿನಂತಿಸಿದ್ದಾರೆ.
ಕಾಪು : ಸೂರಜ್ ಮತ್ತು ವಿವೇಕ್ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ ತರಬೇತಿಗೆ ಆಯ್ಕೆ
Posted On: 04 Apr 2021, 05:13 PM
ಕಾಪು : ಭಾರತೀಯ ಸಿ ಆರ್ ಪಿ ಎಫ್ (ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್) ತರಬೇತಿಗೆ ಕಾಪುವಿನ ಯುವಕರಾದ ಸೂರಜ್ ಮತ್ತು ವಿವೇಕ್ ಆಯ್ಕೆಯಾಗಿ, ತರಬೇತಿಗೆ ತೆರಳಿರುತ್ತಾರೆ. ಕಾಪು ತಾಲೂಕಿನ ಮಲ್ಲಾರ್ ನಿವಾಸಿ ರಾಧಾಕೃಷ್ಣ ಮತ್ತು ಜಯಂತಿಯವರ ಮಗ ಸೂರಜ್ ಹಾಗೂ ಕಳತ್ತೂರಿನ ಜಯರಾಮ್ ರಾವ್ ಮತ್ತು ಲೀಲಾವತಿಯವರ ಪುತ್ರ ವಿವೇಕ್ ಭಾರತ ಮಾತೆಯ ಸೇವೆ ಮಾಡಲು ಆಯ್ಕೆಯಾಗಿರುವುದು ಹೆತ್ತವರು ಮತ್ತು ಊರಿನವರಿಗೆ ಸಂತಸ ತಂದಿದೆ.
ಕಾಪುವಿನಲ್ಲಿ ಉದ್ಘಾಟನೆಗೊಂಡ ಬಲೆ ತುಲು ಲಿಪಿ ಕಲ್ಪುಗ ತರಬೇತಿ ಕಾರ್ಯಾಗಾರ
Posted On: 04 Apr 2021, 05:04 PM
ಕಾಪು : ತುಳು ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆಯಿದೆ. ನಮ್ಮ ಭಾಷೆಯನ್ನು ನಮ್ಮೂರಿನ ಫಲಕಗಳಲ್ಲಿ ಅಳವಡಿಸಬೇಕಾಗಿದೆ. ತುಳು ಲಿಪಿ ಕಲಿಕೆಯು ನಿರಂತರತೆಯನ್ನು ಕಾಯ್ದುಕೊಳ್ಳಬೇಕಾಗಿದೆ. ಪ್ರತಿ ಶಾಲೆಯಲ್ಲಿ ವಾರದಲ್ಲಿ ಒಂದು ದಿನವಾದರೂ ತುಳು ಲಿಪಿ ಕಲಿಕೆಯನ್ನು ಅಳವಡಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ ಎಂದು ಕಾಪು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಕಾಪು ಇದರ ಅಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ ಹೇಳಿದರು. ಅವರು ಕಾಪು ಸಿ.ಎ ಬ್ಯಾಂಕ್ ಕಟ್ಟಡದ ಭಾಸ್ಕರ ಸೌಧ ಸಭಾಂಗಣದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.), ಜೇಸಿಐ ಕಾಪು, ಯುವವಾಹಿನಿ (ರಿ.) ಕಾಪು ಘಟಕ, ನಮ್ಮ ಕಾಪು ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ಜರಗಿದ ಬಲೆ ತುಲು ಲಿಪಿ ಕಲ್ಪುಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಆಕಾಶ್ ರಾಜ್ ಜೈನ್ ಮಾತನಾಡಿ ತುಳು ಭಾಷೆಯ ಶಬ್ದಗಳನ್ನು ಪ್ರದಕ್ಷಿಣಾಕಾರವಾಗಿ ಬರೆಯುವುದರಿಂದ ದೈವತ್ವದ ಭಾಷೆ, ಅಳುಪರ ಕಾಲದಲ್ಲಿ ಮನ್ನಣೆಯಿದ್ದ ಭಾಷೆ ಕಾಲಕ್ರಮೇಣ ಮನ್ನಣೆಯಿಲ್ಲದಾಯಿತು. ಇದೀಗ ಸರ್ವರೂ ಮನ್ನಣೆಯಿತ್ತರೂ ಸರಕಾರದ ಮಟ್ಟದಲ್ಲಿ ಅಧಿಕೃತ ಭಾಷೆಯ ಮನ್ನಣೆ ನೀಡುತ್ತಿಲ್ಲ ಈ ನಿಟ್ಟಿನಲ್ಲಿ ಸರ್ವರ ಪ್ರಯತ್ನ ಅಗತ್ಯ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ತಾರಾ ಉಮೇಶ್ ಆಚಾರ್ಯ, ಜೇಸಿಐ ವಲಯ 15ರ ಉಪಾಧ್ಯಕ್ಷರಾದ ಜೇಸಿ ಗಿರೀಶ್ ಎಸ್. ಪಿ, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು, ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ಯುವವಾಹಿನಿ ಕಾಪು ಘಟಕದ ಅಧ್ಯಕ್ಷೆ ಸೌಮ್ಯ ರಾಕೇಶ್, ಜೇಸಿಐ ಕಾಪು ಅಧ್ಯಕ್ಷೆ ಜೇಸಿ ಅರುಣಾ ಐತಾಳ್, ನಮ್ಮ ಕಾಪು ನ್ಯೂಸ್ ನ ಮುಖ್ಯಸ್ಥರಾದ ವಿಕ್ಕಿ ಮಡುಂಬು, ತುಳು ಶಿಕ್ಷಕರಾದ ರಾಜೇಶ್ ತುಳುವೆ, ಅಕ್ಷತಾ ಕುಲಾಲ್, ಪೂರ್ಣಿಮಾ ದಕ್ಷ, ನೀತಾ ಕೆಮ್ತೂರು ಉಪಸ್ಥಿತರಿದ್ದರು. ಸೌಮ್ಯ ರಾಕೇಶ್ ಸ್ವಾಗತಿಸಿ, ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವಿಸಿ, ಶಿವಣ್ಣ ಬಾಯಾರು ನಿರೂಪಿಸಿ, ವಿಕ್ಕಿ ಮಡುಂಬು ವಂದಿಸಿದರು.
ಬಹಳ ದಿನಗಳಿಂದ ಹಲವರನ್ನು ಕಾಡಿದ ವೆರಿಕೋಸ್ ವೇಯ್ನ್ ಗುಣಮುಖವಾಗುವ ಕಾಲ ಬಂದಿದೆ ಇದೀಗ ಮಂಗಳೂರಿನಲ್ಲಿ....ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಚಿಕಿತ್ಸೆ
Posted On: 03 Apr 2021, 02:17 PM
ಬಹಳ ದಿನಗಳಿಂದ ಹಲವರನ್ನು ಕಾಡುತ್ತಿರುವ ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಚಿಕಿತ್ಸೆಯ ಮೂಲಕ ಗುಣಮುಖವಾಗುವ ಕಾಲ ಬಂದಿದೆ. ಹೆಚ್ಚಾಗಿ ನಿಂತುಕೊಂಡು ಅಥವಾ ಕುಳಿತುಕೊಂಡು ಕೆಲಸ ಮಾಡುವುದು, ಕಲಬೆರಕೆ ಆಹಾರ, ಅತಿಯಾದ ಮಾಂಸ ಸೇವನೆ ಮಾಡುವವರಿಗೆ ಅಥವಾ ಗರ್ಭಿಣಿಯರಲ್ಲಿ ಈ ಖಾಯಿಲೆ ಹೆಚ್ಚು ಕಂಡುಬರುತ್ತದೆ. ವಂಶ ಪಾರಂಪರ್ಯವಾಗಿಯೂ ಈ ಕಾಯಿಲೆ ಬರುತ್ತದೆ ಎನ್ನುವುದನ್ನು ವೈದ್ಯರ ಅಭಿಪ್ರಾಯವಾಗಿದೆ. ವೆರಿಕೋಸ್ ವೇಯ್ನ್ chronic venous insufficiency ಎಂಬುದರ ಲಕ್ಷಣವಾಗಿದ್ದು, ಡಾ. ಉರಾಳ್ಸ್ ಅವರ ಚಿಕಿತ್ಸೆಯಿಂದ ಇದಕ್ಕೆ ಸಂಬಂಧಪಟ್ಟ ಬೇರೆ ಲಕ್ಷಣಗಳು ಸಹ ಗುಣವಾಗುತ್ತಿರುವುದನ್ನು ಖಚಿತಪಡಿಸಲಾಗಿದೆ. chronic venous insufficiency ಕಾಯಿಲೆಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದುದು ಬಿಟ್ಟರೆ ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ನಮ್ಮ ಚಿಕಿತ್ಸೆಯಲ್ಲಿ ಈ ರೋಗಕ್ಕೆ ಸಂಬಂಧಿತ ಇತರೇ ಕಾಯಿಲೆಗಳು ಗುಣವಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9980362370
