Updated News From Kaup
ಕೊನೆಗೂ ಮಣಿದ ಟೋಲ್ ಅಧಿಕಾರಿಗಳು, ಹೆಜಮಾಡಿ ಗ್ರಾಮ ಪಂಚಾಯತಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
Posted On: 31 Mar 2021, 05:52 PM
ಹೆಜಮಾಡಿ ಗ್ರಾಪಂ ಸದಸ್ಯರಿಂದ ಟೋಲ್ ವಿನಾಯತಿಗೆ ಆಗ್ರಹಿಸಿ ಪರ್ಯಾಯ ರಸ್ತೆ ನಿರ್ಮಾಣ, ಮಾತಿನ ಚಕಮಕಿ ನಡೆಯಿತು. ಹೆಜಮಾಡಿ ಗ್ರಾಮದ ಸ್ಥಳೀಯರಿಗೆ ಟೋಲ್ನಿಂದ ವಿನಾಯಿತಿ ನೀಡದ ಕಾರಣ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಸಹಿತ ಎಲ್ಲಾ ಸದಸ್ಯರು ಜೊತೆಗೂಡಿ ಟೋಲ್ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ವಾಹನವನ್ನು ಕಳುಹಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಘಟಿಸಿದೆ. ಹೆಜಮಾಡಿ ಗ್ರಾಮ ಪಂಚಾಯತ್ನ ಎಲ್ಲಾ ೨೧ ಸದಸ್ಯರು ವಾರದ ಹಿಂದೆ ಟೋಲ್ ಅಧಿಕಾರಿ ಶಿವಪ್ರಸಾದ್ ರೈಯವರಿಗೆ ಮನವಿ ನೀಡಿ, ಹೆಜಮಾಡಿ ಗ್ರಾಮದ ವಾಹನಗಳಿಗೆ ಮತ್ತು ಮುಲ್ಕಿ ಶಾಲೆಗೆ ತೆರಳುವ ಬಸ್ಸ್ಗಳಿಗೆ ಟೋಲ್ನಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಆದರೆ ವಾರದ ಬಳಿಕವೂ ಟೋಲ್ ಅಧಿಕಾರಿಗಳು ಸ್ಪಂದಿಸದ ಕಾರಣ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಪ್ರತ್ಯೇಕ ರಸ್ತೆ ನಿರ್ಮಿಸಿ, ವಾಹನಗಳನ್ನು ಬಿಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಟೋಲ್ ಅಧಿಕಾರಿಗಳ ಮಧ್ಯೆ ಮಾತುಕತೆಯೂ ಜರಗಿತು. ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ರವರು ಸ್ಥಳಕ್ಕೆ ಆಗಮಿಸಿ ಸಂಧಾನ ಮಾಡಲು ಪ್ರಯತ್ನಿಸಿದರಾದರೂ, ಮೊದಲಿಗೆ ಒಮ್ಮತ ಆಗಿಲ್ಲ. ಕಡೆಗೆ ಟೋಲ್ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡುವ ತನಕ ಪ್ರತ್ಯೇಕ ರಸ್ತೆಯಲ್ಲಿ ಹೋಗುವುದೆಂದು ತೀರ್ಮಾನಿಸಲಾಯಿತು. ಟೋಲ್ ಮೆನೇಜರ್ ಶಿವಪ್ರಸಾದ್ರವರು ಉನ್ನತ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಲಿಖಿತವಾಗಿ ಬರೆದು ಕೊಟ್ಟ ಬಳಿಕ ಟೊಲ್ಗೇಟಿನ ರಸ್ತೆಯಲ್ಲಿಯೇ ವಾಹನಗಳು ಸಂಚರಿಸಿದವು. ಪ್ರತಿಭಟನೆಯ ನೇತೃತ್ವವನ್ನು ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ವಹಿಸಿದ್ದು, ಗ್ರಾಮದ ಎಲ್ಲಾ ೨೧ ಸದಸ್ಯರೂ ಭಾಗಿಯಾಗಿದ್ದರು. ಪಡುಬಿದ್ರಿ ಠಾಣಾಧಿಕಾರಿ ಸೂಕ್ತ ಬಂದೋಬಸ್ತನ್ನು ವಹಿಸಿದ್ದರು.
ಬಿರುವೆರ್ ಬ್ರದಸ್೯ ಹೆಜಮಾಡಿ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ
Posted On: 29 Mar 2021, 05:39 PM
ಅಧಿಕಾರ ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ಜನಸೇವೆಯ ಭಾಗ್ಯ ನೀಡಿದೆ ಗ್ರಾಮಪಂಚಾಯತ್. ಆಯ್ಕೆಯಾದ ಸದಸ್ಯರು ತಮ್ಮ ಕಾರ್ಯ ವ್ಯಾಪ್ತಿಗೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಆ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಿಂದೂ ಧಾರ್ಮಿಕ ಧರ್ಮದಾಯ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ಜರಗಿದ ಬಿರುವೆರ್ ಬ್ರದಸ್೯ ಹೆಜಮಾಡಿ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶುಭಕೋರಿ ಮಾತನಾಡಿದರು. ಸನ್ಮಾನ : ಹೆಜಮಾಡಿ ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರನ್ನು, ಪುಷ್ಪರಾಜ್ ಅಮೀನ್ ನಡಿಕುದ್ರು ವಾಯು ಮತ್ತು ಜಲ ಬಲ ವಿಜ್ಞಾನ ಸಂಶೋಧಕ, ಮಂಗಳೂರು ವಿಶ್ವವಿದ್ಯಾನಿಲಯದ 2020 ಸೆಪ್ಟೆಂಬರ್ ನಲ್ಲಿ ನಡೆಸಿದ ಬಿಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ 6ನೇ ರ್ಯಾಂಕ್ ಗಳಿಸಿದ ಪ್ರತಿಮಾ ಪಿ. ಕೋಟ್ಯಾನ್, ಬಿರುವೆರ್ ಬ್ರದಸ್೯ ಹೆಜಮಾಡಿಯ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಸುವರ್ಣರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಬಿರುವೆರ್ ಬ್ರದಸ್೯ ಹೆಜಮಾಡಿಯ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಸುವರ್ಣ, ಮಂಗಳೂರು ಬಿರುವೆರ್ ಕುಡ್ಲದ ವಕ್ತಾರ ಲಕ್ಷ್ಮೀಶ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಲೋಕೇಶ್ ಅಮೀನ್, ಹೆಜಮಾಡಿಯ ಉದ್ಯಮಿ ಸಂದೇಶ್ ಶೆಟ್ಟಿ, ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ನಾರಾಯಣಗುರು ಮಂದಿರದ ಅರ್ಚಕರಾದ ಹರೀಶ್ ಶಾಂತಿ ಮುಂಬೈ, ಪಡುಬಿದ್ರಿ ಬಿಜೆಪಿ ಯುವ ಮೋರ್ಚಾ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕೀರ್ತನ್ ಪೂಜಾರಿ, ಬಿರುವೆರ್ ಬ್ರದಸ್೯ ಹೆಜಮಾಡಿಯ ನೂತನ ಅಧ್ಯಕ್ಷರಾದ ರೀತೇಶ್ ಉಪಸ್ಥಿತರಿದ್ದರು. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ವಿಠಲ ನಾಯಕ್ ಕಲ್ಲಡ್ಕರಿಂದ ಗೀತ ಸಾಹಿತ್ಯ ಸಂಭ್ರಮ ಜರಗಿತು. ನೀಲೇಶ್ ಹೆಜಮಾಡಿ ಸ್ವಾಗತಿಸಿ, ಮನೋಹರ್ ಹೆಜಮಾಡಿ ಪ್ರಾಸ್ತಾವಿಕ ಮಾತನಾಡಿ, ಮೋಹನ್ ಸುವರ್ಣ ಮುಲ್ಕಿ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.
ಮಲ್ಲಾರು : ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿಯ ರಾಶಿ ಮಾರಿಪೂಜೆ ಹಾಗೂ ನೂತನ ಮೂಡುಗೋಪುರ ಸಮರ್ಪಣೆ
Posted On: 29 Mar 2021, 04:48 PM
ಕಾಪು : ಮಲ್ಲಾರು ರಾಣ್ಯಕೇರಿಯ ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿಯ ರಾಶಿ ಮಾರಿಪೂಜೆ ಹಾಗೂ ನೂತನ ಮೂಡುಗೋಪುರ ಸಮರ್ಪಣೆಯು ಮಾಚ್೯ 30 ರಿಂದ 31 ರವರೆಗೆ ನಡೆಯಲಿದೆ. ಮಾರ್ಚ್ 29, ಸೋಮವಾರ ಗಣಹೋಮ. ಮಾರ್ಚ್ 30, ಮಂಗಳವಾರ ಬೆಳಿಗ್ಗೆ 6ಕ್ಕೆ ಹೊರೆಕಾಣಿಕೆ ಕಟ್ಟೆಯಲ್ಲಿ ಶ್ರೀ ದೇವಿಯ ಬಿಂಬ ಪ್ರತಿಷ್ಠೆ, ರಾತ್ರಿ 6:30 ಕ್ಕೆ ಹೊರೆಕಾಣಿಕೆ ಕಟ್ಟೆಯಿಂದ ಮೆರವಣಿಗೆಯ ಮೂಲಕ ಶ್ರೀ ದೇವಿಯ ಸನ್ನಿಧಾನಕ್ಕೆ ಹೊರೆಕಾಣಿಕೆ ಹಾಗೂ ಶ್ರೀ ದೇವಿಯ ಬಿಂಬ ಬರುವುದು. ರಾತ್ರಿ 12 ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ ಹಾಗೂ ರಾಶಿ ಪೂಜಾ ಮಹೋತ್ಸವ, ಸಂಜೆ 8 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 31, ಬುಧವಾರ ಬೆಳಿಗ್ಗೆ 6ಕ್ಕೆ ಅರಮನೆ ಪೂಜೆ, ಮಧ್ಯಾಹ್ನ 3ಕ್ಕೆ ಮಹಾಪೂಜೆ, ಶ್ರೀ ದೇವಿಯ ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಣಿಪುರ : ರಸ್ತೆಯ ಇಕ್ಕೆಲದಲ್ಲಿ ರಾಶಿ ಕಸ ಗಮನಿಸದ ಪಂಚಾಯತ್, ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯ ಎಚ್ಚರಿಕೆ
Posted On: 29 Mar 2021, 03:29 PM
ಕಾಪು : ಮಣಿಪುರ ರೈಲ್ವೆ ಬ್ರಿಡ್ಜ್ ಬಳಿಯ ರಸ್ತೆಯ ಇಕ್ಕೆಳಗಳಲ್ಲಿ ರಾಶಿ ರಾಶಿ ಕಸದ ತಂದು ಸುರಿಯುತ್ತಿದ್ದಾರೆ. ಪಂಚಾಯಿತಿಯಿಂದ ಯಾವುದೇ ವಾಹನಗಳು ಕಸ ವಿಲೇವಾರಿಗೆ ಬರುತ್ತಿಲ್ಲ. ಇದನ್ನು ಹೀಗೆಯೇ ಬಿಟ್ಟರೆ ಮುಂದೆ ತೊಂದರೆಯಾಗುವುದು ಖಂಡಿತ. ಸಾರ್ವಜನಿಕರ ಅಪೇಕ್ಷೆಯ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ಡಾಕ್ಟರ್ ಚಲಪತಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರು ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ಪಂಚಾಯಿತಿಯ ಎದುರುಗಡೆ ಕಸವನ್ನು ತಂದು ಹಾಕಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ, ಮಹಿಳಾ ಭಜನಾ ಮಂಡಳಿ 92 ಹೇರೂರು : ನೂತನ ಪದಾಧಿಕಾರಿಗಳ ಪದಗ್ರಹಣ
Posted On: 29 Mar 2021, 10:53 AM
ಕಾಪು : ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ 92 ಹೇರೂರು, ಶ್ರೀ ಗುರು ರಾಘವೇಂದ್ರ ಮಹಿಳಾ ಭಜನಾ ಮಂಡಳಿ 92 ಹೇರೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಂಡಳಿಯ ಸಭಾಂಗಣದಲ್ಲಿ ನಡೆಯಿತು. ಮಂಡಳಿಯ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ನಾಗರಾಜ ಭಟ್ ಕಲ್ಯಾ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. ಅಧಿಕಾರ ಹಸ್ತಾಂತರ : ಸುಜಿತ್ ಕುಮಾರ್ ರವರು ನೂತನ ಅಧ್ಯಕ್ಷರಾದ ಶ್ರೀನಿವಾಸ್ ದೇವಾಡಿಗರವರಿಗೆ ದಿನೇಶ್ ದೇವಾಡಿಗರವರು ನಿತ್ಯಾನಂದ ಆಚಾರ್ಯರವರಿಗೆ ಅಧಿಕಾರ ಹಸ್ತಾಂತರಿಸಿದರು. ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರಾದ ವಸಂತಿ ಆಚಾರ್ಯ ಮತ್ತು ಸರಸ್ವತಿ ದೇವಾಡಿಗ ರವರು ನೂತನ ಅಧ್ಯಕ್ಷರಾದ ಶಶಿಕಲಾ ದೇವಾಡಿಗ ಹಾಗೂ ಕಾರ್ಯದರ್ಶಿ ಪವಿತ್ರ ರಾವ್ ರವರಿಗೆ ಅಧಿಕಾರ ಹಸ್ತಾಂತರಿಸಿದರು. ಭಜನಾ ಮಂಡಳಿಯ ಉಪಾಧ್ಯಕ್ಷರಾಗಿ ನಾರಾಯಣ ಪೂಜಾರಿ ಜೊತೆ ಕಾರ್ಯದರ್ಶಿಯಾಗಿ ಚರಣ್ ದೇವಾಡಿಗ ಕೋಶಾಧಿಕಾರಿಯಾಗಿ ಮೇಘನಾಥ ಆಚಾರ್ಯ, ಮಹಿಳಾ ಭಜನಾ ಮಂಡಳಿಯ ಉಪಾಧ್ಯಕ್ಷರಾಗಿ ಸರಸ್ವತಿ ಕಾಮತ್ ಜೊತೆ ಕಾರ್ಯದರ್ಶಿಯಾಗಿ ಶಾಂತ ಮಂಜುನಾಥ್ ಕೋಶಾಧಿಕಾರಿಯಾಗಿ ಆಶಾ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರಿಗೆ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಹಿರಿಯ ಸದಸ್ಯರಾದ ದೇವದಾಸ್ ಜೋಗಿ ಶ್ರೀನಿವಾಸ ಪ್ರಭು ಭಜನಾ ತರಬೇತುದಾರರಾದ ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ಕುಮಾರಿ ವೃದ್ಧಿ ದೇವಾಡಿಗರವರು ಪ್ರಾರ್ಥಿಸಿ, ಅಧ್ಯಕ್ಷರಾದ ಸುಜಿತ್ ಕುಮಾರ್ ರವರು ಸ್ವಾಗತಿಸಿ, ಉದಯ ದೇವಾಡಿಗರವರು ಕಾರ್ಯಕ್ರಮ ನಿರೂಪಿಸಿ, ನಿತ್ಯಾನಂದ ಆಚಾರ್ಯರವರು ವಂದಿಸಿದರು.
ಶಂಕರಪುರ : ಸ್ವಯಂಪ್ರೇರಿತ ರಕ್ತದಾನ ಶಿಬಿರ
Posted On: 28 Mar 2021, 05:13 PM
ಕಾಪು, ಮಾ.28 : ಸ್ವಾಸ್ಥ್ಯ ಆಯೋಗ ( ಹೆಲ್ತ್ ಕಮಿಷನ್) ಶಂಕರಪುರ ಚಚ್೯, ಕೆಥೊಲಿಕ್ ಸಭಾ ಶಂಕರ ಪುರ ಚರ್ಚ್ ಘಟಕ, ಐಸಿವೈಎಮ್ ಶಂಕರಪುರ ಚಚ್೯ ಕಸ್ತೂರ್ಬಾ ಆಸ್ಪತ್ರೆ ರಕ್ತನಿಧಿ ಮಣಿಪಾಲ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಶಂಕರಪುರದ ಚಚ್೯ ಕಮ್ಯೂನಿಟಿ ಹಾಲ್ ನಲ್ಲಿ ನಡೆಯಿತು. ಶಂಕರಪುರ ಚರ್ಚಿನ ಧರ್ಮಗುರುಗಳಾದ ವಂದನೀಯ ರೆ ವ ಫಾದರ್ ಫರ್ಡಿನಾಂಡ್ ಗೊನ್ಸಾಲಿಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಶಾಕ ಜಿ.ಶೆಟ್ಟಿ, ಜೆರಿ ರೊಡ್ರಿಗಸ್, ಡಾ. ಫಾತಿಮ, ಜೋನ್ ರೊಡ್ರಿಗಸ್ ಅನಿತ ಡಿಸೋಜ, ಗ್ರೆಗೋರಿ ಡಿಸೋಜ ,ಮಾರ್ಗರೆಟ್ ಸಿಮಾ ಡಿಸೋಜ , ರಾಕೇಶ್ ಫೆರ್ನಾಂಡಿಸ್, ಮುಂತಾದವರು ಉಪಸ್ಥಿತರಿದ್ದರು. 55 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಡೊಮಿಯನ್ ನೊರೊನ್ನಾ ಕಾರ್ಯಕ್ರಮ ನಿರ್ವಹಿಸಿದರು.
ಪಡುಬಿದ್ರಿಯ ಶ್ರಾವ್ಯ ಗುರುರಾಜ್ ಪೂಜಾರಿ 2ನೇ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆ
Posted On: 28 Mar 2021, 03:31 PM
ಕಾಪು : ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಎರಡನೇ ಬಾರಿ ರಾಷ್ಟ್ರಮಟ್ಟಕ್ಕೆ ಪಡುಬಿದ್ರಿಯ ಶ್ರಾವ್ಯ ಗುರುರಾಜ್ ಆಯ್ಕೆಯಾಗಿರುತ್ತಾರೆ. ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಆಡಲಿದ್ದಾರೆ. ಪಡುಬಿದ್ರಿಯ ಗುರುರಾಜ್ ಪೂಜಾರಿ ಹಾಗೂ ನೀತಾಗುರುರಾಜ್ ಪೂಜಾರಿ ಇವರ ಪುತ್ರಿ. ಮುಖೇಶ್ ಇವರಿಂದ ಕ್ರೀಡಾ ತರಬೇತಿ ಪಡೆದಿದ್ದು, ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ದ್ವಿತೀಯ ಬಿ. ಕಾಂ ವಿದ್ಯಾರ್ಥಿನಿಯಾಗಿದ್ದಾರೆ.
ಕಾಪು : ರಕ್ತದಾನ ಶಿಬಿರ ಹಾಗೂ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ
Posted On: 28 Mar 2021, 02:46 PM
ಜೆಸಿಐ ಕಾಪು, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘ (ರಿ.), ರಕ್ತನಿಧಿ ವಿಭಾಗ ಉಡುಪಿ ಜಿಲ್ಲಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಯುವವಾಹಿನಿ (ರಿ.) ಕಾಪು ಘಟಕ, ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು, ಹಿಯಾ ಮೆಡಿಕಲ್ಸ್ ಕಾಪು ಇವರ ಸಹಯೋಗದೊಂದಿಗೆ ವೀರಭದ್ರ ಸಭಾಭವನ ಕಾಪು ಇಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಉದ್ಘಾಟಿಸಿದರು. ಸನ್ಮಾನ : 50ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಪ್ರವೀಣ್ ಬಂಗೇರರಿಗೆ ಸಾಧಕ ರತ್ನ ಗೌರವ ನೀಡಿ ಪುರಸ್ಕರಿಸಲಾಯಿತು. ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು ಗೌರವಾಧ್ಯಕ್ಷರಾದ ಶ್ರೀಮತಿ ಗೀತಾಂಜಲಿ ಸುವರ್ಣ, ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ| ವೀಣಾ ಕುಮಾರಿ, ಕಾಪು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಬ್ರಾಯ ಕಾಮತ್, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷರಾದ ವಿನಯ್ ಬಲ್ಲಾಳ್, ಜೆಸಿಐ ರಕ್ತದಾನ ವಿಭಾಗ ವಲಯ XV, ವಲಯ ಸಂಯೋಜಕರಾದ ಜೆಸಿ ಹರೀಶ್ ಕುಲಾಲ್, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾದ ಶೇಖ್ ನಜೀರ್, ಸತ್ಯದ ತುಳುವೆರ್ (ರಿ.) ಉಡುಪಿ- ಮಂಗಳೂರು ಅಧ್ಯಕ್ಷರಾದ ಪ್ರವೀಣ್ ಬಂಗೇರ, ಕಾಪುವಿನ ಹಿಯಾ ಮೆಡಿಕಲ್ಸ್ ಮಾಲಕರಾದ ಜೇಸಿ ಯೋಗೀಶ್ ರೈ, ಯುವವಾಹಿನಿ (ರಿ.) ಕಾಪು ಘಟಕದ ಅಧ್ಯಕ್ಷರಾದ ಸೌಮ್ಯ ರಾಕೇಶ್, ಕಾಪು ಠಾಣೆಯ ಎಎಸ್ಐ ರಾಜೇಂದ್ರ ಮನಿಯಾಣಿ, ಜೆಸಿಐ ಮತ್ತು ಇತರ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಪು ಜೆಸಿಐ ಅಧ್ಯಕ್ಷರಾದ ಅರುಣಾ ಐತಾಳ್ ಸ್ವಾಗತಿಸಿ, ನೀಲಾನಂದ ನಾಯಕ್ ನಿರೂಪಿಸಿದರು.
ಇನ್ನಂಜೆ : ವಾಲಿಬಾಲ್ ಕ್ರೀಡಾಂಗಣದಲ್ಲಿ ಯುವಕನೋರ್ವ ಹೃದಯಾಘಾತದಿಂದ ಸಾವು
Posted On: 28 Mar 2021, 11:41 AM
ಕಾಪು ಸಮೀಪದ ಇನ್ನಂಜೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಆಡಿದ ಬಳಿಕ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಕಟಪಾಡಿ ಬಳಿಯ ಕುರ್ಕಾಲಿನ ಯುವಕ ದೇವು ಅಂಚನ್ (35) ಎಂದು ತಿಳಿದು ಬಂದಿದೆ. ರಾಜ್ಯಮಟ್ಟದ ವಾಲಿಬಾಲ್ ಆಟಗಾರನಾಗಿ ಗುರುತಿಸಿಕೊಂಡಿದ್ದ ದೇವು ಅಂಚನ್ ಉತ್ತಮ ಆಟಗಾರರಾಗಿದ್ದರು.
ಸ್ವಾಮಿ ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ, ಉಡುಪಿ : ಕೊರಗಜ್ಜನ ನೇಮೋತ್ಸವ
Posted On: 27 Mar 2021, 05:37 PM
ಉಡುಪಿ : ಉಡುಪಿಯ ಕುಕ್ಕೆಹಳ್ಳಿ ಸ್ವಾಮಿ ಕೊರಗಜ್ಜ ದೇವಸ್ಥಾನದಲ್ಲಿ ಸ್ವಾಮಿ ಕೊರಗಜ್ಜನ ನೇಮೋತ್ಸವವು ಮಾರ್ಚ್ 27, ಶನಿವಾರದಂದು ರಾತ್ರಿ 9ಕ್ಕೆ ಸರಿಯಾಗಿ ನಡೆಯಲಿದೆ. ಸಂಜೆ 6 ರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು ಸ್ವರ ನಿನಾದ ಬಿರುದಾಂಕಿತ ಪಾಂಡುರಂಗ ಎಸ್. ಪಡ್ಡಾಂ ಮತ್ತು ಕಲರ್ಸ್ ಕನ್ನಡದ ಮಜಾ ಟಾಕಿಸಿನ ವಿಭಿನ್ನ ಶೈಲಿಯ ಖ್ಯಾತ ಗಾಯಕ ಚಂದ್ರಕಾಂತ ಭಟ್, ಪಡುಬಿದ್ರಿ ಭಾಗವಹಿಸಲಿದ್ದಾರೆ. ಸಂಜೆ 6ರಿಂದ 9ರವರೆಗೆ ಅನ್ನಸಂತರ್ಪಣೆಯೂ ನಡೆಯಲಿದೆ. ಮಾರ್ಚ್ 30, ಮಂಗಳವಾರದಂದು ಸಂಜೆ 7 ಕ್ಕೆ ಹರಕೆಯ ಅಗೇಲು ಸೇವೆಯು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
