Updated News From Kaup
ಸೈಂಟ್ ಜೋನ್ಸ್ ಅಕಾಡೆಮಿ ಶಂಕರಪುರ : ಉಡುಪಿ ವಲಯ ಮಟ್ಟದ ಹ್ಯಾಂಡ್ಬಾಲ್ ಪಂದ್ಯಾಕೂಟ ಸಂಪನ್ನ
Posted On: 01 Sep 2024, 07:30 PM
ಶಿರ್ವ : ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಶಂಕರಪುರದಲ್ಲಿ ಉಡುಪಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಹ್ಯಾಂಡ್ಬಾಲ್ ಪಂದ್ಯಾಕೂಟವನ್ನು ಆಯೋಜಿಸಲಾಯಿತು. ಈ ಪಂದ್ಯಾಕೂಟದಲ್ಲಿ ಶಾಲಾ ಸಂಚಾಲಕರಾದ ರೆ| ಫಾ| ಡಾ| ಪ್ರಕಾಶ್ ಅನಿಲ್ ಕ್ಯಾಸ್ತೆಲಿನೊ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರೆನ್ ಟ್ರೆವರ್ ಡಾಯಸ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ, ಸೈಂಟ್ ಜಾನ್ ಎವಾಂಜೆಲಿಸ್ಟ್ ಚರ್ಚಿನ ಸಹಾಯಕ ಧರ್ಮಗುರುಗಳು ಹಾಗೂ ಚರ್ಚ್ ಪಾಲನಾ ಮಂಡಳಿಯ ಪದಾಧಿಕಾರಿಗಳು, ರಕ್ಷಕ ಶಿಕ್ಷಕ ಸಂಘ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಸರಿತಾ ಮೆಲ್ವಿಟಾ ಡಿಸೋಜರವರು ಉಪಸ್ಥಿತರಿದ್ದರು. ಒಟ್ಟು 15 ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದವು.
ವಿಶ್ವ ಹಿಂದೂ ಪರಿಷತ್ ಮೂಡುಬೆಳ್ಳೆ : ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ, ಸ್ಥಾಪನಾ ದಿನಾಚರಣೆ
Posted On: 01 Sep 2024, 07:16 PM
ಕಾಪು : ವಿಶ್ವ ಹಿಂದೂ ಪರಿಷತ್ ಮೂಡುಬೆಳ್ಳೆ ಘಟಕದ ವತಿಯಿಂದ ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಹಾಗೂ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಭಾನುವಾರ ನೆಲ್ಲಿಕಟ್ಟೆಯಲ್ಲಿ ನೆರವೇರಿತು. ವಿಶ್ವ ಹಿಂದೂ ಪರಿಷತ್ ವತಿಯಿಂದ ಪೋಸ್ಟ್ ಮ್ಯಾನ್ ರಮೇಶ್ ನಾಯ್ಕ್ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನೆಲ್ಲಿಕಟ್ಟೆಯಲ್ಲಿ ರಾಮ ಜಾನಕಿ ಕಟ್ಟೆಯನ್ನು ನಿರ್ಮಿಸುವುದಾಗಿ ನಿರ್ಣಯಿಸಲಾಯಿತು. ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್, ವಿಹಿಂಪ ಕಾಪು ತಾಲೂಕು ಕಾರ್ಯದರ್ಶಿ ರಾಜೇಂದ್ರ ಶೆಣೈ, ಕಾಪು ತಾಲೂಕು ಬಜರಂಗದಳ ಸಂಚಾಲಕ್ ಆನಂದ್ ಶಿರ್ವ, ತಾಲೂಕು ಸಾಪ್ತಾಹಿಕ ಮಿಲನ್ ನೀರಜ್ ಪೂಜಾರಿ, ಕಾಪು ತಾಲೂಕು ಮಾತೃಶಕ್ತಿ ಪ್ರಮುಖ್ ವಾಣಿ ಆಚಾರ್ಯ, ಬೆಳ್ಳೆ ಘಟಕದ ಮಾತೃಶಕ್ತಿ ಪ್ರಮುಖ್ ಅಶಾಶೆಟ್ಟಿ , ಕಾರ್ಯದರ್ಶಿ ಅಭಿಷೇಕ್ ಆಚಾರ್ಯ, ಸಂಚಾಲಕ್ ಮಿಥುನ್ ಪೂಜರಿ, ಗೋರಕ್ಷ ಪ್ರಮುಖ್ ಪವನ್ ಆಚಾರ್ಯ, ಗೌರವ ಸಲಹೆಗಾರರಾದ ನಾಗರಾಜ್ ಭಟ್ ಹಾಗೂ ಸಂಘಟನಾ ಪ್ರಮುಖರಾದ ದೀಪಕ್ ಮೂಡುಬೆಳ್ಳೆ ಮತ್ತಿತರರು ಉಪಸ್ಥಿತರಿದ್ದರು.
ಸೆಪ್ಟೆಂಬರ್ 3 : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವದುರ್ಗಾ ಲೇಖನ ಯಜ್ಞ - ಸಂಕಲ್ಪ ಸ್ವೀಕಾರ
Posted On: 01 Sep 2024, 07:02 PM
ಕಾಪು : ಹೊಸ ಮಾರಿಗುಡಿಯ ಜೀರ್ಣೋದ್ಧಾರ, ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಮಾರಿಯಮ್ಮ ದೇವಿಯ ಭಕ್ತರನ್ನು ಸೇರಿಸಿಕೊಂಡು ನವದುರ್ಗಾ ಲೇಖನ ಯಜ್ಞವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 3 ರಂದು ಬೆಳಿಗ್ಗೆ ಮಂಗಳ ಗೌರಿ ಪೂಜೆಯೊಂದಿಗೆ ಸಮಿತಿ ಉದ್ಘಾಟನೆ ಮತ್ತು ಲೇಖನ ಸಂಕಲ್ಪ ಸ್ವೀಕಾರ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಹೇಳಿದರು. ಅವರು ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವಿಶ್ವ ವ್ಯಾಪಿಯಾಗಿ ನೆಲೆಸಿರುವ ಭಕ್ತರ ಆರಾಧನಾ ಕ್ಷೇತ್ರವಾಗಿದೆ ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರ ಶ್ರದ್ದಾ ಕೇಂದ್ರವಾಗಿರುವ ಅತ್ಯಂತ ಪವಾಡ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿಯ ಮಾರಿಯಮ್ಮನ ಸನ್ನಿಧಿಯಲ್ಲಿ ಸುಮಾರು 30 ಕೋಟಿ ರೂಪಾಯಿ ವೆಚ್ಚದ ಪ್ರಥಮ ಹಂತದ ಜೀರ್ಣೋದ್ದಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯುವ ಜೀರ್ಣೋದ್ದಾರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನವದುರ್ಗಾ ಲೇಖನ ಯಜ್ಞ ನಡೆಯಲಿದೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಯಾಗವನ್ನು ಕೈಗೊಳ್ಳಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಲಾಗಿದೆ ಈ ಸಮಿತಿಯ ಮುಖಾಂತರ ನವದುರ್ಗಾ ಲೇಖನ ಯಜ್ಞದಲ್ಲಿ ಸಂಕಲ್ಪ ಪೂರ್ವಕವಾಗಿ ಭಾಗಿಯಾಗಿ ಅಮ್ಮನ ಅನುಗ್ರಹವನ್ನು ಪಡೆಯಲು ಭಕ್ತಾದಿಗಳಿಗೆ ಅವಕಾಶವನ್ನು ಒದಗಿಸಿಕೊಡಲಾಗುತ್ತಿದೆ. ದೇವಸ್ಥಾನದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕೆ ಪಿ ಕುಮಾರಗುರು ತಂತ್ರಿ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಇವರ ಉಪಸ್ಥಿತಿಯಲ್ಲಿ ಮಂಗಳ ಗೌರಿ ಪೂಜೆ ಮತ್ತು ಲೇಖನ ಸಂಕಲ್ಪಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 8.30 ಕ್ಕೆ ಅಮ್ಮನ ಸನ್ನಿಧಾನದಲ್ಲಿ ಪ್ರಾರ್ಥನೆ, 8:40 ಕ್ಕೆ ಲೇಖನ ಸಂಕಲ್ಪಕ್ಕೆ ಭಕ್ತಾದಿಗಳನ್ನು ಮಂಗಳ ಗೌರಿ ಮಂಟಪಕ್ಕೆ ಕರೆದೊಯ್ಯುವುದು, 8:50 ಕ್ಕೆ ಲೇಖನ ಸಂಕಲ್ಪದ ಭಕ್ತರು ಆಸೀನರಾಗುವುದು, 9ಕ್ಕೆ ಮಂಗಳ ಗೌರಿ ಪೂಜೆ ಮತ್ತು ಲೇಖನ ಸಂಕಲ್ಪ ಆರಂಭ, 10.15 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, 12 ಗಂಟೆಗೆ ಮಹಾ ಮಂಗಳಾರತಿ, ಮಧ್ಯಾಹ್ನ 1:00 ಗೆ ಪ್ರಸಾದ ಭೋಜನ ವಿತರಣೆ ನಡೆಯಲಿದೆ. ನವದುರ್ಗಾ ಲೇಖನ ಯಜ್ಞದ ಪುಸ್ತಕ ಪಡೆಯಲು ನೋಂದಾವಣೆ ಮಾಡಿ, ಸಂಕಲ್ಪ ಸ್ವೀಕರಿಸುವ ಭಕ್ತರು ರೂ. 199 ನೀಡಿ, ಹೆಸರು ನೋಂದಾಯಿಸಿದ ಬಳಿಕ ಮಂಗಳಗೌರಿ ಪೂಜೆಯಲ್ಲಿ ಪಾಲ್ಗೊಂಡು, ನವದುರ್ಗಾ ಲೇಖನ ಯಜ್ಞದ ಸಂಕಲ್ಪ ಸ್ವೀಕರಿಸಲು ಅವಕಾಶ ಮಾಡಿಕೊಡಲಾಗುವುದು. ಮುಂದಿನ ಅಕ್ಟೋಬರ್ 28 ರ ವರೆಗೆ ನೊಂದಾವಣೆಗೆ ಅವಕಾಶವಿದ್ದು ಅಕ್ಟೋಬರ್ 29 ರಂದು ಶ್ರೀ ವಾಗೀಶ್ವರಿ ಪೂಜೆಯೊಂದಿಗೆ ನವದುರ್ಗಾ ಲೇಖನ ಯಜ್ಞದ ಪುಸ್ತಕ ಬಿಡುಗಡೆಗೊಳಿಸಲಾಗುವುದು. ಅಕ್ಟೋಬರ್ 29 ರ ನಂತರ 45 ದಿನಗಳವರೆಗೆ ರಶೀದಿ ಮಾಡಿ ಲೇಖನ ಯಜ್ಞದ ಪುಸ್ತಕವನ್ನು ಪಡೆಯಲು ಅವಕಾಶವಿದೆ ಎಂದರು. ಈ ಸಂದರ್ಭ ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ರಘುಪತಿ ಭಟ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಯೋಗೀಶ್ ವಿ ಶೆಟ್ಟಿ ಬಾಲಾಜಿ, ನವದುರ್ಗಾ ಲೇಖನ ಯಜ್ಞ ಸಮಿತಿ ಮುಂಬೈಯ ಹರೀಶ್ ಶೆಟ್ಟಿ ಎರ್ಮಾಳು, ಚಂದ್ರಹಾಸ ಶೆಟ್ಟಿ ಮುಂಬೈ ಉಪಸ್ಥಿತರಿದ್ದರು
ಕಾಪು : ಕಳತ್ತೂರು ಪಿ.ಕೆ.ಎಸ್ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ; ಸನ್ಮಾನ
Posted On: 30 Aug 2024, 06:49 AM
ಕಾಪು : ತಾಲೂಕಿನ ಪೈಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಪೇದೆಗೆ ಸನ್ಮಾನ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು. ಸನ್ಮಾನ / ಪುರಸ್ಕಾರ : 33 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಸಂಸ್ಥೆಯ ಪೇದೆ ನಾರಾಯಣರವರಿಗೆ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿಧ್ಯಾವರ್ಧಕ ಸಂಘದ ಸಂಚಾಲಕರಾದ ಶಿವರಾಮ ಶೆಟ್ಟಿ, ವಿಧ್ಯಾವರ್ಧಕ ಸಂಘ ಪಿ.ಕೆ.ಎಸ್ ಪ್ರೌಢಶಾಲೆ ಅಧ್ಯಕ್ಷರಾದ ನಿತ್ಯಾನಂದ ಆರ್ ಶೆಟ್ಟಿ, ವಿಧ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ, ಸದಸ್ಯರಾದ ವೇಣುಗೋಪಾಲ ಎಂ, ಲವ ಶೆಟ್ಟಿ, ಗೋಪಾಲಕೃಷ್ಣ ಭಟ್, ಯೋಗೀಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಶೆಟ್ಟಿ ಪೈಯಾರು, ಮುಖ್ಯ ಶಿಕ್ಷಕರಾದ ಗಂಗಾ ನಾಯ್ಕ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಶಂಕರಪುರ ವತಿಯಿಂದ ನ್ಯಾಪ್ಕಿನ್ ಬರ್ನಿಂಗ್ ಮೆಷಿನ್ ಕೊಡುಗೆ
Posted On: 29 Aug 2024, 05:54 PM
ಕಾಪು : ರೋಟರಿ ಕ್ಲಬ್ ಶಂಕರಪುರದ ಪ್ರಾಯೋಜಕತ್ವದಲ್ಲಿ ಇನ್ನಂಜೆಯ ಎಸ್ ವಿ ಎಚ್ ಇಂಗ್ಲಿಷ್ ಮೀಡಿಯಂ ಶಾಲೆಗೆ ನ್ಯಾಪ್ಕಿನ್ ಬರ್ನಿಂಗ್ ಮೆಷಿನ್ ಕೊಡುಗೆ ನೀಡಲಾಯಿತು. ವಲಯ 5 ರ ಮಾಜಿ ಸಹಾಯಕ ಗವರ್ನರ್ ರೋ. ನವೀನ್ ಅಮೀನ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಮಾಲಿನಿ ಶೆಟ್ಟಿ ವಹಿಸಿದ್ದರು. ವಲಯ 5 ರ ಸಹಾಯಕ ಗವರ್ನರ್ ರೋ. ಅನಿಲ್ ಡೆಸಾ, ಇನ್ನಂಜೆ ಎಸ್ ವಿ ಎಚ್ ಸಂಸ್ಥೆಗಳ ಆಡಳಿತಾಧಿಕಾರಿ ಮಂಜುಳಾ ನಾಯಕ್, ಪ್ರಾಂಶುಪಾಲರುಗಳಾದ ಮಮತಾ ಅಂಚನ್ ಮತ್ತು ಸುಷ್ಮಾ, ರೋಟರಿ ಕ್ಲಬ್ ಶಂಕರಪುರದ ಸದಸ್ಯರು, ರೋಟರಿ ಸಮುದಾಯದಳದ ಕಾರ್ಯದರ್ಶಿ ಆರ್ ಸಿ ಸಿ ವಜ್ರೇಶ್ ಆಚಾರ್ಯ ಮತ್ತು ಸದಸ್ಯರು, ಶಾಲಾ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಉಚ್ಚಿಲ : ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ - ರಾಜ್ಯ ಕಾರ್ಯಕಾರಿಣಿ ಸಭೆ
Posted On: 28 Aug 2024, 08:42 PM
ಉಚ್ಚಿಲ : ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ-ಕರ್ನಾಟಕ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ತುಮಕೂರು, ಕರ್ನಾಟಕ ಇದರ ರಾಜ್ಯ ಕಾರ್ಯಕಾರಿಣಿ ಸಭೆಯು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸಭಾಧ್ಯಕ್ಷ ಮತ್ತು ಎಸ್ ಎ ಎಸ್ ಎಸ್ ರಾಷ್ಟ್ರೀಯ ಅಧ್ಯಕ್ಷ ಪಿ. ಬಿ. ಶೇಖರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಎಸ್ ಎ ಎಸ್ ಎಸ್ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಕಾಪು ತಾಲೂಕು ಗೌರವಾಧ್ಯಕ್ಷ ಮತ್ತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಡುಪಿ ಜಿಲ್ಲಾ ಗೌರವ ಸಲಹೆಗಾರ ಆನಂದ ಸಿ. ಸುವರ್ಣ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಮತ್ತು ಉಡುಪಿ ಜಿಲ್ಲಾ ಮಾಜಿ ಲಯನ್ಸ್ ಗವರ್ನರ್ ಎನ್ ಎಮ್ ಹೆಗ್ಡೆ, ರಾಜ್ಯಾಧ್ಯಕ್ಷರಾದ ಡಾ.ಜಯರಾಮ್, ದಕ್ಷಿಣ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಎಸ್. ಎನ್ ಕೃಷ್ಣಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಮದ್ಯ ಪ್ರಾಂತ ಪ್ರಧಾನ ಕಾರ್ಯದರ್ಶಿ ಎಚ್. ಆರ್. ಸಂಪತ್ ಕುಮಾರ್, ಉಡುಪಿ ಜಿಲ್ಲಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಗಣೇಶ್ ಕೋಟ, ಕಾಪು ತಾಲೂಕು ಅಧ್ಯಕ್ಷ ರಘುರಾಮ್ ಎಂ ಶೆಟ್ಟಿ ಕೊಪ್ಪಲಂಗಡಿ, ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ಮಲ್ಲಾರ್,ಎಸ್ ಎ ಎಸ್ ಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಗಣೇಶ್ ಪೋದುವಾಳ್, ಉಡುಪಿ ಜಿಲ್ಲಾ ಮಹಿಳಾ ಅಧ್ಯಕ್ಷೆ ತಾರಾ ಯು. ಆಚಾರ್ಯ ಹಾಗೂ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಂದರ್ ಗುರುಸ್ವಾಮಿ ಪ್ರಾರ್ಥಿಸಿದರು. ರಾಧಾಕೃಷ್ಣ ಮೆಂಡನ್ ಸ್ವಾಗತಿಸಿದರು. ವಿಜಯ್ ಕೊಡವೂರು ಪ್ರಸ್ತಾವಿಕವಾಗಿ ಮಾತನಾಡಿದರು. ರಂಜಿತ್ ಶೆಟ್ಟಿ ವಂದಿಸಿದರು. ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಪ್ರಾಚೀನ ದೇಗುಲಗಳನ್ನು ಮೀರಿಸುವ ಮರದ ಮತ್ತು ಕಲ್ಲಿನ ಶಿಲ್ಪಕಲೆ : ಎಸ್.ಎಲ್. ಭೋಜೇಗೌಡ
Posted On: 28 Aug 2024, 08:31 PM
ಕಾಪು : ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ ಅವರು ಪತ್ನಿ ತರ್ಪಣ ಜೊತೆ ಕಾಪು ಮಾರಿಯಮ್ಮನ ಕ್ಷೇತ್ರಕ್ಕೆ ಬುಧವಾರ ಭೇಟಿ ನೀಡಿ ಮಾರಿಯಮ್ಮನ ದರುಶನ ಪಡೆದರು. ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರ ಸಮ್ಮುಖದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು ಈ ಭಾಗದಲ್ಲಿ ಎಲ್ಲಿಯೂ ನಡೆಯದಂತಹ ಕೆಲಸ ಕಾರ್ಯಗಳು ಈ ದೇವಸ್ಥಾನದಲ್ಲಿ ನಡೆಯುತ್ತಿದೆ. ಪ್ರಾಚೀನ ಕಾಲದ ಶಿಲ್ಪಕಲೆಗಳನ್ನು ಮೀರಿಸುವ ಮರದ ಮತ್ತು ಕಲ್ಲಿನ ಕೆತ್ತನೆಗಳು ಅತ್ಯದ್ಭುತವಾಗಿ ಮೂಡಿ ಬಂದಿದ್ದು, ಎಲ್ಲರೂ ಒಮ್ಮೆ ಇಲ್ಲಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳಬೇಕು ಎಂದರು. ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ, ಪ್ರಚಾರ ಸಮಿತಿಯ ಸಂಚಾಲಕ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ಕಚೇರಿ ನಿರ್ವಾಹಕ ಜಯರಾಮ ಆಚಾರ್ಯ, ಅಭಿವೃದ್ಧಿ ಸಮಿತಿಯ ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಮಧುಕರ್ ಎಸ್, ಕಾಪು ಪುರಸಭಾ ಸದಸ್ಯ ಅನಿಲ್ ಕುಮಾರ್ ಕಾಪು, ಪ್ರಚಾರ ಸಮಿತಿಯ ಸಂಚಾಲಕ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಪ್ರಬಂಧಕ ಗೋವರ್ಧನ್ ಸೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾಪು ಪುರಸಭೆಯ ಅಧ್ಯಕ್ಷರಾಗಿ ಹರಿಣಾಕ್ಷಿ ದೇವಾಡಿಗ ಮತ್ತು ಉಪಾಧ್ಯಕ್ಷರಾಗಿ ಸರಿತಾ ಶಿವಾನಂದ್ ಆಯ್ಕೆ
Posted On: 28 Aug 2024, 08:15 PM
ಕಾಪು : ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ಹರಿಣಾಕ್ಷಿ ದೇವಾಡಿಗ ಮತ್ತು ಉಪಾಧ್ಯಕ್ಷರಾಗಿ ಸರಿತಾ ಶಿವಾನಂದ್ ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿದ್ದಾರೆ. ಆ ಮೂಲಕ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳೆರಡೂ ಬಿಜೆಪಿ ಪಾಲಾಗಿದೆ. 23 ಮಂದಿ ಸದಸ್ಯ ಬಲದ ಕಾಪು ಪುರಸಭೆಯ ಅಧ್ಯಕ್ಷ ಹುದ್ದೆಯು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಕಟವಾಗಿತ್ತು. ಅಂತಿಮವಾಗಿ ಅಧ್ಯಕ್ಷರಾಗಿ ಹರಿಣಾಕ್ಷಿ ದೇವಾಡಿಗ ಮತ್ತು ಉಪಾಧ್ಯಕ್ಷರಾಗಿ ಸರಿತಾ ಶಿವಾನಂದ್ ಅವರು 16 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಶೋಭಾ ಎ. ಬಂಗೇರ ಮತ್ತು ಸತೀಶ್ಚಂದ್ರ ಮೂಳೂರು ತಲಾ 9 ಮತ ಗಳಿಸಿದ್ದಾರೆ. ಬಿಜೆಪಿ -12, ಕಾಂಗ್ರೆಸ್ -7, ಎಸ್ಡಿಪಿಐ -3, ಜೆಡಿಎಸ್ -1 ಸದಸ್ಯ ಬಲವನ್ನು ಹೊಂದಿದ್ದು, ಶಾಸಕ, ಸಂಸದ ಮತ್ತು ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ 16 ಮತಗಳನ್ನು ಹೊಂದಿತ್ತು. ಅಧ್ಯಕ್ಷ ಹುದ್ದೆಗೆ ಬಿಜೆಪಿಯೊಳಗೆ ನಾಲ್ಕು ಮಂದಿಗೆ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಹರಿಣಾಕ್ಷಿ ದೇವಾಡಿಗ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದು, ಉಪಾಧ್ಯಕ್ಷ ಹುದ್ದೆಗೆ ಎಸ್.ಡಿ.ಪಿ.ಐ ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಸರಿತಾ ಶಿವಾನಂದ್ ಸ್ಪರ್ಧಿಸಿದ್ದರು. ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್. ಚುನಾವಣಾಧಿಕಾರಿಯಾಗಿ ಚುನಾವಣೆ ನಡೆಸಿಕೊಟ್ಟರು.
ಅದಮಾರುವಿನಲ್ಲಿ ಮೊಸರು ಕುಡಿಕೆ ಉತ್ಸವ
Posted On: 27 Aug 2024, 10:55 PM
ಅದಮಾರು : ಮೂಲ ಮಠದ ಆಯೋಜನೆಯಲ್ಲಿ ಶ್ರೀ ಕೃಷ್ಣ ಲೀಲೋತ್ಸವದ ಅಂಗವಾಗಿ ಮೊಸರು ಕುಡಿಕೆ ಉತ್ಸವ ಮಂಗಳವಾರ ಅದಮಾರು ವೃತ್ತದಲ್ಲಿ ನೆರವೇರಿತು. ಸಣ್ಣ ರಥದಲ್ಲಿ ಕೃಷ್ಣನ ಮೂರ್ತಿ ಸಾಗಿ ಬಂದು ಅದಮಾರು ವೃತ್ತದಲ್ಲಿರುವ ಮಠದ ಜಾಗದಲ್ಲಿ ಕೃಷ್ಣನಿಗೆ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭ ತಪ್ಪಂಗಾಯಿ, ಮಡಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ ಸಹಿತ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಮಹಿಳಾ ಚೆಂಡೆ ವಾದನ ಮೆರವಣಿಗೆಯಲ್ಲಿ ಸಾಗಿ ಬಂದಿತು. ಮೊಸರು ಕುಡಿಕೆಯು ಜರಗಿತು. ಈ ಸಂದರ್ಭ ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಹಿತ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಕಟಪಾಡಿ : ವಿನಯ್ ಬಲ್ಲಾಳ್ ನಿಧನ
Posted On: 27 Aug 2024, 10:41 PM
ಕಟಪಾಡಿ : ಇಲ್ಲಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಕಟಪಾಡಿ ಬೀಡು ಮನೆತನದ ವಿನಯ್ ಬಲ್ಲಾಳ್ ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ವಿಧಿ ವಿಧಾನ ಅವರ ಸ್ವಗೃಹ ಕಟಪಾಡಿಯ ಮೂಡಬೆಟ್ಟುವಿನಲ್ಲಿ ಬುಧವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
