Updated News From Kaup
ಕಾಪು : ಮಾರಕಾಯುಧದೊಂದಿಗೆ ಸಂಚರಿಸುತ್ತಿದ್ದ ಆರು ಮಂದಿ ಪೊಲೀಸ್ ವಶಕ್ಕೆ

Posted On: 02-06-2024 11:43AM
ಕಾಪು : ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಸಂಚರಿಸುತ್ತಿದ್ದ ಆರು ಮಂದಿಯನ್ನು ಕಾಪು ಪೊಲೀಸರು ಕಾಪು ಸಮೀಪದ ಕೋತಲಕಟ್ಟೆ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮುಲ್ಕಿಯ ಅಮಿತ್ ರಾಜ್, ಕಾಟಿಪಳ್ಳದ ಪ್ರಕಾಶ್, ವಾಮಂಜೂರು ನೀರುಮಾರ್ಗದ ವರುಣ್, ಸುರತ್ಕಲ್ ನ ಕಾರ್ತಿಕ್ ಶೆಟ್ಟಿ, ಕಾಟಿಪಳ್ಳದ ಅಭಿಷೇಕ್, ಫರಂಗಿಪೇಟೆಯ ಶ್ರೀಕಾಂತ್ ಶ್ರೀಪತಿ ವಶಕ್ಕೆ ಪಡೆದ ಆರೋಪಿಗಳು. ಇವರಿಂದ ಕಾರು, ಮಾರಕಾಯುಧಗಳು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉದ್ಯಾವರದ ಬಳಿ ಕಾರಿನಲ್ಲಿ ಹೋಗುತ್ತಿದ್ದ ಆರೋಪಿಗಳ ಬಗ್ಗೆ ಅನುಮಾನಗೊಂಡ ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಆರೋಪಿಗಳು ಕಾರನ್ನು ನಿಲ್ಲಿಸದೆ ಕಾಪು ಕಡೆ ಪರಾರಿ ಯಾದರು. ಬಳಿಕ ಈ ಬಗ್ಗೆ ಕಾಪು ಠಾಣೆಗೆ ಮಾಹಿತಿ ನೀಡಿದ ಜಯಶ್ರೀ ಮಾನೆ, ಆರೋಪಿಗಳ ವಾಹನವನ್ನು ಬೆನ್ನಟ್ಟಿ ಕೊಂಡು ಬಂದರೆನ್ನಲಾಗಿದೆ.
ಅದೇ ರೀತಿ ಅತ್ತ ಅಲಟ್೯ ಆದ ಕಾಪು ಠಾಣೆಯ ಎಸ್ ಐ ಅಬ್ದುಲ್ ಖಾದರ್ ಇನ್ನೊಂದು ವಾಹನದಲ್ಲಿ ಆರೋಪಿಗಳ ವಾಹನವನ್ನು ಬೆನ್ನಟ್ಟಿಕೊಂಡು ಬಂದರು. ಕಾಪುವಿನ ಕೋತಲ್ ಕಟ್ಟೆ ಬಳಿ ಆರೋಪಿಗಳ ವಾಹನವನ್ನು ತಡೆದು ಅದರಲ್ಲಿದ್ದ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡರು ಎಂದು ತಿಳಿದುಬಂದಿದೆ.
ವಾಹನವನ್ನು ತಪಾಸಣೆ ಮಾಡಿದಾಗ ಅದರೊಳಗೆ ಮಾರಕಾಯುಧಗಳು ಹಾಗೂ ಇತರ ವಸ್ತುಗಳು ಕಂಡು ಬಂದಿದ್ದು ಆರೋಪಿಗಳು ಯಾವ ಕೃತ್ಯಕ್ಕೆ ಸಂಚುರೂಪಿಸಿದ್ದಾರೆ ಎಂಬುದು ತನಿಖೆಯಿಂದ ಹೊರ ಬರಬೇಕಾಗಿದೆ.
ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ : ನವೀಕರಣ ಯೋಜನೆಗಳ ಹಸ್ತಾಂತರ

Posted On: 02-06-2024 11:14AM
ಕಾಪು : ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ಇವರ ಸಹಯೋಗದೊಂದಿಗೆ ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಸುಮಾರು 4.50 ಲಕ್ಷ ರೂ. ವೆಚ್ಚದ ನವೀಕರಣ ಕಾಮಗಾರಿಗಳನ್ನು ಶನಿವಾರ ಉದ್ಘಾಟಿಸಿ, ಹಸ್ತಾಂತರಿಸಲಾಯಿತು. ಕರಂದಾಡಿ ಶಾಲೆಯ ಶಿಕ್ಷಕ ರಕ್ಷಕ ಸಂಘದ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್, ಬಿಗ್ ಬಾಸ್ ವಿನ್ನರ್ ಮತ್ತು ಚಲನಚಿತ್ರ ನಟ ರೂಪೇಶ್ ಶೆಟ್ಟಿ ಶುಭಾಂಶಸನೆಗೈದರು. ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ಸದಸ್ಯ ಗುರುಪ್ರಸಾದ್ ಶೆಟ್ಟಿ ಬೈಲೂರು ತಮ್ಮ ತಂಡವು ಕಳೆದ ಏಳು ವರ್ಷಗಳಲ್ಲಿ ನಡೆಸಿದ ಕಾರ್ಯಕ್ರಮಗಳು, ಸಾರ್ವಜನಿಕ ಸಹಕಾರದ ಕುರಿತಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ರೀಜನಲ್ ಚಯರ್ಮೆನ್ ವರುಣ್ ಶೆಟ್ಟಿ, ಅಧ್ಯಕ್ಷ ಉದಯ್ ಶೆಟ್ಟಿ, ಕಾರ್ಯದರ್ಶಿ ಲುತ್ಪುಲ್ಲಾ ಸಾಹೇಬ್ ನೇತೃತ್ವದಲ್ಲಿ ಕಾಪು ಲಯನ್ಸ್ ಕ್ಲಬ್ ವತಿಯಿಂದ ಶಾಲೆಗೆ ಬೆಂಚ್ ಮತ್ತು ಡೆಸ್ಕ್ಗಳಿಗಾಗಿ ೫೦ ಸಾವಿರ ರೂಪಾಯಿ ದೇಣಿಗೆಯನ್ನು ಹಸ್ತಾಂತರಿಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಪದ್ಮನಾಭ ಶ್ಯಾನುಭಾಗ್, ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಪುಸ್ತಕದ ದಾನಿ ಮಿಥುನ್ ರೈ, ಶಾಲಾ ಹಳೆ ವಿದ್ಯಾರ್ಥಿ ರಾಮದಾಸ್ ತಂತ್ರಿ, ಕಲ್ಪವೃಕ್ಷ ಕನ್ನಡ ಶಾಲೆ ತಂಡದ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ಕರಂದಾಡಿ, ಆಡಳಿತ ಸಮಿತಿ ಸದಸ್ಯರಾದ ಶಶಿಶೇಖರ ಭಟ್, ನಾಗಭೂಷಣ್ ರಾವ್, ಮುಖ್ಯೋಪಾಧ್ಯಾಯ ಆರ್.ಎಸ್. ಕಲ್ಲೂರ, ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ, ರಂಗ ನಟರಾದ ಪ್ರಸನ್ನ ಶೆಟ್ಟಿ ಬೈಲೂರು, ಶರತ್ ಉಚ್ಚಿಲ, ಸಂದೀಪ್ ಶೆಟ್ಟಿ, ಮರ್ವಿನ್ ಶಿರ್ವ ಉಪಸ್ಥಿತರಿದ್ದರು. ಕರಂದಾಡಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಪ್ರಸ್ತಾವನೆಗೈದರು. ಶಿಕ್ಷಕಿಯರಾದ ಹರಿಣಾಕ್ಷಿ ಸ್ವಾಗತಿಸಿದರು. ಸತ್ಯವತಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.ಅನಿತಾ ಹೆಗ್ಡೆ ವಂದಿಸಿದರು.
ಕಾಪು : ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ತಂಬಾಕು ಮುಕ್ತ ದಿನಾಚರಣೆ

Posted On: 31-05-2024 05:28PM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಸೈಟ್ಸ್-ಗೈಡ್ಸ್ ಎನ್.ಸಿ.ಸಿ.ವಿದ್ಯಾರ್ಥಿಗಳ ನೇತೃತ್ವದಲ್ಲಿ ತಂಬಾಕು ಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾಂಶುಪಾಲರಾದ ಎಂ.ನೀಲಾನಂದ ನಾಯ್ಕ ಇವರು ತಂಬಾಕು ಪದಾರ್ಥಗಳನ್ನು ಉರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್ ಇವರು ತಂಬಾಕು ಪದಾರ್ಥದ ಸೇವನೆಯು ಜನರ ದೇಹವನ್ನು ದಹಿಸುತ್ತಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ತಂಬಾಕಿನಂತಹ ಅಮಲು ಪದಾರ್ಥಗಳಿಂದ ದೂರವಿದ್ದು ತನ್ನ ಪರಿಸರವನ್ನು ಕೂಡಾ ಆರೋಗ್ಯದಾಯಕವಾಗಿರಲು ಪ್ರಯತ್ನಿಸಬೇಕು ಎಂಬ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಸೈಟ್ಸ್-ಗೈಡ್ಸ್ ಶಿಕ್ಷಕಿಯರಾದ ವೀಣಾ ನಾಯಕ್, ವಾಣಿ, ಹಾಗೂ ಶಿಕ್ಷಣ ಸಂಯೋಜಕರಾದ ಶಿವಣ್ಣ ಬಾಯಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೀನಿಕೇತ್ ಬಾಯಾರ್ ಸ್ವಾಗತಿಸಿದರು. ಮನ್ವಿತಾ ಕಾರ್ಯಕ್ರಮ ನಿರೂಪಿಸಿದರು. ಆನಂದ್ ಸಿಂಗ್ ವಂದಿಸಿದರು.
ಉಚ್ಚಿಲ : ಸರಸ್ವತಿ ಮಂದಿರ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ; ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ವಿದ್ಯಾರ್ಥಿಗೆ ಸನ್ಮಾನ

Posted On: 31-05-2024 05:21PM
ಉಚ್ಚಿಲ : ಸರಸ್ವತಿ ಮಂದಿರ ಶಾಲೆ, ಉಚ್ಚಿಲ ಇದರ 2024-25 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಉದ್ಘಾಟನೆ ಶುಕ್ರವಾರ ಶಾಲಾ ಕಲಾ ವೇದಿಕೆಯಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಸನ್ಮಾನ : ಎಸ್ ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್, ಉಡುಪಿ ಜಿಲ್ಲಾ ಕನ್ನಡ ಮಾಧ್ಯಮ ಶಾಲೆಗೆ ಪ್ರಥಮ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿ ಸಮರ್ಥ್ ಆರ್ ಜೋಷಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಕುಮಾರ್ ಮೆಂಡನ್, ಶಿಲ್ಪಾ ಗಂಗಾಧರ ಸುವರ್ಣ, ಶಾಲಾ ಮುಖ್ಯೋಪಾಧ್ಯಾಯರಾದ ಬಾಬುರಾಯ ಆಚಾರ್ಯ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ವೈ, ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾ ದಿನೇಶ್ ಸುವರ್ಣ, ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಕಲಾವತಿ ಆಚಾರ್ಯ, ಸಹ ಶಿಕ್ಷಕರು, ಗ್ರಾಪಂ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಲಾಲ್ ವಂದಿಸಿದರು.
SSLC ಪರೀಕ್ಷೆ : ಪಣಿಯೂರು ಪೆಜತ್ತಕಟ್ಟೆ ಸಾಕ್ಷಿ ದೇವಾಡಿಗ ಶಾಲೆಗೆ ದ್ವಿತೀಯ ಸ್ಥಾನಿ

Posted On: 30-05-2024 09:08PM
ಕಾಪು : ಇಲ್ಲಿನ ಅದಮಾರು ಪೂರ್ಣ ಪ್ರಜ್ಞ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಸಾಕ್ಷಿ ದೇವಾಡಿಗ 91% ಅಂಕ ಪಡೆದು ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವರು.
ಇವರು ಪಣಿಯೂರು ಆಟೋ ಚಾಲಕರ ಹಾಗೂ ಮಾಲಕರ ಸಂಘದ ಅಧ್ಯಕ್ಷರು ದಯಾನಂದ ದೇವಾಡಿಗ ಹಾಗೂ ವಿನೋದ ದೇವಾಡಿಗ ಅವರ ಸುಪುತ್ರಿ.
ಕಾಪು : ಬೊಳ್ಳೆಟ್ಟು ಅಲಡೆಯ ಪ್ರಧಾನ ಅರ್ಚಕ ಬಾಲಕೃಷ್ಣ ಭಟ್ ನಿಧನ

Posted On: 30-05-2024 05:02PM
ಕಾಪು : ಎಲ್ಲೂರು ಗ್ರಾಮದ ಬೆಳ್ಳಿಬೆಟ್ಟು ನಿವಾಸಿ ಬಾಲಕೃಷ್ಣ ಭಟ್(76) ಮೇ 29 ರಂದು ಅವರ ಸ್ವಗ್ರಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬೊಳ್ಳೆಟ್ಟು ಅಲಡೆಯ ಪ್ರಧಾನ ಅರ್ಚಕರಾಗಿದ್ದ ಇವರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳದ ಗಣಪತಿ ದೇವರ ಅರ್ಚಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು.
ಪ್ರಪಂಚಾದ್ಯಂತ ನೆಲೆಸಿರುವ ಜನರು ಕಾಪು ಮಾರಿಗುಡಿಯನ್ನೊಮ್ಮೆ ನೋಡಬೇಕು : ಶಿರೂರು ಶ್ರೀ ವೇದವರ್ಧನ ಸ್ವಾಮೀಜಿ

Posted On: 29-05-2024 05:06PM
ಕಾಪು : ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಶ್ರೀ ಶಿರೂರು ಮಠದ ಮಠಾಧೀಶರಾದ ಶ್ರೀ ವೇದವರ್ಧನ ಸ್ವಾಮೀಜಿ ಮತ್ತು ಆಪ್ತರಾದ ಶ್ರೀಶ ಭಟ್ ಅವರು ಮೇ 29ರಂದು ಜಿರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಕಾಪುವಿನ ಅಮ್ಮನ ದರುಶನವನ್ನು ಪಡೆದು ಶ್ರೀದೇವಿಗೆ ದೀಪ ಬೆಳಗಿ ನವದುರ್ಗಾ ಮಂಟಪದಲ್ಲಿ ಆಶೀರ್ವಚನ ನೀಡಿದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿಯವರ ಸಮ್ಮುಖದಲ್ಲಿ ಜಿರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಭಕ್ತರು ಬರೇ ಭಾರತ ದೇಶದಲ್ಲಿ ಮಾತ್ರ ಅಲ್ಲ, ಪ್ರಪಂಚಾದ್ಯಂತ ನೆಲೆಸಿದ್ದಾರೆ. ದೇವರ ಸೇವೆ ಮಾಡಲು ಇದೊಂದು ಅವಕಾಶ. ಇಲ್ಲಿಗೆ ಬಂದು ಕಣ್ತುಂಬಿಕೊಳ್ಳಬೇಕು, ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕು, ಎಲ್ಲರಿಗೂ ಇದು ನಮ್ಮ ದೇವಸ್ಥಾನ ಎಂಬ ಭಾವನೆ ಬರಬೇಕು. ಪರಮಾತ್ಮನ ಅನುಗ್ರಹವಿರಲಿ ಎಂದರು.

ದೇವಳದ ಪ್ರಧಾನ ಅರ್ಚಕರಾದ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಜಿರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಕಾಪು ಬೀಡು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮಾದವ ಆರ್ ಪಾಲನ್, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ, ಡಾ. ಸೀತಾರಾಮ್ ಭಟ್, ಕಛೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಮಧುಕರ್ ಎಸ್, ಪ್ರಚಾರ ಸಮಿತಿ ಸಂಚಾಲಕ ಜಯರಾಮ್ ಆಚಾರ್ಯ, ಶ್ರೀಧರ್ ಕಾಂಚನ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರುಗಳಾದ ಗೀತಾಂಜಲಿ ಸುವರ್ಣ, ಶಿಲ್ಪಾ. ಜಿ. ಸುವರ್ಣ, ಶೈಲಪುತ್ರಿ ತಂಡದ ಸಂಚಾಲಕರುಗಳಾದ ರವಿ ಭಟ್ ಮಂದಾರ, ಲಕ್ಷ್ಮೀಶ ತಂತ್ರಿ, ರಾಧಾರಮಣ ಶಾಸ್ತ್ರಿ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಉಡುಪಿ : ಹೆಜಮಾಡಿ ಟೋಲ್ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ

Posted On: 29-05-2024 11:47AM
ಉಡುಪಿ : ಹೆಜಮಾಡಿ ಟೋಲ್ ಹೋರಾಟ ಸಮಿತಿಯ ವತಿಯಿಂದ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಟೋಲ್ ವಿನಾಯಿತಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಬುಧವಾರ ಮನವಿ ನೀಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಈ ಬಗ್ಗೆ ಸಭೆ ಕರೆದು ತೀರ್ಮಾನಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಟೋಲ್ ಹೋರಾಟ ಸಮಿತಿಯ ಅಧ್ಯಕ್ಷರಾದ ಶೇಖರ್ ಹೆಜ್ಮಾಡಿ, ಪದಾಧಿಕಾರಿಗಳಾದ ನವೀನಚಂದ್ರ ಜೆ ಶೆಟ್ಟಿ, ವಿಶ್ವಾಸ್ ಅಮೀನ್, ಅಬ್ದುಲ್ ಅಜೀಜ್ ಹೆಜಮಾಡಿ, ಸಂತೋಷ್ ಪಡುಬಿದ್ರಿ, ತಸ್ನೀನ್ ಅರಾ, ಜಹೀರ್ ಅಹಮ್ಮದ್ ಉಪಸ್ಥಿತರಿದ್ದರು.
ಉಡುಪಿ ಪಂದುಬೆಟ್ಟುವಿನ ಮಗುವಿಗೆ ನೆರವಾಗಿ

Posted On: 29-05-2024 10:41AM
ಉಡುಪಿ : ಇಲ್ಲಿನ ಪಂದುಬೆಟ್ಟು ನಿವಾಸಿಯಾದ ತ್ರಿಷಾ ವಿ ಪೂಜಾರಿ (5 ವರ್ಷ) ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಉಡುಪಿಯ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ ಮಗುವಿನ ಚಿಕಿತ್ಸೆಗೆ 8 ಲಕ್ಷ ತಗಲುತ್ತದೆಯೆಂದು ವೈದ್ಯರು ತಿಳಿಸಿದ್ದಾರೆ. ಬಡ ಕುಟುಂಬವಾಗಿದ್ದು ಚಿಕಿತ್ಸಾ ವೆಚ್ಚವನ್ನು ಬರಿಸಲು ಸಾಧ್ಯವಿಲ್ಲದೆ ದಾನಿಗಳ ಸಹಾಯಧನ ನಿರೀಕ್ಷೆಯಲ್ಲಿದ್ದಾರೆ.
ಆದ್ದರಿಂದ ಉಡುಪಿಯ ನಮ್ಮ ಮೊಬೈಲ್ ಸಂಸ್ಥೆಯ ವತಿಯಿಂದ ಸಾಧ್ಯವಾದಷ್ಟು ಹಣವನ್ನು ಸಂಗ್ರಹಿಸಿ ಆ ಮಗುವಿನ ಚಿಕಿತ್ಸೆಗೆ ನೆರವು ನೀಡುವುದಾಗಿ ನಿರ್ಧರಿಸಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.
Google pay : 9886836985 (Harish Amin) ಗೂಗಲ್ ಪೇ ನಲ್ಲಿ ಸಹಾಯಧನ ನೀಡಿದವರು Screen shot ಅನ್ನು ಈ ಸಂಖ್ಯೆಗೆ ಕಳುಹಿಸಿ.
ಕಾಪು : ದಂಡತೀರ್ಥ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ಕಾರ್ಯಾಗಾರ

Posted On: 28-05-2024 06:31PM
ಕಾಪು : ಇಲ್ಲಿನ ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಮಂಗಳವಾರ ಏರ್ಪಡಿಸಲಾಯಿತು.

ವಿದ್ಯಾಸಂಸ್ಥೆಯ ಸಂಚಾಲಕರಾದ ಡಾ.ಕೆ.ಪ್ರಶಾಂತ್ ಶೆಟ್ಟಿಯವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕಾದರೆ ಶಿಕ್ಷಕರು ಪ್ರತಿನಿತ್ಯ ಹಲವಾರು ತರಬೇತಿಯನ್ನು ಹಾಗೂ ಅನುಭವವನ್ನು ಪಡೆಯಬೇಕಾಗುತ್ತದೆ. ತಮ್ಮ ಜ್ಞಾನದ ಜೊತೆಗೆ ಇತರ ಕೌಶಲಗಳನ್ನು ಪಡೆದುಕೊಂಡಾಗ ಅತ್ಯುತ್ತಮ ಬೋಧನೆಗೆ ಪೂರಕವಾಗುತ್ತದೆ ಎಂಬ ಸಂದೇಶವನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಕೋಟ ವಿದ್ಯಾಸಂಸ್ಥೆಯ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ಸಾಹಿತ್ಯಕಾರ, ಟಿ.ವಿ.ನಿರೂಪಣೆಗಾರ, ನಿರ್ದೆಶಕ ರಂಗಕರ್ಮಿ, ಜೇಸಿಯ ತರಬೇತುದಾರರಾದ ನರೇಂದ್ರ ಕುಮಾರ್ ಕೋಟ ಮಾತನಾಡಿ ಶಿಕ್ಷಕರು ತಮ್ಮ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕಾದರೆ ಪರಿಪೂರ್ಣತೆಯನ್ನು ಹೊಂದಬೇಕಾದರೆ ವಿವಿಧ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು, ವಿದ್ಯಾರ್ಥಿ ಮತ್ತು ಹೆತ್ತವರ ಮನೋಭಾವನೆಯನ್ನು ತಿಳಿದು ಬೋಧಿಸುವಂತಾಗಬೇಕು, ಪ್ರೀತಿ ಹಾಗೂ ನೀತಿಯಿಂದ ಕಲಿಸಿ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿಸುವ ಜವಾಬ್ದಾರಿ ಶಿಕ್ಷಕರಲ್ಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶೈಕ್ಷಣಿಕ ಸಂಯೋಜಕ ಶಿವಣ್ಣ ಬಾಯಾರ್, ಕನ್ನಡ ಮಾಧ್ಯಮದ ಪ್ರಭಾರ ಮುಖ್ಯೋಪಾಧ್ಯಾಯಿನಿ ಕೃಪಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ ನಾಯ್ಕ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗೇಬ್ರಿಯಲ್ ಮಸ್ಕರೇನಸ್ ವಂದಿಸಿದರು.